‘ಉಂಡಾಡಿ
ಉಂಡನಂತೆ ಅಡ್ಡಾಡುವ ಉಡ್ರನ್ನು ಅಜ್ಜನತ್ರ ಬಿಡ್ರಿ, ಛಲೋ ದಾರಿಗೆ ಬರ್ತಾವೂ...!’
ಮೈಗಳ್ಳ ಯುವಕರನ್ನು ಕುರಿತು ಆಡುವ ಈ ಮಾತು ಉತ್ತರ ಕರ್ನಾಟಕ ಭಾಗದಲ್ಲಿ ಜನಜನಿತ.
ಸೋಮಾರಿಗಳಷ್ಟೇ ಅಲ್ಲ, ಬಡವರು, ದಲಿತರು, ಅನಾಥರು, ಹಲವು ಧರ್ಮೀಯರು, ಅಂಧರು,
ಅಂಗವಿಕಲರು... ಎಲ್ಲರಿಗೂ ಈ ಅಜ್ಜ ದಾರಿ ತೋರುವ ದೇವರು. ಆ ಅಜ್ಜ ಮ್ಯಾಜಿಕ್
ಮಾಡುತ್ತಿದ್ದವರಲ್ಲ, ಯುವ ಮನಸ್ಸುಗಳ ಮೇಲೆ ‘ಸಂಗೀತ’ದ ಬೀಜ ಬಿತ್ತುತ್ತಿದ್ದವರು!
ಎಂತೆಂಥವರು ಇಲ್ಲಿ ಸಂಗೀತಗಾರರಾಗಿದ್ದಾರೆ ಗೊತ್ತಾ? ಅಜ್ಜ ಸಂಗೀತದ ಅಣುವಿಲ್ಲದ ಯುವ
ಮನಸ್ಸುಗಳಿಗೆ ಸಪ್ತಸ್ವರ ತುಂಬಿ, ಯುವಜನರ ಸಂಗೀತ ಸಾಮ್ರಾಜ್ಯವನ್ನೇ ಸೃಷ್ಟಿಸಿದರು.
ಕಣ್ಣುಗಳಿಲ್ಲದಿದ್ದರೂ ಒಳಗಣ್ಣಿನಿಂದಲೇ ಸಂಗೀತ ಸಮಾಜ ಕಟ್ಟಿದರು. ಇಂದು ಅವರ ಉಸಿರು
ಇಲ್ಲದಿದ್ದರೂ ಅವರು ಹಾಡಿದ ಸಪ್ತಸ್ವರಗಳ ತಂಗಾಳಿ ಶುದ್ಧವಾಗಿದೆ. ಅವರು ತಿದ್ದಿ, ತೀಡಿ
ಬೆಳೆಸಿದ ಸಾವಿರಾರು ಸಂಗೀತ ಸಾಮ್ರಾಟರಿದ್ದಾರೆ.
ಉಭಯಗಾನ ವಿಶಾರದ ಜಗದ್ಗುರು ಪುಟ್ಟರಾಜ ಗವಾಯಿಗಳ ಬಗ್ಗೆ ಹೇಳಲು, ಕೇಳಲು ಏನಿದೆ?
ಆದರೆ ಅವರು ಬಿತ್ತಿದ ಸಪ್ತಸ್ವರ ಬೀಜಗಳು ಮೊಳಕೆಯೊಡೆದು, ಗಿಡವಾಗಿ, ಮರವಾಗಿ ಬೆಳೆದು
ಸಿಹಿ ಗಾಳಿ ನೀಡುತ್ತಿವೆ. ಅವುಗಳ ಬಗ್ಗೆ ಹೇಳಲು, ಕೇಳಲು ಸಾಕಷ್ಟಿದೆ. ಗದುಗಿನ
ವೀರೇಶ್ವರ ಪುಣ್ಯಾಶ್ರಮವೆಂದರೆ ಬಡವರು, ಅನಾಥರು, ಸ್ವರಗಳ ಗಂಧವಿಲ್ಲದವರು ಸಂಗೀತ
ಕಲಿಯುವ ಸ್ವರಾಲಯ. ಕರ್ನಾಟಕ, ಹಿಂದೂಸ್ತಾನಿ ಎರಡೂ ಪ್ರಾಕಾರದ ಸಂಗೀತ ಉಂಡ ಅಜ್ಜ,
10ಕ್ಕೂ ಹೆಚ್ಚು ವಾದ್ಯ ನುಡಿಸುತ್ತಿದ್ದರು. ಅವರು ಸಂಗೀತದಿಂದಲೇ ಸಾವಿರಾರು ಯುವಕರ
ಬದುಕು ಕಟ್ಟಿದವರು. ಬರೀ ‘ಅನ್ನ’ ಕೊಟ್ಟು ಸಮಾಜ ಕಟ್ಟುವ ಮಠಗಳ ಸಾಲಿಗೆ ಗದುಗಿನ
ಪುಣ್ಯಾಶ್ರಮ ಸೇರುವುದಿಲ್ಲ. ಈ ಜಾಗದ ಮಹಿಮೆಯೇ ಅಂಥದ್ದು.
