
ನಾದಯೋಗಿ ಮೈಸೂರು ವಿ. ಅಂಬಾಪ್ರಸಾದ್
ಅದು ಅಂಬಾಸದನ. ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿದೆ. ನೂರೊಂದು ಗಣಪತಿ ದೇವಾಲಯಕ್ಕೆ ಸಮೀಪ. ಆ ಜಾಗದಲ್ಲಿ ಒಂದು ಭಾವನಾತ್ಮಕ ಸೆಳೆತವಿದೆ. ಸದನದ ಒಂದಿಚೂ ಜಾಗವನ್ನೂ ಖಾಲಿ ಬಿಟ್ಟಿಲ್ಲ. ಕಬ್ಬಿಣದ ಸರಳುಗಳಿಂದ ಬಂಧಿಸಲ್ಪಟ್ಟಿದೆ. ಆದರೆ ಅಲ್ಲಿಯ ಪರಿಮಳ ಸರಳುಗಳಿಂದ ತೂರು ಬಂದು ಎಲ್ಲರ ಹೃದಯ ತಟ್ಟಿದೆ. ಅಲ್ಲಿ ಹೋದವರಿಗೆ ದೇವಾಲಯಕ್ಕೆ ಹೋದ ಅನುಭವ ಸಿಗುತ್ತದೆ. ಆದರೆ ಅದು ದೇವಾಲಯವಲ್ಲ. ಸಂಗೀತವನ್ನು ಆರಾಧಿಸುವ ಒಂದು ಕುಟುಂಬ.
ಅದು ಖ್ಯಾತ ಪಿಟೀಲು ಕಲಾವಿದ ನಾದಯೋಗಿ ಮೈಸೂರು ವಿ. ಅಂಬಾಪ್ರಸಾದ್ ಅವರ ಬ್ರಮರಾಂಭ ಸಂಗೀತ ವಿದ್ಯಾಲಯ. ತಳ ಮಹಡಿಯಲ್ಲಿ ಕುಟುಂಬ. ಮೊದಲ ಮಹಡಿಯಲ್ಲಿ ಸಂಗೀತ ವಿದ್ಯಾಲಯ. ಮೇಲಿನ ಮಹಡಿಯಲ್ಲಿ ದಿವ್ಯ ಸಭಾಂಗಣ. ಅದನ್ನು ಅಂಬಾಸದನ ಎಂದೇ ಕರೆಯಲಾಗುತ್ತದೆ.
ಅವರ ಮನೆ ತುಂಬೆಲ್ಲಾ ಸಂಗೀತ. ಮನೆಯಲ್ಲಿ ಇರುವವರೆಲ್ಲಾ ಸಂಗೀತಗಾರರು. ಪ್ರತಿಕ್ಷಣ ಅಲ್ಲಿ ವಿದ್ಯಾದಾನ ತಡೆಯಿಲ್ಲದೆ ನಡೆಯುತ್ತದೆ. ಸಂಗೀತ, ಭಜನೆ, ಸಂಸ್ಕೃತ ಹೀಗೆ ಹಲವಾರು ವಿಭಾಗಗಳ ಪಾಠಗಳು ನಡೆಯುತ್ತವೆ. ವಂಶ ಪರಂಪರೆಯಿಂದ ಬಂದ ಸಂಗೀತ ಅಂಬಾಸದನದಲ್ಲಿ ಸುಧೆಯಾಗಿ ಹರಿಯುತ್ತಿದೆ.
ಅಂಬಾಪ್ರಸಾದ್ ಅವರು ಶಾಲಿನಿ ಮತ್ತು ದಿ. ಜಿ.ವಿ. ಮೂರ್ತಿ ಅವರ ಸುಪುತ್ರರು. ನಾಡಿನ ಪ್ರಭಾವಶಾಲಿ ಪಿಟೀಲು ವಾದಕರಲ್ಲಿ ಅಂಬಾಪ್ರಸಾದ್ ಕೂಡ ಒಬ್ಬರು. ಅವರ ಸೋಲೋ ಪಿಟೀಲು ಕಚೇರಿಗಳಲ್ಲಿ ಭಕ್ತಿಭಾವ ಝರಿಯಂತೆ ಹರಿಯುತ್ತದೆ. ತಾವೇ ಸಿದ್ಧಪಡಿಸಿಕೊಂಡಿರುವ ಐದು ತಂತಿಗಳ ವೈಲಿನ್ ತಮ್ಮ ಪ್ರತಿಭೆಯ ಅಭಿವ್ಯಕ್ತಕ್ಕೆ ಕನ್ನಡಿಯಾಗಿದೆ.
