
ಮೈಸೂರಿನಲ್ಲಿ `ಚೀನಿ' ಸಂಗೀತ
ಬೆಳಕು ಹರಿಯುವ ಮೊದಲೇ ದಾಸ ಭಟ್ಟರ ತಬಲ ಪಾಠ ಆರಂಭವಾಗುತ್ತಿತ್ತು. ಚಾವಡಿಯ ಮೇಲೆ ಭಟ್ಟರ ಏಳು ಮಂದಿ ಮಕ್ಕಳು ಸಾಲಾಗಿ ಮಲಗಿರುತಿದ್ದರು. ಕೆಳಗೆ ನಡೆಯುವ ತಬಲ ವಾದನದ ಅಲೆ ವಿದ್ಯುತ್ ಸ್ವರೂಪ ತಾಳಿ ಮಲಗಿದ್ದ ಮಕ್ಕಳ ನಾಡಿಯಲ್ಲಿ ಸಂಚಾರಗೊಳ್ಳುತ್ತಿತ್ತು. ಶಾಸ್ತ್ರೀಯವಾಗಿ ಕಲಿತಿದ್ದಿಲ್ಲ. ಆದರೂ ಅವರೆಲ್ಲರು ನಮ್ಮ ನಾಡಿನ ಖ್ಯಾತ ಸಂಗೀತಗಾರರು. ಅದೇ ಅಲ್ಲವೇ ಸಂಗೀತ ರಕ್ತ!
ಅವರೊಳಗೊಬ್ಬ ಶ್ರೀನಿವಾಸ ಭಟ್ಟರು. `ಚೀನಿ' ಎಂಬ ಹೆಸರಿನಿಂದ ಸಂಗೀತ ರಸಿಕರ ಮನಸೂರೆಗೊಂಡವರು. ಮೈಸೂರಿನ ರಂಗಾಯಣದ ಆವರಣದೊಳಗಿರುವ ಗಿಡ ಗಂಟೆಯನ್ನು ಕೇಳಿದರೂ ಚೀನಿಯವರ ಕತೆ ಬಿಚ್ಚಿಕೊಳ್ಳತ್ತದೆ. ಇಡೀ ಆವರಣದೊಳಗೆ ಅವರು ಸಂಗೀತ ಕರತಾಡನ ಸೃಷ್ಟಿಸಿದ್ದಾರೆ. ಅವರ ಗಿಟಾರ್ವಾದನ ಭೂಮಿಗೀತ ರಂಗಮಂದಿರದೊಳಗೆ ಮ್ಯಾಜಿಕ್ ಮಾಡಿದೆ. ಅವರ ತಬಲ ವಾದನ ತೆರದ ವನರಂಗದ ಕಡೆಯ ಪ್ರೇಕ್ಷಕನಿಗೂ ತಲುಪಿದೆ. ಅವರ ಹಾರ್ಮೋನಿಯಂ ಮನೆಗಳು ಕೇಳುಗನ ತಲೆದೂಗಿಸಿವೆ. ಸ್ವರಮಂಡಲದ ತಂತಿಗಳು ಭಾವುಕಗೊಳಿಸಿವೆ. ಗಾಂಗ್ನ ಢಣ್ ಶಬ್ದ ಪ್ರೆಕ್ಷಕನ ಉಸಿರು ಕಟ್ಟಿಸಿದೆ......ಅವರೊಬ್ಬ ಬಹುವಾದ್ಯ ವಾದಕ. ಕನ್ನಡ ರಂಗ ಸಂಗೀತದ ಪ್ರಬುದ್ಧ ಪ್ರತಿಭೆ.