ಕಡುಗಲ್ಲನ್ನು ಅಲ್ಲಿ ಬಿಸಾಡಿದರೂ ಸುಂದರ ಮೂರ್ತಿಯಾಗಿ ರೂಪುಗೊಳ್ಳುತ್ತದೆ. ಕಲ್ಲಿನ
ಮಾತು ಹಾಗಿರಲಿ, ಹುಟ್ಟಿದ ಮಕ್ಕಳು ಅಂಧರಾದರು ಎಂಬ ಕಾರಣಕ್ಕೆ ಕಲ್ಲಿಗಿಂತ ಹೆಚ್ಚಾಗಿ
ಬಿಸಾಡಿ ಹೋದ ಮಕ್ಕಳೆಷ್ಟೋ, ಕಾಲಿಲ್ಲದ, ಕೈಯಿಲ್ಲದ ಮಗುವನ್ನು ಸಾಕುವವರಾರು ಎಂದು
ಬಿಟ್ಟು ಹೋದವರೆಷ್ಟೋ, ಅನ್ನ ಸಿಕ್ಕರಷ್ಟೇ ಸಾಕು ಎಂದು ಬಂದವರೆಷ್ಟೋ, ತನ್ನವರು
ಯಾರೂ ಇಲ್ಲ ಎಂದು ಇಲ್ಲಿ ತಮ್ಮ ನಡಿಗೆ ನಿಲ್ಲಿಸಿದವರೆಷ್ಟೋ... ಎಲ್ಲರನ್ನೂ ಪುಟ್ಟರಾಜರು
ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಸಾಕಿ ಸಲುಹಿ, ಸಂಗೀತದ ರಸದೂಟ ಬಡಿಸಿದ್ದಾರೆ. ಈ ಯುವಜನ
ಮೊದಲು ಸಂಗೀತ ಕಂಡು, ಉಂಡವರಲ್ಲ. ಆದರೆ ಪುಟ್ಟರಾಜರು ಪುಣ್ಯಾಶ್ರಮದಲ್ಲಿ ಕೊಟ್ಟ
ನಿಷ್ಕಲ್ಮಶ ಪ್ರೀತಿ ಸಂಸ್ಕಾರದಿಂದ ಸಾವಿರಾರು ಯುವಜನರು ವಿದ್ವಾಂಸ,
ವಿಶಾರದರಾಗಿದ್ದಾರೆ.
ಹಾಲುಣಿಸಿ ಒಗದು ಹೋದಳು ಅವ್ವಾ
ಧಾರವಾಡ ಜಿಲ್ಲೆ, ಅಣ್ಣಗೇರಿಯ ಪಂಚಾಕ್ಷರಿ ಪಿ.ಎಸ್. ನವಲಗುಂದ, ತಾಯ ಗರ್ಭದಿಂದಲೇ
ಅಂಧರಾಗಿ ಭೂಮಿಗೆ ಬಂದವರು. ಮಗ ಅಂಧ ಎಂದು ತಿಳಿದದ್ದೇ ತಡ, ತಂದೆ ತಾಯಿಗೆ ಕುರುಡು ಮಗು
ಬೇಡ ಎನಿಸಿತು. ಪುಟ್ಟರಾಜರ ಮಡಿಲಿಗೆ ಹಾಕಿ ಕೈ ತೊಳೆದುಕೊಂಡರು. ‘ಹಾಲುಣಿಸಿ ಒಗದು
ಹೋದಳು ಅವ್ವ’ ಎಂದು ‘ಭೂಪ್’ ರಾಗದ ಚೀಸ್ ಜೊತೆ ಸೇರಿಸಿ ಹಾಡಿನಂತೆ ಹೇಳಿದ ಅವರ ಮೊಗದ
ಮೇಲೆ ಭಾವದ ಸೋಂಕಿರಲಿಲ್ಲ. ಆಕಾಶ ನೋಡುತ್ತಾ ಹಾರ್ಮೋನಿಯಂ ಮನೆಯನ್ನು ಒತ್ತಿ
ಹಿಡಿದಿದ್ದರು.
ಹಗಲು ರಾತ್ರಿಯ ಅರಿವಿಲ್ಲದೆ ಸಂಗೀತಾಭ್ಯಾಸ ಮಾಡುತ್ತಿದ್ದ ನವಲಗುಂದರ ಸಂಗೀತ
ಪ್ರತಿಭೆ, ಒಮ್ಮೆ ಪುಟ್ಟರಾಜರ ಪರೀಕ್ಷೆಗೆ ಒಳಗಾಯಿತು. ಪುಟ್ಟರಾಜರು ಹಾರ್ಮೋನಿಯಂ
ನುಡಿಸಿ ‘ಈ ಸ್ವರಗಳನ್ನು ಗುರುತಿಸು’ ಎಂದರು. ಸ್ವರ ಗುರುತಿಸುವುದು ಆ ಹುಡುಗನಿಗೆ
ಕಷ್ಟವಾಗಿರಲಿಲ್ಲ. ಆದರೆ ಎಷ್ಟು ಮನೆಗಳನ್ನು ಹಿಡಿದು, ಯಾವ ಸ್ವರ ಹೊಮ್ಮಿಸಿದರು. ಯಾವ
ಕಾರ್ಡ್್ಸ ಒತ್ತಿದ ಕಾರಣ ಎಷ್ಟು ಸ್ವರ ಮಾರ್ದನಿಸಿದವು, ಎಲ್ಲವನ್ನು ಸೇರಿಸಿ ಪಟಪಟನೆ
ಹೇಳಿದರು. ‘ಅಪ್ಪರಾ. ಎರಡು ಕೈನಾಗೂ ಪೆಟ್ಟಿ ಬಾರಸಾಕತ್ತೀರಿ’ ಎಂದು ಗುರುತಿಸಿದರು.
ಅಂಧ ಹುಡುಗನ ಒಳಗಣ್ಣು ಕಂಡ ಪುಟ್ಟರಾಜರು ‘ಕ್ಯಾ ಬಾತ್ ಹೈ, ನೀನೊಂದು ಸಂಗೀತ
ಸಾಗರ. ಬಹಳ ಎತ್ತರಕ್ಕೆ ಹೋಗುತ್ತೀಯ’ ಎಂದು ಆಶೀರ್ವದಿಸಿದರು. ನವಲಗುಂದ ಅವರಿಗೆ ಸಂಗೀತ
ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಆಶ್ರಮಕ್ಕೆ ಬಂದ ಮೇಲೆ ಮತ್ತೆಂದೂ ಊರಕಡೆ ಹೋಗ
ಬಯಸಿದವರಲ್ಲ. ಆಶ್ರಮವೇ ಅವರ ಮನೆ, ಮನಸ್ಸು. ಪುಟ್ಟರಾಜರೇ ದೇವರು. ಪುಣ್ಯಾಶ್ರಮದ ಅಂಧರ
ವಸತಿ ಸಂಗೀತ ವಿದ್ಯಾಲಯದಲ್ಲಿ ಗುರುಗಳಾಗಿರುವ ಅವರು ನೂರಾರು ವಿದ್ಯಾರ್ಥಿಗಳಿಗೆ ಸಂಗೀತ
ಕಲಿಸುತ್ತಾ ಸಪ್ತಸ್ವರಗಳನ್ನೇ ಉಸಿರಾಡುತ್ತಾರೆ.
