
ಹೆಜ್ಜೆ ಇಡಬೇಕು, ಹೆಜ್ಜೆಗೆ ಗೆಜ್ಜೆಯೂ ಬೇಕು
` ನಾವು ಪ್ರಾಮಾಣಿಕವಾಗಿ ದೇವರ ಬಳಿಗೆ ಒಂದು ಹೆಜ್ಜೆ ಇಟ್ಟರೆ, ದೇವರು ನಮ್ಮ ಬಳಿಗೆ ಹತ್ತು ಹೆಜ್ಜೆ ಇಡುತ್ತಾನೆ. ಯಾವುದೇ ಕ್ಷೇತ್ರವಿರಲಿ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲವಿದೆ. ಈ ಮಾತುಗಳನ್ನಾಡುವಾಗ ಅವರು ಭಾವುಕರಾಗಿದ್ದರು.
' ನನಗೆ ಬ್ರಿಟಿಷರ ಮೇಲೆ ಕೋಪವಿದೆ, ನಮ್ಮ ದೇವಾಲಯಗಳ ಮೇಲೆ ಅವರು ತೋರಿರುವ ಕ್ರೌರ್ಯ ಕಂಡಾಗ ದೇಹ ಬಿಸಿಯಾಗುತ್ತದೆ. ನಾನು ಆಗ ರಂಗದ ಮೇಲೆ ಝಾನ್ಸಿರಾಣಿ ಲಕ್ಷ್ಮಿ ಬಾಯಿ ಆಗುತ್ತೇನೆ' ಈ ಮಾತುಗಳನ್ನಾಡುವಾಗ ಅವರ ಮುಖ ಭಾವದಲ್ಲಿ ವೀರತ್ವವಿತ್ತು.
ಅವರು ವೈಜಯಂತಿ ಕಾಶಿ. ಕೂಚಿಪುಡಿ ನೃತ್ಯ ಪ್ರಕಾರಕ್ಕೆ ದೈವಿಕ ರೂಪ ಕೊಟ್ಟ ಅಪರೂಪದ ನೃತ್ಯಗಾರ್ತಿ. ನೃತ್ಯದಲ್ಲೇ ಚಿಕಿತ್ಸಾ ಗುಣ ಕಂಡುಕೊಂಡಿರುವ ಚಿಕಿತ್ಸಕ (ಡ್ಯಾನ್ಸ್ ಥೆರಪಿಸ್ಟ್). ಗುರುಕುಲ ಪರಂಪರೆಯ ಮೇಲೆ ಅತೀವ ಆಸಕ್ತಿ ಹೊಂದಿರುವ. ಅದೇ ತಳಹದಿಯ ಮೇಲೆ ತಮ್ಮ ಕನಸಿನ `ಶಾಂಭವಿ ನೃತ್ಯ ಶಾಲೆ; ಸ್ಥಾಪಿಸಿ, ದೇಶ ವಿದೇಶಗಳಲ್ಲಿ ಶಿಷ್ಯಕೋಟಿ ಹೊಂದಿರುವ ನೃತ್ಯಗುರು. ಅಪರೂಪದ ನವಿಲು ನೃತ್ಯ (ಮಯೂರ ಕೌತಮ್) ಮಅಡುವ ಏಕೈಕ ನರ್ತಕಿ, ಸಂಶೋಧಕಿ, ನಾಟ್ಯಯೋಗ ತಜ್ಞೆ, ಸಮರ ಕಲಾ ಪ್ರವೀಣೆ. ಹೀಗಿವೆ ವೈಜಯಂತಿ ಅವರ ಹತ್ತುಮುಖಗಳು.
