Tuesday, November 10, 2009

ಸುಕ­ನ್ಯಾ­ರಾ­ಮ್‌­ಗೋ­ಪಾಲ್‌




ಸುಕನ್ಯಾ `ಘಟಂ' ದಿಟಂ!


ಹೃದಯ ನಮ್ಮೊ­ಳಗೇ ಇದ್ದರೂ ಹೃದ­ಯ­ವಂ­ತ­ರಾ­ಗಲು ನಾವು ಸೋತು ಹೋಗು­ತ್ತೇವೆ. ಹೃದ­ಯ­ಸಾ­ಮೀ­ಪ್ಯಕ್ಕೆ ಎಷ್ಟೇ ಯತ್ನಿ­ಸಿ­ದರೂ ಅದು ನಮ್ಮಿಂದ ಒಂದು ಅಂತರ ಕಾಯ್ದು­ಕೊ­ಳ್ಳು­ತ್ತದೆ. ಹೃದ­ಯಕ್ಕೆ ಸಮೀ­ಪ­ವಾ­ಗುವ ಭರ­ದಲ್ಲಿ ನಾವು ಏನೇ­ನನ್ನೋ ಸೃಷ್ಟಿ­ಸಿ­ದ್ದೇವೆ. ಬಹುಶಃ ಸಂಗೀತ ವಾದ್ಯ­ಗಳು......! ಹೌದು. ಹೃದಯ ಬಡಿ­ತಕ್ಕೂ ವಾದ್ಯದ ತಾಳಕ್ಕೂ ಎಲ್ಲೋ ಒಂದು ಹೋಲಿಕೆ ಇದೆ. ಪಂಚ­ಭೂ­ತ­ಗ­ಳಿಂದ(ಭೂಮಿ, ಜಲ, ಗಾಳಿ, ಅಗ್ನಿ, ಆಕಾಶ) ರಚ­ನೆ­ಗೊಂಡ ತಾಳ ವಾದ್ಯ ಘಟಂ. ಇದು ಹೃದ­ಯಕ್ಕೆ ಬಹಳ ಸಮೀಪ. ಘಟಂನ ಡೊಳ್ಳು ಹೊಟ್ಟೆ­ಯೊ­ಳ­ಗಿಂದ ಬರುವ ತಣ ತಣ ತಣ... ಶಬ್ದಕ್ಕೆ ಹೃದಯ ಕರ­ಗಿ­ಸುವ ಶಕ್ತಿ ಇದೆ. ಈ ವಾದ್ಯ ಹೃದ­ಯ­ದಷ್ಟೇ ಸೂಕ್ಷ್ಮ. ಅದೇ ರೀತಿ ತನ್ನೆಲ್ಲಾ ಹತ್ತು ಬೆರ­ಳು­ಗಳ ಬಳಸಿ ನುಡಿ­ಸುವ ಕಲಾ­ವಿದ ಕೂಡ ಅಷ್ಟೇ ಸೂಕ್ಷ್ಮ!
ಖ್ಯಾತ ಘಟಂ ವಾದಕಿ ಸುಕನ್ಯಾ ರಾಮ್‌­ಗೋ­ಪಾಲ್‌ ಅವರು ನುಡಿ­ಸುವ ಆರು ಘಟ­ಗಳ `ಘಟಂ ತಂರಂಗಂ' ವಾದ­ನ­ವ­ನ್ನೊಮ್ಮೆ ಕೇಳಿ­ದರೆ ಹೃದಯ ಕಂಪಿ­ಸು­ತ್ತದೆ. ಬೇರೆ ಬೇರೆ ಶೃತಿಯ ಘಟ­ಗಳ ನಡುವೆ ಕುಳಿತು ನುಡಿ­ಸು­ವಾಗ ಅವರ ಕೈ ಬೆರ­ಳು­ಗಳ ಚೈತನ್ಯ ಬೆರಗು ಸೃಷ್ಟಿ­ಸು­ತ್ತದೆ. ಸುಕ­ನ್ಯಾರ ಆ ಎನ­ರ್ಜಿಗೆ ಪಂಚ­ಭೂ­ತ­ಗಳ ಆ ವಾದ್ಯ ಮಲ್ಲಿ­ಗೆ­ಯಾಗಿ ಮಂದ­ಹಾಸ ಬೀರು­ತ್ತದೆ! ಘಟ­ದಷ್ಟೇ ಸುಕನ್ಯಾ ರಾಮ್‌­ಗೋ­ಪಾಲ್‌ ಕೂಡ ಸೂಕ್ಷ್ಮರು. ಆ ಮಡಿ­ಕೆಯ ಕಣ­ಗ­ಳನ್ನು ಪರಿ­ಪ­ಕ್ವ­ವಾಗಿ ಅರಿ­ತ­ವರು.
