
ಓ ನನ್ನ ಚೇತನ!
ಅವರು ಕಾಲಿಗೆ ಗಾಲಿ ಕಟ್ಟಿಕೊಂಡವರು. ಗಾಲಿಯ ಗತಿಯೊಡನೆ ಗರಗರನೆ ಗಿರಕಿ ಹೊಡೆಯುವವರು. ಗಾಳಿಯ ವೇಗಕ್ಕೆ ಗಾಲಿಯನ್ನು ಗಿರಿಗಟ್ಟಲೆ ಮಾಡಬಲ್ಲರು. ಬುಗುರಿಯಂತೆ ತಿರು ತಿರುಗಿ ತಿರುಗಿಸಬಲ್ಲರು. ಲಯದ ಹಾದಿಯಲ್ಲಿ ಗಾಲಿಯನ್ನು ನಡೆಸಬಲ್ಲರು. ತಾಳಕ್ಕೆ ತಕ್ಕಂತೆ ಕುಣಿದು ತಣಿಸಬಲ್ಲರು. ಹಾರಬಲ್ಲರು. ಏರಬಲ್ಲರು.....!
ಅವರು ಅಂಗವಿಕಲ ಕಲಾವಿದರು. ಆದರೆ ಅವರ ಮನಸ್ಸಿನಲ್ಲಿ ವೈಕಲ್ಯತೆ ಇಲ್ಲ. ಅವರ ಮನಸ್ಸಿನಲ್ಲಿ ಆಕಾಶವಿದೆ. ಎತ್ತರಕ್ಕೆ ಹಾರುವ ತಪಸ್ಸು ನಿತ್ಯವೂ ನಡೆದಿದೆ. ಭರತ ನಾಟ್ಯ, ಕಥಕ್ಕಳಿ, ಕುಚುಪುಡಿ, ಸಮರಕಲೆ ಮುಂತಾದ ಅದ್ಭುತ ಕಲಾ ಪ್ರಕಾರಗಳನ್ನು ತಮ್ಮದೇ ವಿನ್ಯಾಸದ `ಗಾಲಿಕುರ್ಚಿ ನೃತ್ಯ'ದ ಮೂಲಕ ಅನಾವರಣಗೊಳಿಸಿ ಇಡೀ ಜಗತ್ತನ್ನು ಬೆರಗುಗೊಳಿಸಿದ್ದಾರೆ. ಅವರ ಅಂತರಂಗ ಬಹಳ ಸೂಕ್ಷ್ಮಗ್ರಾಹಿ. ಸುಂದರತೆಯನ್ನು ಗ್ರಹಿಸಿ ತನ್ನ ದೇಹಕ್ಕೆ ತಂದುಕೊಳ್ಳುವಲ್ಲಿ ಅವರು ನಿಷ್ಣಾತರು.
ಅವರ ಶಕ್ತಿ ಇಡೀ ಜಗತ್ತಿನಾದ್ಯಂತ ಅನಾವರಣಗೊಂಡಿದೆ. ಬರೋಬ್ಬರಿ 10 ಸಾವಿರ ದಾಖಲೆ ಪ್ರದರ್ಶನ ನೀಡಿ ಲಿಮ್ಕಾ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ಅಂಗವಿಕಲತೆಯನ್ನು ಒಂದು ಶಾಪ ಎಂದು ಪರಿಗಣಿಸದ ಈ ಕಲಾಕುಡಿಗಳು ವಿಶ್ವಚೇತನಗಳಾಗಿ ಹೊರ ಹೊಮ್ಮಿದ್ದಾರೆ.
ಎಬಿಲಿಟಿ ಅನ್ಲಿಮಿಟೆಡ್: ಈ ಕಲಾವಿದರ ಕನಸುಗಳಿಗೆ ಎಲ್ಲೆ ಎಂಬುದಿಲ್ಲ. ಅವರ ಸಂಸ್ಥೆಯ ಹೆಸರಿನಲ್ಲೇ ಒಂದು ಸುಂದರ ಸೆಳೆತವಿದೆ. ಅದು `ಎಬಿಲಿಟಿ ಅನ್ಲಿಮಿಟೆಡ್'(ಅನಿಯಮಿತ ಸಾಮರ್ಥ್ಯ). ಆ ಚೇತನಗಳ ಮನಸ್ಸು ಬಹಳ ವಿಶಾಲ. ಮನಸ್ಸಿನಲ್ಲಿ ಸಲ್ಲದ ಯಾವ ವಿಚಾರಗಳಿಲ್ಲ. ಅವು ಮುಗ್ಧ ಮನಸ್ಸುಗಳು. ಕಲ್ಪನೆಯನ್ನು ಕೃತಿಗಿಳಿಸಿವ ಸಾಮರ್ಥ್ಯ ಅವರದು.
