
ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್!
ಉದ್ಯಮಿ ಅಂದಾಗ ಮನಸ್ಸಿನಲ್ಲೊಂದು ಚಿತ್ರಣ ಮೂಡುತ್ತದೆ. ಸೂಟು ಬೂಟು, ಚಟಪಟ ಇಂಗ್ಲಿಷ್. ಸ್ಟಾರ್ ಹೋಟಲ್. ಮೀಟಿಂಗ್, ಇನ್ವೆಸ್ಟಿಂಗ್, ಪಾರ್ಟಿ, ಷೇರು, ಕಾರು, ಬಾರು.....! ಆದರೆ ಇವರು ಆ ಥರದ ಉದ್ಯಮಿಯಲ್ಲ. ಅವರ ಉದ್ದನೆಯ ಬಿಳಿ ಗಡ್ಡದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ, ನೃತ್ಯ, ಸಂಗೀತಗಳಿವೆ. ಕನ್ನಡ ಭಾಷೆಗೆ ಅವರ ಹೃದಯ ಮಿಡಿಯುತ್ತದೆ. ಒಂದೊಳ್ಳೆ ಪುಸ್ತಕ ಸಿಕ್ಕರೆ ಓದಿ ಮುಗಿಸೋ ತವಕ. ಯಕ್ಷಗಾನಕ್ಕೆ ಇಡೀ ರಾತ್ರಿ ನಿದ್ದೆಗೆಡಲು ರೆಡಿ. ಇಷ್ಟವಾದ ಚಿತ್ರಕೃತಿಗೆ ಕೋಟಿ ಕೊಟ್ಟರೂ ಸರಿ. ನಾಟಕದ ಮೇಲೆ ಒಂಥರಾ ಒಲವು. ಒಟ್ಟಿನಲ್ಲಿ ಅವರಿಗೆ ಲಲಿತಕಲೆಗಳ ಮೇಲೆ ಅತೀವ ಪ್ರೀತಿ!
ಅವರೇ ಡಿ.ಕೆ. ಚೌಟ. ಸಾಹಿತ್ಯದಲ್ಲಿ ಆನಂದ ಕೃಷ್ಣ ಎಂದೇ ಪ್ರಸಿದ್ಧಿ. ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಆರಂಭಿಸಿದ `ಚಿತ್ರಸಂತೆ' ಇಂದಿಗೂ ಮನೆಮಾತು. ಗ್ಯಾಲರಿಯೊಳಗೆ ಬಂಧಿಯಾಗಿದ್ದ ಕೃತಿಗಳು ಸಂತೆಯ ಮೂಲಕ ಸಾಮಾನ್ಯರಿಗೆ ಸಿಕ್ಕಿದವು. ರಂಗಭೂಮಿಗೆ ಅವರೊಬ್ಬ ಪೋಷಕ. ಬೆಂಗಳೂರಿನ `ರಂಗನಿರಂತ' ಸಂಘಟನೆಯ ಅಧ್ಯಕ್ಷರು. ಕ್ರೀಯಾಶೀಲ ರಂಗಭೂಮಿ ಎಲ್ಲಿರುತ್ತದೋ ಅಲ್ಲಿ ಚೌಟ!
ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳುಭಾಷೆ ಸ್ಥಾನ ಪಡೆಯಲು ಚೌಟರ ಸಾಹಿತ್ಯದ ಪ್ರಮುಖ ಪಾತ್ರವಿದೆ. ಅವರ `ಪಿಲಿಪತ್ತಿ ಗಡಸ್' ತುಳುನಾಟಕ 130ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. `ಕರಯವಜ್ಜೆರಿನ ಕತೆಕುಲು' ಕಥಾ ಸಂಕಲನ, `ಮಿತ್ತಿಬೈಲೆ ಯಮುನಕ್ಕ' ಕಾದಂಬರಿ ಪ್ರಸಿದ್ಧವಾಗಿವೆ.
