Saturday, June 20, 2009

ಮುರಳಿ ಶೃಂಗೇರಿ



ಬಿದಿರಿನ ಕೊಳಲಿನ ಒಳಗೆ ಮುರಳಿ ಉಸಿರು


ಅದು ಮೊದಲ ಕೊಳಲು ತರಗತಿ. ಬಿದಿರಿನ ಬಾನ್ಸುರಿಯೊಳಗೆ ಸಪ್ತ ಸ್ವರಗಳನ್ನು ತುಂಬುವ ಪಾಠವನ್ನು ಶಿಷ್ಯನಿಗೆ ಗುರುಗಳು ಹೇಳಿಕೊಟ್ಟರು. ಶಿಷ್ಯನಿಗೆ ರೋಮಾಂಚನ. ಅವರ ಹಲವು ವರ್ಷಗಳ ಕನಸಿಗೆ ಅಂದು ಸ್ವರೂಪ ಸಿಕ್ಕಿತ್ತು. ರಾತ್ರಿಯಿಡೀ ಅಭ್ಯಾಸ ನಡೆಯಿತು. ಮುಂಜಾನೆ ತರಗತಿಯಲ್ಲಿ ಗುರುಗಳ ಮುಂದೆ `ಯಮನ್‌' ರಾಗ ಆಲಾಪ ಮಾಡಿ ತೋರಿಸಿದರು. ಗುರುಗಳು ಆನಂದದಿಂದ ನಿನ್ನ ನಾಡಿಯಲ್ಲಿ ಸಂಗೀತ ಸಂಚರಿಸುತ್ತಿದೆ ಎಂದು ಆಶೀರ್ವದಿಸಿದರು. ಅಲ್ಲಿಂದ ಮುಂದೆ ಕೊಳಲು ಅವರ ಆಪ್ತ ಸಂಗಾತಿಯಾಯಿತು.
ಅವರು ಮುರಳಿ ಶೃಂಗೇರಿ. ಹಣೆಯ ಮೇಲೆ ಉದ್ದನೆಯ ಕುಂಕುಮ. ಜಟಾಧಾರಿ. ಸದಾ ಜುಬ್ಬದಾರಿ. ಬೆನ್ನಿನ ಹಿಂದೆ ಕೊಳಲುಗಳ ಮೂಟೆ. ನೇರ ನಡೆ. ದಿಟ್ಟ ನುಡಿ. ಮತ್ತೆ ಮತ್ತೆ ನೋಡಬೇಕೆನ್ನುವ ಮುಖಚರ್ಯೆ. ಅವರು ರಸ್ತೆಯ ಮೇಲೆ ನಡೆದು ಹೋಗುತ್ತಿದ್ದರೆ ಅಕ್ಕ ಪಕ್ಕದಲ್ಲಿ ವಿಶೇಷ ಆಕರ್ಷಣೆ. ಆ ನಡೆಗೆಯಲ್ಲೂ ಒಂದು ರಿದಮ್‌. ಮಾತಿಗೆ ಕೂತರೆ ಉರುಳಿಕಾಳು ಉದುರುತ್ತವೆ. ಮಂದರದಿಂದ ಬರುವ ಮಾತಿನಲ್ಲಿ ಎದ್ದು ಕಾಣುವ ಮುಗ್ಧತೆ. ಧ್ವನಿಯಲ್ಲಿ ಮನ ಸೆಳೆಯುವ ಇಂಪು. ಮಾತಿನ ಒಂದೊಂದು ಪದವೂ ಮಹತ್ವ. ಒಮ್ಮೊಮ್ಮೆ ಮಗುವಿನಂತಾಗಿಬಿಡುವ ವ್ಯಕ್ತಿತ್ವ. ಇನ್ನೊಮ್ಮೆ ಘನ ಗಂಭೀರ ಬುದ್ಧಿಜೀವಿ... ಅಂತರ್ಮುಖಿ....ಒಟ್ಟಾರೆ ಅವರೊಬ್ಬ ಅಲೆಮಾರಿ!
