


ಕನ್ನಯ್ಯಲಾಲ್ ಕನಸು
70ರ ದಶಕ ಭಾರತೀಯ ರಂಗಭೂಮಿಗೆ ಉಚ್ಛ್ರಾಯ ಸ್ಥಿತಿ. ಈ ಕಾಲಘಟ್ಟದ ಅದ್ಭುತ ಇತಿಹಾಸ ಬರೆದವರು ಮಣಿಪುರದ ಪ್ರಬುದ್ಧ ರಂಗಕರ್ಮಿ ಕನ್ನಯ್ಯ ಲಾಲ್. ರಂಗಭೂಮಿಯನ್ನು ಪ್ರತಿಭಟನೆ ಅಸ್ತ್ರ ಮಾಡಿಕೊಂಡು ಅನ್ಯಾಯದ ವಿರುದ್ಧ ತೊಡೆ ತಟ್ಟಿ ನಿಂತವರು ಕನ್ನಯ್ಯಲಾಲ್. ಅವರು ರಂಗಭೂಮಿಯ ಉಡಿಯಲ್ಲಿ ಅಡಗಿರುವ ಅಂತರ್ಶಕ್ತಿಯನ್ನು ಎತ್ತರಕ್ಕೇರಿಸಿದರು. ಅಂದು ಸಂಭವಿಸಿದ ರಂಗ ಸಂಚಲನ ಎಂದೆಂದಿಗೂ ಮರೆಯಾಗದ ಹೊಸ ರಂಗ ಸಂವಿಧಾನವನ್ನೇ ರಚನೆ ಮಾಡಿತು! ಕನ್ನಯ್ಯ ಲಾಲ್ ಅವರ ಕುಟುಂಬ ರಂಗಭೂಯ ಬಲುದೊಡ್ಡ ಆಸ್ತಿ. ಅವರ ಪತ್ನಿ ಸಾವಿತ್ರಿ ಕನ್ನಯ್ಯ ಲಾಲ್ ವಿಶ್ವ ಕಂಡ ಶ್ರೇಷ್ಠ ನಟಿ. ಮಾತಿಲ್ಲದ ಅವರ ಅಭಿನಯ ಶಕ್ತಿಗೆ ಹೆಸರಿಲ್ಲ. ಪ್ರಾಣಿ ಪಕ್ಷಿಗಳ ಧ್ವನಿ ಮೂಲಕ ಭಾವನೆಯನ್ನು ಅಭಿವ್ಯಕ್ತಿಸುವ ಅವರ ಆಂಗಿಕ ಅಭಿನಯಕ್ಕೆ ಜಾನಪದ ಅನ್ನಲಾಯಿತು. ಆದರೆ ಅದು ಜಾನಪವೂ ಅಲ್ಲ. ಜಾನಪದ ಶೈಲಿಗೆ ಆಧುನಿಕ ಸ್ಪರ್ಷ.... ಬುಡಕಟ್ಟು ಸಂಸ್ಕೃತಿಗೆ ಹೊಸತನದ ಲೇಪನ..... ಪ್ರಾಣಿಪಕ್ಷಿಗಳ ಹಕ್ಕುಗಳ ಅನಾವರಣ......ಕಾನನದ ಮೌನದ ನಡುವಿನ ಅರಣ್ಯ ರೋಧನ.... ಒಟ್ಟಿನಲ್ಲಿ ಅದು ಕನ್ನಯ್ಯಲಾಲ್ ಅವರ ಸ್ವಂತ ರಂಗಭೂಮಿ! ಅಸ್ಸಾಂ, ಮಣಿಪರ ಪ್ರಾಂತ್ಯಗಳಲ್ಲಿ ಈಗಲೂ ಪ್ರತ್ಯೇಕತೆಯ ಕೂಗಿದೆ. ಈ ಹೋರಾಟ, ಪರಚಾಟಗಳಲ್ಲಿ ಬೆಂದುಹೋದವರೆಷ್ಟೋ. ಈ ಸೂಕ್ಷ್ಮ ಸನ್ನಿವೇಶಗಳು ಪ್ರಾಣಿ ಪಕ್ಷಿಗಳ ಧ್ವನಿಯಾಗಿ ಕನ್ನಯ್ಯಲಾಲ್ ರಂಗಭೂಮಿಯಲ್ಲಿ ತೆರೆದುಕೊಂಡಾಗ ಅಲ್ಲಿ ಆರಂಭವಾದದ್ದು ಗಂಭೀರ ಅಲೆ. ‘ಫೆಬತೆಥೋ’ ನಾಟಕದ ಒಂದು ಅತ್ಯಂತ ಭಾವುಕ ಸನ್ನಿವೇಶದಲ್ಲಿ ಸಾವಿತ್ರಿ ಕನ್ನಯ್ಯಲಾಲ್ ಅಭಿನಯಿಸುತ್ತಲೇ ಸಂಪೂರ್ಣ ಬೆತ್ತಲಾಗಿಬಿಡುತ್ತಾರೆ.....