ಅಚ್ಯುತರಾವ್ ನಾಡಿಯಲ್ಲಿ ಗಾಂಧಿ ಮಿಡಿತ
1935ರಲ್ಲಿ ಮಹಾತ್ಮ ಗಾಂಧಿ ಮೈಸೂರಿಗೆ ಭೇಟಿ ನೀಡಿದ್ದಾಗ ಬಿ.ಎಸ್. ಅಚ್ಯುತ ರಾವ್ ಆರೇಳು ವರ್ಷದ ಹುಡುಗ. ಅವರ ತಾಯಿ ತನ್ನ ಮುದ್ದು ಮಗನಿಗೆ ಬಿಳಿಯ ಜುಬ್ಬಾ ಪೈಜಾಮ್ ಹಾಕಿಸಿ ಬಾಪು ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಬಾಪುವಿನ ಆಶೀರ್ವಾದಕ್ಕಾಗಿ ಜನಸಾಗರದೊಳಗೆ ನುಸುಳಿ ಮಹಾತ್ಮನ ಕಾರಿನ ಕಿಟಕಿಯೊಳಗೆ ಮಗನ ತಲೆಯನ್ನು ತೂರಿದರು. ಬಾಪು ನಗುತ್ತಾ ಬಾಲಕನ ತಲೆ ನೇವರಿಸಿದರು....!
ಸದ್ಯ ಅಚ್ಯುತ ರಾವ್ ಅವರಿಗೆ 80 ವರ್ಷ ವಯಸ್ಸು. ಏಳು ದಶಕಗಳ ಹಿಂದಿನ ಈ ಘಳಿಗೆಯನ್ನು ತಮ್ಮ ಸ್ಮೃತಿಗೆ ತಂದುಕೊಂಡಾಗ ಅಚ್ಯುತರಾವ್ ಮತ್ತೆ ಮಗುವಾಗಿಬಿಡುತ್ತಾರೆ. ಮೈಯಲ್ಲಿ ವಿದ್ಯುತ್ ಸಂಚಲನವಾಗುತ್ತದೆ. ರೋಮಾಂಚನಗೊಳ್ಳುತ್ತಾರೆ. ಅದು ಸ್ವರ್ಗೀಯ ಕ್ಷಣ. ಆ ಕ್ಷಣದಿಂದ ನನ್ನ ಬದುಕು ಬದಲಾಯಿತು ಎಂದು ಪುಳಕಗೊಳ್ಳುತ್ತಾರೆ! ಗಾಂಧಿಜೀ ಸ್ಪರ್ಶದ ಆ ಕ್ಷಣದಿಂದ ಅಚ್ಯುತ ರಾವ್ ಅವರ ನರ ನಾಡಿಗಳಲ್ಲಿ ಗಾಂಧಿ, ಗಾಂಧೀಯತೆ ಉಳಿದುಕೊಂಡು ಬಂದಿದೆ.
ನಮ್ಮ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಿ.ಎಸ್. ಅಚ್ಯುತರಾವ್ ಕೂಡ ಒಬ್ಬರು. ಸ್ವಾತಂತ್ರ ಭಾರತಕ್ಕಾಗಿ ಜೈಲುವಾಸ ಅನುಭವಿಸಿರುವ ಅವರು ನಮ್ಮ ಸಮಾಜದ ಹೆಮ್ಮೆಯ ಸಂಪತ್ತು. ಎಂಭತ್ತು ತುಂಬಿರುವ ಅವರು ಇವತ್ತೂ ಪಾದರಸ. ಸರ್ಕಾರಿ ನೌಕರಿಯಿಂದ ನಿವೃತ್ತರಾದ ಮೇಲೆ ಉಪನ್ಯಾಸ ವೃತ್ತಿ ಸ್ವೀಕರಿಸಿದ ಅವರು ವಿದ್ಯಾರ್ಥಿ ಕೋಟಿಯನ್ನೇ ಹೊಂದಿದ್ದಾರೆ. ನಾಡು ನುಡಿಯ ಬಗ್ಗೆ ಅವರು ಹೊಂದಿರುವ ಪ್ರೀತಿ ಸದಾ ಸ್ಮರಣೀಯ. ಐತಿಹಾಸಿಕ ಶಾರದಾವಿಲಾಸ ವಿದ್ಯಾಸಂಸ್ಥೆಯ ಜೊತೆ ಭಾವನಾತ್ಮಕ ಸಂಬಂಧ ಹೊಂದಿರುವ ಅವರು ಆ ಸಂಸ್ಥೆಯ ಹೆಮ್ಮೆಯಾಗಿದ್ದಾರೆ.
