
'ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ'
ಎಚ್.ಕೆ. ನಾರಾಯಣರ ಅಂತರಾಳ
ಅದು 1954ನೇ ಇಸವಿ. `ನಾರಾಯಣ' ನಿಗೆ ಆಗತಾನೆ ಎಸ್ಎಸ್ಎಲ್ಸಿ ಮುಗಿದಿತ್ತು. ಆಗ ಆತನಿಗೆ 14 ವರ್ಷ. ಕಾಲೇಜು ಕನಸು ಕಣ್ಣಿನಲ್ಲಿ ಕಟ್ಟಿರುವಾಗಲೇ `ಆಕಾಶವಾಣಿ' ಕೈ ಬೀಸಿ ಕರೆಯಿತು. ಸಣ್ಣ ವಯಸ್ಸಿನಲ್ಲೇ ದೊಡ್ಡ ಜವಾಬ್ದಾರಿ ನಿರ್ವಹಣೆ. ಆ ಹುಡುಗ ನಡೆದ ಹಾದಿಯಲ್ಲಿ ಹೆಜ್ಜೆಗಳೆಲ್ಲ ಮೈಲುಗಲ್ಲುಗಳಾದವು. ಈಗ ಆ ಹದಿನಾಲ್ಕು ಎಪ್ಪತ್ತೊಂದು ಆಗಿದೆ, ಆದರೆ ಉತ್ಸಾಹ ಮಾತ್ರ ಹಾಗೇ ಉಳಿದಿದೆ.
ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಕನ್ನಡ ಸುಗಮ ಸಂಗೀತ ಕ್ಷೇತ್ರದ ದಿಗ್ಗಜ ಎಚ್.ಕೆ. ನಾರಾಯಣ ಅವರು ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ, ಆಕಾಶವಾಣಿ ಸಂಗೀತ ನಿರ್ಮಾಪಕರಾಗಿ ಮಾಡಿರುವ ಐದು ದಶಕಗಳ ಸೇವೆ, ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಅಪೂರ್ವ ಅಧ್ಯಾಯವಾಗಿದೆ.
ಎಚ್.ಕೆ. ನಾರಾಯಣ ಅವರು ಹುಟ್ಟಿದ್ದು ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ. ತಂದೆ ಕೇಶವಯ್ಯ ಅವರಿಂದ ಮೂಲ ಸ್ವರಗಳ ಪಾಠ. ಮೈಸೂರಿಗೆ ಬಂದ ನಂತರ ವಿದ್ವಾಂಸ ಆರ್.ಕೆ. ಶ್ರೀಕಂಠನ್ ಅವರ ಬಳಿ ಶಿಷ್ಯ ವೃತ್ತಿ. ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ. ಮೈಸೂರು ಆಕಾಶವಾಣಿಯಲ್ಲಿ ನಿಲಯ ಕಲಾವಿದ. ನಂತರ ಪ್ರಥಮ ದರ್ಜೆ ಕಲಾವಿದರಾಗಿ ಮನ್ನಣೆ. ಅನಂತರ ಹಿರಿಯ ಸಂಯೋಜಕನಾಗಿ ಬಡ್ತಿ. ಶೋತೃವರ್ಗದಲ್ಲಿ `ಹೊನ್ನಿನ ಕಂಠಸಿರಿ' ಹೊತ್ತ ಗಾಯಕ ಎಂದೇ ಖ್ಯಾತಿ. ನೂರಾರು ಕವಿಗಳಿಗೆ ದನಿಯಾಗಿ ಕೇಳುಗರಿಗೆ ತಣಿಯುವಷ್ಟು ಸ್ವರದೌತಣ. 1989ರಲ್ಲಿ ಆಕಾಶವಾಣಿಯಿಂದ ನಿವೃತ್ತಿ.
