Saturday, June 20, 2009

ರಾಜು ಅನಂತಸ್ವಾಮಿ


ರಾಜು ಮತ್ತೊಮ್ಮೆ ಹುಟ್ಟಿ ಬರಲಿಲ್ಲ!


ಅದು ಮೈಸೂರಿನ ಅಪೊಲೋ ಆಸ್ಪತ್ರೆ. ಸಾವು ಬದುಕಿನ ನಡುವೆ ಹೋರಾಡಿದ ಜೀವವನ್ನು ಉಳಿಸಲಾಗದ ವೈದ್ಯರು ಕೈ ಚೆಲ್ಲಿದ್ದರು. ಮುಖದ ಮೇಲಿದ್ದ ಮಾಸ್ಕ್‌ಅನ್ನು ಹೊರ ತೆಗೆಯಲಾಗಿತ್ತು. ತೀವ್ರ ನಿಗಾ ಘಟಕದ ಯಂತ್ರಗಳ ಶಬ್ದ ನಿಂತು ಹೋಗಿತ್ತು. ಹೊರಗೆ ಕಾದು ಕುಳಿತವರ ಹೃದಯಗಳು ಉಮ್ಮಳಿಸುತ್ತಿದ್ದವು. `ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇನ್ನು ದೇವರಿಚ್ಛೆ. ಕೈಕಾಲು ತಣ್ಣಗಾಗಿವೆ. ಒಂದೆರೆಡು ಗಂಟೆ ಬದುಕಬಹುದಷ್ಟೆ.' ವೈದ್ಯರು ತಮ್ಮ ಕಡೆಯ ಉತ್ತರ ಕೊಟ್ಟಿದ್ದರು.
ಎರೆಡು ಗಂಟೆ ಕಳೆಯಿತು. ಅದ್ಯಾವ ಶಕ್ತಿ ಅವರ ಹತ್ತಿರ ಸಾವು ಸುಳಿಯದಂತೆ ತಪ್ಪಿಸಿತೋ ಗೊತ್ತಿಲ್ಲ. ಅವರ ಪ್ರಾಣಪಕ್ಷಿ ಹಾರಿ ಹೋಗಲಿಲ್ಲ! ವೈದ್ಯರಿಗೆ ಆಶ್ಚರ್ಯ. ಗೆಳೆಯರೆಲ್ಲಾ ನಿಟ್ಟುಸಿರು ಬಿಟ್ಟರು. ಅವರ ಸ್ವರಧಾರಾ ಜ್ಞಾನದಿಂದ ಅವರು ಮರುಹುಟ್ಟು ಪಡೆದಿದ್ದಾನೆ ಅಂದುಕೊಂಡರು.
ಹೌದು. ಅವತ್ತು ರಾಜು ಅನಂತಸ್ವಾಮಿ ಮರುಹುಟ್ಟು ಪಡೆದಿದ್ದರು. ಮೃತ್ಯವನ್ನು ಸೋಲಿಸಿದ್ದರು. ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದು ಮನತುಂಬಿ ಹಾಡಿದ್ದರು.
ಇದೊಂದು ಘಟನೆಯಷ್ಟೆ. ಇಂತಹ ಹಲವು ಪ್ರಸಂಗಗಳು ನಡೆದು ಹೋಗಿವೆ. ದೇವರು ಇನ್ನೆಷ್ಟು ಅವಕಾಶ ಕೊಡಲು ಸಾಧ್ಯ......? ಅವರು ಮತ್ತೊಮ್ಮೆ ಹುಟ್ಟಿ ಬರಲಿಲ್ಲ!
ಮೈಸೂರು ಅನಂತಸ್ವಾಮಿ ಅವರು ಇಹಲೋಕ ತ್ಯಜಿಸಿದ ಮೇಲೆ ರಾಜು ಒಬ್ಬಂಟಿಯಾಗಿದ್ದರು. ನನ್ನಪ್ಪ ಇಲ್ಲದೆ ನಾನು ಹಾಡಲಾರೆ! ಎಂದು ತಮ್ಮ ಗಾಯನವನ್ನೇ ತ್ಯಜಿಸಿದ್ದರು. ಒಂದು ವರ್ಷ ಹಾಡಲೇ ಇಲ್ಲ. ಕವಿ ಎಚ್‌ಎಸ್‌ವಿ ಅವರ ಗೀತೆಯೊಂದು ರಾಜು ಅವರನ್ನು ಮತ್ತೆ ಹಾಡುವಂತೆ ಮಾಡಿತು...
ಬನ್ನಿ ಅರಸಿರಿ ತಂದೆಯೇ
ಆಸೀನರಾಗಿರಿ ಮುಂದೆಯೆ
ಜೀವ ಕೊಟ್ಟಿರಿ ದೇಹ ಕೊಟ್ಟಿರಿ
ನಿಮಗಾಗಿ ನಾ ಹಾಡುವೆ

ಬನ್ನಿ ಅರಸಿರಿ ತಂದೆಯೇ...

