Friday, July 29, 2011

ಹುತಾತ್ಮ ಯಶವಂತ ಸೋನಾವಣೆ












ಅಕ್ಷಯ ಪಾತ್ರೆ ಶಶಾಂಕನ ಕೊಳಲು!






ಬೆಂಗಳೂರಿನ ಚಾಮರಾಜಪೇಟೆ ಕೋಟೆ ಪ್ರೌಢಶಾಲೆ ಆವರಣದಲ್ಲಿ ರಾಮೋತ್ಸವ ಸಂಗೀತ ಕಚೇರಿ ನಡೆಯುವಾಗ ಆ ಹುಡುಗ ಗೋಲಿ ಆಡುತ್ತಿದ್ದ. ಕೂತಲ್ಲಿ ಕೂರುತ್ತಿರಲಿಲ್ಲ. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಬಸ್ಸು ಬಿಟ್ಟುಕೊಂಡು ಸಭಾಂಗಣದಲ್ಲೆಲ್ಲಾ ಓಡಾಡುತ್ತಿದ್ದ. ಅಲ್ಲೇ ಮಕ್ಕಳ ತಂಡ ಕಟ್ಟಿಕೊಂಡು ಕುಣಿದಾಡುತ್ತಿದ್ದ. ಆ ಮುದ್ದುಗಲ್ಲದ ಪೋರನಿಗೆ ಮುತ್ತು ಕೊಟ್ಟವರಿಗೆ, ಕೆನ್ನೆ ಚಿವುಟಿದವರಿಗೆ, ಕಿವಿ ಹಿಂಡಿದವರಿಗೆ ಲೆಕ್ಕವೇ ಇಲ್ಲ. ಶಾಂತವಾಗಿ ಸಂಗೀತ ಆನಂದಿಸುವವರು ಅವನ ತುಂಟತನಕ್ಕೆ ಗದರಿದ್ದೂ ಉಂಟು. ಆದರೆ ಅವನು ಅಂದುಕೊಂಡಷ್ಟು ತುಂಟ ಹುಡುಗನಾಗಿರಲಿಲ್ಲ. ಅವನು ಸಂಗೀತ ಕೇಳುತ್ತಿಲ್ಲ ಅಂದಕೊಂಡರೆ ಅದು ಶುದ್ಧ ಸುಳ್ಳು. ಯಾರಾದರೂ ‘ಪುಟ್ಟಾ ಇದು ಯಾವ ರಾಗ’ ಎಂದು ಕೇಳಿದರೆ, ‘ನಿಮಗೆ ಅಷ್ಟು ಗೊತ್ತಿಲ್ಲವೆ, ಇದು ಆನಂದ ಭೈರವಿ’ ಎನ್ನುತ್ತಾ ಓಡಿಬಿಡುತ್ತಿದ್ದ! ವೇದಿಕೆಯ ಮುಂದೆ ಆಟವಾಡಿಕೊಂಡಿದ್ದ ಆ ಹುಡುಗ ತನ್ನ ಏಳನೇ ವಯಸ್ಸಿನಲ್ಲಿ ಅದೇ ವೇದಿಕೆಯ ಮೇಲೆ ಬಂದ. ಅಲ್ಲೂ ಅವನ ತುಂಟಾಟ ನಿಲ್ಲಲೇ ಇಲ್ಲ. ಆದರೆ ಅದು ಎಳೆ ವಯಸ್ಸಿನ ತುಂಟಾಟವಲ್ಲ. ಅದು ವಿದ್ವತ್ತಿನ ತುಂಟಾಟ!
ವಿಶ್ವಕಂಡ ಕೊಳಲು ಮಾಂತ್ರಿಕ ಶಶಾಂಕ್ ಸುಬ್ರಮಣ್ಯ ಅಂದು ತುಂಟಾದದ ಹುಡುಗನಾಗಿದ್ದ. ಬೆಂಗಳೂರು ಮಂದಿಯ ಕಣ್ಣುಮುಂದೆಯೇ ಇದ್ದ. ಎಲ್ಲರ ಪ್ರೀತಿಯ ಶಶಾಂಕ್ ಆಗಿದ್ದ. ಆದರೆ ಅವನು ಎತ್ತರಕ್ಕೆ ಏರಿದ ರೀತಿ ಆಶ್ಚರ್ಯ ಹಾಗೂ ಅದ್ಭುತಗಳ ಯಾತ್ರೆ. ಅಂದು ಆರಂಭವಾದ ಅವನ ಬಿದಿರು ಕೋಲಿನ ಗಾಲಿ ಎಂದೂ ನಿಲ್ಲಲಿಲ್ಲ. 11ನೇ ವಯಸ್ಸಿನ ವೇಳೆಗಾಗಲೇ ಅವನು ಜಗದ್ವಿಖ್ಯಾತಿಯಾಗಿ ಹೋಗಿದ್ದ. ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರನ್ನೆಲ್ಲಾ ಶಶಾಂಕ್ ಚಿಕ್ಕವನಿರುವಾಗಲೇ ಜೊತೆಯಾಗಿ ‘ಚೈಲ್ಡ್ ಪ್ರಾಡಜಿ’ ಅನ್ನಿಸಿಕೊಂಡ. ವಿಶ್ವದ ಎಲ್ಲಾ ಶೈಲಿಯ ಕೊಳಲುವಾದಕರ ನಡುವೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜೊತೆಯಾಗಿಸಿದ ಕೀರ್ತಿಯನ್ನು ತನ್ನದಾಗಿಸಿಕೊಂಡ. 1991ರಲ್ಲಿ ಅವನು ಬರೆದ ಇತಿಹಾಸ ಇನ್ನೂ ಹಚ್ಚ ಹಸಿರಾಗಿಯೇ ಉಳಿದಿದೆ. ಚೆನ್ನೈನ ಪ್ರತಿಷ್ಠಿತ ಮ್ಯುಸಿಕ್ ಅಕಾಡೆಮಿಯಲ್ಲಿ ಹಿರಿಯ ಹಾಗೂ ಪ್ರಬುದ್ಧ ಕಲಾವಿದರ ಪ್ರೈಮ್ ಸ್ಲಾಟ್ನಲ್ಲಿ ಕೊಳಲು ನುಡಿಸಿ ಶಶಾಂಕ್ ಮೈಲಿಗಲ್ಲು ನಿರ್ಮಿಸಿದ. ಆ ಕಲ್ಲನ್ನು ಕ್ರಮಿಸುವ ದಾರಿಹೋಕ ಇನ್ನೂ ಹುಟ್ಟಿಲ್ಲ!
ಶಶಾಂಕ್ಗೆ ಈಗ 34 ವರ್ಷ ವಯಸ್ಸು. ಪ್ರಖ್ಯಾತ ಭರತನಾಟ್ಯ ಕಲಾವಿದೆಯ ಪತಿ ಹಾಗೂ ಮಗುವೊಂದರ ತಂದೆ. ಕಿರಿಯ ಕಲಾವಿದನಾಗಿ ಮಿಂಚಿದ ಶಶಾಂಕ್ ಕೊಳಲಿನ ಶಕ್ತಿ ಕುಗ್ಗಿಲ್ಲ. ಶಶಾಂಕ್ ಸಂಗೀತದ ಸೌಂದರ್ಯ ದಿನದಿನಕ್ಕೂ ಮಿನುಗುತ್ತಲೇ ಇದೆ. ಅವರ ಸಂಗೀತ ಕಚೇರಿ ಬಹಳ ವಿಶೇಷವಾಗಿರುತ್ತದೆ. ರಸಿಕರ ಮೂಡ್ ಮೇಲೆ ಅವರ ಕಛೇರಿ ಕಳೆಕಟ್ಟುತ್ತದೆ. ಅವರು ತಮಗೆ ಇಷ್ಟ ಬಂದ ಅಥವಾ ಅಭ್ಯಾಸ ಮಾಡಿದ ಕೃತಿ, ರಾಗ ನುಡಿಸುವುದಿಲ್ಲ. ರಸಿಕರು ಕೇಳಿದ್ದನ್ನು ಉಣಬಡಿಸುತ್ತಾರೆ. ಅವರ ಕೊಳಲು ಅಕ್ಷಯಪಾತ್ರೆ ಇದ್ದಂತೆ!
ಶಶಾಂಕ್ ಸುಬ್ರಮಣ್ಯ ಹಾಸನ ಮೂಲದವರು. ಪ್ರಾಥಮಿಕವಾಗಿ ತಂದೆ ಸುಬ್ರವಣ್ಯ ಅವರಿಂದಲೇ ಸಂಗೀತ ಪಾಠ ಆರಂಭಿಸಿದ ಅವರು ಆರ್. ಕೆ.ಶ್ರೀಕಂಠನ್, ಪಾಲ್ಗಾಟ್ ಕೆ.ವಿ. ನಾರಾಯಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಬೆಳೆದು ತಮ್ಮದೇ ಆದ ಸ್ವಂತ ಶೈಲಿ ರೂಢಿಸಿಕೊಂಡರು. ಶಶಾಂಕ್ ಅವರ ಸೌಂದರ್ಯ ತುಂಬುವ ಆಲಾಪ, ಶುದ್ಧ ಕಲ್ಪನಾ ಸ್ವರಗಳು, ವರ್ಣಮಯ ರಾಗ ತಾನ ಪಲ್ಲವಿ ಕೇಳುಗರನ್ನು ಆನಂದದ ಕಡಲಲ್ಲಿ ತೇಲಿಸುತ್ತವೆ.
2009ರಲ್ಲಿ ಅವರು ವಿಶ್ವಶ್ರೇಷ್ಠ ಗ್ರಾಮ್ಮಿ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಬಿಬಿಸಿ ಚಾನೆಲ್ ಶಶಾಂಕ್ ಮೇಲೆ ‘ಡೆಸ್ಟಿನೇಷನ್ ಮ್ಯುಸಿಕ್’ ಡಾಕ್ಯುಮೆಂಟರಿ ನಿರ್ಮಿಸಿರುವುದು ಅವರ ವಿದ್ವತ್ತಿನ ಪ್ರತೀಕ!



ಹುತಾತ್ಮ ಯಶವಂತ ಸೋನಾವಣೆ

ಅವ್ಯವಸ್ಥೆಯ ವಿರುದ್ಧ ತೊಡೆ ತಟ್ಟಿ ನಿಂತು ಜೀವತೆತ್ತ ಮಹಾರಾಷ್ಟ್ರದ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ ಸೋನಾವಣೆ ಅವರಿಗೆ ಸರ್ಕಾರಿಕೆಲಸ ವರಪ್ರಸಾದವಾಗಿತ್ತು. ಕರ್ತವ್ಯಕ್ಕಾಗಿ ಅವರ ಹೃದಯ ಸದಾ ತುಡಿಯುತ್ತಿತ್ತು. ಮನೊಳಗಿದ್ದ ಧೈರ್ಯ ಯಾವುದಕ್ಕೂ ಹಿಂಜರಿಯುತ್ತಿರಲಿಲ್ಲ. ಅನ್ನಿಸಿದ್ದನ್ನು ಹಿಂದೆ ಮುಂದೆ ನೋಡದೆ ಹೇಳುತ್ತಿದ್ದರು. ಇಟ್ಟ ಹೆಜ್ಜೆಯನ್ನು ಹಿಂದಿಕ್ಕುತ್ತಿರಲಿಲ್ಲ. ಸಾಮಾನ್ಯರ ನೋವಿಗೆ ಸ್ಪಂದಿಸುತ್ತಿದ್ದರು. ಸಾಮಾನ್ಯರ ಸೇವಕರಂತಿದ್ದರು. ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಮಾತನ್ನು ಅಕ್ಷರಶಃ ನಂಬಿದ್ದರು. ಬಹುಶಃ ಇದೇ ಅವರಿಗೆ ಮುಳುವಾಯಿತು!
ಗಣರಾಜ್ಯೋತ್ಸವದ ಹಿಂದಿನ ದಿನ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಯಶವಂತ ಸೋನಾವಣೆ ಬಲಿಯಾದಾಗ ನಾಸಿಕ್ ಹಾಗೂ ಮಾಲೆಗಾವ್ ನಗರಗಳ ದುಖಃದ ಕಟ್ಟೆ ಒಡೆಯಿತು. ಮನೆ ಮಗನನ್ನು ಕಳೆದುಕೊಂಡಂತೆ ಜನರು ರಸ್ತೆಯಲ್ಲೆಲ್ಲಾ ಕಣ್ಣೀರು ಸುರಿಸುತ್ತಿದ್ದರು. ಬೀದಿಬೀದಿಗಳಲ್ಲಿ ಅವರ ಶ್ರದ್ಧಾಂಜಲಿ ಭಾವಚಿತ್ರಗಳು ರಾರಾಜಿಸುತ್ತಿದ್ದವು. ನಾಸಿಕ್ ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳವಾದರೆ, ಮಾಲೆಗಾವ್ ಅವರ ಹುಟ್ಟೂರು. ಮಾಲೆಗಾವ್ ನಗರವನ್ನು ಅವರು ದತ್ತು ತೆಗೆದುಕೊಂಡು ಹುಟ್ಟೂರಿನ ಋಣ ತೀರಿಸಿದ್ದರು. ಅವರಿಂದ ಮಾಲೆಗಾವ್ ಒಂದು ಮಾದರಿ ನಗರವಾಗಿ ರೂಪಗೊಂಡಿತ್ತು.
ಮಹಾರಾಷ್ಟ್ರ ರಾಜ್ಯವನ್ನು ಆಳುತ್ತಿರುವ ಪೆಟ್ರೋಲ್ ಮಾಪಿಯಾವನ್ನು ಅಳಿಸಲು ಯಶವಂತ್ ಟೊಂಕಕಟ್ಟಿ ನಿಂತಿದ್ದರು. ಈ ಉದ್ದೇಶಕ್ಕಾಗಿಯೇ ಅವರನ್ನು ರಾಜ್ಯ ಸರ್ಕಾರಿ ನೌಕರಿಯಿಂದ ಐಎಎಸ್ ದರ್ಜೆ ನೌಕರಿಗೆ ಏರಿಸಲಾಗಿತ್ತು. ಅವರು ಈ ಎತ್ತರಕ್ಕೆ ಏರುವಷ್ಟರಲ್ಲಿ ‘ಕ್ಲೀನ್ಹ್ಯಾಂಡ್ ಅಧಿಕಾರಿ’ ಎಂದು ಹೆಸರುವಾಸಿಯಾಗಿದ್ದರು. ಅವರ ಹಿಂದಿನ 14 ವರ್ಷ ಕೆಲಸಗಳ ಸೇವೆ ಸಾಹಸಮಯ ಅಧ್ಯಾಯ. ಸೂಕ್ಷ್ಮವಾದ ಕೋಮುಗಲಭೆಗಳನ್ನು ಅವರು ಬಹಳ ಸೂಕ್ಷ್ಮವಾಗಿಯೇ ನಿರ್ವಹಿಸಿದ್ದರು. ಕೋಮುಗಳ ನಡುವೆ ಬಾಂಧವ್ಯದ ಬೆಸುಗೆ ಬೆಸೆದಿದ್ದರು. ಮನೆಮನೆಗೂ ಭೇಟಿ ನೀಡಿ ಸಮಸ್ಯೆ ಆಲಿಸುವಂಥ ಗುಣ ಅವರಲ್ಲಿತ್ತು.
48ವರ್ಷ ವಯಸ್ಸಿನ ಯಶವಂತ್ ಉತ್ಕಟ ಪ್ರಾಮಾಣಿಕ ವ್ಯಕ್ತಿ. ಅವರಿಗೆ ಖಾಸಗೀ ಬದುಕು ಇರಲೇ ಇಲ್ಲ. ಸರ್ಕಾರಿ ಕೆಲಸವನ್ನು ಜನಸೇವೆಯ ಕೆಲಸ ಎಂದೇ ನಂಬಿದ್ದರು. ಪತಿಯನ್ನು ಕಳೆದುಕೊಂಡ ಅವರ ಪತ್ನಿಯ ಬರಿದಾಗಿದೆ. ಶಾಲೆಗೆ ಹೋಗುವ ಅವರ ಇಬ್ಬರ ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ.
ಇಂದು ಹುತಾತ್ಮರ ದಿನಾಚರಣೆ. ಯಶವಂತ ಸೊನಾವಣೆ ಅವರ ಪ್ರಾಮಾಣಿಕತೆ ಅವರು ಜೀವ ತೆತ್ತಾಗಲೇ ವಿಶ್ವಕ್ಕೆ ಗೊತ್ತಾಗಿದ್ದು. ವ್ಯವಸ್ಥೆಯ ಕೊಳೆಯನ್ನು ಕೀಳುತ್ತಾ ಜೀವ ತೆತ್ತವರಿಗೆ ಅಮರತ್ವದ ಮರುಜೀವ ಕೊಡುವುದೇ ಜನವರಿ ಮೂವತ್ತರ ವಿಶೇಷ. ಇಗ ಯಶವಂತ ಸೊನಾವಣೆ ಅಮರರು!

ದಿಟ್ಟಮಹಿಳೆ ಗಾಯತ್ರಿ

ಜನವರಿ 26, 20011. ಅದು ನಮ್ಮ ಸಂವಿಧಾನದ 62ನೇ ಹುಟ್ಟುಹಬ್ಬ. ಈ ನೆಲದ ಕಾನೂನು ಸಂವಿಧಾನದ ಆಶಯಗಳನ್ನು ಕಾರ್ಯಕೂಪಕ್ಕೆ ತರುವಲ್ಲಿ , ಈ ಬಾರಿ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಸಾಕ್ಷಿಯಾಗಿದ್ದು ವಿಶೇಷ. ಅದಕ್ಕೆ ಕಾರಣ ಕೇರಳದ ಮಹಿಳಾ ವಾಯುಪಡೆ ಅಧಿಕಾರಿ ಎನ್. ಗಾಯತ್ರಿ ಕಾರಣ. ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯಪಾಲರಿಗೆ ಸಲ್ಲಿಸುವ ಧ್ವಜವಂದನೆ ಕಾರ್ಯಕ್ಕೆ ನೇತೃತ್ವ ವಹಿಸಿದ ದೇಶದ ಮೊದಲ ಮಹಿಳಾ ಅಧಿಕಾರಿಯಾಗಿ ಗಾಯತ್ರಿ ಇತಿಹಾಸ ನಿರ್ಮಿಸಿದರು.
ಅಂದು ನಡೆದ ಕಾರ್ಯಕ್ರಮದಲ್ಲಿ ಇಡೀ ದೇಶದ ಚಿತ್ರ ಗಾಯತ್ರಿ ಅವರತ್ತ ನೆಟ್ಟಿತ್ತು. ಗಣರಾಜ್ಯೋತ್ಸವ ಧ್ವಜವಂದನೆಯಂಣಹ ಕಾರ್ಯವನ್ನುವನ್ನು ಗಾಯತ್ರಿ ಯಾವುದೇ ಅಳುಕಿಲ್ಲದೆ ನಿರ್ವಹಿಸಿದರು. ತಮ್ಮ ಕಾರ್ಯವನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ ಗಾಯತ್ರಿ ದೇಶದ ಮೊದಲಿಗರಾದರು.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುನೆಲೆಯಲ್ಲಿ ವಿಂಗ್ ಕಮಾಂಡರ್ಆಗಿ ಕಾರ್ಯನಿರ್ವಹಿಸುತ್ತಿರುವ ಎನ್. ಗಾಯತ್ರಿ ಎರಡು ಮಕ್ಕಳ ತಾಯಿ. ಅವರ ಪತಿ ಗೋಕುಲ್ ಪೈಲೆಟ್ ಆಗಿದ್ದವರು. 2003ರಲ್ಲಿ ನಡೆದ ವಿಮಾನದುರಂತದಲ್ಲಿ ಗೋಕುಲ್ ಅಸುನೀಗಿದರು. ಅರ್ಧದಲ್ಲೇ ನಿಂತ ಪತಿಯ ವಿಮಾನ ಯಾನವನ್ನು ಗಾಯತ್ರಿ ಮುಂದುವರಿಸದರು. 1996ರಲ್ಲಿ ಭಾರತಿತಯ ವಾಯು ಪಡೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ರಾಜಸ್ಥಾನ, ಪಂಜಾಬ್ ಹಾಗೂ ಕಾರ್ಗಿಲ್ ವಾಯುನೆಲೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಗಾಯತ್ರಿ ನಮ್ಮ ನಾಡಿನ ದಿಟ್ಟ ಮಹಿಳೆ ಎನ್ನಲು ಕಾರ್ಗಿಲ್ ಪ್ರಾಂತ್ಯದಲ್ಲಿ ಅವರು ನಿರ್ವಹಿಸಿದ ಕಾರ್ಯವೇ ಸಾಕ್ಷಿ.


No comments:

Post a Comment