Saturday, June 28, 2014

ಗುಡ್ ಭೈ ಗವರ್ನರ್‌!





ಕಾನೂನು ತಜ್ಞರೆಂದು ಹೇಳಿಕೊಂಡು ಬಂದು
ನೀತಿ ನಿಯಮಗಳನ್ನು ಗಾಳಿಗೆ ತೂರಿದಿರಿ...
ಅವಕಾಶ ಸಿಕ್ಕಾಗಲೆಲ್ಲಾ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ
ಹುದ್ದೆಗೆ ಅಗೌರವ ತೋರಿದಿರಿ...
ಮಾಧ್ಯಮಗಳ ಮೈಕ್‌ ನಿಮ್ಮ ಬಾಯಿಗೆ ಮುತ್ತಿಕ್ಕಿದಾಗ
ಆಡಬಾರದ ಮಾತುಗಳನ್ನಾಡಿದಿರಿ...
ಕಾರ್ಯಕ್ರಮಗಳಲ್ಲಿ ಶ್ರೀಮತಿಯನ್ನು ವೇದಿಕೆ ಹತ್ತಿಸಿ
ಆಯೋಜಕರಿಗೆ ಮುಜುಗರ ತಂದಿರಿ...
ವಿಶ್ವವಿದ್ಯಾಲಯಗಳ ಕುಲಾಧಿಪತಿಯಾಗಿದ್ದ ನೀವು
ಮುಟ್ಠಾಳರನ್ನೆಲ್ಲಾ ಕುಲಪತಿಯನ್ನಾಗಿ ಮಾಡಿದಿರಿ...
ಸಿಂಡಿಕೇಟ್‌ ಸದಸ್ಯರನ್ನು ನೇಮಕ ಮಾಡುವಾಗಲೂ
ವಿವಿ ಅಂಗಳದಲ್ಲಿ ರಾಜಕೀಯ ತುಂಬಿದಿರಿ...
ಕುಲಪತಿಯಾಗಿ ಜಾತಿ ಮಾಡಿದರನ್ನು
ರಕ್ಷಸಿ ಕೆಟ್ಟದಾಗಿ ನಡೆದುಕೊಂಡಿರಿ...
ಕರ್ನಾಟಕ್ಕೆ ಮೊದಲ ಪ್ರಜೆಯಾಗಿದ್ದ ನೀವು
ವಿವಿಗಳನ್ನು ಮಾರಾಟಕ್ಕಿಟ್ಟಿರಿ...
ನೀವೀಗ ಕೋಟಿಗಳನ್ನು ಕೊಳ್ಳೆ ಹೊಡೆದುಕೊಂಡು
ಹೋಗುತ್ತಿದ್ದೀರಿ...ಮತ್ತೆಂದೂ ಇಲ್ಲಿಗೆ ಬಾರದಿರಿ...
ಆದರೂ ನಾವು ‘ಗವರ್ನರ್‌ ಹುದ್ದೆ’ಯನ್ನು ಗೌರವಿಸುತ್ತೇವೆ
ಯಾಕೆಂದರೆ ಕರ್ನಾಟಕ ಎಲ್ಲರಿಗೂ ಮಾದರಿ...!

Friday, June 27, 2014

ಪುಟ್ಟರಾಜರು ಸೃಷ್ಟಿಸಿದ ಪುಣ್ಯವಂತರು...


