Tuesday, June 9, 2009

ನನ್ನನೇಕೆ ಮರೆತೆ ಕಾರಂತ?

ನನ್ನನೇಕೆ ಮರೆತೆ ಕಾರಂತ?


(ಪ್ರೇಮಾ ಕಾರಂತರು ಬದುಕಿದ್ದಾಗ ಅವರೊಂದಿಗೆ ಆಡಿದ ಮಾತುಗಳು)

ನಾಲ್ಕು ವರುಷ ಕಳೆದವು ನೀನು ಸ್ವರ್ಗ ಸೇರಿ

ಅಲ್ಲಿಯೂ ನೀ ಮಾಡಿಕೊಂಡಿರುವೆ ನಾಟಕಕ್ಕೆ ದಾರಿ

ನೀ ಹೊರಟ ಎಂಟನೆ ದಿನವೇ ಹೊರಟ ಜಯತೀರ್ಥ ಜೋಷಿ

ಹಾರ್ಮೋನಿಯಂ ನುಡಿಸಲು ನಾಗನಾಥ.

ವೆಂಕಿ, ಲೋಕೇಶರು ಹೊರಟರು ಅಭಿನಯಿಸಲು.

ಮೇಕಪ್‌ ಮಾಡಲು ಮಲ್ಲೇಶಿ, ನಾಣಿ.

ಸಂಘಟನೆಗೆ ಹೊರಟ ಸಿ.ಜಿ.ಕೆ.

ಯಾವಾಗ ಶುರು ಮಾಡುತಿ ನಾಟಕದ ತಾಲೀಮು?

ಆದರೆ ನನ್ನನೇಕೆ ಮರೆತೆ ಕಾರಂತ?

ನಾನು ಬೇಡವೇ ನಿನಗೆ ವಸ್ತ್ರ ವಿನ್ಯಾಸ ಮಾಡಲು?


ರಂಗಭೀಷ್ಮ ಬಿ.ವಿ. ಕಾರಂತರ ಮಡದಿ ಪ್ರೇಮಾ ಕಾರಂತರ ಮನದಾಳದ ಮಾತಿನ ಸಾಲುಗಳಿವು.
ಕನ್ನಡ ರಂಗಭೂಮಿಯನ್ನು ಸಾಗರದಾಚೆಗೆ ಹಾರಿಸಿದ ದಂಪತಿಗಳಿವರು. ಉಸಿರಿನ ಕಣದಲ್ಲೂ ರಂಗಭೂಮಿಯನ್ನೇ ತುಂಬಿಕೊಂಡು ಬದುಕಿದ ರಂಗಜೋಡಿಗಳು. ಜೊಡಿಯಾಗಿಯೇ ದೆಹಲಿಗೆ ಹೋದರು. ಜೋಡಿಯಾಗಿಯೇ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತರು, ಜೋಡಿಯಾಗಿಯೇ ಶಿಕ್ಷಕರಾದರು, ಬಹುತೇಕ ಕಾರಂತರು ನಿರ್ದೇಶಿಸಿದ ಎಲ್ಲಾ ನಾಟಕಗಳಿಗೆ ಪ್ರೆಮಾ ಅವರೇ ವಸ್ತ್ರ ವಿನ್ಯಾಸಕಿ. ಆದರೆ ನಾಲ್ಕು ವರ್ಷಗಳ ಹಿಂದೆ ಪ್ರೇಮಾರನ್ನು ಒಬ್ಬಂಟಿಯಾಗಿ ಬಿಟ್ಟು ಕಾರಂತರು ಇಹ ಲೋಕ ತ್ಯಜಿಸಿದರು.
ಕನ್ನಡದ ಮೊದಲ ಮಹಿಳಾ ಚಲನಚಿತ್ರ ನಿರ್ದೇಶಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರೇಮಾ `ಪಣಿಯಮ್ಮ' ಮತ್ತು `ನಕ್ಕಳಾ ರಾಜಕುಮಾರಿ' ಎಂಬ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಮಕ್ಕಳ ಮೇಲೆ ಅತೀವ ಪ್ರೀತಿ ಇರುವ ಪ್ರೇಮಾ ಕಾರಂತರಿಗೆ ಮಕ್ಕಳ ರಂಗಭೂಮಿ ಮೊದಲ ಆಯ್ಕೆ. 70ರ ಹರೆಯದ ಪ್ರೇಮಾ ಈಗಲೂ ಪಾದರಸ. ಪ್ರಖ್ಯಾತ ಪ್ರೆಂಚ್‌ ಕೃತಿ `ರಶೋಮನ್‌' ಅನ್ನು ಕನ್ನಡಕ್ಕೆ ತಂದು ನಿರ್ದೇಶಿಸುವ ಹುಡುಕಾಟದಲ್ಲಿದ್ದಾರೆ. ಉದಯವಾಣಿಯೊಂದಿಗೆ ಆಡಿದ ನಾಲ್ಕು ಮಾತುಗಳು ಇಲ್ಲಿವೆ.



