
ಮೈಸೂರಿನಲ್ಲಿ ಸುಗಮ ಸಂಗೀತದ ಬೇರು
ಕನ್ನಡ ಸುಗಮ ಸಂಗೀತ ಪರಂಪರೆಯ ಮೂಲ ಬೇರು ಮೈಸೂರಿನಲ್ಲಿದೆ.
ಅವರು ಮಾಧುರ್ಯಕ್ಕೆ ಇನ್ನೊಂದು ಹೆಸರು. ಪಿ. ಕಾಳಿಂಗರಾಯರಿಂದ ಆರಂಭವಾದ ಲಘು ಸಂಗೀತ ಪರಿಕಲ್ಪನೆಗೆ ಹೊಸ ರೂಪ ಕೊಟ್ಟವರು. ಸಂಗೀತದಲ್ಲಿ ಸಾಹಿತ್ಯವನ್ನೇ ಪ್ರಧಾನ ಮಾಡಿ ಹಾಡಿದವರು. ಶಾಸ್ತ್ರೀಯ ಸಂಗೀತದ ಹಿನ್ನೆಲೆಯಿಂದ ಬಂದು ಲಘು ಸಂಗೀತಕ್ಕೆ ಒಂದು ಸ್ಥಾನ ಕೊಟ್ಟವರು. ಆಕಾಶವಾಣಿಯ ಮೂಲಕ ಮನೆ ಮಾತಾದವರು. ದಿವಂಗತ ಎಚ್.ಕೆ. ನಾರಾಯಣರ ಸಮಕಾಲೀನರು. ಅವರ ಕ್ಯಾಸೆಟ್ ಕ್ರಾಂತಿಯಲ್ಲಿ ಪಾಲ್ಗೊಂಡವರು.
ಅವರು ಎಚ್.ಆರ್. ಲೀಲಾವತಿ. ಸುಗಮ ಸಂಗೀತ ಸಾಮ್ರಾಜ್ಞೆ. ಅವತ್ತಿನ ಸುಗಮ ಸಂಗೀತ ತ್ರಿಮೂತ್ರಿಗಳಲ್ಲಿ (ಪದ್ಮಾಚರಣ್, ಎಚ್.ಕೆ. ನಾರಾಯಣ್) ಲೀಲಾವತಿ ಕೂಡ ಒಬ್ಬರು. ಅಸಂಖ್ಯಾತ ಕವಿಗಳ ಭಾವಗೀತೆಗೆ ದನಿಯಾದವರು. ಜೊತೆಗೆ ಎಚ್.ಆರ್. ಲೀಲಾವತಿ ಸ್ವತಃ ಕವಿಗಳೂ ಹೌದು.
ಲೀಲಾವತಿ ಸಂಗೀತ ಪರಿಸರದಲ್ಲೇ ಹುಟ್ಟಿ ಬೆಳೆದವರು. ತಾಯಿ ಜಯಮ್ಮ ಅವರ ಮೊದಲ ಗುರು. ತಂದೆ ಅಠಾಣ ರಾಮಣ್ಣ(ಹಾಸನ ರಾಮಣ್ಣ). ಕರ್ನಾಟಕ ಶಾಸ್ತ್ರಿಯ ಸಂಗೀತದ ಭದ್ರ ಬುನಾದಿಯ ಮೇಲೆ ಭಾವಗೀತೆಗಳನ್ನು ಹಾಡಿ ವಿಖ್ಯಾತಿಯಾದರು.
ಎಚ್.ಆರ್. ಲೀಲಾವತಿ ಅವರು ತಮ್ಮ ಕಲಿಕೆಯ ಹಾದಿಯಲ್ಲಿ ಹಲವು ಮೈಲುಗಲ್ಲುಗಳನ್ನು ಧಾಟಿದ್ದಾರೆ. ಶಾಸ್ತ್ರೀಯ ಸಂಗೀತ ಹಾಡುತ್ತಿದ್ದ ಅವರು ಪದ್ಮಾಚರಣ್ ಮಾರ್ಗದರ್ಶನದದಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡಿದರು. ಜ್ಞಾನ ಪ್ರಕಾಶ್ ಘೋಶ್, ದುಬೇನ್ ಶರ್ಮಾ ಅವರಿದಂದಲೂ ಲೀಲಾವತಿ ತಮ್ಮ ಸುಸ್ವರ ಜ್ಞಾನವನ್ನು ಹಿಮ್ಮಡಿಗೊಳಿಸಿಕೊಂಡರು.