‘ಉಂಡಾಡಿ ಉಂಡನಂತೆ ಅಡ್ಡಾಡುವ ಉಡ್ರನ್ನು ಅಜ್ಜನತ್ರ ಬಿಡ್ರಿ, ಛಲೋ ದಾರಿಗೆ ಬರ್ತಾವೂ...!’ ಮೈಗಳ್ಳ ಯುವಕರನ್ನು ಕುರಿತು ಆಡುವ ಈ ಮಾತು ಉತ್ತರ ಕರ್ನಾಟಕ ಭಾಗದಲ್ಲಿ ಜನಜನಿತ. ಸೋಮಾರಿಗಳಷ್ಟೇ ಅಲ್ಲ, ಬಡವರು, ದಲಿತರು, ಅನಾಥರು, ಹಲವು ಧರ್ಮೀಯರು, ಅಂಧರು, ಅಂಗವಿಕಲರು... ಎಲ್ಲರಿಗೂ ಈ ಅಜ್ಜ ದಾರಿ ತೋರುವ ದೇವರು. ಆ ಅಜ್ಜ ಮ್ಯಾಜಿಕ್‌ ಮಾಡುತ್ತಿದ್ದವರಲ್ಲ, ಯುವ ಮನಸ್ಸುಗಳ ಮೇಲೆ ‘ಸಂಗೀತ’ದ ಬೀಜ ಬಿತ್ತುತ್ತಿದ್ದವರು! ಎಂತೆಂಥವರು ಇಲ್ಲಿ ಸಂಗೀತಗಾರರಾಗಿದ್ದಾರೆ ಗೊತ್ತಾ? ಅಜ್ಜ ಸಂಗೀತದ ಅಣುವಿಲ್ಲದ ಯುವ ಮನಸ್ಸುಗಳಿಗೆ ಸಪ್ತಸ್ವರ ತುಂಬಿ, ಯುವಜನರ ಸಂಗೀತ ಸಾಮ್ರಾಜ್ಯವನ್ನೇ ಸೃಷ್ಟಿಸಿದರು.
ಕಣ್ಣುಗಳಿಲ್ಲದಿದ್ದರೂ ಒಳಗಣ್ಣಿನಿಂದಲೇ ಸಂಗೀತ ಸಮಾಜ ಕಟ್ಟಿದರು. ಇಂದು ಅವರ ಉಸಿರು ಇಲ್ಲದಿದ್ದರೂ ಅವರು ಹಾಡಿದ ಸಪ್ತಸ್ವರಗಳ ತಂಗಾಳಿ ಶುದ್ಧವಾಗಿದೆ. ಅವರು ತಿದ್ದಿ, ತೀಡಿ ಬೆಳೆಸಿದ ಸಾವಿರಾರು ಸಂಗೀತ ಸಾಮ್ರಾಟರಿದ್ದಾರೆ.
ಉಭಯಗಾನ ವಿಶಾರದ ಜಗದ್ಗುರು ಪುಟ್ಟರಾಜ ಗವಾಯಿಗಳ ಬಗ್ಗೆ ಹೇಳಲು, ಕೇಳಲು ಏನಿದೆ? ಆದರೆ ಅವರು ಬಿತ್ತಿದ ಸಪ್ತಸ್ವರ ಬೀಜಗಳು ಮೊಳಕೆಯೊಡೆದು, ಗಿಡವಾಗಿ, ಮರವಾಗಿ ಬೆಳೆದು ಸಿಹಿ ಗಾಳಿ ನೀಡುತ್ತಿವೆ. ಅವುಗಳ ಬಗ್ಗೆ ಹೇಳಲು, ಕೇಳಲು ಸಾಕಷ್ಟಿದೆ. ಗದುಗಿನ ವೀರೇಶ್ವರ ಪುಣ್ಯಾಶ್ರಮವೆಂದರೆ ಬಡವರು, ಅನಾಥರು, ಸ್ವರಗಳ ಗಂಧವಿಲ್ಲದವರು ಸಂಗೀತ ಕಲಿಯುವ ಸ್ವರಾಲಯ. ಕರ್ನಾಟಕ, ಹಿಂದೂಸ್ತಾನಿ ಎರಡೂ ಪ್ರಾಕಾರದ ಸಂಗೀತ ಉಂಡ ಅಜ್ಜ, 10ಕ್ಕೂ ಹೆಚ್ಚು ವಾದ್ಯ ನುಡಿಸುತ್ತಿದ್ದರು. ಅವರು ಸಂಗೀತದಿಂದಲೇ ಸಾವಿರಾರು ಯುವಕರ ಬದುಕು ಕಟ್ಟಿದವರು. ಬರೀ ‘ಅನ್ನ’ ಕೊಟ್ಟು ಸಮಾಜ ಕಟ್ಟುವ ಮಠಗಳ ಸಾಲಿಗೆ ಗದುಗಿನ ಪುಣ್ಯಾಶ್ರಮ ಸೇರುವುದಿಲ್ಲ. ಈ ಜಾಗದ ಮಹಿಮೆಯೇ ಅಂಥದ್ದು.
ಕಡುಗಲ್ಲನ್ನು ಅಲ್ಲಿ ಬಿಸಾಡಿದರೂ ಸುಂದರ ಮೂರ್ತಿಯಾಗಿ ರೂಪುಗೊಳ್ಳುತ್ತದೆ. ಕಲ್ಲಿನ ಮಾತು ಹಾಗಿರಲಿ, ಹುಟ್ಟಿದ ಮಕ್ಕಳು ಅಂಧರಾದರು ಎಂಬ ಕಾರಣಕ್ಕೆ ಕಲ್ಲಿಗಿಂತ ಹೆಚ್ಚಾಗಿ ಬಿಸಾಡಿ ಹೋದ ಮಕ್ಕಳೆಷ್ಟೋ, ಕಾಲಿಲ್ಲದ, ಕೈಯಿಲ್ಲದ ಮಗುವನ್ನು ಸಾಕುವವರಾರು ಎಂದು ಬಿಟ್ಟು ಹೋದವರೆಷ್ಟೋ, ಅನ್ನ ಸಿಕ್ಕರಷ್ಟೇ ಸಾಕು ಎಂದು ಬಂದವರೆಷ್ಟೋ, ತನ್ನವರು ಯಾರೂ ಇಲ್ಲ ಎಂದು ಇಲ್ಲಿ ತಮ್ಮ ನಡಿಗೆ ನಿಲ್ಲಿಸಿದವರೆಷ್ಟೋ... ಎಲ್ಲರನ್ನೂ ಪುಟ್ಟರಾಜರು ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಸಾಕಿ ಸಲುಹಿ, ಸಂಗೀತದ ರಸದೂಟ ಬಡಿಸಿದ್ದಾರೆ. ಈ ಯುವಜನ ಮೊದಲು ಸಂಗೀತ ಕಂಡು, ಉಂಡವರಲ್ಲ. ಆದರೆ ಪುಟ್ಟರಾಜರು ಪುಣ್ಯಾಶ್ರಮದಲ್ಲಿ ಕೊಟ್ಟ ನಿಷ್ಕಲ್ಮಶ ಪ್ರೀತಿ ಸಂಸ್ಕಾರದಿಂದ ಸಾವಿರಾರು ಯುವಜನರು ವಿದ್ವಾಂಸ, ವಿಶಾರದರಾಗಿದ್ದಾರೆ.
ಹಾಲುಣಿಸಿ ಒಗದು ಹೋದಳು ಅವ್ವಾ
ಧಾರವಾಡ ಜಿಲ್ಲೆ, ಅಣ್ಣಗೇರಿಯ ಪಂಚಾಕ್ಷರಿ ಪಿ.ಎಸ್‌. ನವಲಗುಂದ, ತಾಯ ಗರ್ಭದಿಂದಲೇ ಅಂಧರಾಗಿ ಭೂಮಿಗೆ ಬಂದವರು. ಮಗ ಅಂಧ ಎಂದು ತಿಳಿದದ್ದೇ ತಡ, ತಂದೆ ತಾಯಿಗೆ ಕುರುಡು ಮಗು ಬೇಡ ಎನಿಸಿತು. ಪುಟ್ಟರಾಜರ ಮಡಿಲಿಗೆ ಹಾಕಿ ಕೈ ತೊಳೆದುಕೊಂಡರು. ‘ಹಾಲುಣಿಸಿ ಒಗದು ಹೋದಳು ಅವ್ವ’ ಎಂದು ‘ಭೂಪ್‌’ ರಾಗದ ಚೀಸ್‌ ಜೊತೆ ಸೇರಿಸಿ ಹಾಡಿನಂತೆ ಹೇಳಿದ ಅವರ ಮೊಗದ ಮೇಲೆ ಭಾವದ ಸೋಂಕಿರಲಿಲ್ಲ. ಆಕಾಶ ನೋಡುತ್ತಾ ಹಾರ್ಮೋನಿಯಂ ಮನೆಯನ್ನು ಒತ್ತಿ ಹಿಡಿದಿದ್ದರು.
ಹಗಲು ರಾತ್ರಿಯ ಅರಿವಿಲ್ಲದೆ ಸಂಗೀತಾಭ್ಯಾಸ ಮಾಡುತ್ತಿದ್ದ ನವಲಗುಂದರ ಸಂಗೀತ ಪ್ರತಿಭೆ, ಒಮ್ಮೆ ಪುಟ್ಟರಾಜರ ಪರೀಕ್ಷೆಗೆ ಒಳಗಾಯಿತು. ಪುಟ್ಟರಾಜರು ಹಾರ್ಮೋನಿಯಂ ನುಡಿಸಿ ‘ಈ ಸ್ವರಗಳನ್ನು ಗುರುತಿಸು’ ಎಂದರು. ಸ್ವರ ಗುರುತಿಸುವುದು ಆ ಹುಡುಗನಿಗೆ ಕಷ್ಟವಾಗಿರಲಿಲ್ಲ. ಆದರೆ ಎಷ್ಟು ಮನೆಗಳನ್ನು ಹಿಡಿದು, ಯಾವ ಸ್ವರ ಹೊಮ್ಮಿಸಿದರು. ಯಾವ ಕಾರ್ಡ್‌್ಸ ಒತ್ತಿದ ಕಾರಣ ಎಷ್ಟು ಸ್ವರ ಮಾರ್ದನಿಸಿದವು, ಎಲ್ಲವನ್ನು ಸೇರಿಸಿ ಪಟಪಟನೆ ಹೇಳಿದರು. ‘ಅಪ್ಪರಾ. ಎರಡು ಕೈನಾಗೂ ಪೆಟ್ಟಿ ಬಾರಸಾಕತ್ತೀರಿ’ ಎಂದು ಗುರುತಿಸಿದರು.
ಅಂಧ ಹುಡುಗನ ಒಳಗಣ್ಣು ಕಂಡ ಪುಟ್ಟರಾಜರು ‘ಕ್ಯಾ ಬಾತ್‌ ಹೈ, ನೀನೊಂದು ಸಂಗೀತ ಸಾಗರ. ಬಹಳ ಎತ್ತರಕ್ಕೆ ಹೋಗುತ್ತೀಯ’ ಎಂದು ಆಶೀರ್ವದಿಸಿದರು. ನವಲಗುಂದ ಅವರಿಗೆ ಸಂಗೀತ ಬಿಟ್ಟರೆ ಬೇರೆ ಪ್ರಪಂಚವಿಲ್ಲ. ಆಶ್ರಮಕ್ಕೆ ಬಂದ ಮೇಲೆ ಮತ್ತೆಂದೂ ಊರಕಡೆ ಹೋಗ ಬಯಸಿದವರಲ್ಲ. ಆಶ್ರಮವೇ ಅವರ ಮನೆ, ಮನಸ್ಸು. ಪುಟ್ಟರಾಜರೇ ದೇವರು. ಪುಣ್ಯಾಶ್ರಮದ ಅಂಧರ ವಸತಿ ಸಂಗೀತ ವಿದ್ಯಾಲಯದಲ್ಲಿ ಗುರುಗಳಾಗಿರುವ ಅವರು ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುತ್ತಾ ಸಪ್ತಸ್ವರಗಳನ್ನೇ ಉಸಿರಾಡುತ್ತಾರೆ.
ಅಗ್ರಜನ ಹಾಡಿಗೆ ತಮ್ಮನ ತುಡಿತ
ಅವರು ಬಿಸಿಲು ನಾಡು ಬಳ್ಳಾರಿ ಜಿಲ್ಲೆ, ಶಿರಗುಪ್ಪಿಯ ರಾವಿಹಾಳದ ಸಹೋದರರು. ಅಣ್ಣ ಹುಚ್ಚಯ್ಯ ಹಿರೇಮಠ, ತಮ್ಮ ವೀರೇಶ ಹಿರೇಮಠ. ಹುಚ್ಚಯ್ಯನ ಸುಮಧುರ ಕಂಠಸಿರಿಗೆ ವೀರೇಶನ ತಬಲಾ ದನಿ ಸೇರಿದರೆ ಪವಾಡವೇ ನಡೆದುಹೋಗುತ್ತದೆ. ಇಬ್ಬರಿಗೂ ಕಣ್ಣಿಲ್ಲ. ಆವರು ಕಂಡಿರುವ ಸಂಗೀತ ಲಹರಿ ಯಾರೂ ಕಂಡಿಲ್ಲ. ಈ ಸಹೋದರರ ಸಂಗೀತಾಭ್ಯಾಸ ಒಂದು ಹಟಯೋಗ. ಸೂರ್ಯ ಉದಯಿಸುವ ಮೊದಲೇ ಆಶ್ರಮದ ಆವರಣದಲ್ಲಿರುವ ಪುಟ್ಟರಾಜ ಗವಾಯಿಗಳ ಗದ್ದುಗೆ ಮುಂದೆ ಅಭ್ಯಾಸ ಮಾಡುತ್ತ ಕುಳಿತರೆ ಜಗತ್ತನ್ನೇ ಮರೆತುಬಿಡುತ್ತಾರೆ. ಅಣ್ಣ ಹಾಡುತ್ತಿದ್ದರೆ ತಮ್ಮನ ಬೆರಳುಗಳು ತಬಲಾ ಮೇಲೆ ನರ್ತಿಸುತ್ತವೆ. ‘ಅವ ಏನ್‌ ಛಲೋ ಹಾಡ್ತಾನ್ರೀ. ಇವ ಏನ್‌ ಬಡಿತಾನೆ ಅಂತೀರಿ. ವಡೆದೋಕ್ತೈತ್ರೀ ತಬಲಾ...’ ಎಂದು ರಸಿಕರು ಹೇಳುವ ಮಾತು ಈ ಸಹೋದರರ ಸಂಗೀತ ಪ್ರತಿಭೆಗೆ ಕನ್ನಡಿ ಹಿಡಿಯುತ್ತದೆ.
ಈ ಸಹೋದರರು ದೇಶದ ಹಲವು ಉತ್ಸವಗಳಲ್ಲಿ ಕಛೇರಿ ಕೊಟ್ಟಿದ್ದಾರೆ. ಮೈಸೂರು ದಸರಾದಿಂದ ಹಿಡಿದು ರಾಜ್ಯದ ಎಲ್ಲ ಉತ್ಸವ, ಹಬ್ಬಗಳಲ್ಲಿ ತಮ್ಮ ಸಂಗೀತ ಸುಧೆ ಹರಿಸಿದ್ದಾರೆ. ಇತ್ತೀಚೆಗೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ವೀರೇಶ ಹಿರೇಮಠ ಸೋಲೊ ತಬಲಾ ನುಡಿಸಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಕಲಾ ಪ್ರತಿಭೋತ್ಸವದ ತಬಲಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸಹೋದರರ ತಂದೆ ತಾಯಿ ಊರಿನಲ್ಲಿ ಸಣ್ಣ ಕ್ಯಾಂಟೀನೊಂದನ್ನು ನಡೆಸುತ್ತಾರೆ. ಬಡತನವೊಂದು ಬಿಟ್ಟರೆ ಮನೆಯಲ್ಲಿ ಮತ್ತೇನೂ ಇರಲಿಲ್ಲ. ಕ್ಯಾಂಟೀನ್‌ ನಡೆದರೆ ಬದುಕು. ಜೊತೆಗೆ ಅಂಧರಾಗಿ ಹುಟ್ಟಿದ ಕಾರಣ ಅಕ್ಕಪಕ್ಕದವರ ನಿರ್ಲಕ್ಷದ ನಡವಳಿಕೆ. ಆದರೆ ಆಶ್ರಮಕ್ಕೆ ಬಂದ ಮೇಲೆ ಈ ಸಹೋದರರು ಸಂಗೀತ ರತ್ನಗಳಾಗಿ ಹೊಳೆಯುತ್ತಿದ್ದಾರೆ.
ಮಂತ್ರಾಲಯದ ರಾಮುಡು
ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಭಜನೆ ಪಾಡುತ್ತಿದ್ದ ಭಕ್ತರಲ್ಲಿ ಭಕ್ತಿಯ ಅಲೆ ಎಬ್ಬಿಸುತ್ತಿದ್ದ ಪ್ರತಿಭೆ ಬಿ. ರಾಮುಡು. ಬಡತನ ಹಾಸು ಹೊದ್ದುಕೊಂಡಿದ್ದ ಮನೆಯಲ್ಲಿ ಹಾಡುವವರು ಯಾರೂ ಇರಲಿಲ್ಲ. ಆದರೆ ಈ ಹುಡುಗ ಅಂಧನಾದರೂ ಎದ್ದ ಕೂಡಲೇ ಗುರು ಮಠಕ್ಕೆ ಓಡಿ ಬರುತ್ತಿದ್ದರು. ರಾಮುಡುವಿನ ಹಾಡು ಕೇಳಿದವರೆಲ್ಲ ಅವನಿಗೆ ಸಂಗೀತ ಕಲಿ ಎಂದು ಸಲಹೆ ಕೊಡುತ್ತಿದ್ದರು. ಆದರೆ ತಿಂಗಳ ಫೀ ಕೊಟ್ಟು ಸಂಗೀತ ಕಲಿಯುವಷ್ಟು ಅನುಕೂಲತೆ ರಾಮುಡುಗೆ ಇರಲಿಲ್ಲ. ಸಂಗೀತ ಕಲಿಯಬೇಕೆಂಬ ಅವರ ಅಗಾಧ ಆಸೆಯನ್ನು ಪೋಷಣೆ ಮಾಡಿದ್ದು ಗದುಗಿನ ವೀರೇಶ್ವರ ಪುಣ್ಯಾಶ್ರಮ.
ಯಾರೋ ಪರಿಚಯಸ್ಥರು ರಾಮುಡುವನ್ನು ಪುಣ್ಯಾಶ್ರಮಕ್ಕೆ ತಂದು ಬಿಟ್ಟರು. ಅಲ್ಲಿಂದ ಇವನ ಪುಣ್ಯಕಾಲ ತೆರೆದುಕೊಂಡಿತು. ರಾಮುಡು ಈಗ ಸೋಲೊ ಹಾರ್ಮೋನಿಯಂ ನುಡಿಸುವುದರಲ್ಲಿ ಎತ್ತಿದ ಕೈ. ಪೆಟ್ಟಿಯ ಕಾರ್ಡ್‌್ಸಗಳ ನಡುವೆ ಸಮರಕ್ಕಿಳಿಯುವ ಈ ಹುಡುಗ ಸ್ವರಗಳ ಹೂಗುಚ್ಛ ಸೃಷ್ಟಿಸಬಲ್ಲ. ಸಾಥಿಯಲ್ಲೂ ಅಷ್ಟೆ, ಗಾಯಕರಿಗೇ ನೀರಿಳಿಸುವಷ್ಟು ಅಗಾಧ ವಿದ್ವತ್ತು ರಾಮುಡು ಬಳಿ ಇದೆ. ತೆಲುಗು ಮಾತೃಭಾಷೆಯಾದರೂ ಪುಣ್ಯಾಶ್ರಮದಲ್ಲಿ ಕನ್ನಡದ ಹುಡುಗನಾಗಿ ಸಂಗೀತ ಕಲಿಯುತ್ತಿದ್ದಾರೆ.
ಶುಕೂರ್‌ ಸಾಬ್‌, ರಾಜ್‌ ಮೊಹಮ್ಮದ್‌
ಗದುಗಿನ ವೀರೇಶ್ವರ ಪುಣ್ಯಾಶ್ರಮ ಧರ್ಮವನ್ನು ಮೀರಿದ್ದು. ‘ಅಜ್ಜಾರು ಮಾನವ ಕುಲಕ್ಕೇ ದೇವರು’ ಎನ್ನುತ್ತಾ ‘ಪೂರ್ವಿ ಕಲ್ಯಾಣಿ’ ಯೊಳಗೆ ಮುಳುಗಿದ್ದ ಶುಕೂರ್‌ ಸಾಬ್‌ ಹುಸೇನ್‌ ಮುಲ್ಲಾ, ಪುಣ್ಯಾಶ್ರಮದ ಅಂಧ ಪ್ರತಿಭೆ. ಶುಕೂರ್‌ ಬೆಳಗಾವಿ ಜಿಲ್ಲೆ, ಮುದ್ದೇಬಿಹಾಳ ತಾಲ್ಲೂಕಿನ ದೇವರ ಹುಲುಗುಹಾಳ ಗ್ರಾಮದವರು. ಅಂಧನೆಂಬ ನಿರ್ಲಕ್ಷದ ಮಾತಿಗೆ ಬೇಸತ್ತ ಅವರು ಮುಖ ಮಾಡಿದ್ದು ಪುಣ್ಯಾಶ್ರಮದೆಡೆಗೆ. ಹಾರ್ಮೋನಿಯಂನಲ್ಲಿ ಸಾಧನೆ ಮಾಡಿರುವ ಶುಕೂರ್‌, ಬಾಲಚಂದ್ರ ನಾಕೋಡ್‌, ಕುಮಾರ್‌ದಾಸ್‌, ವೆಂಕಟೇಶಕುಮಾರ್‌ ಅಂಥವರಿಗೆ ಸಾಥ್‌ ಕೊಟ್ಟಿದ್ದಾರೆ. 2001ರ ಯುವಜನೋತ್ಸವದಲ್ಲಿ ರಾಷ್ಟ್ರಮಟ್ಟದ ಬಹುಮಾನವನ್ನು ಶುಕೂರ್‌ ತಮ್ಮದಾಗಿಸಿಕೊಂಡಿದ್ದಾರೆ.
ಥೇಟ್‌ ‘ಗುರುರಾಜ್‌ ನಾಯ್ಡು’ ಅವರ ಧ್ವನಿಯಲ್ಲಿ ಹರಿಕತೆ ಮಾಡುವ ಗಂಗಾವತಿ ತಾಲ್ಲೂಕಿನ ಸೂಳೇಕಲ್ಲು ಗ್ರಾಮದ ರಾಜ್‌ ಮೊಹಮ್ಮದ್‌ 16 ವರ್ಷ ಪುಣ್ಯಾಶ್ರಮದಲ್ಲಿ ಸಂಗೀತಾಭ್ಯಾಸ ಮಾಡಿದರು. ಹಾರ್ಮೋನಿಯಂನಲ್ಲಿ ಸೀನಿಯರ್‌ ಪರೀಕ್ಷೆ ತೇರ್ಗಡೆ ಹೊಂದಿರುವ ಅವರು ಪ್ರಾಣಿ, ಪಕ್ಷಿಗಳ ಧ್ವನಿ, ರಾಜ್‌ಕುಮಾರ್, ಶಂಕರ್‌ನಾಗ್‌ ಮುಂತಾದವರ ಧ್ವನಿ, ರೈಲು, ವಿಮಾನಗಳ ಧ್ವನಿಯನ್ನು ತಮ್ಮ ಬಾಯಿಂದ ಹೊಮ್ಮಿಸಿ ಆಶ್ಚರ್ಯ ಸೃಷ್ಟಿಸುತ್ತಾರೆ. ಈಗಲೂ  ಗುರುರಾಜ್‌ ನಾಯ್ಡು ಅವರ ಧ್ವನಿಯಲ್ಲಿ ಹರಿಕತೆ ಮಾಡುತ್ತಿರುವ ಅವರು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಹರಿಕತೆ ಕಲಾವಿದರು. ದೆಹಲಿಯ ಅಂಗವಿಕಲೋತ್ಸವ, ಬಿಹಾರದ ಯುವಜನೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ರಾಜ್‌ ಮೊಹಮ್ಮದ್‌ ಬಳ್ಳಾರಿ ಜಿಲ್ಲೆ, ಕುರುಗೋಡಿನ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಪುಣ್ಯಾಶ್ರಮದ ಅಜ್ಜಯ್ಯರನ್ನು ದಾರಿ ತೋರಿದ ಗುರುವಾಗಿ ಹೃದಯದಲ್ಲಿ ಸದಾ ಸ್ಮರಿಸುತ್ತಾರೆ.
ಹಿಮಾಲಯ ಹತ್ತಿ ಬಂದ ಅಂಧ ಯುವಕರು
ಪುಣ್ಯಾಶ್ರಮದ ಯುವಕರು ಸಂಗೀತದಲ್ಲಷ್ಟೇ ಅಲ್ಲ, ಸಾಹಸದಲ್ಲೂ ಪ್ರತಿಭೆ ತೋರಿದ್ದಾರೆ. ಇಲ್ಲಿಯ ಇಬ್ಬರು ಅಂಧ ಯುವಕರು ಜಮ್ಮು ಕಾಶ್ಮೀರದ ಲೇಪ್‌ ಲಡಾಕ್‌ ಪ್ರಾಂತ್ಯದ ‘ಸ್ಟಾಕ್‌ ಕಾಂಗ್ರಿ’ ಶಿಖರದ ತುತ್ತ ತುದಿ ಮುಟ್ಟಿ ಸಾಹಸ ಮೆರೆದಿದ್ದಾರೆ. ಜೇವರ್ಗಿ ತಾಲ್ಲೂಕಿನ ಕಣಮೇಶ್ವರ ಗ್ರಾಮದ ನಿಂಗಯ್ಯ, ಹಿಮಾಲಯ ಹತ್ತಿ ದೇಶದಲ್ಲೇ ಪ್ರಥಮ, ವಿಶ್ವದಲ್ಲೇ ತೃತೀಯ ಸ್ಥಾನ ಪಡೆದು ದಾಖಲೆ ನಿರ್ಮಿಸಿದ್ದಾರೆ. ನಿಂಗಯ್ಯ 20,085 ಅಡಿ ಎತ್ತರದ ಶಿಖರವನ್ನು ಕಡಿಮೆ ಅವಧಿಯಲ್ಲಿ ಹತ್ತಿದ ದೇಶದ ಮೊದಲ ಅಂಧ ಯುವಕ. ಶಿಖರದ ತುದಿ ಮುಟ್ಟಿದ ನಿಂಗಯ್ಯ ರಾಷ್ಟ್ರಧ್ವಜ ಹಿಡಿದು ‘ಭರತಮಾತೆ ಜನ್ಮದಾತೆ ತಾಯಿ ನಿನಗೆ ನಮೋ ನಮೋ’ ಗೀತೆಯನ್ನು ಉದ್ಗರಿಸಿದರು.
   ಬಾಗಲಕೋಟೆ ಜಿಲ್ಲೆ, ಬಾದಾಮಿಯ ಮಂಜುನಾಥ ಜಾಲಿ ಹುಟ್ಟು ಅಂಧರಲ್ಲ. ಈಚೆಗೆ ಮಧ್ಯದಲ್ಲಿ ಅಂಧರಾದವರು. ಬೆಳಕಿನಿಂದ ಕತ್ತಲೆಡೆಗೆ ಹೋಗಿದ್ದ ಮಂಜುನಾಥ ಮತ್ತೆ ಸಂಗೀತದಿಂದ ಬೆಳಕು ಕಂಡವರು.  ಅವರು ಆರು ದಿನಗಳಲ್ಲಿ ಹಿಮಾಲಯ ಶಿಖರ ಹತ್ತಿ ದಾಖಲೆ ನಿರ್ಮಿಸಿದ್ದಾರೆ. ಈ ಸಾಹಸವನ್ನು 2012ರಲ್ಲಿ ದೆಹಲಿಯ ಲಯನ್‌್ಸ ಕ್ಲಬ್‌ ಸಹಯೋಗದಲ್ಲಿ ‘ಮಾನವ ಅಡ್ವೆಂಚ್‌ರ್‌ ಸಂಸ್ಥೆ’ ಆಯೋಜಿಸಿತ್ತು.
ಲೆಕ್ಕಾಧಿಕಾರಿ ಕೆಲಸಕ್ಕೆ ರಾಜೀನಾಮೆ
ಆಶ್ರಮದಲ್ಲಿ ಅಂಧರು, ಅಂಗವಿಕಲರಷ್ಟೇ ಅಲ್ಲ, ಸಹಜವಾಗಿರುವವರೂ ಇದ್ದಾರೆ. ಇವರೆಲ್ಲರೂ ಕಡುಬಡತನದಲ್ಲಿ ಹುಟ್ಟಿ, ಬೆಳೆದು ಪುಣ್ಯಾಶ್ರಮದಲ್ಲಿ ಸುಂದರ ಬದುಕು ಕಂಡವರು. ರಾಯಚೂರು ಜಿಲ್ಲೆ, ಸಿಂದನೂರು ತಾಲ್ಲೂಕಿನ ಜಾಲಿಹಾಳ ಗ್ರಾಮದ ಶರಣಬಸಯ್ಯ ಪುಣ್ಯಾಶ್ರಮದಲ್ಲಿ ‘ಸಂಗಟಿ ಸಾರು, ಜೋಳದ ನುಚ್ಚು’ ತಿಂದುಕೊಂಡು ಬದುಕಿದ್ದರು. ಸಂಗೀತದಲ್ಲಿ ಭೂರಿ ಭೋಜನ ಉಂಡರೂ ಹೊಟ್ಟೆಗೆ ಮಾತ್ರ ಜೋಳದ ನುಚ್ಚು. ಬಿ.ಎ. ಮ್ಯೂಸಿಕ್‌, ಸೀನಿಯರ್‌, ವಿದ್ವತ್‌ ಪರೀಕ್ಷೆಗಳಲ್ಲಿ ರ್‍್ಯಾಂಕ್‌ ಗಳಿಸಿರುವ ಅವರು ಪುಣ್ಯಾಶ್ರಮದಲ್ಲಿ ನಡೆಯುವ ಉತ್ಸವಗಳಲ್ಲಿ ಹಾಡುತ್ತಿದ್ದವರು. ಉತ್ಸವವೊಂದರಲ್ಲಿ ಹಾಡು ಕೇಳಿದ ಪುಟ್ಟರಾಜ ಗವಾಯಿಗಳು ತಮ್ಮ ‘ಆಪ್ತ ಸೇವಾ ಬಳಗ’(ಸರ್ಕಿಟ್‌ ಸೇವೆ)ಕ್ಕೆ ಕರೆಸಿಕೊಂಡರು.
ಓದಿನಲ್ಲಿ ಮುಂದಿದ್ದ ಶರಣಬಸವಯ್ಯಗೆ ಗುಲ್ಬರ್ಗ ಜಿಲ್ಲೆ, ಗುರುಮಿಟ್ಕಲ್‌ನಲ್ಲಿ ಗ್ರಾಮ ಲೆಕ್ಕಾಧಿಕಾರಿ ಕೆಲಸ ಸಿಕ್ಕಿತು. ಗಾಯಕನಾಗಿದ್ದ ಅವರಿಗೆ ಲೆಕ್ಕಾಧಿಕಾರಿ ಕೆಲಸ ರುಚಿಸಲಿಲ್ಲ. ಒಮ್ಮೆ ಅದೇ ತಾಲ್ಲೂಕಿನ ತಹಶೀಲ್ದಾರ್‌ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದರು. ಈ ಘಟನೆಯಿಂದ ನೊಂದ ಶರಣಬಸವಯ್ಯ ಭ್ರಷ್ಟಾಚಾರ ವ್ಯವಸ್ಥೆ ವಿರುದ್ಧ ಬಂಡೆದ್ದರು. ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಹೊರ ಬಂದರು. ಸದ್ಯ ಅವರು ಕುಂದಗೋಳ ಸಮೀಪದ ಮೊರಾರ್ಜಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸಂಗೀತ ಹಂಚುವ ಕೆಲಸ ಮಾಡುತ್ತಿದ್ದಾರೆ.
‘ಸರ್ಕಿಟ್‌ ಸೇವೆ’ಯೆಂಬ ಪುಣ್ಯ
ಪುಟ್ಟರಾಜ ಗವಾಯಿಗಳು ಬದುಕಿದ್ದಾಗ ‘ಸರ್ಕಿಟ್‌ ಸೇವೆ’ ಎಂಬುದು ಬಹಳ ಪುಣ್ಯದ ಕೆಲಸವಾಗಿತ್ತು. ಸರ್ಕಿಟ್‌ ಸೇವೆ ಅಂದರೆ ಪುಟ್ಟರಾಜರನ್ನು ಸೇವೆ ಮಾಡುತ್ತಿದ್ದ ಆಪ್ತ ಶಿಷ್ಯ ಬಳಗ. ಇವರಾರೂ ಅಂಧರಲ್ಲ. ಅಜ್ಜರ ಮುಂದೆ ಹಾಡುವುದು, ಅವರಿಗೆ ಅಡುಗೆ, ಪೂಜೆ, ಜಪಕ್ಕೆ ತಯಾರಿ ಮುಂತಾದ ಕೆಲಸ ಮಾಡುತ್ತಿದ್ದ ಸೇವಾ ಬಳಗವಿದು. ಇಂದು ಅಜ್ಜ ಇಲ್ಲದಿದ್ದರೂ ಅಜ್ಜನ ನೆನಪುಗಳು ಈ ಬಳಗದ ಬಳಿ ಜೀವಂತವಾಗಿವೆ.
ಶಹಾಪುರದ ಕ್ಷೌರದಂಗಡಿಯಲ್ಲಿ ಕ್ಷೌರಿಕರಾಗಿ ಕೆಲಸ ಮಾಡುತ್ತಿದ್ದ ರಮೇಶ್‌ಕುಮಾರ್‌ ಕೋಲಕುಂದ ಅಜ್ಜನ ನೆಚ್ಚಿನ ಸರ್ಕಿಟ್‌್ ವೃಂದದ ಹುಡುಗ. ರಮೇಶ್‌ ಗುಲ್ಬರ್ಗ ಜಿಲ್ಲೆಯ ಸೇಡಂನವರು. ತಂದೆಗೆ ಮಗ ಸಂಗೀತ ಕಲಿಯಬೇಕು ಎಂಬ ಆಸೆಯಿತ್ತು. ಆದರೆ ಮಗನನ್ನು ಸಂಗೀತಕ್ಕೆ ಸೇರಿಸುವ ಮೊದಲೇ ಕ್ಯಾನ್ಸರ್‌ಗೆ ಬಲಿಯಾದರು. ಬಹಳ ಚಿಕ್ಕ ವಯಸ್ಸಿಗೇ ದುಡಿದು ಹೊಟ್ಟೆ ತುಂಬಿಸಿಕೊಳ್ಳುವ ಜವಾಬ್ದಾರಿ ಅವರ ಮೇಲೆ ಬಿತ್ತು. ಅಂಗಡಿಯೊಂದರಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿದರು. ನಂತರ ಅಪ್ಪನ ಕನಸನ್ನು ನನಸು ಮಾಡಲು ಅವರು ಶಹಾಪುರದಲ್ಲಿ ಅಮರೇಶ ಗವಾಯಿಗಳ ಮೂಲಕ ಸಂಗೀತ ಲೋಕಕ್ಕೆ ಕಾಲಿಟ್ಟರು.
ಗದುಗಿನ ಪುಣ್ಯಾಶ್ರಮದ ಬಗ್ಗೆ ತಿಳಿದಿದ್ದ ರಮೇಶ್‌, ಅಮರೇಶ ಗವಾಯಿಗಳ ಅನುಮತಿ ಪಡೆಯದೇ ಕದ್ದು ಬಂದು ಪುಣ್ಯಾಶ್ರಮ ಸೇರಿದರು. ಗಾಯನದಲ್ಲಿ ವಿದ್ವತ್‌ ಪಾಸ್‌ ಮಾಡಿಕೊಂಡ ಅವರು ಅಜ್ಜನ ಸೇವೆ ಮಾಡಲು ಹಾತೊರೆಯುತ್ತಿದ್ದರು. ಅಮಾವಾಸ್ಯೆ ಸಂಗೀತೋತ್ಸವದಲ್ಲಿ ಇವರ ಹಾಡು ಕೇಳಿದ ಪುಟ್ಟರಾಜರು ತಮ್ಮ ಸರ್ಕಿಟ್‌ ಸೇವೆಗೆ ಆಹ್ವಾನ ಕೊಟ್ಟರು. ಅಲ್ಲಿಂದ ರಮೇಶ್‌ ಬದುಕು ಬದಲಾಯಿತು. ಅವರಿಗೆ ಸರ್ಕಿಟ್‌ ಸೇವೆ ಎಂಬುದು ಒಂದು ತಪಸ್ಸಾಗಿತ್ತು. ಗುರುವನ್ನು ದೇವರಂತೆ ಪೂಜಿಸಿದರು. ಮುಂದೆ ಪುಟ್ಟರಾಜ ಗವಾಯಿಗಳನ್ನು ತಮ್ಮ ಮನೆಗೆ ಕರೆಸಿಕೊಂಡು ‘ತುಲಾಭಾರ’ ನೆರವೇರಿಸಿದರು. ಸದ್ಯ ರಮೇಶ್‌ ಕುಮಾರ್‌ ಕೋಲಕುಂದ ಮೈಸೂರು ಜಿಲ್ಲೆ, ಹುಣಸೂರು ಸಮೀಪದ ಧರ್ಮಾಪುರದಲ್ಲಿರುವ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿದ್ದಾರೆ. ಧಾರವಾಡ ಆಕಾಶವಾಣಿಯ ಬಿ ಹೈ ಶ್ರೇಣಿ ಕಲಾವಿದ ಕೂಡ.
ಸರ್ಕಿಟ್‌ ಸೇವೆಯಲ್ಲಿದ್ದ ಮತ್ತೊಬ್ಬ ಯುವಕ ಗುಲ್ಬರ್ಗದ ಸಂಗಮೇಶ ಪಾಟೀಲ. ಗುರುಗಳು ಸಾಹಿತ್ಯಕ್ಕೆ ಅದೆಷ್ಟು ಒತ್ತು ಕೊಡುತ್ತಿದ್ದರು ಎಂಬ ನೆನಪುಗಳು ಸಂಗಮೇಶ್‌ ಅವರ ಬಳಿಯಿವೆ. ‘ಇಳೆ’ ಎಂಬ ಶಬ್ದವನ್ನು ಯಳೆ ಎಂದು ಹಾಡುತ್ತಿದ್ದಾಗ ಪುಟ್ಟರಾಜರು ಕರೆದು ಸಾಹಿತ್ಯದ ಅರ್ಥ ಮತ್ತು ಮಹತ್ವವನ್ನು ಬಿಡಿಸಿ ಹೇಳಿದ್ದರಂತೆ. ಸರ್ಕಿಟ್‌ನಲ್ಲಿದ್ದ ಧಾರವಾಡದ ಆನಂದಗೌಡ ಪಾಟೀಲರಲ್ಲಿ ರಾಗದ ಛಾಯೆಯ ಬಗ್ಗೆ ಅಜ್ಜ ಹೇಳಿದ ಮಾತುಗಳು ಹಸಿರಾಗಿವೆ. ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುವ ಆನಂದಗೌಡ, ಅಜ್ಜನಿಗೆ ಅಡುಗೆ ಮಾಡುತ್ತಿದ್ದರು. ಮತ್ತೊಬ್ಬ ಸರ್ಕಿಟ್‌ ಸೇವಕರಾದ ಫಕ್ಕೀರಯ್ಯ ಅವರ ಬಳಿ ಅಜ್ಜನ ಅಧ್ಯಾತ್ಮದ ನೆನಪುಗಳಿವೆ. ಅಜ್ಜ ಮಾಡುತ್ತಿದ್ದ ಮೂರು ತಾಸಿನ ಪೂಜೆಗೆ ಫಕ್ಕೀರಯ್ಯ ಅಣಿ ಮಾಡುತ್ತಿದ್ದರು. ಮೈಸೂರು ಸಮೀಪದ ಸುತ್ತೂರು ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಬೀದರ್‌ ಜಿಲ್ಲೆಯ, ಹುಣಸಗೆರಿ ಗ್ರಾಮದ ಶ್ರೀಕಾಂತ್‌ ಹಂಗರಗಿ ಕೂಡ ಸರ್ಕಿಟ್‌ ಸೇವೆಯಲ್ಲಿ ಅಜ್ಜನ ನೆನಪಿನ ಬುತ್ತಿ ಕಟ್ಟಿಕೊಂಡವರು.
ಪುಣ್ಯಾಶ್ರಮದ ಸಂಗೀತ ಸೇವೆ ಆಶ್ರಮಕ್ಕೆ ಮಾತ್ರ ಸೀಮಿತವಲ್ಲ. ಆಶ್ರಮ ನಡೆಸುತ್ತಿರುವ ಸಂಗೀತ ಕಾಲೇಜುಗಳಿಗೂ ಹರಿಯುತ್ತಿದೆ. ಆಶ್ರಮದ ವತಿಯಿಂದ ಬಿ.ಎ ಮ್ಯೂಸಿಕ್‌ ಮತ್ತು ಬಿ.ಮ್ಯೂಸಿಕ್‌ ಕಾಲೇಜುಗಳು ನಡೆಯುತ್ತವೆ. ಅಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಗೀತ ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಹೇಮಾ ನಾಯ್ಕರ್‌ ‘ಶ್ರೀಗುರು ಗುಣಗಾನ’ ಸಿ.ಡಿ ಹೊರ ತಂದಿದ್ದಾರೆ. ಅಂಧರಾದ ದಾವಣಗೆರೆಯ ರಾಜೇಶ್ವರಿ, ಮಹಾರಾಷ್ಟ್ರ, ಸೊಲ್ಹಾಪುರ ಸಮೀಪದ ಮುಂಡೆವಾಡಿ ಗ್ರಾಮದ ಶ್ರೀಗೌರಿ ಸ್ವಾಮಿ ಮುಂತಾದವರು ಸಂಗೀತ ಸಾಧನೆಯಲ್ಲಿ ತೊಡಗಿದ್ದಾರೆ.
ಆಶ್ರಮದಲ್ಲೇ ಕಲಿತ ಹಲವರು ಇಲ್ಲೇ ಉಪನ್ಯಾಸಕರಾಗಿದ್ದಾರೆ. ನಾರಾಯಣ ಹಿರೇಕೊಳಚಿ, ಶರಣಕುಮಾರ್‌ ಗುತ್ತರಗಿ, ಶಿವಬಸಯ್ಯ ಗಡ್ಡದಮಠ, ಹನುಮಂತ ಕುಮಾರ್‌ ಕೊಡಗಾನೂರ, ಮೃತ್ಯುಂಜಯ ಚಿಕ್ಕಸರೂರ, ಶ್ಯಾಮರಾವ್‌, ವಿಶ್ವನಾಥ್‌ ಹಿರೇಮಠ, ನಾಗರಾಜ ತೆಕ್ಕಲಕೋಟೆ, ವಿರೂಪಾಕ್ಷ ಪಟ್ಟದಕಲ್ಲು ಮುಂತಾದವರು ಇಲ್ಲೇ ಸಂಗೀತ ಬೋಧಿಸುತ್ತಾರೆ. ಇವರೆಲ್ಲರೂ ಪಂಚಾಕ್ಷರಿ ಗವಾಯಿಗಳು ಕಟ್ಟಿದ, ಪುಟ್ಟರಾಜ ಗವಾಯಿಗಳು ಮುನ್ನಡೆಸಿದ ಸಂಗೀತ ಸಾಮ್ರಾಜ್ಯದಲ್ಲಿ ಸಪ್ತಸ್ವರಗಳ ಆರಾಧನೆಯಲ್ಲಿ ತೊಡಗಿದ್ದಾರೆ.
‘ಪಂಚಾಕ್ಷರಿ ಗವಾಯಿ ಹಾಗೂ ಪುಟ್ಟರಾಜ ಗವಾಯಿಗಳ ತಪೋಃ ಶಕ್ತಿ ಪುಣ್ಯಾಶ್ರಮದಲ್ಲಿ ಈಗಲೂ ಜೀವಂತವಾಗಿದೆ. ಪುಣ್ಯಾಶ್ರಮ ಅಂದರೆ ಸಂಗೀತ ನಿಧಿ’ ಎನ್ನುತ್ತಾರೆ ಪುಣ್ಯಾಶ್ರಮದಲ್ಲಿ 11 ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿ ಇಂದು ಹಿಂದೂಸ್ತಾನಿ ಸಂಗೀತದಲ್ಲಿ ದಿಗ್ಗಜ ಎನಿಸಿರುವ ಡಾ. ವೆಂಕಟೇಶ ಕುಮಾರ್‌. ಗದುಗಿನ ವೀರೇಶ್ವರ ಪುಣ್ಯಾಶ್ರಮವನ್ನು 08372–238464 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