ಈ ವಿಕಲ ಚೇತನರು ಗಾಲಿಯ ಕುರ್ಚಿ ಬಳಸಿ ರಂಗದ ಮೇಲೆ ತಮ್ಮ ಸಮರ ಕಲೆ ಸಾಹಸ ಪ್ರದರ್ಶಿಸುತ್ತಾರೆ. ಬೆಳಕಿಗೆ ತಮ್ಮನ್ನು ತಾವು ತೆರೆದುಕೊಂಡು ನೋಡುಗರನ್ನು ಉಸಿರು ಕಟ್ಟಿಸುತ್ತಾರೆ. ಸಂಗೀತಕ್ಕೆ ಸಮ್ಮೋಹಗೊಂಡು ಮಾಧುರ್ಯ ತುಂಬುತ್ತಾರೆ. ಸಮರಕಲೆಯ ಅದ್ಭುತ ಸಾಹಸಗಳಿಗೆ ರಂಗದ ಮೇಲೆ ರೂಪ ಕೊಡುತ್ತಾರೆ.
ಕನಸಿಗೆ ರೂಪಕೊಟ್ಟ ಶಿಲ್ಪಿ: ಗಾಲಿಕುರ್ಚಿ ನೃತ್ಯ ಎನ್ನುವ ವಿಕಲ ಚೇತನರ ವಿಶೇಷ ಕಲಾ ಪ್ರಕಾರಕ್ಕೆ ರೂಪಕೊಟ್ಟವರು ಭರತನಾಟ್ಯ ಕಲಾವಿದ ಸಯ್ಯದ್ ಸಲ್ಲಾವುದ್ದೀನ್ ಪಾಶಾ. ಇವರೇ ಎಬಿಲಿಟಿ ಅನ್ಲಿಮಿಟೆಡ್ ಸಂಸ್ಥಾಪಕರು. ಚೇತನರ ಬಾಯಲ್ಲಿ ಇವರು ಗುರೂಜಿ. ಸಯ್ಸದ್ ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೂ ಇವರ ಹೃದಯ ಬಾಲ್ಯದಿಂದಲೂ ಭರತನಾಟ್ಯದತ್ತ ಮಿಡಿಯುತ್ತಿತ್ತು. ಮನೆಯವರ ವಿರೋಧದ ನಡುವೆಯೂ ನಾಟ್ಯರಾಣಿಯನ್ನು ಕಣ್ಣಿಗೆ ಕಟ್ಟಿಕೊಂಡರು. ವರ್ಷಾನುಗಟ್ಟಲೆ ಮಾಡದ ತಪಸ್ಸಿನ ಫಲವಾಗಿ ನಾಟ್ಯರಾಣಿ ಒಲಿದು ಬಂದಳು. ದೆಹಲಿಯನ್ನು ಕಾರ್ಯಸ್ಥಾನ ಮಾಡಿಕೊಂಡ ಸಯ್ಯದ್ ತಮ್ಮ ವಿಲಕಚೇತನ ಗಾಲಿಕುರ್ಚಿ ಕಲ್ಪನೆಗೆ ರೂಪ ಕೊಡುತ್ತಾ ಸಾಗಿದರು.
ದೆಹಲಿ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳಲ್ಲಿದ್ದ ಬಡ ಅಂಗವಿಕಲ ಮಕ್ಕಳನ್ನು ಆಯ್ದುಕೊಂಡು ಅವರಿಗೊಂದು ಹೊಸ ಬದುಕಿನ ಕನಸು ತುಂಬಿದರು. ಅವರಿಗೆ ವಸತಿ, ಊಟ ಸಹಿತ ನೃತ್ಯ ತರಬೇತಿ ನೀಡಿದರು. ಹತ್ತಾರು ವರ್ಷಗಳ ಕಾಲ ತರಬೇತಿ ಪಡೆದ ಈ ಮಕ್ಕಳು ಚೇತನಗಳಾಗಿ ಹೊರಹೊಮ್ಮಿದರು. ಈಗ 150 ಚೇತನರು ಈ ತಂಡದಲ್ಲಿದ್ದಾರೆ. ಕೆಲ ಕಲಾವಿದರು ಸ್ವಂತವಾಗಿ ಬೆಳೆದು ನಿಂತಿದ್ದಾರೆ. ಬಾಲಿವುಡ್ನಲ್ಲೂ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕಲಾನಿರ್ದೇಶಕರು, ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಸಯ್ಯದ್ ಸಲ್ಲಾವುದ್ದೀನ್ ಪಾಶಾ ಕರ್ನಾಟಕದವರೇ. ಬೆಂಗಳೂರು ಗ್ರಾಮಂತರ ಜಿಲ್ಲೆಯ ಆನೆಕಲ್ ಅವರ ಹುಟ್ಟೂರು. ತಮ್ಮ ನೃತ್ಯ ಬದುಕು ಆರಂಭ ಆದ ಮೇಲೆ ದೆಹಲಿಯಲ್ಲಿ ನೆಲಸಿದ್ದಾರೆ.