ಕನ್ನಡದ ಪ್ರಥಮ ಮಹಿಳಾ ಸಂಗೀತ ಸಂಯೋಜಕಿಯಾಗಿ ತಮ್ಮ ಸಾಮರ್ಥ್ಯ ತೋರಿಸಿರುವ ಲೀಲಾವತಿ ಅವರು ಸಾಹಿತ್ಯವನ್ನು ನೇರ ಹಾಗೂ ಸರಳವಾಗಿ ಕೇಳುಗರ ಮನಮುಟ್ಟುವಂತೆ ತಲುಪಿಸುವಲ್ಲಿ ನಿಷ್ಣಾತರು. ಅವರ ಗಾಯನ ಹಾಗೂ ಸ್ವರ ಸಂಯೋಜನೆ ವೈಶಿಷ್ಟ್ಯತೆಯಿಂದ ಕೂಡಿದ್ದು ಯಾರು ಬೇಕಾದರೂ ಇದು ಲೀಲಾವತಿ ಅವರ ಗಾಯನ ಎಂದು ಗುರುತಿಸಬಹುದು. ಕವಿಯ ಭಾವನೆಗಳಿಗೆ ನಿರಾಶೆಯಾಗದಂತೆ ಅದರ ಅರ್ಥಕ್ಕೆ ಸ್ವರ ಕಟ್ಟುವಲ್ಲಿ ಅವರು ಎತ್ತಿದ ಕೈ. ಭಾವನಾತ್ಮಕ ತೀವ್ರತೆ ಲೀಲಾವತಿಯವರ ಗಾಯನದಲ್ಲಿರುವುದು ವಿಶೇಷ.
ಆಕಾಶವಾಣಿಯಲ್ಲಿ ಹಿರಿಯ ಕಲಾವಿದರಾಗಿದ್ದ ಪದ್ಮಾಚರಣ್ ಅವರ ನೂರಾರು ಸಂಯೋಜನೆಗಳಿಗೆ ಲೀಲಾವತಿ ದನಿಯಾಗಿದ್ದಾರೆ. ಅಡಿಗರ `ನಡೆದು ಬಂದ ದಾರಿಯ ಕಡೆಗೆ' ಕುವೆಂಪು ಅವರ `ಅಂತರತಮ ನೀಗುರು' ಗೀತೆಗಳನ್ನು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ನೃತ್ಯರೂಪಕಗಳಿಗೂ ಎಚ್.ಆರ್. ಲೀಲಾವತಿ ಹಾಡಿದ್ದಾರೆ. `ಅಕ್ಕ ಮಹಾದೇವಿ' ರೂಪಕದಲ್ಲಿ ಎಚ್.ಕೆ. ನಾರಾಯಣ್ ಜೊತೆ ಹಾಡಿದ್ದರು. ವಚನ, ದೇವರ ನಾಮ ಹಾಗೂ ಚಲನಚಿತ್ರಗಳಿಗೂ ಹಾಡಿದ್ದಾರೆ.
ಲೀಲಾವತಿ ಅವರ ಪತಿ ಎಸ್.ಜಿ. ರಘುರಾಮ್ ಕೂಡ ಗಾಯಕರು. ಲೀಲಾವತಿಯವರ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ರಘುರಾಮ್ ಹಾಡುತ್ತಾರೆ. ಅಲ್ಲದೆ ಪತ್ನಿ ರಾಗ ಸಂಯೋಜನೆಯ ಹಲವು ಧ್ವನಿಸುರುಳಿ ಹಾಗೂ ಸಿಡಿಗಳಲ್ಲಿ ಹಾಡಿದ್ದಾರೆ.