ಮಂಜೇಶ್ವರ ಸಮೀಪದ ಮೀಯಾಪದೌ ಅವರ ಹುಟ್ಟು. ಜನ್ಮತಃ ಕೃಷಿಕರು. ಮುಂಬೈನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ. ವಿಮಾ ಕಂಪನಿಯೊಂದರಲ್ಲಿ ದೊಡ್ಡ ಕೆಲಸ. ಅದು ಸಾಗರದಾಚೆ. ಹಲವು ದೇಶಗಳ ಜೊತೆ ಸಂಬಂಧ. ನಂತರ ತಮ್ಮದೇ ಶೂ ತಯಾರಿಕಾ ಉದ್ಯಮ ಸ್ಥಾಪನೆ. 25 ವರ್ಷ ಹೊರದೇಶ. ಆನಂತರ ತಾಯ್ನಾಡಿಗೆ ಬಂದ ಚೌಟ ತಮ್ಮಿಷ್ಟದ ಕಲೆಯ ಆರಾದಕ. 72ರ ಹರೆಯದಲ್ಲೂ ಅವರದು ಹೊಸ ಆಲೋಚನೆಯ ಮೇಲ್ಪಂಕ್ತಿ.
ಚೌಟರ ಇಬ್ಬರು ಮಕ್ಕಳು ಜಗತ್ಪ್ರಸಿದ್ಧರು. ಮಗ ಸಂದೀಪ್ ಚೌಟ ಬಾಲಿವುಡ್ ಸಂಗೀತ ನಿರ್ದೇಶಕ. ಮಗಳು ಪ್ರಜ್ಞಾ ಚೌಟ ಪ್ಯಾರಿಸ್ ನಿವಾಸಿ. ವನ್ಯಜೀವಿ ಡ್ಯಾಕ್ಯುಮೆಂಟರಿ ನಿರ್ದೇಶಕಿ. ಮಡಿಕೇರಿಯ ದುಬಾರೆ ಅರಣ್ಯದಲ್ಲಿ ಆನೆ ಸಾಗಣಿಕೆ. ಅವರ ಡಾಕ್ಯುಮೆಂಟರಿಗಳಿಗೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯ ಮುಕುಟ.
ಡಿ.ಕೆ. ಚೌಟರ ಚೌಟರ ಜೊತೆ `ಉದಯವಾಣಿ' ಮಾತುಕತೆ
* ಉದ್ಯಮಿ ಡಿ.ಕೆ. ಚೌಟ ಅವರು ರಂಗಕರ್ಮಿ, ಸಾಹಿತಿ ಹಾಗೂ ಕಲಾಪೋಷಕ ಆಗಿದ್ದು ಯಾವಾಗ?
ನನ್ನ ಓದುವ ಚಟವೇ ಅದಕ್ಕೆ ಕಾರಣ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾದಂಬರಿ ಓದಿ ಮುಗಿಸಿದ್ದೆ. ಮುಂಬೈನ ಆ ಹಣದ ಆಟ ನನ್ನನ್ನು ಆಕರ್ಷಿಸಿತು. ಬಹುಶಃ ನಾನಾಗ ಹಣದ ಹಿಂದೆ ನಡೆದೆ. ಇಕನಾಮಿಕ್ಸ್ ಎಂಎ ಮುಗಿಸಿದವನೇ ವಿದೇಶಕ್ಕೆ ಹಾರಿದೆ. ಆದರೆ ಎಂದಿಗೂ ನನ್ನ ಸಾಂಸ್ಕೃತಿಕ ತುಡಿತ ಕಮ್ಮಿ ಆಗಲಿಲ್ಲ. ನನ್ನ ವಿದೇಶ ಜೀವನದಲ್ಲಿ ಬಹಳ ಮಿಸ್ ಮಾಡ್ಕೊತಾ ಇದ್ದೀನಿ ಅನ್ನಿಸ್ತಿತ್ತು. ರಜೆಯಲ್ಲಿ ತಾಯ್ನಾಡಿಗೆ ಬಂದಾಗ ಕನ್ನಡ ಪುಸ್ತಕಗಳನ್ನು ಬಾಚಿಕೊಳ್ಳುತ್ತಿದ್ದೆ. ಮಾತೃ ಭಾಷೆಯ ಒಡನಾಟಕ್ಕೆ ಹಾತೊರೆಯುತಿದ್ದೆ. ಅದೇ ಇವತ್ತು ಮರಳಿ ಇಲ್ಲಿಗೆ ಕರೆತಂದಿದೆ.