ರಂಗಾಯಣದ ಆರಂಭದಿಂದಲೂ ಶ್ರೀನಿವಾಸ ಭಟ್ಟರು ಅಲ್ಲಿಯ ಒಂದು ಭಾಗವಾಗಿದ್ದಾರೆ. ಚೀನಿ ಇಲ್ಲದ ರಂಗಾಯಣ ಕಲ್ಪನೆಗೂ ಸಿಕ್ಕುವುದಿಲ್ಲ! ಅವರೊಬ್ಬ ಆಪ್ತ ಸಂಗೀತಗಾರ. ಚಿಣ್ಣರ ಮೇಳದ ಮಕ್ಕಳ ಮನಸ್ಸಿನಲ್ಲಿ ಉಳಿಯುವ `ಚೀನಿ ಮಾಮಾ' ಎಂದೂ ಮರೆಯಲಾಗದ ಹೃದಯ. ಅವರು ಮಕ್ಕಳ ಜೊತೆ ಮಗುವಾಗಿ ಹಾಡು ಹೇಳಿಕೊಡುತ್ತಾರೆ. ನೂರಾರು ಮಕ್ಕಳನ್ನು ಏಕ ಕಾಲದಲ್ಲಿ ತಮ್ಮ ಸಂಗೀತದಿಂದ ನಿಯಂತ್ರಿಸುವ ಶಕ್ತಿ ಅವರಲ್ಲಿದೆ. ರಂಗಭೂಮಿ ಕಲಿಕೆಗಾಗಿ ರಂಗಾಯಣಕ್ಕೆ ಬರುವ ರಂಗಾಸಕ್ತರಿಗೆ ಚೀನಿ ಅವರ ಪಾಠ ಅಮೂಲ್ಯವಾದುದು. ಸಾಹಿತ್ಯಕ್ಕೆ ಅವರು ನೀಡುವ ಸ್ವರ ಪ್ರಸ್ತಾನದಲ್ಲಿ ಅವರ ಪ್ರಬುದ್ಧತೆ ಎದ್ದುಕಾಣುತ್ತದೆ. ತಾಳದ ಮೇಲೆ ಅವರ ಹಿಡಿತ ವಿಸ್ಮಯ ಹುಟ್ಟಿಸುತ್ತದೆ.
ರಂಗಾಯಣದ ನೂರಾರು ನಾಟಕಗಳಲ್ಲಿ ಚೀನಿ ಅವರು ರಂಗದ ಹಿಂದಿನ ನಾಯಕ. ರಂಗಾಯಣದ ಪ್ರತಿಯೊಂದು ರಂಗಾಪ್ರಯೋಗದಲ್ಲೂ ಚೀನಿ ಛಾಯೆ ಎದ್ದು ಕಾಣುತ್ತದೆ. ಅವರ ಸಂಗೀತಕ್ಕಾಗಿಯೇ ನಾಟಕ ನೋಡಲು ಬರುವ ಪ್ರೇಕ್ಷಕರು ಮೈಸೂರಿನಲ್ಲಿದ್ದಾರೆ. ನಟನ ಅಭಿನಯಕ್ಕೆ ತಮ್ಮ ಸಂಗೀತದ ಮೂಲಕ ಜೀವತುಂಬುವಲ್ಲಿ ಅವರು ಎತ್ತಿದ ಕೈ. ಅವರ ವಿಶೇಷ ಸುಂದರ ಧನಿ ಕೇಳುವ ಮನಸ್ಸುಗಳನ್ನು ಕಟ್ಟಿಹಾಕುತ್ತದೆ. ಅವರ ಮಾತುಗಳು ಕೂಡ ಅಷ್ಟೆ. ಮುತ್ತು. ಬಹುಬೇಗನೆ ಚೀನಿ ಎಲ್ಲರ ಸಮೀಪದ ಮನುಷ್ಯರಾಗಿಬಿಡುತ್ತಾರೆ.
ಚೀನಿ ಅವರು ರಂಗಭೂಮಿಗೆ ಬಂದದ್ದು ಆಕಸ್ಮಿಕ. ಮಂಗಳೂರಿನ ಹೊಟೇಲೊಂದರ ಲೈವ್ಬ್ಯಾಂಡ್ ಗಿಟಾರ್ ವಾದಕರಾಗಿದ್ದ ಅವರಿಗೆ ರಂಗ ಸಂಗೀತಗಾರನಾಗುವ ಕಲ್ಪನೆ ಕನಸಿನಲ್ಲಿಯೂ ಇರಲಿಲ್ಲ. ಮಂಗಳೂರಿನಲ್ಲಿ ಪಾಶ್ಚ್ಯಾತ್ಯ ಸಂಗೀತಗಾರರ ಒಂದು ತಂಡವಿತ್ತು. ಕನ್ನಡ ಚಿತ್ರರಂಗದಲ್ಲಿ ಇಂದು ಮಿಂಚುತ್ತಿರುವ ಸಂಗೀತ ನಿರ್ದೇಶಕ ಗುರುಕಿರಣ್ ಅಲ್ಲಿ ಗಾಯಕರಾಗಿದ್ದರು. ಉಡುಪಿ, ಗೋವಾ ಮುಂತಾದ ಕಡೆ ತಮ್ಮ ಕಾರ್ಯಕ್ರಮ ನೀಡುತ್ತಿದ್ದರು. ಶ್ರೀನಿವಾಸ ಭಟ್ಟರಿಗೆ ಚೀನಿ ಎಂಬ ಹೆಸರು ಬಂದದ್ದು ಇಲ್ಲೇ.
