Friday, July 29, 2011

ಶಹಬ್ಭಾಸ್ ಶರ್ವಾನಿ!













ಸಿಂಫಲ್ ನೀತಾ, ಸೈಲೆಂಟ್ ಮುಖೇಶ್!










ಅದು ಮುಂಬೈ ಮಹಾನಗರದ ಪೆಡ್ಡರ್ ರೋಡು. ಮುಂಜಾನೆ ಎಂಟು ಗಂಟೆ. ಪೀಕ್ ಅವರ್. ಗಿಜಿಗಿಜಿ ಬಿಜಿ. ಮುಂದೆ ನಿಧಾನವಾಗಿ ಸಾಗುತ್ತಿದ್ದ ಅಂಬಾಸಿಡರ್ ಕಾರು. ಹಿಂದಿನ ಸೀಟಿನಲ್ಲಿ ಸುಂದರ ಹುಡುಗಿ. ಅಂಬಾಸಿಡರ್ ಕಾರಿನ ಹಿಂದೆ ಆ ಹುಡುಗಿಯಷ್ಟೇ ಸುಂದರವಾಗಿದ್ದ ಫಿಯಟ್ ಕಾರು. ಪೆಡ್ಡರ್ ರಸ್ತೆಯ ಮೇನ್ ಸಿಗ್ನಲ್. ಸ್ಟಾಪ್ ಕೊಟ್ಟ ಅಂಬಾಸಿಡರ್. ಅದರಿಂದೆ ಫಿಯಟ್ ಕೂಡ ಫುಲ್ಸ್ಟಾಪ್...ತಕ್ಷಣ ಫಿಯಟ್ನಿಂದ ಕೆಳಗಿಳಿದು ಬಂದ ಗುಂಡು ದೇಹದ, ಮುದ್ದು ಮೊಗದ ಕಟ್ಟುಮಸ್ತು ಹುಡುಗ ಅಂಬಾಸಿಡರ್ ಹಿಂದಿನ ಸೀಟಿನ ಹುಡುಗಿಗೆ ಗ್ಲಾಸ್ ಓಪನ್ ಮಾಡುವಂತೆ ಸನ್ನೆ ಮಾಡಿದ. ಆಕೆ ತೆಗೆದಳು. ಹಿಂದೆ ಮುಂದೆ ನೋಡದೆ ‘ಐ ಲವ್ ಯೂ’ ಅಂದ. ಹುಡುಗಿ ತಡಬಡಾಯಿಸಿದಳು. ಮತ್ತೆ ಜೋರಾಗಿ ‘ಐ ಲವ್ ಯೂ’ ಅಂದ. ಅಕ್ಕ ಪಕ್ಕದವರಿಗೆಲ್ಲಾ ಕುತೂಹಲ. ಸಿಗ್ನಲ್ ಹಸಿರು ತೋರಿತು. ಈ ಗುಂಡ ಅಲ್ಲಾಡಲಿಲ್ಲ. ಹಿಂದೆ ಹಾರ್ನ್ ಮೊರೆತ ಕಿವಿಗಡುಚಿದವು. ‘ಐ ಲವ್ ಅನ್ನದಿದ್ದರೆ ಗಾಡಿ ತೆಗೆಯೊಲ್ಲ’ ಅಂತ ತಾಕೀತೂ ಬೇರೆ. ಅವಳಿಗೆ ಏನೂ ತೋಚಲಿಲ್ಲ. ಅಷ್ಟರಲ್ಲಿ ಬಂದ ಪೊಲೀಸು ಅವನಿಗೆ ಎರಡು ತದುಕಿದ. ಎಳೆದು ಕಾರಿನಲ್ಲಿ ಕೂರಿಸಿ ಗಾಡಿ ತೆಗೆಸಿ ರೋಡ್ ಕ್ಲಿಯರ್ ಮಾಡಿದ!
ಆ ಗುಂಡು ಹುಡುಗ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವನು. ಆದರೆ ಅವಳು ಮುಂಬೈನ ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಕೋಟಿನೊಳಗೇ ಅವನ ಕನಸು, ವಿಮಾನದಲ್ಲೇ ಅವನ ವಿಶ್ರಾಂತಿ. ಆದರೆ ಬಾಂದ್ರಾದ ನೃತ್ಯ ಶಾಲೆಯಲ್ಲಿ ಅವಳ ಬಣ್ಣದ ಕನಸು, ನಟರಾಜನ ಮುಂದೆ ಹಠಯೋಗವೇ ಅವಳ ವಿಶ್ರಾಂತಿ. ಸ್ಟಾರ್ ಹೊಟೇಲ್ಗಳಲ್ಲಿ ಅವನ ಖಾನಾ ಸೋನಾ, ಆದರೆ ನೃತ್ಯವೇ ಅವಳ ಊಟ ನಿದ್ದೆ.....ಅವನು ಮುಖೇಶ್ ಧೀರೂಬಾಯ್ ಅಂಬಾನಿ, ಅವಳು ನೀತಾ ಮುಖೇಶ್ ಅಂಬಾನಿ!
ಜಗತ್ತಿನ ಸೂಪರ್ ಶ್ರೀಮಂತ ಮನುಷ್ಯನ ಹಿಂದೆ ಇಂಥದ್ದೊಂದು ಫ್ಯಾಸಿನೇಟಿಂಗ್ ಸ್ಟೋರಿಯಿದೆ. ಅಂಬಾನಿ ಕುಟುಂಬದ ಹುಡುಗನೊಬ್ಬ ಮಿಡ್ಲ್ ಕ್ಲಾಸ್ ಹುಡುಗಿಯನ್ನು ಮೆಚ್ಚಿದ್ದ. ಬಿಸಿನೆಸ್ ವರ್ಲ್ಡ್ ಬೆಚ್ಚಿ ಬಿದ್ದಿತ್ತು. ಸಿಲ್ಲಿ ಥಿಂಕಿಂಗ್ ಅಂದವರು ಅದೆಷ್ಟು ಮಂದಿಯೋ. ಆದರೆ ಮುಖೇಶ್ ಅಂಬಾನಿ ಎಲ್ಲಾ ಶ್ರೀಮಂತರಂತಿರಲಿಲ್ಲ. ಸಹೋದರ ಅನಿಲ್ ಅಂಬಾನಿ ಹಾಗೆ ಹೈ ಫೈ ಹುಂಬನೂ ಆಗಿರಲಿಲ್ಲ. ಅವನೊಳಗಿದ್ದ ಮೌನ ದೇವತೆ ಅವನನ್ನು ಸರಳತೆಯ ಸಾಕಾರ ಮೂರ್ತಿಯನ್ನಾಗಿ ಮಾಡಿತ್ತು. ಅಂತದೇ ಸರಳ ಸೌಂದರ್ಯ ಹುಡುಗಿಯನ್ನು ಮನಸಾರೆ ಮೆಚ್ಚಿಕೊಂಡಿದ್ದ.
ಮುಖೇಶ್ ನೀತಾಳನ್ನು ಹುಚ್ಚನಂತೆ ಹಚ್ಚಿಕೊಂಡಿದ್ದ. ಅವಳ ನೃತ್ಯ ರೂಪಕಗಳನ್ನು ಒಂದೂ ಬಿಡದೆ ನೋಡುತ್ತಿದ್ದ. ಅವಳೆಲ್ಲೇ ಹೋದರೂ ಅವಳ ಹಿಂದೆ ತೆರಳುತ್ತಿದ್ದ. ಒಂದು ದಿನ ನೀತಾಳ ಮನೆಗೆ ಒಂದು ಪೋನ್ ಕಾಲ್ ಬಂತು. ಆ ಕಡೆಯಿಂದ ‘ನಾನಮ್ಮ, ಧೀರೂಬಾಯ್ ಅಂಬಾನಿ ಮಾತನಾಡುತ್ತಿದ್ದೇನೆ’ ಎಂದು ಕೇಳಿ ಬಂದಾಗ ನೀತಾ ‘ರಾಂಗ್ನಂಬರ್’ ಅಂತ ಪೋನ್ ಕುಕ್ಕಿದ್ದಳು. ಅಂಬಾನಿಗಳಂಥಾ ಶ್ರಿಮಂತರಿಗೆ ನಮ್ಮ ಜೊತೆ ಏನು ಕೆಲಸ ಇರುತ್ತೆ ಅಂತ ಅವಳಿಗನ್ನಿಸಿತ್ತು. ಪಾಪ, ನೀತಾಳಿಗೆ ಮುಖೇಶ್, ಅಂಬಾನಿ ಕುಟುಂಬದವ ಅಂತಲೂ ಗೊತ್ತಿರಲಿಲ್ಲ!
ಇನ್ನೊಂದು ದಿನ ನೀತಾಳ ಮನೆಗೆ ಸ್ವತಃ ಧೀರೂಬಾಯ್ ಅಂಬಾನಿಯೇ ಬಂದರು. ಮಗಳನ್ನು ಕೊಡುವಂತೆ ನೀತಾ ಪೋಷಕರ ಮುಂದೆ ಧೀರೂಬಾಯ್ ಸಾಮಾನ್ಯರಂತೆ ಕೇಳಿಕೊಂಡರು. ಬಿಸಿನೆಸ್ಮಂದಿ ಬದುಕಲ್ಲೂ ಬಿಸಿನೆಸ್ ಮಾಡುತ್ತಾರೆ ಎಂಬ ಭಯ ನೀತಾಳ ಮನೆ ಮಂದಿಯನ್ನು ಕಾಡದೆ ಬಿಡಲಿಲ್ಲ. ಆದರೆ ಧೀರೂಬಾಯ್ ನೀತಾಳ ಮನೆಯವರನ್ನು, ಮಗ ಮೆಚ್ಚಿದವಳನ್ನು ಒಪ್ಪಿಸಿ ಮದುವೆ ಶಾಸ್ತ್ರ ಮುಗಿಸಿಯೇ ಬಿಟ್ಟರು. ಈಗ ಅವರ ಸಂಸಾರಕ್ಕೆ ತುಂಬು 25 ವರ್ಷ. ಮೂರು ಮಕ್ಕಳು.
ಮುಖೇಶ್ಗೆ ನೀತಾ ಎಂದರೆ ಸದಾ ಅಚ್ಚುಮೆಚ್ಚು. ನೀತಾ ಅಬಿಪ್ರಾಯ ಕೇಳದೆ ಮುಖೇಶ್ ಯಾವ ಪ್ರಮುಖ ನಿರ್ಧಾರವನ್ನೂ ತೆಗೆದುಕೊಳ್ಳಲ್ವಂತೆ. ಮುಖೇಶ್ನ ಎಲ್ಲಾ ಯಶಸ್ಸಿನ ಹಿಂದೆ ನೀತಾಳ ಛಾಯೆ ಇದ್ದೇ ಇದೆ. ಅವಳೂ ಅಷ್ಟೆ, ಮುಖೇಶ್ ಇಲ್ಲದೆ ಅವಳಿಲ್ಲ. 25ವರ್ಷಗಳ ಹಿಂದಿದ್ದ ಸರಳತೆ ನೀತಾಳಲ್ಲಿ ಇನ್ನೂ ಹಾಗೇ ಇದೆ. ನಟನಾ ಹವ್ಯಾಸ ಇನ್ನೂ ಮುಂದುವರೆಯುತ್ತಲೇ ಇದೆ. ಧೀರೂಬಾಯಿ ಅಂಬಾನಿ ಪೌಂಡೇಷನ್ ಅಡಿಯಲ್ಲಿ ನೀತಾ ಕಟ್ಟಿರುವ ಶಾಲೆಯಲ್ಲಿ ನೀತಾಳೇ ನೃತ್ಯ ಶಿಕ್ಷಕಿ. ‘ದೃಷ್ಟಿ ಪ್ರಾಜೆಕ್ಟ್’ ಕೆಳಗೆ ಲಕ್ಷಾಂತರ ದೃಷ್ಟಿಹೀನರಿಗೆ ನೀತಾ ಕಣ್ಣಾಗಿದ್ದಾರೆ.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ‘ ಅಂತ ಮುಖೇಶ್ ಅಂದರೆ, ‘ ಐ ವಾಸ್ ಕುಕ್ಡ್ ಬೈ ಮುಖೇಶ್, ಹೂಕ್ಡ್ ಬೈ ಮುಖೇಶ್, ಬುಕ್ಡ್ ಬೈ ಮುಖೇಶ್....ಅವರ ಹೆಂಡಿತಿಯಾಗಿದ್ದಕ್ಕೆ ನಾ ಧನ್ಯೋಸ್ಮಿ’ ಅಂತಾಳೆ ನೀತಾ!

ಸೈಕಲ್ ಸವಾರನಿಗೆ ಸೆಲ್ಯೂಟ್!






ಹೊಡೆಯುವವರಿಗೆಲ್ಲಾ ಪ್ರಾನ್ಸಿನ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಅಂದರೆ ಒಂದು ಇನ್ಸ್ಫಿರೇಷನ್. ಅವನು ಸೈಕಲ್ ತುಳಿಯುವಾಗ ಅವನ ಕಣ್ಣುಗಳ ದೃಷ್ಟಿ ನೇರ ಮತ್ತು ದಿಟ್ಟ. ಸೈಕ್ಲಿಂಗ್ನಲ್ಲಿ ಬರೋಬ್ಬರಿ ಏಳು ಬಾರಿ ವಿಶ್ವಪ್ರಸಿದ್ಧ ‘ಟೂರ್ ಡಿ’ ಪ್ರಶಸ್ತಿ ಗೆದ್ದಿರುವ ಲ್ಯಾನ್ಸ್ ಜಗತ್ಪ್ರಸಿದ್ಧ ಸೈಕಲ್ ಸರದಾರ!
ಆಗ ಲ್ಯಾನ್ಸ್ ಉತ್ತುಂಗದಲ್ಲಿದ್ದ. ಅವನು 10 ‘ಟೂರ್ ಡಿ’ಗಳನ್ನು ಮುಡಿಗೇರಿಸಿಕೊಳ್ಳುತ್ತಾನೆ ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿತ್ತು. ಅವನು ಇದ್ದಕ್ಕಿದ್ದಂತೆ ಒಂದು ದಿನ ಸೈಕಲ್ಗೆ ಸೆಲ್ಯೂಟ್ ಹೊಡೆದು ನಿವೃತ್ತಿ ಘೋಷಣೆ ಮಾಡಿಬಿಟ್ಟ. ಲ್ಯಾನ್ಸ್ ಅದಕ್ಕೆ ಕೊಟ್ಟ ಕಾರಣಕ್ಕೆ ಇಡೀ ಜಗತ್ತು ಬೆರಗಾಯಿತು. 30 ವರ್ಷಗಳ ಕಾಲ ಮನಸ್ಸನ್ನು ಕೊರೆಯುತ್ತಿದ್ದ ಹುಳವನ್ನು ಲ್ಯಾನ್ಸ್ ಒಮ್ಮೆಲೇ ಹೊರಬಿಟ್ಟು ಶಾಕ್ ಕೊಟ್ಟ.
ಲ್ಯಾನ್ಸ್ ಈಗಲೂ ವೃಷಣ ಕ್ಯಾನ್ಸರ್ನಿಂದ ನರಳುತ್ತಿದ್ದಾನೆ. ರೋಗ ಪತ್ತೆಯಾದಾಗ ಅವನು ಒಂದೂ ‘ಟೂರ್ ಡಿ’ ಗಳಿಸಿರಲಿಲ್ಲ. ಅವನು ಒಂದು ಸುತ್ತು ಸೈಕಲ್ ತುಳಿಯುವಷ್ಟರಲ್ಲಿ ಅವರ ಎರಡೂ ವೃಷಣಗಳು ಊದಿಕೊಳ್ಳುತ್ತಿದ್ದವು. ಆ ಯಾತನೆ ವರ್ಣನಾತೀತ. ಬಹಳ ಸೂಕ್ಷ್ಮ ಅಂಗ ಅದು. ಸೈಕಲ್ ಸೀಟಿನ ಏಟು ವೃಷಣಕ್ಕೆ ಬಿದ್ದರೆ ಆತ ಸತ್ತೂ ಹೋಗಬಹುದು. ಗುಪ್ತಾಂಗ ಬೇರೆ, ಯಾರ ಬಳಿಯೂ ಹೇಳಿಕೊಳ್ಳುವ ಹಾಗೂ ಇಲ್ಲ. ಇಂತಹ ವಿಷಮ ಸ್ಥಿತಿಯಲ್ಲೂ ಲ್ಯಾನ್ಸ್ ಅಭ್ಯಾಸ ಮಾಡುತ್ತಿದ್ದ. ಅದ್ಹೇಗೆ ಮಾಡುತ್ತಿದ್ದ ಅಂತ ಆ ದೇವರೇ ಬಲ್ಲ! ಪ್ರತಿ ಸಲ ‘ಟೂರ್ ಡಿ’ ಗೆದ್ದಾಗಲೂ ಲ್ಯಾನ್ಸ್ ಒಂದೊಂದು ಆಪರೇಷನ್ ಮಾಡಿಸಿಕೊಳ್ಳುತ್ತಿದ್ದ. ಮಾಹಾಮಾರಿ ಕ್ಯಾನ್ಸರ್ ಗೆಲ್ಲಲು ಅವನು ಮಾಡಿರದ ಮದ್ದೇ ಇಲ್ಲ. ಚಿಕೆತ್ಸೆಗಾಗಿ ಜಗತ್ತು ಸುತ್ತಿದ್ದಾನೆ.
ಲ್ಯಾನ್ಸ್ ಕ್ಯಾನ್ಸರ್ ಜೊತೆ ಹೋರಾಡುತ್ತಲೇ ಏಳು ‘ಟೂರ್ ಡಿ’ ಗೆದ್ದಿದ್ದಾನೆ. ಅವನನ್ನು ಕ್ಯಾನ್ಸರ್ ಇನ್ನೂ ಕಾಡುತ್ತಲೇ ಇದೆ. ಕಡೆಗೂ ಅವನು ಹೈರಾಣಾಗಿ ನನಗೆ ಟೆಸ್ಟಿಕಲ್ ಕ್ಯಾನ್ಸರ್ ಇದೆ ಅಂತ ಹೇಳಿಕೊಂಡಿದ್ದಾನೆ. ಈಗ ಅವನು ಸೈಕಲ್ ತುಳಿಯಲಾರ. ಕ್ಯಾನ್ಸರ್ ಮೆದುಳಿನವರೆಗೆ ವ್ಯಾಪಿಸಿದೆ. ಸೈಕಲ್ ಓಟ ನಿಲ್ಲಿಸಿದ್ದರೂ, ಅವನು ಕ್ಯಾನ್ಸರ್ ವಿರುದ್ಧದ ಹೋರಾಟ ನಿಲ್ಲಿಸಿಲ್ಲ. ‘ಲಿವ್ ಸ್ಟ್ರಾಂಗ್ ಪೌಂಡೇಷನ್’ ಕಟ್ಟಿಕೊಂಡು ಕ್ಯಾನ್ಸರ್ ರೋಗಿಗಳಲ್ಲಿ ಚೈತನ್ಯ ತುಂಬುತ್ತಿದ್ದಾನೆ.

ಶಹಬ್ಭಾಸ್ ಶರ್ವಾನಿ!







ಅವಳು ಹಗ್ಗದ ಜೊತೆ ಆಟಕ್ಕಿಳಿಯುತ್ತಾಳೆ. ತನ್ನ 5 ಅಡಿ ದೇಹವನ್ನು ಸುರುಳಿ ಸುತ್ತಿಕೊಂಡು ಹಗ್ಗವಾಗಿ ಜಗ್ಗುತ್ತಾಳೆ...ಕಂಬವನ್ನು ಕೈಲಿ ಹಿಡಿದು ಗರಗರ ಗಿರಕಿ ಹೊಡೆಯುತ್ತಾಳೆ. ಕಂಬದೆತ್ತರಕ್ಕೇರುತ್ತಾಳೆ.....ಕತ್ತಿಯನ್ನು ಕೈಯ್ಯಲ್ಲಿ ಹಿಡಿದು ಮುಗಿಲೆತ್ತರಕ್ಕೆ ಹಾರಿ ‘ಕಳರಿ ಪಯಟ್ಟು‘ವನ್ನು ಧರೆಗಿಳಿಸುತ್ತಾಳೆ.....ಮುಖವಾಡ ಧರಿಸಿ ಧಗಧಗನೆ ಉರಿದು ‘ದೇವರ ಕೋಲಾ’ವನ್ನೇ ಮುರಿಯುತ್ತಾಳೆ....ಅವಳಿಡುವ ಹೆಜ್ಜೆಗಳಿಂದ ಭರತನಾಟ್ಯ, ಕಥಕ್ಕಳಿಗಳಿಗೆ ಬಣ್ಣ ತುಂಬುತ್ತಾಳೆ. ಅವಳು ಹಾಕುವ ಅದ್ಭುತ ಆಸನಗಳಿಂದ ‘ಯೋಗ’ರಾಣಿಯಾಗಿ ಮಿಂಚುತ್ತಾಳೆ.....!
ಅವಳು ಖ್ಯಾತ ನರ್ತಕಿ ಇಶಾ ಶರ್ವಾನಿ. ಒಬ್ಬರು ಒಂದು ಕಲೆಯನ್ನು ದಕ್ಕಿಸಿಕೊಂಡು ಜೀರ್ಣಿಸಿಕೊಳ್ಳಲು ಒಂದು ಜನ್ಮವೇ ಸಾಕಾಗುವುದಿಲ್ಲ. ಆದರೆ ಈ ಹುಡುಗಿಗೆ ಐದಾರು ನೃತ್ಯ ಪ್ರಕಾರಗಳು ಅರಸಿ ಬಂದಿವೆ. ಕಳರಿ ಪಯಟ್ಟು, ಬಂಗಾಳದ ಚೌ, ಭರತ ನಾಟ್ಯ, ಕಥಕ್, ಹಗ್ಗದ ನೃತ್ಯ, ಕಂಬ ಕುಣಿತ, ದೇವರ ಕೋಲಾ, ಪೂಜಾ ಕುಣಿತ.......ಅಬ್ಬಬ್ಬಾ ಒಂದು ಹುಡುಗಿ ಇಷ್ಟೆಲ್ಲಾ ಮಾಡಲು ಸಾಧ್ಯವೇ! ಇಶಾ ಬಾಲಿವುಡ್ನಲ್ಲಿ ಬೇಡಿಕೆಯ ನರ್ತಕಿ. ‘ಕಿಸ್ನಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಬಂದ ಇಶಾ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಆದರೆ ಬಾಲಿವುಡ್ ಅವಳ ಕರ್ಮಭೂಮಿಯಲ್ಲ. ಅವಳ ನೃತ್ಯ ಸರಕಿನಲ್ಲಿ ಬರೀ ಹತ್ತು ಪರ್ಸೆಂಟ್ ಕೊಟ್ಟರೂ ಬಾಲಿವುಡ್ನಲ್ಲಿ ಬೆರಗು ಮೂಡುತ್ತದೆ. ಅವಳ ಕರ್ಮಭೂಮಿಯೇನಿದ್ದರೂ ರಂಜಸಜ್ಜಿಕೆಯೇ . ಅಲ್ಲಿ ಅವಳು ಅರಳುತ್ತಾಳೆ, ಮಿನುಗುತ್ತಾಳೆ! ಸದ್ಯಕ್ಕೆ ‘ದಕ್ಷಸೇಥ್ ನೃತ್ಯ ಕಂಪನಿ’ಗಾಗಿ ನೃತ್ಯ ಪ್ರದರ್ಶನ ನೀಡುತ್ತಿರುವ ಇಶಾ ಶರ್ವಾನಿ ತನ್ನದೇ ಸ್ವಂತ ನೃತ್ಯ ಪ್ರಕಾರವನ್ನು ಸಂಶೋಧನೆ ಮಾಡುತ್ತಿದ್ದಾಳೆ.

