Tuesday, June 9, 2009

ಅವರ ಯಶಸ್ವಿಯ ಹಿಂದೆ ಪ್ರೇಮಾರ ತ್ಯಾಗವಿತ್ತು

ಅವರ ಯಶಸ್ವಿಯ ಹಿಂದೆ ಪ್ರೇಮಾರ ತ್ಯಾಗವಿತ್ತು

(ಪ್ರೇಮ ಕಾರಂತ ಇನ್ನಿಲ್ಲ)


ಬಿ.ವಿ. ಕಾರಂತರು ಸ್ವರ್ಗದಲ್ಲಿ ನಾಟಕದ ತಾಲೀಮು ಆರಂಭಿಸಿದ್ದಾರಂತೆ. ನಟರಾಗಿ ವೆಂಕಿ, ಲೋಕೇಶರು ಹೋದರು. ಹಾರ್ಮೋನಿಯಂ ಗೆ ನಾಗನಾಥ ಹೋದರು. ಮೇಕಪ್‌ಗೆ ನಾಣಿ ಹೋದರು. ಸ್ಟೇಜ್‌ ಮ್ಯಾನೇಜರ್‌ ಆಗಿ ಸಿಜಿಕೆ ಹೋದರು. ಈಗ ವಸ್ತ್ರ ವಿನ್ಯಾಸಕಿಯಾಗಿ ಪ್ರೇಮಾ ಕಾರಂತ ಹೋಗಿದ್ದಾರೆ.
ಹೌದು. ಪ್ರೇಮಾ ಕಾರಂತ ಇನ್ನಿಲ್ಲ. ಬಿ.ವಿ. ಕಾರಂತ ಹೋದ ಮೇಲೆ ಪ್ರೇಮಾರಿಗೆ ಒಂಟಿತನ ಕಾಡಿತ್ತು. ಕಾರಂತ ಇಲ್ಲದ ಬದುಕು ಅವರಿಗೆ ಬೇಕಿರಲಿಲ್ಲ. `ನಿನ್ನ ಗೆಳೆಯರೆಲ್ಲಾ ನಿನ್ನ ಜೊತೆ ಬರುತ್ತಿದ್ದಾರೆ, ನನ್ನನೇಕೆ ಮರೆತಿದ್ದೀಯ ಕಾರಂತ?' ಎಂದು ಸ್ವರ್ಗದಲ್ಲಿದ್ದ ಕಾರಂತರಲ್ಲಿ ಕೇಳಿಕೊಂಡಿದ್ದರು. ಆದರೂ ಅವರ ಜತೆಗಿನ ಅಮರ ನೆನಪುಗಳೊಂದಿಗೆ ದಿನ ಕಳೆಯುತ್ತಿದ್ದರು.
ನಾಟಕಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದವರು. ವೈಯಕ್ತಿಕ ಬದುಕನ್ನು ಬಲಿಕೊಟ್ಟವರು. ಮಕ್ಕಳಾದರೆ ಎಲ್ಲಿ ನಮ್ಮರಂಗಸಂಕ್ರಾಂತಿ ಮಂಕಾಗುತ್ತದೋ ಎಂದು ಮನೆ ಮಕ್ಕಳ ಸಂಸಾರಕ್ಕೆ ತಿಲಾಂಜಲಿ ಹಾಡಿದ್ದರು. ರಂಗಭೂಮಿಯನ್ನೇ ಮಕ್ಕಳೆಂದುಕೊಂಡವರು. ದೇಶಾದ್ಯಂತ ಹರಡಿರುವ ರಂಗ ಸಮೂಹವನ್ನು ಮಕ್ಕಳಂತೆ ಪ್ರೀತಿಸಿದವರು.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಹಿಡಿದು ಮೈಸೂರಿನ ರಂಗಾಯಣದ ವರೆಗೂ ಕಾರಂತರ ರಂಗ ಕಾಯಕಕ್ಕೆ ಪ್ರೇಮಾ ಸಾಥ್‌ ಕೊಟ್ಟರು. ಕಾರಂತರು ಹೋದಲ್ಲೆಲ್ಲಾ ಹೋದರು. ಪ್ರೀತಿಯನ್ನು ಕೊಟ್ಟು ತೆಗೆದುಕೊಳ್ಳುವ ಸಂಸಾರಿಕ ಗೂಡು ಅವರ ಕುಟುಂಬವಲ್ಲ. ನಾಟಕದ ಡೈಲಾಗ್‌ಗಳನ್ನು ಕೊಟ್ಟು ತೆಗೆದುಕೊಳ್ಳುವ ವೇದಿಕೆಯಾಗಿತ್ತು.

