Wednesday, November 18, 2009

ಆನೂರ್‌ ಅನಂತ ಕೃಷ್ಣ ಶರ್ಮಾ



ಮೃದಂಗ ಮಾಧುರ್ಯ ಮತ್ತು ಸ್ನೇಹಜೀವಿ ಶಿವು


ಸಂಗೀತ ಲೋಕದ `ಶಿವು' ಹಲವು ಅದ್ಭುತಗಳ ಸರದಾರ. ಅವರ ಮೃದಂಗ ಮಿಡಿತದ ಕಂಪು ನಾಡಲ್ಲೆಲ್ಲಾ ಹರಡಿದೆ. ನಮ್ಮ ದೇಶದಲ್ಲಿರುವ ಅತ್ಯಂತ ಪ್ರಬುದ್ಧ ತಾಳವಾದ್ಯ ಪ್ರತಿಭೆಗಳಲ್ಲಿ ಶಿವು ಪ್ರಮುಖರು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಶಿವು ಅಂದರೆ ಲೆಜೆಂಡ್‌! ಮೃದಂಗ, ತವಿಲ್‌, ತಬಲಾ, ಕಂಜೀರಾ ಮುಂತಾದ ತಾಳವಾದ್ಯಗಳನ್ನು ನುಡಿಸಬಲ್ಲ ಬಹುವಾದ್ಯ ಪಂಡಿತ. ಹಾಡುಗಾರಿಯೂ ಅವರಿಗೆ ಗೊತ್ತಿದೆ. ಪ್ಯೂಜನ್‌ನಲ್ಲೂ ತಮ್ಮ ಕೈ ಚಳಕ ತೋರಿದ್ದಾರೆ. ಶಿವು ಉತ್ತಮ ಸಂಗೀತ ಸಂಯೋಜಕರೂ ಹೌದು. ಶಾಸ್ತ್ರೀಯ ನೆಲೆಯಲ್ಲಿ ಸಿನಿಮಾ, ಸುಗಮ ಸಂಗೀತ, ಜಾನಪದ ಹಾಗೂ ನೃತ್ಯಗಳಿಗೆ ಸಂಗೀತ ಸಂಯೋಜನೆ ಮಾಡಬಲ್ಲ ನಾಡಿನ ಒಂದೇ ಒಂದು ಪ್ರತಿಭೆ ಶಿವು!
ಅವರ ಪೂರಾ ಹೆಸರು ಆನೂರ್‌ ಅನಂತ ಕೃಷ್ಣ ಶರ್ಮಾ. ನಾದ ಲೋಕದಲ್ಲಿ ಶಿವು ಎಂತಲೇ ಚಿರಪರಿಚಿತರು. ಮುಖದ ಮೇಲೆ ತುಂಬಿರುವ ದಾಡಿ ರಾಶಿಯ ನಡುವೆ ತೂರಿ ಬರುವ ಅವರ ನಗು ಎಷ್ಟೋ ಹೊಸ ಪ್ರತಿಭೆಗಳಿಗೆ ಚೈತನ್ಯ ತುಂಬಿದೆ. ಶಿವು ಎಲ್ಲಿರುತ್ತಾರೋ ಅಲ್ಲಿ ನಗು ಇರುತ್ತೆ. ಸದಾ ಹಸನ್ಮುಖಿ. ಸಂಗೀತ ಪ್ರಪಂಚದ ಸ್ನೇಹ ಜೀವಿ!
ಆನೂರ್‌ ಅನಂತ ಕೃಷ್ಣ ಶರ್ಮಾ ಅಪ್ಪಟ ಸಂಗೀತ ಕುಟುಂಬದ ಕುಡಿ. ಖ್ಯಾತ ವೈಲಿನ್‌ ಕಲಾವಿದ ಹಾಗೂ ಬೆಂಗಳೂರು ವಿವಿಯಲ್ಲಿ ಸಂಗೀತ ಶಾಸ್ತ್ರಜ್ಞರಾಗಿದ್ದ ದಿ. ವಿದ್ವಾನ್‌ ಆನೂರ್‌ ಎಸ್‌. ರಾಮಕೃಷ್ಣ ಅವರ ಪುತ್ರ. ಅವರ ಆರಂಭಿಕ ಸಂಗೀತ ಶಿಕ್ಷಣ ತಂದೆಯವರಿಂದಲೇ ಆಯಿತು. ನಂತರ ವಿದ್ವಾನ್‌. ಆರ್‌. ಎ. ರಾಜಗೋಪಾಲ್‌ ಅವರ ಬಳಿ ಮೃದಂಗ ಕಲಿತರು. ತಮ್ಮ 15ನೇ ವಯಸ್ಸಿನಲ್ಲಿ ಕಚೇರಿ ನೀಡಲು ಆರಂಭಿಸಿದ ಶಿವು ರಾಷ್ಟ್ರದ ಎಲ್ಲಾ ಖ್ಯಾತನಾಮ ಸಂಗೀತಗಾರರಿಗೆ ಮೃದಂಗ ಸಹಕಾರ ನೀಡಿದ್ದಾರೆ. ಪ್ಯೂಜನ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಲವು ನೃತ್ಯ ರೂಪಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅವರ `ಕೈಶಿಕಿ'ರೂಪಕ ಯುಕೆಯಲ್ಲಿ ಪ್ರದರ್ಶನಗೊಂಡಿದೆ. ಸಿನಿಮಾದಲ್ಲೂ ಶಿವು ತಮ್ಮ ಪ್ರತಿಭೆ ತೋರಿದ್ದಾರೆ. ಕನ್ನಡದ `ಆಪ್ತಮಿತ್ರ' ಚಿತ್ರದ ರಾ...ರಾ.. ಗೀತೆಯ ಮೃದಂಗ ಮಾಧ್ಯರ್ಯ ಶಿವು ಅವರ ಮ್ಯಾಜಿಕ್‌!
ಶಿವು ಅವರಿಗೆ ಶಾಸ್ತ್ರೀಯ ಸಂಗೀತವೇ ಮೊದಲ ಆಯ್ಕೆ. ಪ್ಯೂಜನ್‌ ಸಂಗೀತದಲ್ಲಿ ಅವರು ಕೃಷಿ ಮಾಡಿದ್ದರೂ ತಮ್ಮ ಶಾಸ್ತ್ರೀಯ ಜ್ಞಾನವನ್ನು ಆಧಾರವಾಗಿಟ್ಟುಕೊಂಡೇ ಮಾಡಿದ್ದಾರೆ. ಶಾಸ್ತ್ರಕ್ಕೆ ಎಲ್ಲೂ ಧಕ್ಕೆಯಾಗದಂತೆ, ನಿಯಮಬದ್ಧರಾಗಿ ಬೇರೆ ಪ್ರಾಕಾರದ ಸಂಗೀತವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಎಲ್ಲಾ ಸಂಗೀತದ ಮೂಲ ಒಂದೇ ಎಂಬುದನ್ನು ಸಾಭೀತು ಮಾಡಿದ್ದಾರೆ.
ಸ್ವಿಟ್ಜೆರ್ಲ್ಯಾಂಡ್‌, ಲಂಡನ್‌, ಜರ್ಮನಿ, ಇಟೆಲಿ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಬೆಸ್ಟ್‌ ಮೃದಂಗಮ್‌ ಆರ್ಟಿಸ್ಟ್‌ ಪ್ರಶಸ್ತಿ, ಲಯ ಕಲಾ ಪ್ರತಿಭಾಮಣಿ ಬಿರುದು ಸೇರಿದಂತೆ ಅವರಿಗೆ ಅಸಂಖ್ಯ ಗೌರವ ಮನ್ನಣೆಗಳು ಲಭಿಸಿವೆ.

Tuesday, November 10, 2009






ಮಾತೆ ಮೀನಾಕ್ಷಿ ಹೊಳ್ಳ



ಆ ವೃದ್ಧಾ­ಶ್ರ­ಮದ ಹಿರಿಯ ಜೀವ­ಗಳ ಜೊತೆ­ಯಲ್ಲಿ `ಮಾ­ಯಾ­ಮೃಗ' ಶೂಟಿಂಗ್‌ ನಡೆ­ಯಿತು. ವಾರದ ನಂತರ ದೂರ­ದ­ರ್ಶ­ನ­ದಲ್ಲಿ ಪ್ರಸಾ­ರ­ವಾ­ಯಿತು. ಧಾರಾ­ವಾಹಿ ನೋಡಿದ ಚೆನ್ನೈ ವೀಕ್ಷ­ಕ­ನೊಬ್ಬ ಮರು­ದಿನ ವೃದ್ಧಾ­ಶ್ರ­ಮ­ವನ್ನು ಹುಡು­ಕಿ­ಕೊಂಡು ಬಂದ. ಅವ­ನಿ­ಗೊಂದು ಅನು­ಮಾನ. ಧಾರಾ­ವಾ­ಹಿ­ಯಲ್ಲಿ ಕಂಡ ಆ ವೃದ್ಧೆ ನನ್ನ ತಾಯಿ ಇರ­ಬ­ಹುದಾ?! ಅವನ ಅನು­ಮಾನ ನಿಜ­ವಾ­ಗಿತ್ತು. ತಾಯಿ­ಯನ್ನು ಕಣ್ತುಂಬ ನೋಡಿದ. ಮಾತ­ನಾ­ಡಿ­ಸ­ಲಿಲ್ಲ. ಅನು­ಮಾ­ನ­ವನ್ನು ಪರಿ­ಹ­ರಿ­ಸಿ­ಕೊಂಡು ಕಾಲಿಗೆ ಬುದ್ದಿ ಹೇಳಿದ. ಆ ತಾಯಿ ಅತ್ತು ಅತ್ತು ಹೈರಾ­ಣಾ­ದಳು. ಕಲವೇ ದಿನ­ಗ­ಳಲ್ಲಿ ಅಲ್ಲೇ ಸತ್ತಳು. ಆಗಲೂ ಆ ಮೂರ್ಖ ಮಗ ತಾಯಿಯ ಕಳೇ­ಬರ ಕಾಣಲು ಬರ­ಲಿಲ್ಲ. ಕಡೆಗೆ ಆಕೆ ಹರಿ­ಶ್ಚಂದ್ರ ಘಾಟ್‌­ನಲ್ಲಿ ದೀರ್ಘ ಮೌನ­ವಾ­ದಳು.
ಇದು ಮಾಯಾ­ಮೃ­ಗದ ಕತೆ­ಯಲ್ಲ. ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷತ್‌ ಪಕ್ಕ­ದ­ಲ್ಲಿ­ರುವ ಶ್ರೀ ರಾಘ­ವೇ­ಶ್ವರ ಗೋ ಆಶ್ರಮ ಟ್ರಸ್ಟ್‌ನ ವೃದ್ಧಾ­ಶ್ರ­ಮ­ದಲ್ಲಿ ನಡೆದ ನಿಜ­ವಾದ ಕತೆ. ಈ ಕತೆ ಹೇಳಿ­ದ­ವರು ವೃದ್ಧಾ­ಶ್ರ­ಮ­ವನ್ನು ಕಳೆದ ಮೂರು ದಶ­ಕ­ಗ­ಳಿಂದ ಕಟ್ಟಿ­ಕೊಂಡು ಬರು­ತ್ತಿ­ರುವ 84 ವರ್ಷ ವಯ­ಸ್ಸಿನ `ಹಿ­ರಿಯ ತಾಯಿ' ಮೀನಾಕ್ಷಿ ಹೊಳ್ಳ. ಅವರ ಬಳಿ ಈ ಥರದ ನೂರಾರು ಕತೆ­ಗ­ಳಿವೆ. ಅದೆಷ್ಟೋ ವೃದ್ಧ­ರನ್ನು ಸಾಕಿ ಸಲಹಿ, ಅಂತ್ಯ ಸಂಸ್ಕಾ­ರ­ವನ್ನೂ ಮಾಡಿ­ದ್ದಾರೆ!. ಮೀನಾಕ್ಷಿ ಹೊಳ್ಳ ನಮ್ಮ ನಡುವೆ ಇರುವ ಅಪ­ರೂ­ಪದ ಹಿರಿಯ ಜೀವ. ಕಲಿ­ತದ್ದು ಕಮ್ಮಿ­ಯಾ­ದರೂ ಅವರ ಬಳಿ ಅದ್ಬುತ ಅನು­ಭ­ವ­ಗ­ಳೇನೂ ಕಮ್ಮಿ ಇಲ್ಲ. ಕಳೆದ ಮೂವತ್ತು ವರ್ಷ­ಗ­ಳಿಂದ ಎಲ್ಲ­ವನ್ನು ಕಳೆ­ದು­ಕೊಂ­ಡ­ವ­ರಿಗೆ ಇವರೇ ಎಲ್ಲಾ ಆಗಿ­ದ್ದಾರೆ. ತಮ್ಮ ಆಶ್ರ­ಮದ ಹಿರಿ­ಯ­ರನ್ನು ಮಕ್ಕ­ಳಂತೆ ಸಲ­ಹಿ­ದ್ದಾರೆ. ಇಲ್ಲಿ­ಯ­ವ­ರೆಗೆ ಆಶ್ರ­ಮ­ದಲ್ಲಿ ಮೃತ­ಪಟ್ಟ ಮೂವ­ತ್ತಕ್ಕೂ ಹೆಚ್ಚು ಹಿರಿ­ಯ­ರಿಗೆ ಅಂತ್ಯ ಸಂಸ್ಕಾರ ಮಾಡಿ­ದ್ದಾರೆ.
`ಅಂ­ತ್ಯ­ಸಂ­ಸ್ಕಾರ ಮಾಡು­ವುದು ಒಂದು ಯೋಗ. ನನ್ನ ಯಾವ ಜನ್ಮದ ಪುಣ್ಯವೋ ಕಾಣೆ. ದಿಕ್ಕಿಲ್ಲ ಅಂದ­ವ­ರಿಗೆ ಅನ್ನ ಕೊಟ್ಟಿ­ದ್ದೇನೆ, ಸೂರು ಕೊಟ್ಟು ಸಾಕಿ­ದ್ದೇನೆ. ನೋವು ಅಂದಾಗ ಮಕ್ಕ­ಳಂತೆ ಆರೈಕೆ ಮಾಡಿ­ದ್ದೇನೆ. ಸತ್ತಾಗ ಕಣ್ಣೀರು ಹಾಕಿ ಎಲ್ಲಾ ಕರ್ಮಾ­ದಿ­ಗ­ಳನ್ನು ಮಾಡಿ­ದ್ದೇನೆ. ಇದು ಪುಣ್ಯ­ವ­ಲ್ಲದೆ ಮತ್ತಿ­ನ್ನೇನು' ಎಂದು ಪ್ರಶ್ನಿ­ಸು­ವಾಗ ಅವರ ಮಾತೃ ಸ್ವರೂಪ ತೆರೆ­ದು­ಕೊಂ­ಡಿತ್ತು.
ಅಪ­ರೂ­ಪದ ಆಲಯ:
ಪ್ರಚಾ­ರ­ದಿಂದ ಬಹಳ ದೂರ­ವಿ­ರುವ ವೃದ್ಧಾ­ಶ್ರಮ ಅದು. ರಾಜ­ಕಾ­ರ­ಣಿ­ಗಳು ಕೊಡುವ ಪುಡಿ­ಗಾ­ಸಿಗೆ ಎಂದಿಗೂ ಕೈ ಚಾಚಿ­ದ­ವ­ರಲ್ಲ. 1979ರಲ್ಲಿ ತುಂಡು­ಭೂ­ಮಿ­ಯಲ್ಲಿ ಗೋ ಆಶ್ರಮ ಟ್ರಸ್ಟ್‌ ಆಗಿ ಆರಂ­ಭ­ವಾ­ಯಿತು. ಟ್ರಸ್ಟ್‌ ವೃದ್ಧಾ­ಶ್ರ­ಮನ್ನೂ ಆರಂ­ಭಿ­ಸಿತು. ಆರಂ­ಭ­ದಲ್ಲಿ ಆ ಜಾಗ ದೊಡ್ಡ ಹೊಂಡ­ದಂ­ತಿತ್ತು. ಅದು ಮುಂದೊಂದು ದಿನ ಹಿರಿಯ ಜೀವ­ಗಳ ಆಶ್ರ­ಯ­ತಾ­ಣ­ವಾ­ಗು­ತ್ತದೆ ಎಂದು ಯಾರೂ ಎಣಿ­ಸಿ­ರ­ಲಿಲ್ಲ. ಆ ಕಾಲ­ದಲ್ಲಿ ಮೀನಾ­ಕ್ಷಿ­ಯ­ವರ ತೋಳಲ್ಲಿ ಇನ್ನೂ ಬಲ­ವಿತ್ತು. ತಮ್ಮ ಪತಿ ಜನಾ­ರ್ಧನ ಹೊಳ್ಳ ಅವರ ಸಂಕ­ಲ್ಪಕ್ಕೆ ಮೀನಾಕ್ಷಿ ನೀರೆ­ರೆ­ದರು. ಇವತ್ತು ಅದು ಹಿರಿಯ ಜೀವ­ಗಳ ಆಲ­ಯ­ವಾ­ಗಿದೆ. ಅವರು ಸರ್ಕಾ­ರದ ಕಡೆ­ಯಿಂದ ಒಂದು ನಯಾ ಪೈಸೆ­ಯನ್ನೂ ನಿರೀಕ್ಷೆ ಮಾಡಿ­ದ­ವ­ರಲ್ಲ. ಮುಂದೆಯೂ ಮಾಡು­ವ­ವ­ರಲ್ಲ. ಆಶ್ರ­ಮಕ್ಕೆ ಹಿರಿ­ಯರ ಬಗ್ಗೆ ಕಾಳ­ಜಿ­ಯುಳ್ಳ ದಾನಿ­ಗಳೇ ಧಣಿ­ಗಳು.
ಇವರು ಕಟು­ಕರು:
ಹೆತ್ತ­ವ­ರಿಗೆ ಒಂದು ಹೊತ್ತಿನ ಅನ್ನ ಹಾಕಲು ಆಗ­ವ­ರಿಗೆ ಮೀನಾಕ್ಷಿ ಹೊಳ್ಳ ಕಟು­ಕರು ಎಂದು ಕರೆ­ಯು­ತ್ತಾರೆ. ಹೆತ್ತ­ವ­ರನ್ನು ಮಕ್ಕಳು ತಿರ­ಸ್ಕ­ರಿ­ಸಿ­ದಾಗ ಸಮಾಜ ತಿರ­ಸ್ಕ­ರಿ­ಸ­ಕೂ­ಡದು. ಹಿರಿ­ಯರ ನೋವು­ಗ­ಳಿಗೆ ಸ್ಪಂದಿ­ಸ­ಬೇಕು. ಈ ಕೆಲಸ ಮಾಡಲು ಮಕ್ಕಳೇ ಆಗ­ಬೇ­ಕೆಂ­ದಿಲ್ಲ. ಮನು­ಷ್ಯತ್ವ ಇರುವ ಯಾರು ಬೇಕಾ­ದರೂ ಮಾಡ­ಬ­ಹುದು ಎಂಬುದು ಅವರ ಮನ­ದಾ­ಳದ ಮಾತು.

ಆಶ್ರ­ಮಕ್ಕೆ ರಜತ ಮಹೋ­ತ್ಸವ:
2004ರಲ್ಲಿ ಆಶ್ರ­ಮಕ್ಕೆ 25 ತುಂಬಿತು. ಬಹುಶಃ ಆಗಲೇ ಈ ಆಶ್ರ­ಮದ ಸೇವೆ ಎಲ್ಲ­ರಿಗೂ ತಿಳಿ­ದದ್ದು. ಅಲ್ಲಿ­ಯ­ವ­ರೆಗೆ ಮರೆ­ಯಲ್ಲೇ ಇತ್ತು. ರಜತ ಸಂಭ್ರ­ದ­ಲ್ಲಿದ್ದ ಆಶ್ರ­ಮ­ವನ್ನು ಅಂದಿನ ರಾಜ್ಯ­ಪಾ­ಲ­ರಾದ ಟಿ.ಎನ್‌. ಚತು­ರ್ವೇದಿ, ಉಪ ಮುಖ್ಯ­ಮಂ­ತ್ರಿ­ಗ­ಳಾ­ಗಿದ್ದ ಸಿದ್ದ­ರಾ­ಮಯ್ಯ, ಗಣ್ಯ­ರಾದ ವಿರೇಂದ್ರ ಹೆಗ್ಗಡೆ, ಪತ್ರ­ಕರ್ತ ರವಿ­ಬೆ­ಳ­ಗೆರೆ, ವಿಶ್ವೇ­ಶ್ವರ ಭಟ್‌ ಮುಂತಾ­ದ­ವರು ಕೊಂಡಾ­ಡಿ­ದ್ದಾರೆ.
ಮನೆಯ ವಾತಾ­ವ­ರಣ:
ಮನೆಯ ವಾತಾ­ವ­ರಣ ಈ ಆಶ್ರ­ಮ­ದ­ಲ್ಲಿದೆ. 60 ವರ್ಷ ವಯ­ಸ್ಸಿಗೂ ಮೇಲ್ಪಟ್ಟ ವೃದ್ಧರು ಇಲ್ಲಿ ಆಶ್ರಯ ಪಡೆ­ಯ­ಬ­ಹುದು. ಜಾತಿ, ಭಾಷೆ­ಗಳ ಪ್ರಶ್ನೆಯೇ ಇಲ್ಲ. ಅವಿ­ವಾ­ಹಿತ ವೃದ್ಧ­ರಿಗೆ ಹೆಚ್ಚು ಆದ್ಯತೆ ಇದೆ. ಡೊನೇ­ಷನ್‌, ಡಿಫಾ­ಜಿಟ್‌ ಯಾವುದೂ ಇಲ್ಲ. ಇಷ್ಟ­ಪ­ಟ್ಟರೆ ವೃದ್ಧರು ಹಣ ಸಹಾಯ ಮಾಡ­ಬ­ಹುದು ಆದರೆ ಕಡ್ಡಾ­ಯ­ವಿಲ್ಲ. ಆಶ್ರ­ಮ­ದಲ್ಲಿ ಎಲ್ಲಾ ವ್ಯವ­ಸ್ಥೆ­ಗ­ಳಿವೆ. ಮುಖ್ಯ­ವಾಗಿ ಆಶ್ರಮ ಬಹಳ ಶುಚಿ­ಯಾ­ಗಿದೆ.
ಹಿರಿ­ಯರ ಆರೋ­ಗ್ಯಕ್ಕೆ ಇಲ್ಲಿ ಜಾಸ್ತಿ ಒತ್ತು ಕೊಟ್ಟಿ­ದ್ದಾರೆ. ಮಹ­ವೀರ್‌ ಜೈನ್‌ ಆಸ್ಪತ್ರೆ ವೈದ್ಯ­ಕೀಯ ಸೌಲಭ್ಯ ನೀಡು­ತ್ತದೆ. ಶುಶೃಕಿ ಸಿಸ್ಟರ್‌ ಶಾಲಿನಿ ಅವರು ಪ್ರತಿ­ದಿನ ಆರೋಗ್ಯ ತಪಾ­ಸಣೆ ನಡೆ­ಸು­ತ್ತಾರೆ. ಈ ಎಲ್ಲಾ ಉಸ್ತು­ವಾ­ರಿ­ಯನ್ನು ಮೀನಾಕ್ಷಿ ಹೊಳ್ಳ ಅವರೇ ನೋಡಿ­ಕೊ­ಳ್ಳು­ತ್ತಾರೆ. ಮಗ ಕೆ.ಜೆ. ಬಾಲ­ಕೃಷ್ಣ ಹೊಳ್ಳ ಅವರು ಅಮ್ಮ­ನಿಗೆ ಸಹಾಯ ಮಾಡು­ತ್ತಾರೆ.
ವಿದ್ಯಾ ಪ್ರತಿ­ಷ್ಠಾನ:



ವಿದ್ಯಾ­ಸೇ­ವೆಯ ಉದ್ದೇ­ಶ­ದಿಂ­ದಲೇ `ಮೀ­ನಾ­ಕ್ಷಿ­ಹೊಳ್ಳ ವಿದ್ಯಾ ಪ್ರತಿ­ಷ್ಠಾನ'ವನ್ನು ತೆರೆ­ಯ­ಲಾ­ಗಿದೆ. ಆರ್ಥಿಕ ಚೈತನ್ಯ ಇಲ್ಲದ ಮಕ್ಕ­ಳಿಗೆ ಈ ವಿದ್ಯಾ ಪ್ರತಿ­ಷ್ಠಾ­ನದ ಮೂಲಕ ವಿದ್ಯಾ­ದಾನ ಮಾಡ­ಲಾ­ಗು­ತ್ತದೆ. ಆಶ್ರ­ಮದ ಹಿರಿ­ಯರು ಹಾಗೂ ಶಾಲೆಯ ಮಕ್ಕ­ಳನ್ನು ಮೀನಾಕ್ಷಿ ಹೊಳ್ಳ ತಮ್ಮ­ವ­ರಂತೆ ಪ್ರೀತಿ­ಸು­ತ್ತಾರೆ.
ಮುಂದೆಯೂ ಆಶ್ರ­ಮದ ಸೇವೆ ನಿರಂ­ತ­ರ­ವಾಗಿ ನಡೆ­ಯ­ಬೇಕು ಅನ್ನು­ವುದೇ ಮೀನಾಕ್ಷಿ ಹೊಳ್ಳರ ಆಸೆ. ಹಿರಿಯ ಜೀವ­ಗಳ ಬಗ್ಗೆ ಕಾಳಜಿ ಉಳ್ಳ ಯಾರು ಬೇಕಾ­ದರೂ ಈ ಆಶ್ರ­ಮಕ್ಕೆ ತಮ್ಮ ಕೈಲಾದ ಸಹಾಯ ಸಲ್ಲಿ­ಸ­ಬ­ಹುದು. ಕಡೇ ಪಕ್ಷ ಹಿರಿ­ಯ­ರಿಗೆ ಒಂದು ಹೊತ್ತಿನ ಊಟ ಹಾಕಿ­ಸುವ ವ್ಯವ­ಸ್ಥೆ­ಯನ್ನೂ ಮಾಡ­ಬ­ಹುದು.

ಸುಕ­ನ್ಯಾ­ರಾ­ಮ್‌­ಗೋ­ಪಾಲ್‌




ಸುಕನ್ಯಾ `ಘಟಂ' ದಿಟಂ!


ಹೃದಯ ನಮ್ಮೊ­ಳಗೇ ಇದ್ದರೂ ಹೃದ­ಯ­ವಂ­ತ­ರಾ­ಗಲು ನಾವು ಸೋತು ಹೋಗು­ತ್ತೇವೆ. ಹೃದ­ಯ­ಸಾ­ಮೀ­ಪ್ಯಕ್ಕೆ ಎಷ್ಟೇ ಯತ್ನಿ­ಸಿ­ದರೂ ಅದು ನಮ್ಮಿಂದ ಒಂದು ಅಂತರ ಕಾಯ್ದು­ಕೊ­ಳ್ಳು­ತ್ತದೆ. ಹೃದ­ಯಕ್ಕೆ ಸಮೀ­ಪ­ವಾ­ಗುವ ಭರ­ದಲ್ಲಿ ನಾವು ಏನೇ­ನನ್ನೋ ಸೃಷ್ಟಿ­ಸಿ­ದ್ದೇವೆ. ಬಹುಶಃ ಸಂಗೀತ ವಾದ್ಯ­ಗಳು......! ಹೌದು. ಹೃದಯ ಬಡಿ­ತಕ್ಕೂ ವಾದ್ಯದ ತಾಳಕ್ಕೂ ಎಲ್ಲೋ ಒಂದು ಹೋಲಿಕೆ ಇದೆ. ಪಂಚ­ಭೂ­ತ­ಗ­ಳಿಂದ(ಭೂಮಿ, ಜಲ, ಗಾಳಿ, ಅಗ್ನಿ, ಆಕಾಶ) ರಚ­ನೆ­ಗೊಂಡ ತಾಳ ವಾದ್ಯ ಘಟಂ. ಇದು ಹೃದ­ಯಕ್ಕೆ ಬಹಳ ಸಮೀಪ. ಘಟಂನ ಡೊಳ್ಳು ಹೊಟ್ಟೆ­ಯೊ­ಳ­ಗಿಂದ ಬರುವ ತಣ ತಣ ತಣ... ಶಬ್ದಕ್ಕೆ ಹೃದಯ ಕರ­ಗಿ­ಸುವ ಶಕ್ತಿ ಇದೆ. ಈ ವಾದ್ಯ ಹೃದ­ಯ­ದಷ್ಟೇ ಸೂಕ್ಷ್ಮ. ಅದೇ ರೀತಿ ತನ್ನೆಲ್ಲಾ ಹತ್ತು ಬೆರ­ಳು­ಗಳ ಬಳಸಿ ನುಡಿ­ಸುವ ಕಲಾ­ವಿದ ಕೂಡ ಅಷ್ಟೇ ಸೂಕ್ಷ್ಮ!
ಖ್ಯಾತ ಘಟಂ ವಾದಕಿ ಸುಕನ್ಯಾ ರಾಮ್‌­ಗೋ­ಪಾಲ್‌ ಅವರು ನುಡಿ­ಸುವ ಆರು ಘಟ­ಗಳ `ಘಟಂ ತಂರಂಗಂ' ವಾದ­ನ­ವ­ನ್ನೊಮ್ಮೆ ಕೇಳಿ­ದರೆ ಹೃದಯ ಕಂಪಿ­ಸು­ತ್ತದೆ. ಬೇರೆ ಬೇರೆ ಶೃತಿಯ ಘಟ­ಗಳ ನಡುವೆ ಕುಳಿತು ನುಡಿ­ಸು­ವಾಗ ಅವರ ಕೈ ಬೆರ­ಳು­ಗಳ ಚೈತನ್ಯ ಬೆರಗು ಸೃಷ್ಟಿ­ಸು­ತ್ತದೆ. ಸುಕ­ನ್ಯಾರ ಆ ಎನ­ರ್ಜಿಗೆ ಪಂಚ­ಭೂ­ತ­ಗಳ ಆ ವಾದ್ಯ ಮಲ್ಲಿ­ಗೆ­ಯಾಗಿ ಮಂದ­ಹಾಸ ಬೀರು­ತ್ತದೆ! ಘಟ­ದಷ್ಟೇ ಸುಕನ್ಯಾ ರಾಮ್‌­ಗೋ­ಪಾಲ್‌ ಕೂಡ ಸೂಕ್ಷ್ಮರು. ಆ ಮಡಿ­ಕೆಯ ಕಣ­ಗ­ಳನ್ನು ಪರಿ­ಪ­ಕ್ವ­ವಾಗಿ ಅರಿ­ತ­ವರು.
ಮಹಿ­ಳೆ­ಯ­ರಲ್ಲಿ ಘಟ ನುಡಿ­ಸು­ವ­ವರು ಬೆರ­ಳೆ­ಣಿ­ಕೆ­ಯಷ್ಟು ಮಂದಿ ಮಾತ್ರ. ಅವರು ಕಲಿ­ಯುವ ಕಾಲಕ್ಕೆ ಇರಲೇ ಇಲ್ಲ. ದೇಶದ ಪ್ರಥಮ ಘಟ ವಿದುಷಿ ಎಂಬ ಬಿರುದು ಕೂಡ ಸುಕ­ನ್ಯಾ­ರಿಗೇ ಸಲ್ಲು­ತ್ತದೆ. ಇವತ್ತು ಬಹಳ ಮಂದಿ ಯುವ­ತಿ­ಯರು ಮೃದಂಗ, ಘಟಂ ನುಡಿ­ಸು­ತ್ತಾರೆ ಅಂದರೆ ಅದ­ಕ್ಕೆಲ್ಲಾ ಪ್ರೇರಣೆ ಸುಕನ್ಯಾ ಅವರೇ. ಸುಕನ್ಯಾ ಇಡೀ ರಾಷ್ಟ್ರದ ಖ್ಯಾತ ನಾಮ ಕಲಾ­ವಿ­ದರ ಜೊತೆ­ಯಲ್ಲಿ ಪಕ್ಕ­ವಾ­ದ್ಯ­ವಾಗಿ ಘಟ ನುಡಿ­ಸಿ­ದ್ದಾರೆ. ಹಲವು ದೇಶ­ಗ­ಳಿಗೆ ಹೋಗಿ ಬಂದಿ­ದ್ದಾರೆ. ಕಳೆದ ಮೂರು ದಶ­ಕ­ಗ­ಳಿಂದ ಘಟ­ಕ್ಕಾಗಿ ತಮ್ಮನ್ನು ಕೊಟ್ಟು­ಕೊಂ­ಡಿ­ದ್ದಾರೆ. ಒಬ್ಬ ಮಹಿ­ಳೆ­ಯಾಗಿ ಪುರು­ಷರು ಮಾತ್ರ ನುಡಿ­ಸು­ತ್ತಿದ್ದ ಘಟ ನುಡಿ­ಸುವ ಧೈರ್ಯ­ಮಾಡಿ ಯಶ­ಸ್ವಿ­ಯಾಗಿ ಅಂತಾ­ರಾ­ಷ್ಟ್ರೀಯ ಮಟ್ಟ­ದಲ್ಲಿ ಮಾನ್ಯತೆ ಪಡೆ­ದಿ­ದ್ದಾರೆ. ಆಕಾ­ಶ­ವಾ­ಣಿ­ಯಲ್ಲಿ `ಎ' ಗ್ರೇಡ್‌ ಕಲಾ­ವಿ­ದೆ­ಯಾದ ಅವರು ಅಪ­ರೂ­ಪದ ಕಲಾ­ವಿದೆ.
ಸುಕನ್ಯಾ ರಾಮ್‌­ಗೋ­ಪಾಲ್‌ ಅವರ ಮೂಲ ಚೆನ್ನೈ­ನಿಂದ ಆರಂ­ಭ­ವಾ­ಗು­ತ್ತದೆ. ಅವರು `ತ­ಮಿಳು ತಾತ' ಎಂದೇ ಖ್ಯಾತ­ರಾ­ಗಿ­ರುವ ಮಹಾ­ಮ­ಹೋ­ಪಾ­ಧ್ಯಾಯ ಡಾ. ಯು.ವಿ. ಸ್ವಾಮಿ­ನಾಥ ಐಯ್ಯರ್‌ ಅವರ ಮೊಮ್ಮ­ಗಳು. ಸುಕ­ನ್ಯಾ­ರಿಗೆ ಸಂಸ್ಕಾ­ರವೇ ಮೂಲ ಆಸ್ತಿ. ತಂದೆ ಕೆ. ಸುಬ್ರ­ಮಣ್ಯ ತಾಯಿ ರಂಗ­ನಾ­ಯಕಿ. ಅವರೂ ಸಂಗೀತ ತಿಳಿ­ದ­ವರು.
ಆರಂ­ಭ­ದಲ್ಲಿ ಅವರು ಹಾಡು­ಗಾ­ರಿಕೆ ಅಭ್ಯಾಸ ಮಾಡಿ­ದರು. ನಂತರ ಟಿ.ಎಚ್‌. ಗುರು­ಮೂರ್ತಿ ಅವರ ಬಳಿ ವೈಲಿನ್‌ ಕಲಿ­ತರು. ಆನಂ­ತರ ತಮ್ಮಿ­ಷ್ಟದ ತಾಳ­ವಾದ್ಯ ಘಟಂ ಕಡೆ ಹೊರ­ಳಿ­ದರು. ಶ್ರೀ ಜೈ ಗಣೇಶ ತಾಳ­ವಾದ್ಯ ಸಂಗೀತ ಶಾಲೆಯ ಸ್ಥಾಪಕ ಟಿ.ಆರ್‌. ಹರಿ­ಹರ ಶರ್ಮ ಅವರ ಪ್ರಥಮ ಗುರು­ಗಳು. ಆ ಮೇಲೆ ಭಾರ­ತೀಯ ಸಂಗೀ­ತದ ದಂತ­ಕತೆ `ವಿಕ್ಕು' ವಿನಾ­ಯಕ ರಾಮ್‌ ಅವರ ಗುರು­ಗ­ಳಾ­ದರು. ಸಕ­ನ್ಯಾರ ಪ್ರತಿ­ಭೆ­ಯನ್ನು ಹೊರ ತೆಗೆ­ಯು­ವಲ್ಲಿ ವಿಕ್ಕು ಯಶ­ಸ್ವಿ­ಯಾ­ದರು. ಸುಕನ್ಯಾ ಎಂಬ `ಮುತ್ತು' ಸೃಷ್ಟಿ­ಸಿ­ದರು.
ಸುಕನ್ಯಾ 1983ರಲ್ಲಿ ಸಂಗೀತ ರಸಿಕ ರಾಮ್‌­ಗೋ­ಪಾಲ್‌ ಅವ­ರನ್ನು ಕೈ ಹಿಡಿದು ಬೆಂಗ­ಳೂರು ಸೇರಿ­ದರು. ರಾಮ್‌­ಗೋ­ಪಾಲ್‌ ಅವರು ಸುಕ­ನ್ಯಾ­ರಿ­ಗಾಗಿ ಹಲವು ತ್ಯಾಗ ಮಾಡಿ­ದರು. ಪತಿ ನೀಡಿದ ಪ್ರೋತ್ಸಾಹ ಸುಕನ್ಯಾ ಹಲವು ಅದ್ಭು­ತ­ಗ­ಳನ್ನು ನಿರ್ಮಿ­ಸಲು ಸಾಕ್ಷಿ­ಯಾ­ಯಿತು.