ನಾರಾಯಣ ಅವರ ಕೊಡುಗೆಗೆ ಸಂದ ಗೌರವ, ಪುರಸ್ಕಾರಗಳು ಅಸಂಖ್ಯಾತ. ಕರ್ನಾಟಕ ನೃತ್ಯ, ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಸಂಗೀತ ರತ್ನ ಟಿ. ಚೌಡಯ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂತ ಶಿಶುನಾಳ ಷರೀಫ ಪ್ರಶಸ್ತಿ ಮುಂತಾದುವು ಅವರಿಗೆ ಸಂದಿವೆ.
ನಾರಾಯಣ ಅವರನ್ನು ಐದನೇ ರಾಜ್ಯ ಸುಗಮ ಸಂಗೀತ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ. ಆದರೆ ಫೆ. 10ರಂದು ನಡೆಯಬೇಕಿದ್ದ ಸಮ್ಮೇಳನವನ್ನು ಕಾವೇರಿ ಹೋರಾಟದ ಪ್ರಯುಕ್ತ ಮುಂದೂಡಲಾಗಿದೆ. ಅವರೊಂದಿಗೆ ಒಂದಷ್ಟು ಮಾತುಕತೆ:
* ನಿಮ್ಮದು ಶಾಸ್ತ್ರೀಯ ಸಂಗೀತದ ಹಿನ್ನೆಲೆ. ಸುಗಮ ಸಂಗೀತದಲ್ಲಿ ಆಸಕ್ತಿ ತಳೆಯಲು ಹೇಗೆ ಸಾಧ್ಯವಾಯಿತು?
ಅದಕ್ಕೆ ಆಕಾಶವಾಣಿಯೇ ಕಾರಣ, ಆಕಾಶವಾಣಿ ಕಲಾವಿದನಾಗಿ ಶಾಸ್ತ್ರೀಯ ಸಂಗೀತದ ನೆಲೆಯಲ್ಲಿಯೇ ಸುಗಮ ಸಂಗೀತದಲ್ಲಿ ತೊಡಗಿಸಿಕೊಂಡೆ. ನನ್ನ ಸಮಕಾಲೀನರು ನನ್ನನ್ನು `ಶಾಸ್ತ್ರೀಯ ಗಾಯಕ ಪೋಲಿ ಹಾಡುಗಳನ್ನು ಹಾಡುತ್ತಾನೆ' ಎಂದು ಛೇಡಿಸುತ್ತಿದ್ದರು. ರೇಡಿಯೋದಲ್ಲಿ ಕೇಳುಗರು ನನ್ನ ದನಿಯ ನಿರೀಕ್ಷೆ ಮಾಡುತ್ತಿದ್ದರು. ಆದ್ದರಿಂದ ಭಾವಗೀತೆಯಲ್ಲಿ ಆಸಕ್ತಿ ತಳೆದೆ.
* ಪದ್ಮಚರಣ್, ಎಚ್.ಆರ್. ಲೀಲಾವತಿ ಮತ್ತು ನೀವು ಒಂದು ಕಾಲದ ಸುಗಮ ಸಂಗೀತದ ತ್ರಿಮೂರ್ತಿಗಳಾಗಿದ್ದಿರಿ. ಅಂದು ಈ ಕ್ಷೇತ್ರ ಹೇಗಿತ್ತು? ಈಗ ಹೇಗಿದೆ?
ಅಂದು ಮಾಧುರ್ಯವಿತ್ತು. ಸುಂದರ ಸಾಹಿತ್ಯವಿತ್ತು. ಜನ ಅದನ್ನು ಅನುಭವಿಸುತ್ತಿದ್ದರು. ಇಂದು ಆ ಮಾಧುರ್ಯ ಮಾಯವಾಗಿದೆ. ನಾವೆಲ್ಲ ಸಾಹಿತ್ಯವನ್ನು ಅಧ್ಯಯನ ಮಾಡಿ ಕವಿಯ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ವರ ಸಂಯೋಜನೆ ಮಾಡುತ್ತಿದ್ದೆವು. ಈಗ ಆ ಸಂಸ್ಕೃತಿ ಇಲ್ಲ. ಟ್ಯೂನ್ ಆದ ಮೇಲೆ ಹಾಡು ಬರೆಯುತ್ತಾರೆ. ಕವಿಯ ಭಾವನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.
