Saturday, June 20, 2009

ಶ್ರೀಕಂಠ ಗುಂಡಪ್ಪ


ಸಾಂಸ್ಕೃತಿಕ ಸಂಪತ್ತು

ಅವರು ಮೈಸೂರು ಸಾಂಸ್ಕೃತಿಕ ಲೋಕದಲ್ಲಿ ಅಪೂರ್ವ ಪ್ರೀತಿಗೆ ಪಾತ್ರರಾದವರು. ತಮ್ಮ ನಗುಮೊಗದ ಮೊನಚು ಮಾತುಗಳಿಂದ ಸೆಳೆತ ಸೃಷ್ಟಿಸುವವರು. ಆಪ್ತ ಎನ್ನಿಸುವ ನಡವಳಿಕೆಯಿಂದ ಘನತೆ ಗಳಿಸಿಕೊಂಡವರು. ನಲವತ್ತು ವರ್ಷಗಳ ರಂಗಭೂಮಿ ಸೇವೆಯಿಂದ ನಾಡಿನೆಲ್ಲೆಡೆ ಪ್ರಸಿದ್ಧಿ ಪಡೆದವರು.
ಅವರು ಶ್ರೀಕಂಠ ಗುಂಡಪ್ಪ. ರಂಗಕರ್ಮಿ, ಲೇಖಕ, ವಿಮರ್ಷಕ, ಅನುವಾದಕ. ಅಪರೂಪದ ರಂಗಭೂಮಿ ಭಿತ್ತಿಪತ್ರ, ಟಿಕೆಟ್ಸ್‌, ವೃತ್ತಪತ್ರಿಕೆಗಳನ್ನೊಳಗೊಂಡ ೃಹತ್‌ ದಾಖಲೆಯನ್ನೇ ಸಂಗ್ರಹಿಸಿ ದಾಖಲೆ ನಿರ್ಮಿಸಿದವರು. ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಪ್ರತೀವರ್ಷ ಕನ್ನಡಕ್ಕೆ ಅನುವಾದಿಸಿ ಸಂದೇಶದ ಸಾರವನ್ನು ಕನ್ನಡ ರಂಗಭೂಮಿಗೆ ಕೊಡುವವರು. ಆ ಅಂತಾರಾಷ್ಟ್ರೀಯ ಸಂದೇಶ ಕನ್ನಡವಲ್ಲದೆ ದಕ್ಷಿಣ ಭಾರತದ ಯಾವುದೇ ಭಾಷೆಗೂ ಅನುವಾದವಾಗುವುದಿಲ್ಲ. ಈ ಮಹತ್ಕಾರ್ಯದ ಖ್ಯಾತಿ ಶ್ರೀಕಂಠ ಗುಂಡಪ್ಪ ಅವರದು.
ಶ್ರೀಕಂಠ ಗುಂಡಪ್ಪ ಮೈಸೂರು ಸೀಮೆಯಲ್ಲಿ ಬಹಳ ಚಿರಪರಿಚಿತರು. ತಾವೇ ಕಟ್ಟಿರುವ `ಕಲಾಪ್ರಿಯ' ರಂಗ ಸಂಘಟನೆಯ ಮೂಲಕ ಕಳೆದ ನಾಲ್ಕು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದಾರೆ. ಅವರು ತಮ್ಮ ಸಂಸ್ಥೆಗೆ ಮಾತ್ರ ಸೀಮಿತವಾದವರಲ್ಲ. ಮೈಸೂರಿನ ಎಲ್ಲಾ ಸಾಂಸ್ಕೃತಿಕ ಸಂಘಟನೆಗಳಲ್ಲೂ ಅವಿರತವಾಗಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕ್ರೀಯಾಶೀಲತೆಯ ಅಭಿವ್ಯಕ್ತಕ್ಕೆ ರಂಗಭೂಮಿಯನ್ನು ವೇದಿಕೆ ಮಾಡಿಕೊಂಡ ಗುಂಡಪ್ಪ ಎಲ್ಲೆಲ್ಲೂ ಸಲ್ಲುತ್ತಾರೆ. ಅಭಿನಯಿಸಬಲ್ಲರು, ನಿರ್ದೇಶಿಸಬಲ್ಲರು. ರಂಗಮಂಚವನ್ನು ಸಜ್ಜುಗೊಳಿಸಬಲ್ಲರು. ರಂಗಕೃತಿ ರಚಿಸಬಲ್ಲರು.....