ಸ್ತ್ರೀ ತಾಲ್‌ ತರಂಗ್‌:
ಸುಕ­ನ್ಯಾರ ಕನ­ಸಿನ ಕೂಸಾದ `ಘಟಂ ತರಂಗಂ' ನಂತರ ಅವರು ಮಾಡಿದ ಇನ್ನೊಂದು ಪ್ರಯೋಗ ಸ್ತ್ರೀ ತಾಲ್‌ ತರಂಗ್‌. ಇಲ್ಲಿ ಘಟಂ ಜೊತೆಗೆ ಬೇರೆ ಮಹಿಳಾ ವಾದ್ಯ­ಗಾ­ರ್ತಿ­ಯರು ತಮ್ಮ ವೈಲಿನ್‌, ವೀಣಾ, ಮೃದಂಗ ವಾದ್ಯ­ಗ­ಳನ್ನು ಜೊತೆ­ಗೂ­ಡಿ­ತ್ತಾರೆ. ಇದು ಒಂದೇ ಪಿಚ್‌(ಆ­ಕ್ಟೇವ್‌)ನ­ಲ್ಲಿ­ರುವ ಕಾರಣ ಸಕನ್ಯಾ ಅವರೇ ಸ್ವತಃ ಸಂಯೋ­ಜಿ­ಸಿದ ಕೃತಿ, ಕಲ್ಪನಾ ಸ್ವರ, ಪಲ್ಲ­ವಿ­ಗ­ಳನ್ನು ನುಡಿ­ಸು­ತ್ತಾರೆ. ಆ ಮೂಲಕ ಒಬ್ಬ ಸಂಗೀತ ಸಂಯೋ­ಜ­ಕಿ­ಯಾ­ಗಿಯೂ ಸುಕನ್ಯಾ ಗುರು­ತಿ­ಸಿ­ಕೊಂ­ಡಿ­ದ್ದಾರೆ. ಸ್ತ್ರೀತಾಲ್‌ ತರಂಗ್‌ ಮೂಲಕ ಪಕ್ಕ­ವಾ­ದ್ಯ­ವಾದ ಘಟಂಗೆ ಮುಖ್ಯ ಸ್ಥಾನ ಕೊಟ್ಟಿದ್ದು ಸುಕ­ನ್ಯಾರ ಬಹಳ ದೊಡ್ಡ ಸಾಧನೆ.

ಘಟಕ್ಕೆ ಕಡೆಯ ಸ್ಥಾನ:
ಕರ್ನಾ­ಟಕ ಸಂಗೀ­ತ­ಗಾ­ರರು ಇವ­ತ್ತಿಗೂ ಘಟಕ್ಕೆ ಮನ್ನಣೆ ಕೊಟ್ಟಿಲ್ಲ. ಅವ­ರಿಗೆ ತಮ್ಮ ಪ್ರತಿಭೆ ತೋರಲು ಅವ­ಕಾ­ಶವೂ ಇಲ್ಲ. ಗಾಯನ, ವೈಲಿನ್‌, ಮೃದಂಗ, ಮೊರ್ಚಿಂಗ್‌, ಕಂಜೀರಾ ಆದ ಮೇಲೆ ಘಟಕ್ಕೆ ಸ್ಥಾನ, ಅದೂ ಗಾಯ­ಕರ ಹಿಂದೆ. ಇದು ಸುಕ­ನ್ಯಾ­ರನ್ನು ಏನಾ­ದರೂ ಹೊಸ­ತೊಂ­ದನ್ನು ಪ್ರಯೋಗ ಮಾಡು­ವಂತೆ ಪ್ರೇರೇ­ಪಿ­ಸಿತು. ಆ ಹಾದಿ­ಯಲ್ಲಿ ಘಟಂ ತರಂಗಂ, ಸ್ತ್ರೀ ತಾಲ್‌ ತರಂಗಂ ಪ್ರಯೋಗ ಮಾಡಿ ಯಶ­ಸ್ವಿ­ಯಾ­ದರು. ಆ ಮೂಲಕ ಘಟಕ್ಕೆ ಒಂದು ಹೊಸ ಸ್ವರೂ­ಪ­ವನ್ನೇ ಸೃಷ್ಟಿ­ಸಿ­ದರು.
ವರ್ಲ್ಡ್‌ ಸ್ಪೇಸ್‌ ರೇಡಿ­ಯೋ­ದಲ್ಲಿ ಸುಕ­ನ್ಯಾರ ತರಂಗ್‌ ಪ್ರಸಾ­ರ­ವಾ­ಗಿವೆ. `ರೈ­ನ್‌ಬೋ' ಆಲ್ಬಮ್‌ ಕೂಡ ಹೊರ­ತಂ­ದಿ­ದ್ದಾರೆ. ಅಸಂ­ಖ್ಯಾತ ಕಚೇರಿ ನಡೆ­ಸಿ­ದ್ದಾರೆ. 2010ರ ಹೊಸ­ವರ್ಷ ಜ.1ರಂದು ಚೆನ್ನೈನ ಪ್ರತಿ­ಷ್ಠಿತ `ಮ­ದ್ರಾಸ್‌ ಮ್ಯೂಸಿಕ್‌ ಅಕಾ­ಡೆ­ಮಿ­ಯಲ್ಲಿ ತಮ್ಮ ಸ್ತ್ರೀ ತಾಲ್‌ ತರಂಗ್‌ ಕಚೇರಿ ನೀಡು­ತ್ತಿ­ದ್ದಾರೆ. ಇದು ಸುಕ­ನ್ಯಾರ ಸಾಧ­ನೆಗೆ ಧಕ್ಕಿದ ಮಹತ್ವ.
ಸುಕ­ನ್ಯಾ­ರಿಗೆ ಅಸಂ­ಖ್ಯಾತ ಪ್ರಶಸ್ತಿ ಬಿರು­ದು­ಗಳು ಅರಸಿ ಬಂದಿವೆ. ಈ ವರ್ಷದ ಗಾಯನ ಸಮಾಜ ಸಮ್ಮೇ­ಳ­ನ­ದಲ್ಲಿ `ವ­ರ್ಷದ ಕಲಾ­ವಿದೆ' ಪ್ರಶ­ಸ್ತಿಗೆ ಪಾತ್ರ­ರಾ­ಗಿ­ದ್ದಾರೆ.
ಬೆಂಗ­ಳೂ­ರಿನ ಯಶ­ವಂ­ತ­ಪು­ರ­ದಲ್ಲಿ ಸುಕ­ನ್ಯಾರ ವಾಸ. ಮಗಳು ರಾಧಾ. ಮಗ ನಾರಾ­ಯಣ್‌ ಪ್ರಭು. ಇಬ್ಬರೂ ಸಾಪ್ಟ್‌­ವೇರ್‌ ಇಂಜಿ­ನಿ­ಯರ್ಸ್‌, ಜೊತೆಗೆ ಸಂಗೀ­ತ­ಗಾ­ರರು. `ಘಟ ನುಡಿ­ಸುವ ಬಗೆ' ಪುಸ್ತಕ ಬರೆ­ಯುವ ಹಾಗೂ ಒಂದು ಸಂಗೀತ ಶಾಲೆ ರಚಿ­ಸುವ ಕನ­ಸಿ­ನೊಂ­ದಿಗೆ ಸುಕ­ನ್ಯಾ­ರಾ­ಮ್‌­ಗೋ­ಪಾಲ್‌ ಅವರ ಘಟ ಹೃದಯ ತಟ್ಟು­ತ್ತಿದೆ

Tuesday, November 3, 2009

ಎನ್‌. ರಾಧಾ­ಕೃಷ್ಣ


ಪರ­ಮಾ­ತ್ಮ­ನಿಗೆ `ರಾ­ಧಾ­ಕೃಷ್ಣ' ಸ್ವರೂಪ


ದೇಗು­ಲದ ಗರ್ಭ­ಗು­ಡಿಯೇ ಅವರ ಪ್ರಯೊಗ ಶಾಲೆ. ಮನ­ಸ್ಸಿ­ನಲ್ಲಿ ಮೂಡಿದ ಕಲ್ಪ­ನೆಯೇ ಫಾರ್ಮುಲ. ಮುತ್ತು, ರತ್ನ, ವಜ್ರ, ವಸ್ತ್ರ, ವಡೆವೆ, ಧೂಪ, ಕರ್ಪೂ­ರ­ಗಳೇ ಸಂಪ­ನ್ಮೂಲ. ಭಗ­ವಂ­ತನೇ ಅವರ ಪ್ರಾಯೋ­ಗಿಕ ವಸ್ತು! ಶಂಕ, ಚಕ್ರ, ಗಧೆ, ತ್ರಿಶೂ­ಲ­ಗಳೇ ಉಪ­ಕ­ರಣ. ಅಭ­ಯಾಸ್ತ, ವರ­ದಾ­ಸ್ತ­ಗಳೇ ಕ್ಷ ಕಿರಣ........ಅ­ವರ ಪ್ರಯೋ­ಗ­ದಿಂದ ಭಕ್ತಿಯ ಸಾಗರ ಹರಿ­ಯು­ತ್ತದೆ. ಭಗ­ವಂ­ತ­ನಿಗೆ ರೂಪ ಕೊಡುವ ಅವರು ಭಕ್ತಿ­ಸಾ­ಗ­ರ­ದಲ್ಲಿ ತೊಯ್ದು ತೇವ­ಗೊ­ಳ್ಳು­ತ್ತಾರೆ!
ಅವರು ಎನ್‌. ರಾಧಾ­ಕೃಷ್ಣ. ದೇವರ ಅಲಂ­ಕಾರ ವಿದ್ವಾಂ­ಸರು. ಚಿತ್ರ­ಕಲಾ ಕಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ. ಹಲವು ದೇವಾ­ಲ­ಯ­ಗ­ಳಲ್ಲಿ ಅಲಂ­ಕಾರ ಮಾಡುವ ಹಾಗೂ ಪರ­ಮಾ­ತ್ಮನ ಮೂರುತಿ ರಚಿ­ಸುವ ಇವರ ಕಲ್ಪ­ನೆ­ಯೊ­ಳಗೆ ಭಗ­ವಂ­ತನ ಸಾಕ್ಷಾ­ತ್ಕಾ­ರ­ವಾ­ಗಿದೆ.
ರಾಧಾ­ಕೃಷ್ಣ ಅವರು ಗಣ­ಪ­ತಿ­ಯನ್ನು ವಿಧ ವಿಧ­ವಾಗಿ ಕಂಡಿ­ದ್ದಾರೆ. ಧಾನ್ಯ­ಗ­ಳನ್ನು ಕೂಡಿ­ಡುವ ಬಳ್ಳ, ಮಡಿಕೆ ಹಾಗೂ ಮನೆ ಬಳ­ಕೆಯ ಮೊರ­ಗ­ಳಲ್ಲಿ ಗಣ­ಪ­ನನ್ನು ಚಿತ್ರಿ­ಸಿ­ದ್ದಾರೆ. ಮೂರು ಯುಗ ಹಳೆ­ಯ­ದಾದ ಮುಳ­ಬಾ­ಗಿಲು ಸಮೀ­ಪದ ಕುರು­ಡು­ಮಲೆ ಗಣಪ ಇವ­ರಿಂದ ಮೇಕಪ್‌ ಮಾಡಿ­ಸಿ­ಕೊಂ­ಡಿ­ದ್ದಾನೆ! ಬೆಂಗ­ಳೂ­ರಿನ ಬಿನ್ನಿ ಮಿಲ್‌ ಸಮೀ­ಪದ ಉದ್ಬ­ವ­ಮೂರ್ತಿ ಸ್ವಯಂಭೋ ನಾಗ­ರಾಜ ಬಾಲ ಸುಬ್ರ­ಮ­ಣ್ಯ­ನಿಗೆ 50 ಕೆಜಿ ಬೆಣ್ಣೆ­ಯಿಂದ ಸರ್ಪದ ಎಡೆ ಸೃಷ್ಟಿ­ಸಿ­ದ್ದಾರೆ. ಮೈಸೂ­ರಿನ ಸಚ್ಚಿ­ದಾ­ನಂದ ಆಶ್ರ­ಮ­ದಲ್ಲಿ ನವ­ರತ್ನ ಖಚಿತ ಶಿವ­ಲಿಂಗ ರೂಪಿ­ಸಿ­ದ್ದಾರೆ. ಆಂಜ­ನೇ­ಯನ ಮೇಲಂತೂ ಅಪಾರ ಪ್ರಯೋಗ ಮಾಡಿ­ದ್ದಾರೆ! ಸ್ವಾತಿ­ಮುತ್ತು ಮತ್ತು ಕಪ್ಪೆ­ಚಿ­ಪ್ಪಿನ ಆಂಜ­ನೇ­ಯರು ಪ್ರಸಿ­ದ್ಧರು.
ಮಹಾ­ಲಕ್ಷ್ಮಿ ಲೇಔ­ಟ್‌ನ ಕನ್ನಿಕಾ ಪರ­ಮೇ­ಶ್ವ­ರಿಗೆ ಕಾಮಾಕ್ಷಿ ಅಲಂ­ಕಾರ ಹಾಗೂ ಗಾಯತ್ರಿ ಅಲಂ­ಕಾರ. ವರ­ಮ­ಹಾ­ಲ­ಕ್ಷ್ಮಿಗೆ ಕಳಶ ಅಲಂ­ಕಾ­ರ­ಗಳ ಐಭೋಗ. ನಂಜನ ಗೂಡಿನ ಶ್ರೀಕಂ­ಠೇ­ಶ್ವರ, ಶಿಡ್ಲ­ಘಟ್ಟ ಶಂಕ­ರ­ಮ­ಠದ ಶಾರ­ದಾಂಬೆ ಹಾಗೂ ಶಂಕ­ರಾ­ಚಾ­ರ್ಯರು, ಶಿಡ್ಲ­ಘ­ಟ್ಟದ ಗಣೇಶ ಸೇರಿ­ದಂತೆ ಕೆ.ಆರ್‌. ನಗರ ಹಾಗೂ ಹುಣ­ಸೂರು ದೇವಾ­ಲ­ಗ­ಳ­ಗ­ಳಲ್ಲೂ ಅಲಂ­ಕಾರ ಮಾಡಿ­ದ್ದಾರೆ.
ವಿಶೇಷ ಹಬ್ಬ ಹರಿ­ದಿ­ನ­ಗ­ಳಲ್ಲಿ ರಾಧಾ­ಕೃಷ್ಣ ದೇವರ ಅಲಂ­ಕಾ­ರ­ದಲ್ಲಿ ಬಿಡು­ವಿ­ಲ್ಲದೆ ಮಗ್ನ. ದೇವಾ­ಲಯ ಅಲಂ­ಕಾ­ರದ ಜೊತೆಗೆ ಮನೆ­ಗ­ಳಲ್ಲಿ ಆಯೋ­ಜಿ­ಸುವ ಪೂಜೆ­ಗ­ಳಲ್ಲೂ ದೇವರ ವಿಗ್ರಹ ಮಾಡಿ ಅಲಂ­ಕಾರ ಮಾಡು­ತ್ತಾರೆ. ದೇವರ ಹೆಸರು ಹೇಳಿ­ದರೆ ಸಾಕು, ಕಲ್ಪ­ನೆ­ಯೊ­ಳಗೆ ಭಗ­ವಂ­ತ­ನಿಗೆ ರೂಪ ಕೊಟ್ಟು ನಂತರ ಕೃತಿ­ಗಿ­ಳಿ­ಸು­ತ್ತಾರೆ. ದೇವರ ಬಗ್ಗೆ ಓದು ಹಾಗೂ ಕೇಳಿದ ಕತೆ­ಗಳು ಸ್ವರೂಪ ಕೊಡಲು ಸಹಾಯ ಮಾಡು­ತ್ತವೆ. ಅಲಂ­ಕಾ­ರಕ್ಕೆ ಅವ­ಶ್ಯ­ವಿ­ರುವ ಎಲ್ಲಾ ವಸ್ತು­ಗ­ಳನ್ನು ತಾವೇ ತಯಾ­ರಿ­ಸಿ­ಕೊ­ಳ್ಳು­ತ್ತಾರೆ. ರೆಡಿ­ಮೇಡ್‌ ವಸ್ತು­ಗ­ಳನ್ನು ಬಳ­ಸ­ದಿ­ರು­ವುದು ವಿಶೇಷ.
ದೀಪಾ­ವಳಿ ಲಕ್ಷ್ಮಿ­ಪೂ­ಜೆ­ಯಲ್ಲಿ ಮಾಡಿದ ಲಕ್ಷ್ಮಿ ವಿಗ್ರಹ ಹಾಗೂ ಅಲಂ­ಕಾ­ರ­ವನ್ನು ಟಿವಿ 9 ವಾಹಿನಿ ವಿಶೇಷ ಕಾರ್ಯ­ಕ್ರ­ಮ­ವಾಗಿ ಪ್ರಸಾರ ಮಾಡಿದೆ. ಕೊಳ­ಲ­ನೂ­ದುತ ನವಿ­ಲು­ಗರಿ ಕೆಳಗೆ ಪವ­ಡಿ­ಸಿ­ರುವ ಶ್ರೀಕ­ಷ್ಣನ ಕೃತಿ­ಯನ್ನು ಶ್ರೀಕೃಷ್ಣ ಜನ್ಮಾ­ಷ್ಟ­ಮಿ­ಯಂದು ಜೀ ಕನ್ನಡ ವಾಹಿನಿ ಪ್ರಸಾರ ಮಾಡಿದೆ. ಅಲ್ಲದೆ ಮನೆ­ಗ­ಳಿಗೂ ವಿಗ್ರಹ ಮತ್ತು ಅಲಂ­ಕಾರ ಮಾಡು­ತ್ತಾರೆ. ಚಿತ್ರ­ನಟಿ ತಾರಾ ಅವರ ಮನೆಗೆ ತೆಂಗಿನ ಗರಿ­ಯಲ್ಲಿ ಸತ್ಯ­ನಾ­ರಾ­ಯಣ ಪೂಜೆಗೆ ದೇಗುಲ ನಿರ್ಮಿ­ಸಿದ್ದು ಅವರ ವಿಶೇ­ಷ­ಗ­ಳ­ಲ್ಲೊಂದು. ಇಷ್ಟರ ಜೊತೆಗೆ ಪೂಜೆಗೆ ಪೌರೋ­ಹಿ­ತ್ಯ­ವನ್ನೂ ಮಾಡ­ಬ­ಲ್ಲರು! ಚಿತ್ರ­ಕ­ಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ: ದೇವರ ಅಲಂ­ಕಾ­ರದ ಜೊತೆಗೆ ರಾಧಾ­ಕೃಷ್ಣ ಅವರು ಚಿತ್ರ­ಕಲಾ ಕಲಾ­ವಿದ ಹಾಗೂ ವಸ್ತ್ರ ವಿನ್ಯಾ­ಸಕ. ಬೆಂಗ­ಳೂ­ರಿನ `ಕೆನ್‌ ಸ್ಕೂಲ್‌ ಆಫ್‌ ಆರ್ಟ್ಸ್‌'ನಲ್ಲಿ ಪದವಿ ಗಳಿ­ಸಿ­ರುವ ಅವರು ನೂರಾರು ಕಲಾ­ಕೃತಿ, ಭಿತ್ತಿ­ಚಿತ್ರ ರಚಿ­ಸಿ­ದ್ದಾರೆ. ಪದವಿ ನಂತರ ಜೆ.ಪಿ. ಟೆಕ್ಸ್‌­ಟೈ­ಲ್ಸ್‌­ನಲ್ಲಿ ಕ್ರಿಯೆ­ಟಿವ್‌ ಡಿಸೈ­ನರ್‌ ಆಗಿ ಕೆಲಸ ಮಾಡಿ­ದ್ದಾರೆ. ಖ್ಯಾತ ಬಟ್ಟೆ ರಪ್ತು ಉದ್ಯಮ `ಗೋ­ಕುಲ್‌ ದಾಸ್‌ ಎಕ್ಸ್‌­ಪೋರ್ಟ್ಸ'ನಲ್ಲಿ ವಿನ್ಯಾ­ಸ­ಕಾ­ರ­ರಾಗಿ 9 ವರ್ಷ­ಗಳ ಕಾಲ ಕೆಲಸ ಮಾಡಿ­ದ್ದಾರೆ. ಜೊತೆಗೆ `ಸ್ವಾತಿ ಡಿಸೈನ್‌'ಗೂ ವಿನ್ಯಾಸ ಮಾಡಿ­ದ್ದಾರೆ. ಈಗ ಸ್ವತಂ­ತ್ರ­ವಾಗಿ ಮನೆ­ಯಲ್ಲೇ ದೇವರ ಅಲಂ­ಕಾರ ಹಾಗೂ ಚಿತ್ರ­ಕ­ಲೆ­ಯಲ್ಲಿ ತೊಡ­ಗಿ­ಕೊಂ­ಡಿ­ದ್ದಾರೆ.
ಉದ್ಯಮಿ ದಿನೇಶ್‌ ಹಿಂದುಜಾ ಅವ­ರಿಗೆ ಮಾಡಿ­ಕೊಟ್ಟ `ರಾ­ಧ­ಕೃಷ್ಣ' ಬಿತ್ತಿ­ಚಿತ್ರ, ಕುಟೀರ ರೆಸಾ­ರ್ಟ್‌ಗೆ ಮಾಡಿದ ಕೃತಿ­ಗಳು, ಮೈಸೂ­ರಿನ ದೀಕ್ಷಿತ್‌ ಆಸ್ಪ­ತ್ರೆಗೆ ಮೃತ್ಯುಂ­ಜಯ ಪೋಟ್ರೈಟ್‌, ಗಣ­ಪತಿ ಸಚ್ಚಿ­ದಾ­ನಂದ ಆಶ್ರ­ಮಕ್ಕೆ ಹಲವು ಕಲಾ­ಕೃ­ತಿ­ಗ­ಳನ್ನು ರಚಿ­ಸಿ­ದ್ದಾರೆ.
ಬೆಂಗ­ಳೂ­ರಿನ ತಾತ­ಗು­ಣಿ­ಯ­ಲ್ಲಿ­ರುವ ಸ್ವಾನಂದ ಆಶ್ರ­ಮದ ಕಲಾ ಮಹೋ­ತ್ಸ­ವ­ದಲ್ಲಿ ರಾಧಾ­ಕೃಷ್ಣ ರಚಿ­ಸಿದ ಜಾನ­ಪದ ವೇದಿಕೆ ಮೆಚ್ಚು­ಗೆಗೆ ಪಾತ್ರ­ವಾ­ಗಿದೆ. ಆ ಇಡೀ ಮಹೋ­ತ್ಸ­ವ­ವನ್ನು ಜಾನ­ಪದ ಪರಿ­ಕ­ಲ್ಪ­ನೆ­ಯಲ್ಲಿ ರಚನೆ ಮಾಡಿ­ದ್ದರು. ಹೆಬ್ಬಾ­ಗಿ­ಲಿ­ನಿಂದ ಹಿಡಿದು ಮುಖ್ಯ ವೇದಿ­ಕೆ­ಯ­ವ­ರೆಗೂ ಜಾನ­ಪ­ದವೇ ತುಂಬಿ ಅಪಾರ ಜನರ ಮೆಚ್ಚು­ಗೆಗೆ ಪಾತ್ರ­ವಾ­ಯಿತು. ಅಲ್ಲದೆ ರಾಧಾ­ಕೃ­ಷ್ಣರ ಕೃತಿ­ಗ­ಳನ್ನು ಕ್ಯಾಲೆಂ­ಡ­ರ್‌­ಗ­ಳಿಗೆ, ಪ್ರಶಸ್ತಿ ಮೊಮೆಂ­ಟೋ­ಗ­ಳಿಗೆ ಬಳ­ಸಿ­ಕೊ­ಳ್ಳ­ಲಾ­ಗಿದೆ.
ಜೀನ್ಸ್‌­ಪ್ಯಾಂಟ್‌ ಮೇಲೆ ಶೇಡ್ಸ್‌:
ದೇವರ ಅಲಂ­ಕಾರ ಹಾಗೂ ಚಿತ್ರ­ಕ­ಲೆಯ ಜೊತೆಗೆ ರಾಧಾ­ಕೃಷ್ಣ ಅವರು ವಸ್ತ್ರ­ವಿ­ನ್ಯಾ­ಸ­ಕರೂ ಹೌದು. ಜೀನ್ಸ್‌­ಪ್ಯಾಂ­ಟ್‌­ಗಳ ಮೇಲೆ ಶೇಡ್ಸ್‌ ಮಾಡುವ ವಿನ್ಯಾ­ಸ­ವನ್ನು ಬೆಂಗ­ಳೂ­ರಿ­ನಲ್ಲಿ ಮೊದಲು ಪರಿ­ಚ­ಯಿ­ಸಿ­ದ­ವರೇ ರಾಧಾ­ಕೃಷ್ಣ. ವಿಶಿಷ್ಟ ರಾಸಾ­ಯ­ನಿ­ಕ­ಗ­ಳನ್ನು ಬಳಸಿ ಕೊಟ್ಟ ಶೇಡಿಂಗ್‌ ವಿನ್ಯಾ­ಸ­ವನ್ನು ಯುವ ಸಮು­ದಾಯ ಒಪ್ಪಿ ಅಪ್ಪಿ­ಕೊಂ­ಡಿತು. ಇವತ್ತು ರಸ್ತೆ ರಸ್ತೆ­ಯಲ್ಲಿ ಶೇಡೆಡ್‌ ಜೀನ್ಸ್‌ ಸಿಗು­ತ್ತವೆ! ಅದು ಅವರ ದೊಡ್ಡ ಯಶಸ್ವಿ. ನಂತರ ಖ್ಯಾತ ಕಂಪ­ನಿ­ಗ­ಳಾದ ಲೀ ಜೀನ್ಸ್‌, ರ್ಯಾಂಗ್ಲರ್‌, ರೀಬಾಕ್‌, ಡೀಸೆಲ್‌, ನಿಕಿಯ ವಸ್ತ್ರ­ಗ­ಳಿಗೆ ಡಿಸೈನ್‌ ಮಾಡಿವ ಅವ­ಕಾಶ ದೊರೆ­ಯಿತು.
ಬ್ಯಾನ­ರ್‌­ನಿಂದ ಯಾತ್ರೆ ಆರಂಭ:
ರಾಧಾ­ಕೃಷ್ಣ ರಾಮ­ನ­ಗ­ರ­ದ­ವರು. ತಂದೆ ದಿ. ನಾಗ­ಭೂ­ಷಣ ಶಾಸ್ತ್ರೀ, ಕನ್ನಿಕಾ ಪರ­ಮೇ­ಶ್ವರಿ ದೇವಾ­ಲ­ಯ­ದಲ್ಲಿ ಅರ್ಚ­ಕ­ರಾ­ಗಿ­ದ್ದರು. ತಾಯಿ ಪಾರ್ವ­ತಮ್ಮ. ತಂದೆ ತಾಯಂ­ದಿ­ರಿಗೆ ಸಂಗೀತ ಗೊತ್ತಿತ್ತು. ಮನೆಯ ಮಕ್ಕ­ಳೆಲ್ಲಾ ಸಂಗೀತ ಹಾದಿ ಹಿಡಿ­ದರೆ, ರಾಧಾ­ಕೃಷ್ಣ ಕುಂಚ ಮತ್ತು ಬಣ್ಣದ ಹಿಂದೆ ನಡೆ­ದರು. ರಾಮ­ನ­ಗ­ರದ ........ಸಭಾ ಅವರ ಪ್ರತಿ­ಭೆಗೆ ವೇದಿ­ಕೆ­ಯಾ­ಯಿತು. ಸಭಾ­ದಿಂದ ಏನೇ ಕಾರ್ಯ­ಕ್ರಮ ನಡೆ­ದರೂ ಇವರ ಕುಟುಂ­ಬದ ಪಾಲು ಇರು­ತ್ತಿತ್ತು. ಇವ­ತ್ತಿಗೂ .......ಸಭಾ ಕಾರ್ಯ­ಕ್ರ­ಮ­ಗ­ಳಲ್ಲಿ ರಾಧಾ­ಕೃಷ್ಣ ಕುಟುಂಬ ಸಮೇ­ತ­ರಾಗಿ ಪಾಲ್ಗೊ­ಳ್ಳು­ತ್ತಾರೆ. ರಾಧಾ­ಕೃಷ್ಣ ಕಾರ್ಯ­ಕ್ರ­ಮ­ಗ­ಳಿಗೆ ಬ್ಯಾನರ್‌ ಬರೆ­ಯು­ತ್ತಿ­ದ್ದರು. ಆ ಮೂಲಕ ತಮ್ಮ ಕಲಾ ಯಾತ್ರೆ­ಯನ್ನು ಆರಂ­ಭಿ­ಸಿ­ದರು. ತಂದೆಯೂ ದೇವ­ರಿಗೆ ಅಲಂ­ಕಾರ ಮಾಡು­ತ್ತಿ­ದ್ದರು. ಅಲಂ­ಕಾ­ರ­ದಲ್ಲಿ ತಂದೆಯೇ ಗುರು. ಬೇರೆ ಬೇರೆ ಊರು­ಗ­ಳಿಗೆ ತಂದೆಯ ಜೊತೆ ಅಲಂ­ಕಾ­ರಕ್ಕೆ ತೆರ­ಳು­ತ್ತಿ­ದ್ದರು. ತಮಗೆ ಬೇಕಾದ ಸಣ್ಣ ಪುಟ್ಟ ಕಾಲೇಜು ಖರ್ಚು­ಗ­ಳನ್ನು ತಾವೇ ದುಡಿ­ದು­ಕೊ­ಳ್ಳು­ತ್ತಿ­ದ್ದರು. ಎಲ್ಲ­ದಕ್ಕೂ ಮನೆಯ ಮೇಲೆ ಅವ­ಲಂ­ಭಿ­ತ­ರಾ­ಗಿ­ರ­ಲಿಲ್ಲ. ಮನೆ­ಯಲ್ಲಿ ಅವ­ರಿಗೆ ಸಿಕ್ಕ ಸ್ವತಂತ್ರ ಎಲ್ಲೂ ವ್ಯರ್ಥ­ವಾ­ಗ­ಲಿಲ್ಲ!
ಇಲ್ಲೊಂದು ಶಿಸ್ತು ಸಂಹಿತೆ:
ರಾಧಾ­ಕೃಷ್ಣ ತಮ್ಮ ಕಾರ್ಯ­ದ­ಲ್ಲೊಂದು ಶಿಸ್ತು ಸಂಹಿ­ತೆ­ಯನ್ನು ಅನು­ಸ­ರಿ­ಸು­ತ್ತಾರೆ. ದೇವರ ಅಲಂ­ಕಾ­ರ­ದಲ್ಲಿ ಎಲ್ಲೂ ಶಾಸ್ತ್ರ ಮೀರಿ­ದ್ದಿಲ್ಲ. ಸೃಜ­ನ­ಶೀ­ಲ­ತೆ­ಗಾಗಿ ಶಿಸ್ತನ್ನು ಕಡೆ­ಗ­ಣಿ­ಸಿಲ್ಲ. ದೇವರ ವಿಗ್ರಹ ರಚ­ನೆ­ಯಲ್ಲಿ ಹೆಣ್ಣು, ಗಂಡು ದೇವರ ಅವ­ತಾ­ರ­ಗ­ಳನ್ನು ಅರ್ಥ­ಮಾ­ಡಿ­ಕೊ­ಳ್ಳ­ಬೇ­ಕಾದ ಅವ­ಶ್ಯ­ಕತೆ ಇದೆ. ಅದೆ­ಲ್ಲ­ವನ್ನು ರಾಧಾ­ಕೃಷ್ಣ ಬದ್ಧ­ತೆ­ಯಿಂದ ಅನು­ಸ­ರಿ­ಸು­ತ್ತಾರೆ.
ಎಲ್ಲೂ ನಿಲ್ಲೋ­ದಿಲ್ಲ: `ಕ­ಲಾ­ವಿ­ದ­ನಿಗೆ ಕನಸೇ ಬಂಡ­ವಾಳ. ಕನ­ಸನ್ನು ಸಾಕಾರ ಮಾಡು­ವಾಗ ಬೇರೇನೂ ಮುಖ್ಯ­ವಲ್ಲ. ಹಣ ಕಮ್ಮಿ­ಯಾ­ಗ­ಬ­ಹುದು, ಹೆಚ್ಚಾ­ಗ­ಬ­ಹುದು ಆದರೆ ಕಾರ್ಯ­ದಲ್ಲಿ ವ್ಯತ್ಯಾ­ಸ­ವಾ­ಗ­ಕೂ­ಡದು. ಯಾವ ಮನ್ನಣೆ ಗೌರ­ವ­ಗಳ ನಿರೀ­ಕ್ಷೇಯೂ ಇಲ್ಲ. ಅಷ್ಟಕ್ಕೂ ನಾನೊಬ್ಬ ನೇಪಥ್ಯ ಕಲಾ­ವಿದ, ಗೌರ­ವ­ಗಳ ನಿರೀಕ್ಷೆ ಮಾಡ­ಬಾ­ರದು. ಯಾವು­ದಕ್ಕೂ ಅಂಜದೆ ಎಲ್ಲೂ ನಿಲ್ಲದೆ ನಡೆ­ಯು­ತ್ತೇನೆ ' ಎಂದು ರಾಧ­ಕೃಷ್ಣ ಅವರು ಹೇಳು­ವಾಗ ಅವರ ಉನ್ನತ ವಿಶ್ವಾ­ಸದ ಅಂತ­ರ್‌­ದ­ರ್ಶ­ನ­ವಾ­ಯಿತು. ಜೊತೆಗೆ ಯಾರೂ ಮಾಡಿ­ರದ ದೊಡ್ಡ­ದೊಂದು ಚಿತ್ರ­ಕ­ಲಾ­ಕೃತಿ ಮಾಡುವ ಕನ­ಸನ್ನು ಅವರು ಹೊರ ಹಾಕಿ­ದರು.
ರಾಧಾ­ಕೃಷ್ಣ ಅವ­ರದು ರಾಜ­ರಾ­ಜೇ­ಶ್ವರಿ ನಗ­ರದ ಪಟ್ಟ­ಣ­ಗೆರೆ ವಾಸ. ಪತ್ನಿ ವಿಮಲಾ ಮೈಕೋ ಕಾರ್ಖಾನೆ ಉದ್ಯೋಗಿ. ಮಗಳು ರಚ­ನಾ­ ಚಿತ್ರ­ಕಲೆ ಅಂದರೆ ಪಂಚ­ಪ್ರಾಣ. ಪುಟ್ಟ ಸಂಸಾರದೊಂದಿಗೆ ದೊಡ್ಡ ಕನಸು ಹೊಂದಿರುವ ಅವರ ಹಾದಿ ಸುಗಮವಾಗಲಿ.

