
ಪರಮಾತ್ಮನಿಗೆ `ರಾಧಾಕೃಷ್ಣ' ಸ್ವರೂಪ
ದೇಗುಲದ ಗರ್ಭಗುಡಿಯೇ ಅವರ ಪ್ರಯೊಗ ಶಾಲೆ. ಮನಸ್ಸಿನಲ್ಲಿ ಮೂಡಿದ ಕಲ್ಪನೆಯೇ ಫಾರ್ಮುಲ. ಮುತ್ತು, ರತ್ನ, ವಜ್ರ, ವಸ್ತ್ರ, ವಡೆವೆ, ಧೂಪ, ಕರ್ಪೂರಗಳೇ ಸಂಪನ್ಮೂಲ. ಭಗವಂತನೇ ಅವರ ಪ್ರಾಯೋಗಿಕ ವಸ್ತು! ಶಂಕ, ಚಕ್ರ, ಗಧೆ, ತ್ರಿಶೂಲಗಳೇ ಉಪಕರಣ. ಅಭಯಾಸ್ತ, ವರದಾಸ್ತಗಳೇ ಕ್ಷ ಕಿರಣ........ಅವರ ಪ್ರಯೋಗದಿಂದ ಭಕ್ತಿಯ ಸಾಗರ ಹರಿಯುತ್ತದೆ. ಭಗವಂತನಿಗೆ ರೂಪ ಕೊಡುವ ಅವರು ಭಕ್ತಿಸಾಗರದಲ್ಲಿ ತೊಯ್ದು ತೇವಗೊಳ್ಳುತ್ತಾರೆ!
ಅವರು ಎನ್. ರಾಧಾಕೃಷ್ಣ. ದೇವರ ಅಲಂಕಾರ ವಿದ್ವಾಂಸರು. ಚಿತ್ರಕಲಾ ಕಲಾವಿದ ಹಾಗೂ ವಸ್ತ್ರ ವಿನ್ಯಾಸಕ. ಹಲವು ದೇವಾಲಯಗಳಲ್ಲಿ ಅಲಂಕಾರ ಮಾಡುವ ಹಾಗೂ ಪರಮಾತ್ಮನ ಮೂರುತಿ ರಚಿಸುವ ಇವರ ಕಲ್ಪನೆಯೊಳಗೆ ಭಗವಂತನ ಸಾಕ್ಷಾತ್ಕಾರವಾಗಿದೆ.
ರಾಧಾಕೃಷ್ಣ ಅವರು ಗಣಪತಿಯನ್ನು ವಿಧ ವಿಧವಾಗಿ ಕಂಡಿದ್ದಾರೆ. ಧಾನ್ಯಗಳನ್ನು ಕೂಡಿಡುವ ಬಳ್ಳ, ಮಡಿಕೆ ಹಾಗೂ ಮನೆ ಬಳಕೆಯ ಮೊರಗಳಲ್ಲಿ ಗಣಪನನ್ನು ಚಿತ್ರಿಸಿದ್ದಾರೆ. ಮೂರು ಯುಗ ಹಳೆಯದಾದ ಮುಳಬಾಗಿಲು ಸಮೀಪದ ಕುರುಡುಮಲೆ ಗಣಪ ಇವರಿಂದ ಮೇಕಪ್ ಮಾಡಿಸಿಕೊಂಡಿದ್ದಾನೆ! ಬೆಂಗಳೂರಿನ ಬಿನ್ನಿ ಮಿಲ್ ಸಮೀಪದ ಉದ್ಬವಮೂರ್ತಿ ಸ್ವಯಂಭೋ ನಾಗರಾಜ ಬಾಲ ಸುಬ್ರಮಣ್ಯನಿಗೆ 50 ಕೆಜಿ ಬೆಣ್ಣೆಯಿಂದ ಸರ್ಪದ ಎಡೆ ಸೃಷ್ಟಿಸಿದ್ದಾರೆ. ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನವರತ್ನ ಖಚಿತ ಶಿವಲಿಂಗ ರೂಪಿಸಿದ್ದಾರೆ. ಆಂಜನೇಯನ ಮೇಲಂತೂ ಅಪಾರ ಪ್ರಯೋಗ ಮಾಡಿದ್ದಾರೆ! ಸ್ವಾತಿಮುತ್ತು ಮತ್ತು ಕಪ್ಪೆಚಿಪ್ಪಿನ ಆಂಜನೇಯರು ಪ್ರಸಿದ್ಧರು.
