
ಸುಕನ್ಯಾ `ಘಟಂ' ದಿಟಂ!
ಹೃದಯ ನಮ್ಮೊಳಗೇ ಇದ್ದರೂ ಹೃದಯವಂತರಾಗಲು ನಾವು ಸೋತು ಹೋಗುತ್ತೇವೆ. ಹೃದಯಸಾಮೀಪ್ಯಕ್ಕೆ ಎಷ್ಟೇ ಯತ್ನಿಸಿದರೂ ಅದು ನಮ್ಮಿಂದ ಒಂದು ಅಂತರ ಕಾಯ್ದುಕೊಳ್ಳುತ್ತದೆ. ಹೃದಯಕ್ಕೆ ಸಮೀಪವಾಗುವ ಭರದಲ್ಲಿ ನಾವು ಏನೇನನ್ನೋ ಸೃಷ್ಟಿಸಿದ್ದೇವೆ. ಬಹುಶಃ ಸಂಗೀತ ವಾದ್ಯಗಳು......! ಹೌದು. ಹೃದಯ ಬಡಿತಕ್ಕೂ ವಾದ್ಯದ ತಾಳಕ್ಕೂ ಎಲ್ಲೋ ಒಂದು ಹೋಲಿಕೆ ಇದೆ. ಪಂಚಭೂತಗಳಿಂದ(ಭೂಮಿ, ಜಲ, ಗಾಳಿ, ಅಗ್ನಿ, ಆಕಾಶ) ರಚನೆಗೊಂಡ ತಾಳ ವಾದ್ಯ ಘಟಂ. ಇದು ಹೃದಯಕ್ಕೆ ಬಹಳ ಸಮೀಪ. ಘಟಂನ ಡೊಳ್ಳು ಹೊಟ್ಟೆಯೊಳಗಿಂದ ಬರುವ ತಣ ತಣ ತಣ... ಶಬ್ದಕ್ಕೆ ಹೃದಯ ಕರಗಿಸುವ ಶಕ್ತಿ ಇದೆ. ಈ ವಾದ್ಯ ಹೃದಯದಷ್ಟೇ ಸೂಕ್ಷ್ಮ. ಅದೇ ರೀತಿ ತನ್ನೆಲ್ಲಾ ಹತ್ತು ಬೆರಳುಗಳ ಬಳಸಿ ನುಡಿಸುವ ಕಲಾವಿದ ಕೂಡ ಅಷ್ಟೇ ಸೂಕ್ಷ್ಮ!
ಖ್ಯಾತ ಘಟಂ ವಾದಕಿ ಸುಕನ್ಯಾ ರಾಮ್ಗೋಪಾಲ್ ಅವರು ನುಡಿಸುವ ಆರು ಘಟಗಳ `ಘಟಂ ತಂರಂಗಂ' ವಾದನವನ್ನೊಮ್ಮೆ ಕೇಳಿದರೆ ಹೃದಯ ಕಂಪಿಸುತ್ತದೆ. ಬೇರೆ ಬೇರೆ ಶೃತಿಯ ಘಟಗಳ ನಡುವೆ ಕುಳಿತು ನುಡಿಸುವಾಗ ಅವರ ಕೈ ಬೆರಳುಗಳ ಚೈತನ್ಯ ಬೆರಗು ಸೃಷ್ಟಿಸುತ್ತದೆ. ಸುಕನ್ಯಾರ ಆ ಎನರ್ಜಿಗೆ ಪಂಚಭೂತಗಳ ಆ ವಾದ್ಯ ಮಲ್ಲಿಗೆಯಾಗಿ ಮಂದಹಾಸ ಬೀರುತ್ತದೆ! ಘಟದಷ್ಟೇ ಸುಕನ್ಯಾ ರಾಮ್ಗೋಪಾಲ್ ಕೂಡ ಸೂಕ್ಷ್ಮರು. ಆ ಮಡಿಕೆಯ ಕಣಗಳನ್ನು ಪರಿಪಕ್ವವಾಗಿ ಅರಿತವರು.