ಕನ್ನಡ ರಂಗಭೂಮಿಯ ಇತಿಹಾಸ ಪುರಷ. ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ವೈಜಯಂತಿ, ತಮ್ಮ ಆರನೆಯ ವಯಸ್ಸಿನಲ್ಲಿ ತುಮಕೂರು ರಾಮಣ್ಣ ಅವರ ಭರತ ನಾಟ್ಯ ಶಿಷ್ಯೆಯಾಗಿ ಕಾಲಿಗೆ ಗೆಜ್ಜೆ ಕಟ್ಟಿದರು. ನಂತರ ಕೂಚಿಪುರಿ ನೃತ್ಯದ ಕಡೆ ವಾಲಿದರು. ಸಿ.ಆರ್. ಆಚಾರ್ಯ ಅವರ ಶಿಷ್ಯೆಯಾಗಿ ಕೂಚಿಪುಡಿ ನೃತ್ಯಕ್ಕೆ ಮುನ್ನುಡಿ ಬರೆದುಕೊಂಡರು. ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ. ಭಾರತದ ಕಲಾ ಪ್ರಕಾರವೊಂದರ ಪ್ರತಿನಿಧಿಯಾಗಿ, ನೃತ್ಯಕಲಾ ರಾಯಭಾರಿಯಾಗಿ ದೇಶ ವಿದೇಶ ಸುತ್ತಿರುವ ಅವರು, ನೃತ್ಯ ಕುರಿತ ಸಂಶೋಧನೆಗಳನ್ನು ವಿದೇಶೀಯರ ಮುಂದೆ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ.
ನೃತ್ಯ ನಿರ್ದೇಶಕಿಯಾಗಿ ಅಸಂಖ್ಯಾತ ನೃತ್ಯ ರೂಪಕಗಳಲ್ಲಿ ತಮ್ಮ ಅಮೋಘ ನೃತ್ಯಾಭಿನಯದಿಂದ ಬೇರೆ ಬೇರೆ ರಾಷ್ಟ್ರೀಯತೆಯ ಹೃದಯ ಗೆದ್ದಿರುವ ವೈಜಯಂತಿ ಕಾಶಿಯೊಂದಿಗೆ.........ಮಾತನಾಡಿದ್ದಾರೆ.
* ತಾವು ಮೂಲತಃ ಗೆಜ್ಜೆ ಕಟ್ಟಿದ್ದು ಭರತನಾಟ್ಯಕ್ಕೆ, ಕೂಚಿಪುರಿ ನೃತ್ಯದ ಕಡೆಗೆ ಹೇಗೆ ಇಟ್ಟಿರಿ?
ಅವರು ಆಕಸ್ಮಿಕ, ನನ್ನ ಗುರು ಸಿ.ಆರ್. ಆಚಾರ್ಯ ಬೇಸಿಗೆ ರಜಕ್ಕೆಂದು ಬೆಂಗಳೂರಿಗೆ ಬಂದಿದ್ದರು. ನನ್ನ ತಂದೆಯ ಗೆಳೆಯರೊಬ್ಬರು, ಆಚಾರ್ಯರ ಬಳಿ ಕೂಚಿಪುಡಿ ನೃತ್ಯ ಕಲಿತುಕೊ ಎಂದು ಸಲಹೆ ಮಾಡಿದರು. ನಂತರ ನಾನು ಅವರ ಹಿಂದೆ ಬಿದ್ದೆ. ಅದು ನನ್ನ ನೃತ್ಯ ಬದುಕಿನ ಪ್ರಮುಖ ಘಟ್ಟ, ಮುಖ್ಯವಾಗಿ ನನಗೆ ಕೂಚಿಪುಡಿ ಬಗ್ಗೆ ಅತೀವ ಪ್ರೀತಿಯಿತ್ತು. ನಾನು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಕೂಚಪುಡಿಯಲ್ಲಿ ನಾಟಕೀಯ ಗುಣ ಇದ್ದುದರಿಂದ ಸಹಜವಾಗಿ ಆಕರ್ಷಿತಳಾದೆ.
*ನೃತ್ಯ ಥೆರಪಿ ತಾವು ಕಂಡುಕೊಂಡಿರುವ ಒಂದು ಪ್ರಭಾವಿ ಫಾರ್ಮುಲಾ ಇದರಲ್ಲಿ ಹೇಗೆ ಕೃಷಿ ಮಾಡಿದ್ದೀರಿ?