ಅಗ್ರಜನ ಹಾಡಿಗೆ ತಮ್ಮನ ತುಡಿತ
ಅವರು ಬಿಸಿಲು ನಾಡು ಬಳ್ಳಾರಿ ಜಿಲ್ಲೆ, ಶಿರಗುಪ್ಪಿಯ ರಾವಿಹಾಳದ ಸಹೋದರರು. ಅಣ್ಣ
ಹುಚ್ಚಯ್ಯ ಹಿರೇಮಠ, ತಮ್ಮ ವೀರೇಶ ಹಿರೇಮಠ. ಹುಚ್ಚಯ್ಯನ ಸುಮಧುರ ಕಂಠಸಿರಿಗೆ ವೀರೇಶನ
ತಬಲಾ ದನಿ ಸೇರಿದರೆ ಪವಾಡವೇ ನಡೆದುಹೋಗುತ್ತದೆ. ಇಬ್ಬರಿಗೂ ಕಣ್ಣಿಲ್ಲ. ಆವರು ಕಂಡಿರುವ
ಸಂಗೀತ ಲಹರಿ ಯಾರೂ ಕಂಡಿಲ್ಲ. ಈ ಸಹೋದರರ ಸಂಗೀತಾಭ್ಯಾಸ ಒಂದು ಹಟಯೋಗ. ಸೂರ್ಯ ಉದಯಿಸುವ
ಮೊದಲೇ ಆಶ್ರಮದ ಆವರಣದಲ್ಲಿರುವ ಪುಟ್ಟರಾಜ ಗವಾಯಿಗಳ ಗದ್ದುಗೆ ಮುಂದೆ ಅಭ್ಯಾಸ
ಮಾಡುತ್ತ ಕುಳಿತರೆ ಜಗತ್ತನ್ನೇ ಮರೆತುಬಿಡುತ್ತಾರೆ. ಅಣ್ಣ ಹಾಡುತ್ತಿದ್ದರೆ ತಮ್ಮನ
ಬೆರಳುಗಳು ತಬಲಾ ಮೇಲೆ ನರ್ತಿಸುತ್ತವೆ. ‘ಅವ ಏನ್ ಛಲೋ ಹಾಡ್ತಾನ್ರೀ. ಇವ ಏನ್
ಬಡಿತಾನೆ ಅಂತೀರಿ. ವಡೆದೋಕ್ತೈತ್ರೀ ತಬಲಾ...’ ಎಂದು ರಸಿಕರು ಹೇಳುವ ಮಾತು ಈ ಸಹೋದರರ
ಸಂಗೀತ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ.
ಈ ಸಹೋದರರು ದೇಶದ ಹಲವು ಉತ್ಸವಗಳಲ್ಲಿ ಕಛೇರಿ ಕೊಟ್ಟಿದ್ದಾರೆ. ಮೈಸೂರು ದಸರಾದಿಂದ
ಹಿಡಿದು ರಾಜ್ಯದ ಎಲ್ಲ ಉತ್ಸವ, ಹಬ್ಬಗಳಲ್ಲಿ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ.
ಇತ್ತೀಚೆಗೆ ಪಂಜಾಬ್ನ ಲೂಧಿಯಾನದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ವೀರೇಶ
ಹಿರೇಮಠ ಸೋಲೊ ತಬಲಾ ನುಡಿಸಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ
ಇಲಾಖೆ ನಡೆಸುವ ಕಲಾ ಪ್ರತಿಭೋತ್ಸವದ ತಬಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು
ತಮ್ಮದಾಗಿಸಿಕೊಂಡಿದ್ದಾರೆ.
ಈ ಸಹೋದರರ ತಂದೆ ತಾಯಿ ಊರಿನಲ್ಲಿ ಸಣ್ಣ ಕ್ಯಾಂಟೀನೊಂದನ್ನು ನಡೆಸುತ್ತಾರೆ.
ಬಡತನವೊಂದು ಬಿಟ್ಟರೆ ಮನೆಯಲ್ಲಿ ಮತ್ತೇನೂ ಇರಲಿಲ್ಲ. ಕ್ಯಾಂಟೀನ್ ನಡೆದರೆ ಬದುಕು.
ಜೊತೆಗೆ ಅಂಧರಾಗಿ ಹುಟ್ಟಿದ ಕಾರಣ ಅಕ್ಕಪಕ್ಕದವರ ನಿರ್ಲಕ್ಷದ ನಡವಳಿಕೆ. ಆದರೆ
ಆಶ್ರಮಕ್ಕೆ ಬಂದ ಮೇಲೆ ಈ ಸಹೋದರರು ಸಂಗೀತ ರತ್ನಗಳಾಗಿ ಹೊಳೆಯುತ್ತಿದ್ದಾರೆ.