ಅಂಬಾಪ್ರಸಾದ್ ಪಿಟೀಲು ನುಡಿಸುವ ಶೈಲಿ ಬಹಳ ವೈಶಿಷ್ಟ್ಯ ಪೂರ್ಣವಾಗಿದ್ದು, ಸಂಗೀತ ಲೋಕದಲ್ಲಿ ವಿಶೇಷ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರು ಪೀಟೀಲು ನುಡಿಸುವಾಗ ಅವರ ಮೊಗದಲ್ಲಿ ಸಾಹಿತ್ಯದ ಅಭಿವ್ಯಕ್ತವಾಗುತ್ತದೆ. ಹಾಡುಗಾರಿಕೆಯಲ್ಲೂ ಕೂಡ ಅಂಬಾಪ್ರಸಾದ್ ಸಾಧನೆ ಮಾಡಿದ್ದಾರೆ. ಸಂಗೀತದ ವಾತಾವರಣದಲ್ಲೇ ಬೆಳೆದ ಅಂಬಾಪ್ರಸಾದ್ ರಾಜ ಮಣಿಕ್ಕಮ್ ಪಿಳ್ಳೈ ವಂಶಾವಳಿಗೆ ಸೇರಿದವರಾಗಿದ್ದಾರೆ. ಸಂಸ್ಕಾರ ಅವರ ನರನಾಡಿ, ರಕ್ತದಲ್ಲೇ ಇದೆ.
ಅಂಬಾಪ್ರಸಾದ್ ಸಂಗೀತ ಸಾಧನೆಯ ಹಾದಿಯಲ್ಲಿ ಹಲವು ಗುರುಗಳ ವಿದ್ಯಾಶೀರ್ವಾದ ಪಡೆದಿದ್ದಾರೆ. ಶ್ರೇಷ್ಠ ಆಚಾರ್ಯ ವಿದ್ವಾನ್ ಕುಂಬಕೋಣಂ ಜನಾರ್ಧನಮ್ ಅವರ ಮಾರ್ಗದರ್ಶನದಲ್ಲಿ ಆರಂಭವಾದ ಸಾಧನೆ ಕಂಚಿಪುರಂ ನಾಗರಾಜನ್, ಶ್ರೀನಿವಾಸ ಭಾಗವತರ್, ಮೈಸೂರು ಹಿೃಶಿಕೇಶ್ , ಮೈಸೂರು ವೇಣುಗೋಪಾಲ್, ರತ್ನಮ್ಮ, ಎನ್. ನಂಜುಂಡಸ್ವಾಮಿ, ಜೆ. ದೇವಿಪ್ರಸಾದ್, ಎಚ್. ಕೆ. ನರಸಿಂಹ ಮೂರ್ತಿ ಮುಂತಾದವರಿಂದ ತಮ್ಮ ಸಂಗೀತ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾರೆ.
1992ರಲ್ಲಿ ಕಚೇರಿ ನೀಡಲು ಆರಂಭಿಸಿದ ಅಂಬಾಪ್ರಸಾದ್ ಹಿಂದೆ ತಿರುಗಿ ನೋಡಿಲ್ಲ. ದೇಶಾದ್ಯಂತ ಸಾವಿರಾರು ಸೋಲೋ ವೈಲಿನ್ ಕಚೇರಿ ನೀಡಿದ್ದಾರೆ. ತಮಿಳುನಾಡಿನಲ್ಲಿ ಅಂಬಾಪ್ರಸಾದ್ ಹೆಚ್ಚು ಕಾರ್ಯಕ್ರಮ ನೀಡಿದ್ದು, ತಮಿಳುನಾಡಿನಲ್ಲಿ ಖ್ಯಾತಿ ಪಡೆದಿರುವ ಕರ್ನಾಟಕದ ಹೆಮ್ಮೆಯ ಸಂಗೀತಗಾರ ಎಂದರೆ ತಪ್ಪಲ್ಲ.
ಅಂಬಾಪ್ರಸಾದ್ ಅವರ ಸಂಗೀತ ಸಾಧನೆಗೆ ಅಪಾರ ಗೌರವ ಪ್ರಶಸ್ತಿಗಳು ಅರಸಿ ಬಂದಿವೆ. ಭಾರತ ವೈಲಿನ್ ವಿದ್ಯಾ ತಿಲಕ, ನಾದಯೋಗಿ, ನಾದ ನಿರ್ಮಾತೃ, ಪಿಟೀಲು ವಾದನ ಚತುರ, ಯುವ ಭಾಸ್ಕರ ಮುಂತಾದ ಗೌರವಗಳು ಅವರ ಮುಡಿಗೇರಿವೆ.
