ನಾಟ್ಯ ಮಯೂರ ಶ್ರೀಧರ್ ಜೈನ್!
ಬಹುಶಃ ಅವರು ಹುಟ್ಟಿದ್ದೇ ನೃತ್ಯಕ್ಕಾಗಿ! ಅವರ ನಡೆ- ನುಡಿಯಲ್ಲಿ ನಟರಾಜನ ನಡಿಗೆಯಿದೆ. ಅವರ ನಿಲುವಿನಲ್ಲಿ ನಾಟ್ಯಶಾಸ್ತ್ರದ ನವರಸಾದಿಗಳು ನಲಿದಾಡುತ್ತವೆ. ಗೆಜ್ಜೆ ಕಟ್ಟಿದ ಅವರ ಹೆಜ್ಜೆಯ ಗುರುತು ರಸಿಕರ ಎದೆಯಲ್ಲಿ ಸದ್ದು ಮಾಡಿವೆ. ಭೂಮಿಕೆಯ ಮೇಲಿಂದ ಹೊಮ್ಮಿ ಬರುವ ಅವರ ಹುಮ್ಮಸ್ಸು ಆನಂದ ಹೊತ್ತು ನಾಡಿನೆಲ್ಲಡೆ ಹರಡಿದೆ.
ಅವರು ಖ್ಯಾತ ನೃತ್ಯಪಟು ಶ್ರೀಧರ್ ಜೈನ್. ಒಮ್ಮೆ ನೋಡಿದರೆ ಸಾಕು ಯಾರು ಬೇಕಾದರೂ ಅವರೊಬ್ಬ ನೃತ್ಯಗಾರ ಎಂದು ಊಹಿಸಬಹುದು. ಆ ಮೈಕಟ್ಟು, ಮುಖಭಾವ... ನೃತ್ಯವನ್ನು ಕಣ್ಮುಂದೆ ತರುತ್ತವೆ. ಒಬ್ಬ ವ್ಯಕ್ತಿಯಾಗಿಯೂ ಶ್ರೀಧರ್ ಜೈನ್ ಹೃದಯದ ಹತ್ತಿರಕ್ಕೆ ಬಂದು ನಿಲ್ಲುತ್ತಾರೆ. ಅವರ ಮಾತಿನ ವಿದೇಯತೆ `ವಿದ್ಯೆ ಉಳ್ಳವನ ಮುಖ ಮುದ್ದು ಬರುವಂತಿರ್ಕು' ಎನ್ನುವ ಸರ್ವಜ್ಞನ ವಚನವನ್ನು ಶೃತಿ ಮಾಡುತ್ತದೆ.
ಶ್ರದ್ಧಾಭಕ್ತಿಯಿಂದ ಅಭ್ಯಾಸ ಮಾಡಿದ ಭರತನಾಟ್ಯ ಶ್ರೀಧರ್ ಅವರ ವ್ಯಕ್ತಿತ್ವವನ್ನು ಬಹಳ ಎತ್ತರಕ್ಕೆ ಏರಿಸಿದೆ. ಭರತನಾಟ್ಯದ ಬಲದಿಂದ ವೈವಿಧ್ಯಮಯ ನೃತ್ಯ ಪ್ರಾಕಾರಗಳನ್ನು ತನ್ನತ್ತ ಸೆಳೆದು ಕೊಂಡಿದ್ದಾರೆ. ಭಾರತೀಯ ನೃತ್ಯಗಳು ಎನ್ನುವ ಕಲ್ಪನೆಯ ಕೆಳಗೆ ಜಾನಪದ, ಸಮಕಾಲೀನ ನೃತ್ಯ, ಪಾಶ್ಚಾತ್ಯ, ರಾಜಸ್ತಾನಿ, ಗರ್ಬಾ, ದಾಂಡ್ಯ, ಪ್ಯೂಜನ್...ಇವೆಲ್ಲವೂ ಅವರ ದೇಹದಿಂದ ಹೊಮ್ಮಿ ಬರುತ್ತವೆ. ಎ.ಆರ್. ರೆಹಮಾನ್ ಸಂಯೋಜನೆಯ `ವಂದೇ ಮಾತರಂ' ಗೀತೆಗೆ ಶ್ರೀಧರ್ ಜೈನ್ಅವರ ನೃತ್ಯ ಸಂಯೋಜನೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಅವರ ನೃತ್ಯ ರೂಪಕಗಳಲ್ಲಿ ಕಾಣುವ ಎನರ್ಜಿ ಶ್ರೀಧರ್ ಅವರ ನೃತ್ಯ ಭರವಸೆಯನ್ನು ಎತ್ತಿ ಹಿಡಿಯುತ್ತದೆ.