ಆಸಕ್ತಿ ಎಲ್ಲಿದೆಯೋ ಅಲ್ಲಿ ಎಲ್ಲಾ ಇದೆ. ನಾನು ನೃತ್ಯದಲ್ಲಿ ಹೊಸದನ್ನು ಅರಸುತ್ತಾ ಅದರಲ್ಲೇ ಮುಳುಗಿ ಹೋದೆ. ಅದು ಸಂಶೋಧನೆ ಎನ್ನುವ ಹೊಸ ರೂಪಪಡೆಯಿತು. ಅದರಲ್ಲಿ ಏನೋ ಒಂದು ಸೆಳತವಿದೆ ಎಂದು ಮೊದಲು ನನಗೆ ಫೀಲ್ ಆಯಿತು.
*ನೃತ್ಯ ಥೆರಪಿಯನ್ನು ಕಾರ್ಯಾಗಾರಗಳ ಮೂಲಕ ವಿದೇಶೀಯರ ಮೇಲೆ, ವಿಕಲಾಂಗರ ಮೇಲೆ ಪ್ರಯೋಗಿಸಿ ಯಶಸ್ವಿಯಾಗಿದ್ದೀರಿ, ಅದು ಹೇಗೆ ಸಾಧ್ಯವಾಯಿತು?
ವಿದೇಶೀಯರನ್ನು ಸೆಳೆಯುವುದು ಸುಲಭದ ಮಾತಲ್ಲ, ಬಹಳ ಸೂಕ್ಷ್ಮ ಮನುಷ್ಯರು ಅವರು. ನಮ್ಮವರ ಹಾಗೆ ಅವರು ಹೇಳುವುದೆಲ್ಲಾ ನಂಬುವುದಿಲ್ಲ. ಎಲ್ಲದಕ್ಕೂ ಅವರು ಪ್ರೂಫ್ ಕೇಳಿತ್ತಾರೆ. ಈ ಜಗತ್ತಿನಲ್ಲಿ ಕಲೆ ಮತ್ತು ಯೋಗಕ್ಕೆ ಪ್ರೂಫ್ ಇಲ್ಲ. ಅವರನ್ನು ಸೆಳೆಯಲು ನಾನು ಬಳಸಿದ ಮಾನದಂಡ. ಅವರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಮತ್ತು ನನ್ನ 'ವೇ ಆಫ್ ಪ್ರೆಸೆಂಟೇಷನ್ ನನಗೆ ನಿಜಕ್ಕೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ವಿಕಲಾಂಗ ಶಾಪಗ್ರಸ್ಥನಲ್ಲ. ವೈಕಲ್ಯವಾಗಿರುವ ಅಂಗದ ಶಕ್ತಿ ಬೇರೊಂದು ಅಂಗದಲ್ಲೇ ಇರುತ್ತದೆ. ಅದನ್ನು ಪತ್ತೆ ಮಾಡಿ ಅದನ್ನು ಅವನಿಗೆ ಮನವರಿಕೆ ಮಾಡಿಕೊಟ್ಟರೆ ನಾನು ವಿಕಲಾಂಗ ಎಂಬ ಕೀಳರಿಮೆ ಮಾಯವಾಗುತ್ತದೆ.
*ಗುರುಶಿಷ್ಯ ಪರಂಪರೆಯ ಮೇಲೆ ಅಷ್ಟೊಂದು ಆಸಕ್ತಿ ಏಕೆ?
ಅದು ಆಸಕ್ತಿಯಲ್ಲ, ಸತ್ಯದ ಮೇಲಿನ ನಂಬಿಕೆ. ಅದೊಂದು ಧ್ಯಾನ, ಯೋಗ, ಅಲ್ಲಿ ಹೃದುಯ ಸ್ಪಂದನೆಯಿದೆ. ನಾನು ಸರಳತೆ ಮತ್ತು ಪ್ರಾಮಾಣಿಕತೆಯನ್ನು ಬಲವಾಗಿ ನಂಬಿದ್ದೇನೆ. ಅದನ್ನು ಈ ಪರಂಪರೆಯಲ್ಲಿ ಮಾತ್ರ ಗುರುತಿಸಬಹುದು. ನಮ್ಮ ಮನೆಯ ಗುರುಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ತವಕ ನನ್ನದು.
*ಭರತನ ನಾಟ್ಯಶಾಸ್ತ್ರ ನಾಟ್ಯದ ಮೂಲ, ಅದೇ ರೀತಿ ನಾಟಕಕ್ಕೂ ಕೂಡ. ಅದರ ಬಗ್ಗೆ ಏನು ಹೇಳುವಿರಿ?