Sunday, January 12, 2014

ಸಂಗೀತದ ಸಾಧನಕೇರಿ ಕಲಕೇರಿ

ಸಂಗೀತದ ಸಾಧನಕೇರಿ ಕಲಕೇರಿ

ಮ್ಮೆ ಮೇಯಿಸಿ ಜೀವ ಕಂಡುಕೊಳ್ಳಬೇಕಾಗಿದ್ದ ಶಿವಾಜಿ, ರಸ್ತೆ ಬದಿಯ ಟೆಂಟ್‌ನಲ್ಲಿ ಜೀವನ ಕಂಡುಕೊಳ್ಳಬೇಕಾಗಿದ್ದ ರಮೇಶ, ಹನ್ನೊಂದು ವರ್ಷ ತುಂಬುವ ತನಕವೂ ಶಾಲೆಯ ಮುಖವನ್ನೇ ಕಾಣದ ಸಂಗೀತಾ ಎಲ್ಲರೂ ಈಗ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನಿಪುಣರು.
ಇದರ ಜೊತೆಗೆ ಒಳ್ಳೆಯ ಸಾಮಾನ್ಯ ಶಿಕ್ಷಣವೂ ಇವರಿಗೆ ದೊರೆತಿದೆ. ಇದು ಕಲಕೇರಿಯ ಕಾಡಂಚಿನಲ್ಲಿ ಮ್ಯಾಥ್ಯೂ ಮತ್ತು ಅಗಾಥಾ ನಡೆಸುತ್ತಿರುವ ಸಂಗೀತ ಶಾಲೆಯ ಮಹಿಮೆ. ಅನೇಕ ಬದುಕುಗಳ ಶ್ರುತಿ ಸರಿಪಡಿಸಿದ ಖ್ಯಾತಿ ಈ ಶಾಲೆಗಿದೆ. ಧಾರವಾಡದಿಂದ 20 ಕಿ.ಮೀ ದೂರದ ಕಲಕೇರಿ ಎಂಬ ಹಳ್ಳಿಯ ಕಾಡಂಚಿನ ಬೆಟ್ಟದ ಮೇಲೆ ರಚಿತವಾಗಿರುವ ‘ಕಲಕೇರಿ ಸಂಗೀತ ವಿದ್ಯಾಲಯ’ ಅದು.
‘ಭಾರತೀಯ ಸಂಗೀತ’ ಪರಿಕಲ್ಪನೆಯ ಮೇಲೆ ವಿದೇಶಿ ದಂಪತಿ ಕಟ್ಟಿರುವ ಶಾಲೆ. ಭಾರತ ದೇಶ ಮತ್ತು ಭಾರತೀಯ ಸಂಗೀತವನ್ನು ಪ್ರೀತಿಸುವ ಕೆನಡಾದ ಮ್ಯಾಥ್ಯೂ ಫೋರ್ಟಿಸ್‌ ಮತ್ತು ಫ್ರಾನ್ಸ್‌ನ ಅಗಾಥಾ ದಂಪತಿಯ ಕನಸಿನ ಆಲಯ ಈ ‘ಕಲಕೇರಿ ಸಂಗೀತ ವಿದ್ಯಾಲಯ’.
ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ನೀಡುತ್ತಿರುವ ಈ ಶಾಲೆ ಕಳೆದ 11 ವರ್ಷಗಳಿಂದ ಸದ್ದಿಲ್ಲದೆ ತನ್ನ ಕಾಯಕ ಮಾಡುತ್ತಿದೆ. 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ವಸತಿ ಸಹಿತ ಶಾಲಾ ಶಿಕ್ಷಣ ನೀಡುತ್ತಿದ್ದು, ಇಲ್ಲಿಂದ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಮೀಪದ ಹುಬ್ಬಳ್ಳಿ–ಧಾರವಾಡ ಕಾಲೇಜುಗಳಿಗೆ ಕಳಿಸುತ್ತಿದೆ. ಎಲ್ಲ ಖರ್ಚನ್ನು ವಿದ್ಯಾಲಯವೇ ನೋಡಿಕೊಳ್ಳುತ್ತಿದ್ದು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಬೆಟ್ಟದ ಮೇಲೆ ಬಿದಿರು ಬೊಂಬುಗಳಿಂದ ನಿರ್ಮಿಸಿರುವ ಕಾಟೇಜ್‌ಗಳಲ್ಲಿ ನೆಲೆಸಿದ್ದಾರೆ.
ಬಂಜಾರಾ ಕಾಲೊನಿಯ ವಿದ್ವನ್ಮಣಿ
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ. ಮ್ಯೂಸಿಕ್‌ ಕಲಿಯುತ್ತಿರುವ ಹುಬ್ಬಳ್ಳಿ ಬಂಜಾರ ಕಾಲೊನಿಯ ರಮೇಶ, ಯಾವತ್ತೂ ತಬಲಾ ನುಡಿಸುವ ಕನಸು ಕಂಡವರಲ್ಲ. ತಲೆಯ ಮೇಲೆ ಒಂದು ಸೂರು ಅವರ ಕುಟುಂಬಕ್ಕಿರಲಿಲ್ಲ. ರಸ್ತೆ ಬದಿಯ ಟೆಂಟ್‌ನಲ್ಲೇ ಬದುಕು ಕಂಡಿದ್ದ ರಮೇಶ್‌ಗೆ ಶಾಲೆ ಎನ್ನುವುದು ಕನಸಿನ ಮಾತಾಗಿತ್ತು. ಅವರು ಕಲಕೇರಿ ಸಂಗೀತ ವಿದ್ಯಾಲಯಕ್ಕೆ ಬಂದ ನಂತರ ಅವರ ಬದುಕು ಬದಲಾಯಿತು. ಅನ್ನ ಮತ್ತು ವಿದ್ಯೆಯ ಆಸೆಯಿಂದ ರಮೇಶ್‌ ಇಲ್ಲಿಗೆ ಬಂದರು.
ನಂತರ ಬೆಟ್ಟದ ಮೇಲಿನ ಪ್ರಶಾಂತ ವಾತಾವರಣ ರಮೇಶ್‌ರನ್ನು ತಬಲಾದತ್ತ ಸೆಳೆಯಿತು. ಹತ್ತು ವರ್ಷ ಶ್ರದ್ಧೆಯಿಂದ ತಬಲಾ ಕಲಿತ ರಮೇಶ್‌ ಈಗ ಯುವ ವಿದ್ವನ್ಮಣಿ. ದಿಗ್ಗಜ ಸಂಗೀತಗಾರರಿಗೆ  ಸಾಥ್‌ ಕೊಟ್ಟಿದ್ದಾರೆ. ದೆಹಲಿ, ಮುಂಬೈ, ಕೋಲ್ಕತ್ತಾ, ಪುಣೆ ಮುಂತಾದೆಡೆಗಳಲ್ಲಿ ತಬಲಾ ಜೊತೆ ಸಾಗಿದ್ದಾರೆ.
ಪುಟ್ಟ ಬಾಲಕನಾಗಿದ್ದಾಗಿನಿಂದಲೂ ರಮೇಶ್‌ರನ್ನು ವಿದ್ಯಾಲಯದ ನಿರ್ಮಾಪಕ ಮ್ಯಾಥ್ಯೂ, ಮಗನಂತೆ ನೋಡಿಕೊಂಡಿದ್ದಾರೆ.  ಪಂ. ರವಿ ಕೂಡ್ಲಗಿ ಅವರ ಬಳಿ ತಬಲಾ ಶಿಕ್ಷಣ ಮುಂದುವರಿಸಿದ್ದಾರೆ. ರಸ್ತೆ ಬದಿ ವಾಸವಿದ್ದ ಬಂಜಾರ ಕಾಲೊನಿ ಹುಡುಗನ ಬದುಕು ಈಗ ತಬಲಾ ಜೊತೆ ಬೆಸೆದುಕೊಂಡಿದೆ.
ಸಹೋದರಿಯರ ಸರಿಗಮ
ಐದು ಮಂದಿ ಹೆಣ್ಣು ಮಕ್ಕಳು, ಒಬ್ಬ ಮಗ. ತಂದೆ ತೀರಿಕೊಂಡಿದ್ದಾರೆ. ತಾಯಿ ಕಮಲಾ ವಿದ್ಯಾಲಯದಲ್ಲೇ ಅಡುಗೆ ಕೆಲಸದಾಕೆ. ಈ ಆರು ಮಕ್ಕಳಿಗೂ ಕಲಕೇರಿ ವಿದ್ಯಾಲಯವೇ ಪೋಷಕ. ಈ ಮಕ್ಕಳು ಗದಗ ಜಿಲ್ಲೆ, ಶಿರಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಲಂಬಾಣಿ ತಾಂಡದಿಂದ ಬಂದವರು.
ಹಿರಿಯ ಮಗಳು ಸಂಗೀತಾ ಚವ್ಹಾಣ್‌ ಸಿತಾರ್‌ನಲ್ಲಿ ಸಾಧನೆ ಮಾಡುತ್ತಿದ್ದಾರೆ. ಈಗಾಗಲೇ ಹಲವು ಕಾರ್ಯಕ್ರಮ ಕೊಟ್ಟಿರುವ ಸಂಗೀತಾ, ಸಿತಾರ್‌ ದಿಗ್ಗಜರಾದ ಉಸ್ತಾದ್‌ ಹಮೀದ್‌ ಖಾನ್‌, ಮೊಹಸಿನ್‌ ಖಾನ್‌ ಅವರಿಂದ ಸೈ ಎನಿಸಿಕೊಂಡಿದ್ದಾರೆ. ಅವರು ಸದ್ಯ ನೂರ್‌ ಜಹಾನ್‌ ಅವರ ಬಳಿ ಸಿತಾರ್‌ ಕಲಿಕೆ ಮುಂದುವರಿಸಿದ್ದಾರೆ.
ಸಂಗೀತಾ, ಶಾಲೆಯ ಮುಖ ನೋಡಿದವರೇ ಅಲ್ಲ. ಅವರು ಮೊದಲು ಶಾಲೆ ಕಂಡದ್ದೇ ಕಲಕೇರಿ ಸಂಗೀತ ವಿದ್ಯಾಲಯದಲ್ಲಿ. ವಯಸ್ಸಿನ ಆಧಾರದ ಮೇಲೆ ಅವರು ನೇರವಾಗಿ 5ನೇ ತರಗತಿಗೆ ದಾಖಲಾದರು. ಈಗ ಅವರು ಧಾರವಾಡದ ಕೆ.ಇ. ಬೋರ್ಡ್‌ ಪದವಿ ಕಾಲೇಜಿನಲ್ಲಿ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ. ಕರ್ನಾಟಕದ ವಿವಿಯಲ್ಲಿ ಇಂಗ್ಲಿಷ್‌ ಎಂ.ಎ ಮಾಡುವುದು, ಸಿತಾರ್‌ನಲ್ಲಿ ಸಂಶೋಧನೆ ಮಾಡುವುದು ಸಂಗೀತಾ ಅವರ ಮುಂದಿನ ಗುರಿ.
ಸಂಗೀತಾ ತಂಗಿ ಶಾಂತಿ ಚವ್ಹಾಣ ವಿದ್ಯಾಲಯದಲ್ಲೇ ಹತ್ತನೇ ತರಗತಿಯಲ್ಲಿ ಓದುತ್ತಿದ್ದು, ಬಹರೇನ್‌ನ ಮೇರಿ ಅವರ ಬಳಿ ಬಾನ್ಸುರಿ ಕಲಿತುಕೊಳ್ಳುತ್ತಿದ್ದಾರೆ. ಇನ್ನೊಬ್ಬ ತಂಗಿ ಶೋಭಾ 10ನೇ ತರಗತಿಯಲ್ಲಿದ್ದು, ರಾಜು ಅವರ ಬಳಿ ಹಾಡುಗಾರಿಕೆ ಕಲಿಯುತ್ತಿದ್ದಾರೆ. ನಾಲ್ಕನೇ ತಂಗಿ ಶಾರದಾ ಹಾಡುಗಾರಿಕೆ ಮತ್ತು ಹಾರ್ಮೋನಿಯಂನಲ್ಲಿ ಸಾಧನೆ ಮಾಡುತ್ತಿದ್ದಾರೆ. ಸದ್ಯ ಎ.ಎಲ್‌. ದೇಸಾಯಿ ಅವರ ಬಳಿ ಸಂಗೀತ ಶಿಕ್ಷಣ ಮುಂದುವರಿಸಿದ್ದಾರೆ. ಐದನೇ ಸಹೋದರಿ ಲಕ್ಷ್ಮಿ ಚವ್ಹಾಣ ಕೂಡ ಸಿತಾರ್‌ ಕಲಿಯುತ್ತಿದ್ದಾರೆ. ಐದನೇ ತರಗತಿಯಲ್ಲಿರುವ ತಮ್ಮ ಪರಶುರಾಮ ಸುಂದರವಾಗಿ ಹಾಡುತ್ತಾನೆ.
ಕೃಷ್ಣ– ದಯಾನಂದ
ಬೆಳಗಾವಿ ಜಿಲ್ಲೆಯ ಮುತ್ತುಗ ಗ್ರಾಮದ ಕೃಷ್ಣನಿಗೆ ‘ನಾವು ಎಸ್ಸೆಸ್ಸೆಲ್ಸಿವರೆಗೆ ಓದಿಸಬಹುದು. ಆಮೇಲೆ ಕಷ್ಟ, ಓದುವ ಮನಸ್ಸಿದ್ದರೆ ನೀನೇ ದುಡಿದು ಓದಬೇಕು’ ಎಂದು ತಾಯಿ ಹೇಳಿದ್ದ ಮಾತು ಕಿವಿಯಲ್ಲಿ ಸದಾ ಅನುರಣಿಸುತ್ತಿತ್ತು. ಧಾರವಾಡಕ್ಕೆ ಅಜ್ಜಿ ಮನೆಗೆ ಬಂದಾಗ ಕಲಕೇರಿ ಸಂಗೀತ ವಿದ್ಯಾಲಯದ ಸುದ್ದಿ ಕೃಷ್ಣನ ಕಿವಿಗೆ ಬಿತ್ತು.
ಅಲ್ಲಿಂದ ಕೃಷ್ಣನ ಕನಸುಗಳು ಬದಲಾದವು. ನಿತ್ಯ ಶಿಕ್ಷಣದ ಜೊತೆಗೆ ಪ. ಸೋಮನಾಥ ಮರಡೂರು ಅವರ ಬಳಿ ಗಾಯನ ತರಗತಿ ಆರಂಭವಾಯಿತು. 8 ವರ್ಷ ಸತತವಾಗಿ ಸಂಗೀತ ಕಲಿತ ಕೃಷ್ಣ, ಮುಂಬೈ, ದೆಹಲಿ, ಜೈಪುರಗಳಲ್ಲಿ ಕಛೇರಿ ಕೊಟ್ಟಿದ್ದಾರೆ. ಹುಬ್ಬಳ್ಳಿಯ ಸಿದ್ಧರೂಡ ಮಠದಲ್ಲಿ ‘ಅಹಿರ್‌ ಭೈರವ್‌’ ರಾಗ ಹಾಡಿ ಶಿವಯೋಗಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ಕೃಷ್ಣ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ. ಮ್ಯೂಸಿಕ್‌ ಮಾಡುತ್ತಿದ್ದಾರೆ.
ಭೂಪಾಲ್‌ಗೆ ತೆರಳಿ ಒಂದು ವರ್ಷ ಖ್ಯಾತ ವಿದುಷಿ ಸರಸ್ವತಿ ಮಂಡಲ್‌ ಪೋಳ್‌ ಅವರ ಬಳಿ ಸಂಗೀತ ಕಲಿತು ಬಂದಿದ್ದಾರೆ. ಸಂಗೀತದಲ್ಲಿ ಜೂನಿಯರ್‌ ಪರೀಕ್ಷೆ ಮುಗಿಸಿರುವ ಕೃಷ್ಣ, ಕಲಿತ ಕಲಕೇರಿ ಸಂಗೀತ ವಿದ್ಯಾಲಯದಲ್ಲೇ ಸಂಗೀತ ಶಿಕ್ಷಕರಾಗಿದ್ದಾರೆ. ಕೃಷ್ಣನ ಸಹೋದರ ದಯಾನಂದ ಕೂಡ ಕಲಕೇರಿ ಸಂಗೀತ ವಿದ್ಯಾಲಯದ ಪ್ರತಿಭೆ. ಬಿ.ಎ ಮ್ಯೂಸಿಕ್‌ ಮುಗಿಸಿರುವ ದಯಾನಂದ ತಬಲಾದಲ್ಲಿ ಎಂ.ಎ ಮಾಡುತ್ತಿದ್ದಾರೆ.
ಶಿವಾಜಿಯ ಯು–ಟರ್ನ್!
ಧಾರವಾಡ ತಾಲ್ಲೂಕಿನ ಮುದಿಕೊಪ್ಪ ಗ್ರಾಮದಲ್ಲಿ ಎಮ್ಮೆ ಮೇಯಿಸುತ್ತಿದ್ದ ಯುವಕ ಶಿವಾಜಿ ಪೀರಗಾರ, ಇಂದು ತಬಲಾದಲ್ಲೇ ಬದುಕು ಕಂಡುಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೋಲಾರದಲ್ಲಿ ನಡೆದ ಯುವಜನೋತ್ಸವದಲ್ಲಿ ಬಹುಮಾನ ಬಾಚಿಕೊಂಡಿರುವ ಶಿವಾಜಿ, ದೇಶದಾದ್ಯಂತ ಹಲವು ನಗರಗಳಲ್ಲಿ ಖ್ಯಾತ ಕಲಾವಿದರಿಗೆ ಸಾಥ್‌ ಕೊಟ್ಟಿದ್ದಾರೆ.