ಎಚ್.ಆರ್. ಲೀಲಾವತಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಸುಗಮ ಸಂಗೀತ ಪ್ರಗತಿಗೆ ಹಲವು ದಾಖಲಿತ ಕೆಲಸ ಮಾಡಿದ್ದಾರೆ.
ನಾಡಗೀತೆ ಮತ್ತು ಎಚ್.ಆರ್. ಲೀಲಾವತಿ: ಕುವೆಂಪು ಅವರ ನಾಡಗೀತೆ `ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ರಾಗ ಸಂಯೋಜಿಸಿ ಮೊದಲು ಹಾಡಿದ ಖ್ಯಾತಿ ಎಚ್.ಆರ್. ಲೀಲಾವತಿ ಅವರಗೆ ಸಲ್ಲಬೇಕು. ಇತ್ತಿಚೆಗೆ ನಾಡಗೀತೆಯ ಕುರಿತಂತೆ ವಿವಾದ ಹುಟ್ಟಿಕೊಂಡಿತ್ತು. ವಿವಾದದ ಸಂದರ್ಭದಲ್ಲಿ ಎಚ್.ಆರ್. ಲೀಲಾವತಿ ಎಲ್ಲರೂ ಒಪ್ಪುವಂತಹ ಮಾತುಗಳನ್ನಾಡಿದ್ದರು. `ನಾನೇ ಮೊದಲು ನಾಡಗೀತೆಗೆ ರಾಗ ಸಂಯೋಜಸಿದ್ದರೂ ಕೂಡ ಮೈಸೂರು ಅನಂತ ಸ್ವಾಮಿ ಅವರ ಸಂಯೋಜನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಆದ್ದರಿಂದ ಅವರ ಸಂಯೋಜನೆಯೇ ಕಡ್ಡಾಯವಾಗಿಲಿ' ಎಂಬ ವಿದ್ವತ್ ಪೂರ್ಣ ಮಾತುಗಳನ್ನು ಇಲ್ಲಿ ಸ್ಮರಸಬಹುದು. ಗೀತೆಯ ಸಾಹಿತ್ಯ ಮತ್ತು ಯಾರ ಸಂಯೋಜನೆಯ ಗೀತೆಯನ್ನು ಹಾಡಬೇಕು ಎಂಬ ಕುರಿತಂತೆ ಇನ್ನೂ ವಿವಾದ ಇದ್ದೇ ಇದೆ.
ಲೀಲಾವತಿ ಅವರಿಗೆ ರಂಗಭೂಮಿಯ ಮೇಲೆ ಅತೀವ ಪ್ರೀತಿ ಇದೆ. ಮೈಸೂರಿನಲ್ಲಿ ನಡೆಯುವ ರಂಗಭೂಮಿ ಚಟುವಟಿಕೆಯಲ್ಲಿ ಅವರು ಉತ್ಸಾಹದಿಂದ ಭಾಗವಹಿಸುತ್ತಾರೆ. ಹಲವು ನಾಟಕಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಎಚ್.ಆರ್. ಲೀಲಾವತಿ ಅವರ ಸಂಗೀತ ಸೇವೆಗೆ ಅಪಾರ ಗೌರವ ಪ್ರಶಸ್ತಿಗಳು ಸಂದಿವೆ. ಹಲವು ಸಂಗೀತ ಸಮ್ಮೇಳನಗಳಲ್ಲಿ ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ.
ಮೈಸೂರಿನ ಕುವೆಂಪು ನಗರದ ತಮ್ಮ ನಿವಾಸದಲ್ಲಿ ಸುಗಮ ಸಂಗೀತ ಅಕಾಡೆಮಿ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಯುವ ಪ್ರತಿಭೆಗಳಿಗೆ ಸಂಗೀತ ತರಬೇತಿ ನೀಡುವಲ್ಲಿ ಅವರು ಕಾರ್ಯನಿರತರಾಗಿದ್ದಾ.
No comments:
Post a Comment