ಹುತಾತ್ಮ ಯಶವಂತ ಸೋನಾವಣೆ












ಅಕ್ಷಯ ಪಾತ್ರೆ ಶಶಾಂಕನ ಕೊಳಲು!






ಬೆಂಗಳೂರಿನ ಚಾಮರಾಜಪೇಟೆ ಕೋಟೆ ಪ್ರೌಢಶಾಲೆ ಆವರಣದಲ್ಲಿ ರಾಮೋತ್ಸವ ಸಂಗೀತ ಕಚೇರಿ ನಡೆಯುವಾಗ ಆ ಹುಡುಗ ಗೋಲಿ ಆಡುತ್ತಿದ್ದ. ಕೂತಲ್ಲಿ ಕೂರುತ್ತಿರಲಿಲ್ಲ. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಬಸ್ಸು ಬಿಟ್ಟುಕೊಂಡು ಸಭಾಂಗಣದಲ್ಲೆಲ್ಲಾ ಓಡಾಡುತ್ತಿದ್ದ. ಅಲ್ಲೇ ಮಕ್ಕಳ ತಂಡ ಕಟ್ಟಿಕೊಂಡು ಕುಣಿದಾಡುತ್ತಿದ್ದ. ಆ ಮುದ್ದುಗಲ್ಲದ ಪೋರನಿಗೆ ಮುತ್ತು ಕೊಟ್ಟವರಿಗೆ, ಕೆನ್ನೆ ಚಿವುಟಿದವರಿಗೆ, ಕಿವಿ ಹಿಂಡಿದವರಿಗೆ ಲೆಕ್ಕವೇ ಇಲ್ಲ. ಶಾಂತವಾಗಿ ಸಂಗೀತ ಆನಂದಿಸುವವರು ಅವನ ತುಂಟತನಕ್ಕೆ ಗದರಿದ್ದೂ ಉಂಟು. ಆದರೆ ಅವನು ಅಂದುಕೊಂಡಷ್ಟು ತುಂಟ ಹುಡುಗನಾಗಿರಲಿಲ್ಲ. ಅವನು ಸಂಗೀತ ಕೇಳುತ್ತಿಲ್ಲ ಅಂದಕೊಂಡರೆ ಅದು ಶುದ್ಧ ಸುಳ್ಳು. ಯಾರಾದರೂ ‘ಪುಟ್ಟಾ ಇದು ಯಾವ ರಾಗ’ ಎಂದು ಕೇಳಿದರೆ, ‘ನಿಮಗೆ ಅಷ್ಟು ಗೊತ್ತಿಲ್ಲವೆ, ಇದು ಆನಂದ ಭೈರವಿ’ ಎನ್ನುತ್ತಾ ಓಡಿಬಿಡುತ್ತಿದ್ದ! ವೇದಿಕೆಯ ಮುಂದೆ ಆಟವಾಡಿಕೊಂಡಿದ್ದ ಆ ಹುಡುಗ ತನ್ನ ಏಳನೇ ವಯಸ್ಸಿನಲ್ಲಿ ಅದೇ ವೇದಿಕೆಯ ಮೇಲೆ ಬಂದ. ಅಲ್ಲೂ ಅವನ ತುಂಟಾಟ ನಿಲ್ಲಲೇ ಇಲ್ಲ. ಆದರೆ ಅದು ಎಳೆ ವಯಸ್ಸಿನ ತುಂಟಾಟವಲ್ಲ. ಅದು ವಿದ್ವತ್ತಿನ ತುಂಟಾಟ!
ವಿಶ್ವಕಂಡ ಕೊಳಲು ಮಾಂತ್ರಿಕ ಶಶಾಂಕ್ ಸುಬ್ರಮಣ್ಯ ಅಂದು ತುಂಟಾದದ ಹುಡುಗನಾಗಿದ್ದ. ಬೆಂಗಳೂರು ಮಂದಿಯ ಕಣ್ಣುಮುಂದೆಯೇ ಇದ್ದ. ಎಲ್ಲರ ಪ್ರೀತಿಯ ಶಶಾಂಕ್ ಆಗಿದ್ದ. ಆದರೆ ಅವನು ಎತ್ತರಕ್ಕೆ ಏರಿದ ರೀತಿ ಆಶ್ಚರ್ಯ ಹಾಗೂ ಅದ್ಭುತಗಳ ಯಾತ್ರೆ. ಅಂದು ಆರಂಭವಾದ ಅವನ ಬಿದಿರು ಕೋಲಿನ ಗಾಲಿ ಎಂದೂ ನಿಲ್ಲಲಿಲ್ಲ. 11ನೇ ವಯಸ್ಸಿನ ವೇಳೆಗಾಗಲೇ ಅವನು ಜಗದ್ವಿಖ್ಯಾತಿಯಾಗಿ ಹೋಗಿದ್ದ. ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರನ್ನೆಲ್ಲಾ ಶಶಾಂಕ್ ಚಿಕ್ಕವನಿರುವಾಗಲೇ ಜೊತೆಯಾಗಿ ‘ಚೈಲ್ಡ್ ಪ್ರಾಡಜಿ’ ಅನ್ನಿಸಿಕೊಂಡ. ವಿಶ್ವದ ಎಲ್ಲಾ ಶೈಲಿಯ ಕೊಳಲುವಾದಕರ ನಡುವೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜೊತೆಯಾಗಿಸಿದ ಕೀರ್ತಿಯನ್ನು ತನ್ನದಾಗಿಸಿಕೊಂಡ. 1991ರಲ್ಲಿ ಅವನು ಬರೆದ ಇತಿಹಾಸ ಇನ್ನೂ ಹಚ್ಚ ಹಸಿರಾಗಿಯೇ ಉಳಿದಿದೆ. ಚೆನ್ನೈನ ಪ್ರತಿಷ್ಠಿತ ಮ್ಯುಸಿಕ್ ಅಕಾಡೆಮಿಯಲ್ಲಿ ಹಿರಿಯ ಹಾಗೂ ಪ್ರಬುದ್ಧ ಕಲಾವಿದರ ಪ್ರೈಮ್ ಸ್ಲಾಟ್ನಲ್ಲಿ ಕೊಳಲು ನುಡಿಸಿ ಶಶಾಂಕ್ ಮೈಲಿಗಲ್ಲು ನಿರ್ಮಿಸಿದ. ಆ ಕಲ್ಲನ್ನು ಕ್ರಮಿಸುವ ದಾರಿಹೋಕ ಇನ್ನೂ ಹುಟ್ಟಿಲ್ಲ!
ಶಶಾಂಕ್ಗೆ ಈಗ 34 ವರ್ಷ ವಯಸ್ಸು. ಪ್ರಖ್ಯಾತ ಭರತನಾಟ್ಯ ಕಲಾವಿದೆಯ ಪತಿ ಹಾಗೂ ಮಗುವೊಂದರ ತಂದೆ. ಕಿರಿಯ ಕಲಾವಿದನಾಗಿ ಮಿಂಚಿದ ಶಶಾಂಕ್ ಕೊಳಲಿನ ಶಕ್ತಿ ಕುಗ್ಗಿಲ್ಲ. ಶಶಾಂಕ್ ಸಂಗೀತದ ಸೌಂದರ್ಯ ದಿನದಿನಕ್ಕೂ ಮಿನುಗುತ್ತಲೇ ಇದೆ. ಅವರ ಸಂಗೀತ ಕಚೇರಿ ಬಹಳ ವಿಶೇಷವಾಗಿರುತ್ತದೆ. ರಸಿಕರ ಮೂಡ್ ಮೇಲೆ ಅವರ ಕಛೇರಿ ಕಳೆಕಟ್ಟುತ್ತದೆ. ಅವರು ತಮಗೆ ಇಷ್ಟ ಬಂದ ಅಥವಾ ಅಭ್ಯಾಸ ಮಾಡಿದ ಕೃತಿ, ರಾಗ ನುಡಿಸುವುದಿಲ್ಲ. ರಸಿಕರು ಕೇಳಿದ್ದನ್ನು ಉಣಬಡಿಸುತ್ತಾರೆ. ಅವರ ಕೊಳಲು ಅಕ್ಷಯಪಾತ್ರೆ ಇದ್ದಂತೆ!
ಶಶಾಂಕ್ ಸುಬ್ರಮಣ್ಯ ಹಾಸನ ಮೂಲದವರು. ಪ್ರಾಥಮಿಕವಾಗಿ ತಂದೆ ಸುಬ್ರವಣ್ಯ ಅವರಿಂದಲೇ ಸಂಗೀತ ಪಾಠ ಆರಂಭಿಸಿದ ಅವರು ಆರ್. ಕೆ.ಶ್ರೀಕಂಠನ್, ಪಾಲ್ಗಾಟ್ ಕೆ.ವಿ. ನಾರಾಯಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಬೆಳೆದು ತಮ್ಮದೇ ಆದ ಸ್ವಂತ ಶೈಲಿ ರೂಢಿಸಿಕೊಂಡರು. ಶಶಾಂಕ್ ಅವರ ಸೌಂದರ್ಯ ತುಂಬುವ ಆಲಾಪ, ಶುದ್ಧ ಕಲ್ಪನಾ ಸ್ವರಗಳು, ವರ್ಣಮಯ ರಾಗ ತಾನ ಪಲ್ಲವಿ ಕೇಳುಗರನ್ನು ಆನಂದದ ಕಡಲಲ್ಲಿ ತೇಲಿಸುತ್ತವೆ.
2009ರಲ್ಲಿ ಅವರು ವಿಶ್ವಶ್ರೇಷ್ಠ ಗ್ರಾಮ್ಮಿ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಬಿಬಿಸಿ ಚಾನೆಲ್ ಶಶಾಂಕ್ ಮೇಲೆ ‘ಡೆಸ್ಟಿನೇಷನ್ ಮ್ಯುಸಿಕ್’ ಡಾಕ್ಯುಮೆಂಟರಿ ನಿರ್ಮಿಸಿರುವುದು ಅವರ ವಿದ್ವತ್ತಿನ ಪ್ರತೀಕ!



ಹುತಾತ್ಮ ಯಶವಂತ ಸೋನಾವಣೆ

ಅವ್ಯವಸ್ಥೆಯ ವಿರುದ್ಧ ತೊಡೆ ತಟ್ಟಿ ನಿಂತು ಜೀವತೆತ್ತ ಮಹಾರಾಷ್ಟ್ರದ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ ಸೋನಾವಣೆ ಅವರಿಗೆ ಸರ್ಕಾರಿಕೆಲಸ ವರಪ್ರಸಾದವಾಗಿತ್ತು. ಕರ್ತವ್ಯಕ್ಕಾಗಿ ಅವರ ಹೃದಯ ಸದಾ ತುಡಿಯುತ್ತಿತ್ತು. ಮನೊಳಗಿದ್ದ ಧೈರ್ಯ ಯಾವುದಕ್ಕೂ ಹಿಂಜರಿಯುತ್ತಿರಲಿಲ್ಲ. ಅನ್ನಿಸಿದ್ದನ್ನು ಹಿಂದೆ ಮುಂದೆ ನೋಡದೆ ಹೇಳುತ್ತಿದ್ದರು. ಇಟ್ಟ ಹೆಜ್ಜೆಯನ್ನು ಹಿಂದಿಕ್ಕುತ್ತಿರಲಿಲ್ಲ. ಸಾಮಾನ್ಯರ ನೋವಿಗೆ ಸ್ಪಂದಿಸುತ್ತಿದ್ದರು. ಸಾಮಾನ್ಯರ ಸೇವಕರಂತಿದ್ದರು. ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಮಾತನ್ನು ಅಕ್ಷರಶಃ ನಂಬಿದ್ದರು. ಬಹುಶಃ ಇದೇ ಅವರಿಗೆ ಮುಳುವಾಯಿತು!
ಗಣರಾಜ್ಯೋತ್ಸವದ ಹಿಂದಿನ ದಿನ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಯಶವಂತ ಸೋನಾವಣೆ ಬಲಿಯಾದಾಗ ನಾಸಿಕ್ ಹಾಗೂ ಮಾಲೆಗಾವ್ ನಗರಗಳ ದುಖಃದ ಕಟ್ಟೆ ಒಡೆಯಿತು. ಮನೆ ಮಗನನ್ನು ಕಳೆದುಕೊಂಡಂತೆ ಜನರು ರಸ್ತೆಯಲ್ಲೆಲ್ಲಾ ಕಣ್ಣೀರು ಸುರಿಸುತ್ತಿದ್ದರು. ಬೀದಿಬೀದಿಗಳಲ್ಲಿ ಅವರ ಶ್ರದ್ಧಾಂಜಲಿ ಭಾವಚಿತ್ರಗಳು ರಾರಾಜಿಸುತ್ತಿದ್ದವು. ನಾಸಿಕ್ ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳವಾದರೆ, ಮಾಲೆಗಾವ್ ಅವರ ಹುಟ್ಟೂರು. ಮಾಲೆಗಾವ್ ನಗರವನ್ನು ಅವರು ದತ್ತು ತೆಗೆದುಕೊಂಡು ಹುಟ್ಟೂರಿನ ಋಣ ತೀರಿಸಿದ್ದರು. ಅವರಿಂದ ಮಾಲೆಗಾವ್ ಒಂದು ಮಾದರಿ ನಗರವಾಗಿ ರೂಪಗೊಂಡಿತ್ತು.
ಮಹಾರಾಷ್ಟ್ರ ರಾಜ್ಯವನ್ನು ಆಳುತ್ತಿರುವ ಪೆಟ್ರೋಲ್ ಮಾಪಿಯಾವನ್ನು ಅಳಿಸಲು ಯಶವಂತ್ ಟೊಂಕಕಟ್ಟಿ ನಿಂತಿದ್ದರು. ಈ ಉದ್ದೇಶಕ್ಕಾಗಿಯೇ ಅವರನ್ನು ರಾಜ್ಯ ಸರ್ಕಾರಿ ನೌಕರಿಯಿಂದ ಐಎಎಸ್ ದರ್ಜೆ ನೌಕರಿಗೆ ಏರಿಸಲಾಗಿತ್ತು. ಅವರು ಈ ಎತ್ತರಕ್ಕೆ ಏರುವಷ್ಟರಲ್ಲಿ ‘ಕ್ಲೀನ್ಹ್ಯಾಂಡ್ ಅಧಿಕಾರಿ’ ಎಂದು ಹೆಸರುವಾಸಿಯಾಗಿದ್ದರು. ಅವರ ಹಿಂದಿನ 14 ವರ್ಷ ಕೆಲಸಗಳ ಸೇವೆ ಸಾಹಸಮಯ ಅಧ್ಯಾಯ. ಸೂಕ್ಷ್ಮವಾದ ಕೋಮುಗಲಭೆಗಳನ್ನು ಅವರು ಬಹಳ ಸೂಕ್ಷ್ಮವಾಗಿಯೇ ನಿರ್ವಹಿಸಿದ್ದರು. ಕೋಮುಗಳ ನಡುವೆ ಬಾಂಧವ್ಯದ ಬೆಸುಗೆ ಬೆಸೆದಿದ್ದರು. ಮನೆಮನೆಗೂ ಭೇಟಿ ನೀಡಿ ಸಮಸ್ಯೆ ಆಲಿಸುವಂಥ ಗುಣ ಅವರಲ್ಲಿತ್ತು.
48ವರ್ಷ ವಯಸ್ಸಿನ ಯಶವಂತ್ ಉತ್ಕಟ ಪ್ರಾಮಾಣಿಕ ವ್ಯಕ್ತಿ. ಅವರಿಗೆ ಖಾಸಗೀ ಬದುಕು ಇರಲೇ ಇಲ್ಲ. ಸರ್ಕಾರಿ ಕೆಲಸವನ್ನು ಜನಸೇವೆಯ ಕೆಲಸ ಎಂದೇ ನಂಬಿದ್ದರು. ಪತಿಯನ್ನು ಕಳೆದುಕೊಂಡ ಅವರ ಪತ್ನಿಯ ಬರಿದಾಗಿದೆ. ಶಾಲೆಗೆ ಹೋಗುವ ಅವರ ಇಬ್ಬರ ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ.
ಇಂದು ಹುತಾತ್ಮರ ದಿನಾಚರಣೆ. ಯಶವಂತ ಸೊನಾವಣೆ ಅವರ ಪ್ರಾಮಾಣಿಕತೆ ಅವರು ಜೀವ ತೆತ್ತಾಗಲೇ ವಿಶ್ವಕ್ಕೆ ಗೊತ್ತಾಗಿದ್ದು. ವ್ಯವಸ್ಥೆಯ ಕೊಳೆಯನ್ನು ಕೀಳುತ್ತಾ ಜೀವ ತೆತ್ತವರಿಗೆ ಅಮರತ್ವದ ಮರುಜೀವ ಕೊಡುವುದೇ ಜನವರಿ ಮೂವತ್ತರ ವಿಶೇಷ. ಇಗ ಯಶವಂತ ಸೊನಾವಣೆ ಅಮರರು!

ದಿಟ್ಟಮಹಿಳೆ ಗಾಯತ್ರಿ

ಜನವರಿ 26, 20011. ಅದು ನಮ್ಮ ಸಂವಿಧಾನದ 62ನೇ ಹುಟ್ಟುಹಬ್ಬ. ಈ ನೆಲದ ಕಾನೂನು ಸಂವಿಧಾನದ ಆಶಯಗಳನ್ನು ಕಾರ್ಯಕೂಪಕ್ಕೆ ತರುವಲ್ಲಿ , ಈ ಬಾರಿ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಸಾಕ್ಷಿಯಾಗಿದ್ದು ವಿಶೇಷ. ಅದಕ್ಕೆ ಕಾರಣ ಕೇರಳದ ಮಹಿಳಾ ವಾಯುಪಡೆ ಅಧಿಕಾರಿ ಎನ್. ಗಾಯತ್ರಿ ಕಾರಣ. ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯಪಾಲರಿಗೆ ಸಲ್ಲಿಸುವ ಧ್ವಜವಂದನೆ ಕಾರ್ಯಕ್ಕೆ ನೇತೃತ್ವ ವಹಿಸಿದ ದೇಶದ ಮೊದಲ ಮಹಿಳಾ ಅಧಿಕಾರಿಯಾಗಿ ಗಾಯತ್ರಿ ಇತಿಹಾಸ ನಿರ್ಮಿಸಿದರು.
ಅಂದು ನಡೆದ ಕಾರ್ಯಕ್ರಮದಲ್ಲಿ ಇಡೀ ದೇಶದ ಚಿತ್ರ ಗಾಯತ್ರಿ ಅವರತ್ತ ನೆಟ್ಟಿತ್ತು. ಗಣರಾಜ್ಯೋತ್ಸವ ಧ್ವಜವಂದನೆಯಂಣಹ ಕಾರ್ಯವನ್ನುವನ್ನು ಗಾಯತ್ರಿ ಯಾವುದೇ ಅಳುಕಿಲ್ಲದೆ ನಿರ್ವಹಿಸಿದರು. ತಮ್ಮ ಕಾರ್ಯವನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ ಗಾಯತ್ರಿ ದೇಶದ ಮೊದಲಿಗರಾದರು.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುನೆಲೆಯಲ್ಲಿ ವಿಂಗ್ ಕಮಾಂಡರ್ಆಗಿ ಕಾರ್ಯನಿರ್ವಹಿಸುತ್ತಿರುವ ಎನ್. ಗಾಯತ್ರಿ ಎರಡು ಮಕ್ಕಳ ತಾಯಿ. ಅವರ ಪತಿ ಗೋಕುಲ್ ಪೈಲೆಟ್ ಆಗಿದ್ದವರು. 2003ರಲ್ಲಿ ನಡೆದ ವಿಮಾನದುರಂತದಲ್ಲಿ ಗೋಕುಲ್ ಅಸುನೀಗಿದರು. ಅರ್ಧದಲ್ಲೇ ನಿಂತ ಪತಿಯ ವಿಮಾನ ಯಾನವನ್ನು ಗಾಯತ್ರಿ ಮುಂದುವರಿಸದರು. 1996ರಲ್ಲಿ ಭಾರತಿತಯ ವಾಯು ಪಡೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ರಾಜಸ್ಥಾನ, ಪಂಜಾಬ್ ಹಾಗೂ ಕಾರ್ಗಿಲ್ ವಾಯುನೆಲೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಗಾಯತ್ರಿ ನಮ್ಮ ನಾಡಿನ ದಿಟ್ಟ ಮಹಿಳೆ ಎನ್ನಲು ಕಾರ್ಗಿಲ್ ಪ್ರಾಂತ್ಯದಲ್ಲಿ ಅವರು ನಿರ್ವಹಿಸಿದ ಕಾರ್ಯವೇ ಸಾಕ್ಷಿ.