ಮೊನ್ನೆ ಆಸ್ಪತ್ರೆ ಮುಂದೆ ಶಿಷ್ಯರೆಲ್ಲರೂ ಸೇರಿದ್ದರು. ತಮ್ಮಜತೆಗಿನ ಒಡನಾಟವನ್ನು ಗುನುಗುನು ನೆನಪು ಮಾಡಿಕೊಳ್ಳುತ್ತಿದ್ದರು. ನಾಗಭರಣ, ಕಪ್ಪಣ್ಣ, ಜಯಶ್ರೀ, ಮಂಡ್ಯ ರಮೇಶ್‌ ಎಲ್ಲರ ನೆನಪಿನ ಬುತ್ತಿ ಬಿಚ್ಚಿಕೊಂಡಿತ್ತು.
ವೈದ್ಯರ ಕೈ ಬಿಟ್ಟಿದ್ದರು. ಎಲ್ಲವೂ ಮುಗಿದಿದೆ. ಕೃತಕ ಉಸಿರಾಟ ಯಂತ್ರ ತೆಗೆಯಬೇಕಷ್ಟೆ, ಎನ್ನುವಾಗ ತೆಗೆದುಬಿಡಿ ಎನ್ನುವ ಧೈರ್ಯ ಯಾರಿಗೂ ಇರಲಿಲ್ಲ. ಕೆಲವರು `ಇಂತಹ ಸಂದರ್ಭದಲ್ಲಿ ನನ್ನದೆಂಬ ಒಂದು ಕರುಳಿನ ಕುಡಿ ಇರಬೇಕು' ಎಂದುಕೊಳ್ಳುತ್ತಿದ್ದರು. ಆಶ್ಚರ್ಯ ಎನ್ನುವಂತೆ ನಿನ್ನೆ ರಾತ್ರಿ ಚೇತರಿಸಿಕೊಂಡಂತೆ ಕಂಡರು. ಆದರೆ ಅವರ ಚೇತರಿಕೆ ಬಹುಕ್ಷಣ ನಿಲ್ಲಲಿಲ್ಲ.
ಮನೆಮಠಕ್ಕೆ ಹೊಣೆಯಾರು?: ಮೂರು ಸಹಸ್ರ ಗ್ರಂಥಗಳು, ನೂರಾರು ಸಂಗೀತ ಉಪಕರಣಗಳು, ಕೆಸೆಟ್‌, ಸಿಡಿ, ವಸ್ತ್ರ, ಲೈಟ್ಸ್‌, ಗಿರಿನಗರದಲ್ಲಿ ಒಂದು ಮನೆ. ಇವಿಷ್ಟು ಕಾರಂತರ ಆಸ್ತಿ. ಕಾರಂತರು ಹೋದಮೇಲೆ ಪ್ರೇಮಾ ಕಾಪಾಡಿಕೊಂಡು ಬಂದರು. ಈಗ ಪ್ರೇಮಾ ಇಲ್ಲ. ಈಗ ಆಸ್ತಿ ನೋಡಿಕೊಳ್ಳುವವರಾರು ಎಂಬ ಪ್ರಶ್ನೆ ಸಹಜವಾಗಿ ಉದ್ಬವವಾಗಿದೆ.