Sunday, October 18, 2009

ಚಿತ್ರ­ವೀಣಾ ರವಿ­ಕಿ­ರಣ್‌




ಚಿತ್ರ­ವೀ­ಣೆಯ ರವಿ­ಕಿ­ರಣ

ಅತ್ಯಂತ ಹಳೆಯ ಸಂಗೀತ ವಾದ್ಯ ಚಿತ್ರ­ವೀಣೆ. ಇದಕ್ಕೆ ಸಾವಿ­ರಾರು ವರ್ಷ­ಗಳ ಇತಿ­ಹಾಸ ಇದ್ದರೂ ಬಹಳ ಮಂದಿ ಕಂಡಿ­ರ­ಲಿ­ಕ್ಕಿಲ್ಲ. 21 ತಂತಿ ಹೊಂದಿ­ರುವ ಚಿತ್ರ­ವೀ­ಣೆಯ ಮೇಲೆ ಹಿಡಿತ ಸಾಧಿ­ಸಿದ ಸಂಗೀತ ಸಾಧ­ಕರು ಬೆರ­ಳೆ­ಣಿ­ಕೆ­ಯಷ್ಟು. ಹಾಗಾಗಿ ಈ ವಾದ್ಯ ತೆರೆ­ಮ­ರೆ­ಯಲ್ಲೇ ಉಳಿ­ಯ­ಬೇ­ಕಾ­ಯಿತು. ಈ ವಾದ್ಯ ಅಷ್ಟು ಸುಲ­ಭ­ವಾಗಿ ಕೈಗ­ತ್ತು­ವಂ­ಥ­ದ್ದಲ್ಲ, ಕೊರ­ಡಿ­ನಂ­ಥದ್ದು. ರಾಮಾ­ಯ­ಣ­ದಲ್ಲಿ ಹನು­ಮಂತ ನುಡಿ­ಸು­ತ್ತಿದ್ದ (ಹ­ನುಮ ತೋಡಿಗೆ ಕಲ್ಲು ಕರ­ಗಿ­ತಂತೆ) `ಗೋ­ಟು­ವಾದ್ಯ'ದ ಪ್ರತಿ­ರೂ­ಪವೇ ಈ ಚಿತ್ರ­ವೀಣೆ.
ಮರೆ­ಯ­ಲ್ಲಿದ್ದ ಈ ಪ್ರಾಚೀನ ವಾದ್ಯಕ್ಕೆ ಹೊಸ ಆಯಾ­ಮ­ಕೊ­ಟ್ಟ­ವರು ಮೈಸೂರು ಹುಡುಗ, ವಿಶ್ವದ ಪ್ರತಿ­ಷ್ಠಿತ `ಮಿ­ಲೇ­ನಿಯಂ ಪ್ರಶಸ್ತಿ' ಪುರ­ಸ್ಕೃತ ಚಿತ್ರ­ವೀಣಾ ಎನ್‌. ರವಿ­ಕಿ­ರಣ್‌!
ಕೇವಲ ಒಬ್ಬನೇ ಒಬ್ಬ ಸಂಗೀತ ಸಾಧ­ಕ­ನಿಂದ ಅಳಿ­ವಿನ ಹಂಚಿ­ನ­ಲ್ಲಿದ್ದ ಚಿತ್ರ­ವೀಣೆ ಇಂದು ಜಗ­ತ್ತಿ­ನಾ­ದ್ಯಂತ ಮಿಡಿ­ಯು­ತ್ತಿದೆ. ಚಿತ್ರ­ವೀ­ಣೆಗೆ ಜೀವ­ತುಂ­ಬಿದ ರವಿ­ಕಿ­ರಣ್‌ ಕೂಡ ಜಗ­ತ್ಪ್ರ­ಸಿ­ದ್ಧ­ವಾಗಿ ರೂಪು­ಗೊಂ­ಡಿ­ದ್ದಾರೆ. ಸತತ 24 ಗಂಟೆ ಚಿತ್ರ­ವೀಣೆ ನುಡಿಸಿ ವಿಶ್ವದ ಗಮನ ಸೆಳೆ­ದಿ­ದ್ದಾರೆ. 325 ರಾಗ­ಗಳು, 175 ತಾಳ­ಗ­ಳನ್ನು ರವಿ­ಕಿ­ರಣ್‌ ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ.
ರವಿ­ಕಿ­ರಣ್‌ ಜಗ­ತ್ತಿನ ಅಪ­ರೂಪ. ಸಂಗೀ­ತ­ವನ್ನು ತಮ್ಮ ವಿಶಿ­ಷ್ಟ­ವಾದ ಲೆಕ್ಕಾ­ಚಾ­ರ­ಗ­ಳಿಂದ ಪ್ರಸ್ತು­ತ­ಪ­ಡಿ­ಸುವ ಪ್ರತಿ­ಭಾ­ವಂತ. ಅವರ ಹಾಡ­ಗಾ­ರಿಕೆ ಆಗಲೀ ನುಡಿ­ಸು­ಗಾ­ರಿಕೆ ಆಗಲೀ ಅಪ್ಪಟ ಶಾಸ್ತ್ರ­ಬದ್ಧ. ರಾಗ, ತಾಳ, ಕೃತಿ­ಗಳ ರಸ­ವನ್ನು ತಮ್ಮ ಚಿತ್ರ­ವೀ­ಣೆಯ ಮೂಲಕ ಬಹಳ ಶಾಸ್ತ್ರೀ­ಯ­ವಾಗಿ ಉಣ­ಬ­ಡಿ­ಸು­ವಲ್ಲಿ ಅವರು ಅಪ್ರ­ತಿ­ಮರು. ಚಿತ್ರ­ವೀ­ಣೆಯ ಮೇಲೆ ಅವ­ರಿ­ಗಿ­ರುವ ಹಿಡಿತ ನೋಡಿ­ದರೆ, ರವಿ­ಕಿ­ರಣ್‌ ಚಿತ್ರ­ವೀ­ಣೆ­ಗಾ­ಗಿಯೇ ಜನ್ಮ­ತಾ­ಳಿ­ದ್ದಾರೆ ಎಂಬ ತುಡಿತ ರಸಿ­ಕ­ರಲ್ಲಿ ಮೂಡು­ತ್ತದೆ.
ಖ್ಯಾತ ಸಿತಾರ್‌ ವಾದಕ ಪಂಡಿತ್‌ ರವಿ­ಶಂ­ಕರ್‌ ಅವರು ಒಮ್ಮೆ ರವಿ­ಕಿ­ರಣ್‌ ಅವರ ಬಗ್ಗೆ ಮಾತ­ನಾ­ಡು­ವಾಗ `ನಿ­ಮಗೆ ದೇವ­ರಲ್ಲಿ ನಂಬಿಕೆ ಇಲ್ಲ­ದಿ­ದ್ದರೆ ನೀವು ಎನ್‌. ರವಿ­ಕಿ­ರಣ್‌ ಅವ­ರನ್ನು ನೋಡಿ' ಎಂದು ಹೇಳಿದ ಮಾತು ರವಿ­ಕಿ­ರಣ್‌ ಅವರ ವಿದ್ಯೆ­ಯನ್ನು ಎತ್ತಿ ಹಿಡಿ­ದಿದೆ. ರೇಡಿಯೋ ಆಸ್ಟ್ರೇ­ಲಿಯಾ ರವಿ­ಕಿ­ರಣ್‌ ಅವ­ರನ್ನು `ಗ್ರೇ­ಟೆಸ್ಟ್‌ ಸ್ಲ್ಕ್ರೆಡ್‌ ಇನ್‌­ಸ್ಟ್ರು­ಮೆಂ­ಟ­ಲಿಸ್ಟ್‌' ಎಂದು ಕರೆದು ಅವರ ಪ್ರಬು­ದ್ಧ­ತೆ­ಯನ್ನು ಜಗ­ತ್ತಿಗೆ ಸಾರಿದೆ. `ಇಂ­ಡಿ­ಯನ್‌ ಮೆಸಾರ್ಟ್‌' ಎಂದೇ ಜಗ­ತ್ತಿ­ನೆ­ಲ್ಲೆಡೆ ಎನ್‌. ರವಿ­ಕಿ­ರಣ್‌ ಪ್ರಖ್ಯಾ­ತರು.

ಬಾಲ ಸಂಗೀತ ಸಾಮ್ರಾಟ
ತಮ್ಮ ಎರ­ಡನೇ ವಯ­ಸ್ಸಿ­ನಲ್ಲೇ ಸಂಗೀತ ಕಚೇರಿ ನೀಡಿದ ರವಿ­ಕಿ­ರಣ್‌ ರಸಿ­ಕರ ಮನ­ಸ್ಸಿ­ನಲ್ಲಿ ಭರ­ವಸೆ ಮೂಡಿ­ಸಿ­ದರು. 1969ರಲ್ಲಿ ಬೆಂಗ­ಳೂ­ರಿನ ಮಲ್ಲೇ­ಶ್ವರಂ ಸಂಗೀತ ಸಭಾ­ದಲ್ಲಿ ತಮ್ಮ ಚೊಚ್ಚಲ ಕಚೇರಿ ನೀಡಿ­ದರು. ಬಹಳ ಚಿಕ್ಕ­ವ­ಯ­ಸ್ಸಿ­ನಲ್ಲೇ ಮದ್ರಾಸ್‌ ಸಂಗೀತ ಅಕಾ­ಡೆಮಿ ಆಯೋ­ಜಿ­ಸಿದ್ದ ಸಂಗೀತ ಕ್ವಿಜ್‌­ನಲ್ಲಿ ಕಷ್ಟದ ತಾಂತ್ರಿಕ ಪ್ರಶ್ನೆ­ಗ­ಳಿಗೆ ಉತ್ತ­ರಿಸಿ ಸ್ಕಾಲ­ರ್‌­ಶಿಪ್‌ ಪಡೆ­ದರು. ಆ ಸಂದ­ರ್ಭ­ದಲ್ಲಿ ಸಂಗೀತ ದಿಗ್ಗ­ಜ­ರಾದ ಪಂಡಿತ್‌ ರವಿ­ಶಂ­ಕರ್‌, ಎಂ.ಎಸ್‌. ಸುಬ್ಬು­ಲಕ್ಷ್ಮಿ ಅಂಥ­ವರೇ ರವಿ­ಕಿ­ರಣ್‌ ಅವರ ಸಂಗೀತ ವಿದ್ಯೆಗೆ ಮಾರು­ಹೋ­ದರು.
ಹತ್ತನೇ ವಯ­ಸ್ಸಿ­ನ­ವ­ರೆಗೆ ಗಾಯನ ಕಚೇರಿ ನೀಡು­ತಿದ್ದ ರವಿ­ಕಿ­ರಣ್‌ ನಂತರ ಚಿತ್ರ­ವೀಣೆ ಕಡೆ ಹೊರ­ಳಿ­ದರು. ಗೋಟು­ವಾದ್ಯ ಸ್ವರೂ­ಪದ ವಾದ್ಯಕ್ಕೆ ಚಿತ್ರ­ವೀಣೆ ಎಂದು ನಾಮ­ಕ­ರಣ ಮಾಡಿ­ದರು. ಆನಂ­ತರ ನಿರ್ಮಾಣ ಆಗಿದ್ದು ಇತಿ­ಹಾಸ. ಈಗ ರವಿ­ಕಿ­ರಣ್‌ ಜಗ­ತ್ತಿನ ಅತ್ಯಂತ ಶ್ರೇಷ್ಠ ಸಂಗೀ­ತ­ಗಾರ!

ಮೆಲ್ಹಾ­ರ್ಮೋ­ನಿಕಾ
ಇದು ಚಿತ್ರ­ವೀಣಾ ರವಿ­ಕಿ­ರಣ್‌ ಅವರ ಕನ­ಸಿನ ಕೂಸು. ಈ ಕಾರ್ಯ­ಕ್ರ­ಮದ ಮೂಲಕ ಜಗ­ತ್ತಿ­ನಾ­ದ್ಯಂತ ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಬೇರೆ ಬೇರೆ ನಗ­ರ­ಗ­ಳಲ್ಲಿ ವಿವಿಧ ಖ್ಯಾತ­ನಾಮ ಸಂಗೀ­ತ­ಗಾ­ರರ ಜತೆ­ಗೂಡಿ ಸಂಗೀತ ಸಾಧ್ಯ­ತೆ­ಗ­ಳನ್ನು ತಿಳಿ­ಸಿ­ಕೊ­ಟ್ಟಿ­ದ್ದಾರೆ. ಇದ­ರಲ್ಲಿ ಇಲ್ಲ­ದಿ­ರುವ ಸಂಗೀತ ಪ್ರಾಕಾ­ರ­ಗಳೇ ಇಲ್ಲ. ವಿವಿಧ ಸಮ­ಕಾ­ಲೀನ ಸಂಗೀತ ಪ್ರಬೇ­ಧ­ಗ­ಳನ್ನು ಇಲ್ಲಿ ಪ್ರಸ್ತು­ತ­ಪ­ಡಿ­ಸಿ­ದ್ದಾರೆ. ವಿವಿಧ ದೇಶ­ಗಳ ವಾದ್ಯ­ಗಳು ಮಿಲ್ಹಾ­ರ್ಮೋ­ನಿಕಾ ಕಾರ್ಯ­ಕ್ರ­ಮ­ದಲ್ಲಿ ಒಂದಾ­ಗು­ತ್ತವೆ. ಆ ಮೂಲಕ ಎಲ್ಲಾ ಸಂಗೀತ ಪ್ರಾಕಾ­ರ­ಗಳ ಮೂಲ ಒಂದೇ ಎಂದು ಪ್ರತಿ­ಪಾ­ದಿ­ಸಿ­ದ್ದಾರೆ. ವಿಶ್ವ­ದಾ­ದ್ಯಂತ ಹಲವು ನಗ­ರ­ಗ­ಳಲ್ಲಿ ಮೆಲ್ಹಾ­ರ್ಮೋ­ನಿಕಾ ನಡೆ­ದಿದೆ. ಬೇಸ­ರದ ಸಂಗತಿ ಎಂದರೆ ಈವ­ರೆಗೆ ಬೆಂಗ­ಳೂ­ರಿ­ನಲ್ಲಿ ನಡೆ­ದಿಲ್ಲ!

ಸಂಗೀ­ತ­ದಿಂದ ಸಾಮ­ರಸ್ಯ
ಹಲವು ದಶ­ಕ­ಗ­ಳಿಂದ ಅಸಂ­ಖ್ಯಾತ ದೇಶ­ಗ­ಳನ್ನು ಪ್ರವಾಸ ಮಾಡಿ, ಬೇರೆ ಬೇರೆ ಜನ, ಬೇರೆ ಬೇರೆ ಸಂಸ್ಕೃತಿ, ನೆಲ-ಜಲ ಅಭಿ­ರುಚಿ ಕಂಡಿ­ರುವ ರವಿ­ಕಿ­ರಣ್‌ ಅವ­ರಿಗೆ ಸಂಗೀ­ತ­ದಿಂದ ರಾಷ್ಟ್ರ­ಗಳ ನಡು­ವಣ ಸಾಮ­ರಸ್ಯ ಸಾಧಿ­ಸ­ಬ­ಹುದು ಎಂಬ ಬಲ­ವಾದ ನಂಬಿಕೆ ಇದೆ. ಎಷ್ಟೋ ಸಂದ­ರ್ಭ­ಗ­ಳಲ್ಲಿ ಅವರು ಈ ವಿಷ­ಯ­ವನ್ನು ಹೇಳಿ­ಕೊಂ­ಡಿ­ದ್ದಾರೆ. ಆದರೆ ಅವ­ರಿಗೆ ವಿದೇ­ಶ­ಗ­ಳಲ್ಲಿ ಸಿಕ್ಕಷ್ಟು ಪ್ರೋತ್ಸಾಹ, ಬೆಂಬಲ ತಾಯ್ನಾ­ಡಿ­ನಲ್ಲಿ ಸಿಕ್ಕಿಲ್ಲ. ಈ ಬೇಸರ ಅವ­ರನ್ನು ಬಾಧಿ­ಸ­ದೆಯೂ ಬಿಟ್ಟಿಲ್ಲ.

ಕೊಡುಗೆ
ವಿಶ್ವ ಸಂಗೀ­ತಕ್ಕೆ ಅವರು ನೀಡಿ­ರುವ ಕೊಡು­ಗೆ­ಗಳು ಅಪಾರ. `ಇಂ­ಟ­ರ್‌­ನ್ಯಾ­ಷ­ನಲ್‌ ಪೌಂಡೇ­ಶನ್‌ ಆಫ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಸಂಸ್ಥೆ ಸ್ಥಾಪಿಸಿ ಆ ಮೂಲಕ ಹಲವು ದೇಶ­ಗಳ ನಡು­ವಿನ ಸಾಂಸ್ಕೃ­ತಿಕ ಬೆಸುಗೆ ಆಗಿ­ದ್ದಾರೆ. ರವಿ­ಕಿ­ರಣ್‌ ಸಂಗೀತ ತಜ್ಞರೂ ಆಗಿದ್ದು, ಹಲವು ಪುಸ್ತಕ ಬರೆ­ದಿ­ದ್ದಾರೆ. `ಅ­ಪ್ರಿ­ಷಿ­ಯೇ­ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌', `ಪ­ರ್ಪೆ­ಕ್ಟಿಂಗ್‌ ಕರ್ನಾ­ಟಿಕ್‌ ಮ್ಯೂಸಿಕ್‌' ಕೃತಿ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಮೈಲು­ಗ­ಲ್ಲು­ಗಳು. `ಟೆಲಿ ಟೀಚಿಂಗ್‌' ಕಂಪ್ಯೂ­ಟರ್‌ ಕಾರ್ಯ­ಕ್ರ­ಮದ ಮೂಲದ ವಿಶ್ವ­ದಾ­ದ್ಯಂತ ಸಾವಿ­ರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಅವರು, ಸಂಗೀ­ತದ ಬಗ್ಗೆ ಯಾವುದೇ ಅನು­ಮಾ­ನ­ಗ­ಳಿಗೆ ಉತ್ತ­ರಿ­ಸು­ತ್ತಾರೆ.
ಅಪಾರ ಅಂತಾ­ರಾ­ಷ್ಟ್ರೀಯ, ರಾಷ್ಟ್ರೀಯ ಪ್ರಶ­ಸ್ತಿ­ಗಳು ರವಿ­ಕಿ­ರಣ್‌ ಅವ­ರಿಗೆ ಸಂದಿವೆ. ತಮ್ಮ ಆರನೇ ವಯ­ಸ್ಸಿ­ನಲ್ಲೇ ಅವ­ರಿಗೆ ಪ್ರತಿ­ಷ್ಠಿತ `ಅ­ರುಲ್‌ ಇಸ್ಕ್ರೆ ಸೆಲ್ವನ್‌' ಬಿರುದು ಲಭಿ­ಸಿದೆ. ಅಂತಾ­ರಾ­ಷ್ಟ್ರೀಯ ಪ್ರಶ­ಸ್ತಿ­ಗ­ಳಾದ ರಷ್ಯಾದ `ಮಿ­ಲೇ­ನಿಯಂ' ಪ್ರಶಸ್ತಿ, ಅಮೆ­ರಿ­ಕಾದ `ನ್ಯೂ ಏಜ್‌ ವಾ್ಸ್‌ ಅವಾರ್ಡ್‌'ಗಳು ದೊರೆ­ತಿವೆ. ಭಾರ­ತದ ಹೆಮ್ಮೆಯ `ಕ­ಲೈ­ಮಾ­ಮಣಿ' ಪ್ರಶಸ್ತಿ ಸಂದಿದೆ. `ವಿ­ಸ್‌­ಡಮ್‌ ಇಂಟ­ರ್‌­ನ್ಯಾ­ಷ­ನಲ್‌', `ಕು­ಮಾರ ಗಂಧರ್ವ', `ಸಂ­ಸ್ಕೃತಿ ಸಮ್ಮಾನ' ಮುಂತಾದ ಪ್ರಶ­ಸ್ತಿ­ಗಳು ಅವರ ಮುಡಿ­ಗೇ­ರಿವೆ. ಜೊತೆಗೆ ನೂರಾರು ಬಿರು­ದು­ಗಳು.
ಸದ್ಯ ಚೆನ್ನೈ­ನಲ್ಲಿ ನೆಲ­ಸಿ­ರುವ ರವಿ­ಕಿ­ರಣ್‌ ಅವ­ರಿಗೆ ಸಂಗೀ­ತವೇ ಪ್ರಪಂಚ. ಎರಡು ವರ್ಷದ ಮಗು­ವಾ­ಗಿ­ದ್ದಾಗ ಅವರು ಮೂಡಿ­ಸಿದ ಭರ­ವಸೆ ಇಲ್ಲಿ­ವ­ರೆಗೆ ಎಲ್ಲೂ ಮಂಕಾ­ಗಿಲ್ಲ. ಈಗ 42ರ ಹಂಚಿ­ನ­ಲ್ಲಿವ ರವಿ­ಕಿ­ರಣ್‌ ಪ್ರತಿಭೆ ಹೆಮ್ಮ­ರ­ವಾಗಿ ಬೆಳ­ದಿದ್ದು ಅದರ ಬೀಳಲು ವಿಶ್ವ­ದೆ­ಲ್ಲೆಡೆ ಚಾಚಿ­ಕೊಂ­ಡಿದೆ.

Tuesday, October 6, 2009

ಹುಲು­ಗಪ್ಪ ಕಟ್ಟೀ­ಮನಿ


'ಕಟ್ಟೀ­ಮನಿ' ಕಾಣಿ­ಕೆ­


ಅದೊಂದು ಕೆಟ್ಟ ಕಾಲ.
ಆ ಕಪಟ ಕಾಲ ಕಂಡ ಕನ­ಸು­ಗ­ಳ­ನ್ನೆಲ್ಲಾ ಕೊಂದು ಹಾಕಿತು.
ಆ ಕ್ಷಣ ಕಳೆ­ದು­ಹೋ­ಗಿ­ದ್ದರೆ ಬದುಕು ಬಂಗಾ­ರ­ವಾ­ಗು­ತ್ತಿತ್ತು.
ಮಾಡಿದ ತಪ್ಪಿಗೆ ಈಗ ಪಶ್ಚಾ­ತಾ­ಪ­ವಿಲ್ಲ.
ತೋರಲು ಮುಖ­ವಿಲ್ಲ. ಆಡಲು ಮಾತಿಲ್ಲ.
ಆ ಸನ್ನಿ­ವೇ­ಶದ ಸುಳಿ­ಯಲ್ಲಿ ಬದುಕು ಮುಳುಗಿ ಹೋಯಿತು.....
ಅಯ್ಯೋ ದೇವರೇ ನಾನು ಆ ತಪ್ಪನ್ನು ಮಾಡ­ಬಾ­ರ­ದಿತ್ತು!
ನನ್ನ ಈ ಅರಣ್ಯ ರೋಧ­ನ­ವನ್ನು ಕೇಳು­ವ­ವ­ರಾರು?
ಸರ­ಳು­ಗ­ಳ­ನ್ನಿ­ಡಿದು ಕೈಗೆರೆ ಸವೆದು ಹೋಗಿವೆ. ಗೋಡೆಯೂ ಮುನಿ­ಸಿ­ಕೊಂ­ಡಿದೆ. ತಿರುಗಿ ಮಾತ­ನಾ­ಡು­ತ್ತಿಲ್ಲ...
ಇದು ಜೈಲು ಹಕ್ಕಿಯ ನಾಡಿ ಮಿಡಿತ. ತಪ್ಪಿನ ಅರಿ­ವಾ­ದಾಗ ಆ ಜೀವ­ಕ್ಕಾದ ಆಘಾತ.....!
18 ವರ್ಷ­ಗಳ ಹಿಂದೆ ರಂಗಾ­ಯಣ ಕಲಾ­ವಿದ ಹುಲು­ಗಪ್ಪ ಕಟ್ಟೀ­ಮನಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿ­ದ್ದಾಗ ಮುಂದೆ ಕೈದಿ­ಗಳ ಮನ­ಸ್ಸಿ­ನಲ್ಲಿ ಇಂತಹ ಬದ­ಲಾ­ವಣೆ ಉಂಟಾ­ಗ­ಬ­ಹುದು ಎಂದು ಯೋಚಿ­ಸಿ­ರ­ಲಿ­ಕ್ಕಿಲ್ಲ. ಜೈಲು­ಹ­ಕ್ಕಿ­ಗಳ ನಾಡಿ­ಮಿ­ಡಿ­ತ­ವನ್ನು ರಂಗ­ಭೂಮಿ ಅರ್ಥ ಮಾಡಿ­ಕೊ­ಳ್ಳ­ಬ­ಲ್ಲದು ಎಂಬ ಯೋಚ­ನೆಯೂ ಬಂದಿ­ರ­ಲಿಲ್ಲ. ಕೊಲೆ­ಗ­ಡು­ಕರು, ಮಾನ­ಭಂಗ ಮಾಡಿ­ದ­ವರು, ಮನು­ಷ್ಯತ್ವ ಬಿಟ್ಟ­ವರು, ಕಳ್ಳರು, ಸುಳ್ಳರು...ಎಂ­ತೆಲ್ಲಾ ಹಣೆ­ಪಟ್ಟಿ ಕಟ್ಟಿ­ಕೊಂಡ ಕೈದಿ­ಗಳು ತಮ್ಮನ್ನು ತಾವು ರಂಗದ ಮೇಲೆ ತೆರೆ­ದು­ಕೊಂಡು ಹಗು­ರಾ­ಗು­ತ್ತಾರೆ ಎಂಬುದು ಊಹೆಗೂ ನಿಲು­ಕಿ­ರ­ಲಿಲ್ಲ.
ಆದರೆ ಹುಲು­ಗಪ್ಪ ಕಟ್ಟೀ­ಮನಿ ಅವರ ರಂಗ­ಪ್ರ­ಯೋ­ಗ­ದಲ್ಲಿ ಜೈಲು­ಹ­ಕ್ಕಿ­ಗಳ ಅಂತ­ರಂ­ಗದ ಕಟ್ಟೆ ಒಡೆ­ಯಿತು. ಮೈಸೂ­ರಿನ ಕಲಾ­ಮಂ­ದಿ­ರದ ಸುತ್ತಾ ಪೊಲೀಸ್‌ ಸರ್ಪ­ಗಾ­ವ­ಲಿನ ನಡುವೆ ಕೈದಿ­ಗ­ಳಿಂದ `ಮಾ­ರ­ನಾ­ಯಕ' ನಾಟಕ ಪ್ರಯೋ­ಗ­ಗೊಂ­ಡಾಗ `ಸ್ವ­ಸ್ಥ­ಸ­ಮಾಜ'ದ ದಿಲ್‌ ನಡು­ಗಿತ್ತು. ಬೆಂಗ­ಳೂರು ಕೇಂದ್ರಾ ಕಾರಾ­ಗೃ­ಹದ ಮಹಿಳಾ ಕೈದಿ­ಗ­ಳಿಂದ `ಮಾ­ಧವಿ' ನಾಟಕ ನೋಡಿ­ದ­ವರ ಮನ­ಸ್ಸಲ್ಲಿ ವಿಷಾ­ಧದ ಅಲೆ ಎದ್ದಿತ್ತು. ಇವರೂ ಕೂಡ ಮನು­ಷ್ಯರೇ......! ಎಂದ­ವರು ಅದೆಷ್ಟು ಮಂದಿಯೋ.

ದಶಕ ತುಂಬಿದೆ: ಹುಲು­ಗಪ್ಪ ಕಟ್ಟೀ­ಮನಿ ಅವರ `ಜೈ­ಲು­ನಾ­ಟಕ ಕ್ರಾಂತಿ'ಗೆ ಹತ್ತು ವರ್ಷ ತುಂಬಿದೆ. ಈ ಹತ್ತು ವರ್ಷದ ಜೈಲು ನಾಟಕ ಹಾದಿ ಇಡೀ ರಾಷ್ಟ್ರ­ದಲ್ಲಿ ಹಲವು ಮೈಲು­ಗ­ಲ್ಲು­ಗ­ಳನ್ನು ನಿರ್ಮಿ­ಸಿದೆ.
ಮೈಸೂ­ರಿ­ನಲ್ಲಿ ರಂಗಾ­ಯಣ ಆರಂಭ ಕಾಲ­ದಲ್ಲಿ ಬಿ.ವಿ. ಕಾರಂ­ತರು ತಮ್ಮ ರಂಗ­ಭೂಮಿ ವಿದ್ಯಾ­ರ್ಥಿ­ಗ­ಳನ್ನು ವೀಕ್ಷ­ಣೆಗೆ ಕರೆ­ದು­ಕೊಂಡು ಹೋಗು­ತ್ತಿ­ದ್ದರು. ಅದ­ರಲ್ಲಿ ಬಳ್ಳಾರಿ ಜೈಲು ಭೇಟಿಯೂ ಒಂದು.
ಜೈಲು ಅಂದರೆ ಎಲ್ಲ­ರಿಗೂ ಇರುವ ಕಲ್ಪ­ನೆಯೇ ಕಟ್ಟಿ­ಮನಿ ಅವ­ರಿಗೂ ಇತ್ತು. ಕೈದಿ­ಗ­ಳನ್ನು ಹತ್ತಿ­ರ­ದಿಂದ ಕಂಡಾಗ ಕಟ್ಟೀ­ಮನಿ ಅವ­ರಿಗೆ ಕಾಣಿ­ಸಿದ್ದೇ ಬೇರೆ. ಕೈದಿ­ಗಳ ಸ್ವಭಾ­ವ­ವನ್ನು ಗಮ­ನಿಸಿ ಅಭಿ­ನಯ ಕಲಿಕೆ ಅವರ ಮನ­ಸ್ಸಿಗೆ ಬರ­ಲಿಲ್ಲ. `ಕೈ­ದಿ­ಗ­ಳನ್ನೇ ರಂಗದ ಮೇಲೆ ತಂದರೆ?' ತಕ್ಷಣ ಯಾರಿಗೂ ಹೇಳ­ಲಿಲ್ಲ. ಹಾಗೇ ಮನ­ಸ್ಸಿ­ನಲ್ಲಿ ಇಟ್ಟು­ಕೊಂ­ಡರು. ಅದು ಹುಚ್ಚು ದೈರ್ಯವೇ ಆಗಿತ್ತು. ಯಾರಿ­ಗಾ­ದರೂ ಈ ವಿಷ­ಯ­ವನ್ನು ಹೇಳಲು ಕಟ್ಟೀ­ಮನಿ ಅಂಜಿ­ದರು. ಹುಚ್ಚ ಎಂದಾರು ಎಂಬ ಭಯ ಬೇರೆ. ಆದರೆ ಮನ­ಸ್ಸಿಗೆ ಆ ಹುಳು ಮಾತ್ರ ಸದಾ ಕೊರೆ­ಯು­ತ್ತಿತ್ತು.
ಜೈಲ್‌ ಸೂಪ­ರಿಂ­ಟೆಂ­ಡೆಂಟ್‌ ಗೋಪಾಲ್‌ ಹೊಸೂರು ಅವ­ರಿಗೆ ತಮ್ಮ ಮನ­ಸ್ಸಲ್ಲಿ ಮೂಡಿದ ವಿಷ­ಯ­ವನ್ನು ತಿಳಿ­ಸಿ­ದಾಗ ಕ್ಷಣ­ಹೊತ್ತು ಅವ­ರಲ್ಲಿ ಮಾತೇ ಹೊರ­ಡ­ಲಿಲ್ಲ. ಪರಿ­ಕ­ಲ್ಪನೆ ಅದ್ಬುತ ಆದರೆ....ಇದು ಸಾಧ್ಯವೆ? ಎಂಬ ಅನು­ಮಾನ ಗೋಪಾಲ್‌ ಅವ­ರ­ಲ್ಲಿತ್ತು. ಮೊದಲು ಅನು­ಮತಿ ಕೊಡಿ. ಆಮೇಲೆ ನೋಡಿ! ಎಂಬ ವಿಶ್ವಾ­ವನ್ನು ಕಟ್ಟೀ­ಮನಿ ಅವರು ವ್ಯಕ್ತ­ಪ­ಡಿ­ಸಿ­ದಾಗ ಗೋಪಾಲ್‌ ಹೊಸೂರು ಎಸ್‌ ಎಂದರು. ರಾಜ­ಕಾ­ರಣಿ ಹಾಗೂ ರಂಗ­ಕರ್ಮಿ ಎಂ.ಪಿ. ಪ್ರಕಾಶ್‌ ಅವರ ಸಹ­ಕಾ­ರವೂ ಇತ್ತು.

ಪ್ರತಿ­ರೋಧ ಇದ್ದೇ ಇತ್ತು: ಅದೆಲ್ಲಾ ಸರಿ. ಕೈದಿ­ಗ­ಳನ್ನು ಒಪ್ಪಿ­ಸು­ವುದು ಹೇಗೆ? ಮೊದ­ಮೊ­ದಲು ಕೈದಿ­ಗಳು ಸಹ­ಕ­ರಿ­ಸ­ಲಿಲ್ಲ. `ಏ ಹೋಗಯ್ಯಾ ನಮ್ಮ ಬದುಕೇ ನಾಟ­ಕ­ವಾ­ಗಿದೆ. ನೀನೆಂಥ ನಾಟಕ ಆಡಿ­ಸವೆ' ಎಂಬ ಉತ್ತರ ಕೈದಿ­ಗ­ಳಿಂದ ಬಂದಾಗ ಅದನ್ನು ಕಟ್ಟೀ­ಮನಿ ಸವಾ­ಲಾಗಿ ತೆಗೆ­ದು­ಕೊಂ­ಡರು.
ಆಮೇಲೆ ನಡೆ­ದದ್ದು ಬರೀ ಮ್ಯಾಜಿಕ್‌. ಕೈದಿ­ಗಳ ನಡುವೆ ಕಟ್ಟೀ­ಮನಿ ಅವರ ಬಾಂಧವ್ಯ ಬಹಳ ಗಾಢ­ವಾಗಿ ಬೆಳೆ­ಯಿತು. ಕೈದಿ­ಗಳ ತೂಕದ ಊಟ­ವನ್ನೇ ಕಟ್ಟೀ­ಮನಿ ಅವರೂ ಸೇವಿ­ಸು­ತ್ತಿ­ದ್ದರು. ತಿಂಗಳ ಕಾಲ ನಡೆ­ಯು­ತ್ತಿದ್ದ ನಾಟಕ ಕಾರ್ಯಾ­ಗಾ­ರ­ದಲ್ಲಿ ಕೈದಿ­ಗಳು ಕಟ್ಟೀ­ಮನಿ ಅವ­ರನ್ನು ಬಹ­ಳ­ವಾಗಿ ಹಚ್ಚಿ­ಕೊಂ­ಡರು. ಕಟ್ಟಿ­ಮನಿ ಅವರ ಜೊತೆ ತಮ್ಮ ಅಪ­ರಾ­ಧ­ಗ­ಳನ್ನು ಬಿಚ್ಚಿ­ಡು­ತ್ತಿ­ದ್ದರು. ಮಾಡಿದ ತಪ್ಪನ್ನು ಹೇಳಿ­ಕೊಂಡು ಹಗು­ರಾ­ಗು­ತ್ತಿ­ದ್ದರು. ನಾಟಕ ಹೇಳಿ­ಕೊ­ಡು­ವಾಗ ಕೈದಿ­ಗ­ಳಿಗೆ ಏಟು ಕೊಟ್ಟಿದ್ದು ಇದೆ. ಆದರೆ ಅದು ಪ್ರೀತಿಯ ಸಂಕೇ­ತ­ವಾ­ಗಿತ್ತು! ಕೈದಿ­ಗಳ ಅಂತ­ರಂ­ಗ­ದಲ್ಲಿ ಕಟ್ಟೀ­ಮನಿ ಸಸಂ­ಸ್ಕೃತ ಬೀಜ ಬಿತ್ತಿ­ದರು.

ಬದ­ಲಾದ ಚಿತ್ರಣ: ಮೈಸೂರು ಜೈಲು ಕೈದಿ­ಗ­ಳಿಂದ `ಮಾ­ರ­ನಾ­ಯಕ' ನಾಟಕ ಪ್ರದ­ರ್ಶ­ನ­ಗೊಂ­ಡಾಗ ಇಡೀ ರಾಷ್ಟ್ರಾ­ದ್ಯಂತ ಸುದ್ದಿ­ಯಾ­ಯಿತು. `ಔ­ಟ್‌­ಲುಕ್‌' ಮುಖ­ಪುಟ ಲೇಖನ ಮಾಡಿತು. ಇಂಗ್ಲಿಷ್‌ ಟಿವಿ ವಾಹಿ­ನಿ­ಗಳು ಕಟ್ಟೀ­ಮನಿ ಅವರ ಹಿಂದೆ ಬಿದ್ದವು. ಎಲ್ಲ­ಕ್ಕಿಂತ ಮುಖ್ಯ­ವಾಗಿ ಜೈಲು ಒಳ­ಗಿನ ವಾತಾ­ವ­ರಣ ಬದ­ಲಾ­ಯಿತು. ಪೊಲೀ­ಸರು ಕೈದಿ­ಗ­ಳನ್ನು ಕೊಲೆ ಅಪ­ರಾಧಿ, ಡಕಾ­ಯತಿ ಅಪ­ರಾಧಿ, ಕಳ್ಳ ಎಂದು ಕರೆ­ಯು­ತ್ತಿ­ದ್ದ­ವರು ಆಮೇಲೆ ಪಾತ್ರ­ಗ­ಳಿಂದ ಸಂಭೋ­ದಿ­ಸಿ­ದರು. ಮಹಿಳಾ ಮತ್ತು ಪುರುಷ ಕೈದಿ­ಗಳ ನಡುವೆ ಮಾತು­ಕ­ತೆಯೇ ಇರ­ಲಿಲ್ಲ. ಮಾಧವಿ ನಾಟ­ಕದ ನಂತರ ಇದು ಬದ­ಲಾ­ಯಿತು. ಜೂಲಿ­ಯಸ್‌ ಸೀಜರ್‌, ಹ್ಯಾಮೆಟ್‌ ನಾಟ­ಕ­ಗಳು ಕೈದಿ­ಗ­ಳಿಂದ ರಂಗ­ವೇ­ರಿ­ದವು.
ಆ ನಂತರ ಎಷ್ಟೋ ಕೈದಿ­ಗಳ ಶಿಕ್ಷೆಯ ಅವಧಿ ಕಮ್ಮಿ­ಯಾ­ದದ್ದೂ ಇದೆ. ಜೈಲು ನಾಟಕ ಕರ್ನಾ­ಟ­ಕಲ್ಲಿ ನಡೆ­ಯಿ­ತಾ­ದರೂ ಅದರ ಪರಿ­ಣಾಮ ಇಡೀ ದೇಶ­ದಲ್ಲಿ ಉಂಟಾ­ಯಿತು.
ರಂಗ­ಭೂಮಿ ಕಟ್ಟೀ­ಮನಿ: ಕನ್ನಡ ರಂಗ­ಭೂ­ಮಿ­ಯಲ್ಲಿ ಹುಲು­ಗಪ್ಪ ಕಟ್ಟೀ­ಮನಿ ಅವರು ಅತ್ಯಂತ ವಿಶಿಷ್ಟ ಸ್ಥಾನ­ದಲ್ಲಿ ನಿಲ್ಲು­ತ್ತಾರೆ. ಅವರ ರಂಗ­ಭೂಮಿ ಕಾರ್ಯಾ­ಗಾ­ರ­ಗ­ಳಲ್ಲಿ ಭಾಗ­ವ­ಹಿ­ಸಿ­ದ­ವರು ಅಪ­ರೂಪ ಅನು­ಭವ ಪಡೆ­ಯು­ತ್ತಾರೆ. ಅವರ ಮಾತಿ­ನಲ್ಲಿ ಒಂದು ಚಿಕಿ­ತ್ಸಕ ಗುಣ­ವಿದೆ. ಸಕಾ­ರಾ­ತ್ಮಕ ಎನರ್ಜಿ ಮೂಡಿ­ಸು­ವಲ್ಲಿ ಅವರು ನಿಷ್ಣಾ­ತರು.
ಜೈಲು ನಾಟಕ ನಿರ್ದೇ­ಶ­ಕ­ರಾಗಿ ಎಲ್ಲರ ಬಾಯಲ್ಲೂ ಕಟ್ಟಿ­ಮನಿ ಅವರು ಕೇಳಿ­ಬಂ­ದರೂ ಕೂಡ ಅವ­ರೊಬ್ಬ ಪ್ರಬುದ್ಧ ನಟ. `ಗಾಂಧಿ ವಿರುದ್ಧ ಗಾಂಧಿ' ನಾಟ­ಕದ ಗಾಂಧಿ ಯಾವಾ­ಗಲು ಎಲ್ಲ­ರನ್ನು ಕಾಡು­ತ್ತಾನೆ. `ಮಾ­ಯಾ­ಸೀತಾ ಪ್ರಸಂಗ'ದಲ್ಲಿ ಅವರ ಅದ್ಬುತ ಅಭಿ­ನ­ಯ­ವಿದೆ. ಕತ್ತಲೆ ಬೆಳಕು, ಹೀಗೊಂದು ಪ್ರಣಯ ಪ್ರಸಂಗ, ಕತ್ತಲೆ ಬೆಳಕು, ಕಿಂದ­ರಿ­ಜೋಗಿ ಹೀಗೆ ನೂರಾರು ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಸಂಘ­ಟ­ಕ­ರಾಗಿ ಮೈಸೂ­ರ­ನಲ್ಲಿ `ಸಂ­ಕಲ್ಪ'ವೆಂಬ ಹವ್ಯಾಸಿ ರಂಗ­ತಂಡ ಕಟ್ಟಿ­ದ್ದಾರೆ. ನಿರ್ದೇ­ಶ­ಕ­ರಾಗಿ ಅವರು ರಂಗ­ಭೂ­ಮಿಗೆ ಹಲವು ಪ್ರಸಿದ್ಧ ನಾಟ­ಕ­ಗ­ಳನ್ನು ನಿರ್ದೇ­ಶಿ­ಸಿ­ದ್ದಾರೆ.
ಸದ್ಯಕ್ಕೆ ಕಟ್ಟೀ­ಮನಿ ಧಾರ­ವಾಡ ರಂಗಾ­ಯಣ ಉಸ್ತು­ವಾರಿ ಹೊತ್ತಿ­ದ್ದಾರೆ. ಅಲ್ಲೂ ಜೈಲು ನಾಟಕ ತಯಾರಿ ನಡೆ­ಯು­ತ್ತಿದೆ. ಬಳ್ಳಾ­ರಿಯ ಹಗ­ರಿ­ಬೊ­ಮ್ಮನ ಹಳ್ಳಿ­ಯಿಂದ ಬಂದ ಅವರು ಇಂದು ರಂಗ­ಭೂ­ಮಿಯ ಆಸ್ತಿ­ಯಾ­ಗಿ­ದ್ದಾರೆ. ಪತ್ನಿ ಪ್ರಮೀಳಾ ಬೇಂಗ್ರೆ ಕೂಡ ರಂಗಾ­ಯಣ ಕಲಾ­ವಿ­ದರು. ಮಗಳು ಕುಂತಿ, ಮಗ ಕಣ್ವ.
ಅವರ ಈ ಹತ್ತು­ವ­ರ್ಷ­ಗಳ ಜೈಲು ನಾಟಕ ನಡಿ­ಗೆ­ಯಲ್ಲಿ ಹಲವು ಏಳು ಬೀಳು­ಗ­ಳನ್ನು ಅನು­ಭ­ವಿ­ಸಿ­ದ್ದಾರೆ. ಹಲವು ಅದ್ಬು­ತ­ಗ­ಳನ್ನು ಕಂಡಿ­ದ್ದಾರೆ. ಎಂದೂ ಮರೆ­ಯದ `ದಿ­ವ್ಯ­ಔ­ಷಧಿ'ಯನ್ನು ಅವರು ವಿಶ್ವ­ರಂ­ಗ­ಭೂ­ಮಿಗೆ ಕಾಣಿ­ಕೆ­ಯಾಗಿ ಕೊಟ್ಟಿ­ದ್ದಾರೆ.