Tuesday, July 26, 2011

ನೃತ್ಯದ ಮೇಲೆ ಹೇಮಲತಾ ಭಕ್ತಿ













ಹೃದಯದ ಮಾತು ಅವರಿಗೆ ಗೊತ್ತು!

ಪ್ರೀತಿಗೂ ಮತ್ತು ಹೃದಯಕ್ಕೂ ಏನೋ ಒಂಥರಾ ನಂಟುಸ್ತನ. ‘ಪ್ರೀತಿ ಇಲ್ಲದ ಹೃದಯ ಹೃದಯವೇ ಅಲ್ಲ, ಅದು ಕಲ್ಲು’ ಅನ್ನುತ್ತೆ ಕವಿಹೃದಯ. ಪ್ರೀತಿಗೆ ಹೃದಯ ಅರಳುತ್ತೆ. ಭಾವನೆಯ ಬೀಜಕ್ಕೆ ಅಭಿವ್ಯಕ್ತಗೊಳ್ಳುತ್ತೆ. ಪುಟ್ಟ ಹೃದಯ ರಕ್ತದ ಮಡುವಿನಲ್ಲಿ ಢವ ಢವನೆ ಬಡಿದುಕೊಳ್ಳುತ್ತಾ ಹೂವಿನಂತೆ ಪರಿಮಳ ಬೀರುತ್ತೆ.....ಆದರೆ, ಹೂವಿನಷ್ಟೇ ಸೂಕ್ಷ್ಮವಾದ ಹೃದಯ ಗಾಯಗೊಂಡರೆ....? ಹೃದಯ ಕುಗ್ಗಿ ಹೋಗುತ್ತೆ. ನೋವಿಗೆ ನೊಂದುಕೊಳ್ಳುತ್ತೆ.....!
ನೊಂದ ಹೃದಯಗಳನ್ನು ಪ್ರೀತಿಯಿಂದ ಸಂತೈಸುವ ಜಗದ್ವಿಖ್ಯಾತ ವೈದ್ಯ ಬೆಂಗಳೂರಿನಲ್ಲಿದ್ದಾರೆ. ಅವರು ನೊಂದ ಹೃದಯಗಳನ್ನು ಪ್ರೀತಿಸುವ ಹೃದಯವಂತ. ಲಕ್ಷಾಂತರ ಹೃದಯಗಳನ್ನು ಕದ್ದು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಹೃದಯಚೋರ!
ಅವರೇ ಡಾ. ದೇವಿ ಪ್ರಸಾದ್ ಶೆಟ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ತೆರೆದ ಹೃದಯ ಶಸ್ತ್ರಚಿಕೆತ್ಸೆ ಮಾಡಿರುವ ಹೃದ್ರೋಗ ತಜ್ಞ. ಅವರು ಕೇವಲ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ವೈದ್ಯರಲ್ಲ. ಕಲಾವಿದ ಕಲಾಕೃತಿಯನ್ನು ಕಸೂತಿ ಮಾಡಿ ಬಣ್ಣಗಟ್ಟಿಸುವಂತೆ ದೇವಿಶೆಟ್ಟಿ ಹೃದಯವನ್ನು ಕಸಿ ಮಾಡುತ್ತಾರೆ. ಅವರೊಬ್ಬ ಹೃದಯ ಕಸೂತಿಗಾರ! ಜಗತ್ತಿನಲ್ಲಿ ಅಸಂಖ್ಯಾತ ಹೃದ್ರೋಗ ತಜ್ಞರಿದ್ದಾರೆ. ಅವರೆಲ್ಲರ ಪ್ರಕಾರ ಹೃದಯವೆಂದರೆ ದೇಹದ ಒಂದು ದುಬಾರಿ ಅಂಗ. ಆದರೆ ದೇವಿಶೆಟ್ಟಿ ಅವರ ಪ್ರಕಾರ ಹೃದಯ ದುಬಾರಿ ಅಂಗವಲ್ಲ. ಅದು ದೇಹದ ದೇವರು.
ದೇವಿಶೆಟ್ಟಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ನಾರಾಯಣ ಹೃದಾಯಾಲಯ ಕೇವಲ ಆಸ್ಪತ್ರೆಯಲ್ಲ. ಅದೊಂದು ಹೃದಯದ ಆಲಯ. ಆಕಾಶದಲ್ಲಿದ್ದ ಹೃದಯ ಚಿಕಿತ್ಸೆ ಬಡವ ಬಲ್ಲಿದರಿಗೆ ಇಂದು ವಿಶ್ವದಾದ್ಯಂತ ಸಿಗುತ್ತಿದೆ ಅಂದರೆ ಅದಕ್ಕೆ ದೇವಿಶೆಟ್ಟಿ ಕಾರಣ. ಅದೊಂದು ಕ್ರಾಂತಿಯೇ ಸರಿ. ಕರ್ನಾಟಕ ಸರ್ಕಾರದ ಜೊತೆ ದೇವಿಶೆಟ್ಟಿ ರಚಿಸಿರುವ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ ಜಗತ್ತಿನ ಅಗ್ಗದ ಆರೋಗ್ಯ ಯೋಜನೆ. ವಿಶ್ವದ ಅಸಂಖ್ಯಾತ ರೋಗಿಗಳು ಇದರ ಫಲಾನುಭವಿಗಳಾಗಿದ್ದಾರೆ.
ಸದಾ ಗಲಭೆಗಳಿಂದಲೇ ಕೂಡಿರುವ ಇರಾಕ್, ಇರಾನ್ ದೇಶಗಳ ಅದೆಷ್ಟೋ ಮಕ್ಕಳ ಹೃದಯಗಳು ನಗು ಬೀರಲು ನಾರಾಯಣ ಹೃದಯಾಲಯ ಕಾರಣ. ಶೋಷಣೆಯಿಂದ ಕಂಗೆಟ್ಟುಹೋಗಿರುವ ಅಪಘಾನಿಸ್ಥಾನದ ಹೃದಯ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ದಕ್ಷಿಣ ಆಫ್ರಿಕ. ಅದು ಐತಿಹಾಸಿಕ. ಹೃದಯ ರೋಗಗಳಿಂದ ಬಳಲುತ್ತಿರುವ ಆಫ್ರಿಕಾದ ಬುಡಕಟ್ಟು ಜನರಿಗೆ ದೇವಿಶೆಟ್ಟಿ ಅಕ್ಷರಶಃ ಸಂಜೀವಿನಿ. ಹಲವು ವರ್ಷಗಳ ಕಾಲ ಆಫ್ರಿಕಾದಲ್ಲೇ ಸಂಶೋಧನೆ ನಡೆಸುತ್ತಾ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ದೇವಿಶೆಟ್ಟಿ ವೈದ್ಯಕೀಯ ರಾಯಭಾರಿಯಂತೆ ಕೆಲಸ ಮಾಡಿದ್ದಾರೆ.
ವಿಶ್ವದ ದೊಡ್ಡಣ್ಣಂದಿರಾದ ಅಮೆರಿಕಾ ಇಂಗ್ಲೆಂಡ್, ಜರ್ಮನಿ, ರಷ್ಯಾಗಳಲ್ಲೂ ದೇವಿಶೆಟ್ಟಿ ಅವರಿಗೆ ಬಲು ಬೇಡಿಕೆಯಿದೆ. ಇಸ್ರೋ ಒದಗಿಸಿರುವ ‘ಟೆಲಿಮೆಡಿಸಿನ್ ’ ಟೆಕ್ನಾಲಜಿ ಮೂಲಕ ನಾರಾಯಣ ಹೃದಯಾಲಯದಲ್ಲಿ ಕೂತು ದೇವಿಶೆಟ್ಟಿ ವಿಶ್ವದ ಹೃದಯಗಳ ಜೊತೆ ಮಾತನಾಡುತ್ತಾರೆ. ಅವರ ಇನ್ನೊಂದು ವಿಶೇಷವೆಂದರೆ ದೇವಿಶೆಟ್ಟಿ ಆಪರೇಷನ್ ಥಿಯೇಟರ್ನಲ್ಲಿದ್ದಾರೆ ಅಂದರೆ ಸಂಗೀತ ಕಡ್ಡಾಯ. ಸಂಗೀತ ಮತ್ತು ಯೋಗದ ಮೇಲೆ ಅವರಿಗೆ ಅಪಾರ ನಂಬಿಕೆ.

ಕಬಡ್ಡಿ ಗೆ ಮಾರುಹೋದ ಅಮೆರಿಕಾ!

ಕೆಲವೊಮ್ಮೆ ಭಾರತದಿಂದ ವಿದೇಶಕ್ಕೆ ಹೋದವರು ಅಲ್ಲಿಯ ವ್ಯಾಮೋಹಕ್ಕೆ ಬಲಿಯಾಗಿ ದೇಸೀಯ ಸಂಸ್ಕೃತಿಯನ್ನು ಮರೆತುಬಿಡುತ್ತಾರೆ. ಮತ್ತೆ ಕೆಲವರು ವಿದೇಶಕ್ಕೆ ಹೋದರೂ ತಮ್ಮ ಜೊತೆ ತಮ್ಮ ದೇಸೀಯ ಸಂಸ್ಕೃತಿಯನ್ನು ಕಟ್ಟಿಕೊಂಡೇ ಹೋಗುತ್ತಾರೆ. ವಿದೇಶಕ್ಕೆ ಹೋಗಿ ತಮ್ಮ ತಾಯ್ನೆಡು ಹೆಮ್ಮೆಪಡುವಂಥ ಕೆಲ ಕೆಲಸ ಮಾಡಿ ಬರುತ್ತಾರೆ. ಅಂತಹ ಒಂದು ಕೆಲಸವನ್ನು ಭಾರತೀಯರಾದ ಅಜಯ್ಕುಮಾರ್ ಮಾಡಿ ಬಂದಿದ್ದಾರೆ. ಅಮೆರಿಕಾಗೆ ಭೇಟಿ ಕೊಟ್ಟಾಗ, ನಾಯರ್ ಆ ಸಂಸ್ಕೃತಿಗೆ ಮಾರು ಹೋಗಲಿಲ್ಲ. ಅಲ್ಲಿಯ ಮಕ್ಕಳಿಗೆ ಹಾಗೂ ಯುವಕರಿಗೆ ನಮ್ಮ ಐತಿಹಾಸಿಕ ಆಟ ಕಬಡ್ಡಿ ಕಲಿಸಿ ಬಂದಿದ್ದಾರೆ!
ಅಜಯ್ ಕುಮಾರ್ ಅಮೆರಿಕಾದ ಜಾನ್ಸ್ಬರ್ಗ್ ನಗರದ ಕೇಂದ್ರೀಯ ಶಾಲೆಯಲ್ಲಿ ಇಂಗ್ಲಿಷ್ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ಆರು ತಿಂಗಳ ಕಾಲ ಅಲ್ಲಿ ನೆಲಸಿದ್ದ ನಾಯರ್ ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತದ ಜಾನಪದ ಆಟಕ್ಕೆ ಅಲ್ಲಿಯ ಯುವಕರು ಮನಸೂರೆಗೊಂಡಿದ್ದಾರೆ. ಅಂಗಿ ಬಿಚ್ಚಿ, ಒಂದೇ ಉಸಿರಿನಲ್ಲಿ ಕಬಡ್ಡಿ ಕಬಡ್ಡಿ ಎಂದು ಕೂಗುವಾಗ ಮೈಯಿಂದ ಜುಳುಜುಳು ಎಂದು ಸುರಿವ ನೀರಿಗೆ ಆ ಕೆಂಪು ಜನ ತೊಯ್ದು ಹೋಗಿದ್ದಾರೆ.
ನಾಯರ್ ಕೇವಲ ಕಬಡ್ಡಿ ಆಟವನ್ನು ಮಾತ್ರ ಹೇಳಿಕೊಡಲಿಲ್ಲ. ಬದಲಾಗಿ ಕಬಡ್ಡಿಯ ಹಿಂದಿರುವ ಜಾನಪದ ಮಹತ್ವವನ್ನೂ ಕಲಿಸಿದ್ದಾರೆ. ಕಬಡ್ಡಿ ಮಣ್ಣಿನ ಮಧ್ಯೆ ಆಡುವ ಆಟ. ಮಣ್ಣಿನಲ್ಲಿ ಕಬಡ್ಡಿ ಆಡುವಾಗ ಕಾಲಿಗೆ ಯಾವುದೇ ಶೂ ಧರಿಸುವಂತಿಲ್ಲ. ಅದರಲ್ಲಿ ವೈದ್ಯಕೀಯ ಶಕ್ತಿಯಿದೆ. ಮಣ್ಣಿನಲ್ಲಿರುವ ವೈದ್ಯಕೀಯ ಶಕ್ತಿಯ ಅರಿವು ಪಡೆದ ಅಮೆರಿಕಾ ಯುವಕರು ಒಂದು ಹೊಸ ಕಬಡ್ಡಿ ಟೀಂ ಕಟ್ಟಿದ್ದಾರೆ!


ನೃತ್ಯದ ಮೇಲೆ ಹೇಮಲತಾ ಭಕ್ತಿ

ದಾಖಲೆಗಾಗಿಯೇ ಸಾಧನೆ ಮಾಡುವವರಿಗೆ ಕಮ್ಮಿ ಇಲ್ಲ. ಆದರೆ ಸಾಧನೆಯ ಹಾದಿಯಲ್ಲಿ ಬಂದು ಹೋಗುವ ಅಸಂಖ್ಯ ಮೈಲಿಗಲ್ಲುಗಳಲ್ಲಿ ದಾಖಲೆಯೂ ಒಂದು ಕಲ್ಲು ಎಂದುಕೊಳ್ಳುವವರು ಬಹಳ ಕಮ್ಮಿ. ಇಂಥ ಬರಳೆಣಿಕೆಯಷ್ಟು ಸಾಧಕರಲ್ಲಿ ಕೇರಳದ ಖ್ಯಾತ ಮೋಹಿನಿಯಟ್ಟಂ ನೃತ್ಯ ಕಲಾವಿದೆ ಕಲಾಮಂಡಲ ಹೇಮಲತಾ ಕೂಡ ಒಬ್ಬರು.
ಹೇಮಲತಾ ಸತತ 123 ಗಂಟೆ 15 ನಿಮಿಷಗಳ ಕಾಲ ನರ್ತಿಸಿ ನೃತ್ಯಲೋಕದಲ್ಲೊಂದು ಹೊಸ ಇತಿಹಾಸ ಬರೆದಿದ್ದಾರೆ. ಕೇರಳದ ಅದ್ಭುತ ಕಲೆ ಮೋಹಿಯಟ್ಟಂ ನೃತ್ಯ ಪ್ರಕಾರವನ್ನು ಅವರು ಸಾಗರದಾಚೆಗೆ ಹಾರಿಸಿದ್ದಾರೆ. 2010 ಸೆಪ್ಟೆಂಬರ್ 20ರಂದು ರಾತ್ತಿ 11 ಗಂಟೆಗೆ ಕಾಲಿಗೆ ಗೆಜ್ಜೆ ಕಟ್ಟಿದ ಹೇಮಾ ಸೆಪ್ಟೆಂಬರ್ 26 ಮಧ್ಯಾಹ್ನ 2. 45ಗಂಟೆಯ ವರೆಗೆ ಸುಧೀರ್ಘವಾಗಿ ನರ್ತಿಸಿ 123 ಗಂಟೆ 15 ನಿಮಿಷಗಳನ್ನು ಪೂರ್ಣಗೊಳಿಸಿ ವಿಶ್ವ ವಿಖ್ಯಾತಿಯಾದರು. ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಬ್ರೇಕ್ ಹಾಗೂ ಮುಂಜಾನೆ 2 ಗಂಟೆಯಿಂದ 4 ಗಂಟೆಯವರೆಗೆ ನಿದ್ದೆ ಹೊರೆತು ಪಡಿಸಿದರೆ ಸತತ ವಾರಗಳ ನೃತ್ಯವದು. ಆರು ದಿನಗಳ ಕಾಲ ಹಠಯೋಗ ಮಾದರಿಯಲ್ಲಿ ಅಂದುಕೊಂಡುದ್ದಕ್ಕೆ ಎಲ್ಲೂ ಧಕ್ಕೆಯಾಗದಂತೆ ಸಾಧಿಸಿ ಮುಗಿಸಿದರು. ಈ ಹೊಸ ಇತಿಹಾಸದ ಮೂಲಕ ಹೈದರಾಬಾದ್ನ ವೆಟ್ಟಿಕೊಟ್ಟ ಯಡಗಿರಿ ಅವರ 108 ಗಂಟೆಗಳ ನೃತ್ಯದಾಖಲೆಯನ್ನು ಮುರಿದರು.
ಹೇಮಲತಾ ಕೇರಳದ ತ್ರಿಸ್ಸೂರಿನವರು. 35 ವರ್ಷ ವಯಸ್ಸಿನ ಹೇಮಾ ಎರಡು ಮಕ್ಕಳ ತಾಯಿ. ಮದುವೆಯಾದ ಮೇಲೂ ಅವರ ಹೆಜ್ಜೆಗಳ ಶಕ್ತಿ ಎಂದೂ ಕುಗ್ಗಲಿಲ್ಲ. ಪತಿಯ ಪ್ರೋತ್ಸಾಹದ ಜೊತೆ ಹೊಸ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಇದು ಕೇವಲ 123 ಗಂಟೆಗಳ ಕಾಲ ನರ್ತಿಸಿ ನಿಲ್ಲಿಸಿದ ಕತೆಯಲ್ಲ. ಇದು ಹತ್ತಾರು ವರ್ಷಗಳ ಕಾಲದ ತಸರತ್ತು. ಚಿಕ್ಕಂದಿನಿಂದ ನೃತ್ಯದ ಮೇಲೆ ಬೆಳೆಸಿಕೊಂಡು ಬಂದ ಭಕ್ತಿ ಹಾಗೂ ಶ್ರದ್ಧೆ ಪ್ರತಿಫಲ. ಹೇಮಲತಾ ಕೇರಳದ ಪ್ರಸಿದ್ಧ ಪ್ರದರ್ಶನ ಕಲೆಗಳ ತಾಣ ಕಲಾಮಂಡಲಂ ಪ್ರತಿಭೆ. ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೇಮಾ ಅವರಿಗೆ ನೃತ್ಯವೇ ಉಸಿರು.

ಗೋ, ಕಿಸ್ ದ ವರ್ಲ್ಡ್!


