ಮಂತ್ರಾಲಯದ ರಾಮುಡು
ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಭಜನೆ ಪಾಡುತ್ತಿದ್ದ ಭಕ್ತರಲ್ಲಿ ಭಕ್ತಿಯ ಅಲೆ
ಎಬ್ಬಿಸುತ್ತಿದ್ದ ಪ್ರತಿಭೆ ಬಿ. ರಾಮುಡು. ಬಡತನ ಹಾಸು ಹೊದ್ದುಕೊಂಡಿದ್ದ ಮನೆಯಲ್ಲಿ
ಹಾಡುವವರು ಯಾರೂ ಇರಲಿಲ್ಲ. ಆದರೆ ಈ ಹುಡುಗ ಅಂಧನಾದರೂ ಎದ್ದ ಕೂಡಲೇ ಗುರು ಮಠಕ್ಕೆ ಓಡಿ
ಬರುತ್ತಿದ್ದರು. ರಾಮುಡುವಿನ ಹಾಡು ಕೇಳಿದವರೆಲ್ಲ ಅವನಿಗೆ ಸಂಗೀತ ಕಲಿ ಎಂದು ಸಲಹೆ
ಕೊಡುತ್ತಿದ್ದರು. ಆದರೆ ತಿಂಗಳ ಫೀ ಕೊಟ್ಟು ಸಂಗೀತ ಕಲಿಯುವಷ್ಟು ಅನುಕೂಲತೆ ರಾಮುಡುಗೆ
ಇರಲಿಲ್ಲ. ಸಂಗೀತ ಕಲಿಯಬೇಕೆಂಬ ಅವರ ಅಗಾಧ ಆಸೆಯನ್ನು ಪೋಷಣೆ ಮಾಡಿದ್ದು ಗದುಗಿನ
ವೀರೇಶ್ವರ ಪುಣ್ಯಾಶ್ರಮ.
ಯಾರೋ ಪರಿಚಯಸ್ಥರು ರಾಮುಡುವನ್ನು ಪುಣ್ಯಾಶ್ರಮಕ್ಕೆ ತಂದು ಬಿಟ್ಟರು. ಅಲ್ಲಿಂದ ಇವನ
ಪುಣ್ಯಕಾಲ ತೆರೆದುಕೊಂಡಿತು. ರಾಮುಡು ಈಗ ಸೋಲೊ ಹಾರ್ಮೋನಿಯಂ ನುಡಿಸುವುದರಲ್ಲಿ ಎತ್ತಿದ
ಕೈ. ಪೆಟ್ಟಿಯ ಕಾರ್ಡ್್ಸಗಳ ನಡುವೆ ಸಮರಕ್ಕಿಳಿಯುವ ಈ ಹುಡುಗ ಸ್ವರಗಳ ಹೂಗುಚ್ಛ
ಸೃಷ್ಟಿಸಬಲ್ಲ. ಸಾಥಿಯಲ್ಲೂ ಅಷ್ಟೆ, ಗಾಯಕರಿಗೇ ನೀರಿಳಿಸುವಷ್ಟು ಅಗಾಧ ವಿದ್ವತ್ತು
ರಾಮುಡು ಬಳಿ ಇದೆ. ತೆಲುಗು ಮಾತೃಭಾಷೆಯಾದರೂ ಪುಣ್ಯಾಶ್ರಮದಲ್ಲಿ ಕನ್ನಡದ ಹುಡುಗನಾಗಿ
ಸಂಗೀತ ಕಲಿಯುತ್ತಿದ್ದಾರೆ.
ಶುಕೂರ್ ಸಾಬ್, ರಾಜ್ ಮೊಹಮ್ಮದ್
ಗದುಗಿನ ವೀರೇಶ್ವರ ಪುಣ್ಯಾಶ್ರಮ ಧರ್ಮವನ್ನು ಮೀರಿದ್ದು. ‘ಅಜ್ಜಾರು ಮಾನವ ಕುಲಕ್ಕೇ
ದೇವರು’ ಎನ್ನುತ್ತಾ ‘ಪೂರ್ವಿ ಕಲ್ಯಾಣಿ’ ಯೊಳಗೆ ಮುಳುಗಿದ್ದ ಶುಕೂರ್ ಸಾಬ್ ಹುಸೇನ್
ಮುಲ್ಲಾ, ಪುಣ್ಯಾಶ್ರಮದ ಅಂಧ ಪ್ರತಿಭೆ. ಶುಕೂರ್ ಬೆಳಗಾವಿ ಜಿಲ್ಲೆ, ಮುದ್ದೇಬಿಹಾಳ
ತಾಲ್ಲೂಕಿನ ದೇವರ ಹುಲುಗುಹಾಳ ಗ್ರಾಮದವರು. ಅಂಧನೆಂಬ ನಿರ್ಲಕ್ಷದ ಮಾತಿಗೆ ಬೇಸತ್ತ ಅವರು
ಮುಖ ಮಾಡಿದ್ದು ಪುಣ್ಯಾಶ್ರಮದೆಡೆಗೆ. ಹಾರ್ಮೋನಿಯಂನಲ್ಲಿ ಸಾಧನೆ ಮಾಡಿರುವ ಶುಕೂರ್,
ಬಾಲಚಂದ್ರ ನಾಕೋಡ್, ಕುಮಾರ್ದಾಸ್, ವೆಂಕಟೇಶಕುಮಾರ್ ಅಂಥವರಿಗೆ ಸಾಥ್
ಕೊಟ್ಟಿದ್ದಾರೆ. 2001ರ ಯುವಜನೋತ್ಸವದಲ್ಲಿ ರಾಷ್ಟ್ರಮಟ್ಟದ ಬಹುಮಾನವನ್ನು ಶುಕೂರ್
ತಮ್ಮದಾಗಿಸಿಕೊಂಡಿದ್ದಾರೆ.