Tuesday, September 29, 2009

ಶ್ರೀಧರ್‌ ಜೈನ್‌


ನಾಟ್ಯ ಮಯೂರ ಶ್ರೀಧರ್‌ ಜೈನ್‌!

ಬಹುಶಃ ಅವರು ಹುಟ್ಟಿದ್ದೇ ನೃತ್ಯ­ಕ್ಕಾಗಿ! ಅವರ ನಡೆ- ನುಡಿ­ಯಲ್ಲಿ ನಟ­ರಾ­ಜನ ನಡಿ­ಗೆ­ಯಿದೆ. ಅವರ ನಿಲು­ವಿ­ನಲ್ಲಿ ನಾಟ್ಯ­ಶಾ­ಸ್ತ್ರದ ನವ­ರ­ಸಾ­ದಿ­ಗಳು ನಲಿ­ದಾ­ಡು­ತ್ತವೆ. ಗೆಜ್ಜೆ ಕಟ್ಟಿದ ಅವರ ಹೆಜ್ಜೆಯ ಗುರುತು ರಸಿ­ಕರ ಎದೆ­ಯಲ್ಲಿ ಸದ್ದು ಮಾಡಿವೆ. ಭೂಮಿ­ಕೆಯ ಮೇಲಿಂದ ಹೊಮ್ಮಿ ಬರುವ ಅವರ ಹುಮ್ಮಸ್ಸು ಆನಂದ ಹೊತ್ತು ನಾಡಿ­ನೆ­ಲ್ಲಡೆ ಹರ­ಡಿದೆ.
ಅವರು ಖ್ಯಾತ ನೃತ್ಯ­ಪಟು ಶ್ರೀಧರ್‌ ಜೈನ್‌. ಒಮ್ಮೆ ನೋಡಿ­ದರೆ ಸಾಕು ಯಾರು ಬೇಕಾ­ದರೂ ಅವ­ರೊಬ್ಬ ನೃತ್ಯ­ಗಾರ ಎಂದು ಊಹಿ­ಸ­ಬ­ಹುದು. ಆ ಮೈಕಟ್ಟು, ಮುಖ­ಭಾವ... ನೃತ್ಯ­ವನ್ನು ಕಣ್ಮುಂದೆ ತರು­ತ್ತವೆ. ಒಬ್ಬ ವ್ಯಕ್ತಿ­ಯಾ­ಗಿಯೂ ಶ್ರೀಧರ್‌ ಜೈನ್‌ ಹೃದ­ಯದ ಹತ್ತಿ­ರಕ್ಕೆ ಬಂದು ನಿಲ್ಲು­ತ್ತಾರೆ. ಅವರ ಮಾತಿನ ವಿದೇ­ಯತೆ `ವಿದ್ಯೆ ಉಳ್ಳ­ವನ ಮುಖ ಮುದ್ದು ಬರು­ವಂ­ತಿರ್ಕು' ಎನ್ನುವ ಸರ್ವ­ಜ್ಞನ ವಚ­ನ­ವನ್ನು ಶೃತಿ ಮಾಡು­ತ್ತದೆ.
ಶ್ರದ್ಧಾ­ಭ­ಕ್ತಿ­ಯಿಂದ ಅಭ್ಯಾಸ ಮಾಡಿದ ಭರ­ತ­ನಾಟ್ಯ ಶ್ರೀಧರ್‌ ಅವರ ವ್ಯಕ್ತಿ­ತ್ವ­ವನ್ನು ಬಹಳ ಎತ್ತ­ರಕ್ಕೆ ಏರಿ­ಸಿದೆ. ಭರ­ತ­ನಾ­ಟ್ಯದ ಬಲ­ದಿಂದ ವೈವಿ­ಧ್ಯ­ಮಯ ನೃತ್ಯ ಪ್ರಾಕಾ­ರ­ಗ­ಳನ್ನು ತನ್ನತ್ತ ಸೆಳೆದು ಕೊಂಡಿ­ದ್ದಾರೆ. ಭಾರ­ತೀಯ ನೃತ್ಯ­ಗಳು ಎನ್ನುವ ಕಲ್ಪ­ನೆಯ ಕೆಳಗೆ ಜಾನ­ಪದ, ಸಮ­ಕಾ­ಲೀನ ನೃತ್ಯ, ಪಾಶ್ಚಾತ್ಯ, ರಾಜ­ಸ್ತಾನಿ, ಗರ್ಬಾ, ದಾಂಡ್ಯ, ಪ್ಯೂಜನ್‌...ಇ­ವೆ­ಲ್ಲವೂ ಅವರ ದೇಹ­ದಿಂದ ಹೊಮ್ಮಿ ಬರು­ತ್ತವೆ. ಎ.ಆರ್‌. ರೆಹ­ಮಾನ್‌ ಸಂಯೋ­ಜ­ನೆಯ `ವಂದೇ ಮಾತರಂ' ಗೀತೆಗೆ ಶ್ರೀಧರ್‌ ಜೈನ್‌­ಅ­ವರ ನೃತ್ಯ ಸಂಯೋ­ಜನೆ ರಾಷ್ಟ್ರ­ಮ­ಟ್ಟ­ದಲ್ಲಿ ಖ್ಯಾತಿ ಗಳಿ­ಸಿದೆ. ಅವರ ನೃತ್ಯ ರೂಪ­ಕ­ಗ­ಳಲ್ಲಿ ಕಾಣುವ ಎನರ್ಜಿ ಶ್ರೀಧರ್‌ ಅವರ ನೃತ್ಯ ಭರ­ವ­ಸೆ­ಯನ್ನು ಎತ್ತಿ ಹಿಡಿ­ಯು­ತ್ತದೆ.
ಶ್ರೀಧರ್‌ ಜೈನ್‌ `ಆ­ಪ್ತ­ಮಿತ್ರ' ಚಲ­ನ­ಚಿ­ತ್ರ­ದಲ್ಲಿ ದಿ. ಸೌಂದರ್ಯ ಅವರ ಜೊತೆ ಹೆಜ್ಜೆ ಹಾಕಿ­ದಾಗ ಕನ್ನಡ ನಾಡು ಮನ­ಸಾರೆ ಮೆಚ್ಚಿ­ಕೊಂ­ಡಿತು. ಇಂಥ ಅಪ್ಪಟ ಕಲಾ­ವಿ­ದನ ದಿವ್ಯ ಪ್ರತಿ­ಭೆ­ಯನ್ನು ಬಳ­ಸಿ­ಕೊಂ­ಡಿ­ದ್ದಕ್ಕೆ ಕನ್ನಡ ಚಿತ್ರ­ರಂಗ ನಿಜಕ್ಕೂ ಧನ್ಯ!
ಶ್ರೀಧರ್‌ ಜೈನ್‌ ನೃತ್ಯ ಪರಂ­ಪ­ರೆ­ಯಿಂದ ಬಂದ­ವ­ರಲ್ಲ. ತಂದೆ ದಿ. ಮಿಸ್ರಿ­ಲಾಲ್‌ ಜೈನ್‌ ರಾಜ­ಸ್ಥಾನ ಮೂಲದ ವಾಪಾ­ರ­ಸ್ಥರು. ತಾಯಿ ರತಿ­ದೇವಿ ದಕ್ಷಿಣ ಕನ್ನ­ಡದ ಕಾರ್ಕಳ ಸಮೀ­ಪದ ನಾರ­ವಿ­ಯ­ವರು. ಶ್ರೀಧರ್‌ ಹುಟ್ಟಿದ್ದು ನಾರ­ವಿ­ಯಲ್ಲಿ ಬೆಳ­ದ­ದ್ದೇಲ್ಲಾ ಮೈಸೂ­ರಿ­ನಲ್ಲಿ.
ಶ್ರೀಧರ್‌ ತಮ್ಮ ನಾಲ್ಕನೇ ವಯ­ಸ್ಸಿ­ನ­ಲ್ಲಿಯೇ ತಂದೆ­ಯನ್ನು ಕಳೆ­ದು­ಕೊಂ­ಡರು. 9ನೇ ವಯ­ಸ್ಸಿ­ನಲ್ಲಿ ನೃತ್ಯ­ಗುರು ಶ್ರೀನಿ­ವಾಸ್‌ ಅವರ ಬಳಿ ನೃತ್ಯ ಕಲಿಕೆ ಆರಂ­ಭಿ­ಸಿ­ದಾಗ ಪರಿ­ಸ್ಥಿತಿ ಸರಿ­ಯಾ­ಗಿ­ರ­ಲಿಲ್ಲ. ಅನಿ­ವಾ­ರ್ಯ­ವಾಗಿ ಬಹಳ ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ ಎಲೆ­ಕ್ಟ್ರಾ­ನಿ­ಕ್ಸ್‌­ವೊಂ­ದ­ರಲ್ಲಿ ಕೆಲ­ಸಕ್ಕೆ ಸೇರ­ಬೇ­ಕಾ­ಯಿತು. ಕೆಲ­ಸದ ಒತ್ತಡ ನೃತ್ಯಕ್ಕೆ ಅವ­ಕಾಶ ಕೊಡ­ಲಿಲ್ಲ. ಮಧ್ಯೆ ನೃತ್ಯ ಕಲಿ­ಕೆ­ಯನ್ನು ಬಿಡ­ಬೇ­ಕಾ­ಯಿತು. ಆದರೆ ಕಲಿ­ಕೆಯ ಆಸಕ್ತಿ ಹಸಿ­ರಾ­ಗಿತ್ತು.
ಆಮೇಲೆ ನೃತ್ಯ­ಗುರು ಶೀಲಾ ಶ್ರೀಧರ್‌ ಅವರ ಬಳಿ ನೃತ್ಯ­ಕ­ಲಿಕೆ ಮುಂದು­ವ­ರಿ­ಸಿ­ದರು. 12 ವರ್ಷ­ಗಳ ನೃತ್ಯಾ­ಭ್ಯಾಸ ಅವ­ರಿಗೆ ಹೊಸ­ದೊಂದು ದಾರಿ ತೋರಿ­ಸಿತು. ಮೈಸೂರು ವಿವಿ ಲಲಿ­ತ­ಕಲಾ ಕಾಲೇ­ಜಿ­ನಲ್ಲಿ ಡಿಪ್ಲೊಮಾ ಪಡೆ­ದಿ­ರುವ ಅವರು ವಿದ್ವತ್‌ ಪರೀ­ಕ್ಷೆ­ಯಲ್ಲಿ ಉನ್ನತ ಶ್ರೇಣಿ ಗಳಿ­ಸಿ­ದರು. ಈಗ ಶ್ರೀಧರ್‌ ಜೈನ್‌ ಸ್ವತಃ ನೃತ್ಯ­ಗರು!

ಶ್ರೀ ನಿಮಿ­ಷಾಂಬ ನೃತ್ಯ ಶಾಲೆ: ಇದು ಶ್ರೀಧರ್‌ ಜೈನ್‌ ಅವರ ಕನ­ಸಿನ ಕೂಸು. 1996ರಲ್ಲಿ ಮೈಸೂ­ರಿ­ನಲ್ಲಿ ಸ್ಥಾಪ­ನೆ­ಗೊಂಡ ಈ ನೃತ್ಯ ಶಾಲೆ ಇವತ್ತು ಬಹಳ ಎತ್ತ­ರಕ್ಕೆ ಬೆಳೆ­ದಿದೆ. ಯಾವಾ­ಗಲು ವಿದ್ಯಾ­ರ್ಥಿ­ಗ­ಳಿಂದ ತುಂಬಿ­ರು­ತ್ತದೆ. ಈ ಶಾಲೆ ಮೈಸೂ­ರಿ­ನಲ್ಲಿ 7 ಬ್ರಾಂಚ್‌­ಗ­ಳನ್ನು ಹೊಂದಿದ್ದು ಪ್ರತಿ­ನಿತ್ಯ ನೃತ್ಯ ವಿದ್ಯೆ­ದಾನ ನಡೆ­ಯು­ತ್ತಿದೆ. ನೂರಾರು ವಿದ್ಯಾ­ರ್ಥಿ­ಗ­ಳನ್ನು ಹೊಂದಿ­ರುವ ಶ್ರೀಧರ್‌ ನೆಚ್ಚಿನ ಗುರು­ಗ­ಳಾ­ಗಿ­ದ್ದಾರೆ. ಅವರ ವಿದ್ಯಾ­ರ್ಥಿ­ಗಳು ಈಗಾ­ಗಲೇ ತಮ್ಮ ಪ್ರತಿಭೆ ತೋರಿ­ದ್ದಾರೆ. ವಿದೇಶಿ ಶಿಷ್ಯ­ರನ್ನು ಅವರು ಹೊಂದಿ­ದ್ದಾರೆ. ಭಾರ­ತ­ದಲ್ಲೇ ಪ್ರಥಮ ಬಾರಿಗೆ ಸ್ಕೇಟಿಂಗ್‌ ಮೇಲೆ ನೃತ್ಯ ಪ್ರದ­ರ್ಶಿಸಿ ದಾಖಲೆ ಮಾಡಿದ `ರೀತು' ಶ್ರೀಧರ್‌ ಅವರ ಶಿಷ್ಯ­ರ­ಲ್ಲೊ­ಬ್ಬರು.
ಬಡ ಮಕ್ಕಳ ನೃತ್ಯ ಕಲಿ­ಕೆಗೆ ಪ್ರೊತ್ಸಾಹ ಮಾಡು­ತ್ತಿ­ರುವ ಶ್ರೀಧರ್‌ ಜೈನ್‌ ನೃತ್ಯಕ್ಕೆ ಬೇಕಾದ ವಸ್ತ್ರ, ಒಡವೆ, ಮೇಕಪ್‌ ಮುಂತಾ­ದ­ವನ್ನು ಉಚಿ­ತ­ವಾಗಿ ಒದ­ಗಿ­ಸು­ತ್ತಿ­ದ್ದಾರೆ. `ಶ್ರೀ ನಿಮಿ­ಷಾಂಬ ನಾದಾ­ಲಯ ಮಂಟಪ'ವೆಂಬ ಸಭಾಂ­ಗಣ ಶ್ರೀಧರ್‌ ಅವರ ಮನೆಯ ಭಾಗವೇ ಆಗಿದ್ದು ಮನೆ­ಯಿಡೀ ನೃತ್ಯದ ಪರಿ­ಮಳ ಪಸ­ರಿ­ಸಿದೆ.

ಹೆಜ್ಚೆ-ಗೆಜ್ಜೆ: ಕರ್ನಾ­ಟ­ಕದ ಪ್ರತಿ­ಷ್ಠಿತ `ಹೆಜ್ಜೆ- ಗೆಜ್ಜೆ' ರಾಜ್ಯ­ಮ­ಟ್ಟದ ನೃತ್ಯ ಸ್ಪರ್ಧೆ­ಯನ್ನು ಶ್ರೀಧರ್‌ ಅವರು ಕಳೆದ 13 ವರ್ಷ­ಗ­ಳಿಂದ ಆಯೋ­ಜಿ­ಸುತ್ತಾ ಬಂದಿ­ದ್ದಾರೆ. ನೃತ್ಯದ ಎಲ್ಲಾ ಪ್ರಕಾ­ರ­ಗ­ಳಿಗೂ ನಡೆ­ಯುವ ಈ ಸ್ಪರ್ಧೆ­ಯಲ್ಲಿ ಅಸಂ­ಖ್ಯಾತ ಸ್ಪರ್ಧಾ­ಳು­ಗಳು ಭಾಗ­ವ­ಹಿ­ಸಿ­ದ್ದಾರೆ.

ನೃತ್ಯ­ರೂ­ಪ­ಕ­ಗಳು: ಶ್ರೀಧರ್‌ ಜೈನ್‌ ಸಂಯೋ­ಜಿ­ಸಿ­ರುವ ನೃತ್ಯ ರೂಪ­ಕ­ಗಳು ದೇಶಾ­ದ್ಯಂತ ಪ್ರದ­ರ್ಶ­ನ­ಗೊಂ­ಡಿವೆ. ಮೋಹಿನಿ ಬಸ್ಮಾ­ಸುರ, ಭರತ ಬಾಹು­ಬಲಿ, ಶ್ರೀಶಕ್ತಿ ನಿಮಿ­ಷಾಂಬ, ದಕ್ಷ­ಯಜ್ಞ, ಶ್ರೀ ಮಹ­ವೀರ ವೈಭವ, ಚತ್ರ­ಪತಿ ಶಿವಾಜಿ ಮುಂತಾದ ರೂಪ­ಕ­ಗಳು ಬಹಳ ಯಶ­ಸ್ವಿ­ಯಾ­ಗಿವೆ. ಅಲ್ಲದೆ ಚಲ­ನ­ಚಿತ್ರ, ಟಿವಿ ಧಾರಾ­ವಾ­ಹಿ­ಗ­ಳಿಗೂ ನೃತ್ಯ ಸಂಯೋ­ಜನೆ ಮಾಡಿ­ದ್ದಾರೆ. ಈಗ ನವ­ಶಕ್ತಿ ವೈಭವ ನೃತ್ಯ ರೂಪಕ ಸಂಯೋ­ಜ­ನೆಗೆ ಸಿದ್ಧ­ತೆ­ಗಳು ನಡೆ­ಯು­ತ್ತಿವೆ. ಈ ಬಾರಿಯ ದಸ­ರೆ­ಯಲ್ಲಿ(ಸೆ. 20: ಯುವ ದಸರಾ) ಭಾರ­ತ­ದಲ್ಲೆ ಪ್ರಥ­ಮ­ವಾಗಿ ಶ್ರೀಧರ್‌ ಜೈನ್‌ ಡೋಲಕ್‌ ಮೇಲೆ ನಾಟ್ಯ ಮಾಡ­ಲಿ­ದ್ದಾರೆ ಹಾಗೂ ಜೈ ಹೋ ಗೀತೆಗೆ 40 ಮಂದಿ ಕಲಾ­ವಿ­ದರ ಒಡ­ಗೂಡಿ ಹೆಜ್ಚೆ­ಹಾ­ಕ­ಲಿ­ದ್ದಾರೆ.

ಸಮ್ಮಾನ: ಶ್ರೀಧರ್‌ ಅವರ ನೃತ್ಯ ಪ್ರತಿ­ಭೆಯ ಹಿಂದೆ ಅಪಾರ ಗೌರವ ಪ್ರಶ­ಸ್ತಿ­ಗ­ಗಳು ಅರಸಿ ಬಂದಿವೆ. ಕಲ್ಕತ್ತಾ ಯೂತ್‌ ಪೆಸ್ಟಿ­ವಲ್‌ ರಾಷ್ಟ್ರೀಯ ಪ್ರಶಸ್ತಿ, ಶ್ರೀ ಗೊಮ್ಮ­ಟೇ­ಶ್ವರ ವಿದ್ಯಾ­ಪೀಠ ಪ್ರಶಸ್ತಿ, ಮೈಸೂ­ರಿನ ಜೈನ್‌ ಕಮಿ­ಟಿ­ಯಿಂದ `ನ­ಟ­ಸಾ­ರ್ವ­ಭೌಮ' ಪ್ರಶಸ್ತಿ ಹಾಗೂ ಸಂಘ ಸಂಸ್ಥೆ­ಗ­ಳಿ­ಗಂದ ಹಲವು ಬಿರು­ದು­ಗ­ಳನ್ನು ಗಳಿ­ಸಿ­ದ್ದಾರೆ.
ಶ್ರೀಧರ್‌ ಜೈನ್‌ ಅವರ ಪತ್ನಿ ಸೌಮ್ಯ ಶ್ರೀಧರ್‌ ಹಿಂದೂ­ಸ್ಥಾನಿ ಸಂಗೀತ ಬಲ್ಲ­ವರು. ಆಕಾ­ಶ­ವಾಣಿ ಕಲಾ­ವಿ­ದರೂ ಹೌದು. ಮಗಳು ಲಾಸ್ಯ ನೃತ್ಯ ಕಲಿ­ಯು­ತ್ತಿ­ದ್ದಾಳೆ. ಮಗ ಸಾರಂಗ.
ಜೈನ ಸಮು­ದಾ­ಯ­ದಲ್ಲಿ ಹುಟ್ಟಿ ಭರ­ತ­ನಾಟ್ಯ ಬಲ್ಲ ಪ್ರಥಮ ಕಲಾ­ವಿದ ಎನಿ­ಸಿ­ಕೊಂ­ಡಿ­ರುವ ಶ್ರೀಧರ್‌ ಜೈನ್‌ ಅವ­ರಿಗೆ ನೃತ್ಯ ಬಿಟ್ಟ ಬೇರೊಂದು ಲೋಕವೇ ಇಲ್ಲ. ಅವರ ನಾಡಿ­ಯಲ್ಲಿ ನೃತ್ಯ­ರಾ­ಜನ ವೈಭವ ಸದಾ ಮೂಡಿ­ಬ­ರು­ತ್ತಿದೆ.

ಅನಂತ ಸತ್ಯಂ





ಅನಂತ ಸತ್ಯಂ
ಬಲು ಅಪರೂಪ ಇಂಥವರು......




ಅ­ನಂತ ಸತ್ಯಂಬಲು ಅಪರೂಪ ಇಂಥವರುಕಗ್ಗ­ಲ್ಲನ್ನು ಕಡೆದು ಮೂರುತಿ ಮಾಡುವ ಶಿಲ್ಪಾ­ಗಾರ. ತಂತಿ ಮೇಲೆ ನಡೆದು ಮಾಧುರ್ಯ ತುಂಬುವ ಸಂಗೀ­ತ­ಗಾರ. ಕಲ್ಲಿನ ಗುಣ ಅರಿ­ತ­ವರು. ತಂತಿ­ಗಳ ಶೃತಿ­ಯಿಂದ ನಾಡಿ ಮಿಡಿ­ತ­ಗೊ­ಳಿ­ಸು­ವ­ವರು. ಕಗ್ಗ­ಲ್ಲಿಗೆ ಉಳಿ­ಪೆ­ಟ್ಟಿನ ರುಚಿ ತೋರಿಸಿ ಕೃತಿ ಕಟ್ಟು­ವ­ವರು. ಬೆರಳ ತುದಿ­ಯಿಂದ ತಂತಿ­ಗಳ ಬಳಸಿ ರಸೋ­ತ್ಪತ್ತಿ ಮಾಡು­ವ­ವರು.ಅವರು ವಿದ್ವಾನ್‌ ಎನ್‌. ಅನಂತ ಸತ್ಯಂ. ಅಪ­ರೂ­ಪದ ಶಿಲ್ಪಿ ಹಾಗೂ ವೈಲಿನ್‌ ವಿದ್ವಾಂ­ಸರು. ನಾಡಿ­ನ­ಲ್ಲಿ­ರುವ ಬೆರ­ಳೆ­ಣಿ­ಕೆ­ಯಷ್ಟು ಶಿಲ್ಪಿ­ಗ­ಳಲ್ಲಿ ಅನಂತ ಸತ್ಯಂ ಒಬ್ಬರು. ಅವರ ಕೈಚ­ಳ­ಕ­ದಿಂದ ಮೂಡಿದ ಹಲವು ಕಲಾ­ಕೃ­ತಿ­ಗಳು ನಾಡಿ­ನಾ­ದ್ಯಂತ ಪ್ರಸಿದ್ಧಿ ಪಡೆ­ದಿವೆ. ಬೆಂಗ­ಳೂ­ರಿನ ರಾಜ­ಭ­ವ­ನ­ದ­ಲ್ಲಿ­ರುವ ಮಹಾ­ತ್ಮ­ಗಾಂಧಿ ಪುತ್ಥಳಿ ಅವರ ಮಹ­ತ್ವದ ಕೃತಿ. ಈ ಪುತ್ಥಳಿ ಪ್ರತಿ­ಷ್ಠಾ­ಪ­ನೆ­ಯಾ­ದಾಗ ಅಂದಿನ ರಾಜ್ಯ­ಪಾಲ ಖುರ್ಷಿದ್‌ ಆಲಂ ಖಾನ್‌ ಸತ್ಯಂ ಅವ­ರನ್ನು ಸನ್ಮಾ­ನಿ­ಸಿ­ದ್ದರು.ಸರ್‌. ಎಂ. ವಿಶ್ವೇ­ಶ್ವ­ರಯ್ಯ ಅವರ ಹುಟ್ಟೂ­ರಾದ ಮುದ್ದೇ­ನ­ಹ­ಳ್ಳಿಯ ವಿಶ್ವೇ­ಶ್ವ­ರಯ್ಯ ಪುತ್ಥಳಿ ಅನಂತ ಸತ್ಯಂ ಅವರ ಹೆಸರು ಹೇಳು­ತ್ತದೆ! ಬೆಂಗ­ಳೂ­ರಿನ ಎಂ.ಜಿ. ರಸ್ತೆಯ ಐಎ­ನ್‌ಜಿ ವೈಶ್ಯ ಬ್ಯಾಂಕ್‌ ಆವ­ರ­ಣ­ದ­ಲ್ಲಿ­ರುವ ಸಿಂಹದ ಕೃತಿ ಸತ್ಯಂ ಅವರ ಸೃಜ­ನ­ಶೀ­ಲ­ತೆಯ ಕೂಸು. ಈ ಬ್ಯಾಂಕಿನ ಲೋಗೋ ಕೂಡ ಸತ್ಯಂ ಮೂಡಿ­ಸಿದ ಸಿಂಹವೇ. ಖ್ಯಾತ ನೃತ ಕಲಾ­ವಿದೆ ಪ್ರೊತಿಮಾ ಬೇಡಿ ಅವರ ನೃತ್ಯ­ಗ್ರಾ­ಮ­ದ­ಲ್ಲಿ­ರುವ ಹಲವು ಕಲಾ­ಕೃ­ತಿ­ಗ­ಳನ್ನು ಅನಂತ ಸತ್ಯಂ ಮಾಡಿ­ಕೊ­ಟ್ಟಿ­ದ್ದಾರೆ.ಅನಂತ ಸತ್ಯಂ ಹುಟ್ಟಿದ್ದು ರಾಮ­ನ­ಗ­ರ­ದಲ್ಲಿ. ತಂದೆ ದಿ. ವಿದ್ವಾನ್‌ ನಾಗ­ಭೂ­ಷಣ ಶಾಸ್ತ್ರಿ ಹಾಗೂ ತಾಯಿ ಪಾರ್ವ­ತಮ್ಮ. ತಂದೆ ತಾಯಂ­ದಿ­ರಿ­ಬ್ಬರೂ ಸಂಗೀತ ತಿಳಿ­ದ­ವರು. ರಾಮ­ನ­ಗ­ರ­ದಲ್ಲಿ ಶಾಸ್ತ್ರಿ­ಗಳ ಮನೆ ಎಂದರೆ ಇವ­ತ್ತಿಗೂ ಖ್ಯಾತಿ. ಗಣೇಶ ಹಬ್ಬದ ಕಾಲ ಬಂತೆಂ­ದರೆ ಶಾಸ್ತ್ರಿ­ಗಳ ಮನೆ­ಯಲ್ಲಿ ಸಂಭ್ರ­ಮವೋ ಸಂಭ್ರಮ. ಶಾಸ್ತ್ರಿ­ಗಳ ಕೈಚ­ಳ­ಕ­ದಿಂದ ಮೂಡಿದ ಗಣ­ಪನ ಮೂರ್ತಿ ಕೊಳ್ಳಲು ದೂರದ ಊರಿ­ನಿಂದ ಜನ ಬರು­ತ್ತಿ­ದ್ದ­ರಂತೆ. ಮನೆ ತುಂಬೆಲ್ಲಾ ಮಣ್ಣಿನ ವಾಸನೆ! ಮನೆ ಮಂದಿ­ಯೆಲ್ಲಾ ಒಟ್ಟಿಗೆ ಕೂತು ಗಜಾ­ನ­ನ­ನನ್ನು ಕಟ್ಟು­ತ್ತಿ­ದ್ದರು. ಮಗ ಅನಂತ ಸತ್ಯಂ ಕೈಯಿಂದ ಗಣ­ಪನ ಕಣ್ಣು, ಕಿವಿ, ಮೂಗು ಹೀಗೆ ಒಂದೊಂದೇ ಅಂಗ­ಗ­ಳನ್ನು ಮಾಡಿಸಿ ಶಿಲ್ಪ­ಕಲೆ ಕಲಿ­ಕೆಗೆ ಹಚ್ಚಿ­ದರು. ಅನಂತ ಸತ್ಯ ತಂದೆ ಕೂಡ ಸಂಗೀತ ತಿಳಿ­ದ­ವರು. ಹರಿ­ಕ­ಥೆ­ಗ­ಳಿಗೆ ಹಾರ್ಮೋ­ನಿಯಂ ನುಡಿ­ಸು­ತ್ತಿ­ದ್ದರು. ವಿದ್ವಾಂ­ಸ­ರಾದ ಗುರು­ರಾ­ಜುಲು ನಾಯ್ಡು, ವೆಂಕೋ­ಬ­ದಾ­ಸರು ಮುಂತಾ­ದ­ವರ ಹರಿ­ಕ­ಥೆ­ಗ­ಳಿಗೆ ಹಾರ್ಮೋ­ನಿಯಂ ನುಡಿ­ಸಿ­ದ್ದಾರೆ.ಅನಂತ ಸತ್ಯಂ ಎಸ್ಸೆ­ಸ್ಸೆಲ್ಸಿ ತನಕ ರಾಮ­ನ­ಗ­ರ­ದಲ್ಲೇ ಕಲಿ­ತರು. ನಂತರ ಬೆಂಗ­ಳೂ­ರಿನ ಚಿತ್ರ­ಕಲಾ ಪರಿ­ಷ­ತ್‌­ನಲ್ಲಿ ಬಿಎ­ಫ್‌­ಎಗೆ ಸೇರಿ­ದರು. ಎಂಎ­ಫ್‌ಎ ಮಾಡಿ­ದರು. ಅಲ್ಲೇ ಉಪ­ನ್ಯಾ­ಸ­ಕರೂ ಆದರು.ಸಂಗೀ­ತ­ಗಾರ ಅನಂತ ಸತ್ಯಂ: ಚಿಕ್ಕಂ­ದಿ­ನಲ್ಲಿ ಮನೆ­ಯಲ್ಲೇ ಹಾಡು­ಗಾ­ರಿಕೆ ಕಲಿ­ಯು­ತ್ತಿ­ದ್ದರು. ವೈಲಿನ್‌ ಮೇಲೆ ಆಸಕ್ತಿ ಹುಟ್ಟಿದ್ದು ಹೈಸ್ಕೂಲು ಮೆಟ್ಟಿ­ಲೇ­ರಿ­ದಾಗ. ಬೆಂಗ­ಳೂ­ರಿ­ನಲ್ಲಿ ಕಾಲೇಜು ಸೇರಿದ ಮೇಲೆ 1984ರಲ್ಲಿ ವಿದ್ವಾನ್‌. ಬಿ.ವಿ. ಶ್ರೀಕಂ­ಠೇ­ಶ್ವರ್‌ ಅವರ ಬಳಿ ವೈಲಿನ್‌ ಕಲಿಕೆ ಆರಂ­ಭಿ­ಸಿ­ದರು. ಸತ್ಯಂ ಅವರ ಕಲಿ­ಕೆಯ ದಿನ­ಗಳು ಕುತೂ­ಹ­ಲ­ಕ­ರ­ವಾ­ಗಿವೆ. ಮುಂಜಾನೆ ತಿಂಡಿ ಮುಗಿಸಿ ಬೆಂಗ­ಳೂರು ಕಡೆ ಹೊರ­ಟರೆ ಮತ್ತೆ ಮನೆ ಸೇರು­ತ್ತಿ­ದ್ದುದು ರಾತ್ರಿ ಒಂದು ಗಂಟೆಗೆ. ಮಧ್ಯ­ರಾತ್ರಿ 12.30ಕ್ಕೆ ಬೆಂಗ­ಳೂರು ಬಿಡುವ ಕಡೆಯ ಪ್ಯಾಸೆಂ­ಜರ್‌ ರೈಲು ಹಿಡಿದು ರಾಮ­ನ­ಗರ ಸೇರು­ತ್ತಿ­ದ್ದರು. ಅಪ್ಪ ಅಮ್ಮ ಮಗನ ಹಾದಿ­ಗಾಗಿ ಕಾಯು­ತ್ತಿ­ದ್ದರು. ಗುರು ಹೇಳಿ­ಕೊ­ಟ್ಟದ್ದು ಮರೆತು ಹೋದೀತು ಎಂದು ಅಷ್ಟೊ­ತ್ತಿ­ನಲ್ಲೂ ವೈಲಿನ್‌ ಅಭ್ಯಾಸ ಮಾಡಿ ಮಲ­ಗು­ತ್ತಿ­ದ್ದರು.ಸತ್ಯಂ ಶ್ರೀಕಂ­ಠೇ­ಶ್ವರ್‌ ಅವರ ನೆಚ್ಚಿನ ಶಿಷ್ಯ­ರಾ­ಗಿ­ದ್ದರು. ಕೆಲವು ಸಲ ಅವರ ಮನೆ­ಯಲ್ಲೇ ಪಾಠದ ಜೊತೆಗೆ ಊಟವೂ ಆಗು­ತ್ತಿತ್ತು. ತಿಂಗ­ಳಿ­ಗೊಮ್ಮೆ ಫೀ ಕಟ್ಟುವ ಪರಿ­ಪಾಠ ಇರ­ಲಿಲ್ಲ. ವರ್ಷದ ಫೀಯನ್ನು ಒಮ್ಮೆ ಕಟ್ಟಿದ ಉದಾ­ಹ­ರ­ಣೆ­ಗಳೂ ಇವೆ! ಸತ್ಯಂ ಅವ­ರಿಗೆ ಪೌರೋ­ಹಿ­ತ್ಯವೂ ಗೊತ್ತಿತ್ತು. ಅವ­ಶ್ಯ­ವಿ­ರುವ ಹಣ­ವನ್ನು ಅವರೇ ಸಂಪಾ­ದಿ­ಸು­ತ್ತಿ­ದ್ದರು. ಮದು­ವೆ­ಗ­ಳಿಗೆ ಪೌರೋ­ಹಿತ್ಯ ವಹಿ­ಸು­ತ್ತಿ­ದ್ದರು. ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ ನೂರಾರು ಮದುವೆ ಮಾಡಿ­ಸಿದ ಕೀರ್ತಿ ಅವ­ರದು.ಮೃದಂ­ಗ­ವನ್ನೂ ಕಲಿ­ತರು: ಕಾಲೇಜು ಸಾಗು­ತ್ತಿತ್ತು. ವೈಲಿನ್‌ ಸಾಧನೆ ನಡೆ­ಯು­ತಿತ್ತು. ಇಷ್ಟರ ನಡುವೆ ಮಿಕ್ಕಿದ ಸಮ­ಯ­ವನ್ನು ವ್ಯರ್ಥ ಮಾಡ­ಲಿಲ್ಲ. ವಿದ್ವಾನ್‌ ಎಂ.ಎಲ್‌. ವೀರ­ಭ­ದ್ರಯ್ಯ ಆವರ ಬಳಿ ಮೃದಂ­ಗಕ್ಕೆ ಸೇರಿ­ದರು. ತಂತಿ­ವಾದ್ಯ ವೈಲಿನ್‌ ಹಾಗೂ ತಾಳ ವಾದ್ಯ ಮೃದಂಗ ಎರ­ಡನ್ನೂ ಶ್ರದ್ಧೆ­ಯಿಂದ ಅಭ್ಯಾಸ ಮಾಡಿ­ದರು. ಇವು­ಗಳ ಜೊತೆಗೆ ಹಾರ್ಮೋ­ನಿಯಂ ಜ್ಞಾನವೂ ಇದೆ.1992ರಲ್ಲಿ ಖ್ಯಾತ ವೈಲಿನ್‌ ವಾದಕ ಕರ್ನಾ­ಟಕ ಕಲಾಶ್ರೀ ವಿದ್ವಾನ್‌ ಆರ್‌. ಆರ್‌. ಕೇಶವ ಮೂರ್ತಿ­ಗಳ ಶಿಷ್ಯತ್ವ. ಅಷ್ಟೊ­ತ್ತಿ­ಗಾ­ಗಲೇ ಕಚೇರಿ ನೀಡಲು ಆರಂ­ಭಿ­ಸಿ­ದ್ದರು. ಆಮೇಲೆ ವಿದ್ವಾನ್‌ ಮೈಸೂರು ಎಂ. ನಾಗ­ರಾಜ್‌, ಚಿತ್ರ­ವೀಣಾ ಎನ್‌. ರವಿ­ಕಿ­ರಣ್‌ ಅವ­ರಿಂ­ದಲೂ ಅನಂತ ಸತ್ಯಂ ಸಂಗೀತ ಕಲಿ­ತಿ­ದ್ದಾರೆ.ಸತ್ಯಂ ಅವರ ಪ್ರಥಮ ಕಚೇರಿ ಮದುವೆ ಮನೆ. ಹಲ­ವರು ಮೆಚ್ಚಿ ಬೆನ್ನು­ತ­ಟ್ಟಿ­ದರು. 20ನೇ ವಯ­ಸ್ಸಿ­ನಲ್ಲಿ ಕಚೇರಿ ಆರಂ­ಭಿ­ಸಿದ ಅನಂತ ಸತ್ಯಂ ಹಿಂದೆ ತಿರುಗಿ ನೋಡ­ಲಿಲ್ಲ. ಸೋಲೋ ಹಾಗೂ ಪಕ್ಕ­ವಾ­ದ್ಯ­ಗ­ಳೆ­ರ­ಡ­ರಲ್ಲೂ ರಾಷ್ಟ್ರಾ­ದ್ಯಂತ ಕಛೇರಿ ನೀಡಿ­ದ್ದಾರೆ. ಸಾಗ­ರ­ದಾ­ಚೆಗೂ ಸತ್ಯಂ ಅವರ ಪ್ರತಿಭೆ ಸಾಗಿದೆ. ಸ್ಟಿಟ್ಜ­ರ್ಲೆಂಡ್‌ ಪ್ರವಾಸ ಮಾಡಿ ಅಲ್ಲಿಯ ಹಲವು ನಗ­ರ­ಗ­ಳಲ್ಲಿ ಎರಡು ತಿಂಗಳ ಕಾಲ ತಮ್ಮ ಸಂಗೀತ ಪ್ರತಿಭೆ ತೋರಿ­ದ್ದಾರೆ.ಮದುವೆ ಮನೆ­ಯಿಂದ ಆರಂ­ಭ­ವಾದ ಸತ್ಯಂ ಅವರ ಕಚೇ­ರಿ­ಗಳು ಇಲ್ಲಿ­ಯ­ವ­ರೆಗೆ ಸಾವಿ­ರ­ಗಳ ಗಡಿ ಮುಟ್ಟಿವೆ. ಆರ್‌.ಕೆ. ಶ್ರೀಕಂ­ಠನ್‌, ವಿದ್ಯಾ­ಭೂ­ಷಣ ಸೇರಿ­ದಂತೆ ಹಲವು ಮಂದಿ ವಿದ್ವಾಂ­ಸ­ರಿಗೆ ವೈಲಿನ್‌ ಸಾಥ್‌ ನೀಡಿ­ದ್ದಾರೆ. ಸೋಲೋ ವೈಲಿನ್‌ ಕಚೇ­ರಿ­ಗ­ಳಲ್ಲೂ ಅನಂತ ಸತ್ಯಂ ಹೆಸರು ಗಳಿ­ಸಿ­ದ್ದಾರೆ.ರಾಷ್ಟ್ರೀಯ ಪ್ರಶಸ್ತಿ: ಅನಂತ ಸತ್ಯಂ ಅವರು ಶಿಲ್ಪ­ಕಲೆ ಹಾಗೂ ಸಂಗೀತ ಎರ­ಡ­ರಲ್ಲೂ ಅಪಾರ ಮೆಚ್ಚುಗೆ ಗಳಿ­ಸಿ­ದ್ದಾರೆ. ಅವ­ರನ್ನು ಹಲವು ಗೌರವ ಪ್ರಶ­ಸ್ತಿ­ಗಳು ಅರಸಿ ಬಂದಿವೆ. 1992ರಲ್ಲಿ ಕರ್ನಾ­ಟಕ ಚಿತ್ರ­ಕಲಾ ಪರಿ­ಷತ್‌ ಆಯೋ­ಜಿ­ಸಿದ್ದ ಅಖಿಲ ಭಾರತ ಲಲಿತ ಕಲೆ ಸ್ಪರ್ಧೆ­ಯಲ್ಲಿ ರಾಷ್ಟ್ರೀಯ ಪ್ರಶ­ಸ್ತಿ­ಗ­ಳಿ­ಸಿ­ದ್ದಾರೆ. 1993ರಲ್ಲಿ ಚಿತ್ರ­ಕಲಾ ಪರಿ­ಷ­ತ್‌­ನಲ್ಲಿ `ಶ್ರೇ­ಷ್ಠ­ವಿ­ದ್ಯಾರ್ಥಿ' ಪ್ರಶ­ಸ್ತಿ­ಯನ್ನು ತಮ್ಮ­ದಾ­ಗಿ­ಸಿ­ಕೊಂ­ಡಿ­ದ್ದಾರೆ. 1991ರಲ್ಲಿ ವೈಲಿನ್‌ ಜೂನಿ­ಯರ್‌ ಪರಿ­ಕ್ಷೆ­ಯಲ್ಲಿ ದ್ವಿತೀಯ ರ್ಯಾಂಕ್‌ ಗಳಿ­ಸಿ­ದ್ದಾರೆ. 1997ರಲ್ಲಿ ಸುವರ್ಣ ಸ್ವಾತಂತ್ರ್ಯ ಸಮಿತಿ ಪ್ರಶಸ್ತಿ, ಲಲಿತ ಕಲಾ ಅಕಾ­ಡೆಮಿ ಸ್ಕಾಲ­ರ್‌­ಶಿಷ್‌, ಇತ್ತೀ­ಚೆಗೆ `ಚಾ­ಣಕ್ಯ ರತ್ನ' ಪ್ರಶಸ್ತಿ ಮುಂತಾದ ಗೌರ­ವ­ಗ­ಳಿಗೆ ಭಾಜ­ನ­ರಾ­ಗಿ­ದ್ದಾರೆ. 2000 ತನಕ ಚಿತ್ರ­ಕಲಾ ಪರಿ­ಷ­ತ್‌­ನಲ್ಲೇ ಉಪ­ನ್ಯಾ­ಸ­ಕ­ರಾ­ಗಿದ್ದ ಅವರು ವಿದ್ಯಾ­ರ್ಥಿ­ಗಳ ನೆಚ್ಚಿನ ಶಿಕ್ಷ­ಕ­ರಾ­ಗಿ­ದ್ದರು. ಯಾವುದೋ ಒಂದು ಸಂಸ್ಥೆ­ಯಲ್ಲಿ ಇರು­ವುದು ಪ್ರಾಯೋ­ಗಿಕ ಬೆಳ­ವ­ಣಿಗೆ ಕಷ್ಟ ಎನಿ­ಸಿತು. ಪರಿ­ಷತ್‌ ಕೆಲ­ಸಕ್ಕೆ ಗುಡ್‌ ಬೈ ಹೇಳಿ­ದರು. ಈಗ ಸ್ವತಂತ್ರ ಶಿಲ್ಪಿ ಹಾಗೂ ಸಂಗೀತ ಗುರು. ಹಲವು ಕಡೆ ಶಿಲ್ಪ­ಕಲಾ ಕಾರ್ಯ­ಗಾ­ರ­ಗ­ಳಲ್ಲಿ ಪಾಲ್ಗೊಂಡು ಚಿತ್ರ­ಕಲೆ ಬೋಧಿ­ಸು­ತ್ತಿ­ದ್ದಾರೆ. ಹಲವು ಶಿಲ್ಪ­ಕಲಾ ಕಾರ್ಯಾ­ಗಾ­ರ­ಗ­ಳಲ್ಲಿ ಭಾಗ­ವ­ಹಿ­ಸಿ­ದ್ದಾರೆ.ಇವು­ಗಳ ಜೊತೆಗೆ ಅನಂತ ಸತ್ಯ ಉತ್ತಮ ಕ್ರಿಡಾ­ಪಟು ಕೂಡ. ಕ್ರಿಕೆಟ್‌ ಅಂದರೆ ಪ್ರಾಣ. ಕಾಲೇಜು ದಿನ­ಗ­ಳಲ್ಲಿ ರಣಜಿ ಪಂದ್ಯ­ಗ­ಳಲ್ಲಿ ಆಟ­ವಾ­ಡಿದ ಅನು­ಭ­ವ­ವಿದೆ. ಅನಂತ ಸತ್ಯಂ ನಮ್ಮ ನಾಡಿನ ಅಪ­ರೂ­ಪದ ಕಲಾ­ವಿ­ದರು. ಒಬ್ಬ­ವ್ಯಕ್ತಿ ಲಲಿತ ಕಲೆ­ಗಳ ಒಂದು ವಿದ್ಯೆ­ಯನ್ನು ಸಾಧಿಸಿ ಧಕ್ಕಿ­ಸಿ­ಕೊ­ಳ್ಳಲು ಒಂದು ಜನ್ಮವೇ ಬೇಕು. ಆದರೆ ಅವ­ರಿಗೆ ಶಿಲ್ಪ­ಕಲೆ, ವೈಲಿನ್‌, ಮೃದಂಗ, ಹಾರ್ಮೋ­ನಿಯಂ ಜ್ಞಾನ ಒಲಿದು ಬಂದಿವೆ. ಇವ­ರನ್ನು ಅಪ­ರೂಪ ಎನ್ನಲು ಇಷ್ಟೇ ಸಾಕು. ಇಂಥ ಅನರ್ಘ್ಯ ಪ್ರತಿ­ಭೆ­ಯನ್ನು ಗುರು­ತಿ­ಸಿ­ದ­ವರು ಬಹಳ ಕಡಿಮೆ ಮಂದಿ. ಅದಾ­ವು­ದರ ಬಗ್ಗೆಯೂ ತಲೆ ಕೆಡಿ­ಸಿ­ಕೊ­ಳ್ಳದ ಅನಂತ ಸತ್ಯಂ ಸೇವೆ­ಯನ್ನೇ ಸತ್ಯ ಮತ್ತು ನಿರಂ­ತರ ಎಂದು ನಂಬಿ­ದ್ದಾರೆ.