* ತಾವೀಗ ಸಿಜಿಕೆ ಅವರ `ರಂಗ ನಿರಂತರ' ಸಂಘಟನೆಯ ಅಧ್ಯಕ್ಷರು. ಅದರ ಕಾರ್ಯ ಚಟುವಟಿಕೆ ಹೇಗೆ ಸಾಗುತ್ತಿದೆ?
ಈ ಬಾರಿಯ ರಂಗ ನಿರಂತರದ ಸಿಜಿಕೆ ಸ್ಮರಣೆಯಲ್ಲಿ ಹತ್ತು ಹೊಸ ನಾಟಕಗಳು ಕನ್ನಡ ರಂಗಭೂಮಿಗೆ ಕೊಟ್ಟಿದೆ. ಇದು ಹೆಮ್ಮೆಯ ವಿಷಯ. ಕನ್ನಡ ರಂಗಭೂಮಿ ಹೊಸ ನಾಟಕಗಳ ಕೊರತೆ ಎದುರಿಸುವಾಗ ರಂಗನಿರಂತರ ಈ ಸಾಹಸ ಮಾಡಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಇಲ್ಲದಿದ್ದರೆ 60 ದಿನಗಳ ನಾಟಕೋತ್ಸವ ಹಾಗೂ 20 ಹೊಸ ನಾಟಕ ಕೊಡುವ ಯೋಜನೆ ಇತ್ತು. ಆದರೆ ಕಳೆದ ನಾಟಕೋತ್ಸವ ಕಾಲದಲ್ಲಿ ನಮ್ಮ ಉತ್ತರ ಕನ್ನಡಿಗರು ಸಂತ್ರಸ್ತರಾಗಿದ್ದರು. ಹೊಸ ನಾಟಕ, ಹೊಸ ಹುಡುಗರು, ಹೊಸ ಯೋಚನೆಯನ್ನು ರಂಗಭೂಮಿಗೆ ತರಬೇಕು ಎಂಬುದೇ ನಮ್ಮ ಉದ್ದೇಶ.
* ತಾವು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ಹಲವು ಕಾರ್ಯ ಮಾಡಿದಿರಿ. ಅದರಲ್ಲಿ ಚಿತ್ರಸಂತೆ ಬಗ್ಗೆ ಹೇಳಿ?
ಚಿತ್ರಕಲೆ ನನಗೆ ಬಹಳ ಇಷ್ಟವಾದ ಮಾಧ್ಯಮ. ಜಗತ್ತಿನ ಯಾವುದೇ ನಗರಕ್ಕೆ ಹೋದರೂ ಅಲ್ಲಿಯ ಗ್ಯಾಲರಿಗಳನ್ನು ಹುಡುಕುತ್ತಿದ್ದೆ. ಕೃತಿ ಸಂಗ್ರಹಿಸುತ್ತಿದ್ದೆ. ಕಲಾಕೃತಿಗಳು ಗ್ಯಾಲರಿಯಿಂದ ಹೊರ ಬರಬೇಕು ಎನ್ನುವ ಕಲ್ಪನೆ ನನ್ನನ್ನು ಸದಾ ಕಾಡುತ್ತಿತ್ತು. ಚಿತ್ರಕಲಾ ಪರಿಷತ್ತಿಗೆ ಬಂದಾಗ ನನ್ನ ಕಲ್ಪನೆಗೊಂದು ರೂಪ ಕೊಟ್ಟೆ. `ಸಂತೆ' ಎನ್ನುವ ನಮ್ಮ ದೇಸಿ ಪದವನ್ನು ಬಳಸಿಕೊಂಡೆ. ಚಿತ್ರಸಂತೆ ಮಾಡಿದೆ. ಮನ್ನಣೆ ಸಿಕ್ಕಿತು. ಇದರಿಂದ ಚಿತ್ರಕಲೆಯನ್ನು ಸಾಮಾನ್ಯರಿಗೆ ತಲುಪಿಸಿದ ಸಂತೊಷ ಇದೆ.