ಥೇಟ್ ‘ಗುರುರಾಜ್ ನಾಯ್ಡು’ ಅವರ ಧ್ವನಿಯಲ್ಲಿ ಹರಿಕತೆ ಮಾಡುವ ಗಂಗಾವತಿ
ತಾಲ್ಲೂಕಿನ ಸೂಳೇಕಲ್ಲು ಗ್ರಾಮದ ರಾಜ್ ಮೊಹಮ್ಮದ್ 16 ವರ್ಷ ಪುಣ್ಯಾಶ್ರಮದಲ್ಲಿ
ಸಂಗೀತಾಭ್ಯಾಸ ಮಾಡಿದರು. ಹಾರ್ಮೋನಿಯಂನಲ್ಲಿ ಸೀನಿಯರ್ ಪರೀಕ್ಷೆ ತೇರ್ಗಡೆ ಹೊಂದಿರುವ
ಅವರು ಪ್ರಾಣಿ, ಪಕ್ಷಿಗಳ ಧ್ವನಿ, ರಾಜ್ಕುಮಾರ್, ಶಂಕರ್ನಾಗ್ ಮುಂತಾದವರ ಧ್ವನಿ,
ರೈಲು, ವಿಮಾನಗಳ ಧ್ವನಿಯನ್ನು ತಮ್ಮ ಬಾಯಿಂದ ಹೊಮ್ಮಿಸಿ ಆಶ್ಚರ್ಯ ಸೃಷ್ಟಿಸುತ್ತಾರೆ.
ಈಗಲೂ ಗುರುರಾಜ್ ನಾಯ್ಡು ಅವರ ಧ್ವನಿಯಲ್ಲಿ ಹರಿಕತೆ ಮಾಡುತ್ತಿರುವ ಅವರು ಉತ್ತರ
ಕರ್ನಾಟಕದಲ್ಲಿ ಪ್ರಸಿದ್ಧ ಹರಿಕತೆ ಕಲಾವಿದರು. ದೆಹಲಿಯ ಅಂಗವಿಕಲೋತ್ಸವ, ಬಿಹಾರದ
ಯುವಜನೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ರಾಜ್ ಮೊಹಮ್ಮದ್
ಬಳ್ಳಾರಿ ಜಿಲ್ಲೆ, ಕುರುಗೋಡಿನ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ
ಮಾಡುತ್ತಿದ್ದಾರೆ. ಪುಣ್ಯಾಶ್ರಮದ ಅಜ್ಜಯ್ಯರನ್ನು ದಾರಿ ತೋರಿದ ಗುರುವಾಗಿ ಹೃದಯದಲ್ಲಿ
ಸದಾ ಸ್ಮರಿಸುತ್ತಾರೆ.
ಹಿಮಾಲಯ ಹತ್ತಿ ಬಂದ ಅಂಧ ಯುವಕರು
ಪುಣ್ಯಾಶ್ರಮದ ಯುವಕರು ಸಂಗೀತದಲ್ಲಷ್ಟೇ ಅಲ್ಲ, ಸಾಹಸದಲ್ಲೂ ಪ್ರತಿಭೆ ತೋರಿದ್ದಾರೆ.
ಇಲ್ಲಿಯ ಇಬ್ಬರು ಅಂಧ ಯುವಕರು ಜಮ್ಮು ಕಾಶ್ಮೀರದ ಲೇಪ್ ಲಡಾಕ್ ಪ್ರಾಂತ್ಯದ ‘ಸ್ಟಾಕ್
ಕಾಂಗ್ರಿ’ ಶಿಖರದ ತುತ್ತ ತುದಿ ಮುಟ್ಟಿ ಸಾಹಸ ಮೆರೆದಿದ್ದಾರೆ. ಜೇವರ್ಗಿ ತಾಲ್ಲೂಕಿನ
ಕಣಮೇಶ್ವರ ಗ್ರಾಮದ ನಿಂಗಯ್ಯ, ಹಿಮಾಲಯ ಹತ್ತಿ ದೇಶದಲ್ಲೇ ಪ್ರಥಮ, ವಿಶ್ವದಲ್ಲೇ ತೃತೀಯ
ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ. ನಿಂಗಯ್ಯ 20,085 ಅಡಿ ಎತ್ತರದ ಶಿಖರವನ್ನು
ಕಡಿಮೆ ಅವಧಿಯಲ್ಲಿ ಹತ್ತಿದ ದೇಶದ ಮೊದಲ ಅಂಧ ಯುವಕ. ಶಿಖರದ ತುದಿ ಮುಟ್ಟಿದ ನಿಂಗಯ್ಯ
ರಾಷ್ಟ್ರಧ್ವಜ ಹಿಡಿದು ‘ಭರತಮಾತೆ ಜನ್ಮದಾತೆ ತಾಯಿ ನಿನಗೆ ನಮೋ ನಮೋ’ ಗೀತೆಯನ್ನು
ಉದ್ಗರಿಸಿದರು.
ಬಾಗಲಕೋಟೆ ಜಿಲ್ಲೆ, ಬಾದಾಮಿಯ ಮಂಜುನಾಥ ಜಾಲಿ ಹುಟ್ಟು ಅಂಧರಲ್ಲ. ಈಚೆಗೆ
ಮಧ್ಯದಲ್ಲಿ ಅಂಧರಾದವರು. ಬೆಳಕಿನಿಂದ ಕತ್ತಲೆಡೆಗೆ ಹೋಗಿದ್ದ ಮಂಜುನಾಥ ಮತ್ತೆ
ಸಂಗೀತದಿಂದ ಬೆಳಕು ಕಂಡವರು. ಅವರು ಆರು ದಿನಗಳಲ್ಲಿ ಹಿಮಾಲಯ ಶಿಖರ ಹತ್ತಿ ದಾಖಲೆ
ನಿರ್ಮಿಸಿದ್ದಾರೆ. ಈ ಸಾಹಸವನ್ನು 2012ರಲ್ಲಿ ದೆಹಲಿಯ ಲಯನ್್ಸ ಕ್ಲಬ್ ಸಹಯೋಗದಲ್ಲಿ
‘ಮಾನವ ಅಡ್ವೆಂಚ್ರ್ ಸಂಸ್ಥೆ’ ಆಯೋಜಿಸಿತ್ತು.
