Wednesday, June 10, 2009


ರಂಗ ಜಂಗಮ ಚಿದಂಬರ ರಾವ್‌ ಜಂಬೆ



ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದ ಬೆರಳೆಣಿಕೆಯಷ್ಟು ಕನ್ನಡಿಗರಲ್ಲಿ ಎ.ಜಿ. ಚಿದಂಬರ ರಾವ್‌ ಜಂಬೆ ಪ್ರಮುಖರು. ಪದವಿ ಪಡೆದ ನಂತರ ಸುಬ್ಬಣ್ಣ ಅವರ ಜತೆಗೂಡಿ ಹೆಗ್ಗೋಡಿನ ನೀಲಕಂಠ ನಾಟಕ ಸಂಘ(ನೀನಾಸಂ)ದಲ್ಲಿ ಹಲವು ವರ್ಷಗಳ ಕಾಲ ಪ್ರಾಂಶುಪಾಲರಾಗಿ ದುಡಿದು ಈಗ ರಂಗಭೀಷ್ಮ ಬಿ.ವಿ. ಕಾರಂತರು ಕಟ್ಟಿದ ದಕ್ಷಿಣ ಭಾರತದ ಏಕೈಕ ಸರ್ಕಾರಿ ನಾಟಕ ರೆಪರ್ಟರಿ ರಂಗಾಯಣದ ನಿರ್ದೇಶನ ಸಾರಥ್ಯ ವಹಿಸಿದ್ದಾರೆ.
ಒಂದು ಅಪವಾದವಿದೆ, ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದವರು ಬಾಲಿವುಡ್‌ ಕಡೆ ಹಾರುತ್ತಾರೆ ಎಂದು. ಆದರೆ ಚಿದಂಬರ ರಾವ್‌ ಜಂಬೆ ಈ ಅಪವಾದಕ್ಕೆ ಒಂದು ಅಪವಾದ
ಆದರೂ ಅವರ ರಂಗ ಕಾಯಕ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ತಮ್ಮ ಸಂಪರ್ಕ ಜಾಲವನ್ನು ರಾಷ್ಟ್ರಾದ್ಯಂತ ಹಬ್ಬಿಸಿದ್ದು, ಕನ್ನಡ ರಂಗ ಸೊಗಡನ್ನು ಬೇರೆ ಬೇರೆ ಜಾಗ, ಸಂಸ್ಕೃತಿಗಳೊಂದಿಗೆ ಬೆರಸಿ ಭಾಷಾ ಸಾಮರಸ್ಯ ಕೈಂಕರ್ಯದಲ್ಲಿ ತೊಡಗಿದ್ದಾರೆ. ಈಗ ತಾನೆ ರಂಗಾಯಣ ಅಸ್ಸಾಂ ಪ್ರವಾಸ ಮುಗಿಸಿ ಬಂದಿದೆ, ಈ ಭಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಕೃಷಿ ಉತ್ಸವವಾಗಿ ಆಚರಿಸಿದ್ದುದು ಜಂಬೆಯವರ ಒಂದು ವಿಶೇಷ.
ರಂಗಾಯಣ ಸಾಗುತ್ತಿರುವ ಹಾದಿ, ರಂಗಭೂಮಿಯ ಹಲವು ಅಭಿಲಾಷೆಗಳನ್ನು ಜಂಬೆ ಇಲ್ಲಿ ಉದಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.

* ನೂತನ ವರ್ಷದಲ್ಲಿ ರಂಗಾಯಣದ ನೂತನ ಪ್ರಯೋಗಗಳೇನು?
ನನ್ನ ಪ್ರಕಾರ ಈ ಜಗತ್ತಿನಲ್ಲಿ ಹೊಸತನದ ಹುಡುಕಾಟಕ್ಕೆ ಒಂದೇ ಒಂದು ವೇದಿಕೆ ರಂಗಭೂಮಿ. ಪ್ರತಿದಿನವೂ ಹೊಸ ಹುಡುಕಾಟಕ್ಕಾಗಿ ತುಡಿಯುತ್ತೇವೆ. ಪ್ರತಿ ಮುಂಜಾನೆಯೂ ಹೊಸ ದಿನ, ಹೊಸ ವರ್ಷ. ಅದಕ್ಕೆ ಜನವರಿ ಮಾತ್ರ ಹೊಸತಲ್ಲ. ರಂಗಾಯಣ ಈಗ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ಧಾರವಾಡದಲ್ಲಿ ರಂಗಾಯಣದ ಶಾಖೆ ಇಷ್ಟರಲ್ಲೇ ಬರಲಿದೆ. ಧಾರವಾಡದ ರಾಜಗುರು ರಂಗಮಂದಿರದಲ್ಲಿ ರಂಗಾಯಣದ ಚಟುವಟಿಕೆಗಳು ಪ್ರಾರಂಭವಾಗಲಿವೆ. ಇದು ರಂಗಾಯಣಕ್ಕೆ ಮತ್ತೊಂದು ಅಂಗವಾಗಿ ಸೇರ್ಪಡೆಯಾಗಲಿದ್ದು, ಸದ್ಯಕ್ಕೆ ಇದು ಹೊಸ ಸುದ್ದಿ.