ಮಹಿಳೆಯರಲ್ಲಿ ಘಟ ನುಡಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅವರು ಕಲಿಯುವ ಕಾಲಕ್ಕೆ ಇರಲೇ ಇಲ್ಲ. ದೇಶದ ಪ್ರಥಮ ಘಟ ವಿದುಷಿ ಎಂಬ ಬಿರುದು ಕೂಡ ಸುಕನ್ಯಾರಿಗೇ ಸಲ್ಲುತ್ತದೆ. ಇವತ್ತು ಬಹಳ ಮಂದಿ ಯುವತಿಯರು ಮೃದಂಗ, ಘಟಂ ನುಡಿಸುತ್ತಾರೆ ಅಂದರೆ ಅದಕ್ಕೆಲ್ಲಾ ಪ್ರೇರಣೆ ಸುಕನ್ಯಾ ಅವರೇ. ಸುಕನ್ಯಾ ಇಡೀ ರಾಷ್ಟ್ರದ ಖ್ಯಾತ ನಾಮ ಕಲಾವಿದರ ಜೊತೆಯಲ್ಲಿ ಪಕ್ಕವಾದ್ಯವಾಗಿ ಘಟ ನುಡಿಸಿದ್ದಾರೆ. ಹಲವು ದೇಶಗಳಿಗೆ ಹೋಗಿ ಬಂದಿದ್ದಾರೆ. ಕಳೆದ ಮೂರು ದಶಕಗಳಿಂದ ಘಟಕ್ಕಾಗಿ ತಮ್ಮನ್ನು ಕೊಟ್ಟುಕೊಂಡಿದ್ದಾರೆ. ಒಬ್ಬ ಮಹಿಳೆಯಾಗಿ ಪುರುಷರು ಮಾತ್ರ ನುಡಿಸುತ್ತಿದ್ದ ಘಟ ನುಡಿಸುವ ಧೈರ್ಯಮಾಡಿ ಯಶಸ್ವಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದ್ದಾರೆ. ಆಕಾಶವಾಣಿಯಲ್ಲಿ `ಎ' ಗ್ರೇಡ್ ಕಲಾವಿದೆಯಾದ ಅವರು ಅಪರೂಪದ ಕಲಾವಿದೆ.
ಸುಕನ್ಯಾ ರಾಮ್ಗೋಪಾಲ್ ಅವರ ಮೂಲ ಚೆನ್ನೈನಿಂದ ಆರಂಭವಾಗುತ್ತದೆ. ಅವರು `ತಮಿಳು ತಾತ' ಎಂದೇ ಖ್ಯಾತರಾಗಿರುವ ಮಹಾಮಹೋಪಾಧ್ಯಾಯ ಡಾ. ಯು.ವಿ. ಸ್ವಾಮಿನಾಥ ಐಯ್ಯರ್ ಅವರ ಮೊಮ್ಮಗಳು. ಸುಕನ್ಯಾರಿಗೆ ಸಂಸ್ಕಾರವೇ ಮೂಲ ಆಸ್ತಿ. ತಂದೆ ಕೆ. ಸುಬ್ರಮಣ್ಯ ತಾಯಿ ರಂಗನಾಯಕಿ. ಅವರೂ ಸಂಗೀತ ತಿಳಿದವರು.