ಲೆಕ್ಕಾಧಿಕಾರಿ ಕೆಲಸಕ್ಕೆ ರಾಜೀನಾಮೆ
ಆಶ್ರಮದಲ್ಲಿ ಅಂಧರು, ಅಂಗವಿಕಲರಷ್ಟೇ ಅಲ್ಲ, ಸಹಜವಾಗಿರುವವರೂ ಇದ್ದಾರೆ. ಇವರೆಲ್ಲರೂ
ಕಡುಬಡತನದಲ್ಲಿ ಹುಟ್ಟಿ, ಬೆಳೆದು ಪುಣ್ಯಾಶ್ರಮದಲ್ಲಿ ಸುಂದರ ಬದುಕು ಕಂಡವರು. ರಾಯಚೂರು
ಜಿಲ್ಲೆ, ಸಿಂದನೂರು ತಾಲ್ಲೂಕಿನ ಜಾಲಿಹಾಳ ಗ್ರಾಮದ ಶರಣಬಸಯ್ಯ ಪುಣ್ಯಾಶ್ರಮದಲ್ಲಿ
‘ಸಂಗಟಿ ಸಾರು, ಜೋಳದ ನುಚ್ಚು’ ತಿಂದುಕೊಂಡು ಬದುಕಿದ್ದರು. ಸಂಗೀತದಲ್ಲಿ ಭೂರಿ ಭೋಜನ
ಉಂಡರೂ ಹೊಟ್ಟೆಗೆ ಮಾತ್ರ ಜೋಳದ ನುಚ್ಚು. ಬಿ.ಎ. ಮ್ಯೂಸಿಕ್, ಸೀನಿಯರ್, ವಿದ್ವತ್
ಪರೀಕ್ಷೆಗಳಲ್ಲಿ ರ್್ಯಾಂಕ್ ಗಳಿಸಿರುವ ಅವರು ಪುಣ್ಯಾಶ್ರಮದಲ್ಲಿ ನಡೆಯುವ
ಉತ್ಸವಗಳಲ್ಲಿ ಹಾಡುತ್ತಿದ್ದವರು. ಉತ್ಸವವೊಂದರಲ್ಲಿ ಹಾಡು ಕೇಳಿದ ಪುಟ್ಟರಾಜ ಗವಾಯಿಗಳು
ತಮ್ಮ ‘ಆಪ್ತ ಸೇವಾ ಬಳಗ’(ಸರ್ಕಿಟ್ ಸೇವೆ)ಕ್ಕೆ ಕರೆಸಿಕೊಂಡರು.
ಓದಿನಲ್ಲಿ ಮುಂದಿದ್ದ ಶರಣಬಸವಯ್ಯಗೆ ಗುಲ್ಬರ್ಗ ಜಿಲ್ಲೆ, ಗುರುಮಿಟ್ಕಲ್ನಲ್ಲಿ
ಗ್ರಾಮ ಲೆಕ್ಕಾಧಿಕಾರಿ ಕೆಲಸ ಸಿಕ್ಕಿತು. ಗಾಯಕನಾಗಿದ್ದ ಅವರಿಗೆ ಲೆಕ್ಕಾಧಿಕಾರಿ ಕೆಲಸ
ರುಚಿಸಲಿಲ್ಲ. ಒಮ್ಮೆ ಅದೇ ತಾಲ್ಲೂಕಿನ ತಹಶೀಲ್ದಾರ್ ಲಂಚ ಪಡೆಯುವಾಗ ಲೋಕಾಯುಕ್ತರಿಗೆ
ಸಿಕ್ಕಿ ಬಿದ್ದರು. ಈ ಘಟನೆಯಿಂದ ನೊಂದ ಶರಣಬಸವಯ್ಯ ಭ್ರಷ್ಟಾಚಾರ ವ್ಯವಸ್ಥೆ ವಿರುದ್ಧ
ಬಂಡೆದ್ದರು. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬಂದರು. ಸದ್ಯ
ಅವರು ಕುಂದಗೋಳ ಸಮೀಪದ ಮೊರಾರ್ಜಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ
ವಿದ್ಯಾರ್ಥಿಗಳಿಗೆ ಸಂಗೀತ ಹಂಚುವ ಕೆಲಸ ಮಾಡುತ್ತಿದ್ದಾರೆ.
‘ಸರ್ಕಿಟ್ ಸೇವೆ’ಯೆಂಬ ಪುಣ್ಯ
ಪುಟ್ಟರಾಜ ಗವಾಯಿಗಳು ಬದುಕಿದ್ದಾಗ ‘ಸರ್ಕಿಟ್ ಸೇವೆ’ ಎಂಬುದು ಬಹಳ ಪುಣ್ಯದ
ಕೆಲಸವಾಗಿತ್ತು. ಸರ್ಕಿಟ್ ಸೇವೆ ಅಂದರೆ ಪುಟ್ಟರಾಜರನ್ನು ಸೇವೆ ಮಾಡುತ್ತಿದ್ದ ಆಪ್ತ
ಶಿಷ್ಯ ಬಳಗ. ಇವರಾರೂ ಅಂಧರಲ್ಲ. ಅಜ್ಜರ ಮುಂದೆ ಹಾಡುವುದು, ಅವರಿಗೆ ಅಡುಗೆ, ಪೂಜೆ,
ಜಪಕ್ಕೆ ತಯಾರಿ ಮುಂತಾದ ಕೆಲಸ ಮಾಡುತ್ತಿದ್ದ ಸೇವಾ ಬಳಗವಿದು. ಇಂದು ಅಜ್ಜ ಇಲ್ಲದಿದ್ದರೂ
ಅಜ್ಜನ ನೆನಪುಗಳು ಈ ಬಳಗದ ಬಳಿ ಜೀವಂತವಾಗಿವೆ.
