
ಅನಂತ ಸತ್ಯಂ
ಬಲು ಅಪರೂಪ ಇಂಥವರು......
ಅನಂತ ಸತ್ಯಂಬಲು ಅಪರೂಪ ಇಂಥವರುಕಗ್ಗಲ್ಲನ್ನು ಕಡೆದು ಮೂರುತಿ ಮಾಡುವ ಶಿಲ್ಪಾಗಾರ. ತಂತಿ ಮೇಲೆ ನಡೆದು ಮಾಧುರ್ಯ ತುಂಬುವ ಸಂಗೀತಗಾರ. ಕಲ್ಲಿನ ಗುಣ ಅರಿತವರು. ತಂತಿಗಳ ಶೃತಿಯಿಂದ ನಾಡಿ ಮಿಡಿತಗೊಳಿಸುವವರು. ಕಗ್ಗಲ್ಲಿಗೆ ಉಳಿಪೆಟ್ಟಿನ ರುಚಿ ತೋರಿಸಿ ಕೃತಿ ಕಟ್ಟುವವರು. ಬೆರಳ ತುದಿಯಿಂದ ತಂತಿಗಳ ಬಳಸಿ ರಸೋತ್ಪತ್ತಿ ಮಾಡುವವರು.ಅವರು ವಿದ್ವಾನ್ ಎನ್. ಅನಂತ ಸತ್ಯಂ. ಅಪರೂಪದ ಶಿಲ್ಪಿ ಹಾಗೂ ವೈಲಿನ್ ವಿದ್ವಾಂಸರು. ನಾಡಿನಲ್ಲಿರುವ ಬೆರಳೆಣಿಕೆಯಷ್ಟು ಶಿಲ್ಪಿಗಳಲ್ಲಿ ಅನಂತ ಸತ್ಯಂ ಒಬ್ಬರು. ಅವರ ಕೈಚಳಕದಿಂದ ಮೂಡಿದ ಹಲವು ಕಲಾಕೃತಿಗಳು ನಾಡಿನಾದ್ಯಂತ ಪ್ರಸಿದ್ಧಿ ಪಡೆದಿವೆ. ಬೆಂಗಳೂರಿನ ರಾಜಭವನದಲ್ಲಿರುವ ಮಹಾತ್ಮಗಾಂಧಿ ಪುತ್ಥಳಿ ಅವರ ಮಹತ್ವದ ಕೃತಿ. ಈ ಪುತ್ಥಳಿ ಪ್ರತಿಷ್ಠಾಪನೆಯಾದಾಗ ಅಂದಿನ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಸತ್ಯಂ ಅವರನ್ನು ಸನ್ಮಾನಿಸಿದ್ದರು.ಸರ್. ಎಂ. ವಿಶ್ವೇಶ್ವರಯ್ಯ ಅವರ ಹುಟ್ಟೂರಾದ ಮುದ್ದೇನಹಳ್ಳಿಯ ವಿಶ್ವೇಶ್ವರಯ್ಯ ಪುತ್ಥಳಿ ಅನಂತ ಸತ್ಯಂ ಅವರ ಹೆಸರು ಹೇಳುತ್ತದೆ! ಬೆಂಗಳೂರಿನ ಎಂ.ಜಿ. ರಸ್ತೆಯ ಐಎನ್ಜಿ ವೈಶ್ಯ ಬ್ಯಾಂಕ್ ಆವರಣದಲ್ಲಿರುವ ಸಿಂಹದ ಕೃತಿ ಸತ್ಯಂ ಅವರ ಸೃಜನಶೀಲತೆಯ ಕೂಸು. ಈ ಬ್ಯಾಂಕಿನ ಲೋಗೋ ಕೂಡ ಸತ್ಯಂ ಮೂಡಿಸಿದ ಸಿಂಹವೇ. ಖ್ಯಾತ ನೃತ ಕಲಾವಿದೆ ಪ್ರೊತಿಮಾ ಬೇಡಿ ಅವರ ನೃತ್ಯಗ್ರಾಮದಲ್ಲಿರುವ ಹಲವು ಕಲಾಕೃತಿಗಳನ್ನು ಅನಂತ ಸತ್ಯಂ ಮಾಡಿಕೊಟ್ಟಿದ್ದಾರೆ.