
ನೀಲಿಮಾ: ಅಪರೂಪದ ಮಹಿಳಾ ಶಿಲ್ಪಿ
ಒಬ್ಬ ಶಿಲ್ಪಿ ಕಲ್ಲು ಮತ್ತು ಹೃದಯದ ನಡುವೆ ವ್ಯತ್ಯಾಸ ಹುಡುಕಲಾರ. ಕಲ್ಲಿನ ಗುಣ ಶಿಲ್ಪಿಗೆ ಮಾತ್ರ ಗೊತ್ತು. ಕಣ್ಣಿಲ್ಲಿ ಕಣ್ಣಿಟ್ಟು ಕಲ್ಲನ್ನು ಕುಟ್ಟಿ, ಕೊರೆದು, ಕೆತ್ತಿ ತನ್ನ ಹೃದಯದ ಭಾವಕ್ಕೆ ರೂಪ ಕೊಡುತ್ತಾನೆ. ಶಿಲ್ಪಿ ಕಲ್ಲನ್ನು ಪ್ರೀತಿಸುತ್ತಾನೆ. ಧನ ಕನಕ ವಜ್ರ ವಾಹನ ವೈಢೂರ್ಯಗಳಿಗಿಂತಲೂ ಶಿಲ್ಪಿಗೆ ಕಲ್ಲೇ ಮೇಲು.
ಶಿಲ್ಪಿ ಭಾವಜೀವಿ, ಸೂಕ್ಷ್ಮ ಜೀವಿ ನಿಜ. ಆದರೆ ಅವನ ತೋಳು ಮಾತ್ರ ಗಟ್ಟಿಮುಟ್ಟಾಗಿರಬೇಕು. ಮನಸ್ಸು ಒರಟಾಗಬೇಕು. ಕಗ್ಗಲ್ಲಿನಿಂದ ಇತಿಹಾಸ ಹೇಳಿಸಬೇಕಾದರೆ ಶಿಲ್ಪಿಯ ದೇಹ ಕಲ್ಲಾಗಬೇಕು. ದೈಹಿಕ ಶ್ರಮವೇ ಶಿಲ್ಪಕಲೆಯ ಆಧಾರ.
ಈ ಶಿಲ್ಪಕಲೆಯ ಕಸರತ್ತು ಒಬ್ಬ ಮಹಿಳೆಯಿಂದ ಸಾಧ್ಯವೆ?
ಸಾಧ್ಯ ಎನ್ನುತ್ತಾರೆ ನೀಲಿಮಾ. ರಾಷ್ಟ್ರದ ಪ್ರಥಮ ಹಾಗೂ ಅಪರೂಪದ ಮಹಿಳಾ ಶಿಲ್ಪಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನೀಲಿಮಾ ಶಿಲ್ಪಕಲೆಯನ್ನು ತಮ್ಮ ಜೀವನದ ಅಂಗವಾಗಿಸಿಕೊಂಡ ದಿಟ್ಟ ಮಹಿಳೆ.