* ಚೌಟ ಪ್ರತಿಷ್ಠಾನ ರಚನೆಯ ಉದ್ದೇಶಗಳೇನು?
ಪ್ರತಿಷ್ಠಾನದಡಿ ನನ್ನ ಊರಿನಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸುತ್ತಿದ್ದೇನೆ. ಇದು ಮದುವೆ ಮಂಟಪವಲ್ಲ. ಅಪ್ಪಟ ಕೃಷಿ ಭವನ. ರೈತರಿಗೆ ತರಬೇತಿ, ಹಳ್ಳಿಗರಿಗೆ ಒಳ್ಳೆ ಚಿತ್ರ ತೋರಿಸುವ ಉದ್ದೇಶವಿದೆ.
* ತಾವು ಕಲೆಗೆ ಪೋಷಕರಂತಿದ್ದೀರಿ. ಸಂಘಟನೆಗಳಿಗೆ ಅಪಾರ ಸಹಾಯ ಮಾಡಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?
ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್. ನನ್ನದು ಕೊಡುವ ಕೈ. ಅದು ಸಹಾಯವಲ್ಲ. ಸಾಂಸ್ಕೃತಿಕ ಲೋಕಕ್ಕೆ ನನ್ನ ಪುಟ್ಟ ಕಾಣಿಕೆ.
ಉದ್ಯಮಿ ಅಂದಾಗ ಮನಸ್ಸಿನಲ್ಲೊಂದು ಚಿತ್ರಣ ಮೂಡುತ್ತದೆ. ಸೂಟು ಬೂಟು, ಚಟಪಟ ಇಂಗ್ಲಿಷ್. ಸ್ಟಾರ್ ಹೋಟಲ್. ಮೀಟಿಂಗ್, ಇನ್ವೆಸ್ಟಿಂಗ್, ಪಾರ್ಟಿ, ಷೇರು, ಕಾರು, ಬಾರು.....! ಆದರೆ ಇವರು ಆ ಥರದ ಉದ್ಯಮಿಯಲ್ಲ. ಅವರ ಉದ್ದನೆಯ ಬಿಳಿ ಗಡ್ಡದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ, ನೃತ್ಯ, ಸಂಗೀತಗಳಿವೆ. ಕನ್ನಡ ಭಾಷೆಗೆ ಅವರ ಹೃದಯ ಮಿಡಿಯುತ್ತದೆ. ಒಂದೊಳ್ಳೆ ಪುಸ್ತಕ ಸಿಕ್ಕರೆ ಓದಿ ಮುಗಿಸೋ ತವಕ. ಯಕ್ಷಗಾನಕ್ಕೆ ಇಡೀ ರಾತ್ರಿ ನಿದ್ದೆಗೆಡಲು ರೆಡಿ. ಇಷ್ಟವಾದ ಚಿತ್ರಕೃತಿಗೆ ಕೋಟಿ ಕೊಟ್ಟರೂ ಸರಿ. ನಾಟಕದ ಮೇಲೆ ಒಂಥರಾ ಒಲವು. ಒಟ್ಟಿನಲ್ಲಿ ಅವರಿಗೆ ಲಲಿತಕಲೆಗಳ ಮೇಲೆ ಅತೀವ ಪ್ರೀತಿ!