ಮೈಸೂರಿನಲ್ಲಿ ಏನೇ ಸಾಂಸ್ಕೃತಿಕ ಚಟುವಟಿಕೆಗಳು ನಡೆದರೂ ಅದರೊಂದಿಗೆ ಶ್ರೀಕಂಠ ಗುಂಡಪ್ಪ ಅವರ ಒಡನಾಟ ಇದ್ದೇ ಇರುತ್ತದೆ. ಕಾರ್ಯಕ್ರಮಗಳ ಪೂರ್ವಭಾವಿಯಾಗಿ ಅದರ ಸ್ಪಷ್ಟ ಚಿತ್ರಣವನ್ನು ಪತ್ರಿಕೆಗಳ ಮೂಲಕ ಕಲಾಪ್ರೇಮಿಗಳಿಗೆ ಉಣ ಬಡಿಸುತ್ತಾರೆ. ಒಂದು ರೀತಿಯ ಕಲಾ ಮಾರ್ಗದರ್ಶನದಂತೆ. ಶ್ರೀಕಂಠ ಗುಂಡಪ್ಪ ಅವರ ಲೇಖನ ನೋಡಿಕೊಂಡೇ ಕಾರ್ಯಕ್ರಮಕ್ಕೆ ಹೋಗುವ ಕಲಾಪ್ರೇಮಿಗಳು ಮೈಸೂರಿನಲ್ಲಿದ್ದಾರೆ.
ಗುಂಡಪ್ಪ ಅವರು ವಿಮರ್ಷಕರಾದರೂ ಕೂಡ ಚಟುವಟಿಕೆಗಳನ್ನು ವಿಮರ್ಷೆಯ ದೃಷ್ಟಿಯಿಂದ ಮಾತ್ರ ನೋಡುವವರಲ್ಲ. ಅವರ ವಿಮರ್ಷೆಗಳಲ್ಲಿ ತೆಗಳುವಿಕೆ ಬಹಳ ವಿರಳ. ಪೂರ್ವಗ್ರಹಗಳಿಂದ ದೂರವಾಗಿ ಸಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುವಲ್ಲಿ ಅವರು ನಿಷ್ಣಾತರು. ಅದು ಸಕಾರಾತ್ಮಕ ಆದರ್ಶಗಳನ್ನು ಇಟ್ಟುಕೊಂಡವರಿಗೆ ಮಾತ್ರ ಸಾಧ್ಯ. ಅವರ ಬರಹದಲ್ಲಿ ಸ್ಪೂರ್ತಿಯ ಸೆಲೆಯನ್ನು ಕಾಣಬಹುದು.
ಮುಖ್ಯವಾಗಿ ಶ್ರೀಕಂಠ ಗುಂಡಪ್ಪ ಅವರ ಭಿತ್ತಿಪತ್ರ ಸಂಗ್ರಹ ಹವ್ಯಾಸ ಬಹಳ ರೋಚಕವಾದುದು. ಕನ್ನಡ ರಂಗಭೂಮಿ ನಡೆದು ಬಂದ ದಾರಿಯ ದಾಖಲೆಯೇ ಅವರ ಬಳಿಯಿದೆ. ರಂಗಭೂಮಿಯ ಇತಿಹಾಸವನ್ನು ಅವರ ಮನೆಯಲ್ಲಿ ಭದ್ರವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಹಲವು ದಶಕದ ರಂಗಪ್ರಯೋಗಗಳ ಭಿತ್ತಿಪತ್ರ, ಟಿಕೆಟ್ಸ್‌, ಛಾಯಾಚಿತ್ರ, ಪತ್ರಿಕಾ ರಂಗವಿಮರ್ಷೆಗಳು ಅವರ ಬಳಿಯಿವೆ.
ಗುಂಡಪ್ಪ ಅವರ ಅಪರೂಪದ ಸಂಗ್ರಹಗಳ ಪ್ರದರ್ಶನಗಳು ಜನಮನ್ನಣೆ ಗಳಿಸಿವೆ. ಸಂಗ್ರಹ ಹವ್ಯಾಸ ಅಂದರೆ ಸ್ಟ್ಯಾಂಪ್‌, ಕಾಯಿನ್‌ ಸಂಗ್ರಹ ಮಾತ್ರ ಅಂದುಕೊಂಡವರಿಗೆ ಇಂಥ ಹವ್ಯಾಸವೂ ಉಂಟೆ! ಎಂದು ಉಬ್ಬೇರಿಸುವಂತೆ ಮಾಡಿವೆ. ಬಹುಶಃ ಅದು ಕೇವಲ ಸಂಗ್ರಹ ಹವ್ಯಾಸವಲ್ಲ. ರಂಗಭೂಮಿ ಬಗ್ಗೆ ಒಲವುಳ್ಳ ವ್ಯಕ್ತಿಯೊಬ್ಬ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಡುತ್ತಿರುವ ರಂಗಭೂಮಿ ಇತಿಹಾಸದ ಚಿತ್ರಣ.