* ನೀವು ಅದೆಷ್ಟು ಕವಿಗಳ ಭಾವನೆಗಳಿಗೆ ದನಿಯಾಗಿದ್ದೀರಿ?
ಇಷ್ಟು ಹಾಡಿದ್ದೀನಿ, ಅಷ್ಟಕ್ಕೆ ಸಂಯೋಜನೆ ಮಾಡಿದ್ದೀನಿ ಎಂದು ಲೆಕ್ಕದಿಂದ ಗುರ್ತಿಸಿಕೊಳ್ಳಲು ನನಗಿಷ್ಟವಿಲ್ಲ. ಬೇಂದ್ರೆಯವರ ಹೆಚ್ಚು ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿ, ಹಾಡಿದ್ದೇನೆ. ಕುವೆಂಪು, ಅಡಿಗ, ಕೆಎಸ್ನ, ಪುತಿನ, ನಿಸಾರ್ ಅಹಮದ್, ಲಕ್ಷ್ಮೀನಾರಾಯಣ ಭಟ್ಟ ಮುಂತಾದವರ ಕವಿತೆಗಳಿಗೆ ಸಂಯೋಜನೆ ಮಾಡಿದ್ದೇನೆ..
* ನಿಮ್ಮ ಕಾಲದಲ್ಲಿ ಆರಂಭವಾದ ಕ್ಯಾಸೆಟ್ ಕ್ರಾಂತಿ ಮೂಲಕ ಮನೆಮನೆಗೆ ತಲುಪಿದಿರಿ, ಅದರ ಬಗ್ಗೆ ಹೇಳಿ?
ಅವತ್ತಿಗೆ ಅದು ಕ್ರಾಂತಿಯೇ ಆಗಿತ್ತು. ನಿಸಾರ್ ಅಹಮದ್ ಅವರ ಮೊದಲ ಧ್ವನಿಸುರುಳಿ `ನಿತ್ಯೋತ್ಸವ' ಬಂದಾಗ ಜನ ಮುಗಿಬಿದ್ದು ಕೊಂಡರು. ಆಡಿಯೋ ಸಂಸ್ಥೆಗಳು ಧ್ವನಿಸುರುಳಿ ತರಲು ಮುಂದೆ ಬಂದ ಕಾರಣ ಭಕ್ತಿಗೀತೆಗಳು, ವಚನಗಳು, ದೇವರ ನಾಮಗಳು ಮನೆ ಮನೆ ತಲುಪಿದವು.
* ಆಕಾಶವಾಣಿಗೆ ಹಲವು ದಶಕಗಳನ್ನು ಧಾರೆ ಎರೆದಿದ್ದೀರಿ, ನೀವು ಅಲ್ಲಿ ಕಂಡ ವಿಶೇಷವೇನು?
ಕಂಡಿದ್ದು ಅಪಾರ. ಸಣ್ಣವನಿದ್ದಾಗಲೇ ಆಕಾಶವಾಣಿ ಬದುಕು ನೀಡಿತು. ಉನ್ನತ ಶ್ರೇಣಿಯ ಸ್ವರ ಸಂಯೋಜಕನಾದೆ. ಶಾಸ್ತ್ರೀಯ, ಸುಗಮ ಸಂಗೀತದಲ್ಲಿ `ಎ' ಶ್ರೇಣಿ ಕಲಾವಿದನಾದೆ. ನಿರ್ಮಾಪಕನಾದೆ. ಎಲ್ಲಕ್ಕಿಂತ ಮಿಗಿಲಾಗಿ ಕೇಳುಗರ ಅಪಾರ ಪ್ರೀತಿ ಸಿಕ್ಕಿತು.