ಅವರೇ ಡಿ.ಕೆ. ಚೌಟ. ಸಾಹಿತ್ಯದಲ್ಲಿ ಆನಂದ ಕೃಷ್ಣ ಎಂದೇ ಪ್ರಸಿದ್ಧಿ. ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಆರಂಭಿಸಿದ `ಚಿತ್ರಸಂತೆ' ಇಂದಿಗೂ ಮನೆಮಾತು. ಗ್ಯಾಲರಿಯೊಳಗೆ ಬಂಧಿಯಾಗಿದ್ದ ಕೃತಿಗಳು ಸಂತೆಯ ಮೂಲಕ ಸಾಮಾನ್ಯರಿಗೆ ಸಿಕ್ಕಿದವು. ರಂಗಭೂಮಿಗೆ ಅವರೊಬ್ಬ ಪೋಷಕ. ಬೆಂಗಳೂರಿನ `ರಂಗನಿರಂತ' ಸಂಘಟನೆಯ ಅಧ್ಯಕ್ಷರು. ಕ್ರೀಯಾಶೀಲ ರಂಗಭೂಮಿ ಎಲ್ಲಿರುತ್ತದೋ ಅಲ್ಲಿ ಚೌಟ!
ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳುಭಾಷೆ ಸ್ಥಾನ ಪಡೆಯಲು ಚೌಟರ ಸಾಹಿತ್ಯದ ಪ್ರಮುಖ ಪಾತ್ರವಿದೆ. ಅವರ `ಪಿಲಿಪತ್ತಿ ಗಡಸ್' ತುಳುನಾಟಕ 130ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. `ಕರಯವಜ್ಜೆರಿನ ಕತೆಕುಲು' ಕಥಾ ಸಂಕಲನ, `ಮಿತ್ತಿಬೈಲೆ ಯಮುನಕ್ಕ' ಕಾದಂಬರಿ ಪ್ರಸಿದ್ಧವಾಗಿವೆ.
ಮಂಜೇಶ್ವರ ಸಮೀಪದ ಮೀಯಾಪದೌ ಅವರ ಹುಟ್ಟು. ಜನ್ಮತಃ ಕೃಷಿಕರು. ಮುಂಬೈನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ. ವಿಮಾ ಕಂಪನಿಯೊಂದರಲ್ಲಿ ದೊಡ್ಡ ಕೆಲಸ. ಅದು ಸಾಗರದಾಚೆ. ಹಲವು ದೇಶಗಳ ಜೊತೆ ಸಂಬಂಧ. ನಂತರ ತಮ್ಮದೇ ಶೂ ತಯಾರಿಕಾ ಉದ್ಯಮ ಸ್ಥಾಪನೆ. 25 ವರ್ಷ ಹೊರದೇಶ. ಆನಂತರ ತಾಯ್ನಾಡಿಗೆ ಬಂದ ಚೌಟ ತಮ್ಮಿಷ್ಟದ ಕಲೆಯ ಆರಾದಕ. 72ರ ಹರೆಯದಲ್ಲೂ ಅವರದು ಹೊಸ ಆಲೋಚನೆಯ ಮೇಲ್ಪಂಕ್ತಿ.
ಚೌಟರ ಇಬ್ಬರು ಮಕ್ಕಳು ಜಗತ್ಪ್ರಸಿದ್ಧರು. ಮಗ ಸಂದೀಪ್ ಚೌಟ ಬಾಲಿವುಡ್ ಸಂಗೀತ ನಿರ್ದೇಶಕ. ಮಗಳು ಪ್ರಜ್ಞಾ ಚೌಟ ಪ್ಯಾರಿಸ್ ನಿವಾಸಿ. ವನ್ಯಜೀವಿ ಡ್ಯಾಕ್ಯುಮೆಂಟರಿ ನಿರ್ದೇಶಕಿ. ಮಡಿಕೇರಿಯ ದುಬಾರೆ ಅರಣ್ಯದಲ್ಲಿ ಆನೆ ಸಾಗಣಿಕೆ. ಅವರ ಡಾಕ್ಯುಮೆಂಟರಿಗಳಿಗೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯ ಮುಕುಟ.