ಮಹಿ­ಳೆ­ಯ­ರಲ್ಲಿ ಘಟ ನುಡಿ­ಸು­ವ­ವರು ಬೆರ­ಳೆ­ಣಿ­ಕೆ­ಯಷ್ಟು ಮಂದಿ ಮಾತ್ರ. ಅವರು ಕಲಿ­ಯುವ ಕಾಲಕ್ಕೆ ಇರಲೇ ಇಲ್ಲ. ದೇಶದ ಪ್ರಥಮ ಘಟ ವಿದುಷಿ ಎಂಬ ಬಿರುದು ಕೂಡ ಸುಕ­ನ್ಯಾ­ರಿಗೇ ಸಲ್ಲು­ತ್ತದೆ. ಇವತ್ತು ಬಹಳ ಮಂದಿ ಯುವ­ತಿ­ಯರು ಮೃದಂಗ, ಘಟಂ ನುಡಿ­ಸು­ತ್ತಾರೆ ಅಂದರೆ ಅದ­ಕ್ಕೆಲ್ಲಾ ಪ್ರೇರಣೆ ಸುಕನ್ಯಾ ಅವರೇ. ಸುಕನ್ಯಾ ಇಡೀ ರಾಷ್ಟ್ರದ ಖ್ಯಾತ ನಾಮ ಕಲಾ­ವಿ­ದರ ಜೊತೆ­ಯಲ್ಲಿ ಪಕ್ಕ­ವಾ­ದ್ಯ­ವಾಗಿ ಘಟ ನುಡಿ­ಸಿ­ದ್ದಾರೆ. ಹಲವು ದೇಶ­ಗ­ಳಿಗೆ ಹೋಗಿ ಬಂದಿ­ದ್ದಾರೆ. ಕಳೆದ ಮೂರು ದಶ­ಕ­ಗ­ಳಿಂದ ಘಟ­ಕ್ಕಾಗಿ ತಮ್ಮನ್ನು ಕೊಟ್ಟು­ಕೊಂ­ಡಿ­ದ್ದಾರೆ. ಒಬ್ಬ ಮಹಿ­ಳೆ­ಯಾಗಿ ಪುರು­ಷರು ಮಾತ್ರ ನುಡಿ­ಸು­ತ್ತಿದ್ದ ಘಟ ನುಡಿ­ಸುವ ಧೈರ್ಯ­ಮಾಡಿ ಯಶ­ಸ್ವಿ­ಯಾಗಿ ಅಂತಾ­ರಾ­ಷ್ಟ್ರೀಯ ಮಟ್ಟ­ದಲ್ಲಿ ಮಾನ್ಯತೆ ಪಡೆ­ದಿ­ದ್ದಾರೆ. ಆಕಾ­ಶ­ವಾ­ಣಿ­ಯಲ್ಲಿ `ಎ' ಗ್ರೇಡ್‌ ಕಲಾ­ವಿ­ದೆ­ಯಾದ ಅವರು ಅಪ­ರೂ­ಪದ ಕಲಾ­ವಿದೆ.