ಆರಂಭದಲ್ಲಿ ಅವರು ಹಾಡುಗಾರಿಕೆ ಅಭ್ಯಾಸ ಮಾಡಿದರು. ನಂತರ ಟಿ.ಎಚ್. ಗುರುಮೂರ್ತಿ ಅವರ ಬಳಿ ವೈಲಿನ್ ಕಲಿತರು. ಆನಂತರ ತಮ್ಮಿಷ್ಟದ ತಾಳವಾದ್ಯ ಘಟಂ ಕಡೆ ಹೊರಳಿದರು. ಶ್ರೀ ಜೈ ಗಣೇಶ ತಾಳವಾದ್ಯ ಸಂಗೀತ ಶಾಲೆಯ ಸ್ಥಾಪಕ ಟಿ.ಆರ್. ಹರಿಹರ ಶರ್ಮ ಅವರ ಪ್ರಥಮ ಗುರುಗಳು. ಆ ಮೇಲೆ ಭಾರತೀಯ ಸಂಗೀತದ ದಂತಕತೆ `ವಿಕ್ಕು' ವಿನಾಯಕ ರಾಮ್ ಅವರ ಗುರುಗಳಾದರು. ಸಕನ್ಯಾರ ಪ್ರತಿಭೆಯನ್ನು ಹೊರ ತೆಗೆಯುವಲ್ಲಿ ವಿಕ್ಕು ಯಶಸ್ವಿಯಾದರು. ಸುಕನ್ಯಾ ಎಂಬ `ಮುತ್ತು' ಸೃಷ್ಟಿಸಿದರು.
ಸುಕನ್ಯಾ 1983ರಲ್ಲಿ ಸಂಗೀತ ರಸಿಕ ರಾಮ್ಗೋಪಾಲ್ ಅವರನ್ನು ಕೈ ಹಿಡಿದು ಬೆಂಗಳೂರು ಸೇರಿದರು. ರಾಮ್ಗೋಪಾಲ್ ಅವರು ಸುಕನ್ಯಾರಿಗಾಗಿ ಹಲವು ತ್ಯಾಗ ಮಾಡಿದರು. ಪತಿ ನೀಡಿದ ಪ್ರೋತ್ಸಾಹ ಸುಕನ್ಯಾ ಹಲವು ಅದ್ಭುತಗಳನ್ನು ನಿರ್ಮಿಸಲು ಸಾಕ್ಷಿಯಾಯಿತು.
ಸ್ತ್ರೀ ತಾಲ್ ತರಂಗ್:
ಸುಕನ್ಯಾರ ಕನಸಿನ ಕೂಸಾದ `ಘಟಂ ತರಂಗಂ' ನಂತರ ಅವರು ಮಾಡಿದ ಇನ್ನೊಂದು ಪ್ರಯೋಗ ಸ್ತ್ರೀ ತಾಲ್ ತರಂಗ್. ಇಲ್ಲಿ ಘಟಂ ಜೊತೆಗೆ ಬೇರೆ ಮಹಿಳಾ ವಾದ್ಯಗಾರ್ತಿಯರು ತಮ್ಮ ವೈಲಿನ್, ವೀಣಾ, ಮೃದಂಗ ವಾದ್ಯಗಳನ್ನು ಜೊತೆಗೂಡಿತ್ತಾರೆ. ಇದು ಒಂದೇ ಪಿಚ್(ಆಕ್ಟೇವ್)ನಲ್ಲಿರುವ ಕಾರಣ ಸಕನ್ಯಾ ಅವರೇ ಸ್ವತಃ ಸಂಯೋಜಿಸಿದ ಕೃತಿ, ಕಲ್ಪನಾ ಸ್ವರ, ಪಲ್ಲವಿಗಳನ್ನು ನುಡಿಸುತ್ತಾರೆ. ಆ ಮೂಲಕ ಒಬ್ಬ ಸಂಗೀತ ಸಂಯೋಜಕಿಯಾಗಿಯೂ ಸುಕನ್ಯಾ ಗುರುತಿಸಿಕೊಂಡಿದ್ದಾರೆ. ಸ್ತ್ರೀತಾಲ್ ತರಂಗ್ ಮೂಲಕ ಪಕ್ಕವಾದ್ಯವಾದ ಘಟಂಗೆ ಮುಖ್ಯ ಸ್ಥಾನ ಕೊಟ್ಟಿದ್ದು ಸುಕನ್ಯಾರ ಬಹಳ ದೊಡ್ಡ ಸಾಧನೆ.