'ಕೃಪಾಕರ ಸೇನಾನಿ' ಎಂಬ ಒಂದು ಜೀವ ಎರಡು ದೇಹ









ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಜಿನೆಸ್ ಓದಿಕೊಂಡ ಆತ ಎಂದೂ ಬಿಜಿನೆಸ್ ಮಾಡಲಿಲ್ಲ. ಅದೇ ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಕಲಿತುಕೊಂಡ ಈತ ಒಂದು ಮನೆಯನ್ನೂ ಕಟ್ಟಲಿಲ್ಲ. ಅವರಿಬ್ಬರು ಕಾಲೇಜು ಒಳಗಿನ ಲಾಬೋರೋಟರಿಯ ಫಾರ್ಮುಲಾಗಳ ಜೊತೆ ಕಲಿತದ್ದು ಕಮ್ಮಿ. ಅವರ ಲ್ಯಾಬ್ ಏನಿದ್ದರೂ ಕಾಡು, ಮೇಡು. ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು, ಜಾತಕ ಪಕ್ಷಿಯಂತೆ ಹಕ್ಕಿಯ ಹಿಂದಿಕ್ಕಿ ಅದರ ಜೊತೆ ಹಾರುವುದೇ ಅವರ ಹವ್ಯಾಸ, ಸಾಹಸ, ಸಂತೋಷ. ಹಾರಲು ಅವರಿಗೇನೂ ಹಕ್ಕಿಯಂತೆ ರೆಕ್ಕೆಯಿಲ್ಲ. ಹಾರುವುದು ಅವರ ಕಣ್ಣು. ಅವರ ಕಣ್ಣೂ ಅಲ್ಲ. ಅದಕ್ಕಿಂತಲೂ ಹೆಚ್ಚು. ಅವರ ಕ್ಯಾಮರಾ ಕಣ್ಣು!
ಅವರೇ ಕೃಪಾಕರ ಮತ್ತು ಸೇನಾನಿ. ವಿಶ್ವಕಂಡ ಈ ಶ್ರೇಷ್ಠ ಇಬ್ಬರು ವನ್ಯಜೀವಿ ಛಾಯಾಗ್ರಾಹಕರನ್ನು ಎಷ್ಟೋ ಮಂದಿ ಇವರು ಒಬ್ಬನೇ ವ್ಯಕ್ತಿ ಅಂದುಕೊಂಡವರೂ ಇದ್ದಾರೆ. ನಿಜ, ಅದು ಒಂದು ದೇಹ ಎರಡು ಜೀವ. ಹಗಲಿರುಳೆನ್ನದೆ ಕಾಡು ಮೇಡು ಅಲೆದು ಅರಣ್ಯ ಜೀವಿಗಳ ಜೀವನದ ಅತೀ ಅಪರೂಪದ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಟ್ಟ ಅವರ ಕಾರ್ಯ ವಿಶ್ವವನ್ನು ಬರಸೆಳೆದುಕೊಂಡಿದೆ. ಅವರಿಬ್ಬರ ಕಾರ್ಯದಲ್ಲಿ ಅಖಂಡತ್ವವಿದೆ. ಯಾವ ಶೋಗಳಲ್ಲೂ ಅವರು ಬೇರೆ ಬೇರೆಯಾಗಿ ಛಾಯಚಿತ್ರ ಪ್ರದರ್ಶಿಸಿಲ್ಲ. ಒಬ್ಬಂಟಿಯಾಗಿ ಎಲ್ಲೂ ಪ್ರತಿನಿಧಿಸಿಲ್ಲ. ಅವರಿಬ್ಬರೂ ಒಟ್ಟಾಗಿ ಏಕತೆಯ ಸೌಧ ಕಟ್ಟಿದ್ದಾರೆ!
ಕೃಪಾಕರ ಸೇನಾನಿಯವರ ‘ವೈಲ್ಡ್ ಡಾಗ್ ಡೈರೀಸ್’ ಸಿನೇಮಾ ಯಾರಿಗೆ ತಾನೆ ಗೊತ್ತಿಲ್ಲ? ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ ಚಾನೆಲ್ ನೋಡುಗರಿಗೆ ಈ ಚಿತ್ರ ಚಿರಪರಿಚತ. ಇದನ್ನು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ನಲ್ಲಿ ನೂರಾರು ಬಾರಿ ಹಾಕಿದ್ದಾರೆ. ಅಷ್ಟೇ ಅಲ್ಲ ಇದು ಜರ್ಮನಿ ಮತ್ತು ಫ್ರಾನ್ಸ್ನ ಪ್ರತಿಷ್ಠಿತ ಎಆರ್ಟಿಇ ಚಾನೆಲ್ನಲ್ಲೂ ಪ್ರದರ್ಶನಗೊಂಡಿದೆ. ಇದಕ್ಕೆ ನೂರಾರು ಪ್ರಶಸ್ತಿಗಳು ಕೂಡ ಸಂದಿವೆ. ಫ್ರಾನ್ಸ್ನ ಬೆಸ್ಟ್ ಡಾಕ್ಯುಮೆಂಟರಿ ಅವಾರ್ಡ್, ಜಪಾನ್ನ ಬೆಸ್ಟ್ ಆಫ್ ಫೆಸ್ಟಿವಲ್ ಗ್ರಾಂಡ್ ಅವಾರ್ಡ್, ಇಂಗ್ಲೆಂಡಿನ ಪ್ಯಾಂಡಾ ಪ್ರಶಸ್ತಿ(ನಾಮಕರಣ), ಸಿಂಗಪೂರ್ನ ಏಶಿಯನ್ ಟೆಲಿವಿಷನ್ ಅವಾರ್ಡ್ ಪ್ರಮುಖವಾದವು. ‘ವೈಲ್ಡ್ ಡಾಗ್ ಡೈರೀಸ್’ ಕೃಪಾಕರ ಸೇನಾನಿ ಅವರ ಮಾಸ್ಟರ್ ಫೀಸ್. ಅವರ ಛಾಯಾಚಿತ್ರಗಳು ಮ್ಯಾಗಜಿನ್ಗಳಾದ ಜಿಯೋ, ಲಂಡನ್ ಟೈಮ್ಸ್, ಬಿಬಿಸಿ ವೈಲ್ಸ್ ಲೈಪ್, ನೇಚರ್ ಮುಂತಾದವುಗಳಲ್ಲಿ ಪ್ರಕಟಗೊಂಡಿದ್ದು ವಿಶ್ವ ಪ್ರಸಿದ್ಧಿ ಪಡೆದಿವೆ. ಕೃಪಾಕರ ಸೇನಾನಿ ಸಾಹಿತಿಗಳೂ ಕೂಡ ಹೌದು. ಅವರ ‘ಜೀವ ಜಾಲ’ ಕನ್ನಡ ಪುಸ್ತಕ ಪ್ರಾಣಿಗಳ ಜೀವನವನ್ನು ಬಿಡಿಸಿಟ್ಟಿದೆ. ಇದಕ್ಕೆ 1999ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2006ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಮುಡಿಗೇರಿದೆ.
ಕೃಪಾಕರ ಸೇನಾನಿ ಅವರು ತಮ ತಮ್ಮ ಡಿಗ್ರಿಗಳನ್ನು ತೆಗೆದು ಪಕ್ಕಕ್ಕಿಟ್ಟು ತಮ್ಮ ಕ್ಯಾಮರಾಗಳನ್ನು ಪ್ರೀತಿಯಿಂದ ಹಚ್ಚಿಕೊಂಡವರು. ಏನಿಲ್ಲದಿದ್ದರೂ ಬ್ಯಾಗಿನಲ್ಲಿ ಕ್ಯಾಮರಾ ಇದ್ದೇ ಇರಬೇಕು. ಅಪರೂಪದ ಪ್ರಾಣಿ ಪಕ್ಷಿಗಳನ್ನು ಕಂಡೊಡನೆ ಕ್ಲಿಕ್ಕಿಸುವುದು ಇವರ ಹವ್ಯಾಸವಾಗಿತ್ತು. ಬರಬರುತ್ತಾ ಹವ್ಯಾಸ ಕಾಡಿನಷ್ಟೇ ದಟ್ಟವಾಗತೊಡಗಿತು. ನಂತರ ಹವ್ಯಾಸವೇ ವೃತ್ತಿ, ಪ್ರವೃತ್ತಿ ಎಲ್ಲವೂ ಆಯಿತು. ಆರಂಭದಲ್ಲಿ ಅವರು ಬೆಳೆಕಿಗೆ ಬಂದದ್ದು ಪತ್ರಿಕೆಗಳ ಮೂಲಕ. ಹಲವು ಪತ್ರಿಕೆಗಳಲ್ಲಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅರಣ್ಯ ಜೀವಿಗಳನ್ನು ಕುರಿತಂತೆ ನೂರಾರು ಚಿತ್ರ- ಲೇಖನ ಬರೆದಿದ್ದಾರೆ. ಆ ನಂತರ ತಮಿಳುನಾಡಿನ ಮದುಬಲೈ ಪ್ರಾಣಿ ಸಂಗ್ರಹಾಲಯದಲ್ಲಿ ಮಾಡಿದ ಅಪರೂಪದ ಕೆಲಸದಿಂದ ಜಗತ್ತಿಗೆ ಪರಿಚಯವಾದರು.
ಕೃಪಾಕರ ಸೇನಾನಿ ಅವರು ಕಾರ್ಯ ಒಂದು ಚಳವಳಿಯಾಗಿಯೂ ಮಾರ್ಪಟ್ಟಿದೆ. ಅವರ ‘ನಮ್ಮ ಸಂಘ’ ಸಂಘಟನೆಯ ಮೂಲಕ ವನ್ಯಜೀವಿಗಳ ರಕ್ಷಣೆಯ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಣಿಗಳ ಹಕ್ಕುಗಳ ಬಗ್ಗೆ ಕೃಪಾಕರ ಸೇನಾನಿ ಅವರಿಗಿರುವ ಕಾಳಜಿ ಅವರ ಪ್ರಾಣಿ ಪ್ರೀತಿಯನ್ನು ಎತ್ತಿ ಹಿಡಿದಿದೆ.








ಗೋ, ಕಿಸ್ ದ ವರ್ಲ್ಡ್!

ಅವನು ಹತ್ತನೇ ಇಯತ್ತಿಗೆ ಹತ್ತಿದಾಗಲೇ ಅಪ್ಪನೊಂದಿಗೆ ಒಂದು ಕರಾರು ಕುದುರಿಸಿಕೊಂಡಿದ್ದ. ಆ ಹದಿನಾಲ್ಕರ ಪೋರನಿಗೆ ಸೈಕಲ್ ಮೇಲೆ ಎಲ್ಲಿಲ್ಲದ ಪ್ರೇಮ. ವರಿಸ್ಸಾದ ಕಾಡಿನ ನಡುವೆ ಇದ್ದ ಆ ಬುಡಕಟ್ಟು ಶಾಲೆಗೆ ಸೈಕಲ್ ತುಳಿದುಕೊಂಡು ಹೋಗುವುದೆಂದರೆ ಅದೇ ಅವನ ಮಹಾ ಸಾಹಸ. ಅವನು ಹತ್ತರ ಗಣಿತದಲ್ಲಿ ತೊಂಬತ್ತು ತೆಗೆದುಕೊಳ್ಳುವುದಾಗಿ ತಂದೆಗೆ ಮಾತು ಕೊಟ್ಟಿದ್ದ. ಅದಕ್ಕೆ ಪ್ರತಿಯಾಗಿ ಸೈಕಲ್ ಕೊಡಿಸುವುದಾಗಿ ಮಗನ ಕರಾರಿಗೆ ಅಪ್ಪ ಒಪ್ಪಿದ್ದರು.....ಅಂದುಕೊಂಡಂತೆ ಆತ ತೊಂಬತ್ತು ತೆಗೆದುಕೊಂಡ. ಅಪ್ಪ ಸೈಕಲ್ ಕೊಟ್ಟರು.......ಇದೇ ಅವನ ಮೊದಲ ವ್ಯವಹಾರ!
ವಿಶ್ವಕಂಡ ಅತ್ಯಂತ ಪ್ರಭಾವಶಾಲಿ ಉದ್ಯಮಿ ‘ಸಬ್ರತೋ ಬಗಚಿ’ ಅವರ ಔದ್ಯಮಿಕ ಇತಿಹಾಸದಲ್ಲಿ ಇಂಥದೊದ್ದಂದು ಕತೆಯಿದೆ. ಅಪ್ಪನೊಂದಿಗೆ ಆರಂಭವಾದ ಅವರ ವ್ಯವಹಾರ ಯಾತ್ರೆ ಎಲ್ಲೂ ನಿಲ್ಲಲಿಲ್ಲ. ವ್ಯವಹಾರವೇ ಅವರ ಅನ್ನ ಮತ್ತು ಉಸಿರು. ಇನ್ಫೊಸಿಸ್ ನಂತರ ಭಾರತದಲ್ಲಿ ತಾಂತ್ರಿಕರು ಕನಸು ಕಟ್ಟಿಕೊಳ್ಳುವ ಐಟಿ ಕಂಪನಿಯೊಂದಿದ್ದರೆ ಅದು ‘ಮೈಂಡ್ ಟ್ರೀ’. ಸಬ್ರತೋ ಬಗಚಿ ಈ ಕಂಪನಿಯ ಶಿಲ್ಪಿ. ‘ಮೈಂಡ್ ಟ್ರೀ ಗಾರ್ಡ್ನರ್’ ಎಂತಲೇ ಅವರನ್ನು ಕರೆಯಲಾಗುತ್ತದೆ. ಬಿಲಿಯನ್ ಡಾಲರ್ಗಟ್ಟಲೆ ವ್ಯವಹಾರ ಹೊಂದಿರುವ ಈ ಕಂಪನಿ ಬರೀ ಐಟಿ ಕಂಪನಿಯಲ್ಲ. ಅದೊಂದು ಔದ್ಯಮಿಕ ಲೋಕದ ಆಲಯ!
ಬಹುಶಃ, ಬಗಚಿ ಕೇವಲ ಉದ್ಯಮಿಯಾಗಿದ್ದರೆ ಇಷ್ಟೊಂದು ಖ್ಯಾತಿ ಬರುತ್ತಿರಲಿಲ್ಲವೇನೋ. ಬದಲಾಗಿ ಬಗಚಿ ವ್ಯವಹಾರದ ಆರಾಧಕ. ವ್ಯವಹಾರವೆಂದರೆ ಬರೀ ಹಣದ ವಿನಿಮಯವಲ್ಲ, ಫೈಲುಗಳ ವಿನಿಮಯವಲ್ಲ. ಕೋಟುಗಳ ಕೋಡಲ್ಲ, ಇಂಗ್ಲಿಷ್ ನಾಲಗೆಯಲ್ಲ......ಅದೊಂದು ಯೋಗ ಮತ್ತು ಪ್ರಯೋಗ ಎಂದು ವಿಶ್ವಕ್ಕೆ ಸಾರಿ ಹೇಳದರು. ‘ದೇರ್ ಈಸ್ ನೋ ಸಬ್ಸ್ಸ್ಟಿಟ್ಯೂಟ್ ಇನ್ ಹಾರ್ಡ್ ವರ್ಕ್’ ಎನ್ನುತ್ತಲೇ ಮಾತು ಆರಂಭಿಸುವ ಬಗಚಿ ಪ್ರಸಿದ್ಧ ಲೇಕಕರೂ ಕೂಡ. ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯ ‘ಟೈಮ್ಸ್ ಆಪ್ ಮೈಂಡ್’ ಅಂಕಣ ಭಾರತೀಯ ಉದ್ಯಮಿಗಳ ಫೇವರಿಟ್. ಪೋರ್ಬ್ಸ್ ಮಾಗಜಿನ್ನ ‘ಝೆನ್ ಗಾರ್ಡನ್’ ವಿಶ್ವ ಉದ್ಯಮಿಗಳ ಹಾಟ್ಕೇಕ್.
ನೃತ್ಯಪ್ರೇಮಿಗಳನ್ನು ಮೆಕೆಲ್ ಜಾಕ್ಸನ್ ನೃತ್ಯ ಹೇಗೆ ಕುಣಿಸುತ್ತೋ ಹಾಗೆ ಬಗಚಿಯವರ ಬರವಣಿಗೆ ಉದ್ಯಮಿಗಳನ್ನು ತಣಿಸುತ್ತೆ. ಅವರ ಬರವಣಿಗೆಯಲ್ಲಿರುವ ಚೈತನ್ಯ ಲಕ್ಷಾಂತರ ಉದ್ಯಮಿಗಳಿಗೆ ಶಕ್ತಿ ತುಂಬಿದೆ. ಉದ್ಯಮಿಗಳಿಗೆ ಮಾತ್ರವಲ್ಲ, ಕ್ರಿಯಾತ್ಮಕವಾಗಿ ಚಿಂತಿಸುವವರಿಗೆ, ಹಾರ್ಡ್ವರ್ಕ್ ಮೇಲೆ ನಂಬಿಕೆಯಿರುವವರಿಗೆ, ಪ್ರಯೋಗಾತ್ಮಕ ಕೆಲಸಗಾರರಿಗೆ ಬಗಚಿಯವರ ಪುಸ್ತಕಗಳು ಚೈತನ್ಯದ ಚಿಲುಮೆಯಾಗಿವೆ. ಅವರ ‘ಗೋ ಕಿಸ್ ದ ವರ್ಲ್ಡ್’ ವಿಶ್ವದ ಬೆಸ್ಟ್ಸೆಲ್ಲರ್. ಈ ಪುಸ್ತಕದಲ್ಲಿರುವ ವೈಚಾರಿಕ ಬರವಣಿಗೆ ಬಗಚಿಯವನ್ನು ಪರಿಪೂರ್ಣ ಸಾಹಿಯನ್ನಾಗಿ ಮಾಡಿದೆ. ಹೈ ಪರ್ಪಾರ್ಮೆನ್ಸ್ ಎಂಟ್ರಪ್ಯೂನರ್, ದ ಪ್ರೊಫೆಷನಲ್ ಮುಂತಾದವು ಬಗಚಿಯವರ ಪ್ರಸಿದ್ಧ ಪುಸ್ತಕಗಳು.
ಮೈಂಡ್ಟ್ರೀ ಲೋಗೋ ಹಿಂದೆ ಒಂದು ಕುತೂಹಕ ಕತೆ ಇದೆ. ಬಗಚಿಯವರೆಷ್ಟು ಸ್ಮಾರ್ಟ್ ಎನ್ನಲು ಇದು ಸಾಕ್ಷಿ. ಲೋಗೋ ರಚನೆಗೆ ಅವರೇನು ತಲೆ ಕೆಡಿಸಿಕೊಳ್ಳಲಿಲ್ಲ. ಕುರುಡನೊಬ್ಬನಿಗೆ ಬಣ್ಣ ಮತ್ತು ಬ್ರಷ್ ಕೊಟ್ಟರು. ಆತ ಒಂದು ಗೆರೆ ಎಳೆದು ಎರಡು ಚುಕ್ಕೆ ಇಟ್ಟ. ಅದೇ ಮೈಂಡ್ಟ್ರೀಯ ಜಗತ್ಪ್ರಸಿದ್ಧ ಲೋಗೋ!

Friday, April 8, 2011




ಕನ್ನಯ್ಯಲಾಲ್ ಕನಸು

70ರ ದಶಕ ಭಾರತೀಯ ರಂಗಭೂಮಿಗೆ ಉಚ್ಛ್ರಾಯ ಸ್ಥಿತಿ. ಈ ಕಾಲಘಟ್ಟದ ಅದ್ಭುತ ಇತಿಹಾಸ ಬರೆದವರು ಮಣಿಪುರದ ಪ್ರಬುದ್ಧ ರಂಗಕರ್ಮಿ ಕನ್ನಯ್ಯ ಲಾಲ್. ರಂಗಭೂಮಿಯನ್ನು ಪ್ರತಿಭಟನೆ ಅಸ್ತ್ರ ಮಾಡಿಕೊಂಡು ಅನ್ಯಾಯದ ವಿರುದ್ಧ ತೊಡೆ ತಟ್ಟಿ ನಿಂತವರು ಕನ್ನಯ್ಯಲಾಲ್. ಅವರು ರಂಗಭೂಮಿಯ ಉಡಿಯಲ್ಲಿ ಅಡಗಿರುವ ಅಂತರ್ಶಕ್ತಿಯನ್ನು ಎತ್ತರಕ್ಕೇರಿಸಿದರು. ಅಂದು ಸಂಭವಿಸಿದ ರಂಗ ಸಂಚಲನ ಎಂದೆಂದಿಗೂ ಮರೆಯಾಗದ ಹೊಸ ರಂಗ ಸಂವಿಧಾನವನ್ನೇ ರಚನೆ ಮಾಡಿತು! ಕನ್ನಯ್ಯ ಲಾಲ್ ಅವರ ಕುಟುಂಬ ರಂಗಭೂಯ ಬಲುದೊಡ್ಡ ಆಸ್ತಿ. ಅವರ ಪತ್ನಿ ಸಾವಿತ್ರಿ ಕನ್ನಯ್ಯ ಲಾಲ್ ವಿಶ್ವ ಕಂಡ ಶ್ರೇಷ್ಠ ನಟಿ. ಮಾತಿಲ್ಲದ ಅವರ ಅಭಿನಯ ಶಕ್ತಿಗೆ ಹೆಸರಿಲ್ಲ. ಪ್ರಾಣಿ ಪಕ್ಷಿಗಳ ಧ್ವನಿ ಮೂಲಕ ಭಾವನೆಯನ್ನು ಅಭಿವ್ಯಕ್ತಿಸುವ ಅವರ ಆಂಗಿಕ ಅಭಿನಯಕ್ಕೆ ಜಾನಪದ ಅನ್ನಲಾಯಿತು. ಆದರೆ ಅದು ಜಾನಪವೂ ಅಲ್ಲ. ಜಾನಪದ ಶೈಲಿಗೆ ಆಧುನಿಕ ಸ್ಪರ್ಷ.... ಬುಡಕಟ್ಟು ಸಂಸ್ಕೃತಿಗೆ ಹೊಸತನದ ಲೇಪನ..... ಪ್ರಾಣಿಪಕ್ಷಿಗಳ ಹಕ್ಕುಗಳ ಅನಾವರಣ......ಕಾನನದ ಮೌನದ ನಡುವಿನ ಅರಣ್ಯ ರೋಧನ.... ಒಟ್ಟಿನಲ್ಲಿ ಅದು ಕನ್ನಯ್ಯಲಾಲ್ ಅವರ ಸ್ವಂತ ರಂಗಭೂಮಿ! ಅಸ್ಸಾಂ, ಮಣಿಪರ ಪ್ರಾಂತ್ಯಗಳಲ್ಲಿ ಈಗಲೂ ಪ್ರತ್ಯೇಕತೆಯ ಕೂಗಿದೆ. ಈ ಹೋರಾಟ, ಪರಚಾಟಗಳಲ್ಲಿ ಬೆಂದುಹೋದವರೆಷ್ಟೋ. ಈ ಸೂಕ್ಷ್ಮ ಸನ್ನಿವೇಶಗಳು ಪ್ರಾಣಿ ಪಕ್ಷಿಗಳ ಧ್ವನಿಯಾಗಿ ಕನ್ನಯ್ಯಲಾಲ್ ರಂಗಭೂಮಿಯಲ್ಲಿ ತೆರೆದುಕೊಂಡಾಗ ಅಲ್ಲಿ ಆರಂಭವಾದದ್ದು ಗಂಭೀರ ಅಲೆ. ‘ಫೆಬತೆಥೋ’ ನಾಟಕದ ಒಂದು ಅತ್ಯಂತ ಭಾವುಕ ಸನ್ನಿವೇಶದಲ್ಲಿ ಸಾವಿತ್ರಿ ಕನ್ನಯ್ಯಲಾಲ್ ಅಭಿನಯಿಸುತ್ತಲೇ ಸಂಪೂರ್ಣ ಬೆತ್ತಲಾಗಿಬಿಡುತ್ತಾರೆ.....ಆ ಕ್ಷಣದಲ್ಲಿ ಅಶ್ಲೀಲ, ಅರ್ಥ ಕಳೆದುಕೊಳ್ಳುತ್ತದೆ. ತಾವು ಬೆತ್ತಲಾಗಿ ವ್ಯವಸ್ಥೆಯನ್ನು ಬೆತ್ತಲು ಮಾಡುತ್ತಾರೆ! ಕನ್ನಯ್ಯ ಲಾಲ್ ಮಣಿಪುರಕ್ಕೆ ಮಾತ್ರ ಅಂಟಿಕೊಳ್ಳಲಿಲ್ಲ. ವಿದೇಶ ಸೇರಿದಂತೆ ಭಾರತದ ಎಲ್ಲಾ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ. ಎನ್ಎಸ್ಡಿ ನಾಟಕೋತ್ಸವ, ಭೂಪಾಲ್ ನಾಟಕೋತ್ಸವ, ಗೌಹಾತಿ ಉತ್ಸವ, ಕೊಲ್ಕತ್ತಾ ಉತ್ಸವ, ಮೈಸೂರು ರಂಗಾಯಣದ ಬಹುರೂಪಿ ನಾಟಕೊತ್ಸವ ಮತ್ತಿತರ ಅವರ ನಾಟಕಗಳು ರಂಗಕ್ಕೇರಿವೆ. ಅವರು ಕರ್ನಾಟಕದಲ್ಲೂ ಚಿರಪರಿಚಿತರು. ಅವರು ನಿನಾಸಂಗೆ ನಿರ್ದೇಶಿಸಿದ ಕುರುಸುವಾನ ’ರಶೋಮನ್’ ರಂಗ ಪ್ರಯೋಗ ಒಂದು ಅದ್ಭುತ. ನಟರಾದ ಮಂಡ್ಯರಮೇಶ್, ಹುಲುಗಪ್ಪ ಕಟ್ಟೀಮನಿ, ಮಂಗಳಾ ಮುಂತಾದವರು ಅಭಿನಯಿಸಿದ ಈ ನಾಟಕ ಇನ್ನೂ ಹಚ್ಚಹಸಿರು. ಕನ್ನಯ್ಯ ಲಾಲ್ ಅವರ ಮಗ ಟಾಂಬು ಕೂಡ ಅಪ್ಪಟ ಪ್ರತಿಭಾವಂತ. ಅವನ ತುಟಿಯಂಚಿನಲ್ಲಿ ಕೊಳಲು ನುಡಿಯುತ್ತಿದ್ದರೆ ಮೌನ ಮಾತಾಡುತ್ತದೆ. ತಂದೆಯ ಎಲ್ಲಾ ನಾಟಕಗಳಿಗೆ ಟಾಂಬುವೇ ಸಂಗೀತ ಸಂಯೋಜಕ. ಕನ್ನಯ್ಯ ಲಾಲ್ ಅವರದು ಬಹುದೊಡ್ಡ ರಂಗಸಾಮ್ರಾಜ್ಯವೇ ಇದೆ. ಅದು ಮಣಿಪುರಕ್ಕೆ ಮಾತ್ರ ಸೀಮಿತವಾಗದೇ ವಿಶ್ವದೆಲ್ಲಡೆ ಮಿಡಿದಿದೆ. ಕನ್ನಯ್ಯ ಲಾಲ್ ಅವರ ಸದ್ದಿಲ್ಲದ ರಂಗಾರಾಧನೆಗೆ ‘ಪದ್ಮಶ್ರೀ’ ಮುಕುಟ ಮುಡಿಗೇರಿದೆ.