ರಂಗವಲಯದ ಮಾತುಕತೆಯಂತೆ ಕಾರಂತರು ಸ್ಥಾಪಿಸಿದ `ಬೆನಕ' ತಂಡ ನೋಡಿಕೊಳ್ಳುತ್ತದೆ ಎಂಬ ಮಾತಿದೆ. ಬಿ.ಬಿ. ಕಾರಂತ ಟ್ರಸ್ಟ್‌ ನೋಡಿಕೊಳ್ಳುತ್ತದೆ ಎಂಬ ಇನ್ನೊಂದು ಮಾತಿದೆ. ಆದರೆ ಪ್ರೇಮಾರಿಗೆ ವೈಯಕ್ತಿಕವಾಗಿ ತಮ್ಮ ಆಸ್ತಿಯನ್ನು ಇವರಾರಿಗೂ ಕೊಡಲು ಇಷ್ಟವಿಲ್ಲ.
ಕಳೆದ ಆರು ತಿಂಗಳ ಹಿಂದೆ `ಉದಯವಾಣಿ'ಯೊಂದಿಗೆ ಮಾತನಾಡಿದ್ದ ಪ್ರೇಮಾ ತಮ್ಮ ಶಿಷ್ಯರ ಬಗ್ಗೆ ಅಸಮದಾನ ವ್ಯಕ್ತಪಡಿಸಿದ್ದರು. ನನ್ನ ನಂತರ ನನ್ನ ಮನೆ, ಮಠ ಅಧ್ಯಯನ ಕೇಂದ್ರವಾಗಬೇಕು. ಅದನ್ನು ಸರ್ಕಾರವೇ ತೆರೆಯಬೇಕು ಎಂದಿದ್ದರು.
ಬಿ.ವಿ. ಕಾರಂತ ಅಧ್ಯಯನ ಕೇಂದ್ರಕ್ಕಾಗಿ ಪ್ರೇಮಾ ಒಂಟಿಯಾಗಿ ಹೋರಾಡಿದ್ದರು. ವಿಧಾನಸೌಧದ ಮೆಟ್ಟಿಲು ಸವೆಸಿದ್ದರು. ಆದರೆ ಅವರ ಕನಸು ಕೈಗೂಡಲಿಲ್ಲ.
ಏನೇ ಆಗಲಿ. ರಂಗಭೂಮಿಗಾಗಿಯೇ ಹುಟ್ಟಿ, ರಂಗ ಕಾಯಕಕ್ಕಾಗಿಯೇ ಬದುಕಿದ ಕಾರಂತರ ಕುಟುಂಬ ಬದುಕನ್ನು ಅರಿಯುವ ವಿಶ್ವ ವಿದ್ಯಾಲಯವಾದರೂ ಕಡಿಮೆಯೇ.
ಪ್ರೆಮಾಕಾರಂತ ಪ್ರೆಂಚ್‌ನ `ರಶೋಮನ್‌' ನಾಟಕ ನಿರ್ದೇಶನಕ್ಕೆ ತಯಾರಿ ನಡೆಸಿದ್ದರು. ಆಗಲೇ ಮೊದಲ ರೀಡಿಂಗ್‌ ಆಗಿತ್ತು. ಅವರ ಈ ಆಸೆಯೂ ಕೈಗೂಡಲಿಲ್ಲ.
ಕಾರಂತರು ಪ್ರೇಮಾರನ್ನು ಭೇಟಿ ಮಾಡಿ ಕೈ ಹಿಡಿದಿದ್ದೇ ಒಂದು ಕುತೂಹಲ. ಅದನ್ನು ಮತ್ತೊಮ್ಮೆ ಹೇಳಬೇಕಾಗಿಲ್ಲ. ಆದರೆ ಬಿ.ವಿ. ಕಾರಂತರ ಅತಿದೊಡ್ಡ ಯಶಸ್ವಿಗೆ ಪ್ರೇಮಾರ ತ್ಯಾಗವೇ ಅತಿದೊಡ್ಡ ಕಾರಣ.

No comments:

Post a Comment