
ಕಳಚಿದ `ಹೊನ್ನಿನ ಕಂಠಸಿರಿ' ಎಚ್.ಕೆ. ನಾರಾಯಣ
ಕನ್ನಡ ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಎಚ್.ಕೆ. ನಾರಾಯಣ ಇನ್ನಿಲ್ಲ. ಕರ್ನಾಟಕ ಸಾಂಸ್ಕೃತಿಕ ಲೋಕದ ಐದು ದಶಕಗಳ ನಾರಾಯಣ ಗಾನೋತ್ಸವಕ್ಕೆ ತೆರೆಬಿದ್ದಿದೆ. 1960ರ ದಶಕದಲ್ಲಿ ಸುಗಮ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರಾಗಿರಾದ್ದ ನಾರಾಯಣರು ಆಕಾಶವಾಣಿಯ ಸಾಮ್ರಾಟರಾಗಿದ್ದರು. ಅವರು ಮಾತನಾಡಿದ್ದು ಬಹಳ ಕಡಿಮೆ. ಹಾಡಿದ್ದು ಅಪಾರ.
ಶಾಸ್ತ್ರೀಯ ಸಂಗೀತದ ನೆಲೆಯಲ್ಲಿ ಸುಗಮ ಸಂಗೀತಕ್ಕೆ ಹೊಸ ರೂಪ ಕೊಟ್ಟವರು ನಾರಾಯಣರು. ಬೇಂದ್ರೆಯವರ ನೂರಾರು ಗೀತೆಗಳಿಗೆ ದನಿಯಾದವರು. ಕ್ಯಾಸೆಟ್ ಕ್ರಾಂತಿಯ ಮೂಲಕ ಮನೆ ಮನ ತಲುಪಿದರು. ಅಂದು ಆರಂಭವಾದ ಕ್ಯಾಸೆಟ್ ಕ್ರಾಂತಿಯಿಂದ ಅಪಾರ ಭಕ್ತಿಗೀತೆಗಳು, ದೇವರನಾಮಗಳು, ವಚನಗಳು ಎಲ್ಲರ ಬಾಯಲ್ಲೂ ಗುನುಗಿದವು. ತಮ್ಮ ವಿಶಿಷ್ಟ ಹೊನ್ನ ಕಂಠಸಿರಿಯಿಂದ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು. ನೃತ್ಯರೂಪಕಗಳಿಗೆ ಸಂಗೀತ ಸಂಯೋಜಕರಾಗಿ ಸಾಗರದಾಚೆಗೂ ಹೋಗಿ ಬಂದರು.
ಎಚ್.ಕೆ. ನಾರಾಯಣ ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರದವರು. ತಂದೆ ಕೇಶವಯ್ಯನವರಿಂದ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದರು. ಮೈಸೂರಿಗೆ ಬಂದ ನಂತರ ವಿದ್ವಾಂಸ ಆರ್.ಕೆ. ಶ್ರೀಕಂಠನ್ ಅವರ ಬಳಿ ಸಂಗೀತ ವಿದ್ಯೆ ಮುಂದುವರಿಸಿದರು. ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದರು.
1954ರಲ್ಲಿ ಮೈಸೂರು ಆಕಾಶವಾಣಿ ಕೈ ಬೀಸಿ ಕರೆಯಿತು. ನಿಲಯ ಕಲಾವಿದರಾದರು. ಪ್ರಥಮ ದರ್ಜೆ ಆಕಾಶವಾಣಿ ಕಲಾವಿದರಾದರು. ಹಿರಿಯ ಸಂಯೋಜಕರಾಗಿ ಮನ್ನಣೆ ಪಡೆದರು. ಆಕಾಶವಾಣಿ ನಿರ್ಮಾಪಕರಾಗಿ, ನಿರ್ದೇಶಕರಾಗಿ 1989ರಲ್ಲಿ ನಿವೃತ್ತರಾದರು.
