
ಮಾತೆ ಮೀನಾಕ್ಷಿ ಹೊಳ್ಳ
ಆ ವೃದ್ಧಾಶ್ರಮದ ಹಿರಿಯ ಜೀವಗಳ ಜೊತೆಯಲ್ಲಿ `ಮಾಯಾಮೃಗ' ಶೂಟಿಂಗ್ ನಡೆಯಿತು. ವಾರದ ನಂತರ ದೂರದರ್ಶನದಲ್ಲಿ ಪ್ರಸಾರವಾಯಿತು. ಧಾರಾವಾಹಿ ನೋಡಿದ ಚೆನ್ನೈ ವೀಕ್ಷಕನೊಬ್ಬ ಮರುದಿನ ವೃದ್ಧಾಶ್ರಮವನ್ನು ಹುಡುಕಿಕೊಂಡು ಬಂದ. ಅವನಿಗೊಂದು ಅನುಮಾನ. ಧಾರಾವಾಹಿಯಲ್ಲಿ ಕಂಡ ಆ ವೃದ್ಧೆ ನನ್ನ ತಾಯಿ ಇರಬಹುದಾ?! ಅವನ ಅನುಮಾನ ನಿಜವಾಗಿತ್ತು. ತಾಯಿಯನ್ನು ಕಣ್ತುಂಬ ನೋಡಿದ. ಮಾತನಾಡಿಸಲಿಲ್ಲ. ಅನುಮಾನವನ್ನು ಪರಿಹರಿಸಿಕೊಂಡು ಕಾಲಿಗೆ ಬುದ್ದಿ ಹೇಳಿದ. ಆ ತಾಯಿ ಅತ್ತು ಅತ್ತು ಹೈರಾಣಾದಳು. ಕಲವೇ ದಿನಗಳಲ್ಲಿ ಅಲ್ಲೇ ಸತ್ತಳು. ಆಗಲೂ ಆ ಮೂರ್ಖ ಮಗ ತಾಯಿಯ ಕಳೇಬರ ಕಾಣಲು ಬರಲಿಲ್ಲ. ಕಡೆಗೆ ಆಕೆ ಹರಿಶ್ಚಂದ್ರ ಘಾಟ್ನಲ್ಲಿ ದೀರ್ಘ ಮೌನವಾದಳು.
ಇದು ಮಾಯಾಮೃಗದ ಕತೆಯಲ್ಲ. ಬೆಂಗಳೂರಿನ ಚಿತ್ರಕಲಾ ಪರಿಷತ್ ಪಕ್ಕದಲ್ಲಿರುವ ಶ್ರೀ ರಾಘವೇಶ್ವರ ಗೋ ಆಶ್ರಮ ಟ್ರಸ್ಟ್ನ ವೃದ್ಧಾಶ್ರಮದಲ್ಲಿ ನಡೆದ ನಿಜವಾದ ಕತೆ. ಈ ಕತೆ ಹೇಳಿದವರು ವೃದ್ಧಾಶ್ರಮವನ್ನು ಕಳೆದ ಮೂರು ದಶಕಗಳಿಂದ ಕಟ್ಟಿಕೊಂಡು ಬರುತ್ತಿರುವ 84 ವರ್ಷ ವಯಸ್ಸಿನ `ಹಿರಿಯ ತಾಯಿ' ಮೀನಾಕ್ಷಿ ಹೊಳ್ಳ. ಅವರ ಬಳಿ ಈ ಥರದ ನೂರಾರು ಕತೆಗಳಿವೆ. ಅದೆಷ್ಟೋ ವೃದ್ಧರನ್ನು ಸಾಕಿ ಸಲಹಿ, ಅಂತ್ಯ ಸಂಸ್ಕಾರವನ್ನೂ ಮಾಡಿದ್ದಾರೆ!. ಮೀನಾಕ್ಷಿ ಹೊಳ್ಳ ನಮ್ಮ ನಡುವೆ ಇರುವ ಅಪರೂಪದ ಹಿರಿಯ ಜೀವ. ಕಲಿತದ್ದು ಕಮ್ಮಿಯಾದರೂ ಅವರ ಬಳಿ ಅದ್ಬುತ ಅನುಭವಗಳೇನೂ ಕಮ್ಮಿ ಇಲ್ಲ. ಕಳೆದ ಮೂವತ್ತು ವರ್ಷಗಳಿಂದ ಎಲ್ಲವನ್ನು ಕಳೆದುಕೊಂಡವರಿಗೆ ಇವರೇ ಎಲ್ಲಾ ಆಗಿದ್ದಾರೆ. ತಮ್ಮ ಆಶ್ರಮದ ಹಿರಿಯರನ್ನು ಮಕ್ಕಳಂತೆ ಸಲಹಿದ್ದಾರೆ. ಇಲ್ಲಿಯವರೆಗೆ ಆಶ್ರಮದಲ್ಲಿ ಮೃತಪಟ್ಟ ಮೂವತ್ತಕ್ಕೂ ಹೆಚ್ಚು ಹಿರಿಯರಿಗೆ ಅಂತ್ಯ ಸಂಸ್ಕಾರ ಮಾಡಿದ್ದಾರೆ.