ಮಹಾಲಕ್ಷ್ಮಿ ಲೇಔಟ್ನ ಕನ್ನಿಕಾ ಪರಮೇಶ್ವರಿಗೆ ಕಾಮಾಕ್ಷಿ ಅಲಂಕಾರ ಹಾಗೂ ಗಾಯತ್ರಿ ಅಲಂಕಾರ. ವರಮಹಾಲಕ್ಷ್ಮಿಗೆ ಕಳಶ ಅಲಂಕಾರಗಳ ಐಭೋಗ. ನಂಜನ ಗೂಡಿನ ಶ್ರೀಕಂಠೇಶ್ವರ, ಶಿಡ್ಲಘಟ್ಟ ಶಂಕರಮಠದ ಶಾರದಾಂಬೆ ಹಾಗೂ ಶಂಕರಾಚಾರ್ಯರು, ಶಿಡ್ಲಘಟ್ಟದ ಗಣೇಶ ಸೇರಿದಂತೆ ಕೆ.ಆರ್. ನಗರ ಹಾಗೂ ಹುಣಸೂರು ದೇವಾಲಗಳಗಳಲ್ಲೂ ಅಲಂಕಾರ ಮಾಡಿದ್ದಾರೆ.
ವಿಶೇಷ ಹಬ್ಬ ಹರಿದಿನಗಳಲ್ಲಿ ರಾಧಾಕೃಷ್ಣ ದೇವರ ಅಲಂಕಾರದಲ್ಲಿ ಬಿಡುವಿಲ್ಲದೆ ಮಗ್ನ. ದೇವಾಲಯ ಅಲಂಕಾರದ ಜೊತೆಗೆ ಮನೆಗಳಲ್ಲಿ ಆಯೋಜಿಸುವ ಪೂಜೆಗಳಲ್ಲೂ ದೇವರ ವಿಗ್ರಹ ಮಾಡಿ ಅಲಂಕಾರ ಮಾಡುತ್ತಾರೆ. ದೇವರ ಹೆಸರು ಹೇಳಿದರೆ ಸಾಕು, ಕಲ್ಪನೆಯೊಳಗೆ ಭಗವಂತನಿಗೆ ರೂಪ ಕೊಟ್ಟು ನಂತರ ಕೃತಿಗಿಳಿಸುತ್ತಾರೆ. ದೇವರ ಬಗ್ಗೆ ಓದು ಹಾಗೂ ಕೇಳಿದ ಕತೆಗಳು ಸ್ವರೂಪ ಕೊಡಲು ಸಹಾಯ ಮಾಡುತ್ತವೆ. ಅಲಂಕಾರಕ್ಕೆ ಅವಶ್ಯವಿರುವ ಎಲ್ಲಾ ವಸ್ತುಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ರೆಡಿಮೇಡ್ ವಸ್ತುಗಳನ್ನು ಬಳಸದಿರುವುದು ವಿಶೇಷ.
ದೀಪಾವಳಿ ಲಕ್ಷ್ಮಿಪೂಜೆಯಲ್ಲಿ ಮಾಡಿದ ಲಕ್ಷ್ಮಿ ವಿಗ್ರಹ ಹಾಗೂ ಅಲಂಕಾರವನ್ನು ಟಿವಿ 9 ವಾಹಿನಿ ವಿಶೇಷ ಕಾರ್ಯಕ್ರಮವಾಗಿ ಪ್ರಸಾರ ಮಾಡಿದೆ. ಕೊಳಲನೂದುತ ನವಿಲುಗರಿ ಕೆಳಗೆ ಪವಡಿಸಿರುವ ಶ್ರೀಕಷ್ಣನ ಕೃತಿಯನ್ನು ಶ್ರೀಕೃಷ್ಣ ಜನ್ಮಾಷ್ಟಮಿಯಂದು ಜೀ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅಲ್ಲದೆ ಮನೆಗಳಿಗೂ ವಿಗ್ರಹ ಮತ್ತು ಅಲಂಕಾರ ಮಾಡುತ್ತಾರೆ. ಚಿತ್ರನಟಿ ತಾರಾ ಅವರ ಮನೆಗೆ ತೆಂಗಿನ ಗರಿಯಲ್ಲಿ ಸತ್ಯನಾರಾಯಣ ಪೂಜೆಗೆ ದೇಗುಲ ನಿರ್ಮಿಸಿದ್ದು ಅವರ ವಿಶೇಷಗಳಲ್ಲೊಂದು. ಇಷ್ಟರ ಜೊತೆಗೆ ಪೂಜೆಗೆ ಪೌರೋಹಿತ್ಯವನ್ನೂ ಮಾಡಬಲ್ಲರು! ಚಿತ್ರಕಲಾವಿದ ಹಾಗೂ ವಸ್ತ್ರ ವಿನ್ಯಾಸಕ: ದೇವರ ಅಲಂಕಾರದ ಜೊತೆಗೆ ರಾಧಾಕೃಷ್ಣ ಅವರು ಚಿತ್ರಕಲಾ ಕಲಾವಿದ ಹಾಗೂ ವಸ್ತ್ರ ವಿನ್ಯಾಸಕ. ಬೆಂಗಳೂರಿನ `ಕೆನ್ ಸ್ಕೂಲ್ ಆಫ್ ಆರ್ಟ್ಸ್'ನಲ್ಲಿ ಪದವಿ ಗಳಿಸಿರುವ ಅವರು ನೂರಾರು ಕಲಾಕೃತಿ, ಭಿತ್ತಿಚಿತ್ರ ರಚಿಸಿದ್ದಾರೆ. ಪದವಿ ನಂತರ ಜೆ.ಪಿ. ಟೆಕ್ಸ್ಟೈಲ್ಸ್ನಲ್ಲಿ ಕ್ರಿಯೆಟಿವ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಖ್ಯಾತ ಬಟ್ಟೆ ರಪ್ತು ಉದ್ಯಮ `ಗೋಕುಲ್ ದಾಸ್ ಎಕ್ಸ್ಪೋರ್ಟ್ಸ'ನಲ್ಲಿ ವಿನ್ಯಾಸಕಾರರಾಗಿ 9 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಜೊತೆಗೆ `ಸ್ವಾತಿ ಡಿಸೈನ್'ಗೂ ವಿನ್ಯಾಸ ಮಾಡಿದ್ದಾರೆ. ಈಗ ಸ್ವತಂತ್ರವಾಗಿ ಮನೆಯಲ್ಲೇ ದೇವರ ಅಲಂಕಾರ ಹಾಗೂ ಚಿತ್ರಕಲೆಯಲ್ಲಿ ತೊಡಗಿಕೊಂಡಿದ್ದಾರೆ.
ಉದ್ಯಮಿ ದಿನೇಶ್ ಹಿಂದುಜಾ ಅವರಿಗೆ ಮಾಡಿಕೊಟ್ಟ `ರಾಧಕೃಷ್ಣ' ಬಿತ್ತಿಚಿತ್ರ, ಕುಟೀರ ರೆಸಾರ್ಟ್ಗೆ ಮಾಡಿದ ಕೃತಿಗಳು, ಮೈಸೂರಿನ ದೀಕ್ಷಿತ್ ಆಸ್ಪತ್ರೆಗೆ ಮೃತ್ಯುಂಜಯ ಪೋಟ್ರೈಟ್, ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ.
ಬೆಂಗಳೂರಿನ ತಾತಗುಣಿಯಲ್ಲಿರುವ ಸ್ವಾನಂದ ಆಶ್ರಮದ ಕಲಾ ಮಹೋತ್ಸವದಲ್ಲಿ ರಾಧಾಕೃಷ್ಣ ರಚಿಸಿದ ಜಾನಪದ ವೇದಿಕೆ ಮೆಚ್ಚುಗೆಗೆ ಪಾತ್ರವಾಗಿದೆ. ಆ ಇಡೀ ಮಹೋತ್ಸವವನ್ನು ಜಾನಪದ ಪರಿಕಲ್ಪನೆಯಲ್ಲಿ ರಚನೆ ಮಾಡಿದ್ದರು. ಹೆಬ್ಬಾಗಿಲಿನಿಂದ ಹಿಡಿದು ಮುಖ್ಯ ವೇದಿಕೆಯವರೆಗೂ ಜಾನಪದವೇ ತುಂಬಿ ಅಪಾರ ಜನರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲದೆ ರಾಧಾಕೃಷ್ಣರ ಕೃತಿಗಳನ್ನು ಕ್ಯಾಲೆಂಡರ್ಗಳಿಗೆ, ಪ್ರಶಸ್ತಿ ಮೊಮೆಂಟೋಗಳಿಗೆ ಬಳಸಿಕೊಳ್ಳಲಾಗಿದೆ.