ರಾಜು ಈ ಗೀತೆಯನ್ನು ಮನತುಂಬಿ ಹಾಡುತ್ತಿದ್ದರು. ಪ್ರತಿಯೊಂದು ಕಾರ್ಯಕ್ರಮದಲ್ಲೂ ಈ ಹಾಡು ಕಡ್ಡಾಯವಾಗಿತ್ತು. ಅವರು ಅಪ್ಪನನ್ನು ಪ್ರೀತಿಸಿದಷ್ಟು ಜಗತ್ತಿನಲ್ಲಿ ಮತ್ತಾರನ್ನೂ ಪ್ರೀತಿಸಲಿಲ್ಲ. ಪ್ರತಿ ವಸ್ತುವಿನಲ್ಲಿ ಅಪ್ಪನನ್ನು ಕಾಣುತ್ತಿದ್ದರು. ಅಪ್ಪನನ್ನು ತುಂಬಿಕೊಳ್ಳುತ್ತಿದ್ದರು. ಈಗ ಅಪ್ಪನೊಂದಿಗೆ ಜತೆಯಾಗಿದ್ದಾರೆ!
ಮೈಸೂರಿನ ನಟನಾ ಸಂಸ್ಥೆ ನಿರ್ಮಾಣದ `ನಮ್ಮಪ್ಪ' ನಾಟಕ ನೋಡಿದ ರಾಜು ಅನಂತಸ್ವಾಮಿ ಪಾತ್ರಧಾರಿಯನ್ನು ಅಪ್ಪಿಕೊಂಡು ಬಿಕ್ಕಿಬಿಕ್ಕಿ ಅತ್ತಿದ್ದರು. ಅಪ್ಪನನ್ನು ನೆನಪಿಸುವ ಯಾವುದೇ ಘಟನೆ ನಡೆದರೂ ಅವರ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.
ಅವರು ಮದಿರೆಗೆ ದಾಸರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿತ್ತು. ಅವತ್ತು ಅಪೊಲೋ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆಯೇ... ನಾನಿನ್ನು ಕುಡಿಯುವುದಿಲ್ಲ! ಎಂಬ ಭರವಸೆ ನೀಡಿದ್ದರು. ಎಲ್ಲರೂ ಅವರ ಮೇಲೊಂದು ಭರವಸೆ ಇಟ್ಟುಕೊಂಡಿದ್ದರು. ವಿದ್ಯಾರ್ಥಿ ವೃಂದ ಸಂತೋಷ ಪಟ್ಟಿತ್ತು. ಆದರೆ ಅದು ಅಲ್ಪ ಕಾಲದಲ್ಲಿಯೇ ನಿರಾಶೆಯಾಯಿತು.
ರಾಜು ಅನಂತಸ್ವಾಮಿ ಕಮ್ಮಿಏನೂ ಹಾಡಿಲ್ಲ. ಲಕ್ಷಾಂತರ ಕಾರ್ಯಕ್ರಮ ನೀಡಿದ್ದಾರೆ. ಹಲವು ದೇಶ ಸುತ್ತಿ ತಮ್ಮ ಹಾಡು ಕೇಳಿಸಿದ್ದಾರೆ. ನೂರಾರು ಸಿಡಿ, ಕೆಸೆಟ್‌ ಹೊರ ತಂದಿದ್ದಾರೆ. ಅವರ ವೈಶಿಷ್ಟ್ಯ ಕಂಠಸಿರಿಗೆ ಸರಿಸಾಟಿಯಾಗಬಲ್ಲ ಇನ್ನೊಬ್ಬ ಗಾಯಕ ಕರುನಾಡಿನಲ್ಲಿ ಕಾಣಸಿಗಲಾರ. ರತ್ನನ ಪದಗಳಿಗೆ ಜೀವ ತುಂಬಬಲ್ಲ ರಾಜು ಅವರಂತಹ ಇನ್ನೊಬ್ಬ ಗಾಯಕನಿಲ್ಲ. ಆದರೂ ಅವರ ಪ್ರತಿಭೆಗೆ ಇವೆಲ್ಲವೂ ಕಡಿಮೆಯಾಗಿದ್ದವು.
ನಟನಾ ಸಂಸ್ಥೆಯ ಹಲವು ನಾಟಕಗಳಿಗೆ ರಾಜು ಸಂಗೀತ ನೀಡಿದ್ದರು. ಅಲೀಬಾಬ ಮತ್ತು ನಲವತ್ತು ಮಂದಿ ಕಳ್ಳರು, ತುಂಟ ರಾಬಿನ್‌, ನೀಲಿ ಕುದುರೆ ಮುಂತಾದವು. ಅವರು ಬಹುವಾದ್ಯ ಪಾರಂಗತರಾಗಿದ್ದರು. ಮೈಸೂರು ವಿವಿ ಲಲಿತಕಲಾ ಕಾಲೇಜಿನಲ್ಲಿ ಎಂಎ ಪದವಿ ಪಡೆದಿದ್ದರು. ಅವರೊಳಗೆ ನಟನೂ ಇದ್ದ. ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ರಾಜು ಎಲ್ಲಿರುತ್ತಿದ್ದರೋ ಅಲ್ಲಿ ನಗು ಇರುತಿತ್ತು. ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈಗ ಎಲ್ಲವೂ ನೆನಪು ಮಾತ್ರ.

No comments:

Post a Comment