ಕವಿ ನಿಸಾರ್ ಅಹಮದ್ ಅವರ ಚೊಚ್ಚಲ ದ್ವನಿಸುರುಳಿ `ನಿತ್ಯೋತ್ಸವ'ಕ್ಕೆ ನಾರಾಯಣ್ ಸಂಗೀತ ಸಂಯೋಜನೆ ಮಾಡಿದರು. ಜನ ಮುಗಿಬಿದ್ದು ಕ್ಯಾಸೆಟ್ ಕೊಂಡರು. ಅದೊಂದು ಕ್ರಾಂತಿಯೇ ಆಯಿತು. ಇದರಿಂದ ಹಲವು ದ್ವನಿಸುರುಳಿ ಸಂಸ್ಥೆಗಳು ಜನ್ಮತಾಳಿದವು.
`ರಮಣಾಂಜಲಿ' ನಾರಾಯಣ ಅವರ ಇನ್ನೊಂದು ಪ್ರಸಿದ್ಧ ದ್ವನಿಸುರುಳಿ. ರಮಣಮಹರ್ಷಿಗಳ ಸಾಹಿತ್ಯಕ್ಕೆ ಲಘುಸಂಗಿತದ ಲೇಪಹಚ್ಚಿ ಉಣಬಡಿಸಿದರು. ರಮಣಮಹರ್ಷಿಗಳ ಹಾಡುಗಳು ನಾರಾಯಣರನ್ನು ಹಲವು ದೇಶಗಳಿಗೆ ಕೊಂಡೊಯ್ದವು. ಪುರಂದರ ದಾಸರ ಪದಗಳಿಗೆ ಸಂಗೀತ ನೀಡಿರುವ ನಾರಾಯಣರು `ಕಲ್ಲು ಸಕ್ಕರೆ ಕೊಳ್ಳಿರೊ' ಎಂಬ ಹೆಸರಿನ ಕ್ಯಾಸೆಟ್ ಹೊರತಂದಿದ್ದಾರೆ. ಇದರಲ್ಲಿ ವಿದ್ವಾನ್ ವಿದ್ಯಾಭೂಷಣ್ ಹಾಡಿದ್ದಾರೆ. `ಅಪೂರ್ವ ಮಿಲನ' ನಾರಾಯಣರ ಇನ್ನೊಂದು ದ್ವನಿಸುರುಳಿ.
ನಾರಾಯಣ್ ಅವರಿಗೆ ಅಪಾರ ಗೌರವ ಪ್ರಶಸ್ತಿಗಳು ಅರಸಿ ಬಂದಿವೆ. ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ ಟಿ. ಚೌಡಯ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂತ ಶಿಶುನಾಳ ಶರೀಫ ಪ್ರಶಸ್ತಿ ಮುಂತಾದವು ನಾರಾಯಣರ ಮುಡಿಗೇರಿವೆ. ಹಾಸನದಲ್ಲಿ ನಡೆದ ಐದನೇ ರಾಜ್ಯ ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ನಾರಾಯಣರು ಬೆಂಗಳೂರು ವಿಜಯನಗರದ ಆರ್.ಪಿ.ಸಿ ಲೇಔನ್ನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ತಮ್ಮ 73 ವರ್ಷ ಜೀವಿತಾವಧಿಯಲ್ಲಿ ಸುಮಾರು 60 ವರ್ಷಗಳ ಕಾಲ ಸಂಗೀತ ಸೇವೆ ಮಾಡಿದ್ದಾರೆ. ಮೊನ್ನೆ ತನಕವೂ ಅವರು ರೆಕಾರ್ಡಿಂಗ್ ಒತ್ತಡದಲ್ಲಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಿರಿಯ ಮಗಳು ಚಂದನ ಭರತನಾಟ್ಯ ಕಲಾವಿದೆ ಹಾಗೂ ತಂಜಾವೂರು ಶೈಲಿಯ ಚಿತ್ರಕಲಾವಿದೆ. ಹಿರಿಯ ಮಗಳು ಮಂಜುಳ ಸಂಗೀತ ಕಲಾವಿದೆ. ಪತ್ನಿ ಕಾಂತ ಕಥಕ್ ನೃತ್ಯಕಲಾವಿದೆ. ತಮ್ಮ ಕೇಶವ ವಯೋಲಿನ್ ಕಲಾವಿದರು.