ಜೀನ್ಸ್ಪ್ಯಾಂಟ್ ಮೇಲೆ ಶೇಡ್ಸ್:
ದೇವರ ಅಲಂಕಾರ ಹಾಗೂ ಚಿತ್ರಕಲೆಯ ಜೊತೆಗೆ ರಾಧಾಕೃಷ್ಣ ಅವರು ವಸ್ತ್ರವಿನ್ಯಾಸಕರೂ ಹೌದು. ಜೀನ್ಸ್ಪ್ಯಾಂಟ್ಗಳ ಮೇಲೆ ಶೇಡ್ಸ್ ಮಾಡುವ ವಿನ್ಯಾಸವನ್ನು ಬೆಂಗಳೂರಿನಲ್ಲಿ ಮೊದಲು ಪರಿಚಯಿಸಿದವರೇ ರಾಧಾಕೃಷ್ಣ. ವಿಶಿಷ್ಟ ರಾಸಾಯನಿಕಗಳನ್ನು ಬಳಸಿ ಕೊಟ್ಟ ಶೇಡಿಂಗ್ ವಿನ್ಯಾಸವನ್ನು ಯುವ ಸಮುದಾಯ ಒಪ್ಪಿ ಅಪ್ಪಿಕೊಂಡಿತು. ಇವತ್ತು ರಸ್ತೆ ರಸ್ತೆಯಲ್ಲಿ ಶೇಡೆಡ್ ಜೀನ್ಸ್ ಸಿಗುತ್ತವೆ! ಅದು ಅವರ ದೊಡ್ಡ ಯಶಸ್ವಿ. ನಂತರ ಖ್ಯಾತ ಕಂಪನಿಗಳಾದ ಲೀ ಜೀನ್ಸ್, ರ್ಯಾಂಗ್ಲರ್, ರೀಬಾಕ್, ಡೀಸೆಲ್, ನಿಕಿಯ ವಸ್ತ್ರಗಳಿಗೆ ಡಿಸೈನ್ ಮಾಡಿವ ಅವಕಾಶ ದೊರೆಯಿತು.
ಬ್ಯಾನರ್ನಿಂದ ಯಾತ್ರೆ ಆರಂಭ:
ರಾಧಾಕೃಷ್ಣ ರಾಮನಗರದವರು. ತಂದೆ ದಿ. ನಾಗಭೂಷಣ ಶಾಸ್ತ್ರೀ, ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಅರ್ಚಕರಾಗಿದ್ದರು. ತಾಯಿ ಪಾರ್ವತಮ್ಮ. ತಂದೆ ತಾಯಂದಿರಿಗೆ ಸಂಗೀತ ಗೊತ್ತಿತ್ತು. ಮನೆಯ ಮಕ್ಕಳೆಲ್ಲಾ ಸಂಗೀತ ಹಾದಿ ಹಿಡಿದರೆ, ರಾಧಾಕೃಷ್ಣ ಕುಂಚ ಮತ್ತು ಬಣ್ಣದ ಹಿಂದೆ ನಡೆದರು. ರಾಮನಗರದ ........ಸಭಾ ಅವರ ಪ್ರತಿಭೆಗೆ ವೇದಿಕೆಯಾಯಿತು. ಸಭಾದಿಂದ ಏನೇ ಕಾರ್ಯಕ್ರಮ ನಡೆದರೂ ಇವರ ಕುಟುಂಬದ ಪಾಲು ಇರುತ್ತಿತ್ತು. ಇವತ್ತಿಗೂ .......ಸಭಾ ಕಾರ್ಯಕ್ರಮಗಳಲ್ಲಿ ರಾಧಾಕೃಷ್ಣ ಕುಟುಂಬ ಸಮೇತರಾಗಿ ಪಾಲ್ಗೊಳ್ಳುತ್ತಾರೆ. ರಾಧಾಕೃಷ್ಣ ಕಾರ್ಯಕ್ರಮಗಳಿಗೆ ಬ್ಯಾನರ್ ಬರೆಯುತ್ತಿದ್ದರು. ಆ ಮೂಲಕ ತಮ್ಮ ಕಲಾ ಯಾತ್ರೆಯನ್ನು ಆರಂಭಿಸಿದರು. ತಂದೆಯೂ ದೇವರಿಗೆ ಅಲಂಕಾರ ಮಾಡುತ್ತಿದ್ದರು. ಅಲಂಕಾರದಲ್ಲಿ ತಂದೆಯೇ ಗುರು. ಬೇರೆ ಬೇರೆ ಊರುಗಳಿಗೆ ತಂದೆಯ ಜೊತೆ ಅಲಂಕಾರಕ್ಕೆ ತೆರಳುತ್ತಿದ್ದರು. ತಮಗೆ ಬೇಕಾದ ಸಣ್ಣ ಪುಟ್ಟ ಕಾಲೇಜು ಖರ್ಚುಗಳನ್ನು ತಾವೇ ದುಡಿದುಕೊಳ್ಳುತ್ತಿದ್ದರು. ಎಲ್ಲದಕ್ಕೂ ಮನೆಯ ಮೇಲೆ ಅವಲಂಭಿತರಾಗಿರಲಿಲ್ಲ. ಮನೆಯಲ್ಲಿ ಅವರಿಗೆ ಸಿಕ್ಕ ಸ್ವತಂತ್ರ ಎಲ್ಲೂ ವ್ಯರ್ಥವಾಗಲಿಲ್ಲ!