`ಅಂತ್ಯಸಂಸ್ಕಾರ ಮಾಡುವುದು ಒಂದು ಯೋಗ. ನನ್ನ ಯಾವ ಜನ್ಮದ ಪುಣ್ಯವೋ ಕಾಣೆ. ದಿಕ್ಕಿಲ್ಲ ಅಂದವರಿಗೆ ಅನ್ನ ಕೊಟ್ಟಿದ್ದೇನೆ, ಸೂರು ಕೊಟ್ಟು ಸಾಕಿದ್ದೇನೆ. ನೋವು ಅಂದಾಗ ಮಕ್ಕಳಂತೆ ಆರೈಕೆ ಮಾಡಿದ್ದೇನೆ. ಸತ್ತಾಗ ಕಣ್ಣೀರು ಹಾಕಿ ಎಲ್ಲಾ ಕರ್ಮಾದಿಗಳನ್ನು ಮಾಡಿದ್ದೇನೆ. ಇದು ಪುಣ್ಯವಲ್ಲದೆ ಮತ್ತಿನ್ನೇನು' ಎಂದು ಪ್ರಶ್ನಿಸುವಾಗ ಅವರ ಮಾತೃ ಸ್ವರೂಪ ತೆರೆದುಕೊಂಡಿತ್ತು.
ಅಪರೂಪದ ಆಲಯ:
ಪ್ರಚಾರದಿಂದ ಬಹಳ ದೂರವಿರುವ ವೃದ್ಧಾಶ್ರಮ ಅದು. ರಾಜಕಾರಣಿಗಳು ಕೊಡುವ ಪುಡಿಗಾಸಿಗೆ ಎಂದಿಗೂ ಕೈ ಚಾಚಿದವರಲ್ಲ. 1979ರಲ್ಲಿ ತುಂಡುಭೂಮಿಯಲ್ಲಿ ಗೋ ಆಶ್ರಮ ಟ್ರಸ್ಟ್ ಆಗಿ ಆರಂಭವಾಯಿತು. ಟ್ರಸ್ಟ್ ವೃದ್ಧಾಶ್ರಮನ್ನೂ ಆರಂಭಿಸಿತು. ಆರಂಭದಲ್ಲಿ ಆ ಜಾಗ ದೊಡ್ಡ ಹೊಂಡದಂತಿತ್ತು. ಅದು ಮುಂದೊಂದು ದಿನ ಹಿರಿಯ ಜೀವಗಳ ಆಶ್ರಯತಾಣವಾಗುತ್ತದೆ ಎಂದು ಯಾರೂ ಎಣಿಸಿರಲಿಲ್ಲ. ಆ ಕಾಲದಲ್ಲಿ ಮೀನಾಕ್ಷಿಯವರ ತೋಳಲ್ಲಿ ಇನ್ನೂ ಬಲವಿತ್ತು. ತಮ್ಮ ಪತಿ ಜನಾರ್ಧನ ಹೊಳ್ಳ ಅವರ ಸಂಕಲ್ಪಕ್ಕೆ ಮೀನಾಕ್ಷಿ ನೀರೆರೆದರು. ಇವತ್ತು ಅದು ಹಿರಿಯ ಜೀವಗಳ ಆಲಯವಾಗಿದೆ. ಅವರು ಸರ್ಕಾರದ ಕಡೆಯಿಂದ ಒಂದು ನಯಾ ಪೈಸೆಯನ್ನೂ ನಿರೀಕ್ಷೆ ಮಾಡಿದವರಲ್ಲ. ಮುಂದೆಯೂ ಮಾಡುವವರಲ್ಲ. ಆಶ್ರಮಕ್ಕೆ ಹಿರಿಯರ ಬಗ್ಗೆ ಕಾಳಜಿಯುಳ್ಳ ದಾನಿಗಳೇ ಧಣಿಗಳು.
