Friday, April 8, 2011




ಕನ್ನಯ್ಯಲಾಲ್ ಕನಸು

70ರ ದಶಕ ಭಾರತೀಯ ರಂಗಭೂಮಿಗೆ ಉಚ್ಛ್ರಾಯ ಸ್ಥಿತಿ. ಈ ಕಾಲಘಟ್ಟದ ಅದ್ಭುತ ಇತಿಹಾಸ ಬರೆದವರು ಮಣಿಪುರದ ಪ್ರಬುದ್ಧ ರಂಗಕರ್ಮಿ ಕನ್ನಯ್ಯ ಲಾಲ್. ರಂಗಭೂಮಿಯನ್ನು ಪ್ರತಿಭಟನೆ ಅಸ್ತ್ರ ಮಾಡಿಕೊಂಡು ಅನ್ಯಾಯದ ವಿರುದ್ಧ ತೊಡೆ ತಟ್ಟಿ ನಿಂತವರು ಕನ್ನಯ್ಯಲಾಲ್. ಅವರು ರಂಗಭೂಮಿಯ ಉಡಿಯಲ್ಲಿ ಅಡಗಿರುವ ಅಂತರ್ಶಕ್ತಿಯನ್ನು ಎತ್ತರಕ್ಕೇರಿಸಿದರು. ಅಂದು ಸಂಭವಿಸಿದ ರಂಗ ಸಂಚಲನ ಎಂದೆಂದಿಗೂ ಮರೆಯಾಗದ ಹೊಸ ರಂಗ ಸಂವಿಧಾನವನ್ನೇ ರಚನೆ ಮಾಡಿತು! ಕನ್ನಯ್ಯ ಲಾಲ್ ಅವರ ಕುಟುಂಬ ರಂಗಭೂಯ ಬಲುದೊಡ್ಡ ಆಸ್ತಿ. ಅವರ ಪತ್ನಿ ಸಾವಿತ್ರಿ ಕನ್ನಯ್ಯ ಲಾಲ್ ವಿಶ್ವ ಕಂಡ ಶ್ರೇಷ್ಠ ನಟಿ. ಮಾತಿಲ್ಲದ ಅವರ ಅಭಿನಯ ಶಕ್ತಿಗೆ ಹೆಸರಿಲ್ಲ. ಪ್ರಾಣಿ ಪಕ್ಷಿಗಳ ಧ್ವನಿ ಮೂಲಕ ಭಾವನೆಯನ್ನು ಅಭಿವ್ಯಕ್ತಿಸುವ ಅವರ ಆಂಗಿಕ ಅಭಿನಯಕ್ಕೆ ಜಾನಪದ ಅನ್ನಲಾಯಿತು. ಆದರೆ ಅದು ಜಾನಪವೂ ಅಲ್ಲ. ಜಾನಪದ ಶೈಲಿಗೆ ಆಧುನಿಕ ಸ್ಪರ್ಷ.... ಬುಡಕಟ್ಟು ಸಂಸ್ಕೃತಿಗೆ ಹೊಸತನದ ಲೇಪನ..... ಪ್ರಾಣಿಪಕ್ಷಿಗಳ ಹಕ್ಕುಗಳ ಅನಾವರಣ......ಕಾನನದ ಮೌನದ ನಡುವಿನ ಅರಣ್ಯ ರೋಧನ.... ಒಟ್ಟಿನಲ್ಲಿ ಅದು ಕನ್ನಯ್ಯಲಾಲ್ ಅವರ ಸ್ವಂತ ರಂಗಭೂಮಿ! ಅಸ್ಸಾಂ, ಮಣಿಪರ ಪ್ರಾಂತ್ಯಗಳಲ್ಲಿ ಈಗಲೂ ಪ್ರತ್ಯೇಕತೆಯ ಕೂಗಿದೆ. ಈ ಹೋರಾಟ, ಪರಚಾಟಗಳಲ್ಲಿ ಬೆಂದುಹೋದವರೆಷ್ಟೋ. ಈ ಸೂಕ್ಷ್ಮ ಸನ್ನಿವೇಶಗಳು ಪ್ರಾಣಿ ಪಕ್ಷಿಗಳ ಧ್ವನಿಯಾಗಿ ಕನ್ನಯ್ಯಲಾಲ್ ರಂಗಭೂಮಿಯಲ್ಲಿ ತೆರೆದುಕೊಂಡಾಗ ಅಲ್ಲಿ ಆರಂಭವಾದದ್ದು ಗಂಭೀರ ಅಲೆ. ‘ಫೆಬತೆಥೋ’ ನಾಟಕದ ಒಂದು ಅತ್ಯಂತ ಭಾವುಕ ಸನ್ನಿವೇಶದಲ್ಲಿ ಸಾವಿತ್ರಿ ಕನ್ನಯ್ಯಲಾಲ್ ಅಭಿನಯಿಸುತ್ತಲೇ ಸಂಪೂರ್ಣ ಬೆತ್ತಲಾಗಿಬಿಡುತ್ತಾರೆ.....