ಅನಂತ ಸತ್ಯಂ ಹುಟ್ಟಿದ್ದು ರಾಮನಗರದಲ್ಲಿ. ತಂದೆ ದಿ. ವಿದ್ವಾನ್ ನಾಗಭೂಷಣ ಶಾಸ್ತ್ರಿ ಹಾಗೂ ತಾಯಿ ಪಾರ್ವತಮ್ಮ. ತಂದೆ ತಾಯಂದಿರಿಬ್ಬರೂ ಸಂಗೀತ ತಿಳಿದವರು. ರಾಮನಗರದಲ್ಲಿ ಶಾಸ್ತ್ರಿಗಳ ಮನೆ ಎಂದರೆ ಇವತ್ತಿಗೂ ಖ್ಯಾತಿ. ಗಣೇಶ ಹಬ್ಬದ ಕಾಲ ಬಂತೆಂದರೆ ಶಾಸ್ತ್ರಿಗಳ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಶಾಸ್ತ್ರಿಗಳ ಕೈಚಳಕದಿಂದ ಮೂಡಿದ ಗಣಪನ ಮೂರ್ತಿ ಕೊಳ್ಳಲು ದೂರದ ಊರಿನಿಂದ ಜನ ಬರುತ್ತಿದ್ದರಂತೆ. ಮನೆ ತುಂಬೆಲ್ಲಾ ಮಣ್ಣಿನ ವಾಸನೆ! ಮನೆ ಮಂದಿಯೆಲ್ಲಾ ಒಟ್ಟಿಗೆ ಕೂತು ಗಜಾನನನನ್ನು ಕಟ್ಟುತ್ತಿದ್ದರು. ಮಗ ಅನಂತ ಸತ್ಯಂ ಕೈಯಿಂದ ಗಣಪನ ಕಣ್ಣು, ಕಿವಿ, ಮೂಗು ಹೀಗೆ ಒಂದೊಂದೇ ಅಂಗಗಳನ್ನು ಮಾಡಿಸಿ ಶಿಲ್ಪಕಲೆ ಕಲಿಕೆಗೆ ಹಚ್ಚಿದರು. ಅನಂತ ಸತ್ಯ ತಂದೆ ಕೂಡ ಸಂಗೀತ ತಿಳಿದವರು. ಹರಿಕಥೆಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದರು. ವಿದ್ವಾಂಸರಾದ ಗುರುರಾಜುಲು ನಾಯ್ಡು, ವೆಂಕೋಬದಾಸರು ಮುಂತಾದವರ ಹರಿಕಥೆಗಳಿಗೆ ಹಾರ್ಮೋನಿಯಂ ನುಡಿಸಿದ್ದಾರೆ.ಅನಂತ ಸತ್ಯಂ ಎಸ್ಸೆಸ್ಸೆಲ್ಸಿ ತನಕ ರಾಮನಗರದಲ್ಲೇ ಕಲಿತರು. ನಂತರ ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಬಿಎಫ್ಎಗೆ ಸೇರಿದರು. ಎಂಎಫ್ಎ ಮಾಡಿದರು. ಅಲ್ಲೇ ಉಪನ್ಯಾಸಕರೂ ಆದರು.ಸಂಗೀತಗಾರ ಅನಂತ ಸತ್ಯಂ: ಚಿಕ್ಕಂದಿನಲ್ಲಿ ಮನೆಯಲ್ಲೇ ಹಾಡುಗಾರಿಕೆ ಕಲಿಯುತ್ತಿದ್ದರು. ವೈಲಿನ್ ಮೇಲೆ ಆಸಕ್ತಿ ಹುಟ್ಟಿದ್ದು ಹೈಸ್ಕೂಲು ಮೆಟ್ಟಿಲೇರಿದಾಗ. ಬೆಂಗಳೂರಿನಲ್ಲಿ ಕಾಲೇಜು ಸೇರಿದ ಮೇಲೆ 1984ರಲ್ಲಿ ವಿದ್ವಾನ್. ಬಿ.