ಒಳ್ಳೆಯ ಪ್ರಶ್ನೆ, ನಾಟ್ಯ ಶಾಸ್ತ್ರ ನಮ್ಮ ಬದುಕಿನ ಶಾಸ್ತ್ರ ನಾಟ್ಯವಿಲ್ಲದೆ ನಾಟಕವಿಲ್ಲ, ನಾಟಕವಿಲ್ಲದೆ ನಾಟ್ಯವಿಲ್ಲ, ಸಂಗೀತ ವಿಲ್ಲದೆ ನಾಟ್ಯ ನಾಟಕವಿಲ್ಲ. ಎಲ್ಲದಕ್ಕೂ ಮೂಲ ನಾಟ್ಯ ಶಾಸ್ತ್ರವೇ. ಅಲ್ಲಿ ಬರುವ ನವಸರಸಗಳು ಪ್ರತಿನಿತ್ಯದ ನಮ್ಮ ಬದುಕಿನೊಂದಿಗೆ ಬೆಸೆದುಕೊಂಡಿವೆ. ನಾನು ದ್ರೌಪದಿಯನ್ನು ಕಂಡಿಲ್ಲ. ಆದರೆ ಅವರ ಬಗ್ಗೆ ಇಂತಹ ಉದ್ಗ್ರಂಥಗಳಿವೆ. ಅವು ನಮಗೆ ಒಂದು ಚಿತ್ರಣ ನೀಡುತ್ತವೆ.
*ತಮ್ಮ ಪತಿ ಮತ್ತು ಮಗಳ ಬಗ್ಗೆ ಹೇಳಿ?
ನನ್ನ ಮನೆ, ನೋವು ನಲಿವು ಒತ್ತಡಗಳ ಗೂಡು, ಮಗಳು ಹಾಗೂ ನನ್ನ ವಿದ್ಯಾರ್ಥಿನಿ ಪ್ರತೀಕ್ಷ ಮೌಂಟ್ ಕಾಞರ್ವೆುಲ್ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದಾಳೆ. ಅವಳ ಮೇಲೆ ಯಾವುದನ್ನೂ ಹೇರಿಲ್ಲ. ಅವಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಅವಳಿಗೇ ನೀಡಿದ್ದೇನೆ. ಪತಿ ಚಿತ್ರನಟ ವಿಜಯಕಾಶಿ ನನ್ನ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾ ನೀಡುತ್ತಿದ್ದಾರೆ.
*ತಮ್ಮ ಮುಂದಿನ ಯೋಜನೆಗಳಾವುವು?
ಕೆಂಗೇರಿಯಲ್ಲಿ ಸೈಟ್ ಕೊಂಡು ರಂಗಮಂದಿರ ಮತ್ತು ನೃತ್ಯ ಶಾಲೆ ನಿರ್ಮಾಣ ಮಾಡಿಸುತ್ತಿದ್ದೇನೆ. ಈಗಾಗಲೇ 70 ರಷ್ಟು ಕೆಲಸ ಮುಗಿದಿದೆ. ಮುಂದೆ ಬರುವ ವಿಶ್ವ ನೃತ್ಯ ಹಬ್ಬದಂದು ಲೋಕಾರ್ಪಣೆ ಮಾಡುತ್ತೇನೆ. ಇದು ಬದುಕನ್ನು ಪ್ರೀತಿಸುವ ವಾತಾವರಣವನ್ನು ಸೃಷ್ಠಿಸುವ ಸಂಸ್ಥೆ, ಪ್ರಾಕೃತಿಕ ಚಿಕಿತ್ಸಾ ಕೇಂದ್ರ. ನಾನು ಇಲ್ಲಿ ನೃತ್ಯ ಪ್ರತಿಭೆಗಳನ್ನು ಮಾತ್ರ ತಯಾರು ಮಾಡುವುದಿಲ್ಲ, ಒಳ್ಳೆಯ ಮನುಷ್ಯರನ್ನು, ಮನುಷ್ಯತ್ವವನ್ನು ನಿರ್ಮಾಣ ಮಾಡಬೇಕೆನ್ನುವುದು ನನ್ನ ಆಸೆ.
No comments:
Post a Comment