
ಸಪ್ತ ಸ್ವರಗಳ `ಸ್ವಾಮೀಜಿ' ಹೃದಯ
ಸ ರಿ ಗ ಮ ಪ ದ ನಿ....ಗಳ ಮೇಲೆ ಆ ಮಾನವತಾವಾದಿಗೆ ಅದೇನು ವಿಶ್ವಾಸ! ಸಂಗೀತ ಒಂದು ಶಕ್ತಿ. ಬದುಕಿನಲ್ಲಿರುವ ಸೌಂದರ್ಯ ಕಾಣಲು ಸಂಗೀತ ಪ್ರಧಾನ ಮಾರ್ಗ. ಮನುಷ್ಯ ಮಾತ್ರವಲ್ಲ ಪ್ರಾಣಿ ಪಕ್ಷಿಗಳ ಹೃದಯ ತಲುಪುವ ಅಪೂರ್ವ ಚೈತನ್ಯ ಸಂಗೀತ. ಜಗದ ಮನುಷ್ಯತ್ವವನ್ನು ಒಂದೆಡೆ ಕಲೆಹಾಕುವ ಮಾರ್ಗ. ಮಾಯಾಲೋಕದ ಒತ್ತಡಗಳಿಂದ ಬಳಲಿದ ಹೃದಯಗಳಿಗೆ ವಿಶ್ರಾಂತಿಯ ಗುಳಿಗೆ. ಸಾವಿರ ವ್ಯಾಧಿಗಳನ್ನು ಗುಣಪಡಿಸುವ ಸಾಮರ್ಥ್ಯವಿರುವ ದಿವ್ಯ ಔಷಧಿ.... ಹೀಗೆಂದು ನಂಬಿರುವ ಅವರ ಹೃದಯ ಸಪ್ತಸ್ವರಗಳಿಂದ ಉತ್ಪತ್ತಿಯಾಗಿದೆ!
ಅವರೊಬ್ಬ ಸ್ವಾಮೀಜಿ. ಯಾವುದೋ ಒಂದು ಸಮಾಜಕ್ಕೆ, ಸಮುದಾಯಕ್ಕೆ ಸೀಮಿತವಾದವರಲ್ಲ. ಪವಾಡ ಮಾಡಿ ಮಾವಿನಹಣ್ಣು ಉದುರಿಸುವ ಮಂತ್ರವಾದಿಯಲ್ಲ. ಮಠದ ಹೆಸರಲ್ಲಿ ಮನೆಕಟ್ಟುವವರಲ್ಲ. ಬರೀ ಮಾತುಗಳನ್ನಾಡಿ ಜೇಬು ತುಂಬಿಸಿಕೊಳ್ಳುವ ಸ್ವಾಮೀಜಿಯೂ ಅಲ್ಲ! ಅವರೊಬ್ಬ ಹಾಡುಗಾರ. ಹಾಡು ಹೇಳಿ ಸಂತೋಷ ಕೊಡುವವ. ವಾದ್ಯ ನುಡಿಸಿ ಮನಸ್ಸುಗಳ ಮೇಲೆ ಬಣ್ಣ ಬಳಿಯುವವ. ಸಪ್ತ ಸ್ವರಗಳನ್ನು ದೇಹವಿಡೀ ತುಂಬಿಕೊಂಡಿರುವ ಸಂಗೀತ ಸಂಪನ್ನ.
ಅವರು ಗಣಪತಿ ಸಚ್ಚಿದಾನಂದ ಸ್ವಾಮೀಜಿ. ಚಾಮುಂಡಿ ಬೆಟ್ಟದ ತಪ್ಪಲಿನ ಪ್ರಕೃತಿ ಮಡಿಲಿನಲ್ಲಿ ಅರಳಿರುವ ಅವಧೂತ ದತ್ತ ಪೀಠದ ಸಂಸ್ಥಾಪಕರು. ಸ್ವತಃ ಸಂಗೀತಗಾರರು, ಸ್ವರ ಸಂಯೋಜಕರೂ ಆಗಿರುವ ಶ್ರೀಗಳು ತಮ್ಮ ಭಕ್ತಿ ಸಂಗೀತ ಮಾರ್ಗದ ಮೂಲಕ ವಿಶ್ವ ಪರ್ಯಟನೆ ಮಾಡಿದವರು. ತಮ್ಮ ಸಂಗೀತ ಚಿಕಿತ್ಸೆ ಮೂಲಕ ವಿಶ್ವ ಮಾನವ ಸಮಾಜದಲ್ಲಿ ಶಾಂತಿ ಮೂಡಿಸಲು ಹವಣಿಸುತ್ತಿರುವ ಯೋಗಿ ಶ್ರೀ ಸ್ವಾಮೀಜಿ.