ಘಟಕ್ಕೆ ಕಡೆಯ ಸ್ಥಾನ:
ಕರ್ನಾಟಕ ಸಂಗೀತಗಾರರು ಇವತ್ತಿಗೂ ಘಟಕ್ಕೆ ಮನ್ನಣೆ ಕೊಟ್ಟಿಲ್ಲ. ಅವರಿಗೆ ತಮ್ಮ ಪ್ರತಿಭೆ ತೋರಲು ಅವಕಾಶವೂ ಇಲ್ಲ. ಗಾಯನ, ವೈಲಿನ್, ಮೃದಂಗ, ಮೊರ್ಚಿಂಗ್, ಕಂಜೀರಾ ಆದ ಮೇಲೆ ಘಟಕ್ಕೆ ಸ್ಥಾನ, ಅದೂ ಗಾಯಕರ ಹಿಂದೆ. ಇದು ಸುಕನ್ಯಾರನ್ನು ಏನಾದರೂ ಹೊಸತೊಂದನ್ನು ಪ್ರಯೋಗ ಮಾಡುವಂತೆ ಪ್ರೇರೇಪಿಸಿತು. ಆ ಹಾದಿಯಲ್ಲಿ ಘಟಂ ತರಂಗಂ, ಸ್ತ್ರೀ ತಾಲ್ ತರಂಗಂ ಪ್ರಯೋಗ ಮಾಡಿ ಯಶಸ್ವಿಯಾದರು. ಆ ಮೂಲಕ ಘಟಕ್ಕೆ ಒಂದು ಹೊಸ ಸ್ವರೂಪವನ್ನೇ ಸೃಷ್ಟಿಸಿದರು.
ವರ್ಲ್ಡ್ ಸ್ಪೇಸ್ ರೇಡಿಯೋದಲ್ಲಿ ಸುಕನ್ಯಾರ ತರಂಗ್ ಪ್ರಸಾರವಾಗಿವೆ. `ರೈನ್ಬೋ' ಆಲ್ಬಮ್ ಕೂಡ ಹೊರತಂದಿದ್ದಾರೆ. ಅಸಂಖ್ಯಾತ ಕಚೇರಿ ನಡೆಸಿದ್ದಾರೆ. 2010ರ ಹೊಸವರ್ಷ ಜ.1ರಂದು ಚೆನ್ನೈನ ಪ್ರತಿಷ್ಠಿತ `ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ತಮ್ಮ ಸ್ತ್ರೀ ತಾಲ್ ತರಂಗ್ ಕಚೇರಿ ನೀಡುತ್ತಿದ್ದಾರೆ. ಇದು ಸುಕನ್ಯಾರ ಸಾಧನೆಗೆ ಧಕ್ಕಿದ ಮಹತ್ವ.
ಸುಕನ್ಯಾರಿಗೆ ಅಸಂಖ್ಯಾತ ಪ್ರಶಸ್ತಿ ಬಿರುದುಗಳು ಅರಸಿ ಬಂದಿವೆ. ಈ ವರ್ಷದ ಗಾಯನ ಸಮಾಜ ಸಮ್ಮೇಳನದಲ್ಲಿ `ವರ್ಷದ ಕಲಾವಿದೆ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಬೆಂಗಳೂರಿನ ಯಶವಂತಪುರದಲ್ಲಿ ಸುಕನ್ಯಾರ ವಾಸ. ಮಗಳು ರಾಧಾ. ಮಗ ನಾರಾಯಣ್ ಪ್ರಭು. ಇಬ್ಬರೂ ಸಾಪ್ಟ್ವೇರ್ ಇಂಜಿನಿಯರ್ಸ್, ಜೊತೆಗೆ ಸಂಗೀತಗಾರರು. `ಘಟ ನುಡಿಸುವ ಬಗೆ' ಪುಸ್ತಕ ಬರೆಯುವ ಹಾಗೂ ಒಂದು ಸಂಗೀತ ಶಾಲೆ ರಚಿಸುವ ಕನಸಿನೊಂದಿಗೆ ಸುಕನ್ಯಾರಾಮ್ಗೋಪಾಲ್ ಅವರ ಘಟ ಹೃದಯ ತಟ್ಟುತ್ತಿದೆ
No comments:
Post a Comment