ಇವರು ಕಟುಕರು:
ಹೆತ್ತವರಿಗೆ ಒಂದು ಹೊತ್ತಿನ ಅನ್ನ ಹಾಕಲು ಆಗವರಿಗೆ ಮೀನಾಕ್ಷಿ ಹೊಳ್ಳ ಕಟುಕರು ಎಂದು ಕರೆಯುತ್ತಾರೆ. ಹೆತ್ತವರನ್ನು ಮಕ್ಕಳು ತಿರಸ್ಕರಿಸಿದಾಗ ಸಮಾಜ ತಿರಸ್ಕರಿಸಕೂಡದು. ಹಿರಿಯರ ನೋವುಗಳಿಗೆ ಸ್ಪಂದಿಸಬೇಕು. ಈ ಕೆಲಸ ಮಾಡಲು ಮಕ್ಕಳೇ ಆಗಬೇಕೆಂದಿಲ್ಲ. ಮನುಷ್ಯತ್ವ ಇರುವ ಯಾರು ಬೇಕಾದರೂ ಮಾಡಬಹುದು ಎಂಬುದು ಅವರ ಮನದಾಳದ ಮಾತು.
ಆಶ್ರಮಕ್ಕೆ ರಜತ ಮಹೋತ್ಸವ:
2004ರಲ್ಲಿ ಆಶ್ರಮಕ್ಕೆ 25 ತುಂಬಿತು. ಬಹುಶಃ ಆಗಲೇ ಈ ಆಶ್ರಮದ ಸೇವೆ ಎಲ್ಲರಿಗೂ ತಿಳಿದದ್ದು. ಅಲ್ಲಿಯವರೆಗೆ ಮರೆಯಲ್ಲೇ ಇತ್ತು. ರಜತ ಸಂಭ್ರದಲ್ಲಿದ್ದ ಆಶ್ರಮವನ್ನು ಅಂದಿನ ರಾಜ್ಯಪಾಲರಾದ ಟಿ.ಎನ್. ಚತುರ್ವೇದಿ, ಉಪ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಗಣ್ಯರಾದ ವಿರೇಂದ್ರ ಹೆಗ್ಗಡೆ, ಪತ್ರಕರ್ತ ರವಿಬೆಳಗೆರೆ, ವಿಶ್ವೇಶ್ವರ ಭಟ್ ಮುಂತಾದವರು ಕೊಂಡಾಡಿದ್ದಾರೆ.
ಮನೆಯ ವಾತಾವರಣ:
ಮನೆಯ ವಾತಾವರಣ ಈ ಆಶ್ರಮದಲ್ಲಿದೆ. 60 ವರ್ಷ ವಯಸ್ಸಿಗೂ ಮೇಲ್ಪಟ್ಟ ವೃದ್ಧರು ಇಲ್ಲಿ ಆಶ್ರಯ ಪಡೆಯಬಹುದು. ಜಾತಿ, ಭಾಷೆಗಳ ಪ್ರಶ್ನೆಯೇ ಇಲ್ಲ. ಅವಿವಾಹಿತ ವೃದ್ಧರಿಗೆ ಹೆಚ್ಚು ಆದ್ಯತೆ ಇದೆ. ಡೊನೇಷನ್, ಡಿಫಾಜಿಟ್ ಯಾವುದೂ ಇಲ್ಲ. ಇಷ್ಟಪಟ್ಟರೆ ವೃದ್ಧರು ಹಣ ಸಹಾಯ ಮಾಡಬಹುದು ಆದರೆ ಕಡ್ಡಾಯವಿಲ್ಲ. ಆಶ್ರಮದಲ್ಲಿ ಎಲ್ಲಾ ವ್ಯವಸ್ಥೆಗಳಿವೆ. ಮುಖ್ಯವಾಗಿ ಆಶ್ರಮ ಬಹಳ ಶುಚಿಯಾಗಿದೆ.