ಸಚ್ಚಿದಾನಂದ ಶ್ರೀಗಳ ಸಂಗೀತ ಚಿಕಿತ್ಸೆ ಇಂದು ಜಗತ್ತಿನೆಲ್ಲೆಡೆ ಮನ್ನಣೆ ಪಡೆದಿದೆ. ಅವರ ಭಕ್ತಿ ಸಂಗೀತದಲ್ಲಿ ಮನಶ್ಯಾಸ್ತ್ರವಿದೆ. ಭವಿಷ್ಯವಿದೆ. ಪತಂಜಲಿ ಯೋಗಸೂತ್ರಗಳಿವೆ. ಸಪ್ತ ಸ್ವರಗಳ ಶುದ್ಧತೆಯಿಂದ ಹೊಮ್ಮಿ ಬರುವ ಮಾಧುರ್ಯವನ್ನು ಆಲಿಸುವ ಮನಸ್ಸುಗಳಲ್ಲಿ ಸಂತೋಷದ ಕಿಚ್ಚು ಹೊತ್ತಿಕೊಳ್ಳುತ್ತದೆ. ಅಲ್ಲೊಂದು ಶಕ್ತಿಯ ಸಂಚಾರವಾಗುತ್ತದೆ. ಕೇಳುಗನ ನಾಡಿಯಲ್ಲಿ ಶಕ್ತಿ ಚಲಿಸುತ್ತಾ ತಾನಾಗಿಯೇ ಆನಂದ ಉತ್ಪತ್ತಿಯಾಗುತ್ತದೆ. ಅದೇ ಚಿಕಿತ್ಸಕ ಗುಣ. ಅದೇ ಸಂಗೀತ ಚಿಕಿತ್ಸೆ.
ಸಂಗೀತ ಚಿಕಿತ್ಸೆಯನ್ನು ಬಲವಾಗಿ ನಂಬಿರುವ ಸಚ್ಚಿದಾನಂದ ಶ್ರೀಗಳು ತಮ್ಮ ಸಂಗೀತದ ಮೂಲಕ ಕೇಳುವ ಮನಸ್ಸುಗಳಲ್ಲಿ ರೋಮಾಂಚನ ಸೃಷ್ಟಿಸುತ್ತಾರೆ. ಆತ್ಮವನ್ನು ಉಲ್ಲಾಸಗೊಳಿಸುತ್ತಾರೆ. ಕಣ್ಣಂಚಿನಲ್ಲಿ ಬಾಷ್ಪ ಹರಿಸುತ್ತಾರೆ. ಆ ಅನುಭವ ಪಡೆಯಲು ಅವರ ಸಂಗೀತವನ್ನೇ ಕೇಳಬೇಕು.
ಮೈಸೂರು ಆಶ್ರಮದ ಆವರಣದಲ್ಲಿರುವ ನಾದಮಂಟಪ ಅದ್ಬುತವನ್ನು ಹೊತ್ತು ನಿಂತಿದೆ. ಮಂಟಪಕ್ಕೆ 72 ಕಂಭಗಳು ಆಸರೆಯಾಗಿವೆ. ಆ 72 ಕಂಭಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗಗಳನ್ನು ಪ್ರತಿನಿಧಿಸುತ್ತವೆ. ಅಲ್ಲಿ ಹತ್ತು ನಿಮಿಷ ಕೂತರೆ ಸಾಕು ಮನಸ್ಸು ನಿರ್ಮಲವಾಗುತ್ತದೆ. ಅಲ್ಲಿ ಬೀಸುವ ಗಾಳಿ ಸರಿಗಮಗಳನ್ನು ಹೊತ್ತು ಸಾಗುತ್ತದೆ. ಸುಂದರ ಪರಿಸರದೊಳಗಿನ ಪ್ರತಿ ಗಿಡವೂ ಕೃತಿ ಗೀತೆ ಕೀರ್ತನೆಗಳನ್ನು ಗುನುಗುನಿಸುತ್ತವೆ. ಅಲ್ಲಿ ಹೋದರೆ ಮೌನದ ಜೊತೆ ಮಾತನಾಡಬಹುದು. ನಿಶಬ್ದದ ಜೊತೆ ಆಲಾಪ ಮಾಡಬಹುದು. ಆ ಅನುಭವ ಪಡೆಯಲು ಅಲ್ಲಿಗೇ ಹೋಗಬೇಕು.