ಕೋಲ್ಕತ್ತಾದ ಇಂಡಿಯನ್ ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಶಿಲ್ಪಕಲಾ ವಿದ್ಯಾರ್ಥಿಯಾಗಿ ನೀಲಿಮಾ ದಾಖಲಾದಾಗ ಇಡೀ ಕಲಾಶಾಲೆ ಚಕಿತಗೊಂಡಿತ್ತು. ಭಾರತದ ಪ್ರತಿಷ್ಠಿತ ಕಲಾಶಾಲೆಯಾದ ಈ ಸಂಸ್ಥೆಯಲ್ಲಿ ಮಹಿಳೆಯೊಬ್ಬರು ಶಿಲ್ಪಕಲೆ ಕಲಿತ ಉದಾಹರಣೆಯೇ ಇರಲಿಲ್ಲ. ಕೆಲವರು ಮೂದಲಿಸಿದ್ದೂ ಉಂಟು. ನಿರ್ಧಾರ ಕೈಬಿಡುವಂತೆ ಒತ್ತಾಯಗಳೂ ಬಂದವು. ಹಠ ಬಿಡದ ನೀಲಿಮಾ ಶ್ರದ್ಧೆಯಿಂದ ಶಿಲ್ಪಕಲೆ ಕಲಿತರು. ಶಾಲೆಯಲ್ಲಿದ್ದಷ್ಟೂ ದಿನ ಉನ್ನತ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ತೋರಿದರು. ರಾಷ್ಟ್ರಮಟ್ಟದ ಬಹುಮಾನ ಗಳಿಸಿದರು. ಚಿನ್ನದ ಪದಕ ಗಳಿಸಿದರು. ಪುರುಷ ವಿದ್ಯಾರ್ಥಿಗಳನ್ನು ಮೀರಿಸಿದರು. ರವೀಂದ್ರಭಾರತಿ ವಿಶ್ವವಿದ್ಯಾಲಯದ ಪ್ರಥಮ ಮಹಿಳಾ ಶಿಲ್ಪಿ ಎನಿಸಿಕೊಂಡರು. ನೀಲಿಮಾರಿಂದ ಪ್ರಭಾವಿತರಾದ ಇಬ್ಬರು ಹೆಣ್ಣು ಮಕ್ಕಳು ಮುಂದೆ ಶಿಲ್ಪಕಲೆಗೆ ದಾಖಲಾದರು. ಆದರೆ ಎರಡೇ ತಿಂಗಳಲ್ಲಿ ಅವರು ಬೆವರಿಳಿಸಿಕೊಂಡು ಕಾಲಿಗೆ ಬುದ್ಧಿಹೇಳಿದರು.
ಹಠಯೋಗದಿಂದ ಕಲಿತ ವಿದ್ಯೆ ನೀಲಿಮಾ ಅವರ ಕೈ ಹಿಡಿಯಿತು. ಶಿಲ್ಪಿಯಾಗಿ ನೂರಾರು ಕಲಾಕೃತಿಗಳನ್ನು ಕಟ್ಟಿದ್ದಾರೆ. ನೀಲಿಮಾ ಕಂಚು ಮತ್ತು ಫೈಬರ್ ಗ್ಲಾಸ್ ಮೇಲೆ ಹೆಚ್ಚು ಕೆಲಸ ಮಾಡಿದ್ದಾರೆ. ಅವರ ಕಂಚಿನ ಏಕವ್ಯಕ್ತಿ ಕಲಾಕೃತಿಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಮೊನ್ನೆ (ನ. 12- 16ರ ವರೆಗೆ) ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಕಂಚಿನ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ಮನಸೂರೆಗೊಂಡಿತು.
ಮಾತೃತ್ವ. ಇದು ನೀಲಿಮಾ ಅವರ ಪ್ರಸಿದ್ಧ ಕಂಚಿನ ಏಕವ್ಯಕ್ತಿ ಕಲಾಕೃತಿಯಲ್ಲೊಂದು. ಇಡೀ ಮಾನವ ಸಮಾಜದಲ್ಲಿ ಮಾತೃವಾಗಿ ಹೆಣ್ಣಿನ ಪಾತ್ರವನ್ನು ಈ ಶಾಂತ ಮೂರ್ತಿ ವರ್ಣಿಸುತ್ತದೆ. ನಿಂದ್ರಾ. ಇದು ನೀಲಿಮಾರ ಇನ್ನೊಂದು ಪ್ರಸಿದ್ಧ ಕೃತಿ. ಹೆಣ್ಣು ಮತ್ತು ಗಂಡು ಇಬ್ಬರು ನಿದ್ರಿಸುತ್ತಿರುವ ಈ ಕೃತಿಯಲ್ಲಿ ಶಾಂತತೆಯನ್ನು ಚಿತ್ರಿಸಿದ್ದಾರೆ. ಅಖಿಲ್. ಈ ಕೃತಿಯಲ್ಲಿ ಯೌವನಾವಸ್ಥೆಯನ್ನು ಕಾಣಬಹುದು.