1947, ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಮೈಸೂರು ರಾಜ್ಯವನ್ನು ಸ್ವಾತಂತ್ರ್ಯ ಭಾರತಕ್ಕೆ ಒಪ್ಪಿಸಲು ಜಯಚಾಮರಾಜೇಂದ್ರ ಒಡೆಯರು ನಿರಾಕರಿಸಿದರು. ಒಡೆಯರ ನಿರ್ಧಾರದ ವಿರುದ್ಧ ಹೋರಾಟ ಆರಂಭವಾಯಿತು. ಮೈಸೂರು ಚಲೋ ಚಳವಳಿ ನಡೆಯಿತು. ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರವಾಯಿತು. ಆ ಘಟನೆಯಲ್ಲಿ ಒಬ್ಬ ಶಾಲಾ ಬಾಲಕ ಬಲಿಯಾದ. ಆತನ ಹೆಸರು ರಾಮಸ್ವಾಮಿ. ಆತ ಜೀವ ತೆತ್ತ ಜಾಗವನ್ನು ಇಂದಿಗೂ ರಾಮಸ್ವಾಮಿ ವೃತ್ತ ಎಂದೇ ಕರೆಯಲಾಗುತ್ತದೆ.
ಈ ಹೋರಾಟದಲ್ಲಿ ಅಚ್ಯತ ರಾವ್ ಕೂಡ ಭಾಗವಹಿಸಿದ್ದರು. ಜೊತೆಗೆ ಅವರ ಸಹೋದರಿಯರಾದ ಮಾಲತಿ, ಸುಮಿತ್ರ ಹಾಗೂ ಇನ್ನಿಬ್ಬರು ಸೋದರ ಸಂಬಂಧಿಕರೂ ಕೂಡ ಪಾಲ್ಗೊಂಡಿದ್ದರು. ದೇಶಪ್ರೇಮ ಇಡೀ ಕುಟುಂಬದಲ್ಲಿತ್ತು.
ಮೈಸೂರು ಚಳವಳಿ ಹೋರಾಟದಲ್ಲಿ ಬಂಧನಕ್ಕೊಳಗಾದ 1200 ಮಂದಿ ಹೋರಾಟಗಾರರಲ್ಲಿ ಅಚ್ಯುತರಾವ್ ಅವರೂ ಇದ್ದರು. ಏಳು ದಿನ ಕಾರಾಗೃಹ ವಾಸ ಅನುಭವಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ಉತ್ಸಾಹದ ಚಿಲುಮೆಯಾಗಿದ್ದ ಅವರು ನಾಡಿಗಾಗಿ ಅರ್ಪಣೆಯ ಮನೋಭಾವ ರಕ್ತದಲೇ ಇತ್ತು. ಈ ಘಟನೆಯಿಂದ ದಿಗ್ಭ್ರಮೆಗೊಂಡ ಒಡೆಯರು ಭಾರತಕ್ಕೆ ಸಾಮ್ರಾಜ್ಯ ನೀಡಲು ನೀಡಲು ಒಪ್ಪಿದರು. ಕೆ.ಸಿ. ರೆಡ್ಡಿ ಮುಖ್ಯಮಂತ್ರಿಯಾದರು. ಅದೆಲ್ಲಾ ಇತಿಹಾಸ.
ಅಚ್ಯುತರಾವ್ ರೆಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದವರು. ಅವರು ಕೆಲಸ ಮಾಡಿದ ಜಾಗದಲ್ಲೆಲ್ಲಾ ತಮ್ಮ ಪ್ರತಿಭೆಯ ಪರಿಮಳ ಬೀರಿದ್ದಾರೆ. 1952ರಲ್ಲಿ ಹುಬ್ಬಳ್ಳಿಯಲ್ಲಿ ಇಲಾಖೆಗೆ ಸೇರಿದ ಅವರು 1953ರಲ್ಲಿ ಮದ್ರಾಸ್ಗೆ ವರ್ಗಾವಣೆಗೊಂಡರು. ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ ಹೊಂದಿರುವ ಅಚ್ಯುತರಾವ್ ಮದ್ರಾಸ್ನಲ್ಲಿ ಕನ್ನಡ ಸಂಘ ಕಟ್ಟಿದರು. ಸಂಘ ಇವರಿದ್ದ ಕೊಠಡಿಯಿಂದಲೇ ಆರಂಭವಾಯಿತು.