* ಧಾರವಾಡದ ಶಾಖೆ ಹೊಸ ಅಂಗ ಎಂದಿರಿ, ಇತರ ಅಂಗಗಳ ಬಗ್ಗೆ ಹೇಳಿ?
ರಂಗಾಯಣ ಬರೀ ನಾಟಕ ಮಾತ್ರ ಮಾಡುವುದಿಲ್ಲ, ರಂಗಭೂಮಿಯ ವಿವಿಧ ಅಯಾಮಗಳಲ್ಲಿಯೂ ಕೃಷಿ ಮಾಡಿದೆ, ಶಾಲಾ ಮಕ್ಕಳಿಗೆ ರಂಗಭೂಮಿ ಶಿಕ್ಷಣ ನೀಡುವ ಉದ್ದೇಶದಿಂದ ಪ್ರತಿ ವರ್ಷ ಚಿಣ್ಣರ ಮೇಳ ನಡೆಯುತ್ತದೆ. ರಂಗಶಿಕ್ಷಣ ನೀಡಲು ಭಾರತೀಯ ರಂಗ ಶಿಕ್ಷಣ ಕೇಂದ್ರವಿದೆ. ರಂಗಭೂಮಿಯ ಬಗ್ಗೆ ಸಂಶೋಧನೆ ಮಾಡಲು ಶ್ರೀರಂಗ ಸಂಶೋಧನಾ ಕೇಂದ್ರವಿದೆ.
ಮಕ್ಕಳ ರಂಗಭೂಮಿ ನಿರ್ಮಾಣದಲ್ಲಿ ರಂಗಾಯಣ ಬಲುದೂರ ಸಾಗಿದ್ದು, ಸ್ವೀಡನ್ನಿನ ಸಹಯೋಗದೊಂದಿಗೆ ಸೀಡಾ ಐಟಿಐ ಯೋಜನೆಯ ಅಡಿಯಲ್ಲಿ 20 ಮಂದಿ ಕಲಾವಿದರನ್ನು ನೇಮಕ ಮಾಡಿಕೊಂಡು ಮಕ್ಕಳ ನಾಟಕಗಳನ್ನು ದೊಡ್ಡವರಿಂದ ಮಾಡಿಸಿ ಮಕ್ಕಳ ಮುಂದೆ ಪ್ರದರ್ಶಿಸಲಾಗುತ್ತಿದೆ.

* ಶಿಕ್ಷಣದಲ್ಲಿ ರಂಗಭೂಮಿ ಅವಶ್ಯಕತೆ ಇದಿಯೇ?
ಮಲ್ಲಿಗೆಯ ಮೊಗ್ಗು ಹೂವಾಗಿ ಅರಳುವ ಸೂಕ್ಷ್ಮತೆಯನ್ನು ಮಕ್ಕಳು ಬೆಳೆಯುವ ಸಂದರ್ಭದಲ್ಲೂ ಕಾಣಬಹುದು. ಶಿಕ್ಷಣ ಮಕ್ಕಳಿಗೆ ಚಿಂತನೆಯ ವಸ್ತುವಾಗಿದೆ. ಆದರೆ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸುವುದು ಸವಾಲಿನ ಸಂಗತಿ, ರಂಗಭೂಮಿ ಈ ಕೆಲಸ ಮಾಡುತ್ತದೆ, ಆದ್ದರಿಂದ ಶಿಕ್ಷಣದಲ್ಲಿ ರಂಗಕಲೆಯ ಅಳವಡಿಕೆ ಅವಶ್ಯಕ. ರಂಗಾಯಣ ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿವರ್ಷ ಶಾಲಾ ಶಿಕ್ಷಕರಿಗೆ ತರಬೇತಿ ನೀಡುತ್ತಾ ಬಂದಿದೆ.

* ರಾಷ್ಟ್ರೀಯ ನಾಟಕ ಶಾಲೆ ಹೋರಾಟದಲ್ಲಿ ತಮ್ಮ ನಿಲುವು?
ನಾನು ರಾಷ್ಟ್ರೀಯ ನಾಟಕ ಶಾಲೆಯನ್ನು ಹತ್ತಿರದಿಂದ ಕಂಡಿದ್ದೇನೆ. ಅದರ ಸ್ಥಾಪನೆಯ ಉದ್ದೇಶವೇ ಸ್ಪಷ್ಟವಾಗಿಲ್ಲ, ಸರ್ಕಾರ ನೀಡುವ ಕೋಟ್ಯಾಂತರ ರೂ. ಹಣ ಒಂದೇ ಕಡೆ ಕೇಂದ್ರೀಕೃತವಾಗಿದೆ. ಕೇವಲ ಭಾಷೆಯ ಕಾರಣವೊಡ್ಡಿ ಹಿಂದಿ ತಿಳಿಯದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಹಾಗೆ ನೋಡಿದರೆ ಇಲ್ಲಿ ಪದವಿ ಪಡೆದವರು ರಂಗಭೂಮಿಯಲ್ಲಿ ಎಷ್ಟುಜನ ಕ್ರಿಯಾಶೀಲರಾಗಿದ್ದಾರೆ? ರಾಷ್ಟ್ರೀಯ ನಾಟಕ ಶಾಲೆ ರಾಷ್ಟ್ರಕ್ಕೆ ಒಂದಲ್ಲ, ಅದು ರಾಜ್ಯಗಳಿಗೆಲ್ಲಾ ಹಂಚಿಕೆಯಾಗಬೇಕು.

* ಮುಂದಿನ ದಿನಗಳಲ್ಲಿ ರಂಗಭೂಮಿಯ ಮುಂದೆ ಯಾವ ಸವಾಲಿದೆ?.
ಪ್ರಪಂಚ ನಾಗಾಲೋಟದಲ್ಲಿ ಓಡುತ್ತಿದೆ. ಮಾಹಿತಿ ನಮ್ಮನ್ನು ಆಳುತ್ತಿದೆ. ತಂತ್ರಜ್ಞಾನದ ತೀವ್ರ ಬೆಳವಣಿಗೆಯಲ್ಲಿ ಪ್ರಪಂಚದ ಕಲ್ಪನೆ ಕಿರಿದಾಗಿದೆ. ಜಾಗತೀಕರಣದ ನೀತಿಗೆ ದೇಶ ತನ್ನೆಲ್ಲಾ ಕಿಟಕಿ ಬಾಗಿಲುಗಳನ್ನು ತೆರೆದುಕೊಂಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಬದುಕಿನೊಟ್ಟಿಗೆ ಬೆಳೆದು ಬಂದ `ದೇಸಿ' ಸಂಸ್ಕೃತಿ ರಕ್ಷಣೆಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕಿದೆ.

* ಸಂಸಾರದ ನಿರ್ದೇಶಕರಾಗಿ ನೀವು?
ನಾನು ರಂಗಭೂಮಿಗೆ ಮಾತ್ರ ನಿರ್ದೇಶಕ. ನನ್ನ ಸಂಸಾರಕ್ಕೆ ನನ್ನ ಹೆಂಡತಿ ಭಾರತಿ ನಿರ್ದೇಶಕಿ. ಒಬ್ಬ ಮಗ ಬಿ.ಕಾಂ ಕಲಿಯುತ್ತಿದ್ದಾನೆ, ಅವನಿಗೆ ಇದೇ ಮಾಡು, ಅದೇ ಮಾಡು ಎಂಬ ಒತ್ತಡವಿಲ್ಲ, ಸಂಪೂರ್ಣ ಸ್ವತಂತ್ರ್ಯ ನೀಡಿದ್ದೇನೆ.

* ನಿವೃತ್ತಿಯ ಬಗ್ಗೆ ಯೋಚಿಸಿದ್ದೀರಾ?
ರಂಗಾಯಣದಿಂದ ನಿವೃತ್ತಿಯಿದೆ, ಆದರೆ ರಂಗಭೂಮಿಯಿಂದ ನಿವೃತ್ತಿ ಇಲ್ಲ. ಮುಂದೆ ನನ್ನ ಬಹುದಿನಗಳ ಕನಸಾಗಿರುವ ನಮ್ಮ ತೆಂಗಿನ ತೋಟ ನೋಡಿಕೊಂಡು ಮನೆಯಲ್ಲಿ ಕೆಲ ಕಾಲ ಕಳೆಯಬೇಕು ಅಂದುಕೊಂಡಿದ್ದೇನೆ.

No comments:

Post a Comment