ಸುಕನ್ಯಾ ರಾಮ್‌­ಗೋ­ಪಾಲ್‌ ಅವರ ಮೂಲ ಚೆನ್ನೈ­ನಿಂದ ಆರಂ­ಭ­ವಾ­ಗು­ತ್ತದೆ. ಅವರು `ತ­ಮಿಳು ತಾತ' ಎಂದೇ ಖ್ಯಾತ­ರಾ­ಗಿ­ರುವ ಮಹಾ­ಮ­ಹೋ­ಪಾ­ಧ್ಯಾಯ ಡಾ. ಯು.ವಿ. ಸ್ವಾಮಿ­ನಾಥ ಐಯ್ಯರ್‌ ಅವರ ಮೊಮ್ಮ­ಗಳು. ಸುಕ­ನ್ಯಾ­ರಿಗೆ ಸಂಸ್ಕಾ­ರವೇ ಮೂಲ ಆಸ್ತಿ. ತಂದೆ ಕೆ. ಸುಬ್ರ­ಮಣ್ಯ ತಾಯಿ ರಂಗ­ನಾ­ಯಕಿ. ಅವರೂ ಸಂಗೀತ ತಿಳಿ­ದ­ವರು.
ಆರಂ­ಭ­ದಲ್ಲಿ ಅವರು ಹಾಡು­ಗಾ­ರಿಕೆ ಅಭ್ಯಾಸ ಮಾಡಿ­ದರು. ನಂತರ ಟಿ.ಎಚ್‌. ಗುರು­ಮೂರ್ತಿ ಅವರ ಬಳಿ ವೈಲಿನ್‌ ಕಲಿ­ತರು. ಆನಂ­ತರ ತಮ್ಮಿ­ಷ್ಟದ ತಾಳ­ವಾದ್ಯ ಘಟಂ ಕಡೆ ಹೊರ­ಳಿ­ದರು. ಶ್ರೀ ಜೈ ಗಣೇಶ ತಾಳ­ವಾದ್ಯ ಸಂಗೀತ ಶಾಲೆಯ ಸ್ಥಾಪಕ ಟಿ.ಆರ್‌. ಹರಿ­ಹರ ಶರ್ಮ ಅವರ ಪ್ರಥಮ ಗುರು­ಗಳು. ಆ ಮೇಲೆ ಭಾರ­ತೀಯ ಸಂಗೀ­ತದ ದಂತ­ಕತೆ `ವಿಕ್ಕು' ವಿನಾ­ಯಕ ರಾಮ್‌ ಅವರ ಗುರು­ಗ­ಳಾ­ದರು. ಸಕ­ನ್ಯಾರ ಪ್ರತಿ­ಭೆ­ಯನ್ನು ಹೊರ ತೆಗೆ­ಯು­ವಲ್ಲಿ ವಿಕ್ಕು ಯಶ­ಸ್ವಿ­ಯಾ­ದರು. ಸುಕನ್ಯಾ ಎಂಬ `ಮುತ್ತು' ಸೃಷ್ಟಿ­ಸಿ­ದರು.
ಸುಕನ್ಯಾ 1983ರಲ್ಲಿ ಸಂಗೀತ ರಸಿಕ ರಾಮ್‌­ಗೋ­ಪಾಲ್‌ ಅವ­ರನ್ನು ಕೈ ಹಿಡಿದು ಬೆಂಗ­ಳೂರು ಸೇರಿ­ದರು. ರಾಮ್‌­ಗೋ­ಪಾಲ್‌ ಅವರು ಸುಕ­ನ್ಯಾ­ರಿ­ಗಾಗಿ ಹಲವು ತ್ಯಾಗ ಮಾಡಿ­ದರು. ಪತಿ ನೀಡಿದ ಪ್ರೋತ್ಸಾಹ ಸುಕನ್ಯಾ ಹಲವು ಅದ್ಭು­ತ­ಗ­ಳನ್ನು ನಿರ್ಮಿ­ಸಲು ಸಾಕ್ಷಿ­ಯಾ­ಯಿತು.