* ಹೇಗಿದ್ದೀರಿ? ಆರೋಗ್ಯ ಹೇಗಿದೆ?
ಆರೋಗ್ಯ ಚೆನ್ನಾಗೇನೋ ಇದೆ, ಆದರೆ ಕೆಲ ದಿನಗಳ ಹಿಂದೆ ಜಾರಿಬಿದ್ದು ಮೊಣಕಾಲಿಗೆ ಪೆಟ್ಟಾಯಿತು. ಮೆಟ್ಟಿಲುಗಳನ್ನು ಏರುವಾಗ ಸ್ವಲ್ಪ ನೋವು ಬರುತ್ತೆ.



* ಬಿ. ವಿ. ಕಾರಂತ ಅಧ್ಯಯನ ಕೇಂದ್ರ ತೆರೆಯವ ತಮ್ಮ ಹೋರಾಟ ಎಲ್ಲಿಗೆ ಬಂತು?
ವಿಧಾನ ಸೌಧದ ಮೆಟ್ಟಿಲುಗಳನ್ನು ಸವೆಸಿ ಸುಸ್ತಾದೆ. ಕೇಂದ್ರ ಸಚಿವ ಅರ್ಜುನ್‌ ಸಿಂಗ್‌ ಆಗ ಮುಖ್ಯಮಂತ್ರಿಗಳಾಗಿದ್ದ ಧರಂ ಸಿಂಗ್‌ ಅವರಿಗೆ ಪರಿಶೀಲಿಸುವಂತೆ ಪತ್ರ ಬರೆದರು. ಕನಿಷ್ಟ ಅದನ್ನು ಓದುವ ಪ್ರಯತ್ನವೂ ನಡೆಯಲಿಲ್ಲ. ನಾನು ಇನ್ನೆಷ್ಟು ದಿನ ಇರುತ್ತೀನಿ? ಕಾರಂತರ ಕೂಡಿಟ್ಟ 2000 ಪುಸ್ತಕಗಳ ಬಂಡಾರವಿದೆ. ನೂರಾರು ಸಂಗೀತ ಉಪಕರಣಗಳಿವೆ, ಲೈಟ್ಸ್, ಕಾಟ್ಯೂಮ್‌, ಕೆಸೆಟ್‌, ಸಿಡಿಗಳು ಎಲ್ಲವನ್ನೂ ಇಟ್ಟುಕೊಂಡು ನಾನೊಬ್ಬಳೇ ಮಲಗುತ್ತೇನೆ. ನೋಡೋಣ, ಬದುಕಿರುವ ವರೆಗೂ ಹೋರಾಡುತ್ತೇನೆ.



* ದೇಶಾದ್ಯಂತ ಇರುವ ಕಾರಂತರ ಶಿಷ್ಯ ಕೋಟಿ ನಿಮ್ಮ ಹೋರಾಟಕ್ಕೆ ದನಿಗೂಡಿಸಬಹುದಲ್ಲವೆ?
ಯಾರೂ ಸಹಾಯ ಮಾಡಲಿಲ್ಲ, ಸ್ವಾರ್ಥಿಗಳು. ಅವರವರ ಪಾಡಿಗೆ ಅವರಿದ್ದಾರೆ. ನಾನೂ ಕೂಡ ಸಹಾಯ ಕೇಳಿಕೊಂಡು ಹೋಗೋದಿಲ್ಲ. ಸರ್ಕಾರ ಆ ಕೆಲಸ ಮಾಡಬೇಕು ಅನ್ನೋದೆ ನನ್ನ ಆಸೆ.



* ಮಕ್ಕಳ ರಂಗಭೂಮಿ ಮೇಲೆ ಏಕೆ ಅಷ್ಟೊಂದು ಆಸಕ್ತಿ?
ಮಕ್ಕಳು ಬೆಳೆಯುವ ಚಿಗುರುಗಳು. ನಾವು ಹೇಗೆ ಬೆಳೆಸುತ್ತೇವೋ ಹಾಗೆ ಬೆಳೆಯುತ್ತವೆ, ಬಾಗುತ್ತವೆ. ರಂಗ ಶಿಕ್ಷಣದ ಮೂಲಕ ಮಾತ್ರ ಮಕ್ಕಳಲ್ಲಿ ಮನಸಲ್ಲಿ ಸಂಸ್ಕೃತಿ ಬಿತ್ತಲು ಸಾಧ್ಯ. ನಾನು ರಂಗ ಶಿಕ್ಷಣವನ್ನು ಪಠ್ಯವಾಗಿ ಅಳವಡಿಸುವಂತೆ ಬಹಳಷ್ಟು ಒತ್ತಡ ತಂದೆ. ಕಾಂಗ್ರೆಸ್‌ ಸರ್ಕಾರದಲ್ಲಿ ಬಿ.ಕೆ. ಚಂದ್ರಶೇಖರ್‌ ಮಂತ್ರಿಗಳಾಗಿದ್ದಾಗ ಭರವಸೆ ನೀಡಿದರು. ನಾನು, ಬಿ. ಜಯಶ್ರಿ. ಎಚ್‌. ಎಸ್‌. ಉಮೇಶ್‌, ಗಂಗಾಧರ ಸ್ವಾಮಿ ಕೂತು ಕಷ್ಟಪಟ್ಟು ಸರಳವಾದ ಪಠ್ಯ ಸಿದ್ದಪಡಿಸಿದೆವು. ಕಾಂಗ್ರೆಸ್‌ ಬಿತ್ತು. ಯೋಜನೆಯೂ ನೆನೆಗುದಿಗೆ ಬಿತ್ತು.



* ಕರ್ನಾಟಕಕ್ಕೆ ರಾಷ್ಟ್ರೀಯ ನಾಟಕ ಶಾಲೆ ಬೇಕೆ?
ಖಂಡಿತಾ ಬೇಡ. ರಾಷ್ಟ್ರೀಯ ನಾಟಕ ಶಾಲೆಯ ಪ್ರಾದೇಶಿಕ ಕೇಂದ್ರವಿದೆ. ನೀನಾಸಂ ರಂಗಾಯಣಗಳಿವೆ. ಇವುಗಳಿಗೇ ರಾಷ್ಟ್ರೀಯ ಮಾನ್ಯತೆ ಸಿಕ್ಕರೆ ಅಷ್ಟೆ ಸಾಕು. ಕನ್ನಡ ರಂಗಭೂಮಿ ಶ್ರೀಮಂತವಾಗಿದೆ. ನಾನೂ ಎಲ್ಲಾ ಭಾಷೆಯ ರಂಗಭೂಮಿಯನ್ನು ಹತ್ತಿರದಿಂದ ಕಂಡಿದ್ದೇನೆ. ಎನ್‌ಎಸ್‌ಡಿಗಿಂತ ಒಳ್ಳೆಯ ನಾಟಕಗಳು ಕನ್ನಡದಲ್ಲಾಗುತ್ತಿವೆ. ವಿವೇಚನೆಯಿಲ್ಲದೆ ರಾಜಕಾರಣಿಗಳ ಹಾಗೆ ಉಪವಾಸ ಮಾಡಿ ರಂಗಭೂಮಿಯನ್ನು ಸುದ್ದಿ ಮಾಡುತ್ತಾರೆ.