ಡಿ.ಕೆ. ಚೌಟರ ಚೌಟರ ಜೊತೆ `ಉದಯವಾಣಿ' ಮಾತುಕತೆ
* ಉದ್ಯಮಿ ಡಿ.ಕೆ. ಚೌಟ ಅವರು ರಂಗಕರ್ಮಿ, ಸಾಹಿತಿ ಹಾಗೂ ಕಲಾಪೋಷಕ ಆಗಿದ್ದು ಯಾವಾಗ?
ನನ್ನ ಓದುವ ಚಟವೇ ಅದಕ್ಕೆ ಕಾರಣ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾದಂಬರಿ ಓದಿ ಮುಗಿಸಿದ್ದೆ. ಮುಂಬೈನ ಆ ಹಣದ ಆಟ ನನ್ನನ್ನು ಆಕರ್ಷಿಸಿತು. ಬಹುಶಃ ನಾನಾಗ ಹಣದ ಹಿಂದೆ ನಡೆದೆ. ಇಕನಾಮಿಕ್ಸ್ ಎಂಎ ಮುಗಿಸಿದವನೇ ವಿದೇಶಕ್ಕೆ ಹಾರಿದೆ. ಆದರೆ ಎಂದಿಗೂ ನನ್ನ ಸಾಂಸ್ಕೃತಿಕ ತುಡಿತ ಕಮ್ಮಿ ಆಗಲಿಲ್ಲ. ನನ್ನ ವಿದೇಶ ಜೀವನದಲ್ಲಿ ಬಹಳ ಮಿಸ್ ಮಾಡ್ಕೊತಾ ಇದ್ದೀನಿ ಅನ್ನಿಸ್ತಿತ್ತು. ರಜೆಯಲ್ಲಿ ತಾಯ್ನಾಡಿಗೆ ಬಂದಾಗ ಕನ್ನಡ ಪುಸ್ತಕಗಳನ್ನು ಬಾಚಿಕೊಳ್ಳುತ್ತಿದ್ದೆ. ಮಾತೃ ಭಾಷೆಯ ಒಡನಾಟಕ್ಕೆ ಹಾತೊರೆಯುತಿದ್ದೆ. ಅದೇ ಇವತ್ತು ಮರಳಿ ಇಲ್ಲಿಗೆ ಕರೆತಂದಿದೆ.
* ತಾವೀಗ ಸಿಜಿಕೆ ಅವರ `ರಂಗ ನಿರಂತರ' ಸಂಘಟನೆಯ ಅಧ್ಯಕ್ಷರು. ಅದರ ಕಾರ್ಯ ಚಟುವಟಿಕೆ ಹೇಗೆ ಸಾಗುತ್ತಿದೆ?
ಈ ಬಾರಿಯ ರಂಗ ನಿರಂತರದ ಸಿಜಿಕೆ ಸ್ಮರಣೆಯಲ್ಲಿ ಹತ್ತು ಹೊಸ ನಾಟಕಗಳು ಕನ್ನಡ ರಂಗಭೂಮಿಗೆ ಕೊಟ್ಟಿದೆ. ಇದು ಹೆಮ್ಮೆಯ ವಿಷಯ. ಕನ್ನಡ ರಂಗಭೂಮಿ ಹೊಸ ನಾಟಕಗಳ ಕೊರತೆ ಎದುರಿಸುವಾಗ ರಂಗನಿರಂತರ ಈ ಸಾಹಸ ಮಾಡಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಇಲ್ಲದಿದ್ದರೆ 60 ದಿನಗಳ ನಾಟಕೋತ್ಸವ ಹಾಗೂ 20 ಹೊಸ ನಾಟಕ ಕೊಡುವ ಯೋಜನೆ ಇತ್ತು. ಆದರೆ ಕಳೆದ ನಾಟಕೋತ್ಸವ ಕಾಲದಲ್ಲಿ ನಮ್ಮ ಉತ್ತರ ಕನ್ನಡಿಗರು ಸಂತ್ರಸ್ತರಾಗಿದ್ದರು. ಹೊಸ ನಾಟಕ, ಹೊಸ ಹುಡುಗರು, ಹೊಸ ಯೋಚನೆಯನ್ನು ರಂಗಭೂಮಿಗೆ ತರಬೇಕು ಎಂಬುದೇ ನಮ್ಮ ಉದ್ದೇಶ.