ಸ್ತ್ರೀ ತಾಲ್‌ ತರಂಗ್‌:
ಸುಕ­ನ್ಯಾರ ಕನ­ಸಿನ ಕೂಸಾದ `ಘಟಂ ತರಂಗಂ' ನಂತರ ಅವರು ಮಾಡಿದ ಇನ್ನೊಂದು ಪ್ರಯೋಗ ಸ್ತ್ರೀ ತಾಲ್‌ ತರಂಗ್‌. ಇಲ್ಲಿ ಘಟಂ ಜೊತೆಗೆ ಬೇರೆ ಮಹಿಳಾ ವಾದ್ಯ­ಗಾ­ರ್ತಿ­ಯರು ತಮ್ಮ ವೈಲಿನ್‌, ವೀಣಾ, ಮೃದಂಗ ವಾದ್ಯ­ಗ­ಳನ್ನು ಜೊತೆ­ಗೂ­ಡಿ­ತ್ತಾರೆ. ಇದು ಒಂದೇ ಪಿಚ್‌(ಆ­ಕ್ಟೇವ್‌)ನ­ಲ್ಲಿ­ರುವ ಕಾರಣ ಸಕನ್ಯಾ ಅವರೇ ಸ್ವತಃ ಸಂಯೋ­ಜಿ­ಸಿದ ಕೃತಿ, ಕಲ್ಪನಾ ಸ್ವರ, ಪಲ್ಲ­ವಿ­ಗ­ಳನ್ನು ನುಡಿ­ಸು­ತ್ತಾರೆ. ಆ ಮೂಲಕ ಒಬ್ಬ ಸಂಗೀತ ಸಂಯೋ­ಜ­ಕಿ­ಯಾ­ಗಿಯೂ ಸುಕನ್ಯಾ ಗುರು­ತಿ­ಸಿ­ಕೊಂ­ಡಿ­ದ್ದಾರೆ. ಸ್ತ್ರೀತಾಲ್‌ ತರಂಗ್‌ ಮೂಲಕ ಪಕ್ಕ­ವಾ­ದ್ಯ­ವಾದ ಘಟಂಗೆ ಮುಖ್ಯ ಸ್ಥಾನ ಕೊಟ್ಟಿದ್ದು ಸುಕ­ನ್ಯಾರ ಬಹಳ ದೊಡ್ಡ ಸಾಧನೆ.

ಘಟಕ್ಕೆ ಕಡೆಯ ಸ್ಥಾನ:
ಕರ್ನಾ­ಟಕ ಸಂಗೀ­ತ­ಗಾ­ರರು ಇವ­ತ್ತಿಗೂ ಘಟಕ್ಕೆ ಮನ್ನಣೆ ಕೊಟ್ಟಿಲ್ಲ. ಅವ­ರಿಗೆ ತಮ್ಮ ಪ್ರತಿಭೆ ತೋರಲು ಅವ­ಕಾ­ಶವೂ ಇಲ್ಲ. ಗಾಯನ, ವೈಲಿನ್‌, ಮೃದಂಗ, ಮೊರ್ಚಿಂಗ್‌, ಕಂಜೀರಾ ಆದ ಮೇಲೆ ಘಟಕ್ಕೆ ಸ್ಥಾನ, ಅದೂ ಗಾಯ­ಕರ ಹಿಂದೆ. ಇದು ಸುಕ­ನ್ಯಾ­ರನ್ನು ಏನಾ­ದರೂ ಹೊಸ­ತೊಂ­ದನ್ನು ಪ್ರಯೋಗ ಮಾಡು­ವಂತೆ ಪ್ರೇರೇ­ಪಿ­ಸಿತು. ಆ ಹಾದಿ­ಯಲ್ಲಿ ಘಟಂ ತರಂಗಂ, ಸ್ತ್ರೀ ತಾಲ್‌ ತರಂಗಂ ಪ್ರಯೋಗ ಮಾಡಿ ಯಶ­ಸ್ವಿ­ಯಾ­ದರು. ಆ ಮೂಲಕ ಘಟಕ್ಕೆ ಒಂದು ಹೊಸ ಸ್ವರೂ­ಪ­ವನ್ನೇ ಸೃಷ್ಟಿ­ಸಿ­ದರು.