ಹಿರಿಯರ ಆರೋಗ್ಯಕ್ಕೆ ಇಲ್ಲಿ ಜಾಸ್ತಿ ಒತ್ತು ಕೊಟ್ಟಿದ್ದಾರೆ. ಮಹವೀರ್ ಜೈನ್ ಆಸ್ಪತ್ರೆ ವೈದ್ಯಕೀಯ ಸೌಲಭ್ಯ ನೀಡುತ್ತದೆ. ಶುಶೃಕಿ ಸಿಸ್ಟರ್ ಶಾಲಿನಿ ಅವರು ಪ್ರತಿದಿನ ಆರೋಗ್ಯ ತಪಾಸಣೆ ನಡೆಸುತ್ತಾರೆ. ಈ ಎಲ್ಲಾ ಉಸ್ತುವಾರಿಯನ್ನು ಮೀನಾಕ್ಷಿ ಹೊಳ್ಳ ಅವರೇ ನೋಡಿಕೊಳ್ಳುತ್ತಾರೆ. ಮಗ ಕೆ.ಜೆ. ಬಾಲಕೃಷ್ಣ ಹೊಳ್ಳ ಅವರು ಅಮ್ಮನಿಗೆ ಸಹಾಯ ಮಾಡುತ್ತಾರೆ.
ವಿದ್ಯಾ ಪ್ರತಿಷ್ಠಾನ:
ವಿದ್ಯಾಸೇವೆಯ ಉದ್ದೇಶದಿಂದಲೇ `ಮೀನಾಕ್ಷಿಹೊಳ್ಳ ವಿದ್ಯಾ ಪ್ರತಿಷ್ಠಾನ'ವನ್ನು ತೆರೆಯಲಾಗಿದೆ. ಆರ್ಥಿಕ ಚೈತನ್ಯ ಇಲ್ಲದ ಮಕ್ಕಳಿಗೆ ಈ ವಿದ್ಯಾ ಪ್ರತಿಷ್ಠಾನದ ಮೂಲಕ ವಿದ್ಯಾದಾನ ಮಾಡಲಾಗುತ್ತದೆ. ಆಶ್ರಮದ ಹಿರಿಯರು ಹಾಗೂ ಶಾಲೆಯ ಮಕ್ಕಳನ್ನು ಮೀನಾಕ್ಷಿ ಹೊಳ್ಳ ತಮ್ಮವರಂತೆ ಪ್ರೀತಿಸುತ್ತಾರೆ.
ಮುಂದೆಯೂ ಆಶ್ರಮದ ಸೇವೆ ನಿರಂತರವಾಗಿ ನಡೆಯಬೇಕು ಅನ್ನುವುದೇ ಮೀನಾಕ್ಷಿ ಹೊಳ್ಳರ ಆಸೆ. ಹಿರಿಯ ಜೀವಗಳ ಬಗ್ಗೆ ಕಾಳಜಿ ಉಳ್ಳ ಯಾರು ಬೇಕಾದರೂ ಈ ಆಶ್ರಮಕ್ಕೆ ತಮ್ಮ ಕೈಲಾದ ಸಹಾಯ ಸಲ್ಲಿಸಬಹುದು. ಕಡೇ ಪಕ್ಷ ಹಿರಿಯರಿಗೆ ಒಂದು ಹೊತ್ತಿನ ಊಟ ಹಾಕಿಸುವ ವ್ಯವಸ್ಥೆಯನ್ನೂ ಮಾಡಬಹುದು.
No comments:
Post a Comment