ಇಲ್ಲೊಂದು ಶಿಸ್ತು ಸಂಹಿತೆ:
ರಾಧಾಕೃಷ್ಣ ತಮ್ಮ ಕಾರ್ಯದಲ್ಲೊಂದು ಶಿಸ್ತು ಸಂಹಿತೆಯನ್ನು ಅನುಸರಿಸುತ್ತಾರೆ. ದೇವರ ಅಲಂಕಾರದಲ್ಲಿ ಎಲ್ಲೂ ಶಾಸ್ತ್ರ ಮೀರಿದ್ದಿಲ್ಲ. ಸೃಜನಶೀಲತೆಗಾಗಿ ಶಿಸ್ತನ್ನು ಕಡೆಗಣಿಸಿಲ್ಲ. ದೇವರ ವಿಗ್ರಹ ರಚನೆಯಲ್ಲಿ ಹೆಣ್ಣು, ಗಂಡು ದೇವರ ಅವತಾರಗಳನ್ನು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಅದೆಲ್ಲವನ್ನು ರಾಧಾಕೃಷ್ಣ ಬದ್ಧತೆಯಿಂದ ಅನುಸರಿಸುತ್ತಾರೆ.
ಎಲ್ಲೂ ನಿಲ್ಲೋದಿಲ್ಲ: `ಕಲಾವಿದನಿಗೆ ಕನಸೇ ಬಂಡವಾಳ. ಕನಸನ್ನು ಸಾಕಾರ ಮಾಡುವಾಗ ಬೇರೇನೂ ಮುಖ್ಯವಲ್ಲ. ಹಣ ಕಮ್ಮಿಯಾಗಬಹುದು, ಹೆಚ್ಚಾಗಬಹುದು ಆದರೆ ಕಾರ್ಯದಲ್ಲಿ ವ್ಯತ್ಯಾಸವಾಗಕೂಡದು. ಯಾವ ಮನ್ನಣೆ ಗೌರವಗಳ ನಿರೀಕ್ಷೇಯೂ ಇಲ್ಲ. ಅಷ್ಟಕ್ಕೂ ನಾನೊಬ್ಬ ನೇಪಥ್ಯ ಕಲಾವಿದ, ಗೌರವಗಳ ನಿರೀಕ್ಷೆ ಮಾಡಬಾರದು. ಯಾವುದಕ್ಕೂ ಅಂಜದೆ ಎಲ್ಲೂ ನಿಲ್ಲದೆ ನಡೆಯುತ್ತೇನೆ ' ಎಂದು ರಾಧಕೃಷ್ಣ ಅವರು ಹೇಳುವಾಗ ಅವರ ಉನ್ನತ ವಿಶ್ವಾಸದ ಅಂತರ್ದರ್ಶನವಾಯಿತು. ಜೊತೆಗೆ ಯಾರೂ ಮಾಡಿರದ ದೊಡ್ಡದೊಂದು ಚಿತ್ರಕಲಾಕೃತಿ ಮಾಡುವ ಕನಸನ್ನು ಅವರು ಹೊರ ಹಾಕಿದರು.
ರಾಧಾಕೃಷ್ಣ ಅವರದು ರಾಜರಾಜೇಶ್ವರಿ ನಗರದ ಪಟ್ಟಣಗೆರೆ ವಾಸ. ಪತ್ನಿ ವಿಮಲಾ ಮೈಕೋ ಕಾರ್ಖಾನೆ ಉದ್ಯೋಗಿ. ಮಗಳು ರಚನಾ ಚಿತ್ರಕಲೆ ಅಂದರೆ ಪಂಚಪ್ರಾಣ. ಪುಟ್ಟ ಸಂಸಾರದೊಂದಿಗೆ ದೊಡ್ಡ ಕನಸು ಹೊಂದಿರುವ ಅವರ ಹಾದಿ ಸುಗಮವಾಗಲಿ.