Tuesday, September 8, 2009

ಗಣ­ಪತಿ ಸಚ್ಚಿ­ದಾ­ನಂದ ಸ್ವಾಮೀಜಿ



ಸಪ್ತ ಸ್ವರಗಳ `ಸ್ವಾಮೀಜಿ' ಹೃದಯ

ಸ ರಿ ಗ ಮ ಪ ದ ನಿ....ಗಳ ಮೇಲೆ ಆ ಮಾನ­ವ­ತಾ­ವಾ­ದಿಗೆ ಅದೇನು ವಿಶ್ವಾಸ! ಸಂಗೀತ ಒಂದು ಶಕ್ತಿ. ಬದು­ಕಿ­ನ­ಲ್ಲಿ­ರುವ ಸೌಂದರ್ಯ ಕಾಣಲು ಸಂಗೀತ ಪ್ರಧಾನ ಮಾರ್ಗ. ಮನುಷ್ಯ ಮಾತ್ರ­ವಲ್ಲ ಪ್ರಾಣಿ ಪಕ್ಷಿ­ಗಳ ಹೃದಯ ತಲು­ಪುವ ಅಪೂರ್ವ ಚೈತನ್ಯ ಸಂಗೀತ. ಜಗದ ಮನು­ಷ್ಯ­ತ್ವ­ವನ್ನು ಒಂದೆಡೆ ಕಲೆ­ಹಾ­ಕುವ ಮಾರ್ಗ. ಮಾಯಾ­ಲೋ­ಕದ ಒತ್ತ­ಡ­ಗ­ಳಿಂದ ಬಳ­ಲಿದ ಹೃದ­ಯ­ಗ­ಳಿಗೆ ವಿಶ್ರಾಂ­ತಿಯ ಗುಳಿಗೆ. ಸಾವಿರ ವ್ಯಾಧಿ­ಗ­ಳನ್ನು ಗುಣ­ಪ­ಡಿ­ಸುವ ಸಾಮ­ರ್ಥ್ಯ­ವಿ­ರುವ ದಿವ್ಯ ಔಷಧಿ.... ಹೀಗೆಂದು ನಂಬಿ­ರುವ ಅವರ ಹೃದಯ ಸಪ್ತ­ಸ್ವ­ರ­ಗ­ಳಿಂದ ಉತ್ಪ­ತ್ತಿ­ಯಾ­ಗಿದೆ!
ಅವ­ರೊಬ್ಬ ಸ್ವಾಮೀಜಿ. ಯಾವುದೋ ಒಂದು ಸಮಾ­ಜಕ್ಕೆ, ಸಮು­ದಾ­ಯಕ್ಕೆ ಸೀಮಿ­ತ­ವಾ­ದ­ವ­ರಲ್ಲ. ಪವಾಡ ಮಾಡಿ ಮಾವಿ­ನ­ಹಣ್ಣು ಉದು­ರಿ­ಸುವ ಮಂತ್ರ­ವಾ­ದಿ­ಯಲ್ಲ. ಮಠದ ಹೆಸ­ರಲ್ಲಿ ಮನೆ­ಕ­ಟ್ಟು­ವ­ವ­ರಲ್ಲ. ಬರೀ ಮಾತು­ಗ­ಳ­ನ್ನಾಡಿ ಜೇಬು ತುಂಬಿ­ಸಿ­ಕೊ­ಳ್ಳುವ ಸ್ವಾಮೀ­ಜಿಯೂ ಅಲ್ಲ! ಅವ­ರೊಬ್ಬ ಹಾಡು­ಗಾರ. ಹಾಡು ಹೇಳಿ ಸಂತೋಷ ಕೊಡು­ವವ. ವಾದ್ಯ ನುಡಿಸಿ ಮನ­ಸ್ಸು­ಗಳ ಮೇಲೆ ಬಣ್ಣ ಬಳಿ­ಯು­ವವ. ಸಪ್ತ ಸ್ವರ­ಗ­ಳನ್ನು ದೇಹ­ವಿಡೀ ತುಂಬಿ­ಕೊಂ­ಡಿ­ರುವ ಸಂಗೀತ ಸಂಪನ್ನ.
ಅವರು ಗಣ­ಪತಿ ಸಚ್ಚಿ­ದಾ­ನಂದ ಸ್ವಾಮೀಜಿ. ಚಾಮುಂಡಿ ಬೆಟ್ಟದ ತಪ್ಪ­ಲಿನ ಪ್ರಕೃತಿ ಮಡಿ­ಲಿ­ನಲ್ಲಿ ಅರ­ಳಿ­ರುವ ಅವ­ಧೂತ ದತ್ತ ಪೀಠದ ಸಂಸ್ಥಾ­ಪ­ಕರು. ಸ್ವತಃ ಸಂಗೀ­ತ­ಗಾ­ರರು, ಸ್ವರ ಸಂಯೋ­ಜ­ಕರೂ ಆಗಿ­ರುವ ಶ್ರೀಗಳು ತಮ್ಮ ಭಕ್ತಿ ಸಂಗೀತ ಮಾರ್ಗದ ಮೂಲಕ ವಿಶ್ವ ಪರ್ಯ­ಟನೆ ಮಾಡಿ­ದ­ವರು. ತಮ್ಮ ಸಂಗೀತ ಚಿಕಿತ್ಸೆ ಮೂಲಕ ವಿಶ್ವ ಮಾನವ ಸಮಾ­ಜ­ದಲ್ಲಿ ಶಾಂತಿ ಮೂಡಿ­ಸಲು ಹವ­ಣಿ­ಸು­ತ್ತಿ­ರುವ ಯೋಗಿ ಶ್ರೀ ಸ್ವಾಮೀಜಿ.
ಸಚ್ಚಿ­ದಾ­ನಂದ ಶ್ರೀಗಳ ಸಂಗೀತ ಚಿಕಿತ್ಸೆ ಇಂದು ಜಗ­ತ್ತಿ­ನೆ­ಲ್ಲೆಡೆ ಮನ್ನಣೆ ಪಡೆ­ದಿದೆ. ಅವರ ಭಕ್ತಿ ಸಂಗೀ­ತ­ದಲ್ಲಿ ಮನ­ಶ್ಯಾ­ಸ್ತ್ರ­ವಿದೆ. ಭವಿ­ಷ್ಯ­ವಿದೆ. ಪತಂ­ಜಲಿ ಯೋಗ­ಸೂ­ತ್ರ­ಗ­ಳಿವೆ. ಸಪ್ತ ಸ್ವರ­ಗಳ ಶುದ್ಧ­ತೆ­ಯಿಂದ ಹೊಮ್ಮಿ ಬರುವ ಮಾಧು­ರ್ಯ­ವನ್ನು ಆಲಿ­ಸುವ ಮನ­ಸ್ಸು­ಗ­ಳಲ್ಲಿ ಸಂತೋ­ಷದ ಕಿಚ್ಚು ಹೊತ್ತಿ­ಕೊ­ಳ್ಳು­ತ್ತದೆ. ಅಲ್ಲೊಂದು ಶಕ್ತಿಯ ಸಂಚಾ­ರ­ವಾ­ಗು­ತ್ತದೆ. ಕೇಳು­ಗನ ನಾಡಿ­ಯಲ್ಲಿ ಶಕ್ತಿ ಚಲಿ­ಸುತ್ತಾ ತಾನಾ­ಗಿಯೇ ಆನಂದ ಉತ್ಪ­ತ್ತಿ­ಯಾ­ಗು­ತ್ತದೆ. ಅದೇ ಚಿಕಿ­ತ್ಸಕ ಗುಣ. ಅದೇ ಸಂಗೀತ ಚಿಕಿತ್ಸೆ.
ಸಂಗೀತ ಚಿಕಿ­ತ್ಸೆ­ಯನ್ನು ಬಲ­ವಾಗಿ ನಂಬಿ­ರುವ ಸಚ್ಚಿ­ದಾ­ನಂದ ಶ್ರೀಗಳು ತಮ್ಮ ಸಂಗೀ­ತದ ಮೂಲಕ ಕೇಳುವ ಮನ­ಸ್ಸು­ಗ­ಳಲ್ಲಿ ರೋಮಾಂ­ಚನ ಸೃಷ್ಟಿ­ಸು­ತ್ತಾರೆ. ಆತ್ಮ­ವನ್ನು ಉಲ್ಲಾ­ಸ­ಗೊ­ಳಿ­ಸು­ತ್ತಾರೆ. ಕಣ್ಣಂ­ಚಿ­ನಲ್ಲಿ ಬಾಷ್ಪ ಹರಿ­ಸು­ತ್ತಾರೆ. ಆ ಅನು­ಭವ ಪಡೆ­ಯಲು ಅವರ ಸಂಗೀ­ತ­ವನ್ನೇ ಕೇಳ­ಬೇಕು.
ಮೈಸೂರು ಆಶ್ರ­ಮದ ಆವ­ರ­ಣ­ದ­ಲ್ಲಿ­ರುವ ನಾದ­ಮಂ­ಟಪ ಅದ್ಬು­ತ­ವನ್ನು ಹೊತ್ತು ನಿಂತಿದೆ. ಮಂಟ­ಪಕ್ಕೆ 72 ಕಂಭ­ಗಳು ಆಸ­ರೆ­ಯಾ­ಗಿವೆ. ಆ 72 ಕಂಭ­ಗಳು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ 72 ಮೇಳ­ಕರ್ತ ರಾಗ­ಗ­ಳನ್ನು ಪ್ರತಿ­ನಿ­ಧಿ­ಸು­ತ್ತವೆ. ಅಲ್ಲಿ ಹತ್ತು ನಿಮಿಷ ಕೂತರೆ ಸಾಕು ಮನಸ್ಸು ನಿರ್ಮ­ಲ­ವಾ­ಗು­ತ್ತದೆ. ಅಲ್ಲಿ ಬೀಸುವ ಗಾಳಿ ಸರಿ­ಗ­ಮ­ಗ­ಳನ್ನು ಹೊತ್ತು ಸಾಗು­ತ್ತದೆ. ಸುಂದರ ಪರಿ­ಸ­ರ­ದೊ­ಳ­ಗಿನ ಪ್ರತಿ ಗಿಡವೂ ಕೃತಿ ಗೀತೆ ಕೀರ್ತ­ನೆ­ಗ­ಳನ್ನು ಗುನು­ಗು­ನಿ­ಸು­ತ್ತವೆ. ಅಲ್ಲಿ ಹೋದರೆ ಮೌನದ ಜೊತೆ ಮಾತ­ನಾ­ಡ­ಬ­ಹುದು. ನಿಶ­ಬ್ದದ ಜೊತೆ ಆಲಾಪ ಮಾಡ­ಬ­ಹುದು. ಆ ಅನು­ಭವ ಪಡೆ­ಯಲು ಅಲ್ಲಿಗೇ ಹೋಗ­ಬೇಕು.
ಪ್ರತಿ­ಯೊಂದು ಹಬ್ಬ ಹರಿ­ದಿ­ನ­ಗ­ಳಲ್ಲೂ ಸಚ್ಚಿ­ದಾ­ನಂದ ಆಶ್ರಮ ಸಂಗೀತ ಪ್ರೇಮಿ­ಗ­ಳಿಂದ ತುಂಬಿ­ರು­ತ್ತದೆ. ಅಲ್ಲಿಯ ವಾತಾ­ವ­ರಣ ಯುವ ಮನ­ಸ್ಸು­ಗ­ಳಿಗೆ ಸ್ಪೂರ್ತಿ ತುಂಬು­ತ್ತದೆ. ಅಲ್ಲದೆ ಸಂಗೀ­ತ­ಗಾ­ರ­ರಿಗೆ ಆಶ್ರಮ ವೇದಿ­ಕೆಯೂ ಆಗಿದೆ. ವಿಶೇಷ ಸಂದ­ರ್ಭ­ಗ­ಳಲ್ಲಿ ಸಂಗೀ­ತ­ಗಾ­ರ­ರನ್ನು ಆಹ್ವಾ­ನಿಸಿ ಕಛೇರಿ ಕೊಡಿ­ಸ­ಲಾ­ಗು­ತ್ತದೆ. ಸಂಗೀ­ತ­ಗಾ­ರ­ರನ್ನು ಗುರು­ತಿಸಿ ಗೌರ­ವಿ­ಸುವ ಪರಂ­ಪ­ರೆ­ಯನ್ನೂ ಶ್ರೀಗಳು ಮಾಡುತ್ತಾ ಬಂದಿ­ದ್ದಾರೆ. ಶಿವ­ರಾತ್ರಿ ಹಬ್ಬ­ವನ್ನು ವಿೃಂ­ಭ­ಣೆ­ಯಿಂದ ಆಚ­ರಣೆ ಮಾಡ­ಲಾ­ಗು­ತ್ತದೆ. ಅಂದು ನಡೆ­ಸುವ ಹೋಮ ಬಹಳ ಮಹತ್ವ ಪಡೆ­ದಿದೆ.
ಶ್ರೀಗ­ಳಿಗೆ ಒಂದು ಕಗ್ಗ­ಲ್ಲನ್ನೂ ಕೊಟ್ಟರು ಸ್ವರ ಹುಟ್ಟಿ­ಸು­ತ್ತಾರೆ. ಅವರು ಬಹು­ವಾದ್ಯ ಪಂಡಿ­ತರು. ಶ್ರೀಗಳ ಆಶೀ­ರ್ವ­ಚ­ನ­ಗಳೂ ಕೂಡ ಬಹಳ ಮನ್ನಣೆ ಪಡೆ­ದಿವೆ. ಧಾರ್ಮಿಕ ದೂರ­ರ್ಶನ ವಾಹಿ­ನಿ­ಗ­ಳಲ್ಲಿ ಅವರ ಉಪ­ನ್ಯಾ­ಸ­ಗಳು ಪ್ರಸಾ­ರ­ಗೊ­ಳ್ಳು­ತ್ತವೆ. ಶ್ರೀಗಳೇ ಹಾಡಿ­ರುವ ಸಾವಿ­ರಾರು ಸಿಡಿ, ಕ್ಸಾಸೆ­ಟ್‌­ಗಳು ಹೊರ­ಬಂ­ದಿವೆ.
ಅವ­ತಾರ ಮೂರ್ತಿ ದತ್ತಾ­ತ್ರೇ­ಯರ ಹಲವು ಪೀಠ­ಗ­ಳಲ್ಲಿ ಸಚ್ಚಿ­ದಾ­ನಂದ ಶ್ರೀ ಸ್ಥಾಪ­ನೆಯ ಅವ­ಧೂತ ಪೀಠವೂ ಒಂದು. ಅವರು ದೇಶಾ­ದ್ಯಂತ ಹಲವು ದೇವಾ­ಲ­ಯ­ಗ­ಳನ್ನು ನಿರ್ಮಿ­ಸಿ­ದ್ದಾರೆ.
ಶ್ರೀಗಳ ಮೂಲ ಮೈಸೂ­ರಾ­ದರೂ ಅವರ ಸಂಗೀತ ಅಭಿ­ಯಾನ ವಿಶ್ವ­ದಾ­ದ್ಯಂತ ನಡೆ­ಯು­ತ್ತಿದೆ. ಭಾರ­ತದ ಎಲ್ಲಾ ಪ್ರಮುಖ ನಗ­ರ­ಗ­ಳಲ್ಲಿ ಆಶ್ರ­ಮದ ಶಾಖೆ­ಗ­ಳಿವೆ. ವಿದೇ­ಶ­ಗ­ಳಲ್ಲೂ ಇವೆ.
1966ರಲ್ಲಿ ಒಂದು ಸಣ್ಣ ಗುಡಿ­ಸ­ಲಿ­ನಿಂದ ಆರಂ­ಭ­ವಾದ ಶ್ರೀಗಳ ಆಶ್ರಮ ಇಂದು ೃಹ­ದಾ­ಕಾ­ರ­ವಾಗಿ ಬೆಳೆ­ದಿದೆ. ಸಂಗೀ­ತದ ಮೂಲಕ ಸಮಾ­ಜ­ದಲ್ಲಿ ಶಾಂತಿ ಸ್ಥಾಪ­ನೆಯ ಮಂತ್ರ­ವನ್ನು ಜಗ­ತ್ತಿಗೆ ತಿಳಿ­ಸಿದೆ.

ಲಕ್ಷ್ಮ­ಯ್ಯ­ರೆಂಬೋ ರಂಗ­ಭೂಮಿ ದಾಖಲೆ.


ಲಕ್ಷ್ಮ­ಯ್ಯ­ರೆಂಬೋ ರಂಗ­ಭೂಮಿ ದಾಖಲೆ.


ಮಾರ್ಚ್‌ 3, 1962ರಂದು ಅವರು ಮುಖಕ್ಕೆ ಹಚ್ಚಿದ ಬಣ್ಣ ಇನ್ನೂ ಹಸಿ­ರಾ­ಗಿದೆ. ನಾಲ್ಕು­ವರೆ ದಶ­ಕ­ಗಳ ಕಾಲದ ರಂಗ­ಭೂಮಿ ಆರಾ­ಧನೆ ಅವ­ರಿಗೆ ಎಂದಿಗೂ ಬೇಸರ ತಂದಿಲ್ಲ. ಅವರು ರಂಗದ ಮೇಲೆ ಬಂದರೆ ಪ್ರೇಕ್ಷ­ಕರ ಎದೆ ಬಡಿತ ಇಮ್ಮ­ಡಿ­ಯಾ­ಗು­ತ್ತದೆ. ಹಾರ್ಮೋ­ನಿಯಂ ಪೆಟ್ಟಿಯ ಮನೆ ಹಿಡಿದು ಕಂದ­ಪದ ಹಾಡಿ­ದ­ರೆಂ­ದರೆ- ವನ್ಸ್‌­ಮೋರ್‌... ಮೊಳ­ಗು­ತ್ತದೆ.
ಕುರು­ಕ್ಷೇ­ತ್ರದ ದುಶ್ಯಾ­ಸನ ಅವ­ರಿಗೆ ಬಹಳ ಇಷ್ಟ. ಅವನ ಸ್ವರೂ­ಪನ್ನು ತನ್ನೊ­ಳಗೆ ತಂದು­ಕೊಂ­ಡಾಗ ರಂಗದ ಮೇಲೆ ವಿದ್ಯುತ್‌ ಸಂಚಾರ. ಬಲ­ರಾಮ, ಭೀಷ್ಮ, ಬ್ರಹ್ಮ, ಯಮ­ರಾ­ಜ­ರನ್ನೂ ಅವರು ತಂಬಿ­ಕೊಂ­ಡಿ­ದ್ದಾರೆ. ಅಭಿ­ನ­ಯಿಸಿ ಅಭಿ­ನ­ಯಿಸಿ ಅದು ಜೀವ­ನದ ಒಂದು ಭಾಗ­ವಾ­ಗಿಯೇ ಹೋಗಿದೆ. ಅವರು ನಮ್ಮೊ­ಳ­ಗಿನ ಅಪ­ರೂ­ಪದ ಕಲಾ­ವಿದ.
ಅವರು ಕೆ. ಲಕ್ಷ್ಮಯ್ಯ. ಪೌರಾ­ಣಿಕ ನಾಟ­ಕ­ಗ­ಳನ್ನು ಆಸ್ವಾ­ದಿ­ಸುವ ರಸಿ­ಕ­ರಿಗೆ ಈ ಹೆಸರು ಬಹು ಪರಿ­ಚಿತ. ತಮ್ಮ ಇಪ್ಪ­ತ್ತನೇ ವಯ­ಸ್ಸಿ­ನಿಂದ ಅಭಿ­ನ­ಯಿ­ಸಲು ಆರಂ­ಭಿ­ಸಿದ ಲಕ್ಷ್ಮಯ್ಯ ಇಲ್ಲಿ­ಯ­ವ­ರೆಗೆ ಸಾವಿ­ರಾರು ಪೌರಾ­ಣಿಕ, ಐತಿ­ಹಾ­ಸಿಕ ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಚಲ­ನ­ಚಿತ್ರ ಸೇರಿ­ದಂತೆ ಹಲವು ದೂರ­ದ­ರ್ಶನ ಧಾರಾ­ವಾ­ಹಿ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಶಾಲೆ ಕಲಿ­ತದ್ದು ಬರೀ ನಾಲ್ಕನೇ ತರ­ಗತಿ ಆದರೂ ರಂಗ­ಭೂ­ಮಿ­ಯಲ್ಲಿ ಅವ­ರಿ­ಗಾದ ಅನು­ಭ­ವದ ಅಳತೆ ಆಸಾಧ್ಯ.
ರಂಗ­ಭೂಮಿ ಬಗ್ಗೆ ಲಕ್ಷ್ಮಯ್ಯ ಅವ­ರಿಗೆ ತಮ್ಮದೇ ಆದ ಕನ­ವ­ರಿ­ಕೆ­ಗ­ಳಿವೆ. ಬದ­ಲಾದ ರಂಗ­ಭೂಮಿ ಹಾದಿ­ಯನ್ನು ತಮ್ಮದೇ ಧಾಟಿ­ಯಲ್ಲಿ ಹೇಳು­ತ್ತಾರೆ. ಇವತ್ತು ಹಣ­ವಿ­ಲ್ಲದೆ ನಾಟಕ ಮಾಡಲು ಸಾಧ್ಯ­ವಿಲ್ಲ. ನಾಟ­ಕ­ವಾ­ಡಲು ಹಣವೇ ಮುಖ್ಯ­ವಾ­ಗಿದೆ. ಅವತ್ತು ನಾಟ­ಕಕ್ಕೆ ಹಣ ಮುಖ್ಯ­ವಾ­ಗಿ­ರ­ಲಿಲ್ಲ. ನಟ ಮುಖ್ಯ­ವಾ­ಗಿದ್ದ. ಅಭಿ­ನಯ ಮುಖ್ಯ­ವಾ­ಗಿತ್ತು. ಈಗ ಆ ಕಾಲ ಉಳಿ­ದಿಲ್ಲ. ನಾಟಕ ಆಡಲು ಮಾರು­ಕಟ್ಟೆ ಬೇಕಾ­ಗಿದೆ... ಎನ್ನು­ವಾಗ ಲಕ್ಷ್ಮಯ್ಯ ಯಾವುದೋ ಪಾತ್ರ­ದಂತೆ ಕಾಣು­ತ್ತಾರೆ!
ಲಕ್ಷ್ಮಯ್ಯ ಬೆಂಗ­ಳೂ­ರಿನ ನಾಗ­ವಾ­ರ­ದ­ವರು. ಕ್ಯಾತಪ್ಪ ಮತ್ತು ಚನ್ನಮ್ಮ ದಂಪ­ತಿ­ಗಳ ಸುಪು­ತ್ರರು. ರಂಗ­ಭೂಮಿ ಮಾಡು­ತ್ತಲೇ ಕೃಷಿ ವಿಶ್ವ­ವಿ­ದ್ಯಾ­ಲ­ಯ­ದಲ್ಲಿ ನೌಕ­ರಿಗೆ ಸೇರಿ­ದರು. ಕೃಷಿ ವಿವಿಯ ಎಲ್ಲಾ ಸಾಂಸ್ಕೃ­ತಿಕ ಚಟು­ವ­ಟಿ­ಕೆ­ಗ­ಳಲ್ಲಿ ಲಕ್ಷ್ಮಯ್ಯ ಅವರು ಭಾಗ­ವ­ಹಿ­ಸಿ­ದ್ದಾರೆ. ಲಕ್ಷ್ಮಯ್ಯ ಅವರ ರಂಗ ಪ್ರತಿ­ಭೆಗೆ ಕೃಷಿ ವಿವಿ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾ­ಹಿ­ಸಿದೆ. ಅವ­ರೀಗ ನೌಕ­ರಿ­ಯಿಂದ ನಿವೃ­ತ್ತ­ರಾ­ಗಿ­ದ್ದಾರೆ.

ಯಕ್ಷ­ಗಾ­ನಕ್ಕೂ ಹೆಜ್ಜೆ: ಲಕ್ಷ್ಮಯ್ಯ ಅವರು ಯಕ್ಷ­ಗಾ­ನ­ಗ­ಳಲ್ಲೂ ಪಾತ್ರ ಮಾಡಿ ಸೈ ಎನಿ­ಸಿ­ಕೊಂ­ಡಿ­ದ್ದಾರೆ. ಹಲವು ಮೂಡ­ಲ­ಪಾಯ ಪ್ರಸಂ­ಗ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದಾರೆ. ಆಂಜ­ನೇ­ಯ­ನಾಗಿ ಅವರು ಹಾಕಿದ ಪಾತ್ರ ಬಹಳ ಮನ್ನಣೆ ಪಡೆ­ದಿದೆ. ಸಾಮಾ­ನ್ಯ­ವಾಗಿ ರಂಗ­ಕ­ಲಾ­ವಿ­ದರು ಯಕ್ಷ­ಗಾ­ನ­ಗ­ಳಲ್ಲಿ ಅಭಿ­ನ­ಯಿ­ಸು­ವುದು ಬಹಳ ಕಮ್ಮಿ. ಯಕ್ಷ­ಗಾ­ನಕ್ಕೆ ಮುಖ್ಯ­ವಾಗಿ ತರ­ಬೇತಿ ಬೇಕು. ಆದರೆ ಲಕ್ಷ್ಮಯ್ಯ ಅವ­ರಿಗೆ ಯಾವ ತರ­ಬೇ­ತಿಯೂ ಇಲ್ಲ. ಅಭಿ­ನ­ಯದ ಮೇಲೆ ಅವಿ­ರಿ­ಗಿ­ರುವ ಪ್ರೀತಿಯೇ ತರ­ಬೇತಿ.