* ಒಬ್ಬ ಸಂಗೀತಗಾರನಾಗಿ ಬೇರೆ ಬೇರೆ ಜನ, ಭಾಷೆ, ಸಂಸ್ಕೃತಿ, ರಾಷ್ಟ್ರೀಯತೆಗಳನ್ನು ಕಂಡಿದ್ದೀರಿ. ಆ ಅನುಭವಗಳ ನೆನಪಿದೆಯೇ?
ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜಕನಾಗಿ ಇಂಗ್ಲೆಂಡ್, ರಷ್ಯಾ, ಸಿಂಗಪೂರ್, ಹಾಂಕಾಂಗ್, ಕೌಲಾಲಂಪುರ್, ಮಾರಿಷಸ್, ಶ್ರೀಲಂಕಾ, ನೇಪಾಳ ಮುಂತಾದ ದೇಶಗಳನ್ನು ಕಂಡಿದ್ದೇನೆ, ಆ ಜನಕ್ಕೆ ಭಾರತೀಯ ಸಂಗೀತ ಪ್ರಕಾರಗಳ ಮೇಲೆ ಆಕರ್ಷಣೆಯಿದೆ. ಸಾಹಿತ್ಯ ಅರ್ಥವಾಗದಿದ್ದರೂ ರಾಗ, ಲಯ, ತಾಳಗಳಿಗೆ ರೋಮಾಂಚನಗೊಳ್ಳುತ್ತಾರೆ. ಅಲ್ಲಿ ಒಂದು ಶಿಸ್ತಿದೆ. ಆ ಶಿಸ್ತು ಇಲ್ಲಿ ಹುಡುಕಿದರೂ ಸಿಗುವುದಿಲ್ಲ.
* ತಮ್ಮ ಕೌಟುಂಬಿಕ ಬದುಕಿನ ಬಗ್ಗೆ ಹೇಳಿ?
ನನ್ನ ಮಗಳು ಚಂದು ಭರತ ನಾಟ್ಯ ಕಲಾವಿದೆ, ತಂಜಾವೂರು ಶೈಲಿಯಲ್ಲಿ ಚಿತ್ರ ಕಲಾವಿದೆ. ಹಿರಿಯ ಮಗಳು ಮಂಜು, ವಾದ್ಯ ಸಂಗೀತದಲ್ಲಿ ಅವಳಿಗೆ ಆಸಕ್ತಿ, ಪತ್ನಿ ಕಾಂತ ಕಥಕ್ ನೃತ್ಯಗಾರ್ತಿ, ತಮ್ಮ ಕೇಶವ ನನ್ನ ಕಚೇರಿಗಳಿಗೆ ಪಿಟೀಲು ನುಡಿಸುತ್ತಾರೆ.
* ಯಾವಾಗಲೂ ನೆನಪಾಗುವ ಒಂದು ಗಳಿಗೆ ಯಾವುದು?
ಮೊದಲ ಸುಗಮ ಸಂಗೀತ ಸಮ್ಮೇಳನ ಮಂಡ್ಯದಲ್ಲಿ ನಡೆಯಿತು. ಖ್ಯಾತನಾಮ ಕವಿಗಳು, ಗಾಯಕರು ಭಾಗವಹಿಸಿದ್ದರು, ಕವಿ ಕೆಎಸ್ನ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಇಂದು ಆರ್ಕೆಸ್ಟ್ರಾಗಳ ಆರ್ಭಟ ಜಾಸ್ತಿಯಾಗಿದೆ. ಇತ್ತೀಚಿನ ಗಾಯಕರ ಹಾಡುಗಳು ರುಚಿಸುತ್ತಿಲ್ಲ. ಆದರೆ ಇತ್ತೀಚೆಗೆ ಎಚ್.ಕೆ. ನಾರಾಯಣ ಅವರ `ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ' ಹಾಡು ಕೇಳಿ ತುಂಬಾ ಸಂತೋಷವಾಯಿತು' ಎಂದರು. ಅದು ಮರೆಯಲಾಗದ ಗಳಿಗೆ.
No comments:
Post a Comment