ಆ ಕ್ಷಣದಲ್ಲಿ ಅಶ್ಲೀಲ, ಅರ್ಥ ಕಳೆದುಕೊಳ್ಳುತ್ತದೆ. ತಾವು ಬೆತ್ತಲಾಗಿ ವ್ಯವಸ್ಥೆಯನ್ನು ಬೆತ್ತಲು ಮಾಡುತ್ತಾರೆ! ಕನ್ನಯ್ಯ ಲಾಲ್ ಮಣಿಪುರಕ್ಕೆ ಮಾತ್ರ ಅಂಟಿಕೊಳ್ಳಲಿಲ್ಲ. ವಿದೇಶ ಸೇರಿದಂತೆ ಭಾರತದ ಎಲ್ಲಾ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ. ಎನ್ಎಸ್ಡಿ ನಾಟಕೋತ್ಸವ, ಭೂಪಾಲ್ ನಾಟಕೋತ್ಸವ, ಗೌಹಾತಿ ಉತ್ಸವ, ಕೊಲ್ಕತ್ತಾ ಉತ್ಸವ, ಮೈಸೂರು ರಂಗಾಯಣದ ಬಹುರೂಪಿ ನಾಟಕೊತ್ಸವ ಮತ್ತಿತರ ಅವರ ನಾಟಕಗಳು ರಂಗಕ್ಕೇರಿವೆ. ಅವರು ಕರ್ನಾಟಕದಲ್ಲೂ ಚಿರಪರಿಚಿತರು. ಅವರು ನಿನಾಸಂಗೆ ನಿರ್ದೇಶಿಸಿದ ಕುರುಸುವಾನ ’ರಶೋಮನ್’ ರಂಗ ಪ್ರಯೋಗ ಒಂದು ಅದ್ಭುತ. ನಟರಾದ ಮಂಡ್ಯರಮೇಶ್, ಹುಲುಗಪ್ಪ ಕಟ್ಟೀಮನಿ, ಮಂಗಳಾ ಮುಂತಾದವರು ಅಭಿನಯಿಸಿದ ಈ ನಾಟಕ ಇನ್ನೂ ಹಚ್ಚಹಸಿರು. ಕನ್ನಯ್ಯ ಲಾಲ್ ಅವರ ಮಗ ಟಾಂಬು ಕೂಡ ಅಪ್ಪಟ ಪ್ರತಿಭಾವಂತ. ಅವನ ತುಟಿಯಂಚಿನಲ್ಲಿ ಕೊಳಲು ನುಡಿಯುತ್ತಿದ್ದರೆ ಮೌನ ಮಾತಾಡುತ್ತದೆ. ತಂದೆಯ ಎಲ್ಲಾ ನಾಟಕಗಳಿಗೆ ಟಾಂಬುವೇ ಸಂಗೀತ ಸಂಯೋಜಕ. ಕನ್ನಯ್ಯ ಲಾಲ್ ಅವರದು ಬಹುದೊಡ್ಡ ರಂಗಸಾಮ್ರಾಜ್ಯವೇ ಇದೆ. ಅದು ಮಣಿಪುರಕ್ಕೆ ಮಾತ್ರ ಸೀಮಿತವಾಗದೇ ವಿಶ್ವದೆಲ್ಲಡೆ ಮಿಡಿದಿದೆ. ಕನ್ನಯ್ಯ ಲಾಲ್ ಅವರ ಸದ್ದಿಲ್ಲದ ರಂಗಾರಾಧನೆಗೆ ‘ಪದ್ಮಶ್ರೀ’ ಮುಕುಟ ಮುಡಿಗೇರಿದೆ.