ಹೆಜ್ಜೆ ಗುರುತು: ಲಕ್ಷ್ಮಯ್ಯ ಅವ­ರನ್ನು ಅಪ­ರೂಪ ಎನ್ನಲು ಹಲವು ಕಾರ­ಣ­ಗ­ಳಿವೆ. ರಂಗ­ಭೂ­ಮಿ­ಯಲ್ಲಿ ಇಟ್ಟ ಪ್ರತಿ ಹೆಜ್ಜೆ­ಯನ್ನು ಅವರು ದಾಖಲು ಮಾಡುತ್ತಾ ಬಂದಿ­ದ್ದಾರೆ. ನಲ­ವ­ತ್ತ್ಯೆದು ವರ್ಷ­ಗ­ಳಲ್ಲಿ ಅಭಿ­ನಯ ಮಾಡಿದ ನಾಟ­ಕ­ಗಳ ಹೆಸರು ಪಾತ್ರ, ಪಡೆದ ಸಂಭಾ­ವನೆ, ಖರ್ಚು­ವೆ­ಚ್ಚ­ಗ­ಳ­ನ್ನೊ­ಳ­ಗೊಂಡ ವಿವ­ರ­ಗ­ಳನ್ನು ಬರೆ­ದಿ­ಡುವ ಲಕ್ಷ್ಮಯ್ಯ ಅವರ ಅಭ್ಯಾ­ಸಕ್ಕೆ ನಾವು ಮೂಗಿನ ಮೇಲೆ ಬೆರ­ಳಿ­ಡ­ಲೇ­ಬೇಕು!
ಯಾಕೀ ಅಭ್ಯಾಸ? ಎಂಬ ಪ್ರಶ್ನೆಗೆ ಅವರ ಕೊಡುವ ಉತ್ತರ: ಸಮಾ­ಧಾನ. ಮನ­ಸ್ಸಿನ ಸಮಾ­ಧಾ­ನ­ಕ್ಕಾಗಿ ಈ ದಾಖ­ಲಾತಿ! ಎನ್ನುತ್ತಾ ಮೇಲೆ ನೋಡು­ತ್ತಾರೆ.
1962ನೇ ಇಸ್ವಿ­ಯಿಂದ 2009 ಆಗಸ್ಟ್‌ ತಿಂಗ­ಳ­ವ­ರೆಗೂ ಅಭಿ­ನ­ಯಿ­ಸಿದ ಎಲ್ಲಾ ನಾಟ­ಕ­ಗಳ ಮಾಹಿತಿ ಲಕ್ಷ್ಮಯ್ಯ ಅವರ ಬಳಿ ಇದೆ.

ನಾಟಕ ಸಂಗ್ರಹ: ಲಕ್ಷ್ಮಯ್ಯ ಅವ­ರನ್ನು ಅಪ­ರೂಪ ಎನ್ನಲು ಇನ್ನೊಂದು ಮುಖ್ಯ­ವಾದ ಕಾರ­ಣ­ವಿದೆ. ಅವರ ಬಳಿ ಕೈ ಬರ­ಹದ ಹಲವು ಪೌರಾ­ಣಿಕ, ಐತಿ­ಹಾ­ಸಿಕ ನಾಟಕ ಕೃತಿ­ಗ­ಳಿವೆ. ಬಾಯಿಂದ ಬಾಯಿಗೆ ಕಲಿ­ಸುವ ಹಾಡು ಸಂಭಾ­ಷ­ಣೆ­ಗ­ಳನ್ನು ಲಕ್ಷ್ಮಯ್ಯ ಅವರು ತಮ್ಮ ಪತ್ನಿ ಸಹ­ಕಾ­ರ­ದೊಂ­ದಿಗೆ ಕೈ ಬರ­ಹ­ಕ್ಕಿ­ಳಿ­ಸಿ­ದ್ದಾರೆ. ಅವು­ಗ­ಳನ್ನು ಹಲವು ವರ್ಷ­ಗ­ಳಿಂದ ಕಾಪಾ­ಡಿ­ಕೊಂಡು ಬರು­ತ್ತಿ­ದ್ದಾರೆ.
ಇನ್ನೊಂದು ವಿಶೇ­ಷ­ವೆಂ­ದರೆ ಆ ಎಲ್ಲಾ ಕೃತಿ­ಗ­ಳನ್ನು ಯಾರಾ­ದರೂ ಇಷ್ಟ­ಪಟ್ಟು ನಾಟಕ ಅಭ್ಯಾ­ಸಕ್ಕೆ ಅಥವಾ ಓದಲು ಕೇಳಿ­ದರೆ ಧಾರಾ­ಳ­ವಾಗಿ ಕೊಡು­ತ್ತಾರೆ. ವಾಪಸ್‌ ಕೊಡು­ವ­ವ­ರಿಗೆ ಮಾತ್ರ!

ಲೆಕ್ಕ­ವಿ­ಲ್ಲದ ಬಿರುದು ಗೌರವ: ಲಕ್ಷ್ಮಯ್ಯ ಅವ­ರನ್ನು ಅರಸಿ ಬಂದಿ­ರುವ ಗೌರವ ಪ್ರಶ­ಸ್ತಿ­ಗ­ಳಿಗೆ ಲೆಕ್ಕ­ವಿಲ್ಲ. ರಾಜ್ಯ­ದೆ­ಲ್ಲೆಡೆ ರಂಗ ಪ್ರವಾಸ ಮಾಡಿ­ರುವ ಅವ­ರನ್ನು ನಾಡಿನ ಹಲವು ಸಂಘ ಸಂಸ್ಥೆ­ಗಳು ಗೌರ­ವಿ­ಸಿವೆ. ಕಲಾ­ರತ್ನ, ನಾಟಕ ರತ್ನ, ಕಲಾ­ಜ್ಯೋತಿ ಮುಂತಾದ ಹತ್ತಾರು ಬಿರು­ದು­ಗ­ಳಿಗೆ ಪಾತ್ರ­ರಾ­ಗಿ­ದ್ದಾರೆ. ನಾಟಕ ಸೇವಾ ಪ್ರಶಸ್ತಿ, ವಿಶ್ವ­ಜ್ಯೋತಿ ಪ್ರಶಸ್ತಿ, ಡಾ. ರಾಜ್‌­ಕು­ಮಾರ್‌ ಸುವರ್ಣ ರತ್ನ ಪ್ರಶಸ್ತಿ, ಕರ್ನಾ­ಟಕ ದೃವ­ತಾರೆ ಪ್ರಶಸ್ತಿ ಲಕ್ಷ್ಮಯ್ಯ ಅವರ ಮುಡಿ­ಗೇ­ರಿವೆ.
70 ವರ್ಷ ವಯ­ಸ್ಸಿನ ಹೊಸ್ತಿ­ಲ­ಲ್ಲಿ­ರುವ ಲಕ್ಷ್ಮಯ್ಯ ಅವರು ಈಗಲೂ ಪಾದ­ರಸ. ದೇಹ ಮಾಗಿ­ದ್ದರೂ ಅವರ ಉತ್ಸಾ­ಹಕ್ಕೆ ವಯ­ಸ್ಸಾ­ಗಿಲ್ಲ. ಮೊನ್ನೆ ತಾನೆ ಸುಂದ­ರ­ಕಾಂಡ ರಾಮಾ­ಯ­ಣ­ದಲ್ಲಿ ಪಾತ್ರ ಮಾಡಿ­ದ್ದಾರೆ. ಅವರ ಎದುರು ಕೂತರೆ ದಶ­ಕ­ಗಳ ರಂಗ ಇತಿ­ಹಾಸ ಎಳೆ­ಯಾಗಿ ಬಿಚ್ಚಿ­ಕೊ­ಳ್ಳು­ತ್ತದೆ. ಇಂಥ ಅನರ್ಘ್ಯ ಪ್ರತಿಭೆ ನಮ್ಮ ಘನ ಸರ್ಕಾ­ರದ ಕಣ್ಣಿಗೆ ಬೀಳದೆ ಇರು­ವುದು ಕನ್ನ­ಡಿ­ಗರ ದುರಾ­ದೃಷ್ಟ! ಮೊಬೈಲ್‌: 9844174899 ಸಂಖ್ಯೆ­ಗ­ಳಿಗೆ ಕರೆ­ಮಾಡಿ ಈ ಕಲಾ­ವಿ­ದ­ನಿಗೆ ಅಭಿ­ನಂ­ದಿಸಿ. ಕೈ ಬರ­ಹದ ಪೌರಾ­ಣಿಕ, ಐತಿ­ಹಾ­ಸಿಕ ನಾಟಕ ಕೃತಿ ಬೇಕಿ­ದ್ದರೆ ಕರೆ ಮಾಡಿ. ನಾಟಕ ಮಾಡಿ. ಆದರೆ ದಯ­ವಿಟ್ಟು ವಾಪಸ್‌ ಕೊಡಿ!

ಮೈಸೂ­ರಿ­ನಲ್ಲಿ `ಚೀನಿ' ಸಂಗೀತ




ಮೈಸೂ­ರಿ­ನಲ್ಲಿ `ಚೀನಿ' ಸಂಗೀತ







ಬೆಳಕು ಹರಿ­ಯುವ ಮೊದಲೇ ದಾಸ ಭಟ್ಟರ ತಬಲ ಪಾಠ ಆರಂ­ಭ­ವಾ­ಗು­ತ್ತಿತ್ತು. ಚಾವ­ಡಿಯ ಮೇಲೆ ಭಟ್ಟರ ಏಳು ಮಂದಿ ಮಕ್ಕಳು ಸಾಲಾಗಿ ಮಲ­ಗಿ­ರು­ತಿ­ದ್ದರು. ಕೆಳಗೆ ನಡೆ­ಯುವ ತಬಲ ವಾದ­ನದ ಅಲೆ ವಿದ್ಯುತ್‌ ಸ್ವರೂಪ ತಾಳಿ ಮಲ­ಗಿದ್ದ ಮಕ್ಕಳ ನಾಡಿ­ಯಲ್ಲಿ ಸಂಚಾ­ರ­ಗೊ­ಳ್ಳು­ತ್ತಿತ್ತು. ಶಾಸ್ತ್ರೀ­ಯ­ವಾಗಿ ಕಲಿ­ತಿ­ದ್ದಿಲ್ಲ. ಆದರೂ ಅವ­ರೆ­ಲ್ಲರು ನಮ್ಮ ನಾಡಿನ ಖ್ಯಾತ ಸಂಗೀ­ತ­ಗಾ­ರರು. ಅದೇ ಅಲ್ಲವೇ ಸಂಗೀತ ರಕ್ತ!
ಅವ­ರೊ­ಳ­ಗೊಬ್ಬ ಶ್ರೀನಿ­ವಾಸ ಭಟ್ಟರು. `ಚೀನಿ' ಎಂಬ ಹೆಸ­ರಿ­ನಿಂದ ಸಂಗೀತ ರಸಿ­ಕರ ಮನ­ಸೂ­ರೆ­ಗೊಂ­ಡ­ವರು. ಮೈಸೂ­ರಿನ ರಂಗಾ­ಯ­ಣದ ಆವ­ರ­ಣ­ದೊ­ಳ­ಗಿ­ರುವ ಗಿಡ ಗಂಟೆ­ಯನ್ನು ಕೇಳಿ­ದರೂ ಚೀನಿ­ಯ­ವರ ಕತೆ ಬಿಚ್ಚಿ­ಕೊ­ಳ್ಳ­ತ್ತದೆ. ಇಡೀ ಆವ­ರ­ಣ­ದೊ­ಳಗೆ ಅವರು ಸಂಗೀತ ಕರ­ತಾ­ಡನ ಸೃಷ್ಟಿ­ಸಿ­ದ್ದಾರೆ. ಅವರ ಗಿಟಾ­ರ್‌­ವಾ­ದನ ಭೂಮಿ­ಗೀತ ರಂಗ­ಮಂ­ದಿ­ರ­ದೊ­ಳಗೆ ಮ್ಯಾಜಿಕ್‌ ಮಾಡಿದೆ. ಅವರ ತಬಲ ವಾದನ ತೆರದ ವನ­ರಂ­ಗದ ಕಡೆಯ ಪ್ರೇಕ್ಷ­ಕ­ನಿಗೂ ತಲು­ಪಿದೆ. ಅವರ ಹಾರ್ಮೋ­ನಿಯಂ ಮನೆ­ಗಳು ಕೇಳು­ಗನ ತಲೆ­ದೂ­ಗಿ­ಸಿವೆ. ಸ್ವರ­ಮಂ­ಡ­ಲದ ತಂತಿ­ಗಳು ಭಾವು­ಕ­ಗೊ­ಳಿ­ಸಿವೆ. ಗಾಂಗ್‌ನ ಢಣ್‌ ಶಬ್ದ ಪ್ರೆಕ್ಷ­ಕನ ಉಸಿರು ಕಟ್ಟಿ­ಸಿದೆ......ಅ­ವ­ರೊಬ್ಬ ಬಹು­ವಾದ್ಯ ವಾದಕ. ಕನ್ನಡ ರಂಗ ಸಂಗೀ­ತದ ಪ್ರಬುದ್ಧ ಪ್ರತಿಭೆ.
ರಂಗಾ­ಯ­ಣದ ಆರಂ­ಭ­ದಿಂ­ದಲೂ ಶ್ರೀನಿ­ವಾಸ ಭಟ್ಟರು ಅಲ್ಲಿಯ ಒಂದು ಭಾಗ­ವಾ­ಗಿ­ದ್ದಾರೆ. ಚೀನಿ ಇಲ್ಲದ ರಂಗಾ­ಯಣ ಕಲ್ಪ­ನೆಗೂ ಸಿಕ್ಕು­ವು­ದಿಲ್ಲ! ಅವ­ರೊಬ್ಬ ಆಪ್ತ ಸಂಗೀ­ತ­ಗಾರ. ಚಿಣ್ಣರ ಮೇಳದ ಮಕ್ಕಳ ಮನ­ಸ್ಸಿ­ನಲ್ಲಿ ಉಳಿ­ಯುವ `ಚೀನಿ ಮಾಮಾ' ಎಂದೂ ಮರೆ­ಯ­ಲಾ­ಗದ ಹೃದಯ. ಅವರು ಮಕ್ಕಳ ಜೊತೆ ಮಗು­ವಾಗಿ ಹಾಡು ಹೇಳಿ­ಕೊ­ಡು­ತ್ತಾರೆ. ನೂರಾರು ಮಕ್ಕ­ಳನ್ನು ಏಕ ಕಾಲ­ದಲ್ಲಿ ತಮ್ಮ ಸಂಗೀ­ತ­ದಿಂದ ನಿಯಂ­ತ್ರಿ­ಸುವ ಶಕ್ತಿ ಅವ­ರ­ಲ್ಲಿದೆ. ರಂಗ­ಭೂಮಿ ಕಲಿ­ಕೆ­ಗಾಗಿ ರಂಗಾ­ಯ­ಣಕ್ಕೆ ಬರುವ ರಂಗಾ­ಸ­ಕ್ತ­ರಿಗೆ ಚೀನಿ ಅವರ ಪಾಠ ಅಮೂ­ಲ್ಯ­ವಾ­ದುದು. ಸಾಹಿ­ತ್ಯಕ್ಕೆ ಅವರು ನೀಡುವ ಸ್ವರ ಪ್ರಸ್ತಾ­ನ­ದಲ್ಲಿ ಅವರ ಪ್ರಬು­ದ್ಧತೆ ಎದ್ದು­ಕಾ­ಣು­ತ್ತದೆ. ತಾಳದ ಮೇಲೆ ಅವರ ಹಿಡಿತ ವಿಸ್ಮಯ ಹುಟ್ಟಿ­ಸು­ತ್ತದೆ.
ರಂಗಾ­ಯ­ಣದ ನೂರಾರು ನಾಟ­ಕ­ಗ­ಳಲ್ಲಿ ಚೀನಿ ಅವರು ರಂಗದ ಹಿಂದಿನ ನಾಯಕ. ರಂಗಾ­ಯ­ಣದ ಪ್ರತಿ­ಯೊಂದು ರಂಗಾ­ಪ್ರ­ಯೋ­ಗ­ದಲ್ಲೂ ಚೀನಿ ಛಾಯೆ ಎದ್ದು ಕಾಣು­ತ್ತದೆ. ಅವರ ಸಂಗೀ­ತ­ಕ್ಕಾ­ಗಿಯೇ ನಾಟಕ ನೋಡಲು ಬರುವ ಪ್ರೇಕ್ಷ­ಕರು ಮೈಸೂ­ರಿ­ನ­ಲ್ಲಿ­ದ್ದಾರೆ. ನಟನ ಅಭಿ­ನ­ಯಕ್ಕೆ ತಮ್ಮ ಸಂಗೀ­ತದ ಮೂಲಕ ಜೀವ­ತುಂ­ಬು­ವಲ್ಲಿ ಅವರು ಎತ್ತಿದ ಕೈ. ಅವರ ವಿಶೇಷ ಸುಂದರ ಧನಿ ಕೇಳುವ ಮನ­ಸ್ಸು­ಗ­ಳನ್ನು ಕಟ್ಟಿ­ಹಾ­ಕು­ತ್ತದೆ. ಅವರ ಮಾತು­ಗಳು ಕೂಡ ಅಷ್ಟೆ. ಮುತ್ತು. ಬಹು­ಬೇ­ಗನೆ ಚೀನಿ ಎಲ್ಲರ ಸಮೀ­ಪದ ಮನು­ಷ್ಯ­ರಾ­ಗಿ­ಬಿ­ಡು­ತ್ತಾರೆ.
ಚೀನಿ ಅವರು ರಂಗ­ಭೂ­ಮಿಗೆ ಬಂದದ್ದು ಆಕ­ಸ್ಮಿಕ. ಮಂಗ­ಳೂ­ರಿನ ಹೊಟೇ­ಲೊಂ­ದರ ಲೈವ್‌­ಬ್ಯಾಂಡ್‌ ಗಿಟಾರ್‌ ವಾದ­ಕ­ರಾ­ಗಿದ್ದ ಅವ­ರಿಗೆ ರಂಗ ಸಂಗೀ­ತ­ಗಾ­ರ­ನಾ­ಗುವ ಕಲ್ಪನೆ ಕನ­ಸಿ­ನ­ಲ್ಲಿಯೂ ಇರ­ಲಿಲ್ಲ. ಮಂಗ­ಳೂ­ರಿ­ನಲ್ಲಿ ಪಾಶ್ಚ್ಯಾತ್ಯ ಸಂಗೀ­ತ­ಗಾ­ರರ ಒಂದು ತಂಡ­ವಿತ್ತು. ಕನ್ನಡ ಚಿತ್ರ­ರಂ­ಗ­ದಲ್ಲಿ ಇಂದು ಮಿಂಚು­ತ್ತಿ­ರುವ ಸಂಗೀತ ನಿರ್ದೇ­ಶಕ ಗುರು­ಕಿ­ರಣ್‌ ಅಲ್ಲಿ ಗಾಯ­ಕ­ರಾ­ಗಿ­ದ್ದರು. ಉಡುಪಿ, ಗೋವಾ ಮುಂತಾದ ಕಡೆ ತಮ್ಮ ಕಾರ್ಯ­ಕ್ರಮ ನೀಡು­ತ್ತಿ­ದ್ದರು. ಶ್ರೀನಿ­ವಾಸ ಭಟ್ಟ­ರಿಗೆ ಚೀನಿ ಎಂಬ ಹೆಸರು ಬಂದದ್ದು ಇಲ್ಲೇ.
ನೀನಾ­ಸಂನ `ಮೂ­ರ­ಕಾ­ಸಿನ ಸಂಗೀತ ನಾಟಕ' ರಂಗ ಪ್ರಯೋ­ಗ­ದಿಂದ ಚೀನಿ ರಂಗ ಸಂಗೀ­ತ­ಗಾ­ರ­ರಾಗಿ ಬಡ್ತಿ ಪಡೆ­ದರು. ನಂತರ ಕೆ.ವಿ. ಅಕ್ಷರ ಅವರ ಕಡೆ­ಯಿಂದ ರಂಗ­ದಿ­ಗ್ಗಜ ಬಿ.ವಿ. ಕಾರಂ­ತರ ಪರಿ­ಚ­ಯ­ವಾ­ಯಿತು. ಕಾರಂತ ನಿರ್ದೇ­ಶ­ನದ `ಸ­ದಾ­ರಮೆ' ಹಾಗೂ `ಬ­ಣ್ಣಿನ ಬಂಡಿ' ನಾಟ­ಕ­ಗ­ಳಲ್ಲಿ ಸಹಾ­ಯ­ಕ­ರಾಗಿ ಕೆಲಸ ಮಾಡಿ­ದರು. ಅಲ್ಲಿ ಚೀನಿ ತೋರಿದ ಪ್ರತಿಭೆ ಕಾರಂ­ತ­ರಲ್ಲಿ ಭರ­ವಸೆ ಮೂಡಿ­ಸಿತು. ಅಲ್ಲಿಂದ ಶ್ರೀನಿ­ವಾಸ ಭಟ್ಟರ ರಂಗ­ಭೂಮಿ ಪಯಣ ಆರಂ­ಭ­ವಾ­ಯಿತು.
ಕಾರಂ­ತರು ರಂಗಾ­ಯಣ ಕಟ್ಟು­ವಾಗ ಕಡೆ ಘಳಿ­ಗೆ­ಯಲ್ಲಿ ಚೀನಿ ರಂಗಾ­ಯಣ ಗರಡಿ ಸೇರಿ­ದರು. ಅಲ್ಲಿಂದ ಚೀನಿ ಅವರ ಮುಂದೆ ರಂಗ­ಭೂಮಿ ತೆರೆ­ದು­ಕೊಂ­ಡಿತು. ರಂಗ­ಭೂ­ಮಿ­ಯನ್ನು ಎಲ್ಲೂ ಕಲಿ­ತಿ­ದ್ದಿಲ್ಲ. ಆದರೆ ಕಾರಂ­ತರ ಪ್ರಭಾವ ಅವ­ರಲ್ಲಿ ರಂಗ­ಭೂ­ಮಿಯ ಉಸಿ­ರಾ­ಡು­ವಂತೆ ಮಾಡಿತು.
ಬಿ.ವಿ. ಕಾರಂ­ತರ ನೆಚ್ಚಿನ ಶಿಷ್ಯ­ರಲ್ಲಿ ಚೀನಿ ಕೂಡ ಒಬ್ಬರು. ಅವ­ರನ್ನು ಕಾರಂ­ತರು ಬಹ­ಳ­ವಾಗಿ ಪ್ರೀತಿ­ಸು­ತ್ತಿ­ದ್ದರು. ರಂಗಾ­ಯ­ಣ­ವೆಂಬ ಕುಟುಂ­ಬ­ವೊಂ­ದ­ರಲ್ಲಿ ಚೀನಿ ಎಲ್ಲ­ರಿಂದ ಪ್ರೀತಿ­ಸ­ಲ್ಪ­ಡುವ ಹುಡು­ಗ­ನಾ­ಗಿ­ದ್ದರು. ಪ್ರೀತಿ­ಸಿದ ಹುಡುಗಿ `ಸು­ಚೇತಾ'ರನ್ನು ರಂಗಾ­ಯ­ಣದ ವನ­ರಂ­ಗ­ದಲ್ಲಿ ಕಲಾ­ವಿ­ದರ ಮುಂದೆ ಕೈ ಹಿಡು­ದದ್ದು ವಿಶೇಷ!
ಆರಂ­ಭ­ದಲ್ಲಿ ಕಾರಂ­ತರೇ ಸಂಗೀತ ನಿರ್ದೇ­ಶಿ­ಸಿದ ನಾಟ­ಕ­ಗ­ಳಿಗೆ ಸ್ವರ ಹಾಕು­ತ್ತಿ­ದ್ದರು. ವಾದ್ಯ ನುಡಿ­ಸು­ತ್ತಿ­ದ್ದರು. ಆ ನಂತರ ಸ್ವತಂ­ತ್ರ­ವಾಗಿ ಸಂಗೀತ ನಿರ್ದೇ­ಶನ ನೀಡಿ­ದರು. ಕಾರಂ­ತರ ಬಹ­ಳಷ್ಟು ನಾಟ­ಕ­ಗ­ಳಿಗೆ ಚೀನಿ ಅವರೇ ಸಂಗೀತ ನಿರ್ದೇ­ಶ­ಕರು. ಕಾರಂ­ತರು ಅವ­ರನ್ನು ಬಹ­ಳ­ವಾಗಿ ಹಚ್ಚಿ­ಕೊಂ­ಡಿ­ದ್ದರು. ಅವರು ಸಾಯುವ ಮುಂಚೆ ತಮಗೆ ಪತ್ರ ಬರೆ­ದಿ­ದ್ದನ್ನು ಚೀನಿ ನೋವಿ­ನಿಂದ ನೆನಪು ಮಾಡಿ­ಕೊ­ಳ್ಳು­ತ್ತಾರೆ.
ಅವರು ಸದಾ ಒಂದ­ಲ್ಲೊಂದು ಕೆಲಸ ಮಾಡು­ತ್ತಲೇ ಇರುವ ಶ್ರಮ ಜೀವಿ. ಪೆಟ್ಟಿ ಹಿಡಿದು ಕೂತರೆ ಅಲ್ಲೊಂದು ಒಳ್ಳೆಯ ಸಂಗೀತ ಮೂಡಿ ಬರ­ಲೇ­ಬೇಕು. ಒಂದು ರೀತಿಯ ಹಠ­ಯೋಗ. ಅವರು ರಂಗಾ­ಯ­ಣ­ದಲ್ಲಿ ವರ್ಷ­ಪೂರ್ತಿ ಬಿಜಿ. ಜತೆಗೆ ರಂಗ­ಸಂ­ಗೀತ ಶಿಬಿ­ರ­ಗಳು, ಕಮ್ಮ­ಟ­ಗಳು, ಚಿಣ್ಣರ ಮೇಳ, ಸಂಸ್ಕೃತಿ ಶಿಬಿರ ಹೀಗೆ ಯಾವಾ­ಗಲೂ ಅವ­ರಿಗೆ ಕೆಲಸ ಇದ್ದೇ ಇರು­ತ್ತದೆ. ರಜ­ದಲ್ಲೂ ಅವ­ರಿಗೆ ಬಿಡು­ವಿ­ರು­ವು­ದಿಲ್ಲ.
ಅವರು ರಂಗ­ಭೂ­ಮಿಗೆ ಸಲ್ಲಿ­ಸಿದ ಸೇವೆಗೆ ತಕ್ಕ ಮನ್ನಣೆ ದೊರೆ­ಯದೆ ಇರು­ವುದು ಬಹಳ ನೋವಿನ ವಿಷಯ. ಸರ್ಕಾರಿ ರೆಪ­ರ್ಟ­ರಿ­ಯಾದ ರಂಗಾ­ಯ­ಣ­ದಲ್ಲಿ ಶಿಕ್ಷ­ಕರು ಹಾಗೂ ಪ್ರಶಿ­ಕ್ಷ­ಕರು ಎಂಬ ಎರಡು ವರ್ಗದ ಕಲಾ­ವಿ­ದ­ರಿ­ದ್ದಾರೆ. ಚೀನಿ ಶಿಕ್ಷಕ ವರ್ಗದ ಕಲಾ­ವಿ­ದರು. ಆದರೆ ಅವ­ರಿಗೆ ಸಿಗುವ ಸರ್ಕಾರಿ ಸೌಲ­ಭ್ಯ­ಗಳು ಬಹಳ ಕಡಿಮೆ. ಇದು ನಿಜಕ್ಕೂ ತಾರ­ತಮ್ಯ. ರಂಗಾ­ಯ­ಣದ ಅವಿ­ಭಾಜ್ಯ ಅಂಗ­ವೊಂ­ದಕ್ಕೆ ಮಾಡಿದ ಮೋಸ­ವಿದು. ಅವ­ರಿಗೆ ಸಿಗ­ಬೇ­ಕಾದ ಮನ್ನ­ಣೆ­ಯನ್ನು ನಮ್ಮ ಸರ್ಕಾರ ಆದಷ್ಟು ಬೇಗ ಕೊಟ್ಟರೆ ಕಲಾ­ವಿ­ದರ ಪ್ರತಿ­ಭೆ­ಯನ್ನು ಗೌರ­ವಿ­ಸಿ­ದಂ­ತಾ­ಗು­ತ್ತದೆ.
ಚೀನಿ ಅವರು ಸೌಲ­ಭ್ಯ­ಗಳ ಬಗ್ಗೆ ಎಂದೂ ತಲೆ ಕೆಡಿ­ಸಿ­ಕೊಂ­ಡಿ­ದ್ದಿಲ್ಲ. ಅವರ ಕೆಲ­ಸ­ವನ್ನು ಮೆಚ್ಚಿ­ಕೊ­ಳ್ಳಲು ನೂರಾರು ಅಭಿ­ಮಾ­ನಿ­ಗ­ಳಿ­ದ್ದಾರೆ. ಸಂತೋಷ ಪಡಲು ರಕ್ತ­ದಲ್ಲಿ ಸಂಗೀ­ತ­ವಿದೆ. ವಿದ್ಯಾ­ರ್ಥಿ­ಗ­ಳಿ­ದ್ದಾರೆ. ದೈರ್ಯ ತುಂಬುವ ಸುಚೇತಾ ಪತ್ನಿ ಇದ್ದಾರೆ. ಅವ­ರಷ್ಟೇ ಪ್ರತಿ­ಭಾ­ವಂತ ಗಿರಿ­ದಾಸ ಭಟ್‌ ಮಗ­ನಿ­ದ್ದಾನೆ. ಇವ­ರು­ಗಳ ನಡುವೆ ಚೀನಿ ಅವರು ಮುಗು­ಳ್ನ­ಗು­ತ್ತಲೇ ಎಲ್ಲ­ವನ್ನು ಸಹಿಸಿಕೊಂಡಿದ್ದಾರೆ.