ವಿ. ಶ್ರೀಕಂಠೇಶ್ವರ್ ಅವರ ಬಳಿ ವೈಲಿನ್ ಕಲಿಕೆ ಆರಂಭಿಸಿದರು. ಸತ್ಯಂ ಅವರ ಕಲಿಕೆಯ ದಿನಗಳು ಕುತೂಹಲಕರವಾಗಿವೆ. ಮುಂಜಾನೆ ತಿಂಡಿ ಮುಗಿಸಿ ಬೆಂಗಳೂರು ಕಡೆ ಹೊರಟರೆ ಮತ್ತೆ ಮನೆ ಸೇರುತ್ತಿದ್ದುದು ರಾತ್ರಿ ಒಂದು ಗಂಟೆಗೆ. ಮಧ್ಯರಾತ್ರಿ 12.30ಕ್ಕೆ ಬೆಂಗಳೂರು ಬಿಡುವ ಕಡೆಯ ಪ್ಯಾಸೆಂಜರ್ ರೈಲು ಹಿಡಿದು ರಾಮನಗರ ಸೇರುತ್ತಿದ್ದರು. ಅಪ್ಪ ಅಮ್ಮ ಮಗನ ಹಾದಿಗಾಗಿ ಕಾಯುತ್ತಿದ್ದರು. ಗುರು ಹೇಳಿಕೊಟ್ಟದ್ದು ಮರೆತು ಹೋದೀತು ಎಂದು ಅಷ್ಟೊತ್ತಿನಲ್ಲೂ ವೈಲಿನ್ ಅಭ್ಯಾಸ ಮಾಡಿ ಮಲಗುತ್ತಿದ್ದರು.ಸತ್ಯಂ ಶ್ರೀಕಂಠೇಶ್ವರ್ ಅವರ ನೆಚ್ಚಿನ ಶಿಷ್ಯರಾಗಿದ್ದರು. ಕೆಲವು ಸಲ ಅವರ ಮನೆಯಲ್ಲೇ ಪಾಠದ ಜೊತೆಗೆ ಊಟವೂ ಆಗುತ್ತಿತ್ತು. ತಿಂಗಳಿಗೊಮ್ಮೆ ಫೀ ಕಟ್ಟುವ ಪರಿಪಾಠ ಇರಲಿಲ್ಲ. ವರ್ಷದ ಫೀಯನ್ನು ಒಮ್ಮೆ ಕಟ್ಟಿದ ಉದಾಹರಣೆಗಳೂ ಇವೆ! ಸತ್ಯಂ ಅವರಿಗೆ ಪೌರೋಹಿತ್ಯವೂ ಗೊತ್ತಿತ್ತು. ಅವಶ್ಯವಿರುವ ಹಣವನ್ನು ಅವರೇ ಸಂಪಾದಿಸುತ್ತಿದ್ದರು. ಮದುವೆಗಳಿಗೆ ಪೌರೋಹಿತ್ಯ ವಹಿಸುತ್ತಿದ್ದರು. ಚಿಕ್ಕವಯಸ್ಸಿನಲ್ಲಿಯೇ ನೂರಾರು ಮದುವೆ ಮಾಡಿಸಿದ ಕೀರ್ತಿ ಅವರದು.ಮೃದಂಗವನ್ನೂ ಕಲಿತರು: ಕಾಲೇಜು ಸಾಗುತ್ತಿತ್ತು. ವೈಲಿನ್ ಸಾಧನೆ ನಡೆಯುತಿತ್ತು. ಇಷ್ಟರ ನಡುವೆ ಮಿಕ್ಕಿದ ಸಮಯವನ್ನು ವ್ಯರ್ಥ ಮಾಡಲಿಲ್ಲ. ವಿದ್ವಾನ್ ಎಂ.ಎಲ್. ವೀರಭದ್ರಯ್ಯ ಆವರ ಬಳಿ ಮೃದಂಗಕ್ಕೆ ಸೇರಿದರು. ತಂತಿವಾದ್ಯ ವೈಲಿನ್ ಹಾಗೂ ತಾಳ ವಾದ್ಯ ಮೃದಂಗ ಎರಡನ್ನೂ ಶ್ರದ್ಧೆಯಿಂದ ಅಭ್ಯಾಸ ಮಾಡಿದರು. ಇವುಗಳ ಜೊತೆಗೆ ಹಾರ್ಮೋನಿಯಂ ಜ್ಞಾನವೂ ಇದೆ.1992ರಲ್ಲಿ ಖ್ಯಾತ ವೈಲಿನ್ ವಾದಕ ಕರ್ನಾಟಕ ಕಲಾಶ್ರೀ ವಿದ್ವಾನ್ ಆರ್. ಆರ್. ಕೇಶವ ಮೂರ್ತಿಗಳ ಶಿಷ್ಯತ್ವ. ಅಷ್ಟೊತ್ತಿಗಾಗಲೇ ಕಚೇರಿ ನೀಡಲು ಆರಂಭಿಸಿದ್ದರು. ಆಮೇಲೆ ವಿದ್ವಾನ್ ಮೈಸೂರು ಎಂ. ನಾಗರಾಜ್, ಚಿತ್ರವೀಣಾ ಎನ್. ರವಿಕಿರಣ್ ಅವರಿಂದಲೂ ಅನಂತ ಸತ್ಯಂ ಸಂಗೀತ ಕಲಿತಿದ್ದಾರೆ.