ಯೋಗಾರಾಧಕ ಮೂರುತಿ

ಭಾನುವಾರ ಬಂತೆಂದರೆ ಬೆಂಗಳೂರಿನ ಎನ್.ಆರ್. ಮೊಹಲ್ಲಾದ ಮಹಿಳಾ ಮಂಡಳಿಯ ಹೊರಗೆ ಜನಜಂಗುಳಿ. ಆದರೆ ಒಳಗೆ ಕಾಲಿಟ್ಟ ಕೂಡಲೆ ಅಲ್ಲೊಂದು ಶಕ್ತಿಯ ಸಂಚಾರ. ಶುದ್ಧ, ಶ್ರದ್ಧಾ ಮತ್ತು ಭಕ್ತಿಯ ಭಾವ. ಶೃತಿಗೆಟ್ಟ ನಗರದ ಅಲ್ಲೋಲ ಕಲ್ಲೋಲ ಅಲ್ಲಿಲ್ಲ. ಅಲ್ಲೇನಿದ್ದರೂ ಆನಂದ, ಆಲಾಪ, ಆಸ್ವಾದ, ಆರಾಧನೆ ಮತ್ತು ಆತ್ಮ ವಿಶ್ವಾಸ. ಅಲ್ಲಿ ಪ್ರತಿ ಭಾನುವಾರ ಯಾವ ಗದ್ದಲವೂ ಇಲ್ಲದೆ ನಡೆಯುತ್ತದೆ ಯೋಗಾರಾಧನೆ! ಈ ಯೋಗಾರಾಧನೆಯ ಹಿಂದೆ ಒಬ್ಬ ಯೋಗಗುರು ಇದ್ದಾರೆ. ಅವರ ಹೆಸರು ನರಸಿಂಹ ಮೂರ್ತಿ. 75 ವರ್ಷ ವಯಸ್ಸಿನ ಈ ಸ್ಪೂರ್ತಿಯ ಚಿಲುಮೆಗೆ ಎಲ್ಲವೂ ಯೋಗವೆ. ನಿತ್ಯದ ಅವರ ಜೀವನ ಕ್ರಮದಲ್ಲಿ ಯೋಗ ಬೆರತು ಹೋಗಿದೆ. ಅವರಿಂದ ವಿದ್ಯೆ ಕಲಿತವರಿಗೆ, ಕಲಿಯುತ್ತಿರುವವರಿಗೆ ಲೆಕ್ಕವಿಲ್ಲ. ಯೋಗವಿದ್ಯೆಯ ಬಗ್ಗೆ ಎಲ್ಲಾ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿದೆ.ಅವರ ಯೋಗ ವಿದ್ಯೆ ಕೇವಲ ಆಸನವಲ್ಲ. ಎಲ್ಲಾ ಆಸನಗಳ ಹಿಂದಿರುವ ವೈಜ್ಞಾನಿಕ ವಿವೇಚನೆಯ ಅರ್ಥ ವಿವರಣೆ ಅವರ ಬಳಿಯಿದೆ. ನರಸಿಂಹ ಮೂರ್ತಿಗಳು ಕೇಂದ್ರ ಸರ್ಕಾರಿ ಹುದ್ದೆಯಲ್ಲಿದ್ದವರು. ಏಜಿಟ್ ಆಫೀಸ್ನಲ್ಲಿ ಉನ್ನತ ಹುದ್ದೆ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಕೆಲಸದ ಮೇಲಿದ್ದಾಗ ಯೋಗ ಇದ್ದೇ ಇತ್ತು. ನಿವೃತ್ತಿಯಾದ ಮೇಲಂತೂ ಅವರೊಬ್ಬ ಯೋಗಿಯೇ ಆಗಿಬಿಟ್ಟಿದ್ದಾರೆ. ಅವರು ಹಿಮಾಲಯದ ಅಮರೀಶ ವರ್ಷ ಅವರ ಶಿಷ್ಯರು. ಹಲವು ವರ್ಷಗಳ ಕಾಲ ಅವರ ಬಳಿ ಯೋಗಾಭ್ಯಾಸ ಮಾಡಿದ್ದಾರೆ. ನರಸಿಂಹ ಮೂರ್ತಿಗಳು ಧ್ಯಾನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಯೋಗವಿದ್ಯೆಯಲ್ಲಿ ಧ್ಯಾನ ಬಹಳ ಕಷ್ಟ ಹಾಗೂ ಧ್ಯಾನಕ್ಕಿರುವ ಶಕ್ತಿ ಅಪಾರ. ಧ್ಯಾನದ ವಿವಿಧ ಸಾಧ್ಯತೆಗಳ ಬಗ್ಗೆ ಅವರು ಅಪಾರ ಜ್ಞಾನ ಹೊಂದಿದ್ದಾರೆ. ಪ್ರಾಣಾಯಾಮದ ಶಕ್ತಿಯ ಅರಿವನ್ನು ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ. ಅವರು ಹೇಳಿಕೊಡುವ ಯೋಗ ಬಹಳ ಸರಳ ಮತ್ತು ಶಕ್ತಿಯುತ. ವರ್ಷದಲ್ಲಿ ಎರಡು ತಂಡಗಳಲ್ಲಿ ಅವರು ಯೋಗ ಹೇಳಿಕೊಡುತ್ತಾರೆ. ಜನವರಿ ಮೂರನೇ ಭಾನುವಾರ ಹಾಗೂ ಜುಲೈ ಮೂರನೇ ಭಾನುವಾರ ಅವರ ಯೋಗ ತರಗತಿಗಳು ಆರಂಭವಾಗುತ್ತವೆ. ಮಧ್ಯೆ ಬಂದರೆ ಪ್ರವೇಶವಿಲ್ಲ. ಯಾರೇ ಅವರ ಬಳಿ ಯೋಗ ಕಲಿಯ ಬಂದರೂ ಇಲ್ಲಾ ಎಂದು ಹೇಳುವುದಿಲ್ಲ. ವಿದ್ಯಾರ್ಥಿಗಳಿಂದ ಅವರು ಆಪೇಕ್ಷಿಸುವುದು ಶಿಸ್ತು ಮಾತ್ರ. ಯಾವ ಫೀಜು ಗೀಜು ಏನೂ ಇಲ್ಲ. ಅವರ ಯೋಗ ಸಂಪೂರ್ಣ ಉಚಿ

ಡಾಕ್ಟರ್ ತಥಾಗತ

ಬಿಹಾರದ ತಥಾಗತ ಅವತಾರ್ ತುಳಸಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ಪ್ರೌಢಶಾಲೆ ಮುಗಿಸುತ್ತಾನೆ. ಹತ್ತನೇ ವಯಸ್ಸಿನಲ್ಲಿ ವಿಜ್ಞಾನ ವಿಷಯದಲಿ ಪದವಿ ಗಳಿಸುತ್ತಾನೆ. 12ನೇ ವಯಸ್ಸಿನಲ್ಲಿ ಪಾಟ್ನ ವಿವಿಯಲ್ಲಿ ಭೌತಶಾಸ್ತ್ರದ ಮೇಲೆ ಸ್ನಾತಕೋತ್ತರ ಪದವಿ ಪಡೆಯುತ್ತಾನೆ. ಅವನು ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀದರ. ಆತ ಪಿಜಿ ಮುಗಿಸಿದ ಮೇಲೆ ಬೆಂಗಳೂರಿನ ಐಐಎಸ್ಸಿಯ ಬಾಗಿಲು ತೆರೆಯುತ್ತದೆ. ಅಲ್ಲಿಂದ ಪಿಎಚ್ಡಿ ಪದವಿ ಗಳಿಸುತ್ತಾನೆ. ತನ್ನ 21ನೇ ವಯಸ್ಸಿಗೆ ಡಾಕ್ಟರ್ ತಥಾಗತ ಅವತಾರ್ ತುಳಸಿಯಾಗುತ್ತಾನೆ. ಆಮೇಲೆ ವಿಶ್ವ ವಿಖ್ಯಾತನಾಗುತ್ತಾನೆ! ಅವನು ಪಿಎಚ್ಡಿ ಆರಂಭಿಸಿದಾಗಲೇ, ಜಗತ್ತಿನ ಕಿರಿಯ ಸಂಶೋಧಕ ಎಂಬ ಬಿರುದು ಮುಡಿಗೇರುತ್ತದೆ. ಪಿಎಚ್ಡಿ ಮುಗಿದ ನಂತರ ವಿಶ್ವದ ಕಿರಿಯ ವಿಜ್ಞಾನಿಗಳಲ್ಲಿ ತಥಾಗತ ಒಬ್ಬನಾಗುತ್ತಾನೆ. ಈಗ ಅವನಿಗೆ 23 ವರ್ಷ. ಈಗಲೂ ಅವನ ಜಗದ್ವಿಖ್ಯಾತಿ ಮುಂದುವರೆದಿದೆ. ಸದ್ಯಕ್ಕೆ ಅವನು ಮುಂಬೈನ ಐಐಟಿಯಲ್ಲಿ ಸಹ ಪ್ರಾಧ್ಯಾಪಕನಾಗಿದ್ದು, ವಿಶ್ವದ ಕಿರಿಯ ಸಹ ಪ್ರಾಧ್ಯಾಪಕರಲ್ಲಿ ಅವನೂ ಒಬ್ಬನಾಗಿದ್ದಾನೆ!

ಸಕ್ಕರೆ ಖಾಯಿಲೆ ಜತೆ ಇನ್ನೂರೈವತ್ತು ವಿಕೆಟ್!


ಸಕ್ಕರೆ ಖಾಯಿಲೆ ಜತೆ ಇನ್ನೂರೈವತ್ತು ವಿಕೆಟ್!


ಆ ತಾಯಿ ತನ್ನ ಮಗುವಿಗೆ ಚಂದಮಾಮನ ಹಾಡು ಹೇಳುತ್ತಾ ಅನ್ನದ ಅಗುಳನ್ನು ಬಾಯಿಗಿಡಲಿಲ್ಲ. ಹುಟ್ಟು ಹಬ್ಬದ ದಿನ ಮಕ್ಕಳನ್ನು ಕರೆದು ಕೇಕ್ ಕತ್ತರಿಸಿ ಬಾಯಿ ಸಿಹಿ ಮಾಡಲಿಲ್ಲ. ಆಕೆ ಮಾಡಿದ್ದೇ ಬೇರೆ. ಗೋಡೆಯ ಛಾಯಾಚಿತ್ರದಲ್ಲಿದ್ದ ಆ ನಗುಮುಖ ತೋರಿಸಿ ಮಗುವಿನ ದೇಹಕ್ಕೆ ಸೂಜಿ ಚುಚ್ಚುತ್ತಿದ್ದಳು. ಮೌನ ಚಿತ್ರದಲ್ಲಿರುವ ಆ ವ್ಯಕ್ತಿಯ ಮುಖ ನೋಡಿದಾಗ ಆ ಮಗುವಿನ ಮನದಲ್ಲಿ ಚೈತನ್ಯ ತುಂಬಿಕೊಳ್ಳುತ್ತಿತ್ತು. ನೋವು ನುಂಗಿ ಮುಖದಲ್ಲಿ ನಗು ಚೆಲ್ಲುತ್ತಿತ್ತು! ಆ ಮನುಷ್ಯನಿಂದ ಇಂಥ ಎಷ್ಟೋ ಮಕ್ಕಳ ಮನಸ್ಸು ಗಟ್ಟಿಯಾಗಿವೆ. ಬದುಕುವ ಕನಸು ಕಂಡಿವೆ. ಸಾಧಿಸುವ ಛಲವನ್ನು ಇಮ್ಮಡಿಗೊಳಿಸಿಕೊಂಡಿವೆ. ನಡುರಾತ್ರಿಯಲ್ಲೂ ಅವನ ನೆನಪು ಮಾಡಿಕೊಂಡಿವೆ. ದೇವರಂತೆ ಆರಾಧಿಸಿವೆ.......ಅವನಿಟ್ಟ ಒಂದೊಂದು ಹೆಜ್ಜೆಯೂ ಎಚ್ಚರದ ಹೆಜ್ಜೆ. ತಾಳ ತಪ್ಪದ ನಡಿಗೆ. ಅಪ್ಪಿತಪ್ಪಿ ಎಚ್ಚರ ತಪ್ಪಿದರೆ ಅಲ್ಲೋಲ ಕಲ್ಲೋಲ......ಇಂಥಾ ಸಮಸ್ಯೆಯ ಸುಳಿಯಲ್ಲಿ ಆತ ಜಗತ್ತಿನ ಮಾದರಿ. ಆತ ವಿಶ್ವ ಅತೀ ಶ್ರೇಷ್ಠ ಕ್ರಿಕೆಟಿಗ ವಾಸಿಮ್ ಅಕ್ರಮ್. ಪಾಕಿಸ್ಥಾನ ತಂಡದ ಮಾಜಿ ನಾಯಕ. 400 ವಿಕೆಟ್ ಪಡೆದುಕೊಂಡ ವಿಶ್ವದ ಮೊತ್ತ ಮೊದಲ ಕ್ರಿಕೆಟಿಗ. ಈಗ ಹೇಳಲು ಹೊರಟಿರುವುದು ಅಕ್ರಮ್ ಬಗ್ಗೆ ಅಲ್ಲ, ಅವನ ಪ್ರಾಣ ಸ್ನೇಹಿತನ ಬಗ್ಗೆ. ಆ ಸ್ನೇಹಿತ ಬೇರಾರೂ ಅಲ್ಲ, ಅದೊಂದು ರೋಗ. ಮಧುಮೇಹ! ವಾಸಿಮ್ ಕ್ರಿಕೆಟ್ ಲೋಕದ ಧ್ರುವತಾರೆಯಾಗಿದ್ದಾಲೇ ಮಧುಮೇಹ ಪತ್ತೆಯಾಯಿತು. ಆಗ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡುತ್ತಿದ್ದರು. ಇನ್ನೂ ಮ್ಯಾಚ್ ಮುಗಿದಿರಲಿಲ್ಲ. ಮ್ಯಾಚ್ ಮಧ್ಯದಲ್ಲಿ ಮಹಾಮಾರಿ ಪತ್ತೆಯಾದಾಗ ಅಕ್ರಮ್ ತೀರಾ ನೊಂದುಕೊಂಡರು. ಮ್ಯಾಟರ್ ಮುಚ್ಚಿಟ್ಟು ಮ್ಯಾಚ್ ಮುಂದುವರಿಸಿದರು. ಆಟ ಮುಗಿದಾಗ ಮನ ಕೊರೆಯುತ್ತಿದ್ದ ಉಳು ಹೊರಬಿತ್ತು. ಧುತ್ತನೆ ಬಂದ ಈ ಸುದ್ದಿಗೆ ಇಡೀ ಜಗತ್ತಿಗೆ ನೊಂದುಕೊಂಡಿತು. ತಾನು ಅನುಭವಿಸುತ್ತಿರವ ಯಾತನೆಯನ್ನು ಅಕ್ರಮ್ ಹೇಳಿಕೊಂಡಾಗ ಪಾಕ್ ಮಂದಿ ಬಿಕ್ಕಿ ಬಿಕ್ಕಿ ಅತ್ತರು. ಅಕ್ರಮ್ ಕ್ರಿಕೆಟ್ ಕೆರಿಯರ್ ಮುಗಿಯಿತು ಎಂದು ದಿಗ್ಗಜರು ತೀರ್ಮಾನಿಸಿಯೇಬಿಟ್ಟರು. ಆದರೆ ಆಗಿದ್ದೇ ಬೇರೆ. ನಿಜವಾದ ಅಕ್ರಮ್ ಆಟ ಆರಂಭವಾಗಿದ್ದೇ ಅಲ್ಲಿ. ಕ್ರಿಕೆಟ್ ಬಹಳ ಒರಟು ಆಟ. ಮಧುಮೇಹ ಸೂಕ್ಷ್ಮ ರೋಗ. ಸಣ್ಣ ಪುಟ್ಟ ಗಾಯಗಳಾದರೂ ಮಧುಮೇಹಿಗಳಿಗೆ ಅಪಾಯ. ವಾಸಿಮ್ ಜಗ್ಗಲಿಲ್ಲ. ಮಧುಮೇಹವನ್ನು ದ್ವೇಷಿಸದೆ ಪ್ರೀತಿಸಿದರು. ರೋಗವನ್ನೇ ಪ್ರಾಣ ಸ್ನೇಹಿತನನ್ನಾಗಿ ಮಾಡಿಕೊಂಡರು. ಮತ್ತೆ ಆಟ ಮುಂದುವರಿಸಿದರು. ಸಕ್ಕರೆ ಖಾಯಿಲೆಯನ್ನು ಜೊತೆಯಲ್ಲಿ ಇಟ್ಟುಕೊಂಡೇ 250 ವಿಕೆಟ್ ಕೆಡವಿದರು! 31ನೇ ವರ್ಷ ವಯಸ್ಸಿನಲ್ಲಿ ಮಧುಮೇಹ ಪತ್ತೆಯಾದ ಮೇಲೆ ಅಕ್ರಮ್ ತಮ್ಮ ಜೀವನ ಶೈಲಿ ಬದಲಾಯಿತು. ಕಾರು ತ್ಯಜಿಸಿ ಕಾಲ್ನಡಿಗೆ. ಅಭ್ಯಾಸ, ಹಾಬಿಗಳೆಲ್ಲಾ ಅದಲು ಬದಲು. ದಿನಕ್ಕೆ ಮೂರು ಬಾರಿ ಇನ್ಸುಲಿನ್ ಹನಿ. ದೇಹದ ತುಂಬೆಲ್ಲಾ ಸೂಜಿಯ ಕರೆ. ತಿಂದ ತಕ್ಷಣವೇ ಸಕ್ಕರೆ ಅಂಶದ ಅಳತೆ....... ಅಕ್ಷರಶಃ ಅಕ್ರಮ್ ಅವರದು ತಕ್ಕಡಿಯ ಮೆಲಿನ ಜೀವನ, ಇಂದಿಗೂ. ಅವರು 2003ರಲ್ಲಿ ಕ್ರಿಕೆಟ್ಗೆ ಭೈ ಹೇಳಿದ ಮೇಲೆ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಮಧುಮೇಹಿಗಳ ಜೀವನ ಶೈಲಿಯ ಅರಿವಿನ ಕ್ರಾಂತಿಯನ್ನೇ ಆರಂಭಿಸಿದರು. ಈ ಕ್ರಾಂತಿ ಪಾಕಿಸ್ಥಾನಕ್ಕಿಂತ ಭಾರತೀಯರ ಮೇಲೆ ಹೆಚ್ಚು ಪ್ರಭಾವ ಬೀರಿತು. ಯಾಕೆಂದರೆ ಭಾರತ ಮಧುಮೇಹಿಗಳ ತವರು. ಇತ್ತೀಚೆಗೆ ಮಕ್ಕಳನ್ನು ಮಧುಮೇಹ ಕಾಡುತ್ತಿದೆ. ಅಕ್ರಮ್ ಕೈಗೊಂಡ ಆರಿವಿನ ಕ್ರಾಂತಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ‘ಮಧುಮೇಹ ರೋಗವಲ್ಲ, ಅದು ಶಿಸ್ತುಬದ್ಧ ಜೀವನ ಮಾರ್ಗ’ ಎಂಬ ವಿಷಯವನ್ನು ಅವರು ವಿಶ್ವದಾದ್ಯಂತ ಸಾರುತ್ತಿದ್ದಾರೆ. ಅಕ್ರಮ್ ಸಾಧನೆ ಮಧುಮೇಹಿಗಳಿಗೆ ದೊಡ್ಡ ಪಾಠ. ಮಕ್ಕಳ ತಂದೆ ತಾಯಂದಿರು ತಮ್ಮ ಮಧುಮೇಹಿ ಮಕ್ಕಳಿಗೆ, ವೈದ್ಯರು ರೋಗಿಗಳಿಗೆ ಅಕ್ರಮ್ ಕತೆ ಹೇಳಿ ಧೈರ್ಯ ತುಂಬುತ್ತಾರೆ. ಅಕ್ರಮ್ ಮನಸ್ಸು ಕ್ರಿಕೆಟ್ಗಾಗಿ ಸದಾ ತುಡಿಯುತ್ತದೆ. ಅವರೀಗ ಕ್ರಿಕೆಟ್ ಕಾಮಿಂಟ್ರೇಟರ್. ವರ್ಲ್ಡ್ ಕಪ್ ನಡೆಯುತ್ತಿದೆ. ಟಿವಿ ಸ್ವಿಚ್ ಆನ್ ಮಾಡಿದರೆ ಅವರ ಶಕ್ತಿಯುತ ಧ್ವನಿ ಹೃದಯ ತಟ್ಟುತ್ತದೆ.


ಶಿವಖೇರ ಕಲಾಕಾರ!