ಮುರಳಿ ಶೃಂಗೇರಿ ಕನ್ನಡ ರಂಗಭೂಮಿಯ ಅಪರೂಪದ ಕೊಳಲು ವಾದಕ. ಅವರು ಕೊಳಲು ನುಡಿಸುವ ನಾಟಕಗಳಲ್ಲಿ ನಿಜವಾದ ನಾಯಕ ಅವರೇ. ಅವರ ಕೊಳಲಿನ ಮಾಧುರ್ಯದ ಜತೆ ಅಭಿನಯಿಸುವ ನಟ ನಿಜವಾಗಿ ಭಾವುಕನಾಗಲೇಬೇಕು. ಮೌನದಲ್ಲಿ ಆ ಆಲಾಪ ಕಿಚ್ಚು ಹೊತ್ತಿಸುತ್ತದೆ. ಬೆಳಕಿನೊಂದಿಗೆ ಅವರು ಮಾತಿಗಿಳಿಯುತ್ತಾರೆ. ಅಂತರಗಳ ನಡುವೆ ಆ ಗಾನ ಹುಸಿರು ಕಟ್ಟಿಸುತ್ತದೆ. ರಂಗದ ಹಿಂದಿನಿಂದ ಅವರು ನಟನೆಗೆ ಜೀವ ತುಂಬುತ್ತಾರೆ. ಕೊಳಲು ನುಡುಸುತ್ತಾ ಆಪ್ತತೆ ಸೃಷ್ಟಿಸುತ್ತಾರೆ. ರಂಗಮಂದಿದ ಒಳಗೆ ಮುರಳಿ ಕರತಾಡನ ಉಂಟುಮಾಡುತ್ತಾರೆ. ಸಂದರ್ಭ ಸನ್ನಿವೇಶಗಳಿಗೆ ಹೊಂದುವ ರಾಗಾಲಾಪ ಮಾಡುತ್ತಾ ಒಟ್ಟು ರಂಗಪ್ರಯೋಗವನ್ನು ಮೇಲೆತ್ತುವ ಸಾಮರ್ಥ್ಯ ಅವರಿಗಿದೆ.
ಮುರಳಿ ಶೃಂಗೇರಿ ಶಿಲ್ಪಿಯೂ ಹೌದು. ನಾಡಿನಲ್ಲಿರುವ ಬೆರಳೆಣಿಕೆಯಷ್ಟು ಶಿಲ್ಪಿಗಳಲ್ಲಿ ಇವರೂ ಒಬ್ಬರು. ಮೈಸೂರಿನ ಕಾವಾದಲ್ಲಿ ಶಿಲ್ಪಕಲೆ ಪದವೀದರ. 1993ರಲ್ಲಿ ಶಿಲ್ಪಕಲೆ ಕಲಿಯಲು ಮೈಸೂರಿಗೆ ಬಂದಾಗಲೇ ಅವರ ಕೊಳಲು ಕಲಿಯುವ ಕನಸು ಸಾಕಾರಗೊಂಡಿದ್ದು. ಚಿಕ್ಕಂದಿನಿಂದಲೂ ಕೊಳಲನ್ನು ಬಹಳ ಪ್ರೀತಿಸುತ್ತಿದ್ದರು. ಕೇಳ್ಮೆ ಇದ್ದೇ ಇತ್ತು. ಕೊಳಲಿಗೆ ಹೇಳಿಮಾಡಿಸಿದಂತೆ ಇರುವ ಮಲೆನಾಡಿನ ಬಿದಿರಿನಿಂದ ತಾವೇ ಕೊಳಲು ಮಾಡಿಕೊಂಡು ಸ್ವರ ಹುಟ್ಟಿಸುವ ಯತ್ನ ಮಾಡುತ್ತಿದ್ದರು. ಮೈಸೂರಿಗೆ ಬಂದ ಮೇಲೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೊಳಲು ಅಭ್ಯಾಸ ಮಾಡಿದರು. ದಿನೇಶ್‌ಚಂದ್ರ ಮಿಶ್ರ ಹಾಗೂ ಅವರ ಪುತ್ರ ರವಿಶಂಕರ್‌ ಮಿಶ್ರ ಗುರುಗಳು.