ಶ್ರೀಧರ್ ಜೈನ್ `ಆಪ್ತಮಿತ್ರ' ಚಲನಚಿತ್ರದಲ್ಲಿ ದಿ. ಸೌಂದರ್ಯ ಅವರ ಜೊತೆ ಹೆಜ್ಜೆ ಹಾಕಿದಾಗ ಕನ್ನಡ ನಾಡು ಮನಸಾರೆ ಮೆಚ್ಚಿಕೊಂಡಿತು. ಇಂಥ ಅಪ್ಪಟ ಕಲಾವಿದನ ದಿವ್ಯ ಪ್ರತಿಭೆಯನ್ನು ಬಳಸಿಕೊಂಡಿದ್ದಕ್ಕೆ ಕನ್ನಡ ಚಿತ್ರರಂಗ ನಿಜಕ್ಕೂ ಧನ್ಯ!
ಶ್ರೀಧರ್ ಜೈನ್ ನೃತ್ಯ ಪರಂಪರೆಯಿಂದ ಬಂದವರಲ್ಲ. ತಂದೆ ದಿ. ಮಿಸ್ರಿಲಾಲ್ ಜೈನ್ ರಾಜಸ್ಥಾನ ಮೂಲದ ವಾಪಾರಸ್ಥರು. ತಾಯಿ ರತಿದೇವಿ ದಕ್ಷಿಣ ಕನ್ನಡದ ಕಾರ್ಕಳ ಸಮೀಪದ ನಾರವಿಯವರು. ಶ್ರೀಧರ್ ಹುಟ್ಟಿದ್ದು ನಾರವಿಯಲ್ಲಿ ಬೆಳದದ್ದೇಲ್ಲಾ ಮೈಸೂರಿನಲ್ಲಿ.
ಶ್ರೀಧರ್ ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರು. 9ನೇ ವಯಸ್ಸಿನಲ್ಲಿ ನೃತ್ಯಗುರು ಶ್ರೀನಿವಾಸ್ ಅವರ ಬಳಿ ನೃತ್ಯ ಕಲಿಕೆ ಆರಂಭಿಸಿದಾಗ ಪರಿಸ್ಥಿತಿ ಸರಿಯಾಗಿರಲಿಲ್ಲ. ಅನಿವಾರ್ಯವಾಗಿ ಬಹಳ ಚಿಕ್ಕವಯಸ್ಸಿನಲ್ಲಿಯೇ ಎಲೆಕ್ಟ್ರಾನಿಕ್ಸ್ವೊಂದರಲ್ಲಿ ಕೆಲಸಕ್ಕೆ ಸೇರಬೇಕಾಯಿತು. ಕೆಲಸದ ಒತ್ತಡ ನೃತ್ಯಕ್ಕೆ ಅವಕಾಶ ಕೊಡಲಿಲ್ಲ. ಮಧ್ಯೆ ನೃತ್ಯ ಕಲಿಕೆಯನ್ನು ಬಿಡಬೇಕಾಯಿತು. ಆದರೆ ಕಲಿಕೆಯ ಆಸಕ್ತಿ ಹಸಿರಾಗಿತ್ತು.
ಆಮೇಲೆ ನೃತ್ಯಗುರು ಶೀಲಾ ಶ್ರೀಧರ್ ಅವರ ಬಳಿ ನೃತ್ಯಕಲಿಕೆ ಮುಂದುವರಿಸಿದರು. 12 ವರ್ಷಗಳ ನೃತ್ಯಾಭ್ಯಾಸ ಅವರಿಗೆ ಹೊಸದೊಂದು ದಾರಿ ತೋರಿಸಿತು. ಮೈಸೂರು ವಿವಿ ಲಲಿತಕಲಾ ಕಾಲೇಜಿನಲ್ಲಿ ಡಿಪ್ಲೊಮಾ ಪಡೆದಿರುವ ಅವರು ವಿದ್ವತ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದರು. ಈಗ ಶ್ರೀಧರ್ ಜೈನ್ ಸ್ವತಃ ನೃತ್ಯಗರು!