ಶಹಾಪುರದ ಕ್ಷೌರದಂಗಡಿಯಲ್ಲಿ ಕ್ಷೌರಿಕರಾಗಿ ಕೆಲಸ ಮಾಡುತ್ತಿದ್ದ ರಮೇಶ್ಕುಮಾರ್
ಕೋಲಕುಂದ ಅಜ್ಜನ ನೆಚ್ಚಿನ ಸರ್ಕಿಟ್್ ವೃಂದದ ಹುಡುಗ. ರಮೇಶ್ ಗುಲ್ಬರ್ಗ ಜಿಲ್ಲೆಯ
ಸೇಡಂನವರು. ತಂದೆಗೆ ಮಗ ಸಂಗೀತ ಕಲಿಯಬೇಕು ಎಂಬ ಆಸೆಯಿತ್ತು. ಆದರೆ ಮಗನನ್ನು ಸಂಗೀತಕ್ಕೆ
ಸೇರಿಸುವ ಮೊದಲೇ ಕ್ಯಾನ್ಸರ್ಗೆ ಬಲಿಯಾದರು. ಬಹಳ ಚಿಕ್ಕ ವಯಸ್ಸಿಗೇ ದುಡಿದು ಹೊಟ್ಟೆ
ತುಂಬಿಸಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಬಿತ್ತು. ಅಂಗಡಿಯೊಂದರಲ್ಲಿ ಕಸ ಗುಡಿಸುವ
ಕೆಲಸಕ್ಕೆ ಸೇರಿದರು. ನಂತರ ಅಪ್ಪನ ಕನಸನ್ನು ನನಸು ಮಾಡಲು ಅವರು ಶಹಾಪುರದಲ್ಲಿ ಅಮರೇಶ
ಗವಾಯಿಗಳ ಮೂಲಕ ಸಂಗೀತ ಲೋಕಕ್ಕೆ ಕಾಲಿಟ್ಟರು.
ಗದುಗಿನ ಪುಣ್ಯಾಶ್ರಮದ ಬಗ್ಗೆ ತಿಳಿದಿದ್ದ ರಮೇಶ್, ಅಮರೇಶ ಗವಾಯಿಗಳ ಅನುಮತಿ
ಪಡೆಯದೇ ಕದ್ದು ಬಂದು ಪುಣ್ಯಾಶ್ರಮ ಸೇರಿದರು. ಗಾಯನದಲ್ಲಿ ವಿದ್ವತ್ ಪಾಸ್ ಮಾಡಿಕೊಂಡ
ಅವರು ಅಜ್ಜನ ಸೇವೆ ಮಾಡಲು ಹಾತೊರೆಯುತ್ತಿದ್ದರು. ಅಮಾವಾಸ್ಯೆ ಸಂಗೀತೋತ್ಸವದಲ್ಲಿ ಇವರ
ಹಾಡು ಕೇಳಿದ ಪುಟ್ಟರಾಜರು ತಮ್ಮ ಸರ್ಕಿಟ್ ಸೇವೆಗೆ ಆಹ್ವಾನ ಕೊಟ್ಟರು. ಅಲ್ಲಿಂದ
ರಮೇಶ್ ಬದುಕು ಬದಲಾಯಿತು. ಅವರಿಗೆ ಸರ್ಕಿಟ್ ಸೇವೆ ಎಂಬುದು ಒಂದು ತಪಸ್ಸಾಗಿತ್ತು.
ಗುರುವನ್ನು ದೇವರಂತೆ ಪೂಜಿಸಿದರು. ಮುಂದೆ ಪುಟ್ಟರಾಜ ಗವಾಯಿಗಳನ್ನು ತಮ್ಮ ಮನೆಗೆ
ಕರೆಸಿಕೊಂಡು ‘ತುಲಾಭಾರ’ ನೆರವೇರಿಸಿದರು. ಸದ್ಯ ರಮೇಶ್ ಕುಮಾರ್ ಕೋಲಕುಂದ ಮೈಸೂರು
ಜಿಲ್ಲೆ, ಹುಣಸೂರು ಸಮೀಪದ ಧರ್ಮಾಪುರದಲ್ಲಿರುವ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ
ಸಂಗೀತ ಶಿಕ್ಷಕರಾಗಿದ್ದಾರೆ. ಧಾರವಾಡ ಆಕಾಶವಾಣಿಯ ಬಿ ಹೈ ಶ್ರೇಣಿ ಕಲಾವಿದ ಕೂಡ.