ನೀನಾಸಂನ `ಮೂರಕಾಸಿನ ಸಂಗೀತ ನಾಟಕ' ರಂಗ ಪ್ರಯೋಗದಿಂದ ಚೀನಿ ರಂಗ ಸಂಗೀತಗಾರರಾಗಿ ಬಡ್ತಿ ಪಡೆದರು. ನಂತರ ಕೆ.ವಿ. ಅಕ್ಷರ ಅವರ ಕಡೆಯಿಂದ ರಂಗದಿಗ್ಗಜ ಬಿ.ವಿ. ಕಾರಂತರ ಪರಿಚಯವಾಯಿತು. ಕಾರಂತ ನಿರ್ದೇಶನದ `ಸದಾರಮೆ' ಹಾಗೂ `ಬಣ್ಣಿನ ಬಂಡಿ' ನಾಟಕಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಅಲ್ಲಿ ಚೀನಿ ತೋರಿದ ಪ್ರತಿಭೆ ಕಾರಂತರಲ್ಲಿ ಭರವಸೆ ಮೂಡಿಸಿತು. ಅಲ್ಲಿಂದ ಶ್ರೀನಿವಾಸ ಭಟ್ಟರ ರಂಗಭೂಮಿ ಪಯಣ ಆರಂಭವಾಯಿತು.
ಕಾರಂತರು ರಂಗಾಯಣ ಕಟ್ಟುವಾಗ ಕಡೆ ಘಳಿಗೆಯಲ್ಲಿ ಚೀನಿ ರಂಗಾಯಣ ಗರಡಿ ಸೇರಿದರು. ಅಲ್ಲಿಂದ ಚೀನಿ ಅವರ ಮುಂದೆ ರಂಗಭೂಮಿ ತೆರೆದುಕೊಂಡಿತು. ರಂಗಭೂಮಿಯನ್ನು ಎಲ್ಲೂ ಕಲಿತಿದ್ದಿಲ್ಲ. ಆದರೆ ಕಾರಂತರ ಪ್ರಭಾವ ಅವರಲ್ಲಿ ರಂಗಭೂಮಿಯ ಉಸಿರಾಡುವಂತೆ ಮಾಡಿತು.
ಬಿ.ವಿ. ಕಾರಂತರ ನೆಚ್ಚಿನ ಶಿಷ್ಯರಲ್ಲಿ ಚೀನಿ ಕೂಡ ಒಬ್ಬರು. ಅವರನ್ನು ಕಾರಂತರು ಬಹಳವಾಗಿ ಪ್ರೀತಿಸುತ್ತಿದ್ದರು. ರಂಗಾಯಣವೆಂಬ ಕುಟುಂಬವೊಂದರಲ್ಲಿ ಚೀನಿ ಎಲ್ಲರಿಂದ ಪ್ರೀತಿಸಲ್ಪಡುವ ಹುಡುಗನಾಗಿದ್ದರು. ಪ್ರೀತಿಸಿದ ಹುಡುಗಿ `ಸುಚೇತಾ'ರನ್ನು ರಂಗಾಯಣದ ವನರಂಗದಲ್ಲಿ ಕಲಾವಿದರ ಮುಂದೆ ಕೈ ಹಿಡುದದ್ದು ವಿಶೇಷ!
ಆರಂಭದಲ್ಲಿ ಕಾರಂತರೇ ಸಂಗೀತ ನಿರ್ದೇಶಿಸಿದ ನಾಟಕಗಳಿಗೆ ಸ್ವರ ಹಾಕುತ್ತಿದ್ದರು. ವಾದ್ಯ ನುಡಿಸುತ್ತಿದ್ದರು. ಆ ನಂತರ ಸ್ವತಂತ್ರವಾಗಿ ಸಂಗೀತ ನಿರ್ದೇಶನ ನೀಡಿದರು. ಕಾರಂತರ ಬಹಳಷ್ಟು ನಾಟಕಗಳಿಗೆ ಚೀನಿ ಅವರೇ ಸಂಗೀತ ನಿರ್ದೇಶಕರು. ಕಾರಂತರು ಅವರನ್ನು ಬಹಳವಾಗಿ ಹಚ್ಚಿಕೊಂಡಿದ್ದರು. ಅವರು ಸಾಯುವ ಮುಂಚೆ ತಮಗೆ ಪತ್ರ ಬರೆದಿದ್ದನ್ನು ಚೀನಿ ನೋವಿನಿಂದ ನೆನಪು ಮಾಡಿಕೊಳ್ಳುತ್ತಾರೆ.