ಇದಂ ಮಮ್. ಇದು ಕಲಾಕೃತಿಗಳ ಗುಚ್ಛ. ಇವು ಧಾರ್ಮಿಕ ಭಾವಗಳನ್ನು ಬಿಂಬಿಸುವ ಕೃತಿಗಳು. ಇವುಗಳ ಮೇಲ್ಪದರದಲ್ಲಿ ಪ್ರಾಚೀನ ನಾಗರಿಕತೆಯ ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳನ್ನು ಬಳಸಲಾಗಿದೆ. ಇದಂ ಮಮ್ ಕೃತಿಗಳಲ್ಲಿ ನೀಲಿಮಾರ ಸಂಶೋಧನೆ ಮನೋಭಾವವೂ ಕೂಡ ಬಿಂಬಿತವಾಗಿದೆ. ಹಿಂದುಗಳ ಪವಿತ್ರ ಶಬ್ಧವಾದ `ಓಂ'ಕಾರ ಉತ್ಪತ್ತಿಯನ್ನು ಈ ಕಲಾಕೃತಿಗಳಲ್ಲಿ ಕಾಣಬಹುದು.
ಅವರ ಕೃತಿಗಳು ಒಂದು ಕಾಲಘಟ್ಟದ ಇತಿಹಾಸ ಹೇಳಬಲ್ಲವು. ಅಂತೆಯೇ ಪ್ರತಿನಿತ್ಯದ ಬದುಕನ್ನೂ ಬಿಂಬಿಸಬಲ್ಲವು. ಭಾವನೆಗಳನ್ನು ಉದ್ರೇಕಿಸುವ ಶಕ್ತಿ ಇವರ ಕೃತಿಗಳಲ್ಲಿವೆ. ಕಂಚಿನ ಗುಣವನ್ನು ಆಳವಾಗಿ ಅಧ್ಯಯನ ಮಾಡಿರುವ ನೀಲಿಮಾ ಆ ಲೋಹದ ಸಾಧ್ಯತೆಯನ್ನು ಕೃತಿಗಿಳಿಸಿದ್ದಾರೆ.
ನೀಲಿಮಾರ ಶಿಲ್ಪಕೆಲೆಯಲ್ಲಿ ತಾಂತ್ರಿಕತೆ ಮತ್ತು ಮ್ಯಾಜಿಕ್ ತತ್ವಗಳನ್ನು ವಿಶೇಷವಾಗಿ ನೋಡಬಹುದು. ಈ ಕಲಾಕೃತಿಗಳನ್ನು ಅರ್ಥೈಸಿಕೊಳ್ಳಲು ಕ್ಲಾಸ್ ಪ್ರೇಕ್ಷಕನೇ ಆಗಬೇಕೆಂದಿಲ್ಲ. ಯಾರೊಬ್ಬ ಸಾಮಾನ್ಯ ಪ್ರೇಕ್ಷಕನಿಗೂ ಕೂಡ ನೋಡಿದ ಕೂಡಲೆ ಸರಳವಾಗಿ ಅರ್ಥವಾಗುತ್ತವೆ. ಸರಳತೆ ಅವರ ಕೃತಿಗಳ ಮುಖ್ಯಾಂಶ.
ನೀಲಿಮಾ ಶಿಲ್ಪಿಯಾಗಿ ಹಲವು ಪ್ರಶಸ್ತಿ ಗೌರವಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶಾದ್ಯಂತ ಪ್ರದರ್ಶನದ ಜೊತೆಗೆ ಹಲವು ಕಾರ್ಯಗಾರಗಳನ್ನು ನಡೆಸಿದ್ದಾರೆ. ಬೋಧಕರಾಗಿ ಶಿಷ್ಯವೃಂದವನ್ನು ಹೊಂದಿದ್ದಾರೆ. ತಮ್ಮ ಕಲಾಕೃತಿಗಳ ಮೂಲಕ ತನ್ಮಯತೆ, ಆಪ್ತತೆ, ತಾಂತತೆ, ಭಾವುಕತೆಗಳನ್ನು ಬಿಂಬಿಸುತ್ತಾ ಒಬ್ಬ ಕಲಾಮೂರ್ತಿಯಾಗಿ ಕಲಾಪ್ರೇಮಿಗಳ ಮನಮುಟ್ಟಿದ್ದಾರೆ.
No comments:
Post a Comment