ಯೋಗಾರಾಧಕ ಮೂರುತಿ

ಭಾನುವಾರ ಬಂತೆಂದರೆ ಬೆಂಗಳೂರಿನ ಎನ್.ಆರ್. ಮೊಹಲ್ಲಾದ ಮಹಿಳಾ ಮಂಡಳಿಯ ಹೊರಗೆ ಜನಜಂಗುಳಿ. ಆದರೆ ಒಳಗೆ ಕಾಲಿಟ್ಟ ಕೂಡಲೆ ಅಲ್ಲೊಂದು ಶಕ್ತಿಯ ಸಂಚಾರ. ಶುದ್ಧ, ಶ್ರದ್ಧಾ ಮತ್ತು ಭಕ್ತಿಯ ಭಾವ. ಶೃತಿಗೆಟ್ಟ ನಗರದ ಅಲ್ಲೋಲ ಕಲ್ಲೋಲ ಅಲ್ಲಿಲ್ಲ. ಅಲ್ಲೇನಿದ್ದರೂ ಆನಂದ, ಆಲಾಪ, ಆಸ್ವಾದ, ಆರಾಧನೆ ಮತ್ತು ಆತ್ಮ ವಿಶ್ವಾಸ. ಅಲ್ಲಿ ಪ್ರತಿ ಭಾನುವಾರ ಯಾವ ಗದ್ದಲವೂ ಇಲ್ಲದೆ ನಡೆಯುತ್ತದೆ ಯೋಗಾರಾಧನೆ! ಈ ಯೋಗಾರಾಧನೆಯ ಹಿಂದೆ ಒಬ್ಬ ಯೋಗಗುರು ಇದ್ದಾರೆ. ಅವರ ಹೆಸರು ನರಸಿಂಹ ಮೂರ್ತಿ. 75 ವರ್ಷ ವಯಸ್ಸಿನ ಈ ಸ್ಪೂರ್ತಿಯ ಚಿಲುಮೆಗೆ ಎಲ್ಲವೂ ಯೋಗವೆ. ನಿತ್ಯದ ಅವರ ಜೀವನ ಕ್ರಮದಲ್ಲಿ ಯೋಗ ಬೆರತು ಹೋಗಿದೆ. ಅವರಿಂದ ವಿದ್ಯೆ ಕಲಿತವರಿಗೆ, ಕಲಿಯುತ್ತಿರುವವರಿಗೆ ಲೆಕ್ಕವಿಲ್ಲ. ಯೋಗವಿದ್ಯೆಯ ಬಗ್ಗೆ ಎಲ್ಲಾ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿದೆ.ಅವರ ಯೋಗ ವಿದ್ಯೆ ಕೇವಲ ಆಸನವಲ್ಲ. ಎಲ್ಲಾ ಆಸನಗಳ ಹಿಂದಿರುವ ವೈಜ್ಞಾನಿಕ ವಿವೇಚನೆಯ ಅರ್ಥ ವಿವರಣೆ ಅವರ ಬಳಿಯಿದೆ. ನರಸಿಂಹ ಮೂರ್ತಿಗಳು ಕೇಂದ್ರ ಸರ್ಕಾರಿ ಹುದ್ದೆಯಲ್ಲಿದ್ದವರು. ಏಜಿಟ್ ಆಫೀಸ್ನಲ್ಲಿ ಉನ್ನತ ಹುದ್ದೆ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಕೆಲಸದ ಮೇಲಿದ್ದಾಗ ಯೋಗ ಇದ್ದೇ ಇತ್ತು. ನಿವೃತ್ತಿಯಾದ ಮೇಲಂತೂ ಅವರೊಬ್ಬ ಯೋಗಿಯೇ ಆಗಿಬಿಟ್ಟಿದ್ದಾರೆ. ಅವರು ಹಿಮಾಲಯದ ಅಮರೀಶ ವರ್ಷ ಅವರ ಶಿಷ್ಯರು. ಹಲವು ವರ್ಷಗಳ ಕಾಲ ಅವರ ಬಳಿ ಯೋಗಾಭ್ಯಾಸ ಮಾಡಿದ್ದಾರೆ. ನರಸಿಂಹ ಮೂರ್ತಿಗಳು ಧ್ಯಾನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಯೋಗವಿದ್ಯೆಯಲ್ಲಿ ಧ್ಯಾನ ಬಹಳ ಕಷ್ಟ ಹಾಗೂ ಧ್ಯಾನಕ್ಕಿರುವ ಶಕ್ತಿ ಅಪಾರ. ಧ್ಯಾನದ ವಿವಿಧ ಸಾಧ್ಯತೆಗಳ ಬಗ್ಗೆ ಅವರು ಅಪಾರ ಜ್ಞಾನ ಹೊಂದಿದ್ದಾರೆ. ಪ್ರಾಣಾಯಾಮದ ಶಕ್ತಿಯ ಅರಿವನ್ನು ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ. ಅವರು ಹೇಳಿಕೊಡುವ ಯೋಗ ಬಹಳ ಸರಳ ಮತ್ತು ಶಕ್ತಿಯುತ. ವರ್ಷದಲ್ಲಿ ಎರಡು ತಂಡಗಳಲ್ಲಿ ಅವರು ಯೋಗ ಹೇಳಿಕೊಡುತ್ತಾರೆ. ಜನವರಿ ಮೂರನೇ ಭಾನುವಾರ ಹಾಗೂ ಜುಲೈ ಮೂರನೇ ಭಾನುವಾರ ಅವರ ಯೋಗ ತರಗತಿಗಳು ಆರಂಭವಾಗುತ್ತವೆ. ಮಧ್ಯೆ ಬಂದರೆ ಪ್ರವೇಶವಿಲ್ಲ. ಯಾರೇ ಅವರ ಬಳಿ ಯೋಗ ಕಲಿಯ ಬಂದರೂ ಇಲ್ಲಾ ಎಂದು ಹೇಳುವುದಿಲ್ಲ. ವಿದ್ಯಾರ್ಥಿಗಳಿಂದ ಅವರು ಆಪೇಕ್ಷಿಸುವುದು ಶಿಸ್ತು ಮಾತ್ರ. ಯಾವ ಫೀಜು ಗೀಜು ಏನೂ ಇಲ್ಲ. ಅವರ ಯೋಗ ಸಂಪೂರ್ಣ ಉಚಿ

ಡಾಕ್ಟರ್ ತಥಾಗತ

ಬಿಹಾರದ ತಥಾಗತ ಅವತಾರ್ ತುಳಸಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ಪ್ರೌಢಶಾಲೆ ಮುಗಿಸುತ್ತಾನೆ. ಹತ್ತನೇ ವಯಸ್ಸಿನಲ್ಲಿ ವಿಜ್ಞಾನ ವಿಷಯದಲಿ ಪದವಿ ಗಳಿಸುತ್ತಾನೆ. 12ನೇ ವಯಸ್ಸಿನಲ್ಲಿ ಪಾಟ್ನ ವಿವಿಯಲ್ಲಿ ಭೌತಶಾಸ್ತ್ರದ ಮೇಲೆ ಸ್ನಾತಕೋತ್ತರ ಪದವಿ ಪಡೆಯುತ್ತಾನೆ. ಅವನು ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀದರ. ಆತ ಪಿಜಿ ಮುಗಿಸಿದ ಮೇಲೆ ಬೆಂಗಳೂರಿನ ಐಐಎಸ್ಸಿಯ ಬಾಗಿಲು ತೆರೆಯುತ್ತದೆ. ಅಲ್ಲಿಂದ ಪಿಎಚ್ಡಿ ಪದವಿ ಗಳಿಸುತ್ತಾನೆ. ತನ್ನ 21ನೇ ವಯಸ್ಸಿಗೆ ಡಾಕ್ಟರ್ ತಥಾಗತ ಅವತಾರ್ ತುಳಸಿಯಾಗುತ್ತಾನೆ. ಆಮೇಲೆ ವಿಶ್ವ ವಿಖ್ಯಾತನಾಗುತ್ತಾನೆ! ಅವನು ಪಿಎಚ್ಡಿ ಆರಂಭಿಸಿದಾಗಲೇ, ಜಗತ್ತಿನ ಕಿರಿಯ ಸಂಶೋಧಕ ಎಂಬ ಬಿರುದು ಮುಡಿಗೇರುತ್ತದೆ. ಪಿಎಚ್ಡಿ ಮುಗಿದ ನಂತರ ವಿಶ್ವದ ಕಿರಿಯ ವಿಜ್ಞಾನಿಗಳಲ್ಲಿ ತಥಾಗತ ಒಬ್ಬನಾಗುತ್ತಾನೆ. ಈಗ ಅವನಿಗೆ 23 ವರ್ಷ. ಈಗಲೂ ಅವನ ಜಗದ್ವಿಖ್ಯಾತಿ ಮುಂದುವರೆದಿದೆ. ಸದ್ಯಕ್ಕೆ ಅವನು ಮುಂಬೈನ ಐಐಟಿಯಲ್ಲಿ ಸಹ ಪ್ರಾಧ್ಯಾಪಕನಾಗಿದ್ದು, ವಿಶ್ವದ ಕಿರಿಯ ಸಹ ಪ್ರಾಧ್ಯಾಪಕರಲ್ಲಿ ಅವನೂ ಒಬ್ಬನಾಗಿದ್ದಾನೆ!

ಸಕ್ಕರೆ ಖಾಯಿಲೆ ಜತೆ ಇನ್ನೂರೈವತ್ತು ವಿಕೆಟ್!


ಸಕ್ಕರೆ ಖಾಯಿಲೆ ಜತೆ ಇನ್ನೂರೈವತ್ತು ವಿಕೆಟ್!