Friday, June 26, 2009

ವಸುಂ­ದರಾ ದೊರೆಸ್ವಾಮಿ



ವಸುಂ­ದರಾ ಹೆಜ್ಜೆ ಗುರುತು





ಅವರ ಹೆಜ್ಜೆ­ಗ­ಳಲ್ಲಿ ಅದ್ಯಾವ ಶಕ್ತಿ ಅಡ­ಗಿ­ದೆಯೋ ಏನೋ!
ಆ ಹೆಜ್ಜೆ­ಗಳು ನಟು­ವಾಂ­ಗದ ಏಟಿಗೆ ಎದಿ­ರೇಟು ನೀಡು­ತ್ತವೆ. ಸಂಗೀ­ತಕ್ಕೆ ಸ್ವರೂಪ ಕೊಡು­ತ್ತವೆ. ದೇಹ­ಕ್ಕಾದ ಕಾಲ­ವನ್ನು ಮರೆ­ಮಾ­ಚು­ತ್ತವೆ. ಆ ಘಲ್‌ ಘಲ್‌ ಗೆಜ್ಜೆ­ನಾದ ನೋಡು­ಗನ ಹೃದ­ಯ­ದಲ್ಲಿ ಆನಂದ ಹುಟ್ಟಿ­ಸು­ತ್ತದೆ. ನಾಟ್ಯ­ಶಾ­ಸ್ತ್ರದ ನವ­ರ­ಸಾ­ದಿ­ಗಳು ದೇಹ­ವಿಡೀ ಹೊಮ್ಮಿ ಬರು­ತ್ತವೆ. ಗೆಜ್ಜೆ ಕಟ್ಟಿದ ಆ ಕಾಲು­ಗಳು ಭೂಮಿ­ಕೆಯ ಮೇಲೆ ರಂಗೋ­ಲಿಯ ಚಿತ್ತಾರ ಬಿಡಿ­ಸು­ತ್ತವೆ.
ಅವರು ವಸುಂ­ದರಾ ದೊರೆ­ಸ್ವಾಮಿ. ಮೈಸೂ­ರಿಗೆ ಹೆಮ್ಮೆ ಹಿರಿಮೆ ಗರಿಮೆ ಬರು­ವಲ್ಲಿ ಅವರ ನೃತ್ಯ ಸೇವೆಯೂ ಪಾಲು ಪಡೆ­ದಿದೆ. ನೃತ್ಯ­ಲೋ­ಕ­ದಲ್ಲಿ ದಂತ­ಕ­ತೆ­ಯಾ­ಗಿ­ರುವ ವಸುಂ­ದರಾ ನಮ್ಮ ದೇಶದ ಅಪ­ರೂ­ಪದ ಭರ­ತ­ನಾಟ್ಯ ಕಲಾ­ವಿದೆ. ಭಾರ­ತೀಯ ಶಾಸ್ತ್ರೀಯ ನೃತ್ಯ­ದಲ್ಲಿ ಅವರ ಸ್ಥಾನ ಉತ್ತುಂ­ಗ­ದ­ಲ್ಲಿದೆ. ಭರ­ತ­ನಾ­ಟ್ಯ­ವನ್ನು ಹೃದಯ ತಂಬೆಲ್ಲಾ ತುಂಬಿ­ಕೊಂಡು ಅದರ ವೈಶಾ­ಲ್ಯ­ತೆ­ಯನ್ನು ಜಗ­ತ್ತಿ­ನೆ­ಲ್ಲೆಡೆ ತೋರಿಸಿ ಸೈ ಎನಿ­ಸಿ­ಕೊಂ­ಡಿ­ದ್ದಾರೆ. ಮೂರು ದಶ­ಕ­ಗಳ ಅವರ ನೃತ್ಯ ತಪಸ್ಸು ಅಪಾರ ಮನ್ನಣೆ ಗಳಿ­ಸಿದೆ.
ವಸುಂ­ದರಾ ದೊರೆ­ಸ್ವಾಮಿ ಅವರ ಪ್ರತಿ­ಯೊಂದು ನೃತ್ಯ ರೂಪ­ಕ­ಗಳು ಅದ್ಬುತ ಕಲಾ­ಕೃ­ತಿ­ಗಳು. ಅವರ ಸಂಯೋ­ಜ­ನೆ­ಗ­ಳ­ಲ್ಲಿ­ರುವ ಭಕ್ತಿ ಸಂದೇಶ ವರ್ಣ­ನಾ­ತೀತ. ಮಹಿ­ಷೂರು ಪುರ ಜನರ ದುಸ್ವ­ಪ್ನ­ವಾ­ಗಿದ್ದ ಮಹಿ­ಷಾ­ಸು­ರ­ನನ್ನು ಸಂಹ­ರಿ­ಸುವ `ಆ­ದಿ­ಶಕ್ತಿ ದುರ್ಗಾ' ರೂಪಕ ನೋಡು­ಗನ ನಾಡಿ­ಯಲ್ಲಿ ಉಂಟು­ಮಾ­ಡಿದ್ದ ವಿದ್ಯುತ್‌ ಸಂಚ­ಲ­ನ­ವನ್ನು ಮರೆ­ಲಾ­ಗು­ವು­ದಿಲ್ಲ. ಇಂತಹ ಅಸಂ­ಖ್ಯಾತ ರೂಪ­ಕ­ಗ­ಳನ್ನು ಅವರು ಸಂಯೋ­ಜಿ­ಸಿ­ದ್ದಾರೆ. ನೃತ್ಯ ಸಂಯೋ­ಜ­ನೆಯ ಜೊತೆಗೆ ಸಾಹಿ­ತ್ಯ­ವನ್ನು ರಚನೆ ಮಾಡು­ವ­ಲ್ಲಿಯೂ ಅವರು ಕೃಷಿ ಮಾಡಿ­ದ್ದಾರೆ. ಕೆಲವು ವೇಳೆ ಸಂಗೀತ ಸಂಯೋ­ಜ­ನೆ­ಯನ್ನೂ ಮಾಡು­ತ್ತಾರೆ. ಅವ­ರನ್ನು ಅಪ­ರೂಪ ಎನ್ನಲು ಇಂತಹ ಹತ್ತಾರು ಕಾರ್ಯ­ಸಾ­ಧ­ನೆ­ಗಳು ಸಾಕ್ಷೀ­ಕ­ರಿ­ಸು­ತ್ತವೆ.
ವಸುಂ­ದರಾ ಅವರು ಖ್ಯಾತ ನೃತ್ಯ ಹಾಗೂ ಅಷ್ಟಾಂಗ ವಿನ್ಯಾಸ ಯೋಗ­ತಜ್ಞ ಪಟ್ಟಾಭಿ ಜೋಯಿಸ್‌ ಅವರ ಶಿಷ್ಯರು. ಸಣ್ಣ ವಯ­ಸ್ಸಿ­ನಲ್ಲೇ ಭೂಮಿಕೆ ಹತ್ತಿದ ಅವರ ಸಾಧ­ನೆಯ ಹಾದಿ ಹಲವು ಘಟ್ಟ­ಗ­ಳನ್ನು ಮುಟ್ಟಿ ಸಾಗಿ ಬಂದಿವೆ. ಅವರ ನೃತ್ಯ­ದಲ್ಲಿ ಯೋಗಕ್ಕೆ ಪ್ರಧಾನ ಸ್ಥಾನ­ವಿದೆ. ಅವರು ಯೋಗ ಸಂಶೋ­ಧಕಿ ಕೂಡ ಆಗಿ­ದ್ದಾರೆ. ಯೋಗ ಮತ್ತು ಭರ­ತ­ನಾಟ್ಯ ನಡು­ವಿನ ಸಂಬಂಧ ಕುರಿ­ತಂತೆ ಅವರ ಸಂಶೋ­ಧ­ನೆಗೆ ಪಿಎ­ಚ್‌ಡಿ ಪದವಿ ಲಭಿ­ಸಿದೆ. ಜಾನ­ಪ­ದ­ದಲ್ಲಿ ಸ್ನಾತ­ಕೋ­ತ್ತರ ಪದವಿ ಗಳಿ­ಸಿ­ದ್ದಾರೆ. ಜಾನ­ಪದ, ಯಕ್ಷ­ಗಾನ ಪ್ರಾಕಾ­ರ­ಗ­ಳನ್ನು ಭರ­ತ­ನಾ­ಟ್ಯಕ್ಕೆ ಅಳ­ವ­ಡಿ­ಸಿ­ಕೊಂಡು ಪ್ರಯೋಗ ಮಾಡಿದ ಕೀರ್ತಿ ಅವ­ರಿಗೆ ಸಲ್ಲು­ತ್ತದೆ.
ವಸುಂ­ದರಾ ಅವರು ಅತ್ಯಂತ ಚಿಕ್ಕ­ವ­ಯ­ಸ್ಸಿ­ನ­ಲ್ಲಿಯೇ `ಕ­ರ್ನಾ­ಟಕ ಕಲಾ ತಿಲಕ' ಪ್ರಶಸ್ತಿ ಪಡೆದ ಸಾಧಕಿ. ಮಾರ್ಷಲ್‌ ಆರ್ಟ್ಸ್‌, ಕಳರಿ ಪೊಯಿಟ್ಟು ನೃತ್ಯ­ಗಳೂ ಅವ­ರಿಗೆ ಗೊತ್ತಿವೆ. ದೂರ­ದ­ರ್ಶನ ಕಲಾ­ವಿ­ದರೂ ಆಗಿ­ರುವ ಅವ­ರಿಗೆ ಸಂದ ಗೌರವ ಪ್ರಶ­ಸ್ತಿ­ಗ­ಳಿಗೆ ಲೆಕ್ಕ­ವಿಲ್ಲ. ತಮ್ಮ ನೃತ್ಯ­ದೊಂ­ದಿಗೆ ವಿಶ್ವ­ವನ್ನು ಸುತ್ತಿ­ದ್ದಾರೆ. ಭರ­ತ­ನಾಟ್ಯ ಕುರಿತು ಕಾರ್ಯ­ಗಾ­ರ­ಗ­ಳನ್ನು ನಡೆ­ಸಿ­ದ್ದಾರೆ. ವಿದೇ­ಶ­ಗ­ಳನ್ನು ತಮ್ಮ ನೃತ್ಯ ಹಾಗೂ ಯೋಗ ಸಂಸ್ಥೆ­ಗ­ಳನ್ನೂ ತೆರೆ­ದಿ­ದ್ದಾರೆ.
ವಸುಂ­ದರಾ ದೊರೆ­ಸ್ವಾಮಿ ಅವರು ನೃತ್ಯ­ಗ­ರು­ವಾಗಿ ಸೃಷ್ಟಿ­ಸಿ­ರುವ ಪ್ರತಿ­ಭೆ­ಗಳು ಇಂದು ಎಲ್ಲೆಡೆ ತಮ್ಮ ಪರಿ­ಮಳ ಬೀರಿವೆ. ಅವರ ಮಾರ್ಗ­ದ­ರ್ಶ­ನ­ದಲ್ಲಿ ನೂರಾರು ಪ್ರತಿ­ಭೆ­ಗಳು ಭೂಮಿ­ಕೆ­ಯೇ­ರಿವೆ. ವಿದೇ­ಶ­ಗಳೂ ಸೇರಿ­ದಂತೆ ದೇಶ­ದೆ­ಲ್ಲೆಡೆ ಅವರ ವಿದ್ಯಾರ್ಥಿ ಬಳ­ಗವೇ ಇದೆ. ಯುವ ಪ್ರತಿ­ಭೆ­ಗ­ಳಿಗೆ ವಿದ್ಯಾ­ದಾ­ನದ ಜೊತೆಗೆ ಅವ­ರಿಗೆ ಸೂಕ್ತ ವೇದಿ­ಕೆ­ಯನ್ನೂ ಅವರು ಒದ­ಗಿ­ಸಿ­ಕೊ­ಟ್ಟಿ­ದ್ದಾರೆ. ಈ ಉದ್ದೇ­ಶ­ಕ್ಕಾಗಿ `ವ­ಸುಂ­ದರಾ ಪ್ರದ­ರ್ಶನಾ ಕಲೆ ಹಾಗೂ ಯೋಗ ಕೇಂದ್ರ'ವನ್ನು ಮೈಸೂ­ರಿ­ನಲ್ಲಿ ತೆರೆ­ದಿ­ದ್ದಾರೆ.
1987ರಲ್ಲಿ ಆರಂ­ಭ­ವಾದ ಈ ಸಂಸ್ಥೆ ಇಂದು ದೇಶ­ದೆ­ಲ್ಲೆಡೆ ಹಬ್ಬಿದೆ. ವಿದೇ­ಶ­ಗ­ಳಲ್ಲೂ ಶಾಖೆ­ಗ­ಳಿವೆ. ಪ್ರತಿ­ವರ್ಷ ಸಂಸ್ಥೆ­ಯಿಂದ ಅಸಂ­ಖ್ಯಾತ ಕಾರ್ಯ­ಕ್ರ­ಮ­ಗಳು ನಡೆ­ಯು­ತ್ತವೆ. ಮುಖ್ಯ­ವಾಗಿ ವರ್ಷ­ದಲ್ಲಿ ನಾಲ್ಕು ಕಾರ್ಯ­ಕ್ರ­ಮ­ಗಳು ಪ್ರತಿ­ವರ್ಷ ಕಡ್ಡಾ­ಯ­ವಾಗಿ ನಡೆ­ಯು­ತ್ತವೆ. ಪಲ್ಲ­ವೋ­ತ್ಸವ, ಪಾರಂ­ಗೋ­ತ್ಸವ, ಚಿಗುರು ಸಂಜೆ ಕಾರ್ಯ­ಕ್ರ­ಮ­ಗಳು ಜನ­ಮ­ನ್ನಣೆ ಗಳಿ­ಸಿವೆ.
ನಟ­ರಾ­ಜೋ­ತ್ಸ­ವ­ದಲ್ಲಿ ಪುರುಷ ನೃತ್ಯ­ಪ­ಟು­ಗಳು ತಮ್ಮ ಪ್ರತಿಭೆ ತೋರಿ­ದರೆ, ಪಲ್ಲ­ವೋ­ತ್ಸ­ವ­ದಲ್ಲಿ ಮಹಿಳಾ ನರ್ತ­ಕಿ­ಯರು ತಮ್ಮ ಪ್ರತಿಭೆ ಮರೆ­ಯು­ತ್ತೆರೆ. ಪಾರಂ­ಗೋ­ತ್ಸ­ವ­ದಲ್ಲಿ ಖ್ಯಾತ­ನಾಮ ಕಲಾ­ವಿ­ದರು ತಮ್ಮ ನೃತ್ಯ­ದ­ರ್ಶನ ಮಾಡಿ­ಸು­ತ್ತಾರೆ. ಚಿಗುರು ಸಂಜೆ ಕಾರ್ಯ­ಕ್ರ­ಮ­ದಲ್ಲಿ 12 ವರ್ಷ ವಯ­ಸ್ಸಿ­ನೊ­ಳ­ಗಿನ ಬಾಲ ಪ್ರತಿ­ಭೆ­ಗಳು ತಮ್ಮ ಹೆಜ್ಜೆ ಗುರುತು ಮಾಡು­ತ್ತಾರೆ. ಈ ನಾಲ್ಕು ವಾರ್ಷಿಕ ಕಾರ್ಯ­ಕ್ರ­ಮ­ಗಳ ಜೊತೆಗೆ ಹಲವು ಸಾಂಸ್ಕೃ­ತಿಕ ಕಾರ್ಯ­ಕ್ರ­ಮ­ಗ­ಳನ್ನು ಸಂಸ್ಥೆ ಆಯೋ­ಜಿ­ಸು­ತ್ತದೆ. ವರ್ಷ­ಪೂರ್ತಿ ರಂಗ­ಪ್ರ­ವೇಶ ಕಾರ್ಯ­ಕ್ರ­ಮ­ಗಳು ನಡೆ­ಯು­ತ್ತವೆ. ಉಪ­ನ್ಯಾಸ, ಯೋಗ ಕಾರ್ಯ­ಗಾ­ರ­ಗಳೂ ನಡೆ­ಯು­ತ್ತವೆ.
ವಸುಂ­ದರಾ ಅವರು ತಮ್ಮ ನೃತ್ಯದ ಮೂಲಕ ಶ್ರೀಮಂತ ಸಂಸ್ಕೃ­ತಿ­ಯೊಂ­ದರ ಪ್ರತಿ­ನಿ­ಧಿ­ಯಾ­ಗಿ­ದ್ದಾರೆ. ನೃತ್ಯ ಸಾಗ­ರ­ದಲ್ಲಿ ಮುಂದಿ­ದ್ದಾರೆ. ಶಾರದಾ ಪುತ್ರಿ­ಯಾ­ಗಿ­ದ್ದಾರೆ. ತಪಸ್ಸು ಭಕ್ತಿ ಯೋಗ ಮಾರ್ಗ­ಗ­ಳಿಂದ ದಕ್ಕಿ­ಸಿ­ಕೊಂಡ ವಿದ್ಯೆ­ಯಿಂದ ಇಂದು ನಾಟ್ಯ­ರಾ­ಣಿ­ಯಾಗಿ ಹೆಜ್ಜೆ ಇಡು­ತ್ತಿ­ದ್ದಾರೆ.

Wednesday, June 24, 2009

ವಿದ್ವಾನ್ ಮೈಸೂರು ವಿ. ಅಂಬಾ­ಪ್ರ­ಸಾದ್‌



ನಾದ­ಯೋಗಿ ಮೈಸೂರು ವಿ. ಅಂಬಾ­ಪ್ರ­ಸಾದ್‌


ಅದು ಅಂಬಾ­ಸ­ದನ. ಅಗ್ರ­ಹಾ­ರದ ಬಸ­ವೇ­ಶ್ವರ ರಸ್ತೆ­ಯ­ಲ್ಲಿದೆ. ನೂರೊಂದು ಗಣ­ಪತಿ ದೇವಾ­ಲ­ಯಕ್ಕೆ ಸಮೀಪ. ಆ ಜಾಗ­ದಲ್ಲಿ ಒಂದು ಭಾವ­ನಾ­ತ್ಮಕ ಸೆಳೆ­ತ­ವಿದೆ. ಸದ­ನದ ಒಂದಿಚೂ ಜಾಗ­ವನ್ನೂ ಖಾಲಿ ಬಿಟ್ಟಿಲ್ಲ. ಕಬ್ಬಿ­ಣದ ಸರ­ಳು­ಗ­ಳಿಂದ ಬಂಧಿ­ಸ­ಲ್ಪ­ಟ್ಟಿದೆ. ಆದರೆ ಅಲ್ಲಿಯ ಪರಿ­ಮಳ ಸರ­ಳು­ಗ­ಳಿಂದ ತೂರು ಬಂದು ಎಲ್ಲರ ಹೃದಯ ತಟ್ಟಿದೆ. ಅಲ್ಲಿ ಹೋದ­ವ­ರಿಗೆ ದೇವಾ­ಲ­ಯಕ್ಕೆ ಹೋದ ಅನು­ಭವ ಸಿಗು­ತ್ತದೆ. ಆದರೆ ಅದು ದೇವಾ­ಲ­ಯ­ವಲ್ಲ. ಸಂಗೀ­ತ­ವನ್ನು ಆರಾ­ಧಿ­ಸುವ ಒಂದು ಕುಟುಂಬ.
ಅದು ಖ್ಯಾತ ಪಿಟೀಲು ಕಲಾ­ವಿದ ನಾದ­ಯೋಗಿ ಮೈಸೂರು ವಿ. ಅಂಬಾ­ಪ್ರ­ಸಾದ್‌ ಅವರ ಬ್ರಮ­ರಾಂಭ ಸಂಗೀತ ವಿದ್ಯಾ­ಲಯ. ತಳ ಮಹ­ಡಿ­ಯಲ್ಲಿ ಕುಟುಂಬ. ಮೊದಲ ಮಹ­ಡಿ­ಯಲ್ಲಿ ಸಂಗೀತ ವಿದ್ಯಾ­ಲಯ. ಮೇಲಿನ ಮಹ­ಡಿ­ಯಲ್ಲಿ ದಿವ್ಯ ಸಭಾಂ­ಗಣ. ಅದನ್ನು ಅಂಬಾ­ಸ­ದನ ಎಂದೇ ಕರೆ­ಯ­ಲಾ­ಗು­ತ್ತದೆ.
ಅವರ ಮನೆ ತುಂಬೆಲ್ಲಾ ಸಂಗೀತ. ಮನೆ­ಯಲ್ಲಿ ಇರು­ವ­ವ­ರೆಲ್ಲಾ ಸಂಗೀ­ತ­ಗಾ­ರರು. ಪ್ರತಿ­ಕ್ಷಣ ಅಲ್ಲಿ ವಿದ್ಯಾ­ದಾನ ತಡೆ­ಯಿ­ಲ್ಲದೆ ನಡೆ­ಯು­ತ್ತದೆ. ಸಂಗೀತ, ಭಜನೆ, ಸಂಸ್ಕೃತ ಹೀಗೆ ಹಲ­ವಾರು ವಿಭಾ­ಗ­ಗಳ ಪಾಠ­ಗಳು ನಡೆ­ಯು­ತ್ತವೆ. ವಂಶ ಪರಂ­ಪ­ರೆ­ಯಿಂದ ಬಂದ ಸಂಗೀತ ಅಂಬಾ­ಸ­ದ­ನ­ದಲ್ಲಿ ಸುಧೆ­ಯಾಗಿ ಹರಿ­ಯು­ತ್ತಿದೆ.
ಅಂಬಾ­ಪ್ರ­ಸಾದ್‌ ಅವರು ಶಾಲಿನಿ ಮತ್ತು ದಿ. ಜಿ.ವಿ. ಮೂರ್ತಿ ಅವರ ಸುಪು­ತ್ರರು. ನಾಡಿನ ಪ್ರಭಾ­ವ­ಶಾಲಿ ಪಿಟೀಲು ವಾದ­ಕ­ರಲ್ಲಿ ಅಂಬಾ­ಪ್ರ­ಸಾದ್‌ ಕೂಡ ಒಬ್ಬರು. ಅವರ ಸೋಲೋ ಪಿಟೀಲು ಕಚೇ­ರಿ­ಗ­ಳಲ್ಲಿ ಭಕ್ತಿ­ಭಾವ ಝರಿ­ಯಂತೆ ಹರಿ­ಯು­ತ್ತದೆ. ತಾವೇ ಸಿದ್ಧ­ಪ­ಡಿ­ಸಿ­ಕೊಂ­ಡಿ­ರುವ ಐದು ತಂತಿ­ಗಳ ವೈಲಿನ್‌ ತಮ್ಮ ಪ್ರತಿ­ಭೆಯ ಅಭಿ­ವ್ಯ­ಕ್ತಕ್ಕೆ ಕನ್ನ­ಡಿ­ಯಾ­ಗಿದೆ.
ಅಂಬಾ­ಪ್ರ­ಸಾದ್‌ ಪಿಟೀಲು ನುಡಿ­ಸುವ ಶೈಲಿ ಬಹಳ ವೈಶಿಷ್ಟ್ಯ ಪೂರ್ಣ­ವಾ­ಗಿದ್ದು, ಸಂಗೀತ ಲೋಕ­ದಲ್ಲಿ ವಿಶೇಷ ಸ್ಥಾನ­ದಲ್ಲಿ ನಿಲ್ಲು­ತ್ತಾರೆ. ಅವರು ಪೀಟೀಲು ನುಡಿ­ಸು­ವಾಗ ಅವರ ಮೊಗ­ದಲ್ಲಿ ಸಾಹಿ­ತ್ಯದ ಅಭಿ­ವ್ಯ­ಕ್ತ­ವಾ­ಗು­ತ್ತದೆ. ಹಾಡು­ಗಾ­ರಿ­ಕೆ­ಯಲ್ಲೂ ಕೂಡ ಅಂಬಾ­ಪ್ರ­ಸಾದ್‌ ಸಾಧನೆ ಮಾಡಿ­ದ್ದಾರೆ. ಸಂಗೀ­ತದ ವಾತಾ­ವ­ರ­ಣ­ದಲ್ಲೇ ಬೆಳೆದ ಅಂಬಾ­ಪ್ರ­ಸಾದ್‌ ರಾಜ ಮಣಿ­ಕ್ಕಮ್‌ ಪಿಳ್ಳೈ ವಂಶಾ­ವ­ಳಿಗೆ ಸೇರಿ­ದ­ವ­ರಾ­ಗಿ­ದ್ದಾರೆ. ಸಂಸ್ಕಾರ ಅವರ ನರ­ನಾಡಿ, ರಕ್ತ­ದಲ್ಲೇ ಇದೆ.
ಅಂಬಾ­ಪ್ರ­ಸಾದ್‌ ಸಂಗೀತ ಸಾಧ­ನೆಯ ಹಾದಿ­ಯಲ್ಲಿ ಹಲವು ಗುರು­ಗಳ ವಿದ್ಯಾ­ಶೀ­ರ್ವಾದ ಪಡೆ­ದಿ­ದ್ದಾರೆ. ಶ್ರೇಷ್ಠ ಆಚಾರ್ಯ ವಿದ್ವಾನ್‌ ಕುಂಬ­ಕೋಣಂ ಜನಾ­ರ್ಧ­ನಮ್‌ ಅವರ ಮಾರ್ಗ­ದ­ರ್ಶ­ನ­ದಲ್ಲಿ ಆರಂ­ಭ­ವಾದ ಸಾಧನೆ ಕಂಚಿ­ಪುರಂ ನಾಗ­ರಾ­ಜನ್‌, ಶ್ರೀನಿ­ವಾಸ ಭಾಗ­ವ­ತರ್‌, ಮೈಸೂರು ಹಿೃಶಿ­ಕೇಶ್‌ , ಮೈಸೂರು ವೇಣು­ಗೋ­ಪಾಲ್‌, ರತ್ನಮ್ಮ, ಎನ್‌. ನಂಜುಂ­ಡ­ಸ್ವಾಮಿ, ಜೆ. ದೇವಿ­ಪ್ರ­ಸಾದ್‌, ಎಚ್‌. ಕೆ. ನರ­ಸಿಂಹ ಮೂರ್ತಿ ಮುಂತಾ­ದ­ವ­ರಿಂದ ತಮ್ಮ ಸಂಗೀತ ಜ್ಞಾನ­ವನ್ನು ವಿಸ್ತ­ರಿ­ಸಿ­ಕೊಂ­ಡಿ­ದ್ದಾರೆ.
1992ರಲ್ಲಿ ಕಚೇರಿ ನೀಡಲು ಆರಂ­ಭಿ­ಸಿದ ಅಂಬಾ­ಪ್ರ­ಸಾದ್‌ ಹಿಂದೆ ತಿರುಗಿ ನೋಡಿಲ್ಲ. ದೇಶಾ­ದ್ಯಂತ ಸಾವಿ­ರಾರು ಸೋಲೋ ವೈಲಿನ್‌ ಕಚೇರಿ ನೀಡಿ­ದ್ದಾರೆ. ತಮಿ­ಳು­ನಾ­ಡಿ­ನಲ್ಲಿ ಅಂಬಾ­ಪ್ರ­ಸಾದ್‌ ಹೆಚ್ಚು ಕಾರ್ಯ­ಕ್ರಮ ನೀಡಿದ್ದು, ತಮಿ­ಳು­ನಾ­ಡಿ­ನಲ್ಲಿ ಖ್ಯಾತಿ ಪಡೆ­ದಿ­ರುವ ಕರ್ನಾ­ಟ­ಕದ ಹೆಮ್ಮೆಯ ಸಂಗೀ­ತ­ಗಾರ ಎಂದರೆ ತಪ್ಪಲ್ಲ.
ಅಂಬಾ­ಪ್ರ­ಸಾದ್‌ ಅವರ ಸಂಗೀತ ಸಾಧ­ನೆಗೆ ಅಪಾರ ಗೌರವ ಪ್ರಶ­ಸ್ತಿ­ಗಳು ಅರಸಿ ಬಂದಿವೆ. ಭಾರತ ವೈಲಿನ್‌ ವಿದ್ಯಾ ತಿಲಕ, ನಾದ­ಯೋಗಿ, ನಾದ ನಿರ್ಮಾತೃ, ಪಿಟೀಲು ವಾದನ ಚತುರ, ಯುವ ಭಾಸ್ಕರ ಮುಂತಾದ ಗೌರ­ವ­ಗಳು ಅವರ ಮುಡಿ­ಗೇ­ರಿವೆ.
ಸಂಗೀತ ಲೋಕ­ದಲ್ಲಿ ವಿದ್ಯಾ­ದಾ­ನಕ್ಕೆ ಪೂಜ್ಯ ಸ್ಥಾನ­ವಿದೆ. ಅವ­ನೆಷ್ಟೇ ದಿಗ್ಗಜ ಸಂಗೀ­ತ­ಗಾ­ರ­ನಾ­ದರೂ ಕಲಿಯ ಬಂದ­ವ­ರಿಗೆ ವಿದ್ಯಾ­ದಾನ ಮಾಡ­ದಿ­ದ್ದರೆ ಅವನು ಅಜ್ಞಾನಿ ಎಂದು ಹೇಳ­ಲಾ­ಗು­ತ್ತದೆ. ಸಂಗೀತ ಉಳಿ­ಯ­ಬೇ­ಕಾ­ದರೆ ಜ್ಞಾನದ ಹಂಚಿಕೆ ಆಗಲೇ ಬೇಕು. ಅಂಬಾ­ಪ್ರ­ಸಾದ್‌ ತಮ್ಮ ಸಂಗೀತ ಜ್ಞಾನ­ವನ್ನು ನೂರಾರು ವಿದ್ಯಾ­ರ್ಥಿ­ಗಳ ಜತೆ ಹಂಚಿ­ಕೊಂ­ಡಿ­ದ್ದಾರೆ. ಅಂಬಾ­ಸ­ದನ ಯಾವಾ­ಗಲು ವಿದ್ಯಾ­ರ್ಥಿ­ಗ­ಳಿಂದ ತುಂಬಿ­ರು­ತ್ತದೆ. ಬಿಡು­ವಿ­ಲ್ಲದ ಕಚೇ­ರಿ­ಗಳ ನಡುವೆ ವಿದ್ಯಾ­ದಾ­ನ­ಕ್ಕಾಗಿ ಸಮಯ ಮಾಡಿ­ಕೊಂಡು ವಿದ್ಯಾ­ದಾ­ನ­ದಲ್ಲಿ ತೊಡ­ಗಿ­ದ್ದಾರೆ. ಅವ­ರಿಗೆ ವಿದೇ­ಶ­ಗ­ಳಲ್ಲೂ ವಿದ್ಯಾ­ರ್ಥಿ­ಗ­ಳಿ­ದ್ದಾರೆ. ಆನ್‌­ಲೈನ್‌ ಮೂಲಕ ಸಂಗೀತ ಬೋಧಿ­ಸ­ಲಾ­ಗು­ತ್ತದೆ. ಅಂಬಾ­ಪ್ರ­ಸಾದ್‌ ಅವರ ತಮ್ಮ ವಿ.ಆರ್‌.ಆರ್‌. ಭಾರ್ಗವ ಮೃದಂ­ಗ­ದಲ್ಲಿ ಪ್ರವೀ­ಣ­ರಾ­ಗಿ­ದ್ದಾರೆ.
ೃಮ­ರಾಂಬ ಸಂಗೀತ ವಿದ್ಯಾ­ಲ­ಯ­ದಲ್ಲಿ ಹಲವು ವಿಭಾ­ಗ­ಗ­ಳಲ್ಲಿ ಸಂಗೀತ ಪಾಠ­ಗಳು ನಡೆ­ಯು­ತ್ತವೆ. ಹಾಡು­ಗಾ­ರಿಕೆ, ಹಾರ್ಮೋ­ನಿಯಂ, ಪಿಟೀಲು, ಮ್ಯಾಂಡ­ಲಿನ್‌, ವೀಣಾ, ಗಿಟಾರ್‌, ಮೃದಂಗ, ತಬಲ, ಘಟಂ ಮುಂತಾದ ವಾದ್ಯ­ಗ­ಳನ್ನು ಹೇಳಿ­ಕೊ­ಡ­ಲಾ­ಗು­ತ್ತದೆ. ಜೊತೆಗೆ ಸಂಸ್ಕೃತ, ಭಜನೆ, ಹಿಂದಿ, ತಮಿಳು ತರ­ಗ­ತಿ­ಗಳೂ ಕೂಡ ನಡೆ­ಯು­ತ್ತವೆ.
ಅಂಬಾ­ಸ­ದ­ನದ ಕಾರ್ಯ­ಕ್ರ­ಮ­ಗಳು ನಿತ್ಯ ನಿರಂ­ತ­ರ­ವಾಗಿ ನಡೆ­ಯು­ತ್ತವೆ. ಪ್ರತಿ­ವರ್ಷ ನಡೆ­ಯುವ ಬ್ರಮ­ರಾಂಭ ಸಂಗೀತ ಶಾಲೆಯ ವಾರ್ಷಿ­ಕೋ­ತ್ಸ­ವ­ದಲ್ಲಿ ಖ್ಯಾತ­ನಾಮ ಸಂಗೀ­ತ­ಗಾ­ರರ ದಂಡೇ ಅಲ್ಲಿ­ರು­ತ್ತದೆ.
ಮೈಸೂ­ರಿ­ನಲ್ಲಿ ನಡೆ­ಯುವ ಧಾರ್ಮಿಕ ಕಾರ್ಯ­ಕ್ರ­ಮ­ಗ­ಳಲ್ಲಿ ಅಂಬಾ­ಪ್ರ­ಸಾದ್‌ ಅವರ ವೈಲಿನ್‌ ಕಚೇರಿ ಇದ್ದೇ ಇರು­ತ್ತದೆ. ಅವರ ಬಹ­ಳಷ್ಟು ಕಚೇ­ರಿ­ಗ­ಳಿಗೆ ಸಹೋ­ದರ ಭಾರ್ಗವ ಮೃದಂಗ ನುಡಿ­ಸು­ತ್ತಾರೆ. ಅವರ ಕಚೇ­ರಿ­ಗ­ಳಲ್ಲಿ ಸಹೋ­ದ­ರರ ಸಂಗೀತ ಸಂಗ­ಮ­ವನ್ನು ಕಾಣ­ಬ­ಹುದು.

Sunday, June 21, 2009

ಎಚ್ . ಆರ್. ಲೀಲಾವತಿ







ಮೈಸೂ­ರಿ­ನಲ್ಲಿ ಸುಗಮ ಸಂಗೀ­ತದ ಬೇರು


ಕನ್ನಡ ಸುಗಮ ಸಂಗೀತ ಪರಂ­ಪ­ರೆಯ ಮೂಲ ಬೇರು ಮೈಸೂ­ರಿ­ನ­ಲ್ಲಿದೆ.
ಅವರು ಮಾಧು­ರ್ಯಕ್ಕೆ ಇನ್ನೊಂದು ಹೆಸರು. ಪಿ. ಕಾಳಿಂ­ಗ­ರಾ­ಯ­ರಿಂದ ಆರಂ­ಭ­ವಾದ ಲಘು ಸಂಗೀತ ಪರಿ­ಕ­ಲ್ಪ­ನೆಗೆ ಹೊಸ ರೂಪ ಕೊಟ್ಟ­ವರು. ಸಂಗೀ­ತ­ದಲ್ಲಿ ಸಾಹಿ­ತ್ಯ­ವನ್ನೇ ಪ್ರಧಾನ ಮಾಡಿ ಹಾಡಿ­ದ­ವರು. ಶಾಸ್ತ್ರೀಯ ಸಂಗೀ­ತದ ಹಿನ್ನೆ­ಲೆ­ಯಿಂದ ಬಂದು ಲಘು ಸಂಗೀ­ತಕ್ಕೆ ಒಂದು ಸ್ಥಾನ ಕೊಟ್ಟ­ವರು. ಆಕಾ­ಶ­ವಾ­ಣಿಯ ಮೂಲಕ ಮನೆ ಮಾತಾ­ದ­ವರು. ದಿವಂ­ಗತ ಎಚ್‌.ಕೆ. ನಾರಾ­ಯ­ಣರ ಸಮ­ಕಾ­ಲೀ­ನರು. ಅವರ ಕ್ಯಾಸೆಟ್‌ ಕ್ರಾಂತಿ­ಯಲ್ಲಿ ಪಾಲ್ಗೊಂ­ಡ­ವರು.
ಅವರು ಎಚ್‌.ಆರ್‌. ಲೀಲಾ­ವತಿ. ಸುಗಮ ಸಂಗೀತ ಸಾಮ್ರಾಜ್ಞೆ. ಅವ­ತ್ತಿನ ಸುಗಮ ಸಂಗೀತ ತ್ರಿಮೂ­ತ್ರಿ­ಗ­ಳಲ್ಲಿ (ಪ­ದ್ಮಾ­ಚ­ರಣ್‌, ಎಚ್‌.ಕೆ. ನಾರಾ­ಯಣ್‌) ಲೀಲಾ­ವತಿ ಕೂಡ ಒಬ್ಬರು. ಅಸಂ­ಖ್ಯಾತ ಕವಿ­ಗಳ ಭಾವ­ಗೀ­ತೆಗೆ ದನಿ­ಯಾ­ದ­ವರು. ಜೊತೆಗೆ ಎಚ್‌.ಆರ್‌. ಲೀಲಾ­ವತಿ ಸ್ವತಃ ಕವಿ­ಗಳೂ ಹೌದು.
ಲೀಲಾ­ವತಿ ಸಂಗೀತ ಪರಿ­ಸ­ರ­ದಲ್ಲೇ ಹುಟ್ಟಿ ಬೆಳೆ­ದ­ವರು. ತಾಯಿ ಜಯಮ್ಮ ಅವರ ಮೊದಲ ಗುರು. ತಂದೆ ಅಠಾಣ ರಾಮಣ್ಣ(ಹಾ­ಸನ ರಾಮಣ್ಣ). ಕರ್ನಾ­ಟಕ ಶಾಸ್ತ್ರಿಯ ಸಂಗೀ­ತದ ಭದ್ರ ಬುನಾ­ದಿಯ ಮೇಲೆ ಭಾವ­ಗೀ­ತೆ­ಗ­ಳನ್ನು ಹಾಡಿ ವಿಖ್ಯಾ­ತಿ­ಯಾ­ದರು.
ಎಚ್‌.ಆರ್‌. ಲೀಲಾ­ವತಿ ಅವರು ತಮ್ಮ ಕಲಿ­ಕೆಯ ಹಾದಿ­ಯಲ್ಲಿ ಹಲವು ಮೈಲು­ಗ­ಲ್ಲು­ಗ­ಳನ್ನು ಧಾಟಿ­ದ್ದಾರೆ. ಶಾಸ್ತ್ರೀಯ ಸಂಗೀತ ಹಾಡು­ತ್ತಿದ್ದ ಅವರು ಪದ್ಮಾ­ಚ­ರಣ್‌ ಮಾರ್ಗ­ದ­ರ್ಶ­ನ­ದ­ದಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡಿ­ದರು. ಜ್ಞಾನ ಪ್ರಕಾಶ್‌ ಘೋಶ್‌, ದುಬೇನ್‌ ಶರ್ಮಾ ಅವ­ರಿ­ದಂ­ದಲೂ ಲೀಲಾ­ವತಿ ತಮ್ಮ ಸುಸ್ವರ ಜ್ಞಾನ­ವನ್ನು ಹಿಮ್ಮ­ಡಿ­ಗೊ­ಳಿ­ಸಿ­ಕೊಂ­ಡರು.
ಕನ್ನ­ಡದ ಪ್ರಥಮ ಮಹಿಳಾ ಸಂಗೀತ ಸಂಯೋ­ಜ­ಕಿ­ಯಾಗಿ ತಮ್ಮ ಸಾಮರ್ಥ್ಯ ತೋರಿ­ಸಿ­ರುವ ಲೀಲಾ­ವತಿ ಅವರು ಸಾಹಿ­ತ್ಯ­ವನ್ನು ನೇರ ಹಾಗೂ ಸರ­ಳ­ವಾಗಿ ಕೇಳು­ಗರ ಮನ­ಮು­ಟ್ಟು­ವಂತೆ ತಲು­ಪಿ­ಸು­ವಲ್ಲಿ ನಿಷ್ಣಾ­ತರು. ಅವರ ಗಾಯನ ಹಾಗೂ ಸ್ವರ ಸಂಯೋ­ಜನೆ ವೈಶಿ­ಷ್ಟ್ಯ­ತೆ­ಯಿಂದ ಕೂಡಿದ್ದು ಯಾರು ಬೇಕಾ­ದರೂ ಇದು ಲೀಲಾ­ವತಿ ಅವರ ಗಾಯನ ಎಂದು ಗುರು­ತಿ­ಸ­ಬ­ಹುದು. ಕವಿಯ ಭಾವ­ನೆ­ಗ­ಳಿಗೆ ನಿರಾ­ಶೆ­ಯಾ­ಗ­ದಂತೆ ಅದರ ಅರ್ಥಕ್ಕೆ ಸ್ವರ ಕಟ್ಟು­ವಲ್ಲಿ ಅವರು ಎತ್ತಿದ ಕೈ. ಭಾವ­ನಾ­ತ್ಮಕ ತೀವ್ರತೆ ಲೀಲಾ­ವ­ತಿ­ಯ­ವರ ಗಾಯ­ನ­ದ­ಲ್ಲಿ­ರು­ವುದು ವಿಶೇಷ.
ಆಕಾ­ಶ­ವಾ­ಣಿ­ಯಲ್ಲಿ ಹಿರಿಯ ಕಲಾ­ವಿ­ದ­ರಾ­ಗಿದ್ದ ಪದ್ಮಾ­ಚ­ರಣ್‌ ಅವರ ನೂರಾರು ಸಂಯೋ­ಜ­ನೆ­ಗ­ಳಿಗೆ ಲೀಲಾ­ವತಿ ದನಿ­ಯಾ­ಗಿ­ದ್ದಾರೆ. ಅಡಿ­ಗರ `ನ­ಡೆದು ಬಂದ ದಾರಿಯ ಕಡೆಗೆ' ಕುವೆಂಪು ಅವರ `ಅಂ­ತ­ರ­ತಮ ನೀಗುರು' ಗೀತೆ­ಗ­ಳನ್ನು ಮತ್ತೆ ಮತ್ತೆ ಕೇಳ­ಬೇಕು ಎನಿ­ಸು­ತ್ತದೆ. ನೃತ್ಯ­ರೂ­ಪ­ಕ­ಗ­ಳಿಗೂ ಎಚ್‌.ಆರ್‌. ಲೀಲಾ­ವತಿ ಹಾಡಿ­ದ್ದಾರೆ. `ಅಕ್ಕ ಮಹಾ­ದೇವಿ' ರೂಪ­ಕ­ದಲ್ಲಿ ಎಚ್‌.ಕೆ. ನಾರಾ­ಯಣ್‌ ಜೊತೆ ಹಾಡಿ­ದ್ದರು. ವಚನ, ದೇವರ ನಾಮ ಹಾಗೂ ಚಲ­ನ­ಚಿ­ತ್ರ­ಗ­ಳಿಗೂ ಹಾಡಿ­ದ್ದಾರೆ.
ಲೀಲಾ­ವತಿ ಅವರ ಪತಿ ಎಸ್‌.ಜಿ. ರಘು­ರಾಮ್‌ ಕೂಡ ಗಾಯ­ಕರು. ಲೀಲಾ­ವ­ತಿ­ಯ­ವರ ಸುಗಮ ಸಂಗೀತ ಕಾರ್ಯ­ಕ್ರ­ಮ­ಗ­ಳಲ್ಲಿ ರಘು­ರಾಮ್‌ ಹಾಡು­ತ್ತಾರೆ. ಅಲ್ಲದೆ ಪತ್ನಿ ರಾಗ ಸಂಯೋ­ಜ­ನೆಯ ಹಲವು ಧ್ವನಿ­ಸು­ರುಳಿ ಹಾಗೂ ಸಿಡಿ­ಗ­ಳಲ್ಲಿ ಹಾಡಿ­ದ್ದಾರೆ.
ಎಚ್‌.ಆರ್‌. ಲೀಲಾ­ವತಿ ಕರ್ನಾ­ಟಕ ಸಂಗೀತ ನೃತ್ಯ ಅಕಾ­ಡೆ­ಮಿಯ ಅಧ್ಯ­ಕ್ಷ­ರಾ­ಗಿ­ದ್ದರು. ಅವರು ಅಧ್ಯ­ಕ್ಷ­ರಾ­ಗಿದ್ದ ಕಾಲ­ದಲ್ಲಿ ಸುಗಮ ಸಂಗೀತ ಪ್ರಗ­ತಿಗೆ ಹಲವು ದಾಖ­ಲಿತ ಕೆಲಸ ಮಾಡಿ­ದ್ದಾರೆ.


ನಾಡ­ಗೀತೆ ಮತ್ತು ಎಚ್‌.ಆರ್‌. ಲೀಲಾ­ವತಿ: ಕುವೆಂಪು ಅವರ ನಾಡ­ಗೀತೆ `ಜೈ ಭಾರತ ಜನ­ನಿಯ ತನು­ಜಾತೆ' ಗೀತೆ­ಯನ್ನು ರಾಗ ಸಂಯೋ­ಜಿಸಿ ಮೊದಲು ಹಾಡಿದ ಖ್ಯಾತಿ ಎಚ್‌.ಆರ್‌. ಲೀಲಾ­ವತಿ ಅವ­ರಗೆ ಸಲ್ಲ­ಬೇಕು. ಇತ್ತಿ­ಚೆಗೆ ನಾಡ­ಗೀ­ತೆಯ ಕುರಿ­ತಂತೆ ವಿವಾದ ಹುಟ್ಟಿ­ಕೊಂ­ಡಿತ್ತು. ವಿವಾ­ದದ ಸಂದ­ರ್ಭ­ದಲ್ಲಿ ಎಚ್‌.ಆರ್‌. ಲೀಲಾ­ವತಿ ಎಲ್ಲರೂ ಒಪ್ಪು­ವಂ­ತಹ ಮಾತು­ಗ­ಳ­ನ್ನಾ­ಡಿ­ದ್ದರು. `ನಾನೇ ಮೊದಲು ನಾಡ­ಗೀ­ತೆಗೆ ರಾಗ ಸಂಯೋ­ಜ­ಸಿ­ದ್ದರೂ ಕೂಡ ಮೈಸೂರು ಅನಂತ ಸ್ವಾಮಿ ಅವರ ಸಂಯೋ­ಜ­ನೆ­ಯನ್ನು ಜನ ಮೆಚ್ಚಿ­ಕೊಂ­ಡಿ­ದ್ದಾರೆ. ಆದ್ದ­ರಿಂದ ಅವರ ಸಂಯೋ­ಜ­ನೆಯೇ ಕಡ್ಡಾ­ಯ­ವಾ­ಗಿಲಿ' ಎಂಬ ವಿದ್ವತ್‌ ಪೂರ್ಣ ಮಾತು­ಗ­ಳನ್ನು ಇಲ್ಲಿ ಸ್ಮರ­ಸ­ಬ­ಹುದು. ಗೀತೆಯ ಸಾಹಿತ್ಯ ಮತ್ತು ಯಾರ ಸಂಯೋ­ಜ­ನೆಯ ಗೀತೆ­ಯನ್ನು ಹಾಡ­ಬೇಕು ಎಂಬ ಕುರಿ­ತಂತೆ ಇನ್ನೂ ವಿವಾದ ಇದ್ದೇ ಇದೆ.
ಲೀಲಾ­ವತಿ ಅವ­ರಿಗೆ ರಂಗ­ಭೂ­ಮಿಯ ಮೇಲೆ ಅತೀವ ಪ್ರೀತಿ ಇದೆ. ಮೈಸೂ­ರಿ­ನಲ್ಲಿ ನಡೆ­ಯುವ ರಂಗ­ಭೂಮಿ ಚಟು­ವ­ಟಿ­ಕೆ­ಯಲ್ಲಿ ಅವರು ಉತ್ಸಾ­ಹ­ದಿಂದ ಭಾಗ­ವ­ಹಿ­ಸು­ತ್ತಾರೆ. ಹಲವು ನಾಟ­ಕ­ಗ­ಳಿಗೆ ಸಂಗೀ­ತ­ವನ್ನೂ ನೀಡಿ­ದ್ದಾರೆ. ಎಚ್‌.ಆರ್‌. ಲೀಲಾ­ವತಿ ಅವರ ಸಂಗೀತ ಸೇವೆಗೆ ಅಪಾರ ಗೌರವ ಪ್ರಶ­ಸ್ತಿ­ಗಳು ಸಂದಿವೆ. ಹಲವು ಸಂಗೀತ ಸಮ್ಮೇ­ಳ­ನ­ಗ­ಳಲ್ಲಿ ಅಧ್ಯ­ಕ್ಷ­ರಾಗಿ ಭಾಗ­ವ­ಹಿ­ಸಿ­ದ್ದಾರೆ.
ಮೈಸೂ­ರಿನ ಕುವೆಂಪು ನಗ­ರದ ತಮ್ಮ ನಿವಾ­ಸ­ದಲ್ಲಿ ಸುಗಮ ಸಂಗೀತ ಅಕಾ­ಡೆಮಿ ಎಂಬ ಸಂಸ್ಥೆ­ಯನ್ನು ಕಟ್ಟಿ­ಕೊಂಡು ಯುವ ಪ್ರತಿ­ಭೆ­ಗ­ಳಿಗೆ ಸಂಗೀತ ತರ­ಬೇತಿ ನೀಡು­ವಲ್ಲಿ ಅವರು ಕಾರ್ಯ­ನಿ­ರ­ತ­ರಾ­ಗಿ­ದ್ದಾ.

ವಿದ್ವಾನ್. ನಾಗರಾಜ ಮಂಜು­ನಾ­ಥರು


ತಂತಿ­ಗಳ ಮೇಲೆ `ನಾ­ಗ­ರಾಜ' ನಡಿಗೆ



ಆ ಬೆರ­ಳು­ಗ­ಳಲ್ಲಿ ಅದೇನು ಚೈತ­ನ್ಯವೋ ಏನೋ. ತಂತಿ­ಗಳ ಮೇಲೆ ಅವರು ಬೆರ­ಳಿ­ಟ್ಟರೆ ಮಾಧುರ್ಯ ತುಂಬಿ­ಕೊಂಡು ಬರು­ತ್ತದೆ. ಅವರು ಪಿಟೀಲು ನುಡಿ­ಸು­ತ್ತಿ­ದ್ದರೆ ಸಂಗೀತ ತಿಳಿ­ಯದ ಸಾಮಾ­ನ್ಯನೂ ಕೂಡ ತಿಳಿ­ದಂತೆ ತಲೆ­ಯಾ­ಡಿ­ಸು­ತ್ತಾನೆ. ತಂತಿ­ಗಳ ಮೇಲಿನ ಅವರ ಬೆರ­ಳು­ಗಳ ನಡಿಗೆ ಕೇಳು­ಗನ ಹೃದ­ಯ­ದಲ್ಲಿ ಕಂಪನ ಹುಟ್ಟಿ­ಸು­ತ್ತವೆ. ಅವರು ನುಡಿ­ಸುವ ಜಾಗ­ದಲ್ಲಿ ಶಬ್ದಕ್ಕೆ ಜಾಗ­ವಿಲ್ಲ. ಅಲ್ಲೇ­ನಿ­ದ್ದರೂ ಶಾಂತಿ ವಿಶ್ರಾಂತಿ.
ಅವರು ಮೈಸೂರು ಸಹೋ­ದ­ರರು. ವಿದ್ವಾಂ­ಸ­ರಾದ ಮೈಸೂರು ನಾಗ­ರಾಜ ಮತ್ತು ಡಾ. ಮಂಜು­ನಾಥ. ತಮ್ಮ ವೈಶಿಷ್ಟ ಸಂಗೀತ ಜ್ಞಾನ­ದಿಂದ ಭಾರ­ತದ ಅತ್ಯು­ನ್ನತ ಸ್ಥಾನ­ದ­ಲ್ಲಿ­ರುವ ಪೀಟಿಲು ವಾದ­ಕರು. ದೊಡ್ಡ ಗಾಯ­ಕನ ಹಾಡು­ಗಾ­ರಿ­ಕೆಗೆ ತಮ್ಮ ಪಿಟೀಲು ಮೂಲಕ ತಕ್ಕ ಉತ್ತರ ಕೊಡ­ಬಲ್ಲ ಪ್ರತಿ­ಭಾ­ವಂ­ತರು. ಗಾಯಕ ಒಂದು ಅಂದರೆ ಇವರು ಹತ್ತು ಹನ್ನೆ­ರಡು ಅನ್ನು­ವಷ್ಟು ಗಟ್ಟಿ­ಗರು! ತಮಿ­ಳು­ನಾ­ಡಿನ ಸಂಗೀತ ಸಾಮ್ರಾ­ಟರು ತಮಗೆ ತಕ್ಕ ಪಕ್ಕ­ವಾದ್ಯ ಸಹ­ಕಾ­ರಕ್ಕೆ ಮೈಸೂರು ಸಹೋ­ದ­ರ­ರನ್ನೇ ಬಯ­ಸು­ತ್ತಾರೆ ಎನ್ನು­ವುದು ವಿಶೇಷ.
ಮೈಸೂರು ಸಹೋ­ದ­ರರ ಜುಗ­ಲ್‌­ಬಂದಿ ಕಚೇ­ರಿ­ಗಳು ಇಡೀ ವಿಶ್ವಾ­ದ್ಯಂತ ಮನ್ನಣೆ ಪಡೆ­ದಿವೆ. ಕರ್ನಾ­ಟಕ ಸಂಗೀತ ಇಂದು ಲೋಕ­ದ­ಲ್ಲೆಲ್ಲಾ ಅಜ­ರಾ­ಮರ ಅಂದರೆ ಅದ­ರಲ್ಲಿ ಮೈಸೂರು ಸಹೋ­ದ­ರರ ಪಾಲು ಬಹ­ಳ­ಷ್ಟಿದೆ. ವಿದೇ­ಶ­ಗ­ಳಲ್ಲಿ ಈ ಸಹೋ­ದ­ರರು ಕರ್ನಾ­ಟಕ ಶಾಸ್ತ್ರೀಯ ಸಂಗೀ­ತದ ಬಗ್ಗೆ ಕಾರ್ಯ­ಗಾರ ನಡೆ­ಸಿ­ದ್ದಾರೆ. ಪ್ರಬಂಧ ಮಂಡಿ­ಸಿ­ದ್ದಾರೆ. ವಾದ್ಯ­ಗಳ ರಾಜ ಎನಿ­ಸಿ­ಕೊಂ­ಡಿ­ದ­ರುವ ಪಿಟೀ­ಲಿ­ನ­ಲ್ಲಿ­ರುವ ಸಂಗೀತ ಸಾಧ್ಯ­ತೆ­ಗಳ ಬಗ್ಗೆ ಅವರು ಸಂಶೋ­ಧನೆ ನಡೆ­ಸಿ­ದ್ದಾರೆ. ಪಿಟೀಲು ನುಡಿ­ಸುವ ತಂತ್ರ­ಗ­ಳನ್ನು ಸ್ವತಃ ಹುಟ್ಟು­ಹಾ­ಕಿ­ದ್ದಾರೆ. ಈ ದೃಷ್ಟಿ­ಯಿಂದ ಅವರು ಪೀಟೀಲು ತಾಂತ್ರಿ­ಕರು!
ರೋಚಕ ಸಂಗೀ­ತಾ­ಭ್ಯಾಸ: ಮೈಸೂರು ಸಹೋ­ದ­ರರು ಸಂಗೀ­ತ­ಗಾರ ಮನೆ­ತ­ನದ ಕುಡಿ­ಗಳು. ವಿದ್ವಾಂಸ ಮಹ­ದೇ­ವಪ್ಪ ಇವರ ತಂದೆ. ಅವರ ಬಾಲ್ಯ­ದ­ಲ್ಲಿನ ಸಂಗೀ­ತಾ­ಭ್ಯಾ­ಸದ ದಿನ­ಗಳು ಬಹಳ ರೋಚ­ಕ­ವಾ­ಗಿವೆ. ಪೀಟಿಲು ಕಲಿ­ಯ­ಬೇ­ಕೆಂಬ ಅಪ್ಪನ ಅಗಾಧ ಆಸೆ­ಯನ್ನು ಈಡೀ­ರಿ­ಸಿ­ಕೊ­ಳ್ಳಲು ಮಹ­ದೇ­ವಪ್ಪ ಬಹಳ ಕಷ್ಟ­ಪ­ಟ್ಟಿ­ದ್ದಾರೆ. ದಿನಕ್ಕೆ ನಾಲ್ಕೈದು ಗಂಟೆ ಅಭ್ಯಾಸ ಆಗ­ಲೇ­ಬೇಕು. ಇಲ್ಲ­ವಾ­ದರೆ ಮಕ್ಕ­ಳಿಗೆ ಊಟ ಇಲ್ಲ. ನಮ್ಮಪ್ಪ ನಮಗೆ ಶತ್ರು! ಎಂದು ಬೈದು­ಕೊ­ಳ್ಳು­ವಷ್ಟು ಒತ್ತಡ ಅವರ ಮೇಲೆ ಮೇಲಿತ್ತು.
ಅವರು ಓದಿ­ದ್ದೆಲ್ಲಾ ಸರ್ಕಾರಿ ಶಾಲೆ. ಖಾಸಗೀ ಶಾಲೆಗೆ ಮಕ್ಕ­ಳನ್ನು ಕಳಿ­ಸಿ­ದರೆ ಬರೀ ಹೋಂ ವರ್ಕ್‌­ನಲ್ಲೇ ದಿನ ಕಳೆ­ಯು­ತ್ತದೆ ಎಂದು ಅರಿ­ತಿದ್ದ ಮಹ­ದೇ­ವ­ಪ್ಪ­ನ­ವರ ಮುಂದಾ­ಲೋ­ಚ­ನೆ­ಯ­ಲ್ಲಿ­ರುವ ಲಾಜಿಕ್‌ ನೋಡಿ! ಸರ್ಕಾರಿ ಶಾಲೆ­ಯಲ್ಲೂ ತಮ್ಮ ಮಕ್ಕ­ಳಿಗೆ ಹೋಂ ವರ್ಕ್‌ ಕೊಡುವ ಹಾಗಿಲ್ಲ. ಕೊಟ್ಟರೆ ಶಾಲೆಗೆ ಹೋಗಿ `ಹೋಂ ವರ್ಕ್‌ ಕೊಡ­ಕೂ­ಡದು, ಮನೆ­ಯಲ್ಲಿ ಮಾಡಲು ಅವ­ರಿಗೆ ಬಹಳ ಕೆಲ­ಸ­ವಿದೆ' ಎಂದು ಗಲಾಟೆ ಮಾಡು­ತ್ತಿ­ದ್ದ­ರಂತೆ! ಈ ವಿಷ­ಯ­ಗ­ಳನ್ನು ನಾಗಾ­ರಾಜ ಮಂಜು­ನಾ­ಥರು ತಮ್ಮ ವಿದ್ಯಾ­ರ್ಥಿ­ಗಳ ಮುಂದೆ ಅಗಾಗ ಹಂಚಿ­ಕೊ­ಳ್ಳು­ತ್ತಾರೆ. ಪಿಟೀಲು ವಿದ್ಯಾ­ರ್ಥಿ­ಗ­ಳಿಗೆ ನಾಗ­ರಾಜ ಮಂಜು­ನಾ­ಥರ ರೋಚಕ ಅಭ್ಯಾಸ ಅಧ್ಯಾಯ ಸ್ಪೂರ್ತಿಯ ವಿಷಯ. ಪಿಟೀಲು ಕಲಿ­ಯು­ವ­ವನು ಇತರ ಸುಖ­ಗ­ಳನ್ನು ಬಿಡ­ಲೇ­ಬೇಕು. ಸಹ­ಜ­ವಾಗಿ ಅದೊಂದು ತ್ಯಾಗ!
ಇಂದು ಮಹ­ದೇ­ವಪ್ಪ ಅವರ ಕನಸು ನನ­ಸಾ­ಗಿದೆ. ಮಕ್ಕಳು ಮಾತ್ರ­ವಲ್ಲ ಮೊಮ್ಮಗ ಮಾ! ಕಾರ್ತಿಕ್‌ ಕೂಡ ಪಿಟೀ­ಲನ್ನು ಗಟ್ಟಿ ಮಾಡಿ­ಕೊಂ­ಡಿ­ದ್ದಾನೆ. ಕಾರ್ತಿಕ್‌ ನಾಗ­ರಜ್‌ ಅವರ ಮಗ. ಅಪ್ಪ ಚಿಕ್ಕ­ಪ್ಪಂ­ದಿರ ಜುಗ­ಲ್‌­ಬಂ­ದಿ­ಗ­ಳಲ್ಲಿ ಕಾರ್ತಿಕ್‌ ಆಗಾಗ ಕಾಣಿ­ಸಿ­ಕೊ­ಳ್ಳು­ತ್ತಾನೆ.
ಅಕಾ­ಡೆ­ಮಿಕ್‌ ವಿಷ­ಯ­ಗ­ಳಲ್ಲೂ ಈ ಸಹೋ­ದ­ರರು ಹಿಂದೆ ಬೀಳ­ಲಿಲ್ಲ. ನಾಗ­ರಾಜ್‌ ಆಕಾ­ಶ­ವಾ­ಣಿ­ಯಲ್ಲಿ ಎ ದರ್ಜೆ ಕಲಾ­ವಿ­ದರು. ಡಾ. ಮಂಜು­ನಾಥ್‌ ಮೈಸೂರು ವಿವಿಯ ಸಂಗೀತ ಎಂ.ಎ. ನಲ್ಲಿ ಪ್ರಥಮ ರ್ಯಾಂಕ್‌ ಹಾಗೂ ನಾಲ್ಕು ಚಿನ್ನದ ಪದಕ ಗಳಿ­ಸಿ­ದ್ದಾರೆ. ಪೀಟಿ­ಲಿ­ನಲ್ಲಿ ಸಂಶೋ­ಧನೆ ನಡೆಸಿ ಡಾಕ್ಟ­ರೇಟ್‌ ಪಡೆ­ದಿ­ದ್ದಾರೆ. ಲಲಿ­ತ­ಕಲಾ ಕಾಲೇ­ಜಿ­ನಲ್ಲಿ ಪ್ರಾದ್ಯಾ­ಪ­ಕ­ರಾಗಿ ಕಾರ್ಯ ನಿರ್ವ­ಹಿ­ಸು­ತ್ತಿ­ದ್ದಾರೆ.
ಭಾರ­ತೀಯ ಸಂಗೀತ, ಸಮ­ಕಾ­ಲೀನ ಸಂಗೀ­ತ­ಗ­ಳಲ್ಲೂ ನಾಗ­ರಾಜ ಮಂಜು­ನಾ­ಥರು ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಅಸಂ­ಖ್ಯಾತ ಜಗ­ತ್ಪ್ರ­ಸಿ­ದ್ಧ­ರಿಗೆ ಜೊತೆ­ಯಾ­ಗಿ­ದ್ದಾರೆ. ನೂರಾರು ಕೆಸೆಟ್‌, ಸಿಡಿ­ಗ­ಳನ್ನು ಹೊರ­ತಂದು ಕೇಳು­ಗ­ರನ್ನು ತಣಿ­ಸಿ­ದ್ದಾರೆ. ಒಂಭ­ತ್ತನೇ ವಯ­ಸ್ಸಿ­ನಲ್ಲಿ ಆರಂ­ಭ­ವಾದ ಇವರ ತಂತಿಯ ಮೇಲಿನ ನಡಿಗೆ ನಿರಂ­ತ­ರ­ವಾಗಿ

ಅಚ್ಯು­ತ­ರಾವ್‌

ಅಚ್ಯು­ತ­ರಾವ್‌ ನಾಡಿಯಲ್ಲಿ ಗಾಂಧಿ ಮಿಡಿತ




1935ರಲ್ಲಿ ಮಹಾತ್ಮ ಗಾಂಧಿ ಮೈಸೂ­ರಿಗೆ ಭೇಟಿ ನೀಡಿ­ದ್ದಾಗ ಬಿ.ಎಸ್‌. ಅಚ್ಯುತ ರಾವ್‌ ಆರೇಳು ವರ್ಷದ ಹುಡುಗ. ಅವರ ತಾಯಿ ತನ್ನ ಮುದ್ದು ಮಗ­ನಿಗೆ ಬಿಳಿಯ ಜುಬ್ಬಾ ಪೈಜಾಮ್‌ ಹಾಕಿಸಿ ಬಾಪು ಕಾರ್ಯ­ಕ್ರ­ಮಕ್ಕೆ ಕರೆ­ದು­ಕೊಂಡು ಹೋಗಿ­ದ್ದರು. ಬಾಪು­ವಿನ ಆಶೀ­ರ್ವಾ­ದ­ಕ್ಕಾಗಿ ಜನ­ಸಾ­ಗ­ರ­ದೊ­ಳಗೆ ನುಸುಳಿ ಮಹಾ­ತ್ಮನ ಕಾರಿನ ಕಿಟ­ಕಿ­ಯೊ­ಳಗೆ ಮಗನ ತಲೆ­ಯನ್ನು ತೂರಿ­ದರು. ಬಾಪು ನಗುತ್ತಾ ಬಾಲ­ಕನ ತಲೆ ನೇವ­ರಿ­ಸಿ­ದರು....!
ಸದ್ಯ ಅಚ್ಯುತ ರಾವ್‌ ಅವ­ರಿಗೆ 80 ವರ್ಷ ವಯಸ್ಸು. ಏಳು ದಶ­ಕ­ಗಳ ಹಿಂದಿನ ಈ ಘಳಿ­ಗೆ­ಯನ್ನು ತಮ್ಮ ಸ್ಮೃತಿಗೆ ತಂದು­ಕೊಂ­ಡಾಗ ಅಚ್ಯು­ತ­ರಾವ್‌ ಮತ್ತೆ ಮಗು­ವಾ­ಗಿ­ಬಿ­ಡು­ತ್ತಾರೆ. ಮೈಯಲ್ಲಿ ವಿದ್ಯುತ್‌ ಸಂಚ­ಲ­ನ­ವಾ­ಗು­ತ್ತದೆ. ರೋಮಾಂ­ಚ­ನ­ಗೊ­ಳ್ಳು­ತ್ತಾರೆ. ಅದು ಸ್ವರ್ಗೀಯ ಕ್ಷಣ. ಆ ಕ್ಷಣ­ದಿಂದ ನನ್ನ ಬದುಕು ಬದ­ಲಾ­ಯಿತು ಎಂದು ಪುಳ­ಕ­ಗೊ­ಳ್ಳು­ತ್ತಾರೆ! ಗಾಂಧಿಜೀ ಸ್ಪರ್ಶದ ಆ ಕ್ಷಣ­ದಿಂದ ಅಚ್ಯುತ ರಾವ್‌ ಅವರ ನರ ನಾಡಿ­ಗ­ಳಲ್ಲಿ ಗಾಂಧಿ, ಗಾಂಧೀ­ಯತೆ ಉಳಿ­ದು­ಕೊಂಡು ಬಂದಿದೆ.
ನಮ್ಮ ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾ­ಟ­ಗಾ­ರ­ರಲ್ಲಿ ಬಿ.ಎಸ್‌. ಅಚ್ಯು­ತ­ರಾವ್‌ ಕೂಡ ಒಬ್ಬರು. ಸ್ವಾತಂತ್ರ ಭಾರ­ತ­ಕ್ಕಾಗಿ ಜೈಲು­ವಾಸ ಅನು­ಭ­ವಿ­ಸಿ­ರುವ ಅವರು ನಮ್ಮ ಸಮಾ­ಜದ ಹೆಮ್ಮೆಯ ಸಂಪತ್ತು. ಎಂಭತ್ತು ತುಂಬಿ­ರುವ ಅವರು ಇವತ್ತೂ ಪಾದ­ರಸ. ಸರ್ಕಾರಿ ನೌಕ­ರಿ­ಯಿಂದ ನಿವೃ­ತ್ತ­ರಾದ ಮೇಲೆ ಉಪ­ನ್ಯಾಸ ವೃತ್ತಿ ಸ್ವೀಕ­ರಿ­ಸಿದ ಅವರು ವಿದ್ಯಾರ್ಥಿ ಕೋಟಿ­ಯನ್ನೇ ಹೊಂದಿ­ದ್ದಾರೆ. ನಾಡು ನುಡಿಯ ಬಗ್ಗೆ ಅವರು ಹೊಂದಿ­ರುವ ಪ್ರೀತಿ ಸದಾ ಸ್ಮರ­ಣೀಯ. ಐತಿ­ಹಾ­ಸಿಕ ಶಾರ­ದಾ­ವಿ­ಲಾಸ ವಿದ್ಯಾ­ಸಂ­ಸ್ಥೆಯ ಜೊತೆ ಭಾವ­ನಾ­ತ್ಮಕ ಸಂಬಂಧ ಹೊಂದಿ­ರುವ ಅವರು ಆ ಸಂಸ್ಥೆಯ ಹೆಮ್ಮೆ­ಯಾ­ಗಿ­ದ್ದಾರೆ.
1947, ಆಗಸ್ಟ್‌ 15ರಂದು ಭಾರ­ತಕ್ಕೆ ಸ್ವಾತಂತ್ರ್ಯ ದೊರೆ­ತಾಗ ಮೈಸೂರು ರಾಜ್ಯ­ವನ್ನು ಸ್ವಾತಂತ್ರ್ಯ ಭಾರ­ತಕ್ಕೆ ಒಪ್ಪಿ­ಸಲು ಜಯ­ಚಾ­ಮ­ರಾ­ಜೇಂದ್ರ ಒಡೆ­ಯರು ನಿರಾ­ಕ­ರಿ­ಸಿ­ದರು. ಒಡೆ­ಯರ ನಿರ್ಧಾ­ರದ ವಿರುದ್ಧ ಹೋರಾಟ ಆರಂ­ಭ­ವಾ­ಯಿತು. ಮೈಸೂರು ಚಲೋ ಚಳ­ವಳಿ ನಡೆ­ಯಿತು. ಪ್ರತಿ­ಭ­ಟ­ನಾ­ಕಾ­ರರ ಮೇಲೆ ಲಾಠಿ ಪ್ರಹಾ­ರ­ವಾ­ಯಿತು. ಆ ಘಟ­ನೆ­ಯಲ್ಲಿ ಒಬ್ಬ ಶಾಲಾ ಬಾಲಕ ಬಲಿ­ಯಾದ. ಆತನ ಹೆಸರು ರಾಮ­ಸ್ವಾಮಿ. ಆತ ಜೀವ ತೆತ್ತ ಜಾಗ­ವನ್ನು ಇಂದಿಗೂ ರಾಮ­ಸ್ವಾಮಿ ವೃತ್ತ ಎಂದೇ ಕರೆ­ಯ­ಲಾ­ಗು­ತ್ತದೆ.
ಈ ಹೋರಾ­ಟ­ದಲ್ಲಿ ಅಚ್ಯತ ರಾವ್‌ ಕೂಡ ಭಾಗ­ವ­ಹಿ­ಸಿ­ದ್ದರು. ಜೊತೆಗೆ ಅವರ ಸಹೋ­ದ­ರಿ­ಯ­ರಾದ ಮಾಲತಿ, ಸುಮಿತ್ರ ಹಾಗೂ ಇನ್ನಿ­ಬ್ಬರು ಸೋದರ ಸಂಬಂ­ಧಿ­ಕರೂ ಕೂಡ ಪಾಲ್ಗೊಂ­ಡಿ­ದ್ದರು. ದೇಶ­ಪ್ರೇಮ ಇಡೀ ಕುಟುಂ­ಬ­ದ­ಲ್ಲಿತ್ತು.
ಮೈಸೂರು ಚಳ­ವಳಿ ಹೋರಾ­ಟ­ದಲ್ಲಿ ಬಂಧ­ನ­ಕ್ಕೊ­ಳ­ಗಾದ 1200 ಮಂದಿ ಹೋರಾ­ಟ­ಗಾ­ರ­ರಲ್ಲಿ ಅಚ್ಯು­ತ­ರಾವ್‌ ಅವರೂ ಇದ್ದರು. ಏಳು ದಿನ ಕಾರಾ­ಗೃಹ ವಾಸ ಅನು­ಭ­ವಿ­ಸಿ­ದರು. ವಿದ್ಯಾರ್ಥಿ ದೆಸೆ­ಯಲ್ಲೇ ಉತ್ಸಾ­ಹದ ಚಿಲು­ಮೆ­ಯಾ­ಗಿದ್ದ ಅವರು ನಾಡಿ­ಗಾಗಿ ಅರ್ಪ­ಣೆಯ ಮನೋ­ಭಾವ ರಕ್ತ­ದಲೇ ಇತ್ತು. ಈ ಘಟ­ನೆ­ಯಿಂದ ದಿಗ್ಭ್ರ­ಮೆ­ಗೊಂಡ ಒಡೆ­ಯರು ಭಾರ­ತಕ್ಕೆ ಸಾಮ್ರಾಜ್ಯ ನೀಡಲು ನೀಡಲು ಒಪ್ಪಿ­ದರು. ಕೆ.ಸಿ. ರೆಡ್ಡಿ ಮುಖ್ಯ­ಮಂ­ತ್ರಿ­ಯಾ­ದರು. ಅದೆಲ್ಲಾ ಇತಿ­ಹಾಸ.
ಅಚ್ಯು­ತ­ರಾವ್‌ ರೆಲ್ವೆ ಇಲಾ­ಖೆ­ಯಲ್ಲಿ ನೌಕರಿ ಮಾಡು­ತ್ತಿ­ದ್ದ­ವರು. ಅವರು ಕೆಲಸ ಮಾಡಿದ ಜಾಗ­ದ­ಲ್ಲೆಲ್ಲಾ ತಮ್ಮ ಪ್ರತಿ­ಭೆಯ ಪರಿ­ಮಳ ಬೀರಿ­ದ್ದಾರೆ. 1952ರಲ್ಲಿ ಹುಬ್ಬ­ಳ್ಳಿ­ಯಲ್ಲಿ ಇಲಾ­ಖೆಗೆ ಸೇರಿದ ಅವರು 1953ರಲ್ಲಿ ಮದ್ರಾ­ಸ್‌ಗೆ ವರ್ಗಾ­ವ­ಣೆ­ಗೊಂ­ಡರು. ಕನ್ನಡ ಭಾಷೆಯ ಮೇಲೆ ಅತೀವ ಪ್ರೀತಿ ಹೊಂದಿ­ರುವ ಅಚ್ಯು­ತ­ರಾವ್‌ ಮದ್ರಾ­ಸ್‌­ನಲ್ಲಿ ಕನ್ನಡ ಸಂಘ ಕಟ್ಟಿ­ದರು. ಸಂಘ ಇವ­ರಿದ್ದ ಕೊಠ­ಡಿ­ಯಿಂ­ದಲೇ ಆರಂ­ಭ­ವಾ­ಯಿತು.
ನಂತರ ಆಂದ್ರ­ಪ್ರ­ದೇ­ಶದ ಗುತ್ತಿ ಎಂಬ­ಲ್ಲಿಗೆ ವರ್ಗಾ­ವ­ಣೆ­ಗೊಂ­ಡರು. ಈ ನಡುವೆ ಬೆಂಗ­ಳೂ­ರಿನ ಯಲ­ಹಂಕ ಘಟ­ಕ­ದಲ್ಲೂ ಸೇವೆ ಸಲ್ಲಿ­ಸಿ­ದರು. ಮತ್ತೆ ಮದ್ರಾಸ್‌ ವರ್ಗಾ­ವ­ಣೆ­ಗೊಂ­ಡರು. ಅಷ್ಟೊ­ತ್ತಿ­ಗಾ­ಗಲೇ ತಾವು ಕಟ್ಟಿ ಬೆಳೆ­ಸಿದ್ದ ಕನ್ನಡ ಸಂಘ ೃಹ­ದಾ­ಕಾ­ರ­ವಾಗಿ ಬೆಳೆ­ದಿತ್ತು. ಕನ್ನಡ ಸಂಘ­ದಿಂದ ಕೇಂದ್ರಿಯ ಶಾಲೆ ಆರಂ­ಭ­ಗೊಂ­ಡಿತ್ತು. ಕನ್ನಡ ಸಂಘ ಕಟ್ಟು­ವಲ್ಲಿ ಪ್ರಮುಖ ಪಾತ್ರ ವಹಿ­ಸಿದ ಅಚ್ಯುತ ರಾವ್‌ ಸಂಸ್ಥಾ­ಪಕ ಸದ­ಸ್ಯ­ರಾಗಿ ಅಪಾರ ಮನ್ನಣೆ ಗಳಿ­ಸಿ­ದರು.
ರೈಲ್ವೆ ಇಲಾ­ಖೆ­ಯಿಂದ ನಿವೃ­ತ್ತ­ರಾದ ಮೇಲೆ ಅವರ ವೃತ್ತಿ ಬದುಕು ಮುಗಿ­ಯ­ಲಿಲ್ಲ. ಬಹುಶಃ ಆಗಲೇ ಆರಂ­ಭ­ವಾ­ಯಿತು ಎನ್ನ­ಬ­ಹುದು. ಮೈಸೂ­ರಿಗೆ ಹಿಂದು­ರಿಗಿ ಬಂದ ಮೇಲೆ ಆ ಇಳಿ ವಯ­ಸ್ಸಿ­ನಲ್ಲಿ ಇಂಗ್ಲಿಷ್‌ ಮತ್ತು ಸಮಾಜ ಶಾಸ್ತ್ರ­ಗ­ಳಲ್ಲಿ ಸ್ನಾತ­ಕೋ­ತ್ತರ ಪದವಿ ಪಡೆ­ದರು. ಶಾರದ ವಿಲಾಸ ವಿದ್ಯಾ­ಸಂಸ್ಥೆ ಕೈ ಬೀಸಿ ಕರೆ­ಯಿತು. ವಿಜ್ಞಾನ ಕಾಲೇ­ಜಿ­ನಲ್ಲಿ ಇಂಗ್ಲಿಷ್‌ ಉಪ­ನ್ಯಾ­ಸ­ಕ­ರಾಗಿ ನೇಮ­ಕ­ಗೊಂ­ಡರು. ಬಿಇಡಿ ಕಾಲೇ­ಜಿ­ನಲ್ಲೂ ಕೆಲಸ ಮಾಡಿ­ದರು. ಸದ್ಯಕ್ಕೆ ಕಾನೂನು ಕಾಲೇ­ಜಿ­ನಲ್ಲಿ ಪ್ರಾಧ್ಯಾ­ಪ­ಕ­ರಾಗಿ ಕೆಲಸ ನಿರ್ವ­ಹಿ­ಸು­ತ್ತಿ­ದ್ದಾರೆ.
ಅಚ್ಯು­ತ­ರಾವ್‌ ದಣಿ­ವಾ­ಗದ ಪ್ರಾದ್ಯಾ­ಪಕ. ಸದಾ ವಿದ್ಯಾ­ರ್ಥಿ­ಗಳ ಜೊತೆ ಒಂದಲ್ಲಾ ಒಂದು ಕಾರ್ಯ­ಚ­ಟು­ವ­ಟಿ­ಕೆ­ಗ­ಳಲ್ಲಿ ತೊಡ­ಗಿ­ಕೊಂಡು ವಿದಾ­ರ್ಥಿಯೇ ಆಗಿ­ಬಿ­ಡು­ತ್ತಾರೆ. ಶಾರದಾ ವಿಲಾಸ ವಿದ್ಯಾ­ಸಂ­ಸ್ಥೆರ ಎಲ್ಲಾ ಕಾರ್ಯ­ಕ್ರ­ಮ­ಗ­ಳಲ್ಲಿ ಅಚ್ಯು­ತ­ರಾವ್‌ ಭಾಗ­ವ­ಹಿ­ಸು­ತ್ತಾರೆ. ಸ್ವತಂತ್ರ ಸಂಗ್ರಾ­ಮದ ಹಲವು ಘಟ­ನೆ­ಗಳ ಕಿರು­ನಾ­ಟ­ಕ­ಗ­ಳನ್ನು ರಚಿಸಿ ವಿದ್ಯಾ­ರ್ಥಿ­ಗ­ಳಿಗೆ ನಿರ್ದೇ­ಶಿ­ಸಿ­ದ್ದಾರೆ.
ಅಚ್ಯು­ತ­ರಾವ್‌ ಅವರು ಬರ­ವ­ಣಿ­ಗೆ­ಯಲ್ಲೂ ತಮ್ಮ ಪ್ರತಿಭೆ ತೋರಿ­ಸಿ­ದ್ದಾರೆ. ಕವನ, ಕಿರು­ನಾ­ಟಕ, ಭಾವ­ಗೀ­ತೆ­ಗ­ಳನ್ನು ರಚಿ­ಸಿ­ದ್ದಾರೆ. ಅವರು ಹಲವು ಗೌರವ ಪ್ರಶ­ಸ್ತಿ­ಗ­ಳಿಗೆ ಪಾತ್ರ­ರಾ­ಗಿ­ದ್ದಾರೆ. ಕಾವ್ಯಶ್ರೀ ಪ್ರಶಸ್ತಿ ಅವರ ಮುಡಿ­ಗೇ­ರಿದೆ. ಕಳೆದ ಬಾರಿಯ ಸ್ವತಂ­ತ್ರ್ಯೋ­ತ್ಸ­ವ­ದಲ್ಲಿ ಕರ್ನಾ­ಟಕ ಸರ್ಕಾರ ಸನ್ಮಾ­ನಿ­ಸಿದೆ. ಹಲವು ಸಂಘ­ಸಂ­ಸ್ಥೆ­ಗಳು ಅವ­ರನ್ನು ಗೌರ­ವಿ­ಸಿವೆ.
ಅಚ್ಯು­ತ­ರಾವ್‌ ನಿಜಕ್ಕೂ ಅಸ­ಮಾನ್ಯ ಸಾಧ­ಕರು. ಅವರು ನಡೆದು ಬಂದ ಹಾದಿ­ಯಲ್ಲಿ ಅಪಾರ ಮಹ­ತ್ವ­ಪೂರ್ಣ ಮೈಲು­ಗ­ಲ್ಲು­ಗ­ಳಿವೆ. ಅವು ಕಿರಿ­ಯ­ರಿಗೆ ಸ್ಪೂರ್ತಿ­ಯಾ­ಗಿವೆ.. ಙ