ಕರ್ನಾಟಕ ಕಾಲೇಜಿನಲ್ಲಿ ಬಿ. ಮ್ಯೂಸಿಕ್‌ ಮಾಡುತ್ತಿರುವ ಅವರು ಚಿಕ್ಕಂದಿನಲ್ಲಿ ಎಮ್ಮೆ ಕಾಯುವುದಕ್ಕಾಗಿ ಊರ ಹೊರಗಿನ ಬಯಲಿಗೆ ಹೋಗುತ್ತಿದ್ದರು. ತಂದೆ ತೀರಿಕೊಂಡಿದ್ದರು. ಮುದಿಕೊಪ್ಪದ ಸರ್ಕಾರಿ ಶಾಲೆಗೆ ದಾಖಲಾಗಿದ್ದರೂ ಹೋಗುತ್ತಿದ್ದುದು ಮಾತ್ರ ಎಮ್ಮೆಯ ಹಿಂದೆ. ಶಿವಾಜಿ 5ನೇ ತರಗತಿಗೆ ಕಲಕೇರಿ ಸಂಗೀತ ವಿದ್ಯಾಲಯದ ಅಂಗಳಕ್ಕೆ ಬಂದರು. ಸಂಗೀತ ಗೊತ್ತಿರಲಿಲ್ಲ. ವಿದ್ಯಾಲಯದ ಪರಿಸರ ಅವರನ್ನು ತಬಲಾದತ್ತ ಸೆಳೆಯಿತು. ಈಗ ವಿದ್ಯಾಲಯದಲ್ಲೇ ಇದ್ದುಕೊಂಡು ಧಾರವಾಡಕ್ಕೆ ಕಾಲೇಜಿಗೆ ಹೋಗುತ್ತಿದ್ದಾರೆ.
ಕಾಲೇಜಿಗೆ ಹೋಗುವವರು ಮಾತ್ರವಲ್ಲ, ವಿದ್ಯಾಲಯದಲ್ಲಿ ಶಾಲೆ ಕಲಿಯುತ್ತಿರುವ ಪ್ರತಿಭೆಗಳೂ ಸಂಗೀತ ಲೋಕದ ಹೊಸ ಭರವಸೆಗಳಾಗಿವೆ. ಗದುಗಿಗ ಮಂಜು ವಯೊಲಿನ್‌ ವಾದಕ ಬಿ.ಎಸ್‌. ಮಠ ಅವರ ಬಳಿ ವಯೊಲಿನ್‌ ಅಭ್ಯಾಸ ಮಾಡುತ್ತಿದ್ದು, ಸಂಗೀತ ಜೂನಿಯರ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಧಾರವಾಡ ವೀರಾಪುರ ಸಮೀಪದ ಜ್ಞಾನೇಂದ್ರ ಬಾನ್ಸುರಿ ಕಲಿಕೆಗೆ ಹತ್ತು ವರ್ಷ ತುಂಬಿದೆ. ಅಳ್ನಾವರದ ಲಕ್ಷ್ಮಿ ಡೋರಿ ‘ಜೀವನ್‌ ಪುರಿ’ ರಾಗ ಹಾಡುತ್ತಾ ಕುಳಿತರೆ ಎಲ್ಲವನ್ನು ಮರೆತುಬಿಡುತ್ತಾರೆ.
6ನೇ ತರಗತಿಯ ಸಂಜನಾ ಬೆರಳುಗಳು ತಬಲಾ ಮೇಲೆ ನರ್ತಿಸುತ್ತವೆ. ಹಾವೇರಿಯ ಶರಣಪ್ಪ ಪೂಜಾರಿಯ ವಯೊಲಿನ್‌ ಸಾಧನೆ ನಡೆದಿದೆ. ಕೆಲವರು ವಿದ್ಯಾಲಯದಲ್ಲಿ ಕಲಿತು ಇಲ್ಲೇ ಕೆಲಸಕ್ಕೆ ಸೇರಿದ್ದಾರೆ. ಗದಗ ಜಿಲ್ಲೆಯ ಅತ್ತಿಗಟ್ಟಿ ಲಂಬಾಣಿ ತಾಂಡದ ಶ್ರೀದೇವಿ ಪತ್ರಿಕೋದ್ಯಮ ಪದವೀಧರೆ. ಅವರು ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ವಾರ್ಡನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀದೇವಿ ಸಿತಾರ್‌ ಶಿಕ್ಷಣ ಮುಂದುವರಿಸಿದ್ದಾರೆ.
ಕ್ರಿಯಾಶೀಲ ಮುಖ್ಯ ಶಿಕ್ಷಕ ಸುಧರ್ಮ
ಕಲಕೇರಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಮಾತ್ರವಲ್ಲ, ಶಿಕ್ಷಕರೂ ಕ್ರಿಯಾಶೀಲರಾಗಿದ್ದಾರೆ. 26 ವರ್ಷ ಹರೆಯದ ಸುಧರ್ಮ ಬಸಾಪುರ ವಿದ್ಯಾಲಯದ ಮುಖ್ಯ ಶಿಕ್ಷಕರು. ಎಂ.ಎಸ್ಸಿ., ಬಿ.ಎಡ್‌ ಪದವೀಧರರಾದ ಇವರು ಪ್ರವೃತ್ತಿಯಲ್ಲಿ ಪಕ್ಷಿ ಛಾಯಾಚಿತ್ರಗ್ರಾಹಕರು. ಸಾವಿರಕ್ಕೂ ಹೆಚ್ಚು ಛಾಯಾಚಿತ್ರ ಕ್ಲಿಕ್ಕಿಸಿರುವ ಸುಧರ್ಮ, ಕಲಕೇರಿ ಸಂಗೀತ ವಿದ್ಯಾಲಯದ ವಾತಾವರಣಕ್ಕೆ ಮಾರುಹೋದವರು. ಬೆಂಗಳೂರಿನ ಇನ್ಫೋಸಿಸ್‌ ಕಂಪೆನಿಯಲ್ಲಿ ಕೆಲಸಕ್ಕಿದ್ದ ಅವರು ಕಾರ್ಪೊರೇಟ್‌ ಕೆಲಸವನ್ನು ತ್ಯಜಿಸಿ ಬೆಟ್ಟದ ಮೇಲಿನ ಶಾಲೆಯ ಮುಖ್ಯಸ್ಥರಾಗಿದ್ದಾರೆ.
‘ಇಂದಿನ ಮಕ್ಕಳಿಗೆ ಪರ್ಯಾಯ ಶಿಕ್ಷಣದ ಅವಶ್ಯಕತೆ ಇದೆ. ನಾಲ್ಕು ಗೋಡೆಯ ನಡುವೆ ಪರ್ಯಾಯ ಶಿಕ್ಷಣ ನೀಡಲು ಸಾಧ್ಯವಿಲ್ಲ. ಕಾಡಿನ ನಡುವೆ ರಚನೆಯಾಗಿರುವ ಈ ವಿದ್ಯಾಲಯ ಪರ್ಯಾಯ ಶಿಕ್ಷಣದ ಪ್ರಮುಖ ಹೆಜ್ಜೆ’ ಎನ್ನುತ್ತಾರೆ ಸುಧರ್ಮ. ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡಿರುವ ಸಂತೋಷ ಕಲಕೇರಿ ಸಂಗೀತ ವಿದ್ಯಾಲಯದ ಮತ್ತೊಬ್ಬ ಯುವ ಶಿಕ್ಷಕ. ಇಲ್ಲಿಯ ಪ್ರಶಾಂತ ವಾತಾವರಣಕ್ಕೆ ಮಾರುಹೋದ ಸಂತೋಷ ಇಲ್ಲಿಯೇ ಸಂತೋಷ ಕಂಡುಕೊಂಡಿದ್ದಾರೆ. ಮಕ್ಕಳಿಗೆ ಸಂಸ್ಕೃತ, ಆಗಮ ಮತ್ತು ಯೋಗವನ್ನು ಹೇಳಿಕೊಡುತ್ತಾರೆ. ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವ ಇಂತಹ 13 ಶಿಕ್ಷಕರು ವಿದ್ಯಾಲಯದಲ್ಲಿದ್ದಾರೆ.
ವಿದೇಶಿ ಸ್ವಯಂ ಸೇವಕರು
ಕಲಕೇರಿ ಸಂಗೀತ ವಿದ್ಯಾಲಯದಲ್ಲಿ ವಿವಿಧ ದೇಶಗಳಿಂದ ಬಂದ ಇತರ 13 ಶಿಕ್ಷಕರಿದ್ದಾರೆ. ಅವರನ್ನು ಸ್ವಯಂಸೇವಕರು ಎಂದು ಕರೆಯಲಾಗುತ್ತದೆ. ಅವರು ಮಕ್ಕಳಿಗೆ ಇಂಗ್ಲಿಷ್‌ ಮತ್ತು ಕೌಶಲ ಕಲೆಗಳನ್ನು ಕಲಿಸಿಕೊಡುತ್ತಾರೆ. ಈ ಕಾರಣದಿಂದಾಗಿ ಮಕ್ಕಳೆಲ್ಲರೂ ಇಂಗ್ಲಿಷ್‌ ಮಾತನಾಡುತ್ತಾರೆ.
ವಿದೇಶಗಳಿಂದ ಬಂದ ಇವರು ಮೊದಲು ಭಾರತೀಯರಾಗಿ ಬದುಕಬೇಕು. ಇದು ಕಡ್ಡಾಯ ನಿಯಮ. ಅವರೆಲ್ಲರೂ ಚೂಡಿದಾರ್‌ ಅಥವಾ ಸೀರೆ ಧರಿಸಬೇಕು. ಫ್ರಾನ್ಸ್ ನ ಮೇರಿ ಅನ್ನೆ, ಮೆಕ್ಸಿಕೋನಿಂದ ಬಂದ ಲೂಯಿಸ್‌ ಗ್ಯಾಬೊ, ಕೆನಡಾದ ಲಿಯೋನಾರ್ಡ್‌, ಮೇರಿ ಹೆಲೆನ್‌, ಬಿಯಾಂಕಾ, ಬರ್‌ಬರಾ ಸೇರಿ 13 ಮಂದಿ ವಿದೇಶಿ ಶಿಕ್ಷಕರಿದ್ದಾರೆ. ಜೊತೆಗೆ ವಿದ್ಯಾಲಯ ಆವರಣದಲ್ಲಿ ಆಸ್ಪತ್ರೆಯಿದ್ದು, ಕೆನೆಡಾದ ಲೂಯಿಸ್‌ ನರ್ಸ್‌ ಆಗಿದ್ದಾರೆ.
ವಿದ್ಯಾಲಯದ ಬಗ್ಗೆ
ಪ್ರವಾಸಿಗರಾಗಿ ಭಾರತಕ್ಕೆ ಬಂದ ಮ್ಯಾಥ್ಯೂ ಫೋರ್ಟಿಸ್‌ ಹಿಂದೂಸ್ತಾನಿ ಸಂಗೀತಕ್ಕೆ ಮಾರುಹೋಗಿ ಬನಾರಸ್‌ನಲ್ಲಿ ಸಂಗೀತ ಕಲಿಯಲು ಆರಂಭಿಸಿದರು. ಉತ್ಕೃಷ್ಠ ಹಿಂದೂಸ್ತಾನಿ ಸಂಗೀತ ಅರಸುತ್ತಾ ಧಾರವಾಡಕ್ಕೆ ಬಂದರು. ಖ್ಯಾತ ಸಿತಾರ್‌ ವಾದಕ ಉಸ್ತಾದ್‌ ಹಮೀದ್‌ ಖಾನ್‌ ಅವರ ಶಿಷ್ಯರಾಗಿ ಸಂಗೀತ ಕಲಿಕೆ ಮುಂದುವರಿಸಿದರು. ಕರ್ನಾಟಕ ವಿವಿಯಲ್ಲಿ ಬಿ. ಮ್ಯೂಸಿಕ್‌ ಪದವಿ ಪೂರೈಸಿದರು.
ಭಾರತೀಯ ಸಂಗೀತ ಇಲ್ಲಿಯ ಬಡ ಮಕ್ಕಳ ಕೈಗೆ ಸಿಗದಿರುವ ಬಗ್ಗೆ ಅವರು ಸದಾ ಚಿಂತಿಸುತ್ತಿದ್ದರು. ಅವರು ಮೊದಲು ಕೊಳಚೆ ಪ್ರದೇಶಗಳ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದ್ದರು. ಮಾಥ್ಯೂ ಧಾರವಾಡಲ್ಲೇ ನೆಲೆಸಿ ಬಡ ಮಕ್ಕಳಿಗೆ ಸಂಗೀತ ಮತ್ತು ನಿತ್ಯ ಶಿಕ್ಷಣ ನೀಡಲು ನಿರ್ಧರಿಸಿದರು.
ಅವರ ಯೋಚನೆಗೆ ಪತ್ನಿ, ಭಾರತ ಪ್ರೇಮಿ ಹಾಗೂ ಬಾನ್ಸುರಿ ವಾದಕಿ (ಹಿಂದೂಸ್ತಾನಿ) ಅಗಾಥಾ ಮೌರಿಸ್‌ ನೆರವಾದರು. ಗುರು ಹಮೀದ್‌ ಖಾನ್‌ ಜೊತೆಯಾದರು. ‘ಹಿಂದೂಸ್ತಾನಿ ಸಂಗೀತ ಮತ್ತು ಸಾಮಾಜಿಕ ಬದಲಾವಣೆ’ ಎಂಬ ವಿಷಯಗಳ ಮೇಲೆ 2002ರಲ್ಲಿ ಕಲಕೇರಿ ಬೆಟ್ಟದ ಮೇಲೆ ‘ಕಲಕೇರಿ ಸಂಗೀತ’ ವಿದ್ಯಾಲಯವನ್ನು ಆರಂಭಿಸಿದರು.
‘ಹಿಂದೂಸ್ತಾನಿ ಸಂಗೀತವನ್ನು ಪ್ರೀತಿಸುತ್ತಿದ್ದ ಮಾಥ್ಯೂ ಭಾರತದ ಗ್ರಾಮೀಣ ಮಕ್ಕಳ ಬಗ್ಗೆ ಬಹಳ ಮಾತನಾಡುತ್ತಿದ್ದರು. ಇಂತಹ ಮೌಲ್ಯಯುತ ಸಂಗೀತವನ್ನು ಇಲ್ಲಿಯ ಬಡ ಮಕ್ಕಳೇಕೆ ಕಲಿಯುತ್ತಿಲ್ಲ ಎಂಬ ಪ್ರಶ್ನೆ ಅವರನ್ನು ಸದಾ ಕಾಡುತ್ತಿತ್ತು. ಅವರ ಮನಸ್ಸಿನಲ್ಲಿದ್ದ ಶಾಲೆ ತೆರೆಯುವ ವಿಷಯ ವ್ಯಕ್ತಪಡಿಸಿದಾಗ ನನಗೂ ಇಷ್ಟವಾಯಿತು. ಎಲ್ಲರೂ ಸೇರಿ 15 ಮಕ್ಕಳ ಜೊತೆ ಸರಳವಾಗಿ ಶಾಲೆ ಕಟ್ಟಿದೆವು. ಈಗ ಶಾಲೆ ಎತ್ತರಕ್ಕೆ ಬೆಳೆದಿದೆ.
ಮಕ್ಕಳು ವಿದ್ವಾಂಸರಾಗಿದ್ದಾರೆ’ ಎನ್ನುತ್ತಾರೆ ಉಸ್ತಾದ್‌ ಹಮೀದ್‌ಖಾನ್‌. ಈಗ ಶಾಲೆಗೆ 11 ವರ್ಷ ತುಂಬಿದೆ. ‘ಯಂಗ್‌ ಇಂಟರ್‌ನ್ಯಾಷನಲ್‌ ಆರ್ಟಿಸ್ಟ್ರ ಆಫ್‌ ದಿ ವರ್ಲ್ಡ್‌’ ಶಾಲೆಯನ್ನು ಮುನ್ನಡೆಸುತ್ತಿದೆ. ಮ್ಯಾಥ್ಯೂ ಅಧ್ಯಕ್ಷರು, ಹಮೀದ್‌ ಖಾನ್‌ ಉಪಾಧ್ಯಕ್ಷರಾಗಿದ್ದಾರೆ. ಇಂಗ್ಲೆಂಡ್‌ನ ಆ್ಯಡಂ ವುಡ್‌ವರ್ಡ್‌ ನಿರ್ದೇಶಕರಾಗಿ ಶಾಲೆಯ ಜವಾಬ್ದಾರಿ ನರ್ವಹಿಸುತ್ತಿದ್ದಾರೆ.
ಬೆಟ್ಟದ ಪ್ರಾಕೃತಿಕ ಸೌಂದರ್ಯವನ್ನು ಎಳ್ಳಷ್ಟೂ ಹಾಳುಗೆಡವದೆ ಬಿದಿರಿನ ಕಾಟೇಜ್‌ ಕಟ್ಟಲಾಗಿದೆ. ವಿದ್ಯಾಲಯ ದೇಸಿ ಸ್ವರೂಪದಲ್ಲಿದ್ದು, ನೆಲಕ್ಕೆ ಸಗಣಿ ಸಾರಿಸಲಾಗಿದೆ. ಮಕ್ಕಳು ವೃತ್ತಾಕಾರವಾಗಿ, ಚಾಪೆ ಮೇಲೆ ಕುಳಿತು ಪಾಠ ಕಲಿಯುತ್ತಾರೆ. ಎಲ್ಲ ಕಾಟೇಜ್‌ಗಳಿಗೆ ಸೋಲಾರ್‌ ಪ್ಯಾನಲ್‌ ಅಳವಡಿಸಲಾಗಿದ್ದು ಸೂರ್ಯಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.
ವಿದ್ಯಾಲಯದಲ್ಲಿ ಎಮ್ಮೆ, ಹಸುಗಳನ್ನು ಸಾಕಲಾಗಿದ್ದು, ಅವು ಹಾಲಿನ ಅವಶ್ಯಕತೆ ಪೂರೈಸುತ್ತವೆ. ಬೆಳಿಗ್ಗೆ 8ರಿಂದ 11ರವರೆಗೆ ಸಂಗೀತ ತರಗತಿ ನಡೆದರೆ 11.30ಕ್ಕೆ ನಿತ್ಯ ತರಗತಿಗಳು ಆರಂಭವಾಗುತ್ತವೆ. ಪ್ರತಿ ತಿಂಗಳ ಕೊನೆ ಭಾನುವಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ವಿದ್ಯಾರ್ಥಿಗಳು ಕಲಿತದ್ದನ್ನು ಪ್ರಸ್ತುತಪಡಿಸುತ್ತಾರೆ. ಕಲೇಕರಿ ಸಂಗೀತ ವಿದ್ಯಾಲಯವನ್ನು 0836–2786746 ಸಂಖ್ಯೆಯನ್ನು ಸಂಪರ್ಕಿಸಬಹುದು.