ಪರಂಪರೆಯ ಕೊಂಡಿ ಇನ್ನಿಲ್ಲ: ಎಚ್.ಆರ್. ಲೀಲಾವತಿ
`ನಾರಾಯಣರ ಸಾವಿನ ಸುದ್ದಿ ನನಗೆ ತೀವ್ರ ವ್ಯಥೆಯುಂಟುಮಾಡಿದೆ. ನಾವಿಬ್ಬರು ಒಟ್ಟಿಗೆ ಹಾಡಿದ ಘಳಿಗೆಗಳು ಇನ್ನೂ ಹಚ್ಚ ಹಸಿರಾಗಿವೆ. ಗಾಂಧಿಯ ಹಾಡುಗಳನ್ನು ಒಟ್ಟಿಗೆ ಹಾಡುತ್ತಿದ್ದಾಗ ದೇಶಭಕ್ತಿ ಹೊರಹೊಮ್ಮುತ್ತಿತ್ತು. ನಾರಾಯಣರು ಸುಗಮ ಸಂಗೀತದ ಪರಂಪರೆಯ ಪ್ರತಿಭೆ. ಅವರ ಸಾವು ತುಂಬಲಾಗದ ನಷ್ಟ.' ಎನ್ನುತ್ತಾರೆ ಹಿರಿಯ ಸುಗಮ ಸಂಗೀತ ಕಲಾವಿದೆ ಎಚ್.ಆರ್. ಲೀಲಾವತಿ.
ಪಿ. ಕಾಳಿಂಗರಾಯರ ನಂತರ ಕನ್ನಡ ಸುಗಮ ಸಂಗಿತಕ್ಕೆ ಹೊಸ ರೂಪಕೊಟ್ಟವರು ಎಚ್.ಕೆ. ನಾರಾಯಣ, ಎಚ್.ಆರ್. ಲೀಲಾವತಿ ಮತ್ತು ಪದ್ಮಚರಣ್. ಈ ಮೂವರು ಕಲಾವಿದರು ಸುಗಮ ಸಂಗೀತದ ತ್ರಿಮೂರ್ತಿಗಳು ಎಂದೇ ಖ್ಯಾತರಾಗಿದ್ದರು. 1950ರಿಂದ ಸುಮಾರು ಐದು ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟರು.
ಲೀಲಾವತಿ ನಾರಾಯಣರ ಜತೆಗಿನ ಆಕಾಶವಾಣಿಯ ನೆನಪುಗಳನ್ನು ಬಿಚ್ಚಿಟ್ಟರು. `ಅಕ್ಕ ಮಹದೇವಿ ನೃತ್ಯರೂಪಕದಲ್ಲಿ ಒಟ್ಟಿಗೆ ಹಾಡಿದೆವು. ನಮ್ಮಿಬ್ಬರಿಗೂ ಆಕಾಶವಾಣಿಯೇ ವೇದಿಕೆಯಾಗಿತ್ತು. ಅವರು 1950ರ ತನಕ ಮೈಸೂರಿನಲ್ಲಿಯೇ ಇದ್ದರು. ಅಲ್ಲಿಯತನಕ ಪದ್ಮಾಚರಣ್ ಸಂಯೋಜಿಸಿದ ಗೀತೆಗಳನ್ನು ಹಾಡುತ್ತಿದ್ದರು. ಬೆಂಗಳೂರಿಗೆ ತೆರಳಿದ ಮೇಲೆ ಸ್ವತಂತ್ರ ಸಂಯೋಜಕರಾದರು. ಹೆಚ್ಚು ವಚನ ದೇವರನಾಮಗಳಿಗೆ ಸಂಗೀತ ಸಂಯೋಜನೆ ಮಾಡಿದ ಖ್ಯಾತಿ ಅವರದು' ಎಂದರು.
No comments:
Post a Comment