ಪ್ರತಿಯೊಂದು ಹಬ್ಬ ಹರಿದಿನಗಳಲ್ಲೂ ಸಚ್ಚಿದಾನಂದ ಆಶ್ರಮ ಸಂಗೀತ ಪ್ರೇಮಿಗಳಿಂದ ತುಂಬಿರುತ್ತದೆ. ಅಲ್ಲಿಯ ವಾತಾವರಣ ಯುವ ಮನಸ್ಸುಗಳಿಗೆ ಸ್ಪೂರ್ತಿ ತುಂಬುತ್ತದೆ. ಅಲ್ಲದೆ ಸಂಗೀತಗಾರರಿಗೆ ಆಶ್ರಮ ವೇದಿಕೆಯೂ ಆಗಿದೆ. ವಿಶೇಷ ಸಂದರ್ಭಗಳಲ್ಲಿ ಸಂಗೀತಗಾರರನ್ನು ಆಹ್ವಾನಿಸಿ ಕಛೇರಿ ಕೊಡಿಸಲಾಗುತ್ತದೆ. ಸಂಗೀತಗಾರರನ್ನು ಗುರುತಿಸಿ ಗೌರವಿಸುವ ಪರಂಪರೆಯನ್ನೂ ಶ್ರೀಗಳು ಮಾಡುತ್ತಾ ಬಂದಿದ್ದಾರೆ. ಶಿವರಾತ್ರಿ ಹಬ್ಬವನ್ನು ವಿೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಅಂದು ನಡೆಸುವ ಹೋಮ ಬಹಳ ಮಹತ್ವ ಪಡೆದಿದೆ.
ಶ್ರೀಗಳಿಗೆ ಒಂದು ಕಗ್ಗಲ್ಲನ್ನೂ ಕೊಟ್ಟರು ಸ್ವರ ಹುಟ್ಟಿಸುತ್ತಾರೆ. ಅವರು ಬಹುವಾದ್ಯ ಪಂಡಿತರು. ಶ್ರೀಗಳ ಆಶೀರ್ವಚನಗಳೂ ಕೂಡ ಬಹಳ ಮನ್ನಣೆ ಪಡೆದಿವೆ. ಧಾರ್ಮಿಕ ದೂರರ್ಶನ ವಾಹಿನಿಗಳಲ್ಲಿ ಅವರ ಉಪನ್ಯಾಸಗಳು ಪ್ರಸಾರಗೊಳ್ಳುತ್ತವೆ. ಶ್ರೀಗಳೇ ಹಾಡಿರುವ ಸಾವಿರಾರು ಸಿಡಿ, ಕ್ಸಾಸೆಟ್ಗಳು ಹೊರಬಂದಿವೆ.
ಅವತಾರ ಮೂರ್ತಿ ದತ್ತಾತ್ರೇಯರ ಹಲವು ಪೀಠಗಳಲ್ಲಿ ಸಚ್ಚಿದಾನಂದ ಶ್ರೀ ಸ್ಥಾಪನೆಯ ಅವಧೂತ ಪೀಠವೂ ಒಂದು. ಅವರು ದೇಶಾದ್ಯಂತ ಹಲವು ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಶ್ರೀಗಳ ಮೂಲ ಮೈಸೂರಾದರೂ ಅವರ ಸಂಗೀತ ಅಭಿಯಾನ ವಿಶ್ವದಾದ್ಯಂತ ನಡೆಯುತ್ತಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಆಶ್ರಮದ ಶಾಖೆಗಳಿವೆ. ವಿದೇಶಗಳಲ್ಲೂ ಇವೆ.
1966ರಲ್ಲಿ ಒಂದು ಸಣ್ಣ ಗುಡಿಸಲಿನಿಂದ ಆರಂಭವಾದ ಶ್ರೀಗಳ ಆಶ್ರಮ ಇಂದು ೃಹದಾಕಾರವಾಗಿ ಬೆಳೆದಿದೆ. ಸಂಗೀತದ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆಯ ಮಂತ್ರವನ್ನು ಜಗತ್ತಿಗೆ ತಿಳಿಸಿದೆ.
No comments:
Post a Comment