Thursday, January 9, 2014

ಬಿಸಿಲ ನಾಡಿನ ಸಹನೆ

ಬಿಸಿಲ ನಾಡಿನ ಸಹನೆ

ಸಹನಾ ಪಿಂಜಾರ್ ‘ಬಿಸಿಲು ನಾಡಿಗೆ ಕುಡಿಯುವ ನೀರು ಕೊಡಿ’ ಎಂಬ ಘೋಷಣೆಯೊಂದಿಗೆ ಸರ್ಕಾರಿ ಕಚೇರಿಗಳ ಎದುರು ನಿಂತಾಗ, ಬಳ್ಳಾರಿಯ ಕೊಳೆಗೇರಿಗಳಲ್ಲಿ ‘ಹೆಣ್ಣು ಓದಲೇಬೇಕು’ ಎಂದು ಒತ್ತಾಯಿಸುತ್ತಿದ್ದಾಗ ಆಕೆಯ ವಯಸ್ಸು ಕೇವಲ ಐದು. ಆ ದಿನಗಳಲ್ಲಿ ಬೀದಿ ನಾಟಕಗಳ ಮೂಲಕ ರಂಗಪ್ರವೇಶ ಮಾಡಿದ ಸಹನಾ ಈಗ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ ತರಗತಿ ಸಂಚಾಲಕಿ. ಜೊತೆಗೆ ಬಾಲ್ಯದ ದಿನಗಳಂತೆಯೇ ಬಳ್ಳಾರಿ ಜಿಲ್ಲೆಯಲ್ಲಿ ಜನಜಾಗೃತಿಯಲ್ಲಿಯೂ ತೊಡಗಿಸಿಕೊಂಡಿರುವ ರಂಗ ಪ್ರತಿಭೆ.
ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆಯುವುದೆಂದರೆ ಒಂದರ್ಥದಲ್ಲಿ ಒಳ್ಳೆಯ ಸಂಪಾದನೆಯಿರುವ ಬಣ್ಣದ ಲೋಕಕ್ಕೆ ಕಾಲಿಡುವುದು ಎಂದೇ ಅರ್ಥ. ಆದರೆ ಸಹನಾ ಎಲ್ಲರೂ ತುಳಿವ ಸುಲಭದ ಹಾದಿಯಲ್ಲಿ ಆಸಕ್ತರಲ್ಲ. ಆದ್ದರಿಂದಲೇ ದಿಲ್ಲಿಯಿಂದ ತಮ್ಮೂರಿಗೇ ಮರಳಿ ಬಾಲ್ಯದ ದಿನಗಳಲ್ಲಿ ತನ್ನ ಪ್ರತಿಭೆಗೆ ಅವಕಾಶ ಕಲ್ಪಿಸಿದ್ದ ‘ಭಾವೈಕ್ಯತಾ ವೇದಿಕೆ’ಯಲ್ಲಿ ಮತ್ತೆ ಸಕ್ರಿಯರು.
ವೀರಾಪುರದಿಂದ...
ಬಳ್ಳಾರಿ ಜಿಲ್ಲೆಯ ಬೀದಿ ನಾಟಕಗಳಿಂದ ದಿಲ್ಲಿಯ ರಾಷ್ಟ್ರೀಯ ನಾಟಕ ಶಾಲೆಯ ತನಕದ ಸಹನಾರ ಪ್ರಯಣ ಒಂದರ್ಥದಲ್ಲಿ ಸಹನೆ ಮತ್ತು ಸಾಧನೆಯ ಪ್ರಯಾಣವೂ ಹೌದು. ಬಳ್ಳಾರಿ ಜಿಲ್ಲೆ, ಕುರುಗೋಡು ತಾಲ್ಲೂಕಿನ ಎಚ್‌. ವೀರಾಪುರ ಎಂಬ ಕುಗ್ರಾಮ ಸಹನಾರ ಹುಟ್ಟೂರು. ಪಿ. ಬಾಲೇಸಾಬ್‌ ತಂದೆ, ಗೌರಿಬೀ ತಾಯಿ. ಇವರ ಧೈರ್ಯ ಮತ್ತು ಮಾತುಗಾರಿಕೆ ಕಂಡ ಮಾವ ಹಾಗೂ ಹೊಸಪೇಟೆಯ ರಂಗಕರ್ಮಿ ಪಿ. ಅಬ್ದುಲ್‌, ಸಹನಾಗೆ ರಂಗಭೂಮಿಯ ದೀಕ್ಷೆ ಕೊಟ್ಟರು.
ಸಾಮಾಜಿಕ ಹೋರಾಟಗಾರರೂ ಆಗಿರುವ ಅಬ್ದುಲ್‌ ತಮ್ಮ ಹೋರಾಟಗಳಿಗೆ ಬೀದಿನಾಟಕವನ್ನು ಬಳಸುತ್ತಿದ್ದರು. ಅವರ ಹೋರಾಟಕ್ಕೆ ಸಹನಾ ಒಂದು ಹೊಸ ಅಸ್ತ್ರವಾಗಿ ಸೇರ್ಪಡೆಯಾದರು. ಹೊಸಪೇಟೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಾಲೆಗೆ ಸೇರಿದ ಸಹನಾ ನಾಟಕಗಳಿಗಾಗಿ ಬೀದಿಗಿಳಿದರು.
ಅಬ್ದುಲ್‌ ‘ಭಾವೈಕ್ಯತಾ ವೇದಿಕೆ’ ಎಂಬ ರಂಗತಂಡ ಕಟ್ಟಿಕೊಂಡು ಇಡೀ ಜಿಲ್ಲೆಯಾದ್ಯಂತ ಬೀದಿನಾಟಕ ಆಡಿಸಿದರು. ಅವರ ಎಲ್ಲ ನಾಟಕಗಳಲ್ಲಿ ಬಾಲಕಿ ಸಹನಾಳದ್ದೇ ಮುಖ್ಯಪಾತ್ರ. ಹೆಣ್ಣಿನ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಈ ನಾಟಕಗಳಿಗಾಗಿ ಸಣ್ಣ ವಾಹನದಲ್ಲಿ ಊರಿಂದ ಊರಿಗೆ ಅಲೆಯುತ್ತಿದ್ದ ತಂಡ ದಿನಕ್ಕೆ ಹತ್ತಾರು ಪ್ರದರ್ಶನ ನೀಡುತ್ತಿತ್ತು. ಸಾಮಾಜಿಕ ಬದಲಾವಣೆಯ ದೃಷ್ಟಿಯಿಂದ ರೂಪುಗೊಳ್ಳುತ್ತಿದ್ದ ಬೀದಿ ನಾಟಕಗಳಲ್ಲಿ ಅಭಿನಯಿಸುತ್ತಲೇ ಸಹನಾ ರಂಗಭೂಮಿಯ ಪ್ರಾಥಮಿಕ ಪಾಠಗಳನ್ನು ಕಲಿತರು.
‘ಭಾವೈಕ್ಯತಾ ವೇದಿಕೆ’ಯ ನಾಟಕಗಳು ಕೇವಲ ಬಳ್ಳಾರಿಗೆ ಸೀಮಿತವಾಗಿರಲಿಲ್ಲ. ಬೆಂಗಳೂರಿನಲ್ಲೂ ಅವರ ನಾಟಕಗಳು ಪ್ರದರ್ಶನಗೊಂಡವು. ಮಹಾತ್ಮಾಗಾಂಧಿ ರಸ್ತೆಯಲ್ಲಿ ಪ್ರದರ್ಶಿಸಿದ ‘ಓ ಮತದಾರ ಪ್ರಭುವೇ’ ನಾಟಕ ಬೆಂಗಳೂರಿನ ಥಳುಕಿನ ಮಂದಿಯನ್ನೂ ಆಲೋಚನೆಗೆ ಹಚ್ಚುವಷ್ಟು ತೀಕ್ಷ್ಣವಾಗಿತ್ತು. ಸಹನಾ ಪುಟ್ಟ ಹುಡುಗಿಯ ಮಾತುಗಳು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಸುವಷ್ಟು ಪ್ರಬಲವಾಗಿದ್ದವು. ಮುಂದೆ ದೆಹಲಿ, ಮುಂಬೈ, ಹೈದರಾಬಾದ್‌ ಮುಂತಾದೆಡೆ ಅವರ ಬೀದಿ ನಾಟಕಗಳು ಪ್ರದರ್ಶನಗೊಂಡಿವೆ.
ಮುಂದೆ ಸಂಡೂರಿನ ದೇವಗಿರಿ ಕಾಡಿನಲ್ಲಿ ರಂಗಕರ್ಮಿ ಸಿ. ಬಸವಲಿಂಗಯ್ಯ ನಡೆಸಿದ ರಂಗ ಶಿಬಿರದಲ್ಲಿ ಸಹನಾ ಅಭಿನಯದ ಹಲವು ಮುಖಗಳನ್ನು ಅರಿತರು. ಮೈಮ್‌ ರಮೇಶ್‌ ಗರಡಿಯಲ್ಲಿ ದೈಹಿಕ ರಂಗಭೂಮಿಯ ಮಹತ್ವ ತಿಳಿದುಕೊಂಡರು. ನಿರ್ದೇಶಕರಾದ ಸುರೇಶ್‌ ಆನಗಳ್ಳಿ, ಸಿ.ಜಿ.ಕೆ., ನಟರಾಜ ಹೊನ್ನವಳ್ಳಿ, ಯೋಗಾನಂದ ಮುಂತಾದ ರಂಗ ದಿಗ್ಗಜರ ಒಡನಾಟದಿಂದ ಮತ್ತಷ್ಟು ಪಕ್ವವಾದರು. ‘ಅಕ್ಕ’, ‘ಮಗಳು ಮಾತಾಡಿದಳು’, ‘ನಾವು ಮನುಜರು’, ‘ಚೋರ್‌ ಚೋರ್‌ ಪಕ್ಡೋ ಪಕ್ಡೋ’, ‘ಕೆಂಪು ಹೂ’, ‘ರಸ್ತೆಗೆ ಡಾಂಬರು ಬಂದಿದೆ’, ‘ಅರಿವು’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.
ನೀನಾಸಂ ಯಾತ್ರೆ
ಸಹನಾ ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದಾಗ ನೀನಾಸಂನ ಕೆ.ವಿ. ಸುಬ್ಬಣ್ಣ ಹಂಪಿಗೆ ಬಂದಿದ್ದರು. ‘ಭಾವೈಕ್ಯತಾ ವೇದಿಕೆ’ಯ ರಂಗಚಟುವಟಿಕೆಯನ್ನು ಮೆಚ್ಚಿದ ಸುಬ್ಬಣ್ಣ ಸಹನಾಗೆ ‘ನೀಸಾಸಂ’ಗೆ ಬರುವಂತೆ ಸೂಚಿಸಿದರು. ಬೆಳಗಾಗುವುದರೊಳಗಾಗಿ ಸಹನಾ ‘ನೀನಾಸಂ’ ಅಂಗಳದಲ್ಲಿದ್ದರು. ಯಾವುದೇ ಸಂದರ್ಶನ ಇಲ್ಲದೇ 1999– 2000ನೇ ಸಾಲಿನಲ್ಲಿ ಅವರು ‘ನೀನಾಸಂ’ ಪ್ರವೇಶ ಪಡೆದರು. ಬಿ.ವಿ. ಕಾರಂತರು ‘ನೀನಾಸಂ’ಗೆ ಕೊನೆಯದಾಗಿ ನಿರ್ದೇಶಿಸಿದ ‘ಅಂದೇರ್ ನಗರಿ ಚೌಪಟ್‌ ರಾಜ’ ನಾಟಕದಲ್ಲಿ ಅಭಿನಯಿಸುವ ಅವಕಾಶ ಸಹನಾಗೆ ದೊರೆಯಿತು.
ಕಾರಂತರ ಕಠಿಣ ರಂಗ ಶಿಬಿರದಲ್ಲಿ ಪಳಗಿದ ಅವರಿಗೆ ರಂಗಕಲೆ ಉಸಿರಾಯಿತು. ತರಬೇತಿ ನಂತರ ಅವರು ಒಂದು ವರ್ಷ ‘ನೀನಾಸಂ’ ತಿರುಗಾಟದಲ್ಲಿ ಪಾಲ್ಗೊಂಡರು. ಚೆಕಾಫ್‌ನ ‘ಥ್ರಿ ಸಿಸ್ಟರ್ಸ್’,  ಕೆ.ವಿ. ಸುಬ್ಬಣ್ಣ ಅವರ ‘ಭಗವದಜ್ಜುಕೀಯಂ’, ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’, ನಟರಾಜ ಹೊನ್ನವಳ್ಳಿ ನಿರ್ದೇಶನದ ‘ಬಿರುಕು’, ವೆಂಕಟರಮಣ ಐತಾಳ್ ನಿರ್ದೇಶನದ ‘ಹಂಸ ದಮಯಂತಿ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು. ಅಮೆರಿಕ ಪಪೆಟ್ ರಂಗಭೂಮಿಯ ಪೀಟರ್‌ ಶುಮನ್‌ ನಡೆಸಿದ ತರಬೇತಿಯಲ್ಲಿ ಪಾಲ್ಗೊಂಡು ಅವರು ಬೊಂಬೆ ಮತ್ತು ಮುಖವಾಡ ತಯಾರಿಸುವ ಕಲೆ ಕಲಿತಿದ್ದಾರೆ. ಸ್ವೀಡನ್‌ನಿಂದ ಬಂದಿದ್ದ ಟಾಮ್‌ ಐರಿಕ್‌ ಅವರ ಬಳಿ ಮಕ್ಕಳ ರಂಗಭೂಮಿ ತರಬೇತಿಯಾಗಿದೆ.
‘ನೀನಾಸಂ’ ತಿರುಗಾಟ ಮುಗಿಸಿ ಹೊಸಪೇಟೆಗೆ ಬಂದ ಸಹನಾ ದ್ವಿತೀಯ ಪಿಯುಸಿ ಮುಂದುವರಿಸಿದರು. ಕಾಲೇಜಿಗೆ ಹೋಗುತ್ತಲೇ ಅವರು ಸ್ಮೈರ್‌ ಬಾಲಕಿಯರ ವಸತಿ ಶಾಲೆಯಲ್ಲಿ ನಾಟಕ ಶಿಕ್ಷಕಿಯಾಗಿ ಸೇರಿದರು. ಐದು ವರ್ಷಗಳ ಕಾಲ ಆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅವರು ಪಿಯುಸಿ ಮುಗಿಸಿ ಹಂಪಿ ಕನ್ನಡ ವಿವಿಯಲ್ಲಿ ಕನ್ನಡ  ಪದವಿ ಪಡೆದರು.
ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಿದ ಕೀರ್ತಿ ಭಾವೈಕ್ಯತಾ ವೇದಿಕೆಗೆ ಸಲ್ಲುತ್ತದೆ. ಪಿ. ಅಬ್ದುಲ್‌ ಅವರ ಮಾರ್ಗದರ್ಶನದಲ್ಲಿ ಸಹನಾ, ತಮ್ಮ ಸೋದರ ಸಂಬಂಧಿಗಳಾದ ಶಾಹಿರಾ, ಸಹರಾ (ಇಬ್ಬರೂ ‘ನೀನಾಸಂ’ನಲ್ಲಿ ತರಬೇತಿ ಪಡೆದವರು) ಜೊತೆಗೂಡಿ ಮೊದಲ ಬಾರಿಗೆ ಹೊಸಪೇಟೆಯಲ್ಲಿ ಮಕ್ಕಳ ಮೇಳ ಆಯೋಜಿಸಿದರು. ಈ ಶಿಬಿರಕ್ಕೆ ಅಶೋಕ್‌ ಬಾದರದಿನ್ನಿ ನಿರ್ದೇಶಕರಾಗಿದ್ದರು. ಮೈಸೂರು ರಂಗಾಯಣದ ಚಿಣ್ಣರ ಮೇಳದಲ್ಲಿ ಭಾಗವಹಿಸಿ ಸ್ಫೂರ್ತಿ ಪಡೆದಿದ್ದ ಸಹನಾ ಹೊಸಪೇಟೆಯಲ್ಲೂ ಪ್ರಯೋಗಿಸಿದರು. ಇದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿತು.
ಎನ್‌ಎಸ್‌ಡಿ ಅನುಭವ
ಸದಾ ಹೊಸ ವಿಷಯಗಳ ಕಲಿಕೆಗೆ ಹಾತೊರೆಯುತ್ತಿದ್ದ ಸಹನಾ ಅವರಿಗೆ ರಾಷ್ಟ್ರೀಯ ನಾಟಕ ಶಾಲೆ ಸೇರುವ ಕನಸು ಮೊದಲಿನಿಂದಲೂ ಇತ್ತು. 2002ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸ್ಕಾಲರ್‌ಶಿಪ್‌ ಪಡೆದು ಅಧ್ಯಯನಕ್ಕೆಂದು ದೆಹಲಿಗೆ ಭೇಟಿ ನೀಡಿದ್ದಾಗ ಎನ್‌ಎಸ್‌ಡಿಯ ‘ಜಾನೇ ಮನ್‌’ ನಾಟಕ ನೋಡಿದರು. ಹಿಜಡಾಗಳ ಬದುಕಿನ ಮೇಲೆ ಚಿತ್ರಿತವಾಗಿದ್ದ ನಾಟಕ, ಸಹನಾರ ಎನ್‌ಎಸ್‌ಡಿ ಸೇರುವ ಕನಸನ್ನು ಮತ್ತಷ್ಟು ಗಟ್ಟಿಗೊಳಿಸಿತು.
ಬಿಎ ಅಂತಿಮ ವರ್ಷವಿದ್ದಾಗ ಎನ್‌ಎಸ್‌ಡಿಗೆ ಅರ್ಜಿ ಹಾಕಿದರು. ಬೆಂಗಳೂರಿನ ಎನ್‌ಎಸ್‌ಡಿ ವಲಯ ಕೇಂದ್ರದಲ್ಲಿ ನಡೆದ ಮೊದಲ ಸಂದರ್ಶನದಲ್ಲಿ ತೇರ್ಗಡೆ ಹೊಂದಿ ದೆಹಲಿಯಲ್ಲಿ ನಡೆಯುವ ಎರಡನೇ ಸುತ್ತಿಗೆ ಆಯ್ಕೆಯಾದರು. ಆದರೆ ಎರಡನೇ ಸುತ್ತಿನಲ್ಲಿ ಸಹನಾ ಅನುತ್ತೀರ್ಣರಾದರು. ಆದರೂ ದೆಹಲಿ ಬಿಡದ ಅವರು ಬೀದಿ ನಾಟಕಗಳ ದಿಗ್ಗಜ ‘ಸಫ್ದರ್ ಹಶ್ಮಿ’ (ಬೀದಿನಾಟಕ ಮಾಡುತ್ತಲೇ ಕೊಲೆಯಾದವರು) ಅವರ ‘ಜನ್‌ ನಾಟ್ಯ ಮಂಚ್‌’ನ ಬೀದಿ ನಾಟಕಗಳಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಅಲ್ಲಿ ಕೆಲಕಾಲ ಕೆಲಸ ಮಾಡಿ ಹೊಸಪೇಟೆಗೆ ಹಿಂತಿರುಗಿದರು.
ಮತ್ತೆ ಮುಂದಿನ ವರ್ಷ ಎನ್‌ಎಸ್‌ಡಿಗೆ ಅರ್ಜಿ ಹಾಕಿದ ಅವರು ತಮ್ಮ ಕನಸನ್ನು ನನಸಾಗಿಸಿಕೊಂಡರು. ಎನ್‌ಎಸ್‌ಡಿ ಅವರಿಗೆ ಆರಂಭದಲ್ಲಿ ಮಾಯಾಲೋಕದಂತೆ ಕಂಡಿತು. ಬಾಲಿವುಡ್‌ ಕನಸಿನೊಂದಿಗೆ ಎನ್‌ಎಸ್‌ಡಿಗೆ ಬಂದಿದ್ದ ಕೆಲವರು ಅವರಿಗೆ ಗೊಂಬೆಗಳಂತೆ ಕಂಡರು. ದೇಹ ಸೌಂದರ್ಯಕ್ಕೆ ಅವರು ಕೊಡುತ್ತಿದ್ದ ಮಹತ್ವ ಕಂಡು ಸಹನಾಗೆ ಭಯವೂ ಆಯಿತು. ಆದರೆ ಎನ್‌ಎಸ್‌ಡಿ ನಿರ್ದೇಶಕರಾಗಿದ್ದ ಅನುರಾಧಾ ಕಪೂರ್‌ ಪ್ರೋತ್ಸಾಹದಿಂದ ಸಹನಾ ಭಯ ಬಿಟ್ಟು ಕಲಿಕೆಯಲ್ಲಿ ತೊಡಗಿಸಿಕೊಂಡರು.
ಸಹನಾ ಮುಖ್ಯವಾಗಿ ವಿನ್ಯಾಸ ಮತ್ತು ನಿರ್ದೇಶನ ಕಲಿಕೆಗೆ ಹೆಚ್ಚು ಒತ್ತು ಕೊಟ್ಟರು. ಆದರೆ ಎರಡನೇ ವರ್ಷದಲ್ಲಿ ಅವರಿಗೆ ಅಭಿನಯ ವಿಭಾಗ ನೀಡಲಾಗಿತ್ತು. ಕರ್ನಾಟಕದಲ್ಲಿ ಕಾರಂತ, ಬಸವಲಿಂಗಯ್ಯ, ಸಿಜಿಕೆ ಗರಡಿಯಲ್ಲಿ ಪಳಗಿದ್ದ ಸಹನಾಗೆ ಅಲ್ಲಿ ಅಭಿನಯ ಕಲಿಯುವ ಇರಾದೆ ಇರಲಿಲ್ಲ. ವಿನ್ಯಾಸ ಮತ್ತು ನಿರ್ದೇಶನ ವಿಭಾಗ ನೀಡದಿದ್ದರೆ ಇಲ್ಲಿರಲಾರೆ ಎಂದು ಗಂಟು ಮೂಟೆ ಕಟ್ಟಿ ನಿಂತಿದ್ದರು. ನಂತರ ಅನುರಾಧಾ ಕಪೂರ್‌ ಸಹನಾ ಇಷ್ಟದ ವಿಭಾಗವನ್ನೇ ನೀಡಿದರು.
ಖ್ಯಾತ ಕನ್ನಡ ಕಥೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ‘ಜುಲೇಕಾ’ ಕಥೆಯ ರಂಗರೂಪ ‘ಜನ್ನತ್‌ ಮಹಲ್‌’ಗಾಗಿ ಆಗಿನ್ನೂ ಎನ್‌ಎಸ್‌ಡಿ ವಿದ್ಯಾರ್ಥಿಯಾಗಿದ್ದ ಸಹನಾ ರಂಗಮಂಚದ ಚಿತ್ರಣವನ್ನೇ ಬದಲಿಸಿದ್ದರು. ಮುಸ್ಲಿಂ ಹೆಣ್ಣು ಮಗಳೊಬ್ಬಳ ಮನದ ತೊಳಲಾಟವನ್ನು ರಂಗ ವಿನ್ಯಾಸದಲ್ಲಿಯೂ ಧ್ವನಿಸಲು ಪ್ರಯತ್ನಿಸಿದ್ದರು. ಬುರ್ಖಾದ ಪ್ರತೀಕವೆಂಬಂತೆ ಇಡೀ ರಂಗ ಮಂಚಕ್ಕೆ ಬುರ್ಖಾ ಹೊದಿಸಿದ್ದರು. ಪ್ರೇಕ್ಷಕರು ಮತ್ತು ರಂಗಮಂಚದ ನಡುವೆ ತೆಳುವಾದ ಪರದೆ ಅಳವಡಿಸಿ ಅದರೊಳಗಿನಿಂದಲೇ ಜನ ನಾಟಕ ನೋಡುವಂತೆ ಮಾಡಿದ್ದರು.
ಚೀನಾ ಭೇಟಿ
ಕೀರ್ತಿ ಜೈನ್‌ ನಿರ್ದೇಶನದ ‘ಏಕ್‌ ರುಖಾ ಹುವಾ ಫೈಸ್ಲಾ’ ನಾಟಕದಲ್ಲಿ ರಂಗವಿನ್ಯಾಸ ಮಾಡಿದ್ದ ಸಹನಾ ಈ ನಾಟಕದೊಂದಿಗೆ ಚೀನಾಕ್ಕೆ ಭೇಟಿ ನೀಡಿದ್ದರು. ಚೀನಾ ರಂಗಭೂಮಿ ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಎನ್‌ಎಸ್‌ಡಿಯಲ್ಲಿ ವಸ್ತ್ರ ವಿನ್ಯಾಸಕಿಯಾಗಿಯೂ ಗಮನ ಸೆಳೆದ ಅವರು ‘ಡಾಲ್ಸ್ ಹೌಸ್‌’ ನಾಟಕದ ‘ನೋರಾ’ ಪಾತ್ರಕ್ಕೆ ಸೈಕಲ್‌ ಟೈರ್‌, ಟ್ಯೂಬ್‌, ಚೈನ್‌ಗಳನ್ನು ಬಳಸಿ ವಸ್ತ್ರ ವಿನ್ಯಾಸ ಮಾಡಿದ್ದರು. ಗ್ರೀಕ್‌ ಶೈಲಿಯಲ್ಲಿದ್ದ ‘ದೊರೆ ಈಡಿಪಸ್‌’ ನಾಟಕವನ್ನು ಲಂಕೇಶರು ಕನ್ನಡೀಕರಿಸಿದ ಕೃತಿಯನಿಟ್ಟುಕೊಂಡು ದೃಶ್ಯ ನಿರ್ದೇಶನ ಮಾಡಿ ಗಮನ ಸೆಳೆದರು. ಇದು ಅವರ ಇನ್ನೊಂದು ಪ್ರಯೋಗವಾಗಿತ್ತು.
ಕನ್ನಡ ರಂಗಪ್ರಯೋಗಗಳನ್ನಿಟ್ಟುಕೊಂಡೇ ಸಹನಾ ಯೋಚಿಸುತ್ತಿದ್ದರು. ಬೆಳಕು, ವಿನ್ಯಾಸದಲ್ಲೂ ಭರವಸೆ ಮೂಡಿಸಿದ ಅವರು, ಶಂತನು ಭೋಸ್‌ ನಿರ್ದೇಶನದ ‘ಹಜಾರ್ ಚೌರಾಶಿರ್ ಕಿ ಮಾ’ ನಾಟಕಕ್ಕೆ ಬೆಳಕಿನ ವಿನ್ಯಾಸ ಮಾಡಿದರು. ‘ಚೆರ್ರಿ ಆರ್ಚರ್ಡ್ಸ್’ ನಾಟಕಕ್ಕೆ ರಂಗ ನಿರ್ವಹಣೆ, ‘ದ ಡ್ರೈವ್‌’ಗೆ ಸಂಗೀತ ವಿನ್ಯಾಸ ಮಾಡಿ ಹೆಸರು ಗಳಿಸಿದರು. ಅಂತಿಮ ವರ್ಷದಲ್ಲಿ ‘ಜನ್ನತ್‌ ಮಹಲ್’ ನಿರ್ದೇಶಿಸಿ ಪ್ರಬುದ್ಧ ನಿರ್ದೇಶಕಿ ಎನಿಸಿಕೊಂಡರು.
ರಾಷ್ಟ್ರೀಯ ನಾಟಕ ಶಾಲೆ ಪದವಿ ಪಡೆದವರು ಬಾಲಿವುಡ್‌, ಉತ್ತಮ ಸಂಬಳದ ಕಾರ್ಪೊರೇಟ್‌ ನಾಟಕ ತಂಡ ಸೇರುವುದು ಸಾಮಾನ್ಯ. ಆದರೆ ಸಹನಾ ಎನ್‌ಎಸ್‌ಡಿಯಿಂದ ಸೀದಾ ಹೊಸಪೇಟೆಗೆ ಬಂದು ಅದೇ ‘ಭಾವೈಕ್ಯತಾ ವೇದಿಕೆ’ಯ ರಂಗಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಜೊತೆಗೆ ತಮಿಳು ಚಿತ್ರನಟ ಷಣ್ಮಖರಾಜ ಅವರ ‘ನಿಗಲ್‌ ಥಿಯೇಟರ್‌’(ಮಧುರೈ) ರಂಗ ತಂಡಕ್ಕೆ  ವಸ್ತ್ರ, ಪರಿಕರ, ಬೆಳಕು ವಿನ್ಯಾಸ ಮಾಡುತ್ತಿದ್ದಾರೆ. ಬೆಂಗಳೂರಿನ ಎನ್‌ಎಸ್‌ಡಿ ಶಾಖೆಯಲ್ಲಿ ತರಗತಿ ಸಂಚಾಲಕಿಯಾಗಿ ಕೆಲಸ ಮಾಡಿದ್ದಾರೆ. ಮಾವ ಪಿ. ಅಬ್ದಲ್‌ ಅವರ ಜೊತೆಗೂಡಿ ವೃತ್ತಿ ರಂಗಭೂಮಿಯ ರೆಪರ್ಟರಿ ತೆರೆಯುವ ಮತ್ತು ರಂಗ ತತ್ವದ ಮೇಲೆ ಪ್ರಾಥಮಿಕ ಶಾಲೆಯೊಂದನ್ನು ಆರಂಭಿಸುವ ಕನಸು ಸಹನಾ ಅವರದು. ಸಹನಾ ಜೊತೆ ಮಾತನಾಡಲು  9901944706 ಸಂಪರ್ಕಿಸಬಹುದು.