ನಂತರ ಆಂದ್ರಪ್ರದೇಶದ ಗುತ್ತಿ ಎಂಬಲ್ಲಿಗೆ ವರ್ಗಾವಣೆಗೊಂಡರು. ಈ ನಡುವೆ ಬೆಂಗಳೂರಿನ ಯಲಹಂಕ ಘಟಕದಲ್ಲೂ ಸೇವೆ ಸಲ್ಲಿಸಿದರು. ಮತ್ತೆ ಮದ್ರಾಸ್ ವರ್ಗಾವಣೆಗೊಂಡರು. ಅಷ್ಟೊತ್ತಿಗಾಗಲೇ ತಾವು ಕಟ್ಟಿ ಬೆಳೆಸಿದ್ದ ಕನ್ನಡ ಸಂಘ ೃಹದಾಕಾರವಾಗಿ ಬೆಳೆದಿತ್ತು. ಕನ್ನಡ ಸಂಘದಿಂದ ಕೇಂದ್ರಿಯ ಶಾಲೆ ಆರಂಭಗೊಂಡಿತ್ತು. ಕನ್ನಡ ಸಂಘ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಚ್ಯುತ ರಾವ್ ಸಂಸ್ಥಾಪಕ ಸದಸ್ಯರಾಗಿ ಅಪಾರ ಮನ್ನಣೆ ಗಳಿಸಿದರು.
ರೈಲ್ವೆ ಇಲಾಖೆಯಿಂದ ನಿವೃತ್ತರಾದ ಮೇಲೆ ಅವರ ವೃತ್ತಿ ಬದುಕು ಮುಗಿಯಲಿಲ್ಲ. ಬಹುಶಃ ಆಗಲೇ ಆರಂಭವಾಯಿತು ಎನ್ನಬಹುದು. ಮೈಸೂರಿಗೆ ಹಿಂದುರಿಗಿ ಬಂದ ಮೇಲೆ ಆ ಇಳಿ ವಯಸ್ಸಿನಲ್ಲಿ ಇಂಗ್ಲಿಷ್ ಮತ್ತು ಸಮಾಜ ಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಶಾರದ ವಿಲಾಸ ವಿದ್ಯಾಸಂಸ್ಥೆ ಕೈ ಬೀಸಿ ಕರೆಯಿತು. ವಿಜ್ಞಾನ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ನೇಮಕಗೊಂಡರು. ಬಿಇಡಿ ಕಾಲೇಜಿನಲ್ಲೂ ಕೆಲಸ ಮಾಡಿದರು. ಸದ್ಯಕ್ಕೆ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಅಚ್ಯುತರಾವ್ ದಣಿವಾಗದ ಪ್ರಾದ್ಯಾಪಕ. ಸದಾ ವಿದ್ಯಾರ್ಥಿಗಳ ಜೊತೆ ಒಂದಲ್ಲಾ ಒಂದು ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡು ವಿದಾರ್ಥಿಯೇ ಆಗಿಬಿಡುತ್ತಾರೆ. ಶಾರದಾ ವಿಲಾಸ ವಿದ್ಯಾಸಂಸ್ಥೆರ ಎಲ್ಲಾ ಕಾರ್ಯಕ್ರಮಗಳಲ್ಲಿ ಅಚ್ಯುತರಾವ್ ಭಾಗವಹಿಸುತ್ತಾರೆ. ಸ್ವತಂತ್ರ ಸಂಗ್ರಾಮದ ಹಲವು ಘಟನೆಗಳ ಕಿರುನಾಟಕಗಳನ್ನು ರಚಿಸಿ ವಿದ್ಯಾರ್ಥಿಗಳಿಗೆ ನಿರ್ದೇಶಿಸಿದ್ದಾರೆ.
ಅಚ್ಯುತರಾವ್ ಅವರು ಬರವಣಿಗೆಯಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಕವನ, ಕಿರುನಾಟಕ, ಭಾವಗೀತೆಗಳನ್ನು ರಚಿಸಿದ್ದಾರೆ. ಅವರು ಹಲವು ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಕಾವ್ಯಶ್ರೀ ಪ್ರಶಸ್ತಿ ಅವರ ಮುಡಿಗೇರಿದೆ. ಕಳೆದ ಬಾರಿಯ ಸ್ವತಂತ್ರ್ಯೋತ್ಸವದಲ್ಲಿ ಕರ್ನಾಟಕ ಸರ್ಕಾರ ಸನ್ಮಾನಿಸಿದೆ. ಹಲವು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.
ಅಚ್ಯುತರಾವ್ ನಿಜಕ್ಕೂ ಅಸಮಾನ್ಯ ಸಾಧಕರು. ಅವರು ನಡೆದು ಬಂದ ಹಾದಿಯಲ್ಲಿ ಅಪಾರ ಮಹತ್ವಪೂರ್ಣ ಮೈಲುಗಲ್ಲುಗಳಿವೆ. ಅವು ಕಿರಿಯರಿಗೆ ಸ್ಪೂರ್ತಿಯಾಗಿವೆ.. ಙ
No comments:
Post a Comment