ಆ ತಾಯಿ ತನ್ನ ಮಗುವಿಗೆ ಚಂದಮಾಮನ ಹಾಡು ಹೇಳುತ್ತಾ ಅನ್ನದ ಅಗುಳನ್ನು ಬಾಯಿಗಿಡಲಿಲ್ಲ. ಹುಟ್ಟು ಹಬ್ಬದ ದಿನ ಮಕ್ಕಳನ್ನು ಕರೆದು ಕೇಕ್ ಕತ್ತರಿಸಿ ಬಾಯಿ ಸಿಹಿ ಮಾಡಲಿಲ್ಲ. ಆಕೆ ಮಾಡಿದ್ದೇ ಬೇರೆ. ಗೋಡೆಯ ಛಾಯಾಚಿತ್ರದಲ್ಲಿದ್ದ ಆ ನಗುಮುಖ ತೋರಿಸಿ ಮಗುವಿನ ದೇಹಕ್ಕೆ ಸೂಜಿ ಚುಚ್ಚುತ್ತಿದ್ದಳು. ಮೌನ ಚಿತ್ರದಲ್ಲಿರುವ ಆ ವ್ಯಕ್ತಿಯ ಮುಖ ನೋಡಿದಾಗ ಆ ಮಗುವಿನ ಮನದಲ್ಲಿ ಚೈತನ್ಯ ತುಂಬಿಕೊಳ್ಳುತ್ತಿತ್ತು. ನೋವು ನುಂಗಿ ಮುಖದಲ್ಲಿ ನಗು ಚೆಲ್ಲುತ್ತಿತ್ತು! ಆ ಮನುಷ್ಯನಿಂದ ಇಂಥ ಎಷ್ಟೋ ಮಕ್ಕಳ ಮನಸ್ಸು ಗಟ್ಟಿಯಾಗಿವೆ. ಬದುಕುವ ಕನಸು ಕಂಡಿವೆ. ಸಾಧಿಸುವ ಛಲವನ್ನು ಇಮ್ಮಡಿಗೊಳಿಸಿಕೊಂಡಿವೆ. ನಡುರಾತ್ರಿಯಲ್ಲೂ ಅವನ ನೆನಪು ಮಾಡಿಕೊಂಡಿವೆ. ದೇವರಂತೆ ಆರಾಧಿಸಿವೆ.......ಅವನಿಟ್ಟ ಒಂದೊಂದು ಹೆಜ್ಜೆಯೂ ಎಚ್ಚರದ ಹೆಜ್ಜೆ. ತಾಳ ತಪ್ಪದ ನಡಿಗೆ. ಅಪ್ಪಿತಪ್ಪಿ ಎಚ್ಚರ ತಪ್ಪಿದರೆ ಅಲ್ಲೋಲ ಕಲ್ಲೋಲ......ಇಂಥಾ ಸಮಸ್ಯೆಯ ಸುಳಿಯಲ್ಲಿ ಆತ ಜಗತ್ತಿನ ಮಾದರಿ. ಆತ ವಿಶ್ವ ಅತೀ ಶ್ರೇಷ್ಠ ಕ್ರಿಕೆಟಿಗ ವಾಸಿಮ್ ಅಕ್ರಮ್. ಪಾಕಿಸ್ಥಾನ ತಂಡದ ಮಾಜಿ ನಾಯಕ. 400 ವಿಕೆಟ್ ಪಡೆದುಕೊಂಡ ವಿಶ್ವದ ಮೊತ್ತ ಮೊದಲ ಕ್ರಿಕೆಟಿಗ. ಈಗ ಹೇಳಲು ಹೊರಟಿರುವುದು ಅಕ್ರಮ್ ಬಗ್ಗೆ ಅಲ್ಲ, ಅವನ ಪ್ರಾಣ ಸ್ನೇಹಿತನ ಬಗ್ಗೆ. ಆ ಸ್ನೇಹಿತ ಬೇರಾರೂ ಅಲ್ಲ, ಅದೊಂದು ರೋಗ. ಮಧುಮೇಹ! ವಾಸಿಮ್ ಕ್ರಿಕೆಟ್ ಲೋಕದ ಧ್ರುವತಾರೆಯಾಗಿದ್ದಾಲೇ ಮಧುಮೇಹ ಪತ್ತೆಯಾಯಿತು. ಆಗ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡುತ್ತಿದ್ದರು. ಇನ್ನೂ ಮ್ಯಾಚ್ ಮುಗಿದಿರಲಿಲ್ಲ. ಮ್ಯಾಚ್ ಮಧ್ಯದಲ್ಲಿ ಮಹಾಮಾರಿ ಪತ್ತೆಯಾದಾಗ ಅಕ್ರಮ್ ತೀರಾ ನೊಂದುಕೊಂಡರು. ಮ್ಯಾಟರ್ ಮುಚ್ಚಿಟ್ಟು ಮ್ಯಾಚ್ ಮುಂದುವರಿಸಿದರು. ಆಟ ಮುಗಿದಾಗ ಮನ ಕೊರೆಯುತ್ತಿದ್ದ ಉಳು ಹೊರಬಿತ್ತು. ಧುತ್ತನೆ ಬಂದ ಈ ಸುದ್ದಿಗೆ ಇಡೀ ಜಗತ್ತಿಗೆ ನೊಂದುಕೊಂಡಿತು. ತಾನು ಅನುಭವಿಸುತ್ತಿರವ ಯಾತನೆಯನ್ನು ಅಕ್ರಮ್ ಹೇಳಿಕೊಂಡಾಗ ಪಾಕ್ ಮಂದಿ ಬಿಕ್ಕಿ ಬಿಕ್ಕಿ ಅತ್ತರು. ಅಕ್ರಮ್ ಕ್ರಿಕೆಟ್ ಕೆರಿಯರ್ ಮುಗಿಯಿತು ಎಂದು ದಿಗ್ಗಜರು ತೀರ್ಮಾನಿಸಿಯೇಬಿಟ್ಟರು. ಆದರೆ ಆಗಿದ್ದೇ ಬೇರೆ. ನಿಜವಾದ ಅಕ್ರಮ್ ಆಟ ಆರಂಭವಾಗಿದ್ದೇ ಅಲ್ಲಿ. ಕ್ರಿಕೆಟ್ ಬಹಳ ಒರಟು ಆಟ. ಮಧುಮೇಹ ಸೂಕ್ಷ್ಮ ರೋಗ. ಸಣ್ಣ ಪುಟ್ಟ ಗಾಯಗಳಾದರೂ ಮಧುಮೇಹಿಗಳಿಗೆ ಅಪಾಯ. ವಾಸಿಮ್ ಜಗ್ಗಲಿಲ್ಲ. ಮಧುಮೇಹವನ್ನು ದ್ವೇಷಿಸದೆ ಪ್ರೀತಿಸಿದರು. ರೋಗವನ್ನೇ ಪ್ರಾಣ ಸ್ನೇಹಿತನನ್ನಾಗಿ ಮಾಡಿಕೊಂಡರು. ಮತ್ತೆ ಆಟ ಮುಂದುವರಿಸಿದರು. ಸಕ್ಕರೆ ಖಾಯಿಲೆಯನ್ನು ಜೊತೆಯಲ್ಲಿ ಇಟ್ಟುಕೊಂಡೇ 250 ವಿಕೆಟ್ ಕೆಡವಿದರು! 31ನೇ ವರ್ಷ ವಯಸ್ಸಿನಲ್ಲಿ ಮಧುಮೇಹ ಪತ್ತೆಯಾದ ಮೇಲೆ ಅಕ್ರಮ್ ತಮ್ಮ ಜೀವನ ಶೈಲಿ ಬದಲಾಯಿತು. ಕಾರು ತ್ಯಜಿಸಿ ಕಾಲ್ನಡಿಗೆ. ಅಭ್ಯಾಸ, ಹಾಬಿಗಳೆಲ್ಲಾ ಅದಲು ಬದಲು. ದಿನಕ್ಕೆ ಮೂರು ಬಾರಿ ಇನ್ಸುಲಿನ್ ಹನಿ. ದೇಹದ ತುಂಬೆಲ್ಲಾ ಸೂಜಿಯ ಕರೆ. ತಿಂದ ತಕ್ಷಣವೇ ಸಕ್ಕರೆ ಅಂಶದ ಅಳತೆ....... ಅಕ್ಷರಶಃ ಅಕ್ರಮ್ ಅವರದು ತಕ್ಕಡಿಯ ಮೆಲಿನ ಜೀವನ, ಇಂದಿಗೂ. ಅವರು 2003ರಲ್ಲಿ ಕ್ರಿಕೆಟ್ಗೆ ಭೈ ಹೇಳಿದ ಮೇಲೆ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಮಧುಮೇಹಿಗಳ ಜೀವನ ಶೈಲಿಯ ಅರಿವಿನ ಕ್ರಾಂತಿಯನ್ನೇ ಆರಂಭಿಸಿದರು. ಈ ಕ್ರಾಂತಿ ಪಾಕಿಸ್ಥಾನಕ್ಕಿಂತ ಭಾರತೀಯರ ಮೇಲೆ ಹೆಚ್ಚು ಪ್ರಭಾವ ಬೀರಿತು. ಯಾಕೆಂದರೆ ಭಾರತ ಮಧುಮೇಹಿಗಳ ತವರು. ಇತ್ತೀಚೆಗೆ ಮಕ್ಕಳನ್ನು ಮಧುಮೇಹ ಕಾಡುತ್ತಿದೆ. ಅಕ್ರಮ್ ಕೈಗೊಂಡ ಆರಿವಿನ ಕ್ರಾಂತಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ‘ಮಧುಮೇಹ ರೋಗವಲ್ಲ, ಅದು ಶಿಸ್ತುಬದ್ಧ ಜೀವನ ಮಾರ್ಗ’ ಎಂಬ ವಿಷಯವನ್ನು ಅವರು ವಿಶ್ವದಾದ್ಯಂತ ಸಾರುತ್ತಿದ್ದಾರೆ. ಅಕ್ರಮ್ ಸಾಧನೆ ಮಧುಮೇಹಿಗಳಿಗೆ ದೊಡ್ಡ ಪಾಠ. ಮಕ್ಕಳ ತಂದೆ ತಾಯಂದಿರು ತಮ್ಮ ಮಧುಮೇಹಿ ಮಕ್ಕಳಿಗೆ, ವೈದ್ಯರು ರೋಗಿಗಳಿಗೆ ಅಕ್ರಮ್ ಕತೆ ಹೇಳಿ ಧೈರ್ಯ ತುಂಬುತ್ತಾರೆ. ಅಕ್ರಮ್ ಮನಸ್ಸು ಕ್ರಿಕೆಟ್ಗಾಗಿ ಸದಾ ತುಡಿಯುತ್ತದೆ. ಅವರೀಗ ಕ್ರಿಕೆಟ್ ಕಾಮಿಂಟ್ರೇಟರ್. ವರ್ಲ್ಡ್ ಕಪ್ ನಡೆಯುತ್ತಿದೆ. ಟಿವಿ ಸ್ವಿಚ್ ಆನ್ ಮಾಡಿದರೆ ಅವರ ಶಕ್ತಿಯುತ ಧ್ವನಿ ಹೃದಯ ತಟ್ಟುತ್ತದೆ.


ಶಿವಖೇರ ಕಲಾಕಾರ!


ಮನಸೆಳೆಯುವ ಮಾತುಗಳ ಮೋಡಿಗಾರ, ಸ್ಫೂರ್ತಿ ತುಂಬುವ ಸೂಕ್ತಿಗಳ ಬರಹಗಾರ, ವ್ಯಕ್ತಿತ್ವ ವಿಕಸನಗೊಳಿಸಿ ಶಕ್ತಿ ತುಂಬುವ ಕನಸುಗಾರ. ಅಕ್ಷರಗಳ ನಡುವೆ ಹಾಸ್ಯ ಬೆಸೆಯುವ ಸೊಗಸುಗಾರ. ಕನಸುಗಳಿಗೆ ವರ್ಣ ತುಂಬುವ ಕಲಾಕಾರ...........‘ಶಿವ ಖೇರ’ ಮೂವತ್ತು ವರ್ಷಗಳ ಹಿಂದೆ ಅಮೆರಿಕಾದಲ್ಲಿ ಕಾರು ತೊಳೆಯುತ್ತಿದ್ದರು ಎಂದರೆ ನಂಬಲು ಸ್ವಲ್ಪ ಕಷ್ಟವೇ! ‘ಯು ಕ್ಯಾನ್ ವಿನ್’ ಪುಸ್ತಕವನ್ನು ಕೇಳದವರಿಲ್ಲ. ಇದು ಬರೀ ಪುಸ್ತಕವಲ್ಲ, ಒಂದು ಮಾತಾಗಿಯೂ ಕೂಡ ಕೋಟ್ಯಾಂತರ ಮನಸ್ಸುಗಳ ಮನಸೂರೆಗೊಂಡಿದೆ. ಮನಸ್ಸಿನ ಮೇಲೆ ಪರಿಣಾಮ ಬೀರುವ ಇಂತಹ ಸಾವಿರಾರು ಸೂಕ್ತಿಗಳನ್ನು ಶಿವ ಖೇರ ಬರೆದಿದ್ದಾರೆ. ಫ್ರೀಡಮ್ ಈಸ್ ನಾಟ್ ಫ್ರೀ, ಲಿವಿಂಗ್ ವಿಥ್ ಹಾನರ್ ಇವು ಖೇರ ಅವರ ಪ್ರಖ್ಯಾತ ಪುಸ್ತಕಗಳು. ಇವು ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ದೆಹಲಿ ಮೂಲದ ಶಿವ ಖೇರ ಅಮೆರಿಕಾದಲ್ಲಿ ಕಾರು ತೊಳೆಯುವ ಕೆಲಸಕ್ಕಿದ್ದರು. ಕಾರು ತೊಳೆಯುವ ಹುಡುಗನ ಅಂದ ಚಂದದ ಮಾತು ಕೇಳಿ ಕಾರು ಮಾಲೀಕನೊಬ್ಬ ಇನ್ಸುರೆನ್ಸ್ ಕಂಪನಿಯಲ್ಲಿ ಏಜೆಂಟ್ ಕೆಲಸ ಕೊಡಸಿಬಿಟ್ಟ. ಅಲ್ಲಿಂದ ಆರಂಭವಾಯಿತು ಮಾತಿನಲ್ಲಿ ಮನೆ ಕಟ್ಟುವ ಕಾರ್ಯ. ಕೇವಲ ಒಂದು ವರ್ಷದಲ್ಲಿ ಕೈ ತುಂಬ ಕಮಾಯಿಸಿಕೊಂಡ ಶಿವಖೇರ ಉಪನ್ಯಾಸ ಕೊಡಲು ಆರಂಭಿಸಿದರು. ಮಾತು ಕೇಳಿದವರೆಲ್ಲಾ ಅಭಿಮಾನಿಗಳಾದರು. ನಂತರ ಆರಂಭವಾಯಿತು ಬರವಣಿಗೆ. 2008ರಲ್ಲಿ ಹೊರಬಂದ ‘ಯು ಕ್ಯಾನ್ ವಿನ್’ ಇತಿಹಾಸವನ್ನೇ ಸೃಷ್ಟಿಸಿತು. ‘ಅಸ್ಪಸ್ಥ ಮನಸ್ಸುಗಳನ್ನು ತಿದ್ದುವ ಆಯುಧ’ ಎಂದೇ ಈ ಪುಸ್ತಕ ಪ್ರಸಿದ್ಧಿ ಪಡೆಯಿತು. ನಂತರ ಶಿವಖೇರ ಜಗತ್ತಿನಾದ್ಯಂತ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸಿದರು. ಒತ್ತಡದಲ್ಲಿ ಜೀವಿಸುವವರಿಗೆ ಶಿವಖೇರ ವರ್ಕ್ಶಾಪ್ಗಳು ಸಂಜೀವಿನಿಯಾದವು. ಇತರರ ಮೇಲೆ ‘ಫಾಷನೇಟ್’ ಆಯುಧಗಳನ್ನು ಪ್ರಯೋಗಮಾಡುವ ಶಿವಖೇರ, ಸ್ವತಃ ಅವರೇ ಪ್ಯಾಷನೇಟ್ ಮನುಷ್ಯ. ಮಾತಿನ ನಿಖರತೆ, ಗಾಢ ವಿಶ್ವಾಸ, ಅಪಾರ ನಂಬಿಕೆ, ಹಾಸ್ಯ ಪ್ರಜ್ಞೆ ಇವೆಲ್ಲವು ಅವರನ್ನು ಪ್ರಬುದ್ಧಗೊಳಿದವು. ಸಮಾಜವನ್ನು ಚಿಂತನೆಗೆ ಹಚ್ಚು ವ ಹಲವು ಕೆಲಸಗಳನ್ನು ಶಿವಖೇರ ಮಾಡಿದ್ದಾರೆ. ‘ಜಾತಿ ಚೋಡೋ, ಭಾರತ್ ಜೋಡೋ’ ಎನ್ನುವ ಡಾಕ್ಯುಮೆಂಟರಿಯೊಂದನ್ನು ಅವರು ನಿರ್ಮಿಸಿದ್ದಾರೆ. ರಾಜಕೀಯಕ್ಕೂ ಹೋಗಿ ವಾಪಸ್ ಬಂದಿರುವ ಶಿವಖೇರ 2004 ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ! ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಮಹಾಮಾತೆ ಮದರ್ ತೆರೆಸಾ ಅವರ ಜೊತೆ ‘ಲೂಯಿಸ್ ಮಾರ್ಚೆಸ್ಸಿ ಫೆಲೋ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಶಿವಖೇರ ಬೆಂಗಳೂರಿಗೆ ಬಂದಿದ್ದರು. ಆಟೋಗ್ರಾಫ್ಅನ್ನು ಅವರ ಕೈಗಿಟ್ಟಾಗ ‘ವಿನ್ನರ್ಸ್ ಡೋಂಟ್ ಡು ಡಿಫರೆಂಟ್ ಥಿಂಗ್ಸ್, ದೆ ಡು ಥಿಂಗ್ಸ್ ಡಿಫರೆಂಟ್ಲಿ’ ಎಂದು ಬರೆದು ಸೈನ್ ಮಾಡಿದರು. ಇದು ಅವರ ಸಿಗ್ನೇಚರ್ ಟ್ರೇಡ್ಮಾರ್ಕ್!