Saturday, November 23, 2013

ತಮಿಳು ವನದಲ್ಲರಳಿದ ಕನ್ನಡ ಪದ್ಮಾ


ತಮಿಳು ವನದಲ್ಲರಳಿದ

ಕನ್ನಡ ಪದ್ಮಾ


 





 
 
 
 
 
 
 
 
 
 
 
ತುಂಡು ಕಾಡಿನಲ್ಲಿದ್ದ ಆನೆ ಹಿಂಡನ್ನು ಮೂಲ ಸ್ಥಾನ ಸೇರಿಸುವ ಹೊಣೆ ಆಕೆಯ ಮೇಲಿತ್ತು. ಮರಿಗಳೂ ಸೇರಿದಂತೆ 75 ಆನೆಗಳಿದ್ದ ಆ ಹಿಂಡನ್ನು ಕರೆದೊಯ್ಯುವ ದಾರಿಯಲ್ಲಿ ದೊಡ್ಡ ಸಂಖ್ಯೆಯ ವಾಹನಗಳು ಚಲಿಸುವ ರಸ್ತೆಯೊಂದನ್ನು ದಾಟಿಸುವ ಹೊತ್ತು. ಆನೆಗಾಗಿ ರಸ್ತೆಯಲ್ಲಿ ವಾಹನ ಚಾಲನೆ ತಡೆದಿದ್ದಕ್ಕೆ ಎಲ್ಲಾ ವಾಹನ ಚಾಲಕರು ಕ್ರುದ್ಧರಾಗಿದ್ದರು.
ಆ ರಾತ್ರಿ ಆನೆಗಳು ನುಗ್ಗಿದ ರಭಸಕ್ಕೆ ಈ ಹೊತ್ತಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೆಲ್ಲಾ ದೂರ ಓಡಿ ಹೋಗಿದ್ದರೂ ಈ ಹೆಣ್ಣು ಮಗಳು ಮಾತ್ರ ಆನೆಗಳು ದಾಟುವ ತನಕ ಅಲ್ಲಿಯೇ ಇದ್ದರು. ತಮಿಳುನಾಡಿನ ಅರಣ್ಯ ಇಲಾಖೆಯಲ್ಲಿರುವ ಕನ್ನಡದ ಕುವರಿ ಸಿ.ಎಚ್, ಪದ್ಮಾ ಅವರು ಮಾತನಾಡುತ್ತಾ ಹೋದಂತೆ ಆನೆ ಕಥೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ತಮಿಳುನಾಡಿನ ಅರಣ್ಯಗಳಲ್ಲಿ ಇವರು ಪದ್ಮಾ ಮೇಡಂ.
ಅವರಿಗೆ ಅರಣ್ಯ, ವನ್ಯ ಜೀವಿಗಳೆಂದರೆ ಪ್ರಾಣಕ್ಕೂ ಮಿಗಿಲಾದ ಪ್ರೇಮ. ಅವರು ತಿರುನೆಲ್ವೇಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ). ತಿರುನೆಲ್ವೇಲಿ ತಮಿಳುನಾಡಿನ ಎರಡನೇ ಅತಿ ದೊಡ್ಡ ಜಿಲ್ಲೆ. ಪಶ್ಚಿಮ ಘಟ್ಟಗಳಿಂದ ರಚನೆಯಾಗಿರುವ ಈ ದಟ್ಟಾರಣ್ಯ ಐತಿಹಾಸಿಕವಾದುದು. ಅದು ಬ್ರಿಟಿಷರು ರಚಿಸಿದ ಅರಣ್ಯ ವಿಭಾಗ.
ಇಲ್ಲಿಯ ವನ ಮತ್ತು ಪ್ರಾಣಿ ಸಂಕುಲವನ್ನು ಕಾಯುವ ಕಾಯಕ ಪದ್ಮಾ ಅವರದು. ಅರಣ್ಯ ಸೇವೆಯಲ್ಲಿ ಅವರು ಮಾಡಿರುವ ಕಾರ್ಯಗಳು ತಮಿಳು ಜನರನ್ನು ಚಕಿತಗೊಳಿಸಿವೆ. ಅರಣ್ಯ ಇಲಾಖೆಯ ಸೇವೆಯೆಂದರೆ ಕೇವಲ ಅರಣ್ಯ ರೋಧನವಲ್ಲ, ಕಾಡಿನಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ ಎಂಬುದನ್ನು ಕಾಡಿನಿಂದ ಹೊರಕ್ಕೆ ತಂದು ತೋರಿಸಿದ್ದಾರೆ.
ಪದ್ಮಾ ಸಾಧನೆಗೆ ಕೇವಲ ತಮಿಳುನಾಡಷ್ಟೇ ಅಲ್ಲ, ಕನ್ನಡಿಗರೂ ಹೆಮ್ಮೆ ಪಡಬೇಕು. ಏಕೆಂದರೆ ಪದ್ಮಾ ಕರ್ನಾಟಕದ ಹಳ್ಳಿ ಹುಡುಗಿ. ಕನಕಪುರ ತಾಲ್ಲೂಕಿನ ಬಿಜ್ಜಳ್ಳಿ ಅವರ ಊರು. ಅವರು ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್ ತರಬೇತಿ ಮುಗಿಸಿ ಬಂದವರೇ ಸತ್ಯಮಂಗಲ ಅರಣ್ಯ ಪ್ರವೇಶ ಮಾಡಿದರು. ಎಲ್ಲರೂ, ಅದು ವೀರಪ್ಪನ್ ಕಾಡು ಎಂದು ಮೂಗು ಮುರಿದರು. ಆದರೆ ಪದ್ಮಾ ಸತ್ಯಮಂಗಲದಲ್ಲಿ ಅರಣ್ಯವನ್ನು ಆರಾಧಿಸತೊಡಗಿದರು.
ಅರಣ್ಯ ಸೇವೆ ಅವರ ಗುರಿಯಾಯಿತು. ಸತ್ಯಮಂಗಲ ಮತ್ತು ವೇಲೂರು ಅರಣ್ಯ ವಿಭಾಗದಲ್ಲಿ ಅವರು ತರಬೇತಿ ಅರಣ್ಯಾಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಹೊಸೂರು ಅರಣ್ಯ ವಿಭಾಗ (ಕೃಷ್ಣಗಿರಿ ಜಿಲ್ಲೆ)ದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)ಯಾಗಿ ನೇಮಕಗೊಂಡರು.
ಹೊಸೂರಿನಲ್ಲಿ ಅವರು ಮಾಡಿದ ಕಾರ್ಯಗಳು ಇಡೀ ರಾಜ್ಯದ ಗಮನ ಸೆಳೆದವು. ಅವರು ಇಟ್ಟ ಹೆಜ್ಜೆಗಳು ಇಲಾಖೆಯ ಪ್ರಶಂಸೆಗೊಳಗಾದವು. ಇಂತಹ ಚೈತನ್ಯಶೀಲ ಯುವ ಅಧಿಕಾರಿಯ ಅವಶ್ಯಕತೆ ಅರಿತ ತಮಿಳುನಾಡು ಸರ್ಕಾರದ ಅರಣ್ಯ ಸಚಿವರು, ಇಲಾಖೆಯ ಮುಖ್ಯ ಕಾರ್ಯದರ್ಶಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್)ಗಳು ಪದ್ಮಾರನ್ನು ಪ್ರತಿಷ್ಠಿತ ತಿರುನೆಲ್ವೇಲಿ ಅರಣ್ಯ ವಿಭಾಗಕ್ಕೆ ಡಿಎಫ್‌ಒ ಆಗಿ ನೇಮಿಸಿದರು. ಜುಲೈ 20, 2012ರಂದು ಪದ್ಮಾ ಅಧಿಕಾರ ವಹಿಸಿಕೊಂಡರು. ಆ ಮೂಲಕ ಜಿಲ್ಲೆಯ ಪ್ರಥಮ ಉನ್ನತ ಅರಣ್ಯಾಧಿಕಾರಿಯಾಗಿ ದಾಖಲೆ ನಿರ್ಮಿಸಿದರು.
ಪ್ರಾಣದ ಹಂಗು ತೊರೆದು...
ತುಂಡು ಕಾಡುಗಳಿಗೆ ವಲಸೆ ಬರುವ ಆನೆಗಳನ್ನು ಮತ್ತೆ ಮೂಲ ಸ್ಥಾನಕ್ಕೆ ಕೊಂಡೊಯ್ಯುವುದು ಬಹಳ ತಲೆ ನೋವಿನ ಕೆಲಸ. 75 ಆನೆಗಳ ಹಿಂಡು ವಲಸೆ ಬಂದಿದ್ದ ಆ ಹಿಂಡಿನಲ್ಲಿ 14 ಮರಿಯಾನೆಗಳು, 7 ದಿನಗಳ ಹಸುಳೆ ಮತ್ತು ತಾಯಿ ಆನೆ ಇದ್ದವು. ಈ ಹಿಂಡನ್ನು ಮೂಲ ಅರಣ್ಯಕ್ಕೆ ಸೇರಿಸುವ ಜವಾಬ್ದಾರಿ ಪದ್ಮಾ ಅವರ ಮೇಲಿತ್ತು.
ಆದರೆ ಆ ಮರಿ ಮತ್ತು ತಾಯಿಯಾನೆ ಹೆಜ್ಜೆ ಇಡಲಿಲ್ಲ. ಆನೆಗಳ ಸೈಕಾಲಜಿ (ಜನ್ಮ ಕೊಟ್ಟ ಜಾಗದಲ್ಲಿ ಆನೆಗಳು ಸ್ವಲ್ಪದಿನ ಇರಲು ಬಯಸುತ್ತವೆ) ಅರಿತಿದ್ದ ಪದ್ಮಾಗೆ ಆ ತಾಯಿ, ಮರಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಕಷ್ಟವಾಗಲಿಲ್ಲ. ಅವುಗಳಿಗೆ ಕಿರಿಕಿರಿ ಮಾಡದೆ ಸೂಕ್ತ ಸಮಯ ಕೊಟ್ಟು, ಅಮ್ಮ, ಮಗುವನ್ನು ಬೇರ್ಪಡಿಸದೇ ಪ್ರತ್ಯೇಕವಾಗಿ ನಡೆಸಿದರು.
ಆ ಆನೆ ಮಾರ್ಗದಲ್ಲಿ ಹೆದ್ದಾರಿಯೊಂದು ಅಡ್ಡ ಬಂತು. ಎರಡೂ ಕಡೆ 50 ಮೀಟರ್ ರಸ್ತೆ ತಡೆಯಲಾಯಿತು. ಆನೆ ಹಿಂಡನ್ನು ನೋಡಲು ಸಾವಿರಾರು ಜನ ಸೇರಿದರು. ಆಗ ರಾತ್ರಿ 10.30. ಕಗ್ಗತ್ತಲನ್ನು ಸೀಳಿ ಆನೆಗಳು ರಸ್ತೆ ದಾಟಿದವು. ಆ ವೇಳೆಗಾಗಲೇ ವಾಹನ ಸವಾರರು ಪದ್ಮಾ ಜೊತೆ ಜಗಳಕ್ಕಿಳಿದಿದ್ದರು. ರಸ್ತೆ ಬಿಡುವಂತೆ ಕಿರುಚುತ್ತಿದ್ದರು. ಇನ್ನೇನು ರಸ್ತೆ ಬಿಡಬೇಕು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡಿದ್ದ ಇನ್ನೊಂದು ಆನೆ ಹಿಂಡು ರಸ್ತೆ ಪ್ರವೇಶಿಸಿದವು.
ಪದ್ಮಾ ಕಿರುಚಿದರು. ಜನ ಓಡಿದರು. ಕೋಪಗೊಂಡ ಆನೆಗಳು ದಾರಿಯಲ್ಲಿ ದಾಟದೇ ವಾಹನಗಳ ಮೇಲೆ ನುಗ್ಗಿದವು. ಪದ್ಮಾ ಆನೆಗಳಿಂದ ಕೇವಲ ಮೂರು ಮೀಟರ್ ಅಂತರದಲ್ಲಿದ್ದರು. ಆನೆಗಳು ವಾಹನಗಳನ್ನು ಜಖಂಗೊಳಿಸಿ ಮುಂದೆ ಓಡಿದವು. ಹೃದಯವನ್ನು ಕೈಯಲ್ಲಿಡಿದುಕೊಂಡಿದ್ದ ಗಾರ್ಡ್‌ಗಳು, ಹಿರಿಯ ಅಧಿಕಾರಿಗಳು ಓಡದೇ ನಿಂತಿದ್ದ ಪದ್ಮಾರನ್ನು ಕಂಡು ನಿಟ್ಟುಸಿರು ಬಿಟ್ಟರು. ಬೈದರು. ಅಂದು ಪದ್ಮಾ ಪ್ರಾಣಾಪಾಯದಿಂದ ಪಾರಾಗಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಕೂಲಿ ಕಾರ್ಮಿಕನ ಮಗಳು...
ಪದ್ಮಾ ಕನಕಪುರ ತಾಲ್ಲೂಕಿನ ಬಿಜ್ಜಳ್ಳಿ ಗ್ರಾಮದ ಚಿಕ್ಕರಾಮಯ್ಯ ಮತ್ತು ಪುಟ್ಟಲಿಂಗಮ್ಮ ದಂಪತಿಗಳ ಪುತ್ರಿ. ತಂದೆ ಚಿಕ್ಕರಾಮಯ್ಯ ದಿನಗೂಲಿ ಕಟ್ಟಡ ಕಾರ್ಮಿಕರಾಗಿದ್ದವರು. ಸಿಮೆಂಟ್, ಇಟ್ಟಿಗೆಗಳ ಜೊತೆ ಕೆಲಸ ಮಾಡುತ್ತಿದ್ದ ಚಿಕ್ಕರಾಮಯ್ಯ ಬೆಂಗಳೂರಿಗೆ ಬಂದರು. ಪುಟ್ಟಲಿಂಗಮ್ಮ ಅವರ ಕೈ ಹಿಡಿದ ಮೇಲೆ ಅವರು ಸಣ್ಣ ಗುತ್ತಿಗೆದಾರರಾಗಿ ಬಡ್ತಿ ಪಡೆದರು. ಮೂರು ಮಕ್ಕಳು, ಪದ್ಮಾ ಜೇಷ್ಠ ಪುತ್ರಿ.
ಇಬ್ಬರು ತಮ್ಮಂದಿರು. ಚಾಮರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಈ ದಂಪತಿ ಮಕ್ಕಳ ವಿದ್ಯೆಗೆ ಆಧಾರವಾಗಿ ನಿಂತರು. ಜೊತೆಗೆ ಮಾವ ಶಿಕ್ಷಕ ವಿ. ಶ್ರೀನಿವಾಸ್ ಅವರ ಮಾರ್ಗದರ್ಶನ ಪದ್ಮಾರಿಗಿತ್ತು.ಪದ್ಮಾ ಚಿಕ್ಕಂದಿನಿಂದಲೂ ಎಲ್ಲದರಲ್ಲೂ ಮುಂದು. ಬಾಲ್ಯದಲ್ಲಿ ಲಗೋರಿ, ಸೈಕಲ್ ಹೊಡೆಯುವುದೆಂದರೆ ಅಚ್ಚುಮೆಚ್ಚು. ಆಗಲೇ ಲಾಲ್‌ಬಾಗ್, ಕಬ್ಬನ್‌ಪಾರ್ಕ್‌ಗಳ ಬಗ್ಗೆ ಇಂಚಿಂಚೂ ಗೊತ್ತಿತ್ತು. ಜಿಂಕೆ ಪಾರ್ಕ್ ಎಂದರೆ ಇನ್ನೂ ಇಷ್ಟ. ಜೊತೆಗೆ ವಿದ್ಯೆಯಲ್ಲಿ ಎಲ್ಲರಿಗಿಂತಲೂ ಮುಂದು. ಎಲ್‌ಕೆಜಿಯಿಂದ ಐಎಫ್‌ಎಸ್‌ವರೆಗೂ ಉನ್ನತ ದರ್ಜೆಯನ್ನು ಯಾರಿಗೂ ಬಿಟ್ಟು ಕೊಟ್ಟವರಲ್ಲ!
ಮೆಡಿಕಲ್ ಸೀಟ್ ತಿರಸ್ಕಾರ
ಪದ್ಮಾ ಪಿಯುಸಿ ಕಲಿಯುತ್ತಿದ್ದಾಗಲೇ ಭವಿಷ್ಯದ ಗುರಿ ಸ್ಪಷ್ಟವಾಗಿತ್ತು. ದಾವಣಗೆರೆಯಲ್ಲಿ ಸಿಕ್ಕಿದ್ದ ಮೆಡಿಕಲ್ ಸೀಟನ್ನು ತಿರಸ್ಕರಿಸಿ ಬೆಂಗಳೂರಿನಲ್ಲಿ ಬಿಎಸ್‌ಸಿ ಸೇರಿದರು. ಮೆಡಿಕಲ್ ಸೇರಿದರೆ ಪದವಿ ಮುಗಿಸಲು ಐದು ವರ್ಷ ಬೇಕು. ಬದುಕಿನಲ್ಲಿ ನೆಲೆಗೊಳ್ಳಲು ಅವರಿಗೊಂದು ಪದವಿ ಮಾತ್ರ ಬೇಕಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅವರ ಗುರಿ.
ಜೊತೆಗೆ ಅಪ್ಪ ಅನುಭವಿಸಿದ ಕಷ್ಟಗಳೆಲ್ಲವನ್ನು ಬಡಿದೋಡಿಸಲು ಅವರಿಗೆ ಬೇಕಾಗಿದ್ದುದು ಒಂದು ಪದವಿ ಮಾತ್ರ. ಪದವಿ ಮುಗಿದ ಕೂಡಲೇ ಸ್ನೇಹಿತರೆಲ್ಲಾ ಬೆಂಗಳೂರು ವಿವಿಯಲ್ಲಿ ಎಂಎಸ್‌ಸಿ ಪ್ರವೇಶ ಪರೀಕ್ಷೆ ಬರೆದರೆ, ಪದ್ಮಾ ಹೊರಟದ್ದು ಮಲ್ಲೇಶ್ವರದ ರಾವ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಕ್ಕೆ. ನಿವೃತ್ತ ಐಎಎಸ್ ಅಧಿಕಾರಿ ರಾವ್ ಹಾಗೂ ತರಬೇತಿ ಕೇಂದ್ರದಲ್ಲಿ ಶಿಕ್ಷಕರಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಆರಂಭಿಸಿದರು.
ಮೊದಲ ಬಾರಿಗೆ 2003ರಲ್ಲಿ ಐಎಎಸ್ ಪರೀಕ್ಷೆ ಬರೆದು ಕೇವಲ 17 ಅಂಕಗಳಿಂದ ಅವಕಾಶ ವಂಚಿತರಾದರು. ಅದೇ ವೇಳೆಗೆ ‘ವಲಯ ಅರಣ್ಯಾಧಿಕಾರಿ ನೇಮಕಾತಿ ಪರೀಕ್ಷೆ’ಗೆ ಅರ್ಜಿ ಕರೆಯಲಾಗಿತ್ತು. ಆ ಪರೀಕ್ಷೆಯಲ್ಲಿ ಪದ್ಮಾ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಕೊಯಮತ್ತೂರಿನ ಫಾರೆಸ್ಟ್ ಟ್ರೈನಿಂಗ್ ಕಾಲೇಜಿನಲ್ಲಿ ಎರಡು ವರ್ಷ ಕಠಿಣ ತರಬೇತಿ ಪಡೆದು ರಾಜ್ಯ ಅರಣ್ಯ ಇಲಾಖೆಗೆ ಮರಳಿದರು. ಅವರು ಮೈಸೂರು ಅರಣ್ಯ ವಿಭಾಗದ ‘ಎಚ್.ಡಿ. ಕೋಟೆ ಸಾಮಾಜಿಕ ಅರಣ್ಯ ವಲಯ’ಕ್ಕೆ ವಲಯ ಅರಣ್ಯಾಧಿಕಾರಿಯಾಗಿ (ಆರ್‌ಎಫ್‌ಒ) ನೇಮಕಗೊಂಡರು.
ಸಾಲು ಸಸಿಗಳ ಪದ್ಮಕ್ಕ!
ಪದ್ಮಾ ಎಚ್.ಡಿ. ಕೋಟೆಗೆ ಬರುವವರೆಗೂ ಸಾಮಾಜಿಕ ಅರಣ್ಯದಲ್ಲಿ ಏನೇನೂ ಕೆಲಸಗಳಾಗಿರಲಿಲ್ಲ. ಯುವ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸಂಘಟಿಸಿ ತಾಲ್ಲೂಕಿನಲ್ಲಿ ಅರಣ್ಯೀಕರಣ ಕಾರ್ಯ ಕೈಗೊಂಡರು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಶಾಲೆ, ರಸ್ತೆಯಲ್ಲಿ ಸಸಿ ನೆಡಿಸಿದರು. ಮೊದಲ ವರ್ಷವೇ ರೈತರಿಗೆ 5 ಲಕ್ಷ ಸಸಿ ವಿತರಿಸಿದರು. ಗ್ರಾ.ಪಂ. ಸದಸ್ಯರ ಮುಂದೆ ರೈತರು ಸಸಿಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಆಗ ಎಚ್.ಡಿ. ಕೋಟೆಯಲ್ಲಿ ಸಸ್ಯ ಕ್ರಾಂತಿಯೇ ನಡೆಯಿತು. ಇಂದಿಗೂ ಪದ್ಮಾ ಎಚ್.ಡಿ. ಕೋಟೆಯಲ್ಲಿ ‘ಸಾಲು ಸಸಿಗಳ ಪದ್ಮಕ್ಕ’ನೆಂದೇ ಪ್ರಸಿದ್ಧಿ. ಅವರ ಕಾರ್ಯಗಳು ಇಂದಿಗೂ ಸಸಿಗಳಂತೆಯೇ ಹಸಿರಾಗಿವೆ.
ಪದ್ಮಾ ಎಚ್.ಡಿ. ಕೋಟೆಯಲ್ಲಿ ಮುಳುಗಿ ಹೋಗಲಿಲ್ಲ. ಮತ್ತೆ ಅಧ್ಯಯನ ಮುಂದುವರಿಸಿದರು. 2007ರಲ್ಲಿ ಐಎಫ್‌ಎಸ್ ಪರೀಕ್ಷೆ ಬರೆದು ಯಶಸ್ವಿಯಾದರು. ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಎರಡು ವರ್ಷ ತರಬೇತಿ ಮುಗಿಸಿ, ಇಡೀ ದೇಶದ ಅರಣ್ಯ ಚಿತ್ರವನ್ನು ಕಣ್ಣಿಗೆ ಕಟ್ಟಿಕೊಂಡು ಈಗ ತಮಿಳುನಾಡಿನಲ್ಲಿ ಡಿಎಫ್‌ಒ ಆಗಿ ನೆಲೆ ನಿಂತಿದ್ದಾರೆ.
ಹೊಸ ಪರಂಪರೆಗೆ ನಾಂದಿ
ಪದ್ಮಾ ಕಾಡಿನಲ್ಲಿ ಕುಟುಂಬವನ್ನು ಕಂಡಿದ್ದಾರೆ. ಸದಾ ಅಪಾಯವನ್ನು ಕಟ್ಟಿಕೊಂಡು ಬದುಕುವ ಇಲಾಖೆಯ ಕೆಳಹಂತದ ನೌಕರರನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ಅವರು ಹೊಸೂರು ಅರಣ್ಯ ವಿಭಾಗದಲ್ಲಿ ಆನೆ ಮತ್ತು ಮಾನವ ಸಮರವನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದಕ್ಕೆ ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆಯಂದು 50,000 ನಗದು ಬಹುಮಾನ ಬಂತು.
ಈ ಹಣವನ್ನು ಪದ್ಮಾ ಇಲಾಖೆಯ ಕೆಳ ಹಂತದ ನೌಕರರಿಗೆ ಚೈತನ್ಯ ತುಂಬಲು ಬಳಸಿದರು. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಸಾಂಸ್ಕೃತಿಕ ಸಂಜೆ ಆಯೋಜಿಸಿದರು. ನೌಕರರ ಕುಟುಂಬ ಸದಸ್ಯರನ್ನು ಕರೆಸಿ ರಂಗೋಲಿ, ಚರ್ಚಾಸ್ಪರ್ಧೆ, ಕ್ವಿಜ್, ಆಟೋಟ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಿ ‘ಡಿಎಫ್‌ಒ ಬಹುಮಾನ’ ಕೊಟ್ಟರು. ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಜೊತೆಗೆ ಆನೆ ಸಾಗಣೆಯಲ್ಲಿ ಸಹಾಯ ಮಾಡಿದ ಸಾರ್ವಜನಿಕರು, ಎನ್‌ಜಿಒ ಸದಸ್ಯರು, ಬೆಳೆ ನಾಶವಾದಾಗ ರೈತರಿಗೆ ಬೇಗ ಅನುಮೋದನೆ ಕೊಟ್ಟ ಗ್ರಾಮ ಲೆಕ್ಕಗರನ್ನು ಗುರುತಿಸಿ ಬಹುಮಾನ ಕೊಟ್ಟರು. ಆ ಮೂಲಕ ಪದ್ಮಾ ತಮಿಳುನಾಡಿನಲ್ಲಿ ಹೊಸ ಪರಂಪರೆ ಸೃಷ್ಟಿಸಿದರು. ಆ ಮೂಲಕ ಸಾಮಾಜಿಕವಾಗಿ ದೂರವಿದ್ದ ಅರಣ್ಯ ಇಲಾಖೆಯನ್ನು ಮುಖ್ಯವಾಹಿನಿಗೆ ತರಲು ಯತ್ನಿಸಿದರು. ಪದ್ಮಾರ ಈ ಯತ್ನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂತು.
ನೆಲ್ಮಾರ್ ಅರಣ್ಯ ಅತಿಕ್ರಮಣ ಪ್ರಕರಣದಲ್ಲಿ ಅತಿಕ್ರಮಣಕಾರರ ಜೊತೆ ಮಾತನಾಡಿ ನೂರಾರು ಎಕರೆ ಅರಣ್ಯ ಭೂಮಿ ರಕ್ಷಿಸಿದ ಕೀರ್ತಿ ಪದ್ಮಾರ ಮೇಲಿದೆ. ಆನೆ ಸಾಗಣೆ ಕಾಲದಲ್ಲಿ ಶಾಲಾ ಮಕ್ಕಳ ಸಂರಕ್ಷಣೆ, ಕಾಡಿನಲ್ಲಿ ಕುಡಿಯುವ ನೀರಿಗೆ ತೊರೆಗಳ ರಕ್ಷಣೆ, ಅಪರೂಪದ ವನ್ಯಗಳ ರಕ್ಷಣೆ ಮುಂತಾದ ಕಾರ್ಯಗಳಲ್ಲಿ ಪದ್ಮಾ ಹೆಸರುವಾಸಿಯಾಗಿದ್ದಾರೆ.
ದೊರೈವೀಡು’ ವಾಸ
ಪದ್ಮಾ ತಿರುನೆಲ್ವೇಲಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ವಾಸಿಸುತ್ತಿದ್ದ ‘ದೊರೈವೀಡು’ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದಾರೆ. ಅದು 50 ಬಾಗಿಲುಗಳ ಭವ್ಯ ಬಂಗಲೆ. ಒಂದೊಂದು ಕಂಬವೂ ಒಂದೊಂದು ಕತೆ ಹೇಳುತ್ತವೆ. ಹಿಂದಿನ ಅಧಿಕಾರಿಗಳು ಬಂಗಲೆಯ ಒಂದು ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದು, ಮಿಕ್ಕ ಭಾಗವನ್ನು ಕತ್ತಲೆಯಲ್ಲಿ ಮುಳುಗಿಸಿದ್ದರು. ಆದರೆ ಪದ್ಮಾ ಸ್ಮಾರಕ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿ ಹೊಸ ರೂಪಕೊಟ್ಟಿದ್ದಾರೆ. ಅದು ನವಿಲು, ಬಾತುಕೋಳಿ, ಜಿಂಕೆ ಮುಂತಾದ ಪ್ರಾಣಿ, ಪಕ್ಷಿಗಳ ಸ್ವರ್ಗ. ಅಲ್ಲಿ ಸದಾ ತಮ್ಮಿಷ್ಟದ ಸಂಗೀತ ಮೊಳಗುತ್ತಿರುತ್ತದೆ. ಈಗ ಆ ಬಂಗಲೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಪದ್ಮಾ ಹೊಸ ತಲೆಮಾರಿನ ಉನ್ನತ ಅರಣ್ಯಾಧಿಕಾರಿ. ಅವರು ಕಾಡಿನಲ್ಲಿ ಮುಳುಗಿ ಹೋಗಿಲ್ಲ. ಸಾಮಾಜದ ಜೊತೆ ಸಂಪರ್ಕದಲ್ಲಿದ್ದಾರೆ. ಏನೇ ಹೊಸತು ಎನಿಸಿದರೂ ಅದನ್ನು ಕಲಿಯುವ ಮನಸ್ಥಿತಿ ಅವರದು. ಅವರ ಫೇಸ್‌ಬುಕ್ ಅಕೌಂಟ್ ಹಿಂದೆ ಸಾವಿರಾರು ಯುವಜನ ಇದ್ದಾರೆ. ಅಲ್ಲಿ ಅವರು ಅರಣ್ಯ ಸೇವೆಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ವಿವಿಧ ಭಾಷೆಗಳ ಚಲನಚಿತ್ರ ವೀಕ್ಷಣೆ, ಟ್ರೆಕ್ಕಿಂಗ್, ಪ್ರಯಾಣ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಅವರ ಹವ್ಯಾಸಗಳು.
ಉನ್ನತ ಅಧಿಕಾರಿಯಾದರೂ ಪದ್ಮಾ ಅಧ್ಯಯನ ನಿಲ್ಲಿಸಿಲ್ಲ. ಹಲವು ಅರಣ್ಯ, ವನ್ಯ ನಿಯತಕಾಲಿಕಗಳಿಗೆ ಸಂಶೋಧನಾ ಲೇಖನ ಬರೆಯುತ್ತಿದ್ದಾರೆ. ಐದು ಭಾಷೆ ಮಾತನಾಡುವ ಅವರಿಗೆ ಭಾಷೆ ಎಂದಿಗೂ ಬೇಲಿಯಾಗಿಲ್ಲ. ನಾಡಿನಲ್ಲಿ ಇಲ್ಲದ ಶಾಂತಿ, ಸುವ್ಯವಸ್ಥೆಯನ್ನು ಅವರು ಕಾಡಿನಲ್ಲಿ ಕಂಡಿದ್ದಾರೆ. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿದ್ದಾರೆ.
ತಮ್ಮ ಕನಸು ನನಸಿಗೆ ತಮಿಳುನಾಡು ಸೂಕ್ತ ಜಾಗ ಎಂದು ಅವರಿಗನ್ನಿಸಿದೆ. ಕನ್ನಡ ನಾಡಿನಿಂದ ಹೋಗಿ ತಮಿಳುನಾಡಿನಲ್ಲಿ ಖ್ಯಾತಿ ಪಡೆದ ರಾಜಕಾರಣಿಗಳಿದ್ದಾರೆ, ಚಿತ್ರನಟರಿದ್ದಾರೆ. ಈಗ ಉನ್ನತಾಧಿಕಾರಿಯಾಗಿ ತಮಿಳುನಾಡಿನಲ್ಲಿ ಪದ್ಮಾ ಅರಳುತ್ತಿದ್ದಾರೆ. ಹಾಗಾಗಿ ಪದ್ಮಾ ತಮಿಳುನಾಡಿನ ಪ್ರೀತಿಯ ‘ಕಾವೇರಿ’ಯಾಗಿದ್ದಾರೆ! ಪದ್ಮಾ ಜೊತೆ ಮಾತನಾಡಲು
ಇ- ಮೇಲ್: chpadmaifs@gmail.com
– ಯೋಗೇಶ್ ಮಾರೇನಹಳ್ಳಿ.