ವರ್ಲ್ಡ್‌ ಸ್ಪೇಸ್‌ ರೇಡಿ­ಯೋ­ದಲ್ಲಿ ಸುಕ­ನ್ಯಾರ ತರಂಗ್‌ ಪ್ರಸಾ­ರ­ವಾ­ಗಿವೆ. `ರೈ­ನ್‌ಬೋ' ಆಲ್ಬಮ್‌ ಕೂಡ ಹೊರ­ತಂ­ದಿ­ದ್ದಾರೆ. ಅಸಂ­ಖ್ಯಾತ ಕಚೇರಿ ನಡೆ­ಸಿ­ದ್ದಾರೆ. 2010ರ ಹೊಸ­ವರ್ಷ ಜ.1ರಂದು ಚೆನ್ನೈನ ಪ್ರತಿ­ಷ್ಠಿತ `ಮ­ದ್ರಾಸ್‌ ಮ್ಯೂಸಿಕ್‌ ಅಕಾ­ಡೆ­ಮಿ­ಯಲ್ಲಿ ತಮ್ಮ ಸ್ತ್ರೀ ತಾಲ್‌ ತರಂಗ್‌ ಕಚೇರಿ ನೀಡು­ತ್ತಿ­ದ್ದಾರೆ. ಇದು ಸುಕ­ನ್ಯಾರ ಸಾಧ­ನೆಗೆ ಧಕ್ಕಿದ ಮಹತ್ವ.
ಸುಕ­ನ್ಯಾ­ರಿಗೆ ಅಸಂ­ಖ್ಯಾತ ಪ್ರಶಸ್ತಿ ಬಿರು­ದು­ಗಳು ಅರಸಿ ಬಂದಿವೆ. ಈ ವರ್ಷದ ಗಾಯನ ಸಮಾಜ ಸಮ್ಮೇ­ಳ­ನ­ದಲ್ಲಿ `ವ­ರ್ಷದ ಕಲಾ­ವಿದೆ' ಪ್ರಶ­ಸ್ತಿಗೆ ಪಾತ್ರ­ರಾ­ಗಿ­ದ್ದಾರೆ.
ಬೆಂಗ­ಳೂ­ರಿನ ಯಶ­ವಂ­ತ­ಪು­ರ­ದಲ್ಲಿ ಸುಕ­ನ್ಯಾರ ವಾಸ. ಮಗಳು ರಾಧಾ. ಮಗ ನಾರಾ­ಯಣ್‌ ಪ್ರಭು. ಇಬ್ಬರೂ ಸಾಪ್ಟ್‌­ವೇರ್‌ ಇಂಜಿ­ನಿ­ಯರ್ಸ್‌, ಜೊತೆಗೆ ಸಂಗೀ­ತ­ಗಾ­ರರು. `ಘಟ ನುಡಿ­ಸುವ ಬಗೆ' ಪುಸ್ತಕ ಬರೆ­ಯುವ ಹಾಗೂ ಒಂದು ಸಂಗೀತ ಶಾಲೆ ರಚಿ­ಸುವ ಕನ­ಸಿ­ನೊಂ­ದಿಗೆ ಸುಕ­ನ್ಯಾ­ರಾ­ಮ್‌­ಗೋ­ಪಾಲ್‌ ಅವರ ಘಟ ಹೃದಯ ತಟ್ಟು­ತ್ತಿದೆ

No comments:

Post a Comment