ಸತ್ಯಂ ಅವರ ಪ್ರಥಮ ಕಚೇರಿ ಮದುವೆ ಮನೆ. ಹಲವರು ಮೆಚ್ಚಿ ಬೆನ್ನುತಟ್ಟಿದರು. 20ನೇ ವಯಸ್ಸಿನಲ್ಲಿ ಕಚೇರಿ ಆರಂಭಿಸಿದ ಅನಂತ ಸತ್ಯಂ ಹಿಂದೆ ತಿರುಗಿ ನೋಡಲಿಲ್ಲ. ಸೋಲೋ ಹಾಗೂ ಪಕ್ಕವಾದ್ಯಗಳೆರಡರಲ್ಲೂ ರಾಷ್ಟ್ರಾದ್ಯಂತ ಕಛೇರಿ ನೀಡಿದ್ದಾರೆ. ಸಾಗರದಾಚೆಗೂ ಸತ್ಯಂ ಅವರ ಪ್ರತಿಭೆ ಸಾಗಿದೆ. ಸ್ಟಿಟ್ಜರ್ಲೆಂಡ್ ಪ್ರವಾಸ ಮಾಡಿ ಅಲ್ಲಿಯ ಹಲವು ನಗರಗಳಲ್ಲಿ ಎರಡು ತಿಂಗಳ ಕಾಲ ತಮ್ಮ ಸಂಗೀತ ಪ್ರತಿಭೆ ತೋರಿದ್ದಾರೆ.ಮದುವೆ ಮನೆಯಿಂದ ಆರಂಭವಾದ ಸತ್ಯಂ ಅವರ ಕಚೇರಿಗಳು ಇಲ್ಲಿಯವರೆಗೆ ಸಾವಿರಗಳ ಗಡಿ ಮುಟ್ಟಿವೆ. ಆರ್.ಕೆ. ಶ್ರೀಕಂಠನ್, ವಿದ್ಯಾಭೂಷಣ ಸೇರಿದಂತೆ ಹಲವು ಮಂದಿ ವಿದ್ವಾಂಸರಿಗೆ ವೈಲಿನ್ ಸಾಥ್ ನೀಡಿದ್ದಾರೆ. ಸೋಲೋ ವೈಲಿನ್ ಕಚೇರಿಗಳಲ್ಲೂ ಅನಂತ ಸತ್ಯಂ ಹೆಸರು ಗಳಿಸಿದ್ದಾರೆ.ರಾಷ್ಟ್ರೀಯ ಪ್ರಶಸ್ತಿ: ಅನಂತ ಸತ್ಯಂ ಅವರು ಶಿಲ್ಪಕಲೆ ಹಾಗೂ ಸಂಗೀತ ಎರಡರಲ್ಲೂ ಅಪಾರ ಮೆಚ್ಚುಗೆ ಗಳಿಸಿದ್ದಾರೆ. ಅವರನ್ನು ಹಲವು ಗೌರವ ಪ್ರಶಸ್ತಿಗಳು ಅರಸಿ ಬಂದಿವೆ. 1992ರಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿದ್ದ ಅಖಿಲ ಭಾರತ ಲಲಿತ ಕಲೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳಿಸಿದ್ದಾರೆ. 1993ರಲ್ಲಿ ಚಿತ್ರಕಲಾ ಪರಿಷತ್ನಲ್ಲಿ `ಶ್ರೇಷ್ಠವಿದ್ಯಾರ್ಥಿ' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. 1991ರಲ್ಲಿ ವೈಲಿನ್ ಜೂನಿಯರ್ ಪರಿಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. 