ಮನಸೆಳೆಯುವ ಮಾತುಗಳ ಮೋಡಿಗಾರ, ಸ್ಫೂರ್ತಿ ತುಂಬುವ ಸೂಕ್ತಿಗಳ ಬರಹಗಾರ, ವ್ಯಕ್ತಿತ್ವ ವಿಕಸನಗೊಳಿಸಿ ಶಕ್ತಿ ತುಂಬುವ ಕನಸುಗಾರ. ಅಕ್ಷರಗಳ ನಡುವೆ ಹಾಸ್ಯ ಬೆಸೆಯುವ ಸೊಗಸುಗಾರ. ಕನಸುಗಳಿಗೆ ವರ್ಣ ತುಂಬುವ ಕಲಾಕಾರ...........‘ಶಿವ ಖೇರ’ ಮೂವತ್ತು ವರ್ಷಗಳ ಹಿಂದೆ ಅಮೆರಿಕಾದಲ್ಲಿ ಕಾರು ತೊಳೆಯುತ್ತಿದ್ದರು ಎಂದರೆ ನಂಬಲು ಸ್ವಲ್ಪ ಕಷ್ಟವೇ! ‘ಯು ಕ್ಯಾನ್ ವಿನ್’ ಪುಸ್ತಕವನ್ನು ಕೇಳದವರಿಲ್ಲ. ಇದು ಬರೀ ಪುಸ್ತಕವಲ್ಲ, ಒಂದು ಮಾತಾಗಿಯೂ ಕೂಡ ಕೋಟ್ಯಾಂತರ ಮನಸ್ಸುಗಳ ಮನಸೂರೆಗೊಂಡಿದೆ. ಮನಸ್ಸಿನ ಮೇಲೆ ಪರಿಣಾಮ ಬೀರುವ ಇಂತಹ ಸಾವಿರಾರು ಸೂಕ್ತಿಗಳನ್ನು ಶಿವ ಖೇರ ಬರೆದಿದ್ದಾರೆ. ಫ್ರೀಡಮ್ ಈಸ್ ನಾಟ್ ಫ್ರೀ, ಲಿವಿಂಗ್ ವಿಥ್ ಹಾನರ್ ಇವು ಖೇರ ಅವರ ಪ್ರಖ್ಯಾತ ಪುಸ್ತಕಗಳು. ಇವು ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ದೆಹಲಿ ಮೂಲದ ಶಿವ ಖೇರ ಅಮೆರಿಕಾದಲ್ಲಿ ಕಾರು ತೊಳೆಯುವ ಕೆಲಸಕ್ಕಿದ್ದರು. ಕಾರು ತೊಳೆಯುವ ಹುಡುಗನ ಅಂದ ಚಂದದ ಮಾತು ಕೇಳಿ ಕಾರು ಮಾಲೀಕನೊಬ್ಬ ಇನ್ಸುರೆನ್ಸ್ ಕಂಪನಿಯಲ್ಲಿ ಏಜೆಂಟ್ ಕೆಲಸ ಕೊಡಸಿಬಿಟ್ಟ. ಅಲ್ಲಿಂದ ಆರಂಭವಾಯಿತು ಮಾತಿನಲ್ಲಿ ಮನೆ ಕಟ್ಟುವ ಕಾರ್ಯ. ಕೇವಲ ಒಂದು ವರ್ಷದಲ್ಲಿ ಕೈ ತುಂಬ ಕಮಾಯಿಸಿಕೊಂಡ ಶಿವಖೇರ ಉಪನ್ಯಾಸ ಕೊಡಲು ಆರಂಭಿಸಿದರು. ಮಾತು ಕೇಳಿದವರೆಲ್ಲಾ ಅಭಿಮಾನಿಗಳಾದರು. ನಂತರ ಆರಂಭವಾಯಿತು ಬರವಣಿಗೆ. 2008ರಲ್ಲಿ ಹೊರಬಂದ ‘ಯು ಕ್ಯಾನ್ ವಿನ್’ ಇತಿಹಾಸವನ್ನೇ ಸೃಷ್ಟಿಸಿತು. ‘ಅಸ್ಪಸ್ಥ ಮನಸ್ಸುಗಳನ್ನು ತಿದ್ದುವ ಆಯುಧ’ ಎಂದೇ ಈ ಪುಸ್ತಕ ಪ್ರಸಿದ್ಧಿ ಪಡೆಯಿತು. ನಂತರ ಶಿವಖೇರ ಜಗತ್ತಿನಾದ್ಯಂತ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸಿದರು. ಒತ್ತಡದಲ್ಲಿ ಜೀವಿಸುವವರಿಗೆ ಶಿವಖೇರ ವರ್ಕ್ಶಾಪ್ಗಳು ಸಂಜೀವಿನಿಯಾದವು. ಇತರರ ಮೇಲೆ ‘ಫಾಷನೇಟ್’ ಆಯುಧಗಳನ್ನು ಪ್ರಯೋಗಮಾಡುವ ಶಿವಖೇರ, ಸ್ವತಃ ಅವರೇ ಪ್ಯಾಷನೇಟ್ ಮನುಷ್ಯ. ಮಾತಿನ ನಿಖರತೆ, ಗಾಢ ವಿಶ್ವಾಸ, ಅಪಾರ ನಂಬಿಕೆ, ಹಾಸ್ಯ ಪ್ರಜ್ಞೆ ಇವೆಲ್ಲವು ಅವರನ್ನು ಪ್ರಬುದ್ಧಗೊಳಿದವು. ಸಮಾಜವನ್ನು ಚಿಂತನೆಗೆ ಹಚ್ಚು ವ ಹಲವು ಕೆಲಸಗಳನ್ನು ಶಿವಖೇರ ಮಾಡಿದ್ದಾರೆ. ‘ಜಾತಿ ಚೋಡೋ, ಭಾರತ್ ಜೋಡೋ’ ಎನ್ನುವ ಡಾಕ್ಯುಮೆಂಟರಿಯೊಂದನ್ನು ಅವರು ನಿರ್ಮಿಸಿದ್ದಾರೆ. ರಾಜಕೀಯಕ್ಕೂ ಹೋಗಿ ವಾಪಸ್ ಬಂದಿರುವ ಶಿವಖೇರ 2004 ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ! ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಮಹಾಮಾತೆ ಮದರ್ ತೆರೆಸಾ ಅವರ ಜೊತೆ ‘ಲೂಯಿಸ್ ಮಾರ್ಚೆಸ್ಸಿ ಫೆಲೋ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಶಿವಖೇರ ಬೆಂಗಳೂರಿಗೆ ಬಂದಿದ್ದರು. ಆಟೋಗ್ರಾಫ್ಅನ್ನು ಅವರ ಕೈಗಿಟ್ಟಾಗ ‘ವಿನ್ನರ್ಸ್ ಡೋಂಟ್ ಡು ಡಿಫರೆಂಟ್ ಥಿಂಗ್ಸ್, ದೆ ಡು ಥಿಂಗ್ಸ್ ಡಿಫರೆಂಟ್ಲಿ’ ಎಂದು ಬರೆದು ಸೈನ್ ಮಾಡಿದರು. ಇದು ಅವರ ಸಿಗ್ನೇಚರ್ ಟ್ರೇಡ್ಮಾರ್ಕ್!

Monday, February 21, 2011

ಅಚ್ಚ ಕನ್ನಡಿಗ ಅಜಯ್ ಕುಮಾರ್ ಸಿಂಗ್!



ಅಚ್ಚ ಕನ್ನಡಿಗ ಅಜಯ್ ಕುಮಾರ್ ಸಿಂಗ್!


ಖದ್ರಿ ಗೋಪಾಲನಾಥರ ಸ್ಯಾಕ್ಸೋಪೋನ್ ಹಾಗೂ ಕಲ್ಯಾಣ ಕುಮಾರಿ ಅವರ ವೈಲಿನ್ ನಡುವಿನ ಸಮರ ಬಲು ಜೋರಾಗೇ ನಡೆದಿತ್ತು. ಖದ್ರಿ ಒಂದು ಅಂದರೆ, ಕುಮಾರಿ ಎರಡು ಅನ್ನುತ್ತಿದ್ದರು. ಖದ್ರಿ ನಾಲ್ಕು ಸ್ವರ ನುಡಿಸಿದರೆ, ಕುಮಾರಿ ಎಂಟು ಸ್ವರ ನುಡಿಸುತ್ತಿದ್ದರು. ಅವರಿಬ್ಬರ ಮಧ್ಯದ ಮಾಧುರ್ಯದ ಕಾಳಗಕ್ಕೆ ಕೇಳುಗ ಆನಂದದ ನೆತ್ತರು ಹರಿಸಿ ಚಿತ್ತಾಗಿ ಹೋಗಿದ್ದ.........ಮೊದಲ ಸಾಲಿನಲ್ಲಿ ರಸಿಕನೊಬ್ಬ ಕೂತಿದ್ದ. ಆತನ ಆನಂದಕ್ಕೆ ಎಣೆ ಎಂಬುದಿರಲಿಲ್ಲ. ಆ ಮಾಧುರ್ಯದ ಕಾಳಗದಲ್ಲಿ ಈ ವ್ಯಕ್ತಿಯ ಕೈಗಳು ತೊಡೆ ತಟ್ಟಿ ತಾಳ ಹಾಕುತ್ತಿದ್ದವು. ಕಣ್ಣುಗಳು ತೇಲಾಡುತ್ತಾ ಆಗಸದತ್ತ ದಿಟ್ಟಿಸುತ್ತಿದ್ದವು. ಕತ್ತು ಅತ್ತಿತ್ತ ಓಲಾಡುತ್ತಿತ್ತು. ಮೋಹನ ರಾಗ ಆರಂಭವಾದಾಗ ಬಂಗಾರ ಸಿಕ್ಕಿದ ಭಾವ. ಕಲ್ಯಾಣಿ ಆರಂಭವಾದದ್ದೇ ತಡ ಕಣ್ಣುಗಳ ತೀಕ್ಷ್ಣ ಇಮ್ಮಡಿ. ರಾಗ ರಾಗಕ್ಕೂ ಆ ವ್ಯಕ್ತಿಯ ಮುಖಭಾವ ಬದಲಾಗುತ್ತಿತ್ತು. ನಡು ನಡುವೆ ಭಲೇ... ಎಂಬ ಅಬ್ಬರ ಬಾಯಿಂದ ಹೊರಬರುತ್ತಿತ್ತು. ಆ ಜಗತ್ಪ್ರಸಿದ್ಧರ ಜುಗಲ್ಬಂದಿಗೆ ಈ ವ್ಯಕ್ತಿ ಆನಂದದಿಂದ ತೇಲಾಡುತ್ತಿದ್ದರು. ಆರಂಭದ ವರ್ಣದಿಂದ ಹಿಡಿದು ಕಡೆಯ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ’ವರೆಗೂ ಬರೋಬ್ಬರಿ 3 ಗಂಟೆ ಆ ವ್ಯಕ್ತಿ ಅತ್ತಿತ್ತ ಅಲ್ಲಾಡಲಿಲ್ಲ! ಆ ರಸಿಕನ ಹೆಸರು ಡಾ. ಅಜಯ್ ಕುಮಾರ್ ಸಿಂಗ್. ಕರ್ನಾಟಕ ರಾಜ್ಯ ಕಂಡ ಹೆಮ್ಮೆಯ ಪೊಲೀಸ್ ಅಧಿಕಾರಿ. ತಮ್ಮ 37 ವರ್ಷಗಳ ಸೇವಾವಧಿಯಲ್ಲಿ 35 ವರ್ಷಗಳನ್ನು ಕರ್ನಾಟಕಕ್ಕೇ ಕೊಟ್ಟವರು. ಅವರು ಕರ್ನಾಟಕದಲ್ಲಿ ಇದ್ದದ್ದು ಕೇವಲ ಉನ್ನತ ಪೊಲೀಸ್ ಅಧಿಕಾರಿಯಾಗಿ ಮಾತ್ರವಲ್ಲ, ಒಬ್ಬ ಅಪ್ಪಟ ಕನ್ನಡಿಗನಾಗಿ. ಕನ್ನಡ ಸಾಹಿತಿಯಾಗಿ. ಕನ್ನಡ ಕಲಾಭಿಮಾನಿಯಾಗಿ.ಸಿಂಗ್ ಅವರಿಗೆ ಕನ್ನಡ ನಾಡು, ನುಡಿ ಅಂದರೆ ಎಲ್ಲಿಲ್ಲದ ಪ್ರೀತಿ. ಕನ್ನಡ ಅವರ ನಾಲಗೆಯ ಮೇಲೆ ನಲಿದಾಡುತ್ತಿತ್ತು. ಅವರ ಊರು ಉತ್ತರ ಪ್ರದೇಶದ ಸಿರಸಗಂಜ್. 1974ರ ಐಪಿಎಸ್ ಬ್ಯಾಚ್ನಿಂದ ಹೊರಬಂದ ಅಜಯ್ ಕುಮಾರ್ ಸಿಂಗ್ಗೆ 1976ರ ನಂತರ ಕರ್ನಾಟಕ ಕರ್ಮಭೂಮಿಯಾಗಿತ್ತು. ವಿವಿಧ ಹುದ್ದೆಗಳನ್ನು ನಿರ್ವಹಿಸಿ 2007ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೇರಿದರು. ಅಷ್ಟೊತ್ತಿಗಾಗಲೇ ಸಿಂಗ್ ಕನ್ನಡ ಮಣ್ಣಿನ ಅಪ್ಪಟ ಪ್ರೇಮಿಯಾಗಿದ್ದರು.ಕರ್ನಾಟಕ ಶಾಸ್ತ್ರೀಯ ಸಂಗೀತ ಅಂದರೆ ಅವರಿಗೆ ಪ್ರಾಣ. ಕನ್ನಡ ಸಾಹಿತ್ಯ ಪಂಚಪ್ರಾಣ. ಬೇಂದ್ರೆಯವರ ಸಾಹಿತ್ಯವನ್ನು ಹುಚ್ಚರಂತೆ ಹಚ್ಚಿಕೊಂಡಿದ್ದರು. ಬೇಂದ್ರೆ ಅವರ ಕವನಗಳನ್ನು ಹಿಂದಿಗೆ ತೆಗೆದುಕೊಂಡು ಹೋದರು. ವಚನಗಳ ಮಹತ್ವವನ್ನು ಅವರು ಸದಾ ಉಚ್ಛರಿಸುತ್ತಿದ್ದರು. ವಚನಗಳೂ ಕೂಡ ಅವರ ಕೈಯಿಂದ ಹಿಂದೆಗೆ ಹೋದವು. ಯಾವುದೇ ಕಾರ್ಯಕ್ರಮಗಳಿಗೆ ಹೋದರು ವಚನಗಳನ್ನು ಹೇಳಿ ಚಕಿತಗೊಳಿಸುತ್ತಿದ್ದರು.ಒಬ್ಬ ಉನ್ನತ ಪೊಲೀಸ್ ಅಧಿಕಾರಿಯಾಗಿ ಅವರು ಮಾಡಿದ ಕಾರ್ಯ ಅನನ್ಯ. ಹೊಸ ಹೊಸ ಅಪರಾಧ ತನಿಖಾ ವಿಧಾನಗಳನ್ನು ಇಡೀ ದೇಶಕ್ಕೇ ಕೊಟ್ಟರು. ಕರ್ನಾಟಕ ಪೊಲೀಸರು ಮುಡಿಗೇರಿಸಿಕೊಂಡಿರುವ ಖ್ಯಾತಿಗೆ ಸಿಂಗ್ ಕೂಡ ಕಾರಣರು. ಬೆಂಗಳೂರಿನ ಐಐಎಸ್ಸಿ, ಹುಬ್ಬಳ್ಳಿಗಳಲ್ಲಿ ನಡೆದ ಉಗ್ರರ ದಾಳಿ ಪ್ರಕರಣವನ್ನು ಬಹಳ ಬೇಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಕೈಗೆ ಕೊಟ್ಟು ಖ್ಯಾತರಾದರು.ಅಜಯ್ ಕುಮಾರ್ ಸಿಂಗ್ ಈಗ ಕರ್ನಾಟದಿಂದ ತಮ್ಮ ಹುಟ್ಟೂರಿಗೆ ಹೊರಟಿದ್ದಾರೆ. ಅವರು ಇಲಾಖೆಯಿಂದ ಜ. 31ರಂದು ನಿವೃತ್ತರಾಗಿದ್ದಾರೆ. ಮೊನ್ನೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಭಾವುಕರಾಗಿದ್ದರು. ನಿವೃತ್ತರಾದ ಮೇಲೂ ಕನ್ನಡ ಪ್ರೀತಿ ಇದ್ದೇ ಇರುತ್ತದೆ ಎಂಬ ಮಾತು ಹಾಗಿರಲಿ, 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆಯಾದ ಈ ಹೊತ್ತಿನಲ್ಲಿ ಅಂಥಾ ಒಬ್ಬ ಆಪ್ಪಟ ಕನ್ನಡಾಭಿಮಾನಿಯ ನೆನಪು ನಿತ್ಯವೂ ನಿತ್ಯೋತ್ಸವ!


ಭಾರತವನ್ನೇ ಮನೆಗೆ ತರಲು ಹೋಗಿದ್ದ!


ಅವತ್ತು ಕಾರ್ಗಿಲ್ನ ಕುಪ್ಪಾರ ಗೊಂಡಾರಣ್ಯ ಪ್ರದೇಶದಲ್ಲಿ ಮೈ ಕೊರೆಯುವ ಚಳಿ. ಪೊದೆಯ ಮರೆಯಲ್ಲಿ ಕುಳಿತು ಭಾರತಾಂಬೆಯ ಸೇವೆಗಯ್ಯುತ್ತಿದ್ದ 23ರ ಹರೆಯದ ಕನಸು ಕಂಗಳ ಪೋರ ಯೋಗೇಂದ್ರ ಸಿಂಗ್, ತನ್ನ ಪ್ರಾಣ ಸ್ನೇಹಿತ ಜೋಗೀಂದರ್ ಜೊತೆ ಭವಿಷ್ಯದ ಬಗ್ಗೆ ಬಗೆ ಬಗೆಯಾಗಿ ಮಾತನಾಡಿದ್ದ. ‘ ನಾಳೆ ಮುಂಜಾನೆ ನನ್ನ ಮನೆಗೆ ಹೋಗುತ್ತಿದ್ದೇನೆ’ ಎಂಬುದನ್ನೇ ನೂರು ಸಲ ಹೇಳಿದ್ದ. ‘ನಿಮ್ಮ ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಿದ್ದರೆ ಹೇಳು ’ ಎಂದು ಜೋಗಿಂದರ್ನನ್ನು ಕೇಳಿದ್ದ....ಹೌದು, ಅವನು ಅಂದುಕೊಂಡಂತೆ ಯೋಗೇಂದ್ರ ಮುಂಜಾನೆ ಮನೆಗೆ ಹೊರಟ. ಆದರೆ ಅವನು ಹೊರಟದ್ದು ಹೆಣವಾಗಿ!ಕಾಫಿನ್ ಒಳಗೆ ಮಲಗಿದ್ದ ಗೆಳೆಯನನ್ನು ಹೊತ್ತೊಯ್ಯುತ್ತಿದ್ದ ಜೋಗಿಂದರ್ ಮನಸ್ಸೂ ಕೂಡ ಹೆಣಭಾರ. ಭಾರವಾದ ಮನಸ್ಸಿನಲ್ಲೇ ಕೈ ಎತ್ತಿ ಸೆಲ್ಯೂಟ್ ಮಾಡಿದ್ದ. ‘ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಿದ್ದರೆ ಹೇಳು’ ಎಂದಿದ್ದ ಗೆಳೆಯನಿಗೆ ‘ನಿನ್ನನ್ನೇ ನಾನು ತೆಗೆದುಕೊಂಡು ಹೋಗುತ್ತ್ತಿದ್ದೇನೆ’ ಎಂದು ಮನಸ್ಸಿನಲ್ಲೇ ಮಾತನಾಡಿಕೊಂಡ ಜೋಗಿಂದರ್ ಮನಸ್ಸು ಮತ್ತೂ ಭಾರವಾಯಿತು. ಹೆಣವಾಗಿ ಬಂದ ಮಗನ ಮುಖ ನೋಡಿದ ತಾಯಿ ಕೇಳಿದ್ದು ಒಂದೇ ಪ್ರಶ್ನೆ. ಭಾರತ ಎಲ್ಲಿ ಮಗನೇ? ಹೆತ್ತ ಕರುಳಿನ ಕೊರಗು ಕೇಳಿದ ಜನ ಗೊಳೋ ಅಂದರು.ಯೋಗೇಂದ್ರ ಸಿಂಗ್ ಉತ್ತರ ಪ್ರದೇಶ ರಾಜ್ಯದ ಆಲಿಗರ್ ಸಮೀಪದ ಜೊಹರಾಗರ್ ಹಳ್ಳಿಯ ಹುಡುಗ. ಸೈನಿಕನಾಗುವುದು ಅವನ ಕನಸಿನ ಕಟ್ಟೆಯಾಗಿತ್ತು. 20ನೇ ವಯಸ್ಸಿನಲ್ಲಿ ಆ ಕಟ್ಟೆಯೊಡೆದು ರಜಪೂತನ್ ರೈಫಲ್ ದಳ ಸೇರಿದ. ಆರಂಭದಲ್ಲೇ ಕಾರ್ಗಿಲ್ ಪ್ರಾಂತ್ಯಕ್ಕೆ ಸೇವೆಗೆ ತೆರಳಿದ. ಅಮ್ಮನಿಗೆ ಬರೆದ ಮೊದಲ ಪತ್ರದಲ್ಲಿ ‘ನಾನು ಕ್ಷತ್ರಿಯ, ಯುದ್ಧವೇ ನನ್ನ ಧರ್ಮ’ ಎಂದು ಅರ್ಜುನನ ಡೈಲಾಗ್ ಹೊಡೆದಿದ್ದ!ಕಳೆದು ಹೋದ ಆ ಎಳೇ ಜೀವಕ್ಕೆ ಬೆಲೆ ಎಂಬುದಿರಲಿಲ್ಲ. ಒಬ್ಬ ಹೆಮ್ಮಯ ಯೋಧನನ್ನು ಭಾರತ ಕಳದುಕೊಂಡರೆ, ಇದ್ದ ಒಂದೇ ಒಂದು ನಂದಾದೀಪವನ್ನು ಆ ಕುಟುಂಬ ಕಳೆದುಕೊಂಡಿತ್ತು. ದೇಶಕ್ಕೆ ಯೋಗೇಂದ್ರ ಸಿಂಗ್ ಕಾರ್ಗಿಲ್ ಹೀರೋ. ಅವನು ಹುಟ್ಟಿದ ಹಳ್ಳಿಯಲ್ಲಿ ಅವನು ದೇವರು. ರಸ್ತೆ ರಸ್ತೆಯಲ್ಲಿ ಅವನನ್ನು ಜನ ಇಂದಿಗೂ ಪೂಜಿಸುತ್ತಿದ್ದಾರೆ. ‘ನಾನು ಕ್ಷತ್ರಿಯ, ಯುದ್ಧವೇ ನನ್ನ ಧರ್ಮ’ ಎಂಬ ಮಾತು ಅವನ ಪುತ್ಥಳಿ ಮುಂದೆ ರಾರಾಜಿಸುತ್ತಿದೆ. ಅವನು ಇಲ್ಲದಿದ್ದರೂ ಅವನ ಚೇತನ ಇನ್ನೂ ಜೀವಂತವಾಗಿದೆ!


ವೈದ್ಯನಿಗೆ ವಿಜಯ, ರೋಗಿಗೆ ಜೀವ!


ಇಂದೋರ್ನ ನರರೋಗ ವೈದ್ಯ ಡಾ. ರಾಜೇಂದ್ರ ಪಂಜಾಬಿ ಭಾರತದ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ಬರೆದು ವಿಶ್ವದ ಮೊದಲಿಗರಾಗಿದ್ದಾರೆ. ರೋಗಿಯೊಬ್ಬರ ಜೀವಕ್ಕೆ ಕುತ್ತು ತಂದಿದ್ದ ಅತೀದೊಡ್ಡ ಗ್ರಂಥಿಯೊಂದನ್ನು ಹೊರತೆಗೆದು ರೋಗಿಗೆ ಮರುಜೀವ ಕೊಟ್ಟಿದ್ದಾರೆ.ಜನನಾಂಗ ಹಾಗೂ ವೃಷಣಗಳು ದೇಹದ ಅತೀ ಸೂಕ್ಷ ಅಂಗಗಳು. ಇವು ಗುಪ್ತಾಂಗಗಳಾದ ಕಾರಣ ಇವುಗಳ ಬಗ್ಗೆ ರೋಗಿ ಮನಬಿಚ್ಚಿ ಮಾತನಾಡಲಾರ. 55 ವರ್ಷ ವಯಸ್ಸಿನ ಉಸ್ಮಾನ್ಗೆ ಇಂತಹ ರೋಗವೊಂದು ಕಾಣಿಸಿಕೊಂಡಿತು. ಆತನ ವೃಷಣಗಳ ಚೀಲ ಇದ್ದಕ್ಕಿದ್ದಂತೆ ದೊಡ್ಡದಾಯಿತು. ಜನನಾಂಗದ ಗಾತ್ರವೂ ಕೂಡ ಮಿತಿ ಮೀರಿ ಬೆಳೆಯಿತು. ಮೂತ್ರ ವಿಸರ್ಜನೆ ಸಾಧ್ಯವಾಗಲಿಲ್ಲ. ಲೈಂಗಿಕ ಕ್ರಿಯೆ ನಡೆಸಲೂ ಆಗಲಿಲ್ಲ. ಈ ತೊಂದರೆಯನ್ನು ಆಸ್ಪತ್ರೆಗೆ ತೋರಿಸಿದಾಗ ಅದು ವಿಶ್ವ ವೈದ್ಯಕೀಯ ಜಗತ್ತಿಗೆ ಸವಾಲಾಗಿತ್ತು. ಗುಪ್ತಾಂಗದ ನಡುವಿನ ಗ್ರಂಥಿ ಸಾಮಾನ್ಯವಾದುದು. ಅದು ಹೆಚ್ಚೆಂದರೆ 20ರಿಂದ 50 ಗ್ರಾಂನಷ್ಟು ದೊಡ್ಡದಾಗಬಹುದು. ಆದರೆ ಉಸ್ಮಾನ್ಗೆ ಬೆಳದಿದ್ದ ಗ್ರಂಥಿಯ ತೂಕ ಬರೋಬ್ಬರಿ 650 ಗ್ರಾಂ!ಡಾ. ರಾಜೇಂದ್ರ ಅವರು ವಿಶ್ವಶ್ರೇಷ್ಠ ಎನಿಸಿಕೊಂಡ ವೈದ್ಯರೆಲ್ಲರನ್ನು ಸಂಪರ್ಕಿಸಿ ಸಲಹೆ ಪಡೆದರು. ಇಷ್ಟು ದೊಡ್ಡ ಗ್ರಂಥಿಯ ಆಪರೇಷನ್ ಸಾಧ್ಯವೇ ಇಲ್ಲ ಅಂದರು. ಆದರೆ ರಾಜೇಂದ್ರ ಧೈರ್ಯಮಾಡಿ ಆಪರೇಷನ್ ಆರಂಭಿಸಿಯೇ ಬಿಟ್ಟರು. ಈ ಅತೀಸೂಕ್ಷ್ಮ ಶಸ್ತ್ರ ಚಿಕಿತ್ಸೆಯನ್ನು ಜಗತ್ತು ಗಮನಿಸುತ್ತಿತ್ತು. ಸತತ ಐದು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್! ಡಾ. ರಾಜೇಂದ್ರ ಗೆಲುವಿನ ನಿಟ್ಟುಸಿರು ಬಿಟ್ಟರು. ರೋಗಿ ಉಸ್ಮಾನ್ ಮರುಜೀವದ ನಗೆ ಬೀರಿದರು.ಡಾ. ರಾಜೇಂದ್ರ ಪಂಜಾಬಿ ಈ ಆಪರೇಷನ್ ಮೂಲಕ ಅತೀದೊಡ್ಡ ವೃಷಣ ಗ್ರಂಥಿ ತೆಗೆದ ವಿಶ್ವದ ಮೊದಲ ವೈದ್ಯ ಎಂಬ ಮನ್ನಣೆ ಗಳಿಸಿದರು.


Tuesday, February 8, 2011


ಪುಟ್ಟಬಾಲೆಯ ದೊಡ್ಡ ಗಂಟಲು


ಆ ಪುಟ್ಟ ಬಾಲೆ ಮಾಲ್ಡೋವಾ ದೇಶದ ಸಣ್ಣ ಹಳ್ಳಿಯಿಂದ ಬಂದವಳು. ವಯಸ್ಸು ಕೇವಲ ಎಂಟು ವರ್ಷ. ಆದರೆ ಅವಳು ಬಾಯಿಬಿಟ್ಟರೆ ಸಾಕು ಇಡೀ ಜಗತ್ತು ಮಂಕಾಗುತ್ತದೆ. ಮೈಕಿನ ಮುಂದೆ ಹಾಡಲು ಆರಂಭಿಸಿದರೆ ಸತತ ಮೂರುಗಂಟೆಗಳ ಕಾಲ ಲಕ್ಷಾಂತರ ಮಂದಿಯನ್ನು ಸಂಗೀತದ ಅಲೆಯಲ್ಲಿ ತೇಲಿಸುತ್ತಾಳೆ. ಗಂಟಲಿನಲ್ಲಿ ಮಷೀನು ಇಟ್ಟುಕೊಂಡಿದ್ದಾಳೇನೋ ಎಂಬಂತೆ ಅವಳ ಪುಟ್ಟ ಬಾಲಕಿಯ ಬಾಯಿಂದ ಇಂಪಾದ ಧ್ವನಿ ಹೊರಹೊಮ್ಮುತ್ತದೆ.
ಅವಳ ಹೆಸರು ಕ್ಲಿಯೋಪಾತ್ರ ಸ್ಟ್ರಾಟನ್. ಎಲ್ಲರೂ ಅವಳನ್ನು ಪ್ರೀತಿಯಿಂದ ಕ್ಲಿಯೋ ಎಂತಲೇ ಕರೆಯುತ್ತಾರೆ. ಪಾಶ್ಚಾತ್ಯ ಸಂಗೀತ ಇಷ್ಟಪಡುವ ಪ್ರತಿಯೊಬ್ಬರ ಬಳಿಯೂ ಕ್ಲಿಯೋ ಹಾಡಿದ ಅಮೂಲ್ಯ ಆಲ್ಬಮ್ಅನ್ನು ಇರುತ್ತದೆ. ಕೇವಲ ಆರನೇ ವಯಸ್ಸಿಗೆ ನಾಲ್ಕು ಆಲ್ಬಮ್ ಬಿಡುಗಡೆ ಮಾಡಿದ ಕೀರ್ತಿ ಅವಳ ಮೇಲಿದೆ. ಈಗ ಅವಳ ಆಲ್ಬಮ್ಗಳು ಸಂಖ್ಯೆ 20ಕ್ಕೆ ಏರಿವೆ. ಜಗತ್ತಿನ ಎಲ್ಲಾ ಹಾಡುಗಾರರನ್ನು ಅವಳು ಅನುಕರಣೆ ಮಾಡಬಲ್ಲಳು. ಚಿಕ್ಕವಳಾದರೂ ದೊಡ್ಡವರಂತೆ ಹಾಡಬಲ್ಲಳು. ಅವಳ ತಂದೆ ಒಂದು ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಮೈಕ್ರೋಪೋನ್ ಕಿವಿಗಿಟ್ಟುಕೊಂಡು ಆಟಕ್ಕಾಗಿ ಹಾಡುತ್ತಿದ್ದಳು. ಅವಳ ಪ್ರತಿಭೆಯನ್ನು ಗುರುತಿಸಿ ನೀರೆರೆದಾಗ ಅದು ಈಗ ಬಹುದೊಡ್ಡ ಮರವಾಗಿ ಬೆಳೆದು ನಿಂತಿದೆ.



ಸಖತ್ ಹಾಟ್ ಮಗಾ

ಮೂಗು ಮಚ್ಚಿಕೊಂಡು ಗುಂಡು ಹಾಕುವವರನ್ನು ನೋಡಿದ್ದೀರಿ. ಆದರೆ ಕಣ್ಣು , ಕಿವಿ, ಮೂಗು ಮುಚ್ಚಿಕೊಂಡು ಮೆಣಸಿನ ಕಾಯಿ ತಿನ್ನುವವರನ್ನು ನೀವು ಕಂಡಿದ್ದೀರಾ? ಗುಂಡು ಹಾಕಿದರೆ ಕಿಕ್ ಹೊಡೆಯುತ್ತೆ ಬಿಡಿ, ಆದರೆ ಮೆಣಸಿನ ಕಾಯಿ ತಿಂದರೆ ಕಣ್ಣು, ಕಿವಿ, ಮೂಗು ಎಲ್ಲಾ ಒಂದಾಗಿ ಕೆನ್ನೆ ಕೆಂಪೇರುತ್ತದೆ!
ಅಷ್ಟಕ್ಕೂ ಅದು ನಿಮ್ಮ ಮನೆಯ ಹಿತ್ತಲಲ್ಲಿ ಸಿಗುವ ನಾಟಿ ಮೆಣಸಿನ ಕಾಯಿಯಲ್ಲ. ಅದು ವಿಶ್ವದ ಅತೀ ಹೆಚ್ಚು ಹಾಟ್ ಮೆಣಸಿನ ಕಾಯಿ. ಆ ಮೆಣಸಿನಕಾಯಿ ಹೆಸರು ‘ಭೂತ್ ಚಿಲ್ಲಿ’. ಬ್ಯಾಡಗಿ ಮೆಣಸಿನ ಕಾಯಿ ಬಗ್ಗೆ ಗೊತ್ತು, ಜವಾರಿ ಮೆಣಸಿನ ಕಾಯಿ ಗೊತ್ತು. ಇದ್ಯಾವ ಸೀಮೆ ಭೂತ್ ಚಿಲ್ಲಿ ? ಇದರ ಪೂರಾ ಹೆಸರು ‘ಭೂತ್ ಜುಲಾಕಿಯಾ’. ಇದು ದಕ್ಷಿಣ ಆಫ್ರಿಕಾದಲ್ಲಿ ಸಿಗುವ ವೈದ್ಯಕೀಯ ಗುಣವಿರುವ ಮೆಣಸಿನಕಾಯಿ. ಈ ಮೆಣಸಿನಕಾಯಿ ಬಗ್ಗೆ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ತಿಂದು ತೋರಿಸಿ ಅಂದರೆ? ಹೌದು, ಈ ಭೂತ್ ಚಿಲ್ಲಿಯನ್ನು ತಿನ್ನುವ ಒಬ್ಬ ಮಹಿಳೆ ಅಸ್ಸಾಮಿನಲ್ಲಿದ್ದಾಳೆ. ಅವಳು ತಿಂದದ್ದು ಒಂದಲ್ಲ, ಎರಡಲ್ಲ. ಬರೋಬ್ಬರಿ 51 . ಕೇವಲ ಎರಡು ನಿಮಿಷದಲ್ಲಿ 51 ಮೆಣಸಿನ ಕಾಯಿ ತಿಂದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಅವಳ ಹೆಸರು ಅನಾದಿತಾ ದತ್ತಾ. 30 ವರ್ಷ ವಯಸ್ಸು. 2002ರಲ್ಲಿ ಸೌತ್ ಆಫ್ರಿಕಾದ ಒಬ್ಬ ಹುಡುಗ ಎಂಟು ಮೆಣಸಿನ ಕಾಯಿ ತಿಂದು ದಾಖಲೆ ನಿರ್ಮಿಸಿದ್ದ. ಈ ದಾಖಲೆಯನ್ನು ಅನಾದಿತ ಎರಡು ನಿಮಿಷದಲ್ಲಿ 51 ಮೆಣಸಿನ ಕಾಯಿಗಳನ್ನು ತಿಂದು ಮುರಿದಿದ್ದಾರೆ. ಈ ಸ್ಪರ್ಧೆ ನಡೆದದ್ದು ಇಂಗ್ಲೆಂಡಿನಲ್ಲಿ. ಅನಾದಿತಾ ಮೆಣಸಿನ ಕಾಯಿಗಳನ್ನು ತಿನ್ನುವುದನ್ನು ‘ಚಾನೆಲ್4’ನಲ್ಲಿ ನೇರ ಪ್ರಸಾರ ನೋಡಿದ ಇಂಗ್ಲಿಷ್ ಜನ ದಂಗುಬಡಿದು ಹೋದರು.
ಅನಾದಿತಾಳ ನಾಲಗೆ ಗಡಸು ನಾಲಗೆ. ಅವಳು ಚಿಕ್ಕವಳಿದ್ದಾಗ ಆರು ವರ್ಷ ವಯಸ್ಸಿನ ತನಕ ಮಾತನಾಡಲೇ ಇಲ್ಲ. ಇದರಿಂದ ಬೆದರಿಂದ ಆಕೆಯ ಅಮ್ಮ ಅನಾದಿತಾಳ ನಾಲಗೆಗೆ ಮೆಣಸಿನ ಪುಡಿಯನ್ನು ಹಾಕಿ ತಿಕ್ಕುತ್ತಿದ್ದಂತೆ. ಹಾಗಾಗಿ ಅವಳ ನಾಲಗೆಗೆ ಖಾರ ಕಾಯಂ ಆಗಿ ಹೋಯಿತು. ಅವಳ ವೈಫಲ್ಯವೇ ದಾಖಲೆಯಾಗಿ ಮೂಡಿಬಂತು. ‘ನಮ್ಮಲ್ಲಿ ರುವ ಪೈಫಲ್ಯತೆನ್ನೇ ನಾವು ಆಯುಧ ಮಾಡಿಕೊಂಡು ಮುನ್ನಡೆಯಬೇಕು’ ಎಂದು ದೊಡ್ಡವರು ಹೇಳುವುದು ಇದನ್ನೇ ಅಲ್ಲವೆ?

ಡಾನ್ಸ್ ಇಂಡಿಯಾ ಡಾನ್ಸ್



ಡಾನ್ಸ್ ಇಂಡಿಯಾ ಡಾನ್ಸ್


ಅವನು ವೇದಿಕೆಯ ಮೇಲೆ ಹೆಜ್ಜೆ ಇಟ್ಟರೆ ನೋಡುಗನ ಹೃದಯ ಹಿಡಿಯಾಗುತ್ತದೆ. ಅವನು ಅಲ್ಲಿ ಅಲುಗಿದರೆ ಸಾಕು, ಇಲ್ಲಿ ಉಸಿರು ಕಟ್ಟಿಕೊಂಡು ಕಣ್ಣುಗಳು ಕೆಂಪೇರುಸತ್ತವೆ. ಅವನು ತನ್ನ ಪುಟ್ಟ ದೇಹವನ್ನು ರಂಗದ ಮೇಲೆ ತೆರದುಕೊಂಡಾಗ ಸಭಾಂಗಣವಿಡೀ ಶಾಂತಿ ಮಂತ್ರ. ಮೇಲಿಂದ ಸಣ್ಣಗೆ ಸುಳಿಯುವ ಬಣ್ಣದ ಬೆಳಕಿಗೆ ಅವನು ಜೋಡಿಯಾದಾಗ ಅಲ್ಲಿ ಓಕುಳಿಯಾಟ. ಅವನು ಸುತ್ತಲೂ ಸುತ್ತಿಕೊಳ್ಳುತ್ತಿರುವ ಹಾಡಿನ ಅಬ್ಬರವನ್ನು ಮೀಟಿ ಮೇಲೇಳುತ್ತಾನೆ.ನಿ ಧಾನವಾಗಿ ಆರಂಭವಾಗುವ ಅವನ ಆಟ ಹೋಗುತ್ತಾ ಹೋಗುತ್ತಾ ದೊಡ್ಡಾಟವಾಗುತ್ತದೆ........!
ಒಮ್ಮೆ ಸಮರ ಕಲೆ. ಇನ್ನೊಮ್ಮೆ ಥಾ ದಿಮಿ ಥಾ. ಒಮ್ಮೆಮ್ಮೆ ಕುಚುಪುಡಿ ಕಿಚಡಿ, ಅಲ್ಲಲ್ಲಿ ಬ್ಯಾಲೆಯ ಬೊಂಬಾಟ್. ಒಂದಷ್ಟು ಬ್ರೇಕ್ ಬ್ಯಾಕಪ್, ಅಷ್ಟಿಷ್ಟು ರಾಕ್.......ಈ ಕುಣಿತಗಳ ನಡುವೆ ಕಳೆದು ಹೋಗುತ್ತಾನೆ. ಕಣಿಯುತ್ತಾ ಕುಣಿಯುತ್ತಾ ಕಣ್ಣಲ್ಲಿ ಅದ್ಭುತ ಶಕ್ತಿ ತೋರುತ್ತಾರೆ. ಅವನಿಗೆ ಸುಸ್ತಾಗುವುದಿಲ್ಲ, ನೋಡುವವರನ್ನು ಸುಸ್ತು ಹೊಡೆಸುತ್ತಾನೆ. ಅವನೊಬ್ಬ ಮಾತ್ರ ಕುಣಿಯುವುದಿಲ್ಲ, ನೋಡುವವರನ್ನೂ ಕುಣಿಸುತ್ತಾನೆ. ಕಡೆಗೆ ‘ಡಾನ್ಸ್ ಇಂಡಿಯಾ ಡಾನ್ಸ್’ ಅನ್ನುತ್ತಾನೆ!
ಅವನ ಹೆಸರು ಕಮಲೇಶ್ ಪಟೇಲ್. ಅವನಿಗೆ ಎರಡು ಕಾಲಿಲ್ಲ. ಅವನ ಕುಣಿತಕ್ಕೆ ಕಾಲು ಬೇಕಾಗೇ ಇಲ್ಲ. ಅವನು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವುದಿಲ್ಲ, ಮನಸ್ಸಿನ ಲಜ್ಜೆ ಬಿಟ್ಟು ಕುಣಿಯುತ್ತಾನೆ.
ಕಮಲೇಶ್ ಬರೋಡಾದ ಹೆಮ್ಮೆ. ಅವನು ಹುಟ್ಟು ಅಂಗವಿಕಲನಲ್ಲ. ಯಾವನೋ ವೈದ್ಯ ಮಾಡಿದ ತಪ್ಪಿಗೆ ಅವನ ಎರಡೂ ಕಾಲು ಕಳೆದುಕೊಂಡ. ಅಲ್ಲಿಗೆ ಕಮಲೇಶ್ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಮನಸ್ಸನ್ನೇ ಕಾಲು ಮಾಡಿಕೊಂಡ. ಐದನೇ ವಯಸ್ಸಿನಿಂದ ಕುಣಿಯಲು ಆರಂಭಿಸಿದ ಕಮಲೇಶನ ಹೃದಯ ಕುಣಿಯುತ್ತಲೇ ಇದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಅವನು ಹಲವು ದಾಖಲೆ ನಿರ್ಮಾಣ ಮಾಡಿದ್ದಾನೆ.
ಅವನ ಸೂಪರ್ ಡಾನ್ಸ್ ಸಾಗರದಾಚೆಗೂ ಸಾಗಿದೆ. ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋ ‘ಡಾನ್ಸ್ ಇಂಡಿಯಾ ಡಾನ್ಸ್’ ನಲ್ಲಿ ಇಡೀ ದೇಶವನ್ನು ಬೆರಗು ಮಾಡಿಡಿ ‘ಸ್ಟಾರ್’ ಪಟ್ಟ ಕಟ್ಟಿಕೊಂಡಿದ್ದಾನೆ. ಕಮಲೇಶ್ ಚಿಕ್ಕವನಿರುವಾಗ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್ ಅವನ ಬದುಕನ್ನೇ ಬದಲಾಯಿಸಿತು. ಚುಚ್ಚುಮದ್ದು ಕೊಟ್ಟ ದಿನದಿಂದ ಬಿದ್ದು ಹೋದ ಅವನ ಕಾಲುಗಳು ಮತ್ತೆಂದೂ ಮೇಲೇಳಲೇ ಇಲ್ಲ. ಅವನು ತಂದೆ ತಾಯಿ ಮಗನ ಕಾಲಿಗಾಗಿ ಇಡೀ ದೇಶದ ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ ಕಾಲು ಬರಲಿಲ್ಲ. ಕಾಮರ್ಸ್ನಲ್ಲಿ ಡಿಗ್ರಿ ಕಂಪ್ಲೀಟ್ ಮಾಡಿರುವ ಕಮಲೇಶ್, ಕಾಲಿನ ಮೇಲಿನ ಆಸೆ ಬಿಟ್ಟು ಬಹುದೊಡ್ಡ ಡಾನ್ಸರ್ ಆಗುವ ಕನಸಿನ ಜೊತೆ ಕಾಲ ಕಳೆಯುತ್ತಿದ್ದಾನೆ.

ಅಂಧರ ಬಾಳಿನ ಬೆಳಕು



ಮುಂಬೈ ಮಹಾನಗರದ ಬಾಂದ್ರಾ ರೈಲು ನಿಲ್ದಾಣ ಪ್ರತಿ ಬೋಗಿಗಳಿಗೂ ರಾಜೀಂದರ್ ಸಿಂಗ್ ಗೊತ್ತು. ಮುಂಜಾನೆ ಒಂಬತ್ತು ಗಂಟೆಯಲ್ಲಿ ಅಲ್ಲೊಂದು ಮಿಂಚಿನ ಸಂಚಾರ. ಕಣ್ಣಿಗೆ ಕಪ್ಪನೆಯ ಕನ್ನಡಕ. ಕೈಯ್ಯಲ್ಲೊಂದು ವಾಕಿಂಗ್ ಸ್ಟಿಕ್. ಸದಾ ನಗುಮುಖದ ರಾಜೀಂದರ್ಗೆ ಒಂದೇ ಒಂದು ಸ್ಪರ್ಷ ಸಾಕು, ಅವರು ಯಾರೆಂದು ಹೇಳಲಿಕ್ಕೆ.
ಅವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ಎರಡು ಕಿವಿಗಳು ಕೇಳಿಸುವುದಿಲ್ಲ. ಅವರನ್ನು ಕಂಡವರು ಅವರನ್ನು ಸ್ಪರ್ಷಿಸಿದರೆ ಸಾಕು.....ಅರೇ ಭೈ ಕೈಸೇ ಹೋ......ಎಂದು ನಗುತ್ತಾ ಮಾತನಾಡಿಸುತ್ತಾರೆ. ನಮ್ಮಾಳಗಿರುವ ಕೋಟಿ ಕೋಟಿ ಅಂಧರ ನಡುವೆ ಅವರೂ ಒಬ್ಬ. ಆದರೆ ಅವರು ಕೋಟಿಗೊಬ್ಬ. ಜಗತ್ತಿನಾದ್ಯಂತ ಇರುವ ಅಂಧರ ಬಾಳಿನ ಬೆಳಕು ಅವರು. ಅಂಧರಿಗೆ ಬೆಳಕಾಗಿರುವ ಬ್ರೈಲ್ ಲಿಪಿಗೆ ಹೊಸ ಭಾಷ್ಯ ಬರೆದವರೇ ರಾಜೀಂದರ್ ಸಿಂಗ್.
58 ವರ್ಷ ವಯಸ್ಸು. ಮುಂಬೈನ ‘ಅಸೋಸಿಯೇಷನ್ ಆಪ್ ಬ್ಲೈಂಡ್’ (ಎನ್ಎಬಿ) ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಇವರು ಈಗ ಅದೇ ಸಂಸ್ಥೆಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಬ್ರೈಲ್ ಲಿಪಿಯ ಬಗ್ಗೆ ಅವರ ಸಂಶೋಧನೆ ಪ್ರತಿನಿತ್ಯ ಸಾಗುತ್ತಿದೆ. ಬ್ರೈಲ್ ಲಿಪಿ ವಿದೇಶಿ ಸಂಶೋಧನೆಯಾದರೂ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವರು ರಾಜೀಂದರ್ ಸಿಂಗ್. ಬ್ರೈಲ್ ಲಿಪಿಯ ಬಗ್ಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಅಲ್ಲಿ ರಾಜೀಂದರ್ ಸಿಂಗ್ ಇರುತ್ತಾರೆ. ಬ್ರೈಲ್ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಟುವರ್ಡ್ಸ್ ಲೈಟ್‘ ಬ್ರೈಲ್ ಮ್ಯಾಗಜಿನ್ಗೆ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ‘ಮಟಿಲ್ಡಾ’ ಎನ್ನುವ ಅಂತಾರಾಷ್ಟ್ರೀಯ ಮ್ಯಾಗಜಿನ್ಗೂ ರಾಜಿಂದರ್ ಸಂಪಾದಕರು. ರಾಜೀಂದರ್ ಸಾಧನೆಗೆ ಹಲವು ಗೌರವ ಮನ್ನಣೆಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎರಡು ಡಾಕ್ಟರೇಟ್ಗಳು. ಅವರ ಮುಡಿಯಲ್ಲಿವೆ. ‘ಅಂದರ ಡಾಕ್ಟರ್’ ಸೇರಿದಂತೆ ನೂರಾರು ಬಿರುದುಗಳು ಅವರ ಹೆಸರಿನಲ್ಲಿವೆ. ರಾಜೀಂದರ್ ಅವರ ಪ್ರಮುಖ ಸಾಧನೆಯೆಂದರೆ ಪ್ರತೀವರ್ಷ ಮುಂಬೈನಲ್ಲಿ ಏರ್ಪಡಿಸುವ ‘ಹಾರ್ಮೊನಿ’ ಅಂಧರ ಮ್ಯಾರಥಾನ್. ಈ ಭಾವೈಕ್ಯ ಓಟದಲ್ಲಿ ಹಲವು ದೇಶಗಳ ಅಂಧ ಮ್ಯಾರಥಾನ್ ಪಟುಗಳು ಪಾಲ್ಗೊಳ್ಳುತ್ತಾರೆ.
ರಾಜಿಂದರ್ ಹುಟ್ಟಿದ್ದು ಪಾಕಿಸ್ಥಾನದ ಪೆಷಾವರ್. ಭಾರತ- ಪಾಕಿಸ್ಥಾನ ನಡುವೆ ಇಬ್ಬಾಗವಾದಾಗ ರಾಜೀಂದರ್ ಕುಟುಂಬ ಭಾರತ ಸೇರಿಕೊಂಡಿತು. ಪಾಕಿಸ್ಥಾನ ಬಿಟ್ಟ ಮೇಲೆ ಅವರು ಪಾಕ್ನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಅಲ್ಲಿಯೂ ರಾಜಿಂದರ್ ಅವರ ಅಂಧರ ಶಾಲೆಯಿದೆ.


ಡಬಲ್ ಧಮಾಕಾ


ಕಾನ್ಪುರದ ಬೀಚ್ಗೆ ತೆರಳುವುವಾಗ ದಶರಥ್ ಮೀನಿನ ಅಂಗಡಿಯನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಅಲ್ಲೊಂದು ಕೂತೂಹಲ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ದಪ್ಪ ಮೀಸೆಯ ದಶರಥ್ ಈ ಮೀನು ಅಂಗಡಿಯ ಮಾಲೀಕ. ಅವನು ಅಂಗಡಿಯ ಮುಂದೆ ಒಂದು ಶೋ ಮಾಡುತ್ತಾನೆ. ಅದು ‘ಮೀನು ಮತ್ತು ಗಾಜು’ ಪ್ರದರ್ಶನ. ಮೀನು ಕತ್ತರಿಸುತ್ತಾನೆ, ಗಾಜು ಗಾಜು ತಿನ್ನುತ್ತಾನೆ!
ಹೌದು, ಅವನಿಗೆ ತಿಂಡಿ ಊಟಕ್ಕೆಲ್ಲಾ ಗಾಜು ಬೇಕೇ ಬೇಕು. ಬೀಚ್ಗೆ ಬಂದ ಪ್ರವಾಸಿಗರು ಬಾಟಲಿ ಕೊಟ್ಟು ತಮಾಷೆ ನೋಡುತ್ತಾರೆ. ಇವನ ಗಾಜು ತಿನ್ನುವ ಸಾಧನೆ ಕಂಡು ಕೆಲವರು ಹಣವನ್ನೂ ಕೊಡುತ್ತಾರೆ.
ತಮಾಷೆಯೆಂದರೆ, ಅವನಿಗೆ ಮೊದಲು ಗಾಜು ತಿನ್ನುವ ಅಭ್ಯಾಸ ಇರಲಿಲ್ಲ. ಅವನು ಇಪ್ಪತ್ತು ವರ್ಷದ ಹುಡುಗನಾಗಿದ್ದಾಗ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ. ಸಾಯಬೇಕು ಎಂದು ಎರಡು ಬಾಟಲಿಯ ಗಾಜನ್ನು ಪುಡಿ ಮಾಡಿಕೊಂಡು ತಿಂದ. ಆದರೆ ಅವನು ಸಾಯಲಿಲ್ಲ, ಅದೇನು ರುಚಿ ಹತ್ತಿತೋ ಏನೋ ಅಂದಿನಿಂದ ಅವನ ಊಟ ಗಾಜು ಆಗಿಹೋಯಿತು. ಅವನು ಅಲ್ಲಿ ‘ಗ್ಲಾಸ್ಮ್ಯಾನ್’ ಎಂದೇ ಪ್ರಸಿದ್ಧಿ. ಕಾನ್ಪುರ್ ಬೀಚ್ಗೆ ಹೋದರೆ ಗ್ಲಾಸ್ಮ್ಯಾನ್ ಖಂಡಿತಾ ಸಿಗುತ್ತಾನೆ. ಇದೊಂಥರಾ ಡಬಲ್ ಧಮಾಕಾ.

ಶ್ರೀಕಂಠನ್ ಶಿಖರ










ಶ್ರೀಕಂಠನ್ ಶಿಖರ

ಜೀವನೋತ್ಸಾಹಕ್ಕೆ ಇನ್ನೊಂದು ಹೆಸರು ಗಾಯಕ ಆರ್.ಕೆ. ಶ್ರೀಕಂಠನ್. ಹಾಡುತ್ತಾ ಕೋಟಿ ಹೃದಯಗಳ ಮನಸ್ಸಲ್ಲಿ ಮನೆಮಾಡಿರುವ ಅವರು ಗಾನ ಗಾರುಡಿಗ. ಬರೋಬ್ಬರಿ ತೊಂಬತ್ತು ತುಂಬಿ ಶತಮಾನದ ಸಾಮಿಪ್ಯದಲ್ಲಿರುವ ಅವರ ವಯೋಮಾನ ಬಾಳ ಸಂಜೆಯಲ್ಲ. ಮುಂಜಾವಿನ ಮಂಜಿನಷ್ಟೇ ಮೃದು. ಆ ದಿವ್ಯ ಶರೀರದ ಭವ್ಯ ಶಾರೀರ ಇಬ್ಬನಿಯಷ್ಟು ಶುದ್ಧ. ಸ್ಫಟಿಕದಷ್ಟು ನಿಖರ. 14ನೇ ವಯಸ್ಸಿನಲ್ಲಿ ಆರಂಭವಾದ ಶ್ರೀಕಂಠನ್ ಸಂಗೀತ ಯಾತ್ರೆ 91ನೆ ವಯಸ್ಸಿನಲ್ಲೂ ಪ್ರಖರ!ಆಕಾಶವಾಣಿಯ ‘ಗಾನವಿಹಾರ’ ಯಾರಿಗೆ ತಾನೆ ಗೊತ್ತಿಲ್ಲ? ಗಾನವಿಹಾರದ ಮೂಲಕ ಸಂಗೀತ ಕಲಿತವರಿಗೆ ಲೆಕ್ಕವಿಲ್ಲ. 32 ವರ್ಷಗಳ ರೇಡಿಯೋ ಸಂಗೀತ ಪಾಠ ಶ್ರೀಕಂಠನ್ ಆವರ ಅಪಾರ ವಿದ್ವತ್ತಿನ ಪ್ರತೀಕ. ತೊಂಬತ್ತು ತುಂಬಿದ್ದರೂ ಅವರ ಹಾಡು ಎಲ್ಲೂ ಅಲುಗಾಡುವುದಿಲ್ಲ. ಹಾಡಲು ಕೂತರೆ ಮೂರುಗಂಟೆ ಮೇಲೇಳುವುದಿಲ್ಲ. ಭಾವ ಮತ್ತು ಭಕ್ತಿ ಅವರ ಹಾಡಿನ ಶಕ್ತಿ. ಶೃತಿ ರಾಗ ಲಯ ತಾಳಗಳ ಸಾಗರ ಅವರ ಸಂಗೀತ. ಮನೋಧರ್ಮದ ವರ್ಣಮಯ ಚಿತ್ತಾರಕ್ಕೆ ಎಣೆಇಲ್ಲ. ಲೆಕ್ಕಚಾರಗಳನ್ನು ಧಾಟಿ ತಮ್ಮದೇ ಮನೋಧರ್ಮದಲ್ಲಿ ಬಣ್ಣ ತುಂಬುವ ವರ್ಣಶಿಲ್ಪಿ!ತಮ್ಮ ತೊಂಬತ್ತು ವರ್ಷ ವಯಸ್ಸಿನಲ್ಲಿ ಎಂಭತ್ತು ವರ್ಷಗಳನ್ನು ಸಂಗೀತಕ್ಕೇ ಕೊಟ್ಟಿರುವ ಆರ್.ಕೆ. ಶ್ರೀಕಂಠನ್ ನಮ್ಮ ನಾಡಿನ ಹೆಮ್ಮೆ. ಪುರಂದರ ದಾಸರ ಕೃತಿಗಳಿಗೆ ಸ್ವರೂಪ ಕೊಟ್ಟಿರುವ ಅವರ ಕಾರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನನ್ಯ. ಹಾಸನ ಜಿಲ್ಲೆಯ ರುದ್ರಪಟ್ಟಣವೆಂಬ ಪುಟ್ಟ ಹಳ್ಳಿಯಿಂದ ಬಂದವರು ಶ್ರೀಕಂಠನ್. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸದಸ್ಯರಾಗಿ, ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಕೆಸೆಟ್ ಕ್ರಾಂತಿ ಮೂಲಕ ಮನೆ ಮನ ತಲುಪಿದ ಅವರ ಹಾಡು ಎಂದಿಗೂ ಹೊಚ್ಚ ಹೊಸತಾಗಿದೆ.ಅವರ ಮಾತು ಕೂಡ ಅಷ್ಟೆ, ನಿಚ್ಚಳ ನಿಷ್ಕಪಟ. ಸಂಗೀತದಷ್ಟೇ ಇಂಪು. ಮತ್ತೆ ಮತ್ತೆ ಮಾತನಾಡಬೇಕು ಎನ್ನುವಷ್ಟು ಮೊನಚು. ಯಾರಾದರೂ ‘ನೀವು ಬಹಳ ಸಾಧಿಸಿದ್ದೀರಿ’ ಅಂದರೆ ‘ನಾನೊಬ್ಬ ಪುಟ್ಟ ಮಗು ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ’ ಎಂದು ಐಸಾಕ್ ನ್ಯೂಟನನ್ನನ ಮಾತು ಹೇಳುತ್ತಾ ತಮ್ಮ ಮನಸ್ಸಿನಲ್ಲಿರುವ ಮುಗ್ಧತೆ ತೋರುತ್ತಾರೆ. ಸಂಗೀತವನ್ನು ಮಾತೃಭಾಷೆಯನ್ನಾಗಿ ಮಾಡಿಕೊಂಡು ನಿತ್ಯವೂ ಮಾತನಾಡುತ್ತಿರುವ ಅವರಿಗೆ ಪ್ರಶಸ್ತಿ ಮನ್ನಣೆಗಳಿಗೆ ಲೆಕ್ಕವಿಲ್ಲ. ನೂರಾರು ಬಿರುದುಗಳು ಅವರ ಮುಡಿಗೇರಿವೆ. ಜ. 14 ಅವರ ಹುಟ್ಟು ಹಬ್ಬ. ಅಲ್ಲಿಗೆ ಅವರಿಗೆ 91 ವರ್ಷ ತುಂಬುತ್ತಿದೆ. ಅವರು ಶತಮಾನದತ್ತ ನಡೆಯುತ್ತಿದ್ದಾರೆ. ಅವರ ತುಂಬು ಜೀವನ ಎಲ್ಲರ ಬಾಳಿಗೂ ಸ್ಫೂರ್ತಿಯ ಚಿಲುಮೆ.

ಸೇವೆಯೆಂಬ ಸವಿಜೇನು



ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೂರ್ಬಂದ್ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಸದಾ ಜನಜಾತ್ರೆ. ಹಾಗಂತ ಅಲ್ಲಿ ಯಾವ ಪವಾಡವೂ ಇಲ್ಲ, ಆದರೆ ಪವಾಡ ಪುರಷನಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ಹಕೀಮ್ ಅಬ್ದುಲ್ ರೆಹಮಾನ್ ಪಾಷ. ಇವರು ಪ್ರಸಿದ್ಧ ನಾಟಿ ವೈದ್ಯರು. ಯಾವುದೇ ಕಾಯಿಲೆಯಾದರೂ ಸರಿ, ಕೈ ಎತ್ತಿ ಎನೇ ಕೊಟ್ಟರೂ ಖಾಯಿಲೆ ಮಾಯವಾಗುತ್ತದೆ. ಇದೇ ಹಕೀಮರ ಪವಾಡ!ಅವರ ಮನೆ ಮುಂದೆ ನಿತ್ಯ ಜನಸಾಗರವೇ ಸೇರುತ್ತದೆ. ಇನ್ನೊಂದು ಕುತೂಹಲ ಸಂಗತಿಯೆಂದರೆ ಹಕೀಮರು ಎಲ್ಲಿ ಇರುತ್ತಾರೋ ಅಲ್ಲಿ ಆಸ್ಪತ್ರೆಯಾಗಿಬಿಡುತ್ತದೆ. ಅವರು ಮನೆಯಲ್ಲಿರಲಿ, ಹೊಲದಲ್ಲಿರಲಿ, ಪೇಟೆಗೆ ಬರಲಿ, ನಗರಕ್ಕೆ ಬರಲಿ ಅವರ ಮುಂದೆ ದೊಡ್ಡದೊಂದು ಕ್ಯೂ ನಿಂತುಬಿಡುತ್ತದೆ. ಹಕೀಮ್ ಬಹಳ ಒಳ್ಳೆಯ ರೈತರು. ಬೇಸಾಯದ ಜೊತೆಗೆ ನಾಟಿ ವೈದ್ಯಕೀಯ ವೃತ್ತಿಯನ್ನು ಕಳೆದ ಎರಡು ದಶಕಗಳಿಂದ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಜನರ ಮೇಲೆ ಅವರಿಗೆ ಅಪಾರ ಪ್ರೀತಿ. ಅವರು ಎಲ್ಲಿದ್ದರೂ ಜನರ ನೋವುಗಳಿಗೆ ಸ್ಪಂದಿಸುತ್ತಾರೆ.ಅವರ ಮನೆಯಂತೂ ಹಕೀಮರ ಕರ್ಮಭೂಮಿ. ಮನೆಯಲ್ಲಿ ಗಿಡ ಮೂಲಿಕೆಗಳು, ನಾರು ಬೇರುಗಳು ಯಾವಾಗಲೂ ತುಂಬಿರುತ್ತವೆ. ನಮ್ಮ ಇಂಗ್ಲಿಷ್ ಡಾಕ್ಟರ್ಗಳ ಹಾಗೆ ಅವರ ಮನೆಮುಂದೆ ಕೆಲಸದ ಅವಧಿಯ ಟೈಂ ಟೇಬಲ್ ಇಲ್ಲ. ಅವರ ಮನೆ ಸೇವೆಗೆ ಸದಾ ತೆರೆದಿರುತ್ತದೆ. ಅವರ ಮನೆಯ ಮುಂದೆ ಬಂದರೆ ಗಿಡಮೂಲಿಕೆಗಳ ಸುವಾಸನೆ ಮೂಗಿಗೆ ರಾಚುತ್ತದೆ. ಹಲ್ಲು ನೋವು, ಮೂಳೆ ತೊಂದರೆ, ತಲೆ ನೋವು ಮುಂತಾದ ಕಾಯಿಲೆಗಳಿಗೆ ಹಕೀಮರ ಮದ್ದು ರಾಮಬಾಣ.ಹೊರ ರಾಜ್ಯಗಳಿಂದಲೂ ಜನರು ಹಕೀಮರ ಬಳಿಗೆ ಬರುತ್ತಾರೆ. ಹಕೀಮರು ಯಾರಬಳಿಯೂ ಇಷ್ಟು ಹಣ ಕೊಡಬೇಕು ಎಂದು ಬೇಡಿಕೆ ಒಡ್ಡುವುದಿಲ್ಲ. ಅವರು ಕೊಟ್ಟಷ್ಟು ಇವರು ತೆಗೆದುಕೊಂಡಷ್ಟು. ಹಲವು ವೆಳೆ ಗಾಂಧಿ ಲೆಕ್ಕ! ಬರೀ ರೋಗಿಗಳು ಮಾತ್ರ ಹಕೀಮರ ಬಳಿ ಬರುವುದಿಲ್ಲ. ಜೊತೆಗೆ ಮನೆಯಲ್ಲಿ ತೊಂದರೆಯಿದ್ದರೂ ಪರಿಹಾರಕ್ಕಾಗಿ ಹಕೀಮರ ಬಳಿ ಬರುತ್ತಾರೆ. ಅವರ ಬಾಯಿಂದ ಏನೇ ಹೇಳಿದರೂ ಅದು ನಿಜವಾಗುತ್ತದೆ ಎಂದು ಜನರು ನಂಬುತ್ತಾರೆ.59 ವರ್ಷ ವಯಸ್ಸಿನ ಹಕೀಮರು ಯಾರಿಂದಲೂ ಏನನ್ನೂ ಆಪೇಕ್ಷಿಸುವುದಿಲ್ಲ. ಎಲೆಮರೆ ಕಾಯಿಯಂತೆಯೇ ತಮ್ಮ ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇವರ ಸೇವೆಯನ್ನು ಮೈಸೂರಿನ ರಂಗಾಯಣ ಗುರುತಿಸಿದ್ದು, ಈ ಬಾರಿಯ ದಸರಾದಲ್ಲಿ ಸನ್ಮಾನ ಮಾಡಿದೆ.