ಶ್ರೀ ನಿಮಿಷಾಂಬ ನೃತ್ಯ ಶಾಲೆ: ಇದು ಶ್ರೀಧರ್ ಜೈನ್ ಅವರ ಕನಸಿನ ಕೂಸು. 1996ರಲ್ಲಿ ಮೈಸೂರಿನಲ್ಲಿ ಸ್ಥಾಪನೆಗೊಂಡ ಈ ನೃತ್ಯ ಶಾಲೆ ಇವತ್ತು ಬಹಳ ಎತ್ತರಕ್ಕೆ ಬೆಳೆದಿದೆ. ಯಾವಾಗಲು ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಈ ಶಾಲೆ ಮೈಸೂರಿನಲ್ಲಿ 7 ಬ್ರಾಂಚ್ಗಳನ್ನು ಹೊಂದಿದ್ದು ಪ್ರತಿನಿತ್ಯ ನೃತ್ಯ ವಿದ್ಯೆದಾನ ನಡೆಯುತ್ತಿದೆ. ನೂರಾರು ವಿದ್ಯಾರ್ಥಿಗಳನ್ನು ಹೊಂದಿರುವ ಶ್ರೀಧರ್ ನೆಚ್ಚಿನ ಗುರುಗಳಾಗಿದ್ದಾರೆ. ಅವರ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಪ್ರತಿಭೆ ತೋರಿದ್ದಾರೆ. ವಿದೇಶಿ ಶಿಷ್ಯರನ್ನು ಅವರು ಹೊಂದಿದ್ದಾರೆ. ಭಾರತದಲ್ಲೇ ಪ್ರಥಮ ಬಾರಿಗೆ ಸ್ಕೇಟಿಂಗ್ ಮೇಲೆ ನೃತ್ಯ ಪ್ರದರ್ಶಿಸಿ ದಾಖಲೆ ಮಾಡಿದ `ರೀತು' ಶ್ರೀಧರ್ ಅವರ ಶಿಷ್ಯರಲ್ಲೊಬ್ಬರು.
ಬಡ ಮಕ್ಕಳ ನೃತ್ಯ ಕಲಿಕೆಗೆ ಪ್ರೊತ್ಸಾಹ ಮಾಡುತ್ತಿರುವ ಶ್ರೀಧರ್ ಜೈನ್ ನೃತ್ಯಕ್ಕೆ ಬೇಕಾದ ವಸ್ತ್ರ, ಒಡವೆ, ಮೇಕಪ್ ಮುಂತಾದವನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. `ಶ್ರೀ ನಿಮಿಷಾಂಬ ನಾದಾಲಯ ಮಂಟಪ'ವೆಂಬ ಸಭಾಂಗಣ ಶ್ರೀಧರ್ ಅವರ ಮನೆಯ ಭಾಗವೇ ಆಗಿದ್ದು ಮನೆಯಿಡೀ ನೃತ್ಯದ ಪರಿಮಳ ಪಸರಿಸಿದೆ.
ಹೆಜ್ಚೆ-ಗೆಜ್ಜೆ: ಕರ್ನಾಟಕದ ಪ್ರತಿಷ್ಠಿತ `ಹೆಜ್ಜೆ- ಗೆಜ್ಜೆ' ರಾಜ್ಯಮಟ್ಟದ ನೃತ್ಯ ಸ್ಪರ್ಧೆಯನ್ನು ಶ್ರೀಧರ್ ಅವರು ಕಳೆದ 13 ವರ್ಷಗಳಿಂದ ಆಯೋಜಿಸುತ್ತಾ ಬಂದಿದ್ದಾರೆ. ನೃತ್ಯದ ಎಲ್ಲಾ ಪ್ರಕಾರಗಳಿಗೂ ನಡೆಯುವ ಈ ಸ್ಪರ್ಧೆಯಲ್ಲಿ ಅಸಂಖ್ಯಾತ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ.