ವಿಶೇಷ ಗಾಲಿಗಳು: ಗಾಲಿಕುರ್ಚಿ ನೃತ್ಯ ಮಾಡುವ ವಿಕಲಾಂಗ ಮಕ್ಕಳಿಗಾಗಿ ವಿಶೇಷ ಕುರ್ಚಿಗಳನ್ನು ವಿನ್ಯಾಸ ಮಾಡಲಾಗಿದೆ. ಭಾರವಿಲ್ಲದ, ಗಾಳಿ ತುಂಬಿದ ಚಕ್ರವುಳ್ಳ ಕುರ್ಚಿಗಳನ್ನು ಅವರಿಗಾಗಿ ತಯಾರು ಮಾಡಲಾಗಿದೆ.
ಬೆಂಗಳೂರಿನಲ್ಲಿ ಗಾಲಿಕುರ್ಚಿ ನೃತ್ಯ: ಈಗ ಬೆಂಗಳೂರಿಗರಿಗೆ ಸುಯೋಗ. ಜಗತ್ಪ್ರಸಿದ್ಧ ಗಾಲಿಕುರ್ಚಿ ನೃತ್ಯವನ್ನು ಸವಿಯುವ ಒಂದು ಅಪೂರ್ವ ಅವಕಾಶ. ೨೮-೦೬-2010ರಂದು ಸಂಜೆ 6. 30ಕ್ಕೆ ಚೌಡಯ್ಯ ಸ್ಮಾರಕ ಭವನದಲ್ಲಿ ನೃತ್ಯ ಕಾರ್ಯಕ್ರಮ ಆಯೋಜನೆಗೊಂಡಿದೆ. ನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಪರ್ಸನಲ್ ಮ್ಯಾನೇಜ್ಮೆಂಟ್ ಸುವರ್ಣ ಮಹೋತ್ಸವದ ಅಂಗವಾಗಿ ಕಾರ್ಯಕ್ರಮಕೊಡಲು ಎಬಿಲಿಟಿ ಅನ್ಲಿಮಿಟೆಡ್ ತಂಡ ಆಗಮಿಸುತ್ತಿದೆ. ಮೈ ನವಿರೇಳಿಸುವ ಮಣಿಪುರ ಸಮರ ಕಲೆ ಬೆಂಗಳೂರಿನ ಗಾಲಿನೃತ್ಯದಲ್ಲಿ ಮುಖ್ಯ ಪಾತ್ರ ವಹಿಸಲಿದೆ. ಅದೇ ರೀತಿ ರಾಮಾಯಣ, ಮಹಾಭಾರತ ಕತೆಗಳು ಗಾಲಿಕುರ್ಚಿ ನೃತ್ಯದಲ್ಲಿ ತೆರೆದುಕೊಳ್ಳಲಿವೆ. ಈ ಕಾರ್ಯಕ್ರಮದಲ್ಲಿ 17 ಜನ ವೃತ್ತಿ ವಿಕಲ ಚೇತನರು ಭಾಗವಹಿಸುತ್ತಿದ್ದಾರೆ. ಈ ಸುಂದರ ಸಾಹಸ ಮಯ ನೃತ್ಯ ಕಾರ್ಯಕ್ರಮವನ್ನು ಶುಕ್ರವಾರ ಬೆಂಗಳೂರು ಮಂದಿ ಸಾಕ್ಷೀಕರಿಸಬಹುದು. ಹೆಚ್ಚಿನ ವಿವರಗಳಿಗಾಗಿ ಮೊಬೈಲ್: 9686715886 ಸಂಪರ್ಕಿಸಬಹುದು.
No comments:
Post a Comment