ಸಂಗೀತ ಲೋಕದಲ್ಲಿ ವಿದ್ಯಾದಾನಕ್ಕೆ ಪೂಜ್ಯ ಸ್ಥಾನವಿದೆ. ಅವನೆಷ್ಟೇ ದಿಗ್ಗಜ ಸಂಗೀತಗಾರನಾದರೂ ಕಲಿಯ ಬಂದವರಿಗೆ ವಿದ್ಯಾದಾನ ಮಾಡದಿದ್ದರೆ ಅವನು ಅಜ್ಞಾನಿ ಎಂದು ಹೇಳಲಾಗುತ್ತದೆ. ಸಂಗೀತ ಉಳಿಯಬೇಕಾದರೆ ಜ್ಞಾನದ ಹಂಚಿಕೆ ಆಗಲೇ ಬೇಕು. ಅಂಬಾಪ್ರಸಾದ್ ತಮ್ಮ ಸಂಗೀತ ಜ್ಞಾನವನ್ನು ನೂರಾರು ವಿದ್ಯಾರ್ಥಿಗಳ ಜತೆ ಹಂಚಿಕೊಂಡಿದ್ದಾರೆ. ಅಂಬಾಸದನ ಯಾವಾಗಲು ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಬಿಡುವಿಲ್ಲದ ಕಚೇರಿಗಳ ನಡುವೆ ವಿದ್ಯಾದಾನಕ್ಕಾಗಿ ಸಮಯ ಮಾಡಿಕೊಂಡು ವಿದ್ಯಾದಾನದಲ್ಲಿ ತೊಡಗಿದ್ದಾರೆ. ಅವರಿಗೆ ವಿದೇಶಗಳಲ್ಲೂ ವಿದ್ಯಾರ್ಥಿಗಳಿದ್ದಾರೆ. ಆನ್ಲೈನ್ ಮೂಲಕ ಸಂಗೀತ ಬೋಧಿಸಲಾಗುತ್ತದೆ. ಅಂಬಾಪ್ರಸಾದ್ ಅವರ ತಮ್ಮ ವಿ.ಆರ್.ಆರ್. ಭಾರ್ಗವ ಮೃದಂಗದಲ್ಲಿ ಪ್ರವೀಣರಾಗಿದ್ದಾರೆ.
ೃಮರಾಂಬ ಸಂಗೀತ ವಿದ್ಯಾಲಯದಲ್ಲಿ ಹಲವು ವಿಭಾಗಗಳಲ್ಲಿ ಸಂಗೀತ ಪಾಠಗಳು ನಡೆಯುತ್ತವೆ. ಹಾಡುಗಾರಿಕೆ, ಹಾರ್ಮೋನಿಯಂ, ಪಿಟೀಲು, ಮ್ಯಾಂಡಲಿನ್, ವೀಣಾ, ಗಿಟಾರ್, ಮೃದಂಗ, ತಬಲ, ಘಟಂ ಮುಂತಾದ ವಾದ್ಯಗಳನ್ನು ಹೇಳಿಕೊಡಲಾಗುತ್ತದೆ. ಜೊತೆಗೆ ಸಂಸ್ಕೃತ, ಭಜನೆ, ಹಿಂದಿ, ತಮಿಳು ತರಗತಿಗಳೂ ಕೂಡ ನಡೆಯುತ್ತವೆ.
ಅಂಬಾಸದನದ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯುತ್ತವೆ. ಪ್ರತಿವರ್ಷ ನಡೆಯುವ ಬ್ರಮರಾಂಭ ಸಂಗೀತ ಶಾಲೆಯ ವಾರ್ಷಿಕೋತ್ಸವದಲ್ಲಿ ಖ್ಯಾತನಾಮ ಸಂಗೀತಗಾರರ ದಂಡೇ ಅಲ್ಲಿರುತ್ತದೆ.
ಮೈಸೂರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಂಬಾಪ್ರಸಾದ್ ಅವರ ವೈಲಿನ್ ಕಚೇರಿ ಇದ್ದೇ ಇರುತ್ತದೆ. ಅವರ ಬಹಳಷ್ಟು ಕಚೇರಿಗಳಿಗೆ ಸಹೋದರ ಭಾರ್ಗವ ಮೃದಂಗ ನುಡಿಸುತ್ತಾರೆ. ಅವರ ಕಚೇರಿಗಳಲ್ಲಿ ಸಹೋದರರ ಸಂಗೀತ ಸಂಗಮವನ್ನು ಕಾಣಬಹುದು.
ಙ
No comments:
Post a Comment