Friday, November 15, 2013

ರಾಮಾಪುರದಿಂದ ಜಿನೀವಾ ತನಕ

 

ಐದನೇ ತರಗತಿಯಲ್ಲಿರುವಾಗಲೇ ಮಕ್ಕಳ ನಡುವೆ ಈಕೆಗೆ ನಾಯಕಿಯ ಸ್ಥಾನವಿತ್ತು. ಆಗಲೂ ಅಷ್ಟೇ ವಯಸ್ಸು, ಸಣ್ಣದಾಗಿದ್ದರೂ ಆಡುವ ಮಾತುಗಳು ದೊಡ್ಡವಾಗಿದ್ದವು. ಈಗ ಪದವಿ ಪೂರ್ವ ವಿದ್ಯಾರ್ಥಿನಿ. ಮಾತು ಮತ್ತು ಕ್ರಿಯೆಗಳಲ್ಲಿ ಮಾತ್ರ ನುರಿತ ಹೋರಾಟಗಾರ್ತಿಯ ಪರಿಣತಿ ಕಾಣಿಸುತ್ತದೆ.
ಆಕೆ ಹೊರಾಟಕ್ಕಾಗಿ ಆರಿಸಿಕೊಂಡಿರುವ ವಿಚಾರಗಳೂ ಅಷ್ಟೇ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ಕಟ್ಟಿಸಿ ಎಂಬ ತನ್ನ ಮಾತನ್ನು ಸರ್ಕಾರ ಕೇಳಿಸಿಕೊಳ್ಳುವಂತೆ ಹೇಳುವ ಈಕೆ ಸೈಕಲ್‌ನಲ್ಲಿ ಊರೂರು ಸುತ್ತಿ ಪರಿಸರ ಉಳಿಸಿ ಎಂದು ಜನ ಜಾಗೃತಿ ಮೂಡಿಸುವುದಕ್ಕೂ ಸಿದ್ಧ. ಸಾಮೂಹಿಕ ವಿವಾಹಗಳು ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಬಾಲ್ಯ ವಿವಾಹ ನಡೆಯುತ್ತಿದ್ದರೆ ಅದನ್ನು ಪತ್ತೆ ಹಚ್ಚುವ ತನಿಖಾ ಪಟುತ್ವವೂ ಈ ಪದವಿ ಪೂರ್ವ ತರಗತಿಯ ವಿದ್ಯಾರ್ಥಿನಿಗಿದೆ.
ಈಕೆ ಯಾರು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ವಿಶ್ವಸಂಸ್ಥೆಯ ತನಕ ಹೋಗಿಬಂದ ಧಾರವಾಡದ ರಾಮಾಪುರ ಗ್ರಾಮದ ಮಂಜುಳಾ ಮಹಾಂತೇಶ ಮುನವಳ್ಳಿ. 10ನೇ ವಯಸ್ಸಿನಲ್ಲಿ ಮಕ್ಕಳ ಪರ ಮಾತನಾಡುವುದನ್ನು ಆರಂಭಿಸಿದ ಈಕೆ ಈಗ ಧಾರವಾಡದ ಎಲ್‌ಆರ್‌ಎಸ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ವಯಸ್ಸು ಹದಿನೇಳು.
ಹಿಂದೆ ಮಕ್ಕಳ ಪ್ರತಿನಿಧಿಯಾಗಿ ಮಾತಿಗಿಳಿಯುತ್ತಿದ್ದ ಮಂಜುಳಾ ಈಗ ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ ಅಖಾಡಕ್ಕಿಳಿಯುತ್ತಾರೆ. ಮಂಜುಳಾ ಕೇವಲ ಹುಬ್ಬಳ್ಳಿ–ಧಾರವಾಡಕ್ಕೆ ಸೀಮಿತವಾಗಿಲ್ಲ, ಅವರ ಪ್ರತಿಭೆ ಸಮುದ್ರದಾಚೆಗೂ ಸಾಗಿದೆ. ಅಕ್ಟೋಬರ್‌ 10ರಂದು ಜಿನೀವಾದಲ್ಲಿ ನಡೆದ 66ನೇ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ವಿಚಾರ ಮಂಡಿಸಿದ್ದಾರೆ.
ಆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಂಜುಳಾ ಕನ್ನಡ ನುಡಿಯನ್ನು ಬಳಸಿದ್ದಾರೆ. ಎಂಟು ನಿಮಿಷದ ವಿಷಯ ಮಂಡನೆಯಲ್ಲಿ ಕರ್ನಾಟಕದ ವಿವಿಧ ಶೈಕ್ಷಣಿಕ ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಹೇಳಿದಂತೆಯೇ ಕ್ಷೀರಭಾಗ್ಯ,  ಪೌಷ್ಟಿಕಾಂಶದ ಮಾತ್ರೆಗಳ ವಿತರಣೆ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಇರುವ ಹಲವು ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸುನೀಗಿದ ಮಕ್ಕಳ ಕುರಿತೂ ಹೇಳಿದ್ದಾರೆ. ಇವೆಲ್ಲವುಗಳ ಜೊತೆಗೆ ಕಡ್ಡಾಯ ಶಿಕ್ಷಣ ಕಾಯ್ದೆಯಲ್ಲಿ ಉಚಿತ ಶಿಕ್ಷಣ ಪಡೆಯುವ ಮಕ್ಕಳ ವಯಸ್ಸನ್ನು 6ರಿಂದ 18ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಾಲ ಕಾರ್ಮಿಕರ ಕಾನೂನಿನಲ್ಲಿರುವ ‘ಬಾಲಕಾರ್ಮಿಕರು’ ಪದದ ಆರ್ಥವನ್ನು ‘ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವವರು ಮಾತ್ರ’ ಎಂಬ ವಾಖ್ಯೆಯನ್ನು  ‘ದುಡಿಯುವ ಮಕ್ಕಳು’ ಎಂದು ಬದಲಾಯಿಸಬೇಕು ಎಂಬ ಸಲಹೆ ಮಂಜುಳಾ ಅವರದ್ದು. ಹಾಗೆಯೇ ಬಾಲಾಪರಾಧಿ ಕಾನೂನಿನಲ್ಲಿ ‘ಬಾಲಾಪರಾಧಿ’ಗಳ ವಯಸ್ಸನ್ನು 18ಕ್ಕೆ ಏರಿಸುವ ಪ್ರಸ್ತಾಪಕ್ಕೂ ಅವರ ಬಲವಾದ ವಿರೋಧವಿದೆ.
ಹಸಿರು ಕಾನನದ ರಾಮಾಪುರ
ಧಾರವಾಡದಿಂದ 22 ಕಿ.ಮೀ ದೂರದಲ್ಲಿರುವ ರಾಮಾಪುರ ಕಾಡಿನ ನಡುವಣ ಹಳ್ಳಿ. ಇಲ್ಲಿಂದ ಧಾರವಾಡಕ್ಕೆ ಬರುವುದಕ್ಕೆ ಬೆಳಿಗ್ಗೆ 7.15ಕ್ಕೆ ಒಂದು ಬಸ್ ಇದೆ. ಇದನ್ನು ಬಿಟ್ಟರೆ 9.30ರವರೆಗೆ ಕಾಯಬೇಕು. ಮಂಜುಳಾ ಬೇಗನೆ ಎದ್ದು 7.15ರ ಬಸ್‌ ಹತ್ತಿ ಧಾರವಾಡಕ್ಕೆ ಬಂದು ಕಾಲೇಜು ಮತ್ತು ಮಕ್ಕಳ ಸಂಘದ ಚಟುವಟಿಕೆ ಮುಗಿಸಿಕೊಂಡು ಮನೆಗೆ ತೆರಳುವುದು ಸಂಜೆಗೆ. ರೈತ ಕುಟುಂಬದ ಮಂಜುಳಾಗೆ ಮನೆ ಕೆಲಸ, ಹೊಲಗೆಲಸವೂ ಗೊತ್ತು.
ಕಾಲೇಜಿನಿಂದ ಮನೆಗೆ ಬಂದ ನಂತರ ಎಮ್ಮೆ, ದನ ಕಟ್ಟುವುದು, ತಿಂಡಿ ಕೊಡುವುದು, ಮೇವು ಹಾಕುವ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ರಜೆಯ ದಿನಗಳಲ್ಲಿ ಜೋಳ ಬಿಡಿಸುವುದು, ಕಳೆ ಕೀಳುವ, ಗೊಬ್ಬರ ಹಾಕುವ ಕೆಲಸಗಳನ್ನೂ ಮಾಡುತ್ತಾರೆ. ತಂದೆ ಮಹಾಂತೇಶ ಬಸಪ್ಪ ಮುನವಳ್ಳಿ, ತಾಯಿ ಮಹಾದೇವಿ. ನೇತ್ರಾವತಿ, ಪ್ರತೀಕ್ಷಾ ಎಂಬ ಇಬ್ಬರು ತಂಗಿಯರು, ಬಸವರಾಜನೆಂಬ ತಮ್ಮ ಇರುವ ತುಂಬು ಕುಟುಂಬದಲ್ಲಿ ಮಂಜುಳಾರದ್ದೇ ಮೇಲುಗೈ. ಆಕೆ ಹೇಳುವ ಮಾತುಗಳಿಗೆ ಮನೆಯಲ್ಲೂ ಊರಿನಲ್ಲೂ ಒಂದು ಮಹತ್ವವಿದೆ.
ಮಂಜುಳಾ ಸಾರ್ವಜನಿಕವಾಗಿ ಮೊದಲು ಮಾತನಾಡಿದ್ದು ರಾಮಾಪುರ ಗ್ರಾಮ ಪಂಚಾಯಿತಿಯ ‘ಮಕ್ಕಳ ಗ್ರಾಮ ಸಭೆ’ಯಲ್ಲಿ. 2005ರಿಂದ ಅವರು ಮಕ್ಕಳ ಗ್ರಾಮಸಭೆಯ ಪ್ರತಿನಿಧಿ. ಪಂಚಾಯಿತಿ ವ್ಯಾಪ್ತಿಯ ಮಕ್ಕಳನ್ನು ಒಂದೆಡೆ ಸೇರಿಸಿ ಗ್ರಾಮದ ಹಾಗೂ ಶಾಲೆಗಳ ಸಮಸ್ಯೆಗಳ ಸದಸ್ಯರು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕು ಎಂಬುದನ್ನು ಮುಖ್ಯವಾಗಿ ಚರ್ಚಿಸುತ್ತಿದ್ದರು. ಇತರೆ ಶಾಲಾ ಮಕ್ಕಳು ಅಧಿಕಾರಿಗಳನ್ನು ಪ್ರಶ್ನೆ ಕೇಳುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದರು. ಇದು ಅವರ ಸಂಘಟನಾ ಚಾತುರ್ಯದ ಬೆಳವಣಿಗೆಗೆ ಕಾರಣವಾಯಿತು.
ಈ ಎಲ್ಲಾ ಚಟುವಟಿಕೆಗಳು ಅವರ ಪಠ್ಯ ಸಂಬಂಧಿ ಸಾಧನೆಗಳನ್ನೇನೂ ಮುಕ್ಕಾಗಿಸಲಿಲ್ಲ. ಅಲ್ಲಿಯೂ ಅವರು ಯಶಸ್ಸಿನ ಹಾದಿಯಲ್ಲೇ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಆಶುಭಾಷಣ ಸ್ಪರ್ಧೆ, ಗಾದೆ ಹೇಳುವ ಸ್ಪರ್ಧೆ, ವಚನ ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ. ಯಾವುದೇ ವಿಷಯ ಕೊಟ್ಟರೂ ಅರಳು ಹುರಿದಂತೆ ಮಾತನಾಡುತ್ತಿದ್ದ ಮಂಜುಳಾ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ರಾಮಾಪುರದಲ್ಲೇ ಮುಗಿಸಿದ ಮಂಜುಳಾ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಸಮೀಪದ ವೀರಾಪುರದಲ್ಲಿ ಪೂರೈಸಿದರು.
ಗುಬ್ಬಚ್ಚಿ ಮಕ್ಕಳ ಸಂಘ
ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿ ಸೇವಾ ಸಂಸ್ಥೆ, ಗುಲಾಬಿ ಮಕ್ಕಳ ಸಂಘದ ಪ್ರತಿನಿಧಿ ಹುದ್ದೆ ಸೇರಿದಂತೆ ರಾಜ್ಯದ ಹಲವು ಮಕ್ಕಳ ಸಂಘಗಳ ಪ್ರತಿನಿಧಿಯಾಗಿ ಮಂಜುಳಾ ಕಾರ್ಯ ನಿರ್ವಹಿಸುತ್ತಿದ್ದಾರೆ. 2008ರಲ್ಲಿ ಗುಬ್ಬಚ್ಚಿ ಮಕ್ಕಳ ಮಹಾಸಂಘದ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಮೇಲೆ ಉತ್ತರ ಕರ್ನಾಟಕದಲ್ಲಿ ಮಂಜುಳಾ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಧಾರವಾಡ ಜಿಲ್ಲೆಯ 10 ಗ್ರಾಮಗಳಲ್ಲಿ ಸೈಕಲ್‌ ಸಂಚಾರ ಮಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ಪರಿಸರ ಸಂರಕ್ಷಣೆಯ ಕರಪತ್ರ ಹಂಚುವುದು, ಭಿತ್ತಿ ಪತ್ರಗಳ ಪ್ರದರ್ಶನ, ಮಕ್ಕಳನ್ನು ಶಾಲೆಗೆ ಕರೆತರುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಭಾಗವಹಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗಳನ್ನು ಸಂವಾದಕ್ಕೆ ಆಹ್ವಾನಿಸಿ ಮಕ್ಕಳ ಹಕ್ಕುಗಳ ಕುರಿತು ಅವರೊಂದಿಗೆ ಚರ್ಚಿಸಿ ಗಮನಸೆಳೆದಿದ್ದಾರೆ. ಸಾಮೂಹಿಕ ವಿವಾಹ ನಡೆಯುವ ಸ್ಥಳಗಳಿಗೆ ತೆರಳಿ ಬಾಲ್ಯ ವಿವಾಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ತಮ್ಮ ಗುಬ್ಬಚ್ಚಿ ಸಂಘದ ಮೂಲಕ ಮಾಡುತ್ತಿದ್ದಾರೆ.
ಮಕ್ಕಳ ಹಕ್ಕುಗಳ ವರದಿ
ಜಿನೀವಾ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಮಂಜುಳಾಗೆ ದೊರೆಯಲು ಕೇವಲ ಚರ್ಚಾಸ್ಪರ್ಧೆ, ಮಕ್ಕಳ ಪರ ಚಟುವಟಿಕೆಗಳು ಮಾತ್ರ ಕಾರಣವಲ್ಲ. ಕರ್ನಾಟಕದ ಮಕ್ಕಳ ಸ್ಥಿತಿಗತಿಯ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸುವ ರಾಜ್ಯಮಟ್ಟದ ಸ್ಪರ್ಧೆಯೊಂದು ನಡೆಯಿತು. ಇದರಲ್ಲಿ 300 ಮಕ್ಕಳು ಭಾಗವಹಿಸಿದ್ದರು. ಇವರಲ್ಲಿ ಮಂಜಳಾ ಹಾಗೂ ಮೈಸೂರು ಮತ್ತು ದಕ್ಷಿಣ ಕನ್ನಡದಿಂದ ಮೂವರನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆರಿಸಲಾಯಿತು. ನಂತರ ನಡೆದ ‘ಆಲ್ಟರ್ನೇಟಿವ್‌ ಚೈಲ್ಡ್  ರಿಪೋರ್ಟ್‌’ ತಯಾರಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಂಜುಳಾ ಸೇರಿ 9 ಮಕ್ಕಳು ಆಯ್ಕೆಯಾದರು. ನಂತರ ಇನ್ನೊಂದು ಪರಿಷ್ಕೃತ ರಾಷ್ಟ್ರಮಟ್ಟದ ಸ್ಪರ್ಧೆ ನಡೆಸಲಾಯಿತು. ಅದರಲ್ಲಿ ಕರ್ನಾಟಕದ ಮಂಜುಳಾ ಮತ್ತು ಗುಜರಾತ್‌ನ ಅಪ್ಸಾನ ಆಯ್ಕೆಯಾಗಿ ಜಿನೀವಾ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದರು.
ಕಾನೂನು ಕಲಿಯುವ ಗುರಿ
ಮಂಜುಳಾರ ಮಾತುಗಳನ್ನು ಕೇಳಿಸಿಕೊಂಡವರೆಲ್ಲರೂ ಆಕೆಗೆ ನಾಗರಿಕ ಸೇವೆಗಳಿಗೆ ಸೇರುವ ಸಲಹೆ ಮಾಡುತ್ತಾರೆ. ಆದರೆ ಆಕೆಯ ಮನಸ್ಸಿನಲ್ಲಿರುವುದೇ ಬೇರೆ. ‘ಐಎಎಸ್‌ ಮಾಡಿ ಅಧಿಕಾರಿಯಾದರೆ ಹೋರಾಟಗಾರ್ತಿಯಾಗಿ ಅಖಾಡಕ್ಕಿಳಿಯಲು ಸಾಧ್ಯವಿಲ್ಲ. ಮಕ್ಕಳ ಹಕ್ಕುಗಳಿಗಾಗಿ ಹೋರಾಡುವುದೇ ನನ್ನ ಗುರಿ. ಅದಕ್ಕಾಗಿ ಕಾನೂನು ಅಧ್ಯಯನ ಮಾಡುತ್ತೇನೆ. ಪಿಯುಸಿ ಮುಗಿಯುತ್ತಲೇ ಕಾನೂನು ಶಿಕ್ಷಣಕ್ಕೆ ಸೇರುತ್ತೇನೆ’ ಎನ್ನುತ್ತಾರೆ ಮಂಜುಳಾ.
ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಂಜುಳಾ ಮನೋಭಾವವೂ ಬದಲಾಗಿದೆ. ಇಷ್ಟು ದಿನ ಮಕ್ಕಳ ಜೊತೆ ಮಗುವಾಗಿರುತ್ತಿದ್ದ ಮಂಜುಳಾ, ಮಕ್ಕಳ ಜೊತೆ ಹೋರಾಟಗಾರ್ತಿಯಾಗಿರುವ ನಿರ್ಧಾರ ಮಾಡಿದ್ದಾರೆ. ಮಂಜುಳಾ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ, ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದರೂ ಅವರ ವಯೋ ಸಹಜ ಮುಗ್ಧತೆ ಅಳಿಸಿಲ್ಲ. ಕಾನೂನುಗಳ ಬಗ್ಗೆ ಮಾತನಾಡಿದರೂ ಐಸ್‌ಕ್ರೀಂ ಮೇಲಿನ ಪ್ರೀತಿ ಹೋಗಿಲ್ಲ.
ಪ್ರಜ್ವಲ್‌ ದೇವರಾಜ್‌ ಅಭಿನಯದ ಚಿತ್ರಗಳೆಂದರೆ ಅವರಿಗಿಷ್ಟ. ನಟಿ ಐಂದ್ರಿತಾ ರೇ ಅಂದರೆ ಮಂಜುಳಾ ಕಣ್ಣು ಕೆಂಪಾಗುತ್ತವೆ. ‘ಅಮ್ಮಾ ನಿನ್ನ ಎದೆಯಾಳದಿಂದ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು’ ಅವರ ಇಷ್ಟವಾದ ಹಾಡು.

Friday, July 29, 2011

ಶಹಬ್ಭಾಸ್ ಶರ್ವಾನಿ!













ಸಿಂಫಲ್ ನೀತಾ, ಸೈಲೆಂಟ್ ಮುಖೇಶ್!










ಅದು ಮುಂಬೈ ಮಹಾನಗರದ ಪೆಡ್ಡರ್ ರೋಡು. ಮುಂಜಾನೆ ಎಂಟು ಗಂಟೆ. ಪೀಕ್ ಅವರ್. ಗಿಜಿಗಿಜಿ ಬಿಜಿ. ಮುಂದೆ ನಿಧಾನವಾಗಿ ಸಾಗುತ್ತಿದ್ದ ಅಂಬಾಸಿಡರ್ ಕಾರು. ಹಿಂದಿನ ಸೀಟಿನಲ್ಲಿ ಸುಂದರ ಹುಡುಗಿ. ಅಂಬಾಸಿಡರ್ ಕಾರಿನ ಹಿಂದೆ ಆ ಹುಡುಗಿಯಷ್ಟೇ ಸುಂದರವಾಗಿದ್ದ ಫಿಯಟ್ ಕಾರು. ಪೆಡ್ಡರ್ ರಸ್ತೆಯ ಮೇನ್ ಸಿಗ್ನಲ್. ಸ್ಟಾಪ್ ಕೊಟ್ಟ ಅಂಬಾಸಿಡರ್. ಅದರಿಂದೆ ಫಿಯಟ್ ಕೂಡ ಫುