Wednesday, November 18, 2009

ಆನೂರ್‌ ಅನಂತ ಕೃಷ್ಣ ಶರ್ಮಾ



ಮೃದಂಗ ಮಾಧುರ್ಯ ಮತ್ತು ಸ್ನೇಹಜೀವಿ ಶಿವು


ಸಂಗೀತ ಲೋಕದ `ಶಿವು' ಹಲವು ಅದ್ಭುತಗಳ ಸರದಾರ. ಅವರ ಮೃದಂಗ ಮಿಡಿತದ ಕಂಪು ನಾಡಲ್ಲೆಲ್ಲಾ ಹರಡಿದೆ. ನಮ್ಮ ದೇಶದಲ್ಲಿರುವ ಅತ್ಯಂತ ಪ್ರಬುದ್ಧ ತಾಳವಾದ್ಯ ಪ್ರತಿಭೆಗಳಲ್ಲಿ ಶಿವು ಪ್ರಮುಖರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿವು ಅಂದರೆ ಲೆಜೆಂಡ್‌! ಮೃದಂಗ, ತವಿಲ್‌, ತಬಲಾ, ಕಂಜೀರಾ ಮುಂತಾದ ತಾಳವಾದ್ಯಗಳನ್ನು ನುಡಿಸಬಲ್ಲ ಬಹುವಾದ್ಯ ಪಂಡಿತ. ಹಾಡುಗಾರಿಯೂ ಅವರಿಗೆ ಗೊತ್ತಿದೆ. ಪ್ಯೂಜನ್‌ನಲ್ಲೂ ತಮ್ಮ ಕೈ ಚಳಕ ತೋರಿದ್ದಾರೆ. ಶಿವು ಉತ್ತಮ ಸಂಗೀತ ಸಂಯೋಜಕರೂ ಹೌದು. ಶಾಸ್ತ್ರೀಯ ನೆಲೆಯಲ್ಲಿ ಸಿನಿಮಾ, ಸುಗಮ ಸಂಗೀತ, ಜಾನಪದ ಹಾಗೂ ನೃತ್ಯಗಳಿಗೆ ಸಂಗೀತ ಸಂಯೋಜನೆ ಮಾಡಬಲ್ಲ ನಾಡಿನ ಒಂದೇ ಒಂದು ಪ್ರತಿಭೆ ಶಿವು!
ಅವರ ಪೂರಾ ಹೆಸರು ಆನೂರ್‌ ಅನಂತ ಕೃಷ್ಣ ಶರ್ಮಾ. ನಾದ ಲೋಕದಲ್ಲಿ ಶಿವು ಎಂತಲೇ ಚಿರಪರಿಚಿತರು. ಮುಖದ ಮೇಲೆ ತುಂಬಿರುವ ದಾಡಿ ರಾಶಿಯ ನಡುವೆ ತೂರಿ ಬರುವ ಅವರ ನಗು ಎಷ್ಟೋ ಹೊಸ ಪ್ರತಿಭೆಗಳಿಗೆ ಚೈತನ್ಯ ತುಂಬಿದೆ. ಶಿವು ಎಲ್ಲಿರುತ್ತಾರೋ ಅಲ್ಲಿ ನಗು ಇರುತ್ತೆ. ಸದಾ ಹಸನ್ಮುಖಿ. ಸಂಗೀತ ಪ್ರಪಂಚದ ಸ್ನೇಹ ಜೀವಿ!
ಆನೂರ್‌ ಅನಂತ ಕೃಷ್ಣ ಶರ್ಮಾ ಅಪ್ಪಟ ಸಂಗೀತ ಕುಟುಂಬದ ಕುಡಿ. ಖ್ಯಾತ ವೈಲಿನ್‌ ಕಲಾವಿದ ಹಾಗೂ ಬೆಂಗಳೂರು ವಿವಿಯಲ್ಲಿ ಸಂಗೀತ ಶಾಸ್ತ್ರಜ್ಞರಾಗಿದ್ದ ದಿ. ವಿದ್ವಾನ್‌ ಆನೂರ್‌ ಎಸ್‌. ರಾಮಕೃಷ್ಣ ಅವರ ಪುತ್ರ. ಅವರ ಆರಂಭಿಕ ಸಂಗೀತ ಶಿಕ್ಷಣ ತಂದೆಯವರಿಂದಲೇ ಆಯಿತು. ನಂತರ ವಿದ್ವಾನ್‌. ಆರ್‌. ಎ. ರಾಜಗೋಪಾಲ್‌ ಅವರ ಬಳಿ ಮೃದಂಗ ಕಲಿತರು. ತಮ್ಮ 15ನೇ ವಯಸ್ಸಿನಲ್ಲಿ ಕಚೇರಿ ನೀಡಲು ಆರಂಭಿಸಿದ ಶಿವು ರಾಷ್ಟ್ರದ ಎಲ್ಲಾ ಖ್ಯಾತನಾಮ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದ್ದಾರೆ. ಪ್ಯೂಜನ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಲವು ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ `ಕೈಶಿಕಿ'ರೂಪಕ ಯುಕೆಯಲ್ಲಿ ಪ್ರದರ್ಶನಗೊಂಡಿದೆ. ಸಿನಿಮಾದಲ್ಲೂ ಶಿವು ತಮ್ಮ ಪ್ರತಿಭೆ ತೋರಿದ್ದಾರೆ. ಕನ್ನಡದ `ಆಪ್ತಮಿತ್ರ' ಚಿತ್ರದ ರಾ...ರಾ.. ಗೀತೆಯ ಮೃದಂಗ ಮಾಧ್ಯರ್ಯ ಶಿವು ಅವರ ಮ್ಯಾಜಿಕ್‌!
ಶಿವು ಅವರಿಗೆ ಶಾಸ್ತ್ರೀಯ ಸಂಗೀತವೇ ಮೊದಲ ಆಯ್ಕೆ. ಪ್ಯೂಜನ್‌ ಸಂಗೀತದಲ್ಲಿ ಅವರು ಕೃಷಿ ಮಾಡಿದ್ದರೂ ತಮ್ಮ ಶಾಸ್ತ್ರೀಯ ಜ್ಞಾನವನ್ನು ಆಧಾರವಾಗಿಟ್ಟುಕೊಂಡೇ ಮಾಡಿದ್ದಾರೆ. ಶಾಸ್ತ್ರಕ್ಕೆ ಎಲ್ಲೂ ಧಕ್ಕೆಯಾಗದಂತೆ, ನಿಯಮಬದ್ಧರಾಗಿ ಬೇರೆ ಪ್ರಾಕಾರದ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಸಂಗೀತದ ಮೂಲ ಒಂದೇ ಎಂಬುದನ್ನು ಸಾಭೀತು ಮಾಡಿದ್ದಾರೆ.
ಸ್ವಿಟ್ಜೆರ್ಲ್ಯಾಂಡ್‌, ಲಂಡನ್‌, ಜರ್ಮನಿ, ಇಟೆಲಿ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಬೆಸ್ಟ್‌ ಮೃದಂಗಮ್‌ ಆರ್ಟಿಸ್ಟ್‌ ಪ್ರಶಸ್ತಿ, ಲಯ ಕಲಾ ಪ್ರತಿಭಾಮಣಿ ಬಿರುದು ಸೇರಿದಂತೆ ಅವರಿಗೆ ಅಸಂಖ್ಯ ಗೌರವ ಮನ್ನಣೆಗಳು ಲಭಿಸಿವೆ.

Tuesday, November 10, 2009






ಮಾತೆ ಮೀನಾಕ್ಷಿ ಹೊಳ್ಳ



ಆ ವೃದ್ಧಾ­ಶ್ರ­ಮದ ಹಿರಿಯ ಜೀವ­ಗಳ ಜೊತೆ­ಯಲ್ಲಿ `ಮಾ­ಯಾ­ಮೃಗ' ಶೂಟಿಂಗ್‌ ನಡೆ­ಯಿತು. ವಾರದ ನಂತರ ದೂರ­ದ­ರ್ಶ­ನ­ದಲ್ಲಿ ಪ್ರಸಾ­ರ­ವಾ­ಯಿತು. ಧಾರಾ­ವಾಹಿ ನೋಡಿದ ಚೆನ್ನೈ ವೀಕ್ಷ­ಕ­ನೊಬ್ಬ ಮರು­ದಿನ ವೃದ್ಧಾ­ಶ್ರ­ಮ­ವನ್ನು ಹುಡು­ಕಿ­ಕೊಂಡು ಬಂದ. ಅವ­ನಿ­ಗೊಂದು ಅನು­ಮಾನ. ಧಾರಾ­ವಾ­ಹಿ­ಯಲ್ಲಿ ಕಂಡ ಆ ವೃದ್ಧೆ ನನ್ನ ತಾಯಿ ಇರ­ಬ­ಹುದಾ?! ಅವನ ಅನು­ಮಾನ ನಿಜ­ವಾ­ಗಿತ್ತು. ತಾಯಿ­ಯನ್ನು ಕಣ್ತುಂಬ ನೋಡಿದ. ಮಾತ­ನಾ­ಡಿ­ಸ­ಲಿಲ್ಲ. ಅನು­ಮಾ­ನ­ವನ್ನು ಪರಿ­ಹ­ರಿ­ಸಿ­ಕೊಂಡು ಕಾಲಿಗೆ ಬುದ್ದಿ ಹೇಳಿದ. ಆ ತಾಯಿ ಅತ್ತು ಅತ್ತು ಹೈರಾ­ಣಾ­ದಳು. ಕಲವೇ ದಿನ­ಗ­ಳಲ್ಲಿ ಅಲ್ಲೇ ಸತ್ತಳು. ಆಗಲೂ ಆ ಮೂರ್ಖ ಮಗ ತಾಯಿಯ ಕಳೇ­ಬರ ಕಾಣಲು ಬರ­ಲಿಲ್ಲ. ಕಡೆಗೆ ಆಕೆ ಹರಿ­ಶ್ಚಂದ್ರ ಘಾಟ್‌­ನಲ್ಲಿ ದೀರ್ಘ ಮೌನ­ವಾ­ದಳು.
ಇದು ಮಾಯಾ­ಮೃ­ಗದ ಕತೆ­ಯಲ್ಲ. ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷತ್‌ ಪಕ್ಕ­ದ­ಲ್ಲಿ­ರುವ ಶ್ರೀ ರಾಘ­ವೇ­ಶ್ವರ ಗೋ ಆಶ್ರಮ ಟ್ರಸ್ಟ್‌ನ ವೃದ್ಧಾ­ಶ್ರ­ಮ­ದಲ್ಲಿ ನಡೆದ ನಿಜ­ವಾದ ಕತೆ. ಈ ಕತೆ ಹೇಳಿ­ದ­ವರು ವೃದ್ಧಾ­ಶ್ರ­ಮ­ವನ್ನು ಕಳೆದ ಮೂರು ದಶ­ಕ­ಗ­ಳಿಂದ ಕಟ್ಟಿ­ಕೊಂಡು ಬರು­ತ್ತಿ­ರುವ 84 ವರ್ಷ ವಯ­ಸ್ಸಿನ `ಹಿ­ರಿಯ ತಾಯಿ' ಮೀನಾಕ್ಷಿ ಹೊಳ್ಳ. ಅವರ ಬಳಿ ಈ ಥರದ ನೂರಾರು ಕತೆ­ಗ­ಳಿವೆ. ಅದೆಷ್ಟೋ ವೃದ್ಧ­ರನ್ನು ಸಾಕಿ ಸಲಹಿ, ಅಂತ್ಯ ಸಂಸ್ಕಾ­ರ­ವನ್ನೂ ಮಾಡಿ­ದ್ದಾರೆ!. ಮೀನಾಕ್ಷಿ ಹೊಳ್ಳ ನಮ್ಮ ನಡುವೆ ಇರುವ ಅಪ­ರೂ­ಪದ ಹಿರಿಯ ಜೀವ. ಕಲಿ­ತದ್ದು ಕಮ್ಮಿ­ಯಾ­ದರೂ ಅವರ ಬಳಿ ಅದ್ಬುತ ಅನು­ಭ­ವ­ಗ­ಳೇನೂ ಕಮ್ಮಿ ಇಲ್ಲ. ಕಳೆದ ಮೂವತ್ತು ವರ್ಷ­ಗ­ಳಿಂದ ಎಲ್ಲ­ವನ್ನು ಕಳೆ­ದು­ಕೊಂ­ಡ­ವ­ರಿಗೆ ಇವರೇ ಎಲ್ಲಾ ಆಗಿ­ದ್ದಾರೆ. ತಮ್ಮ ಆಶ್ರ­ಮದ ಹಿರಿ­ಯ­ರನ್ನು ಮಕ್ಕ­ಳಂತೆ ಸಲ­ಹಿ­ದ್ದಾರೆ. ಇಲ್ಲಿ­ಯ­ವ­ರೆಗೆ ಆಶ್ರ­ಮ­ದಲ್ಲಿ ಮೃತ­ಪಟ್ಟ ಮೂವ­ತ್ತಕ್ಕೂ ಹೆಚ್ಚು ಹಿರಿ­ಯ­ರಿಗೆ ಅಂತ್ಯ ಸಂಸ್ಕಾರ ಮಾಡಿ­ದ್ದಾರೆ.
`ಅಂ­ತ್ಯ­ಸಂ­ಸ್ಕಾರ ಮಾಡು­ವುದು ಒಂದು ಯೋಗ. ನನ್ನ ಯಾವ ಜನ್ಮದ ಪುಣ್ಯವೋ ಕಾಣೆ. ದಿಕ್ಕಿಲ್ಲ ಅಂದ­ವ­ರಿಗೆ ಅನ್ನ ಕೊಟ್ಟಿ­ದ್ದೇನೆ, ಸೂರು ಕೊಟ್ಟು ಸಾಕಿ­ದ್ದೇನೆ. ನೋವು ಅಂದಾಗ ಮಕ್ಕ­ಳಂತೆ ಆರೈಕೆ ಮಾಡಿ­ದ್ದೇನೆ. ಸತ್ತಾಗ ಕಣ್ಣೀರು ಹಾಕಿ ಎಲ್ಲಾ ಕರ್ಮಾ­ದಿ­ಗ­ಳನ್ನು ಮಾಡಿ­ದ್ದೇನೆ. ಇದು ಪುಣ್ಯ­ವ­ಲ್ಲದೆ ಮತ್ತಿ­ನ್ನೇನು' ಎಂದು ಪ್ರಶ್ನಿ­ಸು­ವಾಗ ಅವರ ಮಾತೃ ಸ್ವರೂಪ ತೆರೆ­ದು­ಕೊಂ­ಡಿತ್ತು.
ಅಪ­ರೂ­ಪದ ಆಲಯ:
ಪ್ರಚಾ­ರ­ದಿಂದ ಬಹಳ ದೂರ­ವಿ­ರುವ ವೃದ್ಧಾ­ಶ್ರಮ ಅದು. ರಾಜ­ಕಾ­ರ­ಣಿ­ಗಳು ಕೊಡುವ ಪುಡಿ­ಗಾ­ಸಿಗೆ ಎಂದಿಗೂ ಕೈ ಚಾಚಿ­ದ­ವ­ರಲ್ಲ. 1979ರಲ್ಲಿ ತುಂಡು­ಭೂ­ಮಿ­ಯಲ್ಲಿ ಗೋ ಆಶ್ರಮ ಟ್ರಸ್ಟ್‌ ಆಗಿ ಆರಂ­ಭ­ವಾ­ಯಿತು. ಟ್ರಸ್ಟ್‌ ವೃದ್ಧಾ­ಶ್ರ­ಮನ್ನೂ ಆರಂ­ಭಿ­ಸಿತು. ಆರಂ­ಭ­ದಲ್ಲಿ ಆ ಜಾಗ ದೊಡ್ಡ ಹೊಂಡ­ದಂ­ತಿತ್ತು. ಅದು ಮುಂದೊಂದು ದಿನ ಹಿರಿಯ ಜೀವ­ಗಳ ಆಶ್ರ­ಯ­ತಾ­ಣ­ವಾ­ಗು­ತ್ತದೆ ಎಂದು ಯಾರೂ ಎಣಿ­ಸಿ­ರ­ಲಿಲ್ಲ. ಆ ಕಾಲ­ದಲ್ಲಿ ಮೀನಾ­ಕ್ಷಿ­ಯ­ವರ ತೋಳಲ್ಲಿ ಇನ್ನೂ ಬಲ­ವಿತ್ತು. ತಮ್ಮ ಪತಿ ಜನಾ­ರ್ಧನ ಹೊಳ್ಳ ಅವರ ಸಂಕ­ಲ್ಪಕ್ಕೆ ಮೀನಾಕ್ಷಿ ನೀರೆ­ರೆ­ದರು. ಇವತ್ತು ಅದು ಹಿರಿಯ ಜೀವ­ಗಳ ಆಲ­ಯ­ವಾ­ಗಿದೆ. ಅವರು ಸರ್ಕಾ­ರದ ಕಡೆ­ಯಿಂದ ಒಂದು ನಯಾ ಪೈಸೆ­ಯನ್ನೂ ನಿರೀಕ್ಷೆ ಮಾಡಿ­ದ­ವ­ರಲ್ಲ. ಮುಂದೆಯೂ ಮಾಡು­ವ­ವ­ರಲ್ಲ. ಆಶ್ರ­ಮಕ್ಕೆ ಹಿರಿ­ಯರ ಬಗ್ಗೆ ಕಾಳ­ಜಿ­ಯುಳ್ಳ ದಾನಿ­ಗಳೇ ಧಣಿ­ಗಳು.
ಇವರು ಕಟು­ಕರು:
ಹೆತ್ತ­ವ­ರಿಗೆ ಒಂದು ಹೊತ್ತಿನ ಅನ್ನ ಹಾಕಲು ಆಗ­ವ­ರಿಗೆ ಮೀನಾಕ್ಷಿ ಹೊಳ್ಳ ಕಟು­ಕರು ಎಂದು ಕರೆ­ಯು­ತ್ತಾರೆ. ಹೆತ್ತ­ವ­ರನ್ನು ಮಕ್ಕಳು ತಿರ­ಸ್ಕ­ರಿ­ಸಿ­ದಾಗ ಸಮಾಜ ತಿರ­ಸ್ಕ­ರಿ­ಸ­ಕೂ­ಡದು. ಹಿರಿ­ಯರ ನೋವು­ಗ­ಳಿಗೆ ಸ್ಪಂದಿ­ಸ­ಬೇಕು. ಈ ಕೆಲಸ ಮಾಡಲು ಮಕ್ಕಳೇ ಆಗ­ಬೇ­ಕೆಂ­ದಿಲ್ಲ. ಮನು­ಷ್ಯತ್ವ ಇರುವ ಯಾರು ಬೇಕಾ­ದರೂ ಮಾಡ­ಬ­ಹುದು ಎಂಬುದು ಅವರ ಮನ­ದಾ­ಳದ ಮಾತು.

ಆಶ್ರ­ಮಕ್ಕೆ ರಜತ ಮಹೋ­ತ್ಸವ:
2004ರಲ್ಲಿ ಆಶ್ರ­ಮಕ್ಕೆ 25 ತುಂಬಿತು. ಬಹುಶಃ ಆಗಲೇ ಈ ಆಶ್ರ­ಮದ ಸೇವೆ ಎಲ್ಲ­ರಿಗೂ ತಿಳಿ­ದದ್ದು. ಅಲ್ಲಿ­ಯ­ವ­ರೆಗೆ ಮರೆ­ಯಲ್ಲೇ ಇತ್ತು. ರಜತ ಸಂಭ್ರ­ದ­ಲ್ಲಿದ್ದ ಆಶ್ರ­ಮ­ವನ್ನು ಅಂದಿನ ರಾಜ್ಯ­ಪಾ­ಲ­ರಾದ ಟಿ.ಎನ್‌. ಚತು­ರ್ವೇದಿ, ಉಪ ಮುಖ್ಯ­ಮಂ­ತ್ರಿ­ಗ­ಳಾ­ಗಿದ್ದ ಸಿದ್ದ­ರಾ­ಮಯ್ಯ, ಗಣ್ಯ­ರಾದ ವಿರೇಂದ್ರ ಹೆಗ್ಗಡೆ, ಪತ್ರ­ಕರ್ತ ರವಿ­ಬೆ­ಳ­ಗೆರೆ, ವಿಶ್ವೇ­ಶ್ವರ ಭಟ್‌ ಮುಂತಾ­ದ­ವರು ಕೊಂಡಾ­ಡಿ­ದ್ದಾರೆ.
ಮನೆಯ ವಾತಾ­ವ­ರಣ:
ಮನೆಯ ವಾತಾ­ವ­ರಣ ಈ ಆಶ್ರ­ಮ­ದ­ಲ್ಲಿದೆ. 60 ವರ್ಷ ವಯ­ಸ್ಸಿಗೂ ಮೇಲ್ಪಟ್ಟ ವೃದ್ಧರು ಇಲ್ಲಿ ಆಶ್ರಯ ಪಡೆ­ಯ­ಬ­ಹುದು. ಜಾತಿ, ಭಾಷೆ­ಗಳ ಪ್ರಶ್ನೆಯೇ ಇಲ್ಲ. ಅವಿ­ವಾ­ಹಿತ ವೃದ್ಧ­ರಿಗೆ ಹೆಚ್ಚು ಆದ್ಯತೆ ಇದೆ. ಡೊನೇ­ಷನ್‌, ಡಿಫಾ­ಜಿಟ್‌ ಯಾವುದೂ ಇಲ್ಲ. ಇಷ್ಟ­ಪ­ಟ್ಟರೆ ವೃದ್ಧರು ಹಣ ಸಹಾಯ ಮಾಡ­ಬ­ಹುದು ಆದರೆ ಕಡ್ಡಾ­ಯ­ವಿಲ್ಲ. ಆಶ್ರ­ಮ­ದಲ್ಲಿ ಎಲ್ಲಾ ವ್ಯವ­ಸ್ಥೆ­ಗ­ಳಿವೆ. ಮುಖ್ಯ­ವಾಗಿ ಆಶ್ರಮ ಬಹಳ ಶುಚಿ­ಯಾ­ಗಿದೆ.
ಹಿರಿ­ಯರ ಆರೋ­ಗ್ಯಕ್ಕೆ ಇಲ್ಲಿ ಜಾಸ್ತಿ ಒತ್ತು ಕೊಟ್ಟಿ­ದ್ದಾರೆ. ಮಹ­ವೀರ್‌ ಜೈನ್‌ ಆಸ್ಪತ್ರೆ ವೈದ್ಯ­ಕೀಯ ಸೌಲಭ್ಯ ನೀಡು­ತ್ತದೆ. ಶುಶೃಕಿ ಸಿಸ್ಟರ್‌ ಶಾಲಿನಿ ಅವರು ಪ್ರತಿ­ದಿನ ಆರೋಗ್ಯ ತಪಾ­ಸಣೆ ನಡೆ­ಸು­ತ್ತಾರೆ. ಈ ಎಲ್ಲಾ ಉಸ್ತು­ವಾ­ರಿ­ಯನ್ನು ಮೀನಾಕ್ಷಿ ಹೊಳ್ಳ ಅವರೇ ನೋಡಿ­ಕೊ­ಳ್ಳು­ತ್ತಾರೆ. ಮಗ ಕೆ.ಜೆ. ಬಾಲ­ಕೃಷ್ಣ ಹೊಳ್ಳ ಅವರು ಅಮ್ಮ­ನಿಗೆ ಸಹಾಯ ಮಾಡು­ತ್ತಾರೆ.
ವಿದ್ಯಾ ಪ್ರತಿ­ಷ್ಠಾನ:



ವಿದ್ಯಾ­ಸೇ­ವೆಯ ಉದ್ದೇ­ಶ­ದಿಂ­ದಲೇ `ಮೀ­ನಾ­ಕ್ಷಿ­ಹೊಳ್ಳ ವಿದ್ಯಾ ಪ್ರತಿ­ಷ್ಠಾನ'ವನ್ನು ತೆರೆ­ಯ­ಲಾ­ಗಿದೆ. ಆರ್ಥಿಕ ಚೈತನ್ಯ ಇಲ್ಲದ ಮಕ್ಕ­ಳಿಗೆ ಈ ವಿದ್ಯಾ ಪ್ರತಿ­ಷ್ಠಾ­ನದ ಮೂಲಕ ವಿದ್ಯಾ­ದಾನ ಮಾಡ­ಲಾ­ಗು­ತ್ತದೆ. ಆಶ್ರ­ಮದ ಹಿರಿ­ಯರು ಹಾಗೂ ಶಾಲೆಯ ಮಕ್ಕ­ಳನ್ನು ಮೀನಾಕ್ಷಿ ಹೊಳ್ಳ ತಮ್ಮ­ವ­ರಂತೆ ಪ್ರೀತಿ­ಸು­ತ್ತಾರೆ.
ಮುಂದೆಯೂ ಆಶ್ರ­ಮದ ಸೇವೆ ನಿರಂ­ತ­ರ­ವಾಗಿ ನಡೆ­ಯ­ಬೇಕು ಅನ್ನು­ವುದೇ ಮೀನಾಕ್ಷಿ ಹೊಳ್ಳರ ಆಸೆ. ಹಿರಿಯ ಜೀವ­ಗಳ ಬಗ್ಗೆ ಕಾಳಜಿ ಉಳ್ಳ ಯಾರು ಬೇಕಾ­ದರೂ ಈ ಆಶ್ರ­ಮಕ್ಕೆ ತಮ್ಮ ಕೈಲಾದ ಸಹಾಯ ಸಲ್ಲಿ­ಸ­ಬ­ಹುದು. ಕಡೇ ಪಕ್ಷ ಹಿರಿ­ಯ­ರಿಗೆ ಒಂದು ಹೊತ್ತಿನ ಊಟ ಹಾಕಿ­ಸುವ ವ್ಯವ­ಸ್ಥೆ­ಯನ್ನೂ ಮಾಡ­ಬ­ಹುದು.

ಸುಕ­ನ್ಯಾ­ರಾ­ಮ್‌­ಗೋ­ಪಾಲ್‌




ಸುಕನ್ಯಾ `ಘಟಂ' ದಿಟಂ!


ಹೃದಯ ನಮ್ಮೊ­ಳಗೇ ಇದ್ದರೂ ಹೃದ­ಯ­ವಂ­ತ­ರಾ­ಗಲು ನಾವು ಸೋತು ಹೋಗು­ತ್ತೇವೆ. ಹೃದ­ಯ­ಸಾ­ಮೀ­ಪ್ಯಕ್ಕೆ ಎಷ್ಟೇ ಯತ್ನಿ­ಸಿ­ದರೂ ಅದು ನಮ್ಮಿಂದ ಒಂದು ಅಂತರ ಕಾಯ್ದು­ಕೊ­ಳ್ಳು­ತ್ತದೆ. ಹೃದ­ಯಕ್ಕೆ ಸಮೀ­ಪ­ವಾ­ಗುವ ಭರ­ದಲ್ಲಿ ನಾವು ಏನೇ­ನನ್ನೋ ಸೃಷ್ಟಿ­ಸಿ­ದ್ದೇವೆ. ಬಹುಶಃ ಸಂಗೀತ ವಾದ್ಯ­ಗಳು......! ಹೌದು. ಹೃದಯ ಬಡಿ­ತಕ್ಕೂ ವಾದ್ಯದ ತಾಳಕ್ಕೂ ಎಲ್ಲೋ ಒಂದು ಹೋಲಿಕೆ ಇದೆ. ಪಂಚ­ಭೂ­ತ­ಗ­ಳಿಂದ(ಭೂಮಿ, ಜಲ, ಗಾಳಿ, ಅಗ್ನಿ, ಆಕಾಶ) ರಚ­ನೆ­ಗೊಂಡ ತಾಳ ವಾದ್ಯ ಘಟಂ. ಇದು ಹೃದ­ಯಕ್ಕೆ ಬಹಳ ಸಮೀಪ. ಘಟಂನ ಡೊಳ್ಳು ಹೊಟ್ಟೆ­ಯೊ­ಳ­ಗಿಂದ ಬರುವ ತಣ ತಣ ತಣ... ಶಬ್ದಕ್ಕೆ ಹೃದಯ ಕರ­ಗಿ­ಸುವ ಶಕ್ತಿ ಇದೆ. ಈ ವಾದ್ಯ ಹೃದ­ಯ­ದಷ್ಟೇ ಸೂಕ್ಷ್ಮ. ಅದೇ ರೀತಿ ತನ್ನೆಲ್ಲಾ ಹತ್ತು ಬೆರ­ಳು­ಗಳ ಬಳಸಿ ನುಡಿ­ಸುವ ಕಲಾ­ವಿದ ಕೂಡ ಅಷ್ಟೇ ಸೂಕ್ಷ್ಮ!
ಖ್ಯಾತ ಘಟಂ ವಾದಕಿ ಸುಕನ್ಯಾ ರಾಮ್‌­ಗೋ­ಪಾಲ್‌ ಅವರು ನುಡಿ­ಸುವ ಆರು ಘಟ­ಗಳ `ಘಟಂ ತಂರಂಗಂ' ವಾದ­ನ­ವ­ನ್ನೊಮ್ಮೆ ಕೇಳಿ­ದರೆ ಹೃದಯ ಕಂಪಿ­ಸು­ತ್ತದೆ. ಬೇರೆ ಬೇರೆ ಶೃತಿಯ ಘಟ­ಗಳ ನಡುವೆ ಕುಳಿತು ನುಡಿ­ಸು­ವಾಗ ಅವರ ಕೈ ಬೆರ­ಳು­ಗಳ ಚೈತನ್ಯ ಬೆರಗು ಸೃಷ್ಟಿ­ಸು­ತ್ತದೆ. ಸುಕ­ನ್ಯಾರ ಆ ಎನ­ರ್ಜಿಗೆ ಪಂಚ­ಭೂ­ತ­ಗಳ ಆ ವಾದ್ಯ ಮಲ್ಲಿ­ಗೆ­ಯಾಗಿ ಮಂದ­ಹಾಸ ಬೀರು­ತ್ತದೆ! ಘಟ­ದಷ್ಟೇ ಸುಕನ್ಯಾ ರಾಮ್‌­ಗೋ­ಪಾಲ್‌ ಕೂಡ ಸೂಕ್ಷ್ಮರು. ಆ ಮಡಿ­ಕೆಯ ಕಣ­ಗ­ಳನ್ನು ಪರಿ­ಪ­ಕ್ವ­ವಾಗಿ ಅರಿ­ತ­ವರು.
ಮಹಿ­ಳೆ­ಯ­ರಲ್ಲಿ ಘಟ ನುಡಿ­ಸು­ವ­ವರು ಬೆರ­ಳೆ­ಣಿ­ಕೆ­ಯಷ್ಟು ಮಂದಿ ಮಾತ್ರ. ಅವರು ಕಲಿ­ಯುವ ಕಾಲಕ್ಕೆ ಇರಲೇ ಇಲ್ಲ. ದೇಶದ ಪ್ರಥಮ ಘಟ ವಿದುಷಿ ಎಂಬ ಬಿರುದು ಕೂಡ ಸುಕ­ನ್ಯಾ­ರಿಗೇ ಸಲ್ಲು­ತ್ತದೆ. ಇವತ್ತು ಬಹಳ ಮಂದಿ ಯುವ­ತಿ­ಯರು ಮೃದಂಗ, ಘಟಂ ನುಡಿ­ಸು­ತ್ತಾರೆ ಅಂದರೆ ಅದ­ಕ್ಕೆಲ್ಲಾ ಪ್ರೇರಣೆ ಸುಕನ್ಯಾ ಅವರೇ. ಸುಕನ್ಯಾ ಇಡೀ ರಾಷ್ಟ್ರದ ಖ್ಯಾತ ನಾಮ ಕಲಾ­ವಿ­ದರ ಜೊತೆ­ಯಲ್ಲಿ ಪಕ್ಕ­ವಾ­ದ್ಯ­ವಾಗಿ ಘಟ ನುಡಿ­ಸಿ­ದ್ದಾರೆ. ಹಲವು ದೇಶ­ಗ­ಳಿಗೆ ಹೋಗಿ ಬಂದಿ­ದ್ದಾರೆ. ಕಳೆದ ಮೂರು ದಶ­ಕ­ಗ­ಳಿಂದ ಘಟ­ಕ್ಕಾಗಿ ತಮ್ಮನ್ನು ಕೊಟ್ಟು­ಕೊಂ­ಡಿ­ದ್ದಾರೆ. ಒಬ್ಬ ಮಹಿ­ಳೆ­ಯಾಗಿ ಪುರು­ಷರು ಮಾತ್ರ ನುಡಿ­ಸು­ತ್ತಿದ್ದ ಘಟ ನುಡಿ­ಸುವ ಧೈರ್ಯ­ಮಾಡಿ ಯಶ­ಸ್ವಿ­ಯಾಗಿ ಅಂತಾ­ರಾ­ಷ್ಟ್ರೀಯ ಮಟ್ಟ­ದಲ್ಲಿ ಮಾನ್ಯತೆ ಪಡೆ­ದಿ­ದ್ದಾರೆ. ಆಕಾ­ಶ­ವಾ­ಣಿ­ಯಲ್ಲಿ `ಎ' ಗ್ರೇಡ್‌ ಕಲಾ­ವಿ­ದೆ­ಯಾದ ಅವರು ಅಪ­ರೂ­ಪದ ಕಲಾ­ವಿದೆ.
ಸುಕನ್ಯಾ ರಾಮ್‌­ಗೋ­ಪಾಲ್‌ ಅವರ ಮೂಲ ಚೆನ್ನೈ­ನಿಂದ ಆರಂ­ಭ­ವಾ­ಗು­ತ್ತದೆ. ಅವರು `ತ­ಮಿಳು ತಾತ' ಎಂದೇ ಖ್ಯಾತ­ರಾ­ಗಿ­ರುವ ಮಹಾ­ಮ­ಹೋ­ಪಾ­ಧ್ಯಾಯ ಡಾ. ಯು.ವಿ. ಸ್ವಾಮಿ­ನಾಥ ಐಯ್ಯರ್‌ ಅವರ ಮೊಮ್ಮ­ಗಳು. ಸುಕ­ನ್ಯಾ­ರಿಗೆ ಸಂಸ್ಕಾ­ರವೇ ಮೂಲ ಆಸ್ತಿ. ತಂದೆ ಕೆ. ಸುಬ್ರ­ಮಣ್ಯ ತಾಯಿ ರಂಗ­ನಾ­ಯಕಿ. ಅವರೂ ಸಂಗೀತ ತಿಳಿ­ದ­ವರು.
ಆರಂ­ಭ­ದಲ್ಲಿ ಅವರು ಹಾಡು­ಗಾ­ರಿಕೆ ಅಭ್ಯಾಸ ಮಾಡಿ­ದರು. ನಂತರ ಟಿ.ಎಚ್‌. ಗುರು­ಮೂರ್ತಿ ಅವರ ಬಳಿ ವೈಲಿನ್‌ ಕಲಿ­ತರು. ಆನಂ­ತರ ತಮ್ಮಿ­ಷ್ಟದ ತಾಳ­ವಾದ್ಯ ಘಟಂ ಕಡೆ ಹೊರ­ಳಿ­ದರು. ಶ್ರೀ ಜೈ ಗಣೇಶ ತಾಳ­ವಾದ್ಯ ಸಂಗೀತ ಶಾಲೆಯ ಸ್ಥಾಪಕ ಟಿ.ಆರ್‌. ಹರಿ­ಹರ ಶರ್ಮ ಅವರ ಪ್ರಥಮ ಗುರು­ಗಳು. ಆ ಮೇಲೆ ಭಾರ­ತೀಯ ಸಂಗೀ­ತದ ದಂತ­ಕತೆ `ವಿಕ್ಕು' ವಿನಾ­ಯಕ ರಾಮ್‌ ಅವರ ಗುರು­ಗ­ಳಾ­ದರು. ಸಕ­ನ್ಯಾರ ಪ್ರತಿ­ಭೆ­ಯನ್ನು ಹೊರ ತೆಗೆ­ಯು­ವಲ್ಲಿ ವಿಕ್ಕು ಯಶ­ಸ್ವಿ­ಯಾ­ದರು. ಸುಕನ್ಯಾ ಎಂಬ `ಮುತ್ತು' ಸೃಷ್ಟಿ­ಸಿ­ದರು.
ಸುಕನ್ಯಾ 1983ರಲ್ಲಿ ಸಂಗೀತ ರಸಿಕ ರಾಮ್‌­ಗೋ­ಪಾಲ್‌ ಅವ­ರನ್ನು ಕೈ ಹಿಡಿದು ಬೆಂಗ­ಳೂರು ಸೇರಿ­ದರು. ರಾಮ್‌­ಗೋ­ಪಾಲ್‌ ಅವರು ಸುಕ­ನ್ಯಾ­ರಿ­ಗಾಗಿ ಹಲವು ತ್ಯಾಗ ಮಾಡಿ­ದರು. ಪತಿ ನೀಡಿದ ಪ್ರೋತ್ಸಾಹ ಸುಕನ್ಯಾ ಹಲವು ಅದ್ಭು­ತ­ಗ­ಳನ್ನು ನಿರ್ಮಿ­ಸಲು ಸಾಕ್ಷಿ­ಯಾ­ಯಿತು.

ಸ್ತ್ರೀ ತಾಲ್‌ ತರಂಗ್‌:
ಸುಕ­ನ್ಯಾರ ಕನ­ಸಿನ ಕೂಸಾದ `ಘಟಂ ತರಂಗಂ' ನಂತರ ಅವರು ಮಾಡಿದ ಇನ್ನೊಂದು ಪ್ರಯೋಗ ಸ್ತ್ರೀ ತಾಲ್‌ ತರಂಗ್‌. ಇಲ್ಲಿ ಘಟಂ ಜೊತೆಗೆ ಬೇರೆ ಮಹಿಳಾ ವಾದ್ಯ­ಗಾ­ರ್ತಿ­ಯರು ತಮ್ಮ ವೈಲಿನ್‌, ವೀಣಾ, ಮೃದಂಗ ವಾದ್ಯ­ಗ­ಳನ್ನು ಜೊತೆ­ಗೂ­ಡಿ­ತ್ತಾರೆ. ಇದು ಒಂದೇ ಪಿಚ್‌(ಆ­ಕ್ಟೇವ್‌)ನ­ಲ್ಲಿ­ರುವ ಕಾರಣ ಸಕನ್ಯಾ ಅವರೇ ಸ್ವತಃ ಸಂಯೋ­ಜಿ­ಸಿದ ಕೃತಿ, ಕಲ್ಪನಾ ಸ್ವರ, ಪಲ್ಲ­ವಿ­ಗ­ಳನ್ನು ನುಡಿ­ಸು­ತ್ತಾರೆ. ಆ ಮೂಲಕ ಒಬ್ಬ ಸಂಗೀತ ಸಂಯೋ­ಜ­ಕಿ­ಯಾ­ಗಿಯೂ ಸುಕನ್ಯಾ ಗುರು­ತಿ­ಸಿ­ಕೊಂ­ಡಿ­ದ್ದಾರೆ. ಸ್ತ್ರೀತಾಲ್‌ ತರಂಗ್‌ ಮೂಲಕ ಪಕ್ಕ­ವಾ­ದ್ಯ­ವಾದ ಘಟಂಗೆ ಮುಖ್ಯ ಸ್ಥಾನ ಕೊಟ್ಟಿದ್ದು ಸುಕ­ನ್ಯಾರ ಬಹಳ ದೊಡ್ಡ ಸಾಧನೆ.

ಘಟಕ್ಕೆ ಕಡೆಯ ಸ್ಥಾನ:
ಕರ್ನಾ­ಟಕ ಸಂಗೀ­ತ­ಗಾ­ರರು ಇವ­ತ್ತಿಗೂ ಘಟಕ್ಕೆ ಮನ್ನಣೆ ಕೊಟ್ಟಿಲ್ಲ. ಅವ­ರಿಗೆ ತಮ್ಮ ಪ್ರತಿಭೆ ತೋರಲು ಅವ­ಕಾ­ಶವೂ ಇಲ್ಲ. ಗಾಯನ, ವೈಲಿನ್‌, ಮೃದಂಗ, ಮೊರ್ಚಿಂಗ್‌, ಕಂಜೀರಾ ಆದ ಮೇಲೆ ಘಟಕ್ಕೆ ಸ್ಥಾನ, ಅದೂ ಗಾಯ­ಕರ ಹಿಂದೆ. ಇದು ಸುಕ­ನ್ಯಾ­ರನ್ನು ಏನಾ­ದರೂ ಹೊಸ­ತೊಂ­ದನ್ನು ಪ್ರಯೋಗ ಮಾಡು­ವಂತೆ ಪ್ರೇರೇ­ಪಿ­ಸಿತು. ಆ ಹಾದಿ­ಯಲ್ಲಿ ಘಟಂ ತರಂಗಂ, ಸ್ತ್ರೀ ತಾಲ್‌ ತರಂಗಂ ಪ್ರಯೋಗ ಮಾಡಿ ಯಶ­ಸ್ವಿ­ಯಾ­ದರು. ಆ ಮೂಲಕ ಘಟಕ್ಕೆ ಒಂದು ಹೊಸ ಸ್ವರೂ­ಪ­ವನ್ನೇ ಸೃಷ್ಟಿ­ಸಿ­ದರು.
ವರ್ಲ್ಡ್‌ ಸ್ಪೇಸ್‌ ರೇಡಿ­ಯೋ­ದಲ್ಲಿ ಸುಕ­ನ್ಯಾರ ತರಂಗ್‌ ಪ್ರಸಾ­ರ­ವಾ­ಗಿವೆ. `ರೈ­ನ್‌ಬೋ' ಆಲ್ಬಮ್‌ ಕೂಡ ಹೊರ­ತಂ­ದಿ­ದ್ದಾರೆ. ಅಸಂ­ಖ್ಯಾತ ಕಚೇರಿ ನಡೆ­ಸಿ­ದ್ದಾರೆ. 2010ರ ಹೊಸ­ವರ್ಷ ಜ.1ರಂದು ಚೆನ್ನೈನ ಪ್ರತಿ­ಷ್ಠಿತ `ಮ­ದ್ರಾಸ್‌ ಮ್ಯೂಸಿಕ್‌ ಅಕಾ­ಡೆ­ಮಿ­ಯಲ್ಲಿ ತಮ್ಮ ಸ್ತ್ರೀ ತಾಲ್‌ ತರಂಗ್‌ ಕಚೇರಿ ನೀಡು­ತ್ತಿ­ದ್ದಾರೆ. ಇದು ಸುಕ­ನ್ಯಾರ ಸಾಧ­ನೆಗೆ ಧಕ್ಕಿದ ಮಹತ್ವ.
ಸುಕ­ನ್ಯಾ­ರಿಗೆ ಅಸಂ­ಖ್ಯಾತ ಪ್ರಶಸ್ತಿ ಬಿರು­ದು­ಗಳು ಅರಸಿ ಬಂದಿವೆ. ಈ ವರ್ಷದ ಗಾಯನ ಸಮಾಜ ಸಮ್ಮೇ­ಳ­ನ­ದಲ್ಲಿ `ವ­ರ್ಷದ ಕಲಾ­ವಿದೆ' ಪ್ರಶ­ಸ್ತಿಗೆ ಪಾತ್ರ­ರಾ­ಗಿ­ದ್ದಾರೆ.
ಬೆಂಗ­ಳೂ­ರಿನ ಯಶ­ವಂ­ತ­ಪು­ರ­ದಲ್ಲಿ ಸುಕ­ನ್ಯಾರ ವಾಸ. ಮಗಳು ರಾಧಾ. ಮಗ ನಾರಾ­ಯಣ್‌ ಪ್ರಭು. ಇಬ್ಬರೂ ಸಾಪ್ಟ್‌­ವೇರ್‌ ಇಂಜಿ­ನಿ­ಯರ್ಸ್‌, ಜೊತೆಗೆ ಸಂಗೀ­ತ­ಗಾ­ರರು. `ಘಟ ನುಡಿ­ಸುವ ಬಗೆ' ಪುಸ್ತಕ ಬರೆ­ಯುವ ಹಾಗೂ ಒಂದು ಸಂಗೀತ ಶಾಲೆ ರಚಿ­ಸುವ ಕನ­ಸಿ­ನೊಂ­ದಿಗೆ ಸುಕ­ನ್ಯಾ­ರಾ­ಮ್‌­ಗೋ­ಪಾಲ್‌ ಅವರ ಘಟ ಹೃದಯ ತಟ್ಟು­ತ್ತಿದೆ

Tuesday, November 3, 2009

ಎನ್‌. ರಾಧಾ­ಕೃಷ್ಣ


ಪರ­ಮಾ­ತ್ಮ­ನಿಗೆ `ರಾ­ಧಾ­ಕೃಷ್ಣ' ಸ್ವರೂಪ


ದೇಗು­ಲದ ಗರ್ಭ­ಗು­ಡಿಯೇ ಅವರ ಪ್ರಯೊಗ ಶಾಲೆ. ಮನ­ಸ್ಸಿ­ನಲ್ಲಿ ಮೂಡಿದ ಕಲ್ಪ­ನೆಯೇ ಫಾರ್ಮುಲ. ಮುತ್ತು, ರತ್ನ, ವಜ್ರ, ವಸ್ತ್ರ, ವಡೆವೆ, ಧೂಪ, ಕರ್ಪೂ­ರ­ಗಳೇ ಸಂಪ­ನ್ಮೂಲ. ಭಗ­ವಂ­ತನೇ ಅವರ ಪ್ರಾಯೋ­ಗಿಕ ವಸ್ತು! ಶಂಕ, ಚಕ್ರ, ಗಧೆ, ತ್ರಿಶೂ­ಲ­ಗಳೇ ಉಪ­ಕ­ರಣ. ಅಭ­ಯಾಸ್ತ, ವರ­ದಾ­ಸ್ತ­ಗಳೇ ಕ್ಷ ಕಿರಣ........ಅ­ವರ ಪ್ರಯೋ­ಗ­ದಿಂದ ಭಕ್ತಿಯ ಸಾಗರ ಹರಿ­ಯು­ತ್ತದೆ. ಭಗ­ವಂ­ತ­ನಿಗೆ ರೂಪ ಕೊಡುವ ಅವರು ಭಕ್ತಿ­ಸಾ­ಗ­ರ­ದಲ್ಲಿ ತೊಯ್ದು ತೇವ­ಗೊ­ಳ್ಳು­ತ್ತಾರೆ!
ಅವರು ಎನ್‌. ರಾಧಾ­ಕೃಷ್ಣ. ದೇವರ ಅಲಂ­ಕಾರ ವಿದ್ವಾಂ­ಸರು. ಚಿತ್ರ­ಕಲಾ ಕಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ. ಹಲವು ದೇವಾ­ಲ­ಯ­ಗ­ಳಲ್ಲಿ ಅಲಂ­ಕಾರ ಮಾಡುವ ಹಾಗೂ ಪರ­ಮಾ­ತ್ಮನ ಮೂರುತಿ ರಚಿ­ಸುವ ಇವರ ಕಲ್ಪ­ನೆ­ಯೊ­ಳಗೆ ಭಗ­ವಂ­ತನ ಸಾಕ್ಷಾ­ತ್ಕಾ­ರ­ವಾ­ಗಿದೆ.
ರಾಧಾ­ಕೃಷ್ಣ ಅವರು ಗಣ­ಪ­ತಿ­ಯನ್ನು ವಿಧ ವಿಧ­ವಾಗಿ ಕಂಡಿ­ದ್ದಾರೆ. ಧಾನ್ಯ­ಗ­ಳನ್ನು ಕೂಡಿ­ಡುವ ಬಳ್ಳ, ಮಡಿಕೆ ಹಾಗೂ ಮನೆ ಬಳ­ಕೆಯ ಮೊರ­ಗ­ಳಲ್ಲಿ ಗಣ­ಪ­ನನ್ನು ಚಿತ್ರಿ­ಸಿ­ದ್ದಾರೆ. ಮೂರು ಯುಗ ಹಳೆ­ಯ­ದಾದ ಮುಳ­ಬಾ­ಗಿಲು ಸಮೀ­ಪದ ಕುರು­ಡು­ಮಲೆ ಗಣಪ ಇವ­ರಿಂದ ಮೇಕಪ್‌ ಮಾಡಿ­ಸಿ­ಕೊಂ­ಡಿ­ದ್ದಾನೆ! ಬೆಂಗ­ಳೂ­ರಿನ ಬಿನ್ನಿ ಮಿಲ್‌ ಸಮೀ­ಪದ ಉದ್ಬ­ವ­ಮೂರ್ತಿ ಸ್ವಯಂಭೋ ನಾಗ­ರಾಜ ಬಾಲ ಸುಬ್ರ­ಮ­ಣ್ಯ­ನಿಗೆ 50 ಕೆಜಿ ಬೆಣ್ಣೆ­ಯಿಂದ ಸರ್ಪದ ಎಡೆ ಸೃಷ್ಟಿ­ಸಿ­ದ್ದಾರೆ. ಮೈಸೂ­ರಿನ ಸಚ್ಚಿ­ದಾ­ನಂದ ಆಶ್ರ­ಮ­ದಲ್ಲಿ ನವ­ರತ್ನ ಖಚಿತ ಶಿವ­ಲಿಂಗ ರೂಪಿ­ಸಿ­ದ್ದಾರೆ. ಆಂಜ­ನೇ­ಯನ ಮೇಲಂತೂ ಅಪಾರ ಪ್ರಯೋಗ ಮಾಡಿ­ದ್ದಾರೆ! ಸ್ವಾತಿ­ಮುತ್ತು ಮತ್ತು ಕಪ್ಪೆ­ಚಿ­ಪ್ಪಿನ ಆಂಜ­ನೇ­ಯರು ಪ್ರಸಿ­ದ್ಧರು.
ಮಹಾ­ಲಕ್ಷ್ಮಿ ಲೇಔ­ಟ್‌ನ ಕನ್ನಿಕಾ ಪರ­ಮೇ­ಶ್ವ­ರಿಗೆ ಕಾಮಾಕ್ಷಿ ಅಲಂ­ಕಾರ ಹಾಗೂ ಗಾಯತ್ರಿ ಅಲಂ­ಕಾರ. ವರ­ಮ­ಹಾ­ಲ­ಕ್ಷ್ಮಿಗೆ ಕಳಶ ಅಲಂ­ಕಾ­ರ­ಗಳ ಐಭೋಗ. ನಂಜನ ಗೂಡಿನ ಶ್ರೀಕಂ­ಠೇ­ಶ್ವರ, ಶಿಡ್ಲ­ಘಟ್ಟ ಶಂಕ­ರ­ಮ­ಠದ ಶಾರ­ದಾಂಬೆ ಹಾಗೂ ಶಂಕ­ರಾ­ಚಾ­ರ್ಯರು, ಶಿಡ್ಲ­ಘ­ಟ್ಟದ ಗಣೇಶ ಸೇರಿ­ದಂತೆ ಕೆ.ಆರ್‌. ನಗರ ಹಾಗೂ ಹುಣ­ಸೂರು ದೇವಾ­ಲ­ಗ­ಳ­ಗ­ಳಲ್ಲೂ ಅಲಂ­ಕಾರ ಮಾಡಿ­ದ್ದಾರೆ.
ವಿಶೇಷ ಹಬ್ಬ ಹರಿ­ದಿ­ನ­ಗ­ಳಲ್ಲಿ ರಾಧಾ­ಕೃಷ್ಣ ದೇವರ ಅಲಂ­ಕಾ­ರ­ದಲ್ಲಿ ಬಿಡು­ವಿ­ಲ್ಲದೆ ಮಗ್ನ. ದೇವಾ­ಲಯ ಅಲಂ­ಕಾ­ರದ ಜೊತೆಗೆ ಮನೆ­ಗ­ಳಲ್ಲಿ ಆಯೋ­ಜಿ­ಸುವ ಪೂಜೆ­ಗ­ಳಲ್ಲೂ ದೇವರ ವಿಗ್ರಹ ಮಾಡಿ ಅಲಂ­ಕಾರ ಮಾಡು­ತ್ತಾರೆ. ದೇವರ ಹೆಸರು ಹೇಳಿ­ದರೆ ಸಾಕು, ಕಲ್ಪ­ನೆ­ಯೊ­ಳಗೆ ಭಗ­ವಂ­ತ­ನಿಗೆ ರೂಪ ಕೊಟ್ಟು ನಂತರ ಕೃತಿ­ಗಿ­ಳಿ­ಸು­ತ್ತಾರೆ. ದೇವರ ಬಗ್ಗೆ ಓದು ಹಾಗೂ ಕೇಳಿದ ಕತೆ­ಗಳು ಸ್ವರೂಪ ಕೊಡಲು ಸಹಾಯ ಮಾಡು­ತ್ತವೆ. ಅಲಂ­ಕಾ­ರಕ್ಕೆ ಅವ­ಶ್ಯ­ವಿ­ರುವ ಎಲ್ಲಾ ವಸ್ತು­ಗ­ಳನ್ನು ತಾವೇ ತಯಾ­ರಿ­ಸಿ­ಕೊ­ಳ್ಳು­ತ್ತಾರೆ. ರೆಡಿ­ಮೇಡ್‌ ವಸ್ತು­ಗ­ಳನ್ನು ಬಳ­ಸ­ದಿ­ರು­ವುದು ವಿಶೇಷ.
ದೀಪಾ­ವಳಿ ಲಕ್ಷ್ಮಿ­ಪೂ­ಜೆ­ಯಲ್ಲಿ ಮಾಡಿದ ಲಕ್ಷ್ಮಿ ವಿಗ್ರಹ ಹಾಗೂ ಅಲಂ­ಕಾ­ರ­ವನ್ನು ಟಿವಿ 9 ವಾಹಿನಿ ವಿಶೇಷ ಕಾರ್ಯ­ಕ್ರ­ಮ­ವಾಗಿ ಪ್ರಸಾರ ಮಾಡಿದೆ. ಕೊಳ­ಲ­ನೂ­ದುತ ನವಿ­ಲು­ಗರಿ ಕೆಳಗೆ ಪವ­ಡಿ­ಸಿ­ರುವ ಶ್ರೀಕ­ಷ್ಣನ ಕೃತಿ­ಯನ್ನು ಶ್ರೀಕೃಷ್ಣ ಜನ್ಮಾ­ಷ್ಟ­ಮಿ­ಯಂದು ಜೀ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅಲ್ಲದೆ ಮನೆ­ಗ­ಳಿಗೂ ವಿಗ್ರಹ ಮತ್ತು ಅಲಂ­ಕಾರ ಮಾಡು­ತ್ತಾರೆ. ಚಿತ್ರ­ನಟಿ ತಾರಾ ಅವರ ಮನೆಗೆ ತೆಂಗಿನ ಗರಿ­ಯಲ್ಲಿ ಸತ್ಯ­ನಾ­ರಾ­ಯಣ ಪೂಜೆಗೆ ದೇಗುಲ ನಿರ್ಮಿ­ಸಿದ್ದು ಅವರ ವಿಶೇ­ಷ­ಗ­ಳ­ಲ್ಲೊಂದು. ಇಷ್ಟರ ಜೊತೆಗೆ ಪೂಜೆಗೆ ಪೌರೋ­ಹಿ­ತ್ಯ­ವನ್ನೂ ಮಾಡ­ಬ­ಲ್ಲರು! ಚಿತ್ರ­ಕ­ಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ: ದೇವರ ಅಲಂ­ಕಾ­ರದ ಜೊತೆಗೆ ರಾಧಾ­ಕೃಷ್ಣ ಅವರು ಚಿತ್ರ­ಕಲಾ ಕಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ. ಬೆಂಗ­ಳೂ­ರಿನ `ಕೆನ್‌ ಸ್ಕೂಲ್‌ ಆಫ್‌ ಆರ್ಟ್ಸ್‌'ನಲ್ಲಿ ಪದವಿ ಗಳಿ­ಸಿ­ರುವ ಅವರು ನೂರಾರು ಕಲಾ­ಕೃತಿ, ಭಿತ್ತಿ­ಚಿತ್ರ ರಚಿ­ಸಿ­ದ್ದಾರೆ. ಪದವಿ ನಂತರ ಜೆ.ಪಿ. ಟೆಕ್ಸ್‌­ಟೈ­ಲ್ಸ್‌­ನಲ್ಲಿ ಕ್ರಿಯೆ­ಟಿವ್‌ ಡಿಸೈ­ನರ್‌ ಆಗಿ ಕೆಲಸ ಮಾಡಿ­ದ್ದಾರೆ. ಖ್ಯಾತ ಬಟ್ಟೆ ರಪ್ತು ಉದ್ಯಮ `ಗೋ­ಕುಲ್‌ ದಾಸ್‌ ಎಕ್ಸ್‌­ಪೋರ್ಟ್ಸ'ನಲ್ಲಿ ವಿನ್ಯಾ­ಸ­ಕಾ­ರ­ರಾಗಿ 9 ವರ್ಷ­ಗಳ ಕಾಲ ಕೆಲಸ ಮಾಡಿ­ದ್ದಾರೆ. ಜೊತೆಗೆ `ಸ್ವಾತಿ ಡಿಸೈನ್‌'ಗೂ ವಿನ್ಯಾಸ ಮಾಡಿ­ದ್ದಾರೆ. ಈಗ ಸ್ವತಂ­ತ್ರ­ವಾಗಿ ಮನೆ­ಯಲ್ಲೇ ದೇವರ ಅಲಂ­ಕಾರ ಹಾಗೂ ಚಿತ್ರ­ಕ­ಲೆ­ಯಲ್ಲಿ ತೊಡ­ಗಿ­ಕೊಂ­ಡಿ­ದ್ದಾರೆ.
ಉದ್ಯಮಿ ದಿನೇಶ್‌ ಹಿಂದುಜಾ ಅವ­ರಿಗೆ ಮಾಡಿ­ಕೊಟ್ಟ `ರಾ­ಧ­ಕೃಷ್ಣ' ಬಿತ್ತಿ­ಚಿತ್ರ, ಕುಟೀರ ರೆಸಾ­ರ್ಟ್‌ಗೆ ಮಾಡಿದ ಕೃತಿ­ಗಳು, ಮೈಸೂ­ರಿನ ದೀಕ್ಷಿತ್‌ ಆಸ್ಪ­ತ್ರೆಗೆ ಮೃತ್ಯುಂ­ಜಯ ಪೋಟ್ರೈಟ್‌, ಗಣ­ಪತಿ ಸಚ್ಚಿ­ದಾ­ನಂದ ಆಶ್ರ­ಮಕ್ಕೆ ಹಲವು ಕಲಾ­ಕೃ­ತಿ­ಗ­ಳನ್ನು ರಚಿ­ಸಿ­ದ್ದಾರೆ.
ಬೆಂಗ­ಳೂ­ರಿನ ತಾತ­ಗು­ಣಿ­ಯ­ಲ್ಲಿ­ರುವ ಸ್ವಾನಂದ ಆಶ್ರ­ಮದ ಕಲಾ ಮಹೋ­ತ್ಸ­ವ­ದಲ್ಲಿ ರಾಧಾ­ಕೃಷ್ಣ ರಚಿ­ಸಿದ ಜಾನ­ಪದ ವೇದಿಕೆ ಮೆಚ್ಚು­ಗೆಗೆ ಪಾತ್ರ­ವಾ­ಗಿದೆ. ಆ ಇಡೀ ಮಹೋ­ತ್ಸ­ವ­ವನ್ನು ಜಾನ­ಪದ ಪರಿ­ಕ­ಲ್ಪ­ನೆ­ಯಲ್ಲಿ ರಚನೆ ಮಾಡಿ­ದ್ದರು. ಹೆಬ್ಬಾ­ಗಿ­ಲಿ­ನಿಂದ ಹಿಡಿದು ಮುಖ್ಯ ವೇದಿ­ಕೆ­ಯ­ವ­ರೆಗೂ ಜಾನ­ಪ­ದವೇ ತುಂಬಿ ಅಪಾರ ಜನರ ಮೆಚ್ಚು­ಗೆಗೆ ಪಾತ್ರ­ವಾ­ಯಿತು. ಅಲ್ಲದೆ ರಾಧಾ­ಕೃ­ಷ್ಣರ ಕೃತಿ­ಗ­ಳನ್ನು ಕ್ಯಾಲೆಂ­ಡ­ರ್‌­ಗ­ಳಿಗೆ, ಪ್ರಶಸ್ತಿ ಮೊಮೆಂ­ಟೋ­ಗ­ಳಿಗೆ ಬಳ­ಸಿ­ಕೊ­ಳ್ಳ­ಲಾ­ಗಿದೆ.
ಜೀನ್ಸ್‌­ಪ್ಯಾಂಟ್‌ ಮೇಲೆ ಶೇಡ್ಸ್‌:
ದೇವರ ಅಲಂ­ಕಾರ ಹಾಗೂ ಚಿತ್ರ­ಕ­ಲೆಯ ಜೊತೆಗೆ ರಾಧಾ­ಕೃಷ್ಣ ಅವರು ವಸ್ತ್ರ­ವಿ­ನ್ಯಾ­ಸ­ಕರೂ ಹೌದು. ಜೀನ್ಸ್‌­ಪ್ಯಾಂ­ಟ್‌­ಗಳ ಮೇಲೆ ಶೇಡ್ಸ್‌ ಮಾಡುವ ವಿನ್ಯಾ­ಸ­ವನ್ನು ಬೆಂಗ­ಳೂ­ರಿ­ನಲ್ಲಿ ಮೊದಲು ಪರಿ­ಚ­ಯಿ­ಸಿ­ದ­ವರೇ ರಾಧಾ­ಕೃಷ್ಣ. ವಿಶಿಷ್ಟ ರಾಸಾ­ಯ­ನಿ­ಕ­ಗ­ಳನ್ನು ಬಳಸಿ ಕೊಟ್ಟ ಶೇಡಿಂಗ್‌ ವಿನ್ಯಾ­ಸ­ವನ್ನು ಯುವ ಸಮು­ದಾಯ ಒಪ್ಪಿ ಅಪ್ಪಿ­ಕೊಂ­ಡಿತು. ಇವತ್ತು ರಸ್ತೆ ರಸ್ತೆ­ಯಲ್ಲಿ ಶೇಡೆಡ್‌ ಜೀನ್ಸ್‌ ಸಿಗು­ತ್ತವೆ! ಅದು ಅವರ ದೊಡ್ಡ ಯಶಸ್ವಿ. ನಂತರ ಖ್ಯಾತ ಕಂಪ­ನಿ­ಗ­ಳಾದ ಲೀ ಜೀನ್ಸ್‌, ರ್ಯಾಂಗ್ಲರ್‌, ರೀಬಾಕ್‌, ಡೀಸೆಲ್‌, ನಿಕಿಯ ವಸ್ತ್ರ­ಗ­ಳಿಗೆ ಡಿಸೈನ್‌ ಮಾಡಿವ ಅವ­ಕಾಶ ದೊರೆ­ಯಿತು.
ಬ್ಯಾನ­ರ್‌­ನಿಂದ ಯಾತ್ರೆ ಆರಂಭ:
ರಾಧಾ­ಕೃಷ್ಣ ರಾಮ­ನ­ಗ­ರ­ದ­ವರು. ತಂದೆ ದಿ. ನಾಗ­ಭೂ­ಷಣ ಶಾಸ್ತ್ರೀ, ಕನ್ನಿಕಾ ಪರ­ಮೇ­ಶ್ವರಿ ದೇವಾ­ಲ­ಯ­ದಲ್ಲಿ ಅರ್ಚ­ಕ­ರಾ­ಗಿ­ದ್ದರು. ತಾಯಿ ಪಾರ್ವ­ತಮ್ಮ. ತಂದೆ ತಾಯಂ­ದಿ­ರಿಗೆ ಸಂಗೀತ ಗೊತ್ತಿತ್ತು. ಮನೆಯ ಮಕ್ಕ­ಳೆಲ್ಲಾ ಸಂಗೀತ ಹಾದಿ ಹಿಡಿ­ದರೆ, ರಾಧಾ­ಕೃಷ್ಣ ಕುಂಚ ಮತ್ತು ಬಣ್ಣದ ಹಿಂದೆ ನಡೆ­ದರು. ರಾಮ­ನ­ಗ­ರದ ........ಸಭಾ ಅವರ ಪ್ರತಿ­ಭೆಗೆ ವೇದಿ­ಕೆ­ಯಾ­ಯಿತು. ಸಭಾ­ದಿಂದ ಏನೇ ಕಾರ್ಯ­ಕ್ರಮ ನಡೆ­ದರೂ ಇವರ ಕುಟುಂ­ಬದ ಪಾಲು ಇರು­ತ್ತಿತ್ತು. ಇವ­ತ್ತಿಗೂ .......ಸಭಾ ಕಾರ್ಯ­ಕ್ರ­ಮ­ಗ­ಳಲ್ಲಿ ರಾಧಾ­ಕೃಷ್ಣ ಕುಟುಂಬ ಸಮೇ­ತ­ರಾಗಿ ಪಾಲ್ಗೊ­ಳ್ಳು­ತ್ತಾರೆ. ರಾಧಾ­ಕೃಷ್ಣ ಕಾರ್ಯ­ಕ್ರ­ಮ­ಗ­ಳಿಗೆ ಬ್ಯಾನರ್‌ ಬರೆ­ಯು­ತ್ತಿ­ದ್ದರು. ಆ ಮೂಲಕ ತಮ್ಮ ಕಲಾ ಯಾತ್ರೆ­ಯನ್ನು ಆರಂ­ಭಿ­ಸಿ­ದರು. ತಂದೆಯೂ ದೇವ­ರಿಗೆ ಅಲಂ­ಕಾರ ಮಾಡು­ತ್ತಿ­ದ್ದರು. ಅಲಂ­ಕಾ­ರ­ದಲ್ಲಿ ತಂದೆಯೇ ಗುರು. ಬೇರೆ ಬೇರೆ ಊರು­ಗ­ಳಿಗೆ ತಂದೆಯ ಜೊತೆ ಅಲಂ­ಕಾ­ರಕ್ಕೆ ತೆರ­ಳು­ತ್ತಿ­ದ್ದರು. ತಮಗೆ ಬೇಕಾದ ಸಣ್ಣ ಪುಟ್ಟ ಕಾಲೇಜು ಖರ್ಚು­ಗ­ಳನ್ನು ತಾವೇ ದುಡಿ­ದು­ಕೊ­ಳ್ಳು­ತ್ತಿ­ದ್ದರು. ಎಲ್ಲ­ದಕ್ಕೂ ಮನೆಯ ಮೇಲೆ ಅವ­ಲಂ­ಭಿ­ತ­ರಾ­ಗಿ­ರ­ಲಿಲ್ಲ. ಮನೆ­ಯಲ್ಲಿ ಅವ­ರಿಗೆ ಸಿಕ್ಕ ಸ್ವತಂತ್ರ ಎಲ್ಲೂ ವ್ಯರ್ಥ­ವಾ­ಗ­ಲಿಲ್ಲ!
ಇಲ್ಲೊಂದು ಶಿಸ್ತು ಸಂಹಿತೆ:
ರಾಧಾ­ಕೃಷ್ಣ ತಮ್ಮ ಕಾರ್ಯ­ದ­ಲ್ಲೊಂದು ಶಿಸ್ತು ಸಂಹಿ­ತೆ­ಯನ್ನು ಅನು­ಸ­ರಿ­ಸು­ತ್ತಾರೆ. ದೇವರ ಅಲಂ­ಕಾ­ರ­ದಲ್ಲಿ ಎಲ್ಲೂ ಶಾಸ್ತ್ರ ಮೀರಿ­ದ್ದಿಲ್ಲ. ಸೃಜ­ನ­ಶೀ­ಲ­ತೆ­ಗಾಗಿ ಶಿಸ್ತನ್ನು ಕಡೆ­ಗ­ಣಿ­ಸಿಲ್ಲ. ದೇವರ ವಿಗ್ರಹ ರಚ­ನೆ­ಯಲ್ಲಿ ಹೆಣ್ಣು, ಗಂಡು ದೇವರ ಅವ­ತಾ­ರ­ಗ­ಳನ್ನು ಅರ್ಥ­ಮಾ­ಡಿ­ಕೊ­ಳ್ಳ­ಬೇ­ಕಾದ ಅವ­ಶ್ಯ­ಕತೆ ಇದೆ. ಅದೆ­ಲ್ಲ­ವನ್ನು ರಾಧಾ­ಕೃಷ್ಣ ಬದ್ಧ­ತೆ­ಯಿಂದ ಅನು­ಸ­ರಿ­ಸು­ತ್ತಾರೆ.
ಎಲ್ಲೂ ನಿಲ್ಲೋ­ದಿಲ್ಲ: `ಕ­ಲಾ­ವಿ­ದ­ನಿಗೆ ಕನಸೇ ಬಂಡ­ವಾಳ. ಕನ­ಸನ್ನು ಸಾಕಾರ ಮಾಡು­ವಾಗ ಬೇರೇನೂ ಮುಖ್ಯ­ವಲ್ಲ. ಹಣ ಕಮ್ಮಿ­ಯಾ­ಗ­ಬ­ಹುದು, ಹೆಚ್ಚಾ­ಗ­ಬ­ಹುದು ಆದರೆ ಕಾರ್ಯ­ದಲ್ಲಿ ವ್ಯತ್ಯಾ­ಸ­ವಾ­ಗ­ಕೂ­ಡದು. ಯಾವ ಮನ್ನಣೆ ಗೌರ­ವ­ಗಳ ನಿರೀ­ಕ್ಷೇಯೂ ಇಲ್ಲ. ಅಷ್ಟಕ್ಕೂ ನಾನೊಬ್ಬ ನೇಪಥ್ಯ ಕಲಾ­ವಿದ, ಗೌರ­ವ­ಗಳ ನಿರೀಕ್ಷೆ ಮಾಡ­ಬಾ­ರದು. ಯಾವು­ದಕ್ಕೂ ಅಂಜದೆ ಎಲ್ಲೂ ನಿಲ್ಲದೆ ನಡೆ­ಯು­ತ್ತೇನೆ ' ಎಂದು ರಾಧ­ಕೃಷ್ಣ ಅವರು ಹೇಳು­ವಾಗ ಅವರ ಉನ್ನತ ವಿಶ್ವಾ­ಸದ ಅಂತ­ರ್‌­ದ­ರ್ಶ­ನ­ವಾ­ಯಿತು. ಜೊತೆಗೆ ಯಾರೂ ಮಾಡಿ­ರದ ದೊಡ್ಡ­ದೊಂದು ಚಿತ್ರ­ಕ­ಲಾ­ಕೃತಿ ಮಾಡುವ ಕನ­ಸನ್ನು ಅವರು ಹೊರ ಹಾಕಿ­ದರು.
ರಾಧಾ­ಕೃಷ್ಣ ಅವ­ರದು ರಾಜ­ರಾ­ಜೇ­ಶ್ವರಿ ನಗ­ರದ ಪಟ್ಟ­ಣ­ಗೆರೆ ವಾಸ. ಪತ್ನಿ ವಿಮಲಾ ಮೈಕೋ ಕಾರ್ಖಾನೆ ಉದ್ಯೋಗಿ. ಮಗಳು ರಚ­ನಾ­ ಚಿತ್ರ­ಕಲೆ ಅಂದರೆ ಪಂಚ­ಪ್ರಾಣ. ಪುಟ್ಟ ಸಂಸಾರದೊಂದಿಗೆ ದೊಡ್ಡ ಕನಸು ಹೊಂದಿರುವ ಅವರ ಹಾದಿ ಸುಗಮವಾಗಲಿ.