ಶಿಲ್ಪಿಯಾಗಿ ಮುರಳಿ ಹಲವು ಕೆಲಸ ಮಾಡಿದ್ದಾರೆ. ಕಾಸರಗೂಡಿನಲ್ಲಿರುವ 12 ಅಡಿ ಎತ್ತರದ ಸ್ವಾಮಿ ತಿಮ್ಮಯಾನಂದರ ಮೂರ್ತಿ ಇರುವ ಕೈ ಏಟಿನ ರುಚಿಯಿಂದ ರೂಪ ಪಡೆದಿದೆ. ಏಕಲವ್ಯ ನಾಟಕದಲ್ಲಿ ದ್ರೋಣಚಾರ್ಯ ಪಾತ್ರ ನಿರ್ವಹಿಸಿದ್ದ ಮುರಳಿ ತಮ್ಮ ಮೂರ್ತಿಯನ್ನು ತಾವೇ ಮಾಡಿಕೊಂಡಿದ್ದು ವಿಶೇಷ. ನಾಡಿನ ಹಲವು ಕಡೆಗಳಲ್ಲಿ ಮುರುಳಿ ಶಿಲ್ಪಕಲಾ ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಸದ್ಯಕ್ಕೆ ಮುರಳಿ ಶೃಂಗೇರಿ ಅವರ ವಾಸ ನಾಗಮಂಗಲದಲ್ಲಿ. ನಾಡಿನ ಖ್ಯಾತ ರಂಗಸಂಘಟನೆಯಾದ ನಾಗಮಂಗಲದ `ಕನ್ನಡ ಸಂಘ'ದಲ್ಲಿ ಮುರುಳಿ ದಶಕಗಳಿಂದಲೂ ಅವಿರತಾ ದುಡಿಯುತ್ತಾ ಬಂದಿದ್ದಾರೆ. ಕನ್ನಡ ಸಂಘದ ರಂಗಪ್ರಯೋಗ, ನಾಟಕೋತ್ಸವಗಳಲ್ಲಿ ಒಬ್ಬ ಪ್ರಮುಖ ಸಂಘಟಕನಾಗಿ ಕೆಲಸ ಮಾಡಿದ್ದಾರೆ. ಮುರಳಿ ಅವರ ಪ್ರತಿಭೆಗೆ ಕನ್ನಡ ಸಂಘ ಸೂಕ್ತ ವೇದಿಕೆ ಅಂದರೆ ತಪ್ಪಲ್ಲ. ಕನ್ನಡ ಸಂಘದ ಗೆಳೆಯರು, ಪಟ್ಟಣದ ಕಲಾಭಿಮಾನಿಗಳು ಅವರನ್ನು ಮನಸಾರೆ ಪ್ರೀತಿಸುತ್ತಾರೆ.
ಅವರ ಪ್ರತಿಭೆ ನಾಗಮಂಗಲಕ್ಕೆ ಮಾತ್ರ ಸೀಮಿತವಾಗಿಲ್ಲ. ಮೈಸೂರಿನ ರಂಗಾಯಣದಲ್ಲಿ ಆರಂಭದಿಂದಲೂ ತೊಡಗಿಸಿಕೊಂಡಿದ್ದಾರೆ. ಶಿಲ್ಪಿಯಾಗಿ ರಂಗ ಸಜ್ಜಿಕೆಯಲ್ಲಿ ಕ್ರಿಯಾಶೀಲರಾಗಿರುವ ಅವರು ರಂಗಾಯಣದ ಹಲವು ನಾಟಕಗಳಿಗೆ ರಂಗದ ಹಿಂದೆ ಕೆಲಸ ಮಾಡಿದ್ದಾರೆ. ಸಂಗೀತಕ್ಕೆ ತಮ್ಮ ಕೊಳಲನ್ನು ಜತೆಗೂಡಿಸಿದ್ದಾರೆ. ರಂಗಾಯಣದಲ್ಲೇ ಕಲಾವಿದನಾಗಿ ನೇಮಕಗೊಳ್ಳುವ ಎಲ್ಲಾ ಯೋಗ್ಯತೆಗಳಿದ್ದರೂ ನಿಂತ ನೀರಾಗಲು ಬಯಸದ ಅವರು ತಮ್ಮ ರಂಗಕಾರ್ಯಕ್ಕೆ ಎಂದೂ ವ್ಯಾಪ್ತಿ ವಿಧಿಸಿಕೊಳ್ಳಲಿಲ್ಲ.
ರಂಗಭೂಮಿಯ ಎಲ್ಲಾ ಅಂಗಗಳಲ್ಲೂ ಮುರಳಿ ಅವರ ಕೃಷಿ ನಡೆದಿದೆ. ನಟನಾಗಿ ಭರವಸೆ ಮೂಡಿಸಿದ್ದಾರೆ. ನಿರ್ದೇಶಕರಾಗಿ ಪ್ರಬದ್ಧತೆ ತೋರಿದ್ದಾರೆ. ವಿನ್ಯಾಸಕಾರರಾಗಿ ಕ್ರಿಯಾಶೀಲರಾಗಿದ್ದಾರೆ. ಸಂಗೀತ ಸಾಗರದೆಡೆಗೆ ಹೆಜ್ಜೆ ಇಕ್ಕಿದ್ದಾರೆ. ನೂರಾರು ನಾಟಕಗಳಿಗೆ ಕೊಳಲು ನುಡಿಸಿದ್ದಾರೆ. ಜೊತೆಗೆ ನಾಟಕಕಾರರಾಗಿಯೂ ಕಂಡಬಂದಿದ್ದಾರೆ. ಹಲವು ನಾಟಕಗಳನ್ನು ರಚನೆ ಮಾಡಿದ್ದಾರೆ. ಅವರ `ಬಧ್ರಬಾಹು' ನಾಟಕ ಹತ್ತಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. `ಪರಿಣಯ ಪ್ರಸಂಗ'ವೂ ರಂಗಕ್ಕೇರಿದೆ. ಮೋಕ್ಷ ಸಂಗೀತ, ರಾಣಿಯೂ ನಕ್ಕಳು ಮುಂತಾದ ಮಕ್ಕಳ ನಾಟಗಳನ್ನು ರಚಿಸಿದ್ದಾರೆ.
ಮುರಳಿ ಚಲನಚಿತ್ರಕ್ಕೂ ಹೋಗಿಬಂದವರು. ಪ್ರಶಸ್ತಿ ವಿಜೇತ `ಭೂಮಿಗೀತ' ಚಿತ್ರದಲ್ಲಿ ವಿನ್ಯಾಸಗಾರರಾಗಿ ಕೆಲಸ ಮಾಡಿದ್ದಾರೆ. ಇಟಲಿ ಚಲನಚಿತ್ರವೊಂದಕ್ಕೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಹಲವು ಸಾಕ್ಷ್ಯಚಿತ್ರಗಳಲ್ಲೂ ಅವರು ಕೆಲಸ ಮಾಡಿದ್ದಾರೆ.
ಇಷ್ಟೆಲ್ಲಾ ಪ್ರತಿಭೆಗಳನ್ನು ತುಂಬಿಕೊಂಡಿರುವ ಮುರಳಿ ಶೃಂಗೇರಿ ನಿಜಕ್ಕೂ ನಡೆದಾಡುವ ವಿಶ್ವಕೋಶ. ರಂಗಕಾರ್ಯದಲ್ಲಿ ಒಂದೂ ಘಳಿಗೆಯೂ ಬೇಸರಪಟ್ಟುಕೊಂಡವರಲ್ಲ. ಎಲ್ಲಾ ಸುಖಾದಿಗಳನ್ನು ತ್ಯಜಿಸಿ ಕಟ್ಟುಕಾರ್ಯದಲ್ಲಿ ತನ್ನನ್ನು ತಾನು ಕೊಟ್ಟುಕೊಂಡ ಒಬ್ಬ ತಪಸ್ವಿ. ಅವರು ರಂಗಭೂಮಿಗೆ ಮುತ್ತಿನಂಥ ಆಸ್ತಿ.ಙ

No comments:

Post a Comment