ಅವರು ಸದಾ ಒಂದಲ್ಲೊಂದು ಕೆಲಸ ಮಾಡುತ್ತಲೇ ಇರುವ ಶ್ರಮ ಜೀವಿ. ಪೆಟ್ಟಿ ಹಿಡಿದು ಕೂತರೆ ಅಲ್ಲೊಂದು ಒಳ್ಳೆಯ ಸಂಗೀತ ಮೂಡಿ ಬರಲೇಬೇಕು. ಒಂದು ರೀತಿಯ ಹಠಯೋಗ. ಅವರು ರಂಗಾಯಣದಲ್ಲಿ ವರ್ಷಪೂರ್ತಿ ಬಿಜಿ. ಜತೆಗೆ ರಂಗಸಂಗೀತ ಶಿಬಿರಗಳು, ಕಮ್ಮಟಗಳು, ಚಿಣ್ಣರ ಮೇಳ, ಸಂಸ್ಕೃತಿ ಶಿಬಿರ ಹೀಗೆ ಯಾವಾಗಲೂ ಅವರಿಗೆ ಕೆಲಸ ಇದ್ದೇ ಇರುತ್ತದೆ. ರಜದಲ್ಲೂ ಅವರಿಗೆ ಬಿಡುವಿರುವುದಿಲ್ಲ.
ಅವರು ರಂಗಭೂಮಿಗೆ ಸಲ್ಲಿಸಿದ ಸೇವೆಗೆ ತಕ್ಕ ಮನ್ನಣೆ ದೊರೆಯದೆ ಇರುವುದು ಬಹಳ ನೋವಿನ ವಿಷಯ. ಸರ್ಕಾರಿ ರೆಪರ್ಟರಿಯಾದ ರಂಗಾಯಣದಲ್ಲಿ ಶಿಕ್ಷಕರು ಹಾಗೂ ಪ್ರಶಿಕ್ಷಕರು ಎಂಬ ಎರಡು ವರ್ಗದ ಕಲಾವಿದರಿದ್ದಾರೆ. ಚೀನಿ ಶಿಕ್ಷಕ ವರ್ಗದ ಕಲಾವಿದರು. ಆದರೆ ಅವರಿಗೆ ಸಿಗುವ ಸರ್ಕಾರಿ ಸೌಲಭ್ಯಗಳು ಬಹಳ ಕಡಿಮೆ. ಇದು ನಿಜಕ್ಕೂ ತಾರತಮ್ಯ. ರಂಗಾಯಣದ ಅವಿಭಾಜ್ಯ ಅಂಗವೊಂದಕ್ಕೆ ಮಾಡಿದ ಮೋಸವಿದು. ಅವರಿಗೆ ಸಿಗಬೇಕಾದ ಮನ್ನಣೆಯನ್ನು ನಮ್ಮ ಸರ್ಕಾರ ಆದಷ್ಟು ಬೇಗ ಕೊಟ್ಟರೆ ಕಲಾವಿದರ ಪ್ರತಿಭೆಯನ್ನು ಗೌರವಿಸಿದಂತಾಗುತ್ತದೆ.
ಚೀನಿ ಅವರು ಸೌಲಭ್ಯಗಳ ಬಗ್ಗೆ ಎಂದೂ ತಲೆ ಕೆಡಿಸಿಕೊಂಡಿದ್ದಿಲ್ಲ. ಅವರ ಕೆಲಸವನ್ನು ಮೆಚ್ಚಿಕೊಳ್ಳಲು ನೂರಾರು ಅಭಿಮಾನಿಗಳಿದ್ದಾರೆ. ಸಂತೋಷ ಪಡಲು ರಕ್ತದಲ್ಲಿ ಸಂಗೀತವಿದೆ. ವಿದ್ಯಾರ್ಥಿಗಳಿದ್ದಾರೆ. ದೈರ್ಯ ತುಂಬುವ ಸುಚೇತಾ ಪತ್ನಿ ಇದ್ದಾರೆ. ಅವರಷ್ಟೇ ಪ್ರತಿಭಾವಂತ ಗಿರಿದಾಸ ಭಟ್ ಮಗನಿದ್ದಾನೆ. ಇವರುಗಳ ನಡುವೆ ಚೀನಿ ಅವರು ಮುಗುಳ್ನಗುತ್ತಲೇ ಎಲ್ಲವನ್ನು ಸಹಿಸಿಕೊಂಡಿದ್ದಾರೆ.
No comments:
Post a Comment