ನೃತ್ಯರೂಪಕಗಳು: ಶ್ರೀಧರ್ ಜೈನ್ ಸಂಯೋಜಿಸಿರುವ ನೃತ್ಯ ರೂಪಕಗಳು ದೇಶಾದ್ಯಂತ ಪ್ರದರ್ಶನಗೊಂಡಿವೆ. ಮೋಹಿನಿ ಬಸ್ಮಾಸುರ, ಭರತ ಬಾಹುಬಲಿ, ಶ್ರೀಶಕ್ತಿ ನಿಮಿಷಾಂಬ, ದಕ್ಷಯಜ್ಞ, ಶ್ರೀ ಮಹವೀರ ವೈಭವ, ಚತ್ರಪತಿ ಶಿವಾಜಿ ಮುಂತಾದ ರೂಪಕಗಳು ಬಹಳ ಯಶಸ್ವಿಯಾಗಿವೆ. ಅಲ್ಲದೆ ಚಲನಚಿತ್ರ, ಟಿವಿ ಧಾರಾವಾಹಿಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಈಗ ನವಶಕ್ತಿ ವೈಭವ ನೃತ್ಯ ರೂಪಕ ಸಂಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿಯ ದಸರೆಯಲ್ಲಿ(ಸೆ. 20: ಯುವ ದಸರಾ) ಭಾರತದಲ್ಲೆ ಪ್ರಥಮವಾಗಿ ಶ್ರೀಧರ್ ಜೈನ್ ಡೋಲಕ್ ಮೇಲೆ ನಾಟ್ಯ ಮಾಡಲಿದ್ದಾರೆ ಹಾಗೂ ಜೈ ಹೋ ಗೀತೆಗೆ 40 ಮಂದಿ ಕಲಾವಿದರ ಒಡಗೂಡಿ ಹೆಜ್ಚೆಹಾಕಲಿದ್ದಾರೆ.
ಸಮ್ಮಾನ: ಶ್ರೀಧರ್ ಅವರ ನೃತ್ಯ ಪ್ರತಿಭೆಯ ಹಿಂದೆ ಅಪಾರ ಗೌರವ ಪ್ರಶಸ್ತಿಗಗಳು ಅರಸಿ ಬಂದಿವೆ. ಕಲ್ಕತ್ತಾ ಯೂತ್ ಪೆಸ್ಟಿವಲ್ ರಾಷ್ಟ್ರೀಯ ಪ್ರಶಸ್ತಿ, ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಮೈಸೂರಿನ ಜೈನ್ ಕಮಿಟಿಯಿಂದ `ನಟಸಾರ್ವಭೌಮ' ಪ್ರಶಸ್ತಿ ಹಾಗೂ ಸಂಘ ಸಂಸ್ಥೆಗಳಿಗಂದ ಹಲವು ಬಿರುದುಗಳನ್ನು ಗಳಿಸಿದ್ದಾರೆ.
ಶ್ರೀಧರ್ ಜೈನ್ ಅವರ ಪತ್ನಿ ಸೌಮ್ಯ ಶ್ರೀಧರ್ ಹಿಂದೂಸ್ಥಾನಿ ಸಂಗೀತ ಬಲ್ಲವರು. ಆಕಾಶವಾಣಿ ಕಲಾವಿದರೂ ಹೌದು. ಮಗಳು ಲಾಸ್ಯ ನೃತ್ಯ ಕಲಿಯುತ್ತಿದ್ದಾಳೆ. ಮಗ ಸಾರಂಗ.
ಜೈನ ಸಮುದಾಯದಲ್ಲಿ ಹುಟ್ಟಿ ಭರತನಾಟ್ಯ ಬಲ್ಲ ಪ್ರಥಮ ಕಲಾವಿದ ಎನಿಸಿಕೊಂಡಿರುವ ಶ್ರೀಧರ್ ಜೈನ್ ಅವರಿಗೆ ನೃತ್ಯ ಬಿಟ್ಟ ಬೇರೊಂದು ಲೋಕವೇ ಇಲ್ಲ. ಅವರ ನಾಡಿಯಲ್ಲಿ ನೃತ್ಯರಾಜನ ವೈಭವ ಸದಾ ಮೂಡಿಬರುತ್ತಿದೆ.