ಸರ್ಕಿಟ್
ಸೇವೆಯಲ್ಲಿದ್ದ ಮತ್ತೊಬ್ಬ ಯುವಕ ಗುಲ್ಬರ್ಗದ ಸಂಗಮೇಶ ಪಾಟೀಲ. ಗುರುಗಳು ಸಾಹಿತ್ಯಕ್ಕೆ
ಅದೆಷ್ಟು ಒತ್ತು ಕೊಡುತ್ತಿದ್ದರು ಎಂಬ ನೆನಪುಗಳು ಸಂಗಮೇಶ್ ಅವರ ಬಳಿಯಿವೆ. ‘ಇಳೆ’ ಎಂಬ
ಶಬ್ದವನ್ನು ಯಳೆ ಎಂದು ಹಾಡುತ್ತಿದ್ದಾಗ ಪುಟ್ಟರಾಜರು ಕರೆದು ಸಾಹಿತ್ಯದ ಅರ್ಥ ಮತ್ತು
ಮಹತ್ವವನ್ನು ಬಿಡಿಸಿ ಹೇಳಿದ್ದರಂತೆ. ಸರ್ಕಿಟ್ನಲ್ಲಿದ್ದ ಧಾರವಾಡದ ಆನಂದಗೌಡ
ಪಾಟೀಲರಲ್ಲಿ ರಾಗದ ಛಾಯೆಯ ಬಗ್ಗೆ ಅಜ್ಜ ಹೇಳಿದ ಮಾತುಗಳು ಹಸಿರಾಗಿವೆ. ರಾಷ್ಟ್ರಮಟ್ಟದ
ಪ್ರಶಸ್ತಿ ಪಡೆದಿರುವ ಆನಂದಗೌಡ, ಅಜ್ಜನಿಗೆ ಅಡುಗೆ ಮಾಡುತ್ತಿದ್ದರು. ಮತ್ತೊಬ್ಬ
ಸರ್ಕಿಟ್ ಸೇವಕರಾದ ಫಕ್ಕೀರಯ್ಯ ಅವರ ಬಳಿ ಅಜ್ಜನ ಅಧ್ಯಾತ್ಮದ ನೆನಪುಗಳಿವೆ. ಅಜ್ಜ
ಮಾಡುತ್ತಿದ್ದ ಮೂರು ತಾಸಿನ ಪೂಜೆಗೆ ಫಕ್ಕೀರಯ್ಯ ಅಣಿ ಮಾಡುತ್ತಿದ್ದರು. ಮೈಸೂರು ಸಮೀಪದ
ಸುತ್ತೂರು ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಬೀದರ್ ಜಿಲ್ಲೆಯ, ಹುಣಸಗೆರಿ ಗ್ರಾಮದ
ಶ್ರೀಕಾಂತ್ ಹಂಗರಗಿ ಕೂಡ ಸರ್ಕಿಟ್ ಸೇವೆಯಲ್ಲಿ ಅಜ್ಜನ ನೆನಪಿನ ಬುತ್ತಿ
ಕಟ್ಟಿಕೊಂಡವರು.
ಪುಣ್ಯಾಶ್ರಮದ ಸಂಗೀತ ಸೇವೆ ಆಶ್ರಮಕ್ಕೆ ಮಾತ್ರ ಸೀಮಿತವಲ್ಲ. ಆಶ್ರಮ ನಡೆಸುತ್ತಿರುವ
ಸಂಗೀತ ಕಾಲೇಜುಗಳಿಗೂ ಹರಿಯುತ್ತಿದೆ. ಆಶ್ರಮದ ವತಿಯಿಂದ ಬಿ.ಎ ಮ್ಯೂಸಿಕ್ ಮತ್ತು
ಬಿ.ಮ್ಯೂಸಿಕ್ ಕಾಲೇಜುಗಳು ನಡೆಯುತ್ತವೆ. ಅಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ
ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಗೀತ ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಹೇಮಾ
ನಾಯ್ಕರ್ ‘ಶ್ರೀಗುರು ಗುಣಗಾನ’ ಸಿ.ಡಿ ಹೊರ ತಂದಿದ್ದಾರೆ. ಅಂಧರಾದ ದಾವಣಗೆರೆಯ
ರಾಜೇಶ್ವರಿ, ಮಹಾರಾಷ್ಟ್ರ, ಸೊಲ್ಹಾಪುರ ಸಮೀಪದ ಮುಂಡೆವಾಡಿ ಗ್ರಾಮದ ಶ್ರೀಗೌರಿ ಸ್ವಾಮಿ
ಮುಂತಾದವರು ಸಂಗೀತ ಸಾಧನೆಯಲ್ಲಿ ತೊಡಗಿದ್ದಾರೆ.
ಆಶ್ರಮದಲ್ಲೇ ಕಲಿತ ಹಲವರು ಇಲ್ಲೇ ಉಪನ್ಯಾಸಕರಾಗಿದ್ದಾರೆ. ನಾರಾಯಣ ಹಿರೇಕೊಳಚಿ,
ಶರಣಕುಮಾರ್ ಗುತ್ತರಗಿ, ಶಿವಬಸಯ್ಯ ಗಡ್ಡದಮಠ, ಹನುಮಂತ ಕುಮಾರ್ ಕೊಡಗಾನೂರ,
ಮೃತ್ಯುಂಜಯ ಚಿಕ್ಕಸರೂರ, ಶ್ಯಾಮರಾವ್, ವಿಶ್ವನಾಥ್ ಹಿರೇಮಠ, ನಾಗರಾಜ ತೆಕ್ಕಲಕೋಟೆ,
ವಿರೂಪಾಕ್ಷ ಪಟ್ಟದಕಲ್ಲು ಮುಂತಾದವರು ಇಲ್ಲೇ ಸಂಗೀತ ಬೋಧಿಸುತ್ತಾರೆ. ಇವರೆಲ್ಲರೂ
ಪಂಚಾಕ್ಷರಿ ಗವಾಯಿಗಳು ಕಟ್ಟಿದ, ಪುಟ್ಟರಾಜ ಗವಾಯಿಗಳು ಮುನ್ನಡೆಸಿದ ಸಂಗೀತ
ಸಾಮ್ರಾಜ್ಯದಲ್ಲಿ ಸಪ್ತಸ್ವರಗಳ ಆರಾಧನೆಯಲ್ಲಿ ತೊಡಗಿದ್ದಾರೆ.
‘ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ತಪೋಃ ಶಕ್ತಿ ಪುಣ್ಯಾಶ್ರಮದಲ್ಲಿ
ಈಗಲೂ ಜೀವಂತವಾಗಿದೆ. ಪುಣ್ಯಾಶ್ರಮ ಅಂದರೆ ಸಂಗೀತ ನಿಧಿ’ ಎನ್ನುತ್ತಾರೆ
ಪುಣ್ಯಾಶ್ರಮದಲ್ಲಿ 11 ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ಇಂದು ಹಿಂದೂಸ್ತಾನಿ
ಸಂಗೀತದಲ್ಲಿ ದಿಗ್ಗಜ ಎನಿಸಿರುವ ಡಾ. ವೆಂಕಟೇಶ ಕುಮಾರ್. ಗದುಗಿನ ವೀರೇಶ್ವರ
ಪುಣ್ಯಾಶ್ರಮವನ್ನು 08372–238464 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.