1997ರಲ್ಲಿ ಸುವರ್ಣ ಸ್ವಾತಂತ್ರ್ಯ ಸಮಿತಿ ಪ್ರಶಸ್ತಿ, ಲಲಿತ ಕಲಾ ಅಕಾಡೆಮಿ ಸ್ಕಾಲರ್ಶಿಷ್, ಇತ್ತೀಚೆಗೆ `ಚಾಣಕ್ಯ ರತ್ನ' ಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾಗಿದ್ದಾರೆ. 2000 ತನಕ ಚಿತ್ರಕಲಾ ಪರಿಷತ್ನಲ್ಲೇ ಉಪನ್ಯಾಸಕರಾಗಿದ್ದ ಅವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದರು. ಯಾವುದೋ ಒಂದು ಸಂಸ್ಥೆಯಲ್ಲಿ ಇರುವುದು ಪ್ರಾಯೋಗಿಕ ಬೆಳವಣಿಗೆ ಕಷ್ಟ ಎನಿಸಿತು. ಪರಿಷತ್ ಕೆಲಸಕ್ಕೆ ಗುಡ್ ಬೈ ಹೇಳಿದರು. ಈಗ ಸ್ವತಂತ್ರ ಶಿಲ್ಪಿ ಹಾಗೂ ಸಂಗೀತ ಗುರು. ಹಲವು ಕಡೆ ಶಿಲ್ಪಕಲಾ ಕಾರ್ಯಗಾರಗಳಲ್ಲಿ ಪಾಲ್ಗೊಂಡು ಚಿತ್ರಕಲೆ ಬೋಧಿಸುತ್ತಿದ್ದಾರೆ. ಹಲವು ಶಿಲ್ಪಕಲಾ ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ.ಇವುಗಳ ಜೊತೆಗೆ ಅನಂತ ಸತ್ಯ ಉತ್ತಮ ಕ್ರಿಡಾಪಟು ಕೂಡ. ಕ್ರಿಕೆಟ್ ಅಂದರೆ ಪ್ರಾಣ. ಕಾಲೇಜು ದಿನಗಳಲ್ಲಿ ರಣಜಿ ಪಂದ್ಯಗಳಲ್ಲಿ ಆಟವಾಡಿದ ಅನುಭವವಿದೆ. ಅನಂತ ಸತ್ಯಂ ನಮ್ಮ ನಾಡಿನ ಅಪರೂಪದ ಕಲಾವಿದರು. ಒಬ್ಬವ್ಯಕ್ತಿ ಲಲಿತ ಕಲೆಗಳ ಒಂದು ವಿದ್ಯೆಯನ್ನು ಸಾಧಿಸಿ ಧಕ್ಕಿಸಿಕೊಳ್ಳಲು ಒಂದು ಜನ್ಮವೇ ಬೇಕು. ಆದರೆ ಅವರಿಗೆ ಶಿಲ್ಪಕಲೆ, ವೈಲಿನ್, ಮೃದಂಗ, ಹಾರ್ಮೋನಿಯಂ ಜ್ಞಾನ ಒಲಿದು ಬಂದಿವೆ. ಇವರನ್ನು ಅಪರೂಪ ಎನ್ನಲು ಇಷ್ಟೇ ಸಾಕು. ಇಂಥ ಅನರ್ಘ್ಯ ಪ್ರತಿಭೆಯನ್ನು ಗುರುತಿಸಿದವರು ಬಹಳ ಕಡಿಮೆ ಮಂದಿ. ಅದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಅನಂತ ಸತ್ಯಂ ಸೇವೆಯನ್ನೇ ಸತ್ಯ ಮತ್ತು ನಿರಂತರ ಎಂದು ನಂಬಿದ್ದಾರೆ.
No comments:
Post a Comment