* ತಾವು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ಹಲವು ಕಾರ್ಯ ಮಾಡಿದಿರಿ. ಅದರಲ್ಲಿ ಚಿತ್ರಸಂತೆ ಬಗ್ಗೆ ಹೇಳಿ?
ಚಿತ್ರಕಲೆ ನನಗೆ ಬಹಳ ಇಷ್ಟವಾದ ಮಾಧ್ಯಮ. ಜಗತ್ತಿನ ಯಾವುದೇ ನಗರಕ್ಕೆ ಹೋದರೂ ಅಲ್ಲಿಯ ಗ್ಯಾಲರಿಗಳನ್ನು ಹುಡುಕುತ್ತಿದ್ದೆ. ಕೃತಿ ಸಂಗ್ರಹಿಸುತ್ತಿದ್ದೆ. ಕಲಾಕೃತಿಗಳು ಗ್ಯಾಲರಿಯಿಂದ ಹೊರ ಬರಬೇಕು ಎನ್ನುವ ಕಲ್ಪನೆ ನನ್ನನ್ನು ಸದಾ ಕಾಡುತ್ತಿತ್ತು. ಚಿತ್ರಕಲಾ ಪರಿಷತ್ತಿಗೆ ಬಂದಾಗ ನನ್ನ ಕಲ್ಪನೆಗೊಂದು ರೂಪ ಕೊಟ್ಟೆ. `ಸಂತೆ' ಎನ್ನುವ ನಮ್ಮ ದೇಸಿ ಪದವನ್ನು ಬಳಸಿಕೊಂಡೆ. ಚಿತ್ರಸಂತೆ ಮಾಡಿದೆ. ಮನ್ನಣೆ ಸಿಕ್ಕಿತು. ಇದರಿಂದ ಚಿತ್ರಕಲೆಯನ್ನು ಸಾಮಾನ್ಯರಿಗೆ ತಲುಪಿಸಿದ ಸಂತೊಷ ಇದೆ.
* ಚೌಟ ಪ್ರತಿಷ್ಠಾನ ರಚನೆಯ ಉದ್ದೇಶಗಳೇನು?
ಪ್ರತಿಷ್ಠಾನದಡಿ ನನ್ನ ಊರಿನಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸುತ್ತಿದ್ದೇನೆ. ಇದು ಮದುವೆ ಮಂಟಪವಲ್ಲ. ಅಪ್ಪಟ ಕೃಷಿ ಭವನ. ರೈತರಿಗೆ ತರಬೇತಿ, ಹಳ್ಳಿಗರಿಗೆ ಒಳ್ಳೆ ಚಿತ್ರ ತೋರಿಸುವ ಉದ್ದೇಶವಿದೆ.
* ತಾವು ಕಲೆಗೆ ಪೋಷಕರಂತಿದ್ದೀರಿ. ಸಂಘಟನೆಗಳಿಗೆ ಅಪಾರ ಸಹಾಯ ಮಾಡಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?
ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್. ನನ್ನದು ಕೊಡುವ ಕೈ. ಅದು ಸಹಾಯವಲ್ಲ. ಸಾಂಸ್ಕೃತಿಕ ಲೋಕಕ್ಕೆ ನನ್ನ ಪುಟ್ಟ ಕಾಣಿಕೆ.