ಶ್ರೀಕಂಠ ಗುಂಡಪ್ಪ ಅವರಿಗೆ ಅಣ್ಣಾವ್ರ ಮೇಲೆ ಅತೀವ ಪ್ರೀತಿ. ಅವರ ಅಪರೂಪದ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ. ಡಾ. ರಾಜ್‌ ಅವರ 77ನೇ ಹುಟ್ಟುಹಬ್ಬದಂದು ಅವರ 77 ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಡಾ. ರಾಜ್‌ ನಟನೆಯ ಚಲನಚಿತ್ರ ಸೇರಿದಂತೆ ನಾಟಕಗಳ ಫೋಟೋಗಳು ಅವರ ಬಳಿ ಇವೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವದ ಶುಭ ಘಳಿಗೆಯಲ್ಲಿ ಗುಂಡಪ್ಪ ಅವರ ದಾಖಲೆಯನ್ನು ಬಳಸಿಕೊಂಡರೆ ಅವರಿಗೊಂದು ಗೌರವ ಸಲ್ಲಿಸಿದಂತಾಗುತ್ತದೆ.
ಶ್ರೀಕಂಠ ಗುಂಡಪ್ಪ ಬರವಣಿಗೆಯಲ್ಲೂ ಕೃಷಿ ನಡೆಸಿದ್ದಾರೆ. ಮೈಸೂರು ಆಕಾಶವಾಣಿಯಲ್ಲಿ ಬಿ ಪ್ಲಸ್‌ ದರ್ಜೆ ಕಲಾವಿದರಾಗಿರುವ ಅವರು ಹಲವು ಬಾನುಲಿ ನಾಟಕಗಳನ್ನು ರಚನೆ ಮಾಡಿದ್ದಾರೆ. ರಂಗಾಯಣದ ಬಹುರೂಪಿಗಾಗಿ `ಈ ಬೇರು ಈ ಬೆವರು' ಬೀದಿನಾಟಕ ರಚಿಸಿದ್ದಾರೆ. `ಈಜು ಬಾರದ ಮೀನು' ಕವನ ಸಂಕಲನ ಹೊರಬಂದಿದೆ. ಮೊನ್ನೆ ಆಸ್ಕರ್‌ ಗಳಿಸಿದ `ಸ್ಲಮ್‌ಡಾಗ್‌ ಮಿಲಿಯನೇರ್‌' ಚಿತ್ರದ ಜೈ ಹೋ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಟಿವಿ ದಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.
ಶ್ರೀಕಂಠ ಗುಂಡಪ್ಪ ಯೂಕೋ ಬ್ಯಾಂಕ್‌ನಲ್ಲಿ ನೌಕರಿ ಮಾಡುತ್ತಿದ್ದವರು. ಬ್ಯಾಂಕ್‌ನಲ್ಲೂ ಕೂಡ ಸಾಂಸ್ಕೃತಿಕ ಬೀಜ ಬಿತ್ತಿದ್ದರು. ಬ್ಯಾಂಕ್‌ ನೌಕರರನ್ನು ಕಟ್ಟಿಕೊಂಡು ನಾಟಕವಾಡಿಸುತ್ತಿದ್ದರು. ಬ್ಯಾಂಕಿಗೆ ವಿದಾಯ ಹೇಳಿದ ನಂತರ 1968ರಲ್ಲಿ `ಅಮರ ಕಲಾ ಸಂಘ'ದ ಮೂಲಕ ತಮ್ಮ ನೆಚ್ಚಿನ ರಂಗಭೂಮಿ ಕಾರ್ಯಕ್ಷೇತ್ರಕ್ಕೆ ಪ್ರವೇಶ ಮಾಡಿದರು. ಹಲವು ಅಭಿನಯಿಸಿದರು. ರಂಗದ ಹಿಂದೆ ಕೆಲಸ ಮಾಡಿದರು. ಅತ್ಯುತ್ತಮ ಸಂಘಟಕರಾದರು. ಸದ್ಯಕ್ಕೆ ಅವರ ರಂಗಭೂಮಿ ಸೇವೆಗೆ ನಲವತ್ತು ತುಂಬಿದೆ.
ಅವರ ಕಲಾ ಕೈಂಕರ್ಯಕ್ಕೆ ಸಂದ ಗೌರವಗಳಿಗೇನು ಕಮ್ಮಿ ಇಲ್ಲ. ತಮ್ಮ `ಕಲಾಪ್ರಿಯಾ' ಸಂಸ್ಥೆಗೆ ರೋಟರಿ ಪ್ರಶಸ್ತಿ ಸಂದಿದೆ. ಹಲವು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ. ಶ್ರಿಕಂಠ ಗುಂಡಪ್ಪ ಅವರನ್ನು ಮೈಸೂರು ಸಾಂಸ್ಕೃತಿಕ ಲೋಕದ ಮಿನುಗುತಾರೆ ಎಂದರೆ ತಪ್ಪಲ್ಲ.

No comments:

Post a Comment