* ಕಾರಂತರು ಕಟ್ಟಿದ ರಂಗಾಯಣದಲ್ಲಿ ನಿಮ್ಮ ಪಾತ್ರವೇನು?
ಕಾರಂತ ಮಾಡಿಸುವ ರಂಗಾಯಣದ ನಾಟಕಗಳಿಗೆ ವಸ್ತ್ರ ವಿನ್ಯಾಸ ಮಾಡುವುದು ಬಿಟ್ಟರೆ ನಾನು ರಂಗಾಯಣಕ್ಕೆ ಏನೂ ಮಾಡಲಿಲ್ಲ.



* ಮುಂದೆ ಸಿನಿಮಾ ನಿರ್ದೇಶನ ಮಾಡುವ ಯೋಚನೆ ಇದೆಯಾ?
ನಾನು ತಯಾರಾಗಿದ್ದೀನಿ. ಆದರೆ ಹಣ ಹಾಕುವವರಿಲ್ಲ. ಕಷ್ಟ ಪಟ್ಟು ಸಿನಿಮಾ ಮಾಡಿದ್ರೆ ಟಾಕೀಸ್‌ ಕೊಡಲ್ಲ, ಬಿಡುಗಡೆ ಆಗಲ್ಲ. ಪ್ರಶಸ್ತಿ ಕೊಡ್ತಾರೆ ಅಷ್ಟೆ.
ಕಾರಂತರ ಜೊತೆಗಿನ ಯಾವುದಾದರೂ ಒಂದು ಘಟನೆ ಬಗ್ಗೆ ಹೇಳಿ?
ಹಿಂದಿನ ಘಟನೆ. `ಸಿರಿಸಂಪಿಗೆ' ನಾಟಕದ 200ನೇ ಪ್ರದರ್ಶನದ ರಿಹರ್ಸಲ್‌ಗೆ ನಟರಾರೂ ಸರಿಯಾಗಿ ಬರಲಿಲ್ಲ. ನನಗೂ ಕಾರಂತರಿಗೂ ತುಂಬಾ ಕೋಪ ಬಂತು. `ಯಾರಿಗೂ ಶಿಸ್ತಿಲ್ಲ ಈ ನಾಟಕವನ್ನ ಇಲ್ಲಿಗೇ ನಿಲ್ಲಿಸಿಬಿಡಿ' ಎಂದು ಜಗಳ ಮಾಡಿದೆ. ನಾಟಕ ಪ್ರಾರಂಭ ಆಗುವುದಕ್ಕಿಂತ ಮುಂಚೆ ಈ ನಾಟಕ ಇಲ್ಲಿಗೇ ನಿಲ್ಲಿಸುವುದಾಗಿ ಘೋಷಣೆ ಮಾಡಲು ಕಾರಂತರು ವೇದಿಕೆಗೆ ಬಂದಾಗ ಇಡೀ ಕಲಾಕ್ಷೇತ್ರ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಗಾಬರಿಯಾದ ಕಾರಂತರು `ನೀವು ಇಷ್ಟೊಂದು ಪ್ರೀತಿಯಿಂದ ಈ ನಾಟಕ ನೋಡ್ತೀರಾ ಅಂದ ಮೇಲೆ, ನಾಟಕ ನಿಲ್ಲಿಸಲು ನಾನಾರು?' ಎನ್ನುತ್ತಾ ನಿರ್ಗಮಿಸಿದರು. ಈ ಘಟನೆ ಯಾವಾಗಲೂ ನೆನಪಾಗುತ್ತೆ.

No comments:

Post a Comment