ಆ ಕ್ಷಣದಲ್ಲಿ ಅಶ್ಲೀಲ, ಅರ್ಥ ಕಳೆದುಕೊಳ್ಳುತ್ತದೆ. ತಾವು ಬೆತ್ತಲಾಗಿ ವ್ಯವಸ್ಥೆಯನ್ನು ಬೆತ್ತಲು ಮಾಡುತ್ತಾರೆ! ಕನ್ನಯ್ಯ ಲಾಲ್ ಮಣಿಪುರಕ್ಕೆ ಮಾತ್ರ ಅಂಟಿಕೊಳ್ಳಲಿಲ್ಲ. ವಿದೇಶ ಸೇರಿದಂತೆ ಭಾರತದ ಎಲ್ಲಾ ಪ್ರತಿಷ್ಠಿತ ನಾಟಕೋತ್ಸವಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ. ಎನ್ಎಸ್ಡಿ ನಾಟಕೋತ್ಸವ, ಭೂಪಾಲ್ ನಾಟಕೋತ್ಸವ, ಗೌಹಾತಿ ಉತ್ಸವ, ಕೊಲ್ಕತ್ತಾ ಉತ್ಸವ, ಮೈಸೂರು ರಂಗಾಯಣದ ಬಹುರೂಪಿ ನಾಟಕೊತ್ಸವ ಮತ್ತಿತರ ಅವರ ನಾಟಕಗಳು ರಂಗಕ್ಕೇರಿವೆ. ಅವರು ಕರ್ನಾಟಕದಲ್ಲೂ ಚಿರಪರಿಚಿತರು. ಅವರು ನಿನಾಸಂಗೆ ನಿರ್ದೇಶಿಸಿದ ಕುರುಸುವಾನ ’ರಶೋಮನ್’ ರಂಗ ಪ್ರಯೋಗ ಒಂದು ಅದ್ಭುತ. ನಟರಾದ ಮಂಡ್ಯರಮೇಶ್, ಹುಲುಗಪ್ಪ ಕಟ್ಟೀಮನಿ, ಮಂಗಳಾ ಮುಂತಾದವರು ಅಭಿನಯಿಸಿದ ಈ ನಾಟಕ ಇನ್ನೂ ಹಚ್ಚಹಸಿರು. ಕನ್ನಯ್ಯ ಲಾಲ್ ಅವರ ಮಗ ಟಾಂಬು ಕೂಡ ಅಪ್ಪಟ ಪ್ರತಿಭಾವಂತ. ಅವನ ತುಟಿಯಂಚಿನಲ್ಲಿ ಕೊಳಲು ನುಡಿಯುತ್ತಿದ್ದರೆ ಮೌನ ಮಾತಾಡುತ್ತದೆ. ತಂದೆಯ ಎಲ್ಲಾ ನಾಟಕಗಳಿಗೆ ಟಾಂಬುವೇ ಸಂಗೀತ ಸಂಯೋಜಕ. ಕನ್ನಯ್ಯ ಲಾಲ್ ಅವರದು ಬಹುದೊಡ್ಡ ರಂಗಸಾಮ್ರಾಜ್ಯವೇ ಇದೆ. ಅದು ಮಣಿಪುರಕ್ಕೆ ಮಾತ್ರ ಸೀಮಿತವಾಗದೇ ವಿಶ್ವದೆಲ್ಲಡೆ ಮಿಡಿದಿದೆ. ಕನ್ನಯ್ಯ ಲಾಲ್ ಅವರ ಸದ್ದಿಲ್ಲದ ರಂಗಾರಾಧನೆಗೆ ‘ಪದ್ಮಶ್ರೀ’ ಮುಕುಟ ಮುಡಿಗೇರಿದೆ.
ಯೋಗಾರಾಧಕ ಮೂರುತಿ
ಭಾನುವಾರ ಬಂತೆಂದರೆ ಬೆಂಗಳೂರಿನ ಎನ್.ಆರ್. ಮೊಹಲ್ಲಾದ ಮಹಿಳಾ ಮಂಡಳಿಯ ಹೊರಗೆ ಜನಜಂಗುಳಿ. ಆದರೆ ಒಳಗೆ ಕಾಲಿಟ್ಟ ಕೂಡಲೆ ಅಲ್ಲೊಂದು ಶಕ್ತಿಯ ಸಂಚಾರ. ಶುದ್ಧ, ಶ್ರದ್ಧಾ ಮತ್ತು ಭಕ್ತಿಯ ಭಾವ. ಶೃತಿಗೆಟ್ಟ ನಗರದ ಅಲ್ಲೋಲ ಕಲ್ಲೋಲ ಅಲ್ಲಿಲ್ಲ. ಅಲ್ಲೇನಿದ್ದರೂ ಆನಂದ, ಆಲಾಪ, ಆಸ್ವಾದ, ಆರಾಧನೆ ಮತ್ತು ಆತ್ಮ ವಿಶ್ವಾಸ. ಅಲ್ಲಿ ಪ್ರತಿ ಭಾನುವಾರ ಯಾವ ಗದ್ದಲವೂ ಇಲ್ಲದೆ ನಡೆಯುತ್ತದೆ ಯೋಗಾರಾಧನೆ! ಈ ಯೋಗಾರಾಧನೆಯ ಹಿಂದೆ ಒಬ್ಬ ಯೋಗಗುರು ಇದ್ದಾರೆ. ಅವರ ಹೆಸರು ನರಸಿಂಹ ಮೂರ್ತಿ. 75 ವರ್ಷ ವಯಸ್ಸಿನ ಈ ಸ್ಪೂರ್ತಿಯ ಚಿಲುಮೆಗೆ ಎಲ್ಲವೂ ಯೋಗವೆ. ನಿತ್ಯದ ಅವರ ಜೀವನ ಕ್ರಮದಲ್ಲಿ ಯೋಗ ಬೆರತು ಹೋಗಿದೆ. ಅವರಿಂದ ವಿದ್ಯೆ ಕಲಿತವರಿಗೆ, ಕಲಿಯುತ್ತಿರುವವರಿಗೆ ಲೆಕ್ಕವಿಲ್ಲ. ಯೋಗವಿದ್ಯೆಯ ಬಗ್ಗೆ ಎಲ್ಲಾ ಪ್ರಶ್ನೆಗಳಿಗೆ ಅವರ ಬಳಿ ಉತ್ತರವಿದೆ.ಅವರ ಯೋಗ ವಿದ್ಯೆ ಕೇವಲ ಆಸನವಲ್ಲ. ಎಲ್ಲಾ ಆಸನಗಳ ಹಿಂದಿರುವ ವೈಜ್ಞಾನಿಕ ವಿವೇಚನೆಯ ಅರ್ಥ ವಿವರಣೆ ಅವರ ಬಳಿಯಿದೆ. ನರಸಿಂಹ ಮೂರ್ತಿಗಳು ಕೇಂದ್ರ ಸರ್ಕಾರಿ ಹುದ್ದೆಯಲ್ಲಿದ್ದವರು. ಏಜಿಟ್ ಆಫೀಸ್ನಲ್ಲಿ ಉನ್ನತ ಹುದ್ದೆ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಕೆಲಸದ ಮೇಲಿದ್ದಾಗ ಯೋಗ ಇದ್ದೇ ಇತ್ತು. ನಿವೃತ್ತಿಯಾದ ಮೇಲಂತೂ ಅವರೊಬ್ಬ ಯೋಗಿಯೇ ಆಗಿಬಿಟ್ಟಿದ್ದಾರೆ. ಅವರು ಹಿಮಾಲಯದ ಅಮರೀಶ ವರ್ಷ ಅವರ ಶಿಷ್ಯರು. ಹಲವು ವರ್ಷಗಳ ಕಾಲ ಅವರ ಬಳಿ ಯೋಗಾಭ್ಯಾಸ ಮಾಡಿದ್ದಾರೆ. ನರಸಿಂಹ ಮೂರ್ತಿಗಳು ಧ್ಯಾನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಯೋಗವಿದ್ಯೆಯಲ್ಲಿ ಧ್ಯಾನ ಬಹಳ ಕಷ್ಟ ಹಾಗೂ ಧ್ಯಾನಕ್ಕಿರುವ ಶಕ್ತಿ ಅಪಾರ. ಧ್ಯಾನದ ವಿವಿಧ ಸಾಧ್ಯತೆಗಳ ಬಗ್ಗೆ ಅವರು ಅಪಾರ ಜ್ಞಾನ ಹೊಂದಿದ್ದಾರೆ. ಪ್ರಾಣಾಯಾಮದ ಶಕ್ತಿಯ ಅರಿವನ್ನು ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಹಂಚಿಕೊಂಡಿದ್ದಾರೆ. ಅವರು ಹೇಳಿಕೊಡುವ ಯೋಗ ಬಹಳ ಸರಳ ಮತ್ತು ಶಕ್ತಿಯುತ. ವರ್ಷದಲ್ಲಿ ಎರಡು ತಂಡಗಳಲ್ಲಿ ಅವರು ಯೋಗ ಹೇಳಿಕೊಡುತ್ತಾರೆ. ಜನವರಿ ಮೂರನೇ ಭಾನುವಾರ ಹಾಗೂ ಜುಲೈ ಮೂರನೇ ಭಾನುವಾರ ಅವರ ಯೋಗ ತರಗತಿಗಳು ಆರಂಭವಾಗುತ್ತವೆ. ಮಧ್ಯೆ ಬಂದರೆ ಪ್ರವೇಶವಿಲ್ಲ. ಯಾರೇ ಅವರ ಬಳಿ ಯೋಗ ಕಲಿಯ ಬಂದರೂ ಇಲ್ಲಾ ಎಂದು ಹೇಳುವುದಿಲ್ಲ. ವಿದ್ಯಾರ್ಥಿಗಳಿಂದ ಅವರು ಆಪೇಕ್ಷಿಸುವುದು ಶಿಸ್ತು ಮಾತ್ರ. ಯಾವ ಫೀಜು ಗೀಜು ಏನೂ ಇಲ್ಲ. ಅವರ ಯೋಗ ಸಂಪೂರ್ಣ ಉಚಿ
ಡಾಕ್ಟರ್ ತಥಾಗತ
ಬಿಹಾರದ ತಥಾಗತ ಅವತಾರ್ ತುಳಸಿ ತನ್ನ ಒಂಬತ್ತನೇ ವಯಸ್ಸಿನಲ್ಲಿ ಪ್ರೌಢಶಾಲೆ ಮುಗಿಸುತ್ತಾನೆ. ಹತ್ತನೇ ವಯಸ್ಸಿನಲ್ಲಿ ವಿಜ್ಞಾನ ವಿಷಯದಲಿ ಪದವಿ ಗಳಿಸುತ್ತಾನೆ. 12ನೇ ವಯಸ್ಸಿನಲ್ಲಿ ಪಾಟ್ನ ವಿವಿಯಲ್ಲಿ ಭೌತಶಾಸ್ತ್ರದ ಮೇಲೆ ಸ್ನಾತಕೋತ್ತರ ಪದವಿ ಪಡೆಯುತ್ತಾನೆ. ಅವನು ಅತ್ಯಂತ ಕಿರಿಯ ಸ್ನಾತಕೋತ್ತರ ಪದವೀದರ. ಆತ ಪಿಜಿ ಮುಗಿಸಿದ ಮೇಲೆ ಬೆಂಗಳೂರಿನ ಐಐಎಸ್ಸಿಯ ಬಾಗಿಲು ತೆರೆಯುತ್ತದೆ. ಅಲ್ಲಿಂದ ಪಿಎಚ್ಡಿ ಪದವಿ ಗಳಿಸುತ್ತಾನೆ. ತನ್ನ 21ನೇ ವಯಸ್ಸಿಗೆ ಡಾಕ್ಟರ್ ತಥಾಗತ ಅವತಾರ್ ತುಳಸಿಯಾಗುತ್ತಾನೆ. ಆಮೇಲೆ ವಿಶ್ವ ವಿಖ್ಯಾತನಾಗುತ್ತಾನೆ! ಅವನು ಪಿಎಚ್ಡಿ ಆರಂಭಿಸಿದಾಗಲೇ, ಜಗತ್ತಿನ ಕಿರಿಯ ಸಂಶೋಧಕ ಎಂಬ ಬಿರುದು ಮುಡಿಗೇರುತ್ತದೆ. ಪಿಎಚ್ಡಿ ಮುಗಿದ ನಂತರ ವಿಶ್ವದ ಕಿರಿಯ ವಿಜ್ಞಾನಿಗಳಲ್ಲಿ ತಥಾಗತ ಒಬ್ಬನಾಗುತ್ತಾನೆ. ಈಗ ಅವನಿಗೆ 23 ವರ್ಷ. ಈಗಲೂ ಅವನ ಜಗದ್ವಿಖ್ಯಾತಿ ಮುಂದುವರೆದಿದೆ. ಸದ್ಯಕ್ಕೆ ಅವನು ಮುಂಬೈನ ಐಐಟಿಯಲ್ಲಿ ಸಹ ಪ್ರಾಧ್ಯಾಪಕನಾಗಿದ್ದು, ವಿಶ್ವದ ಕಿರಿಯ ಸಹ ಪ್ರಾಧ್ಯಾಪಕರಲ್ಲಿ ಅವನೂ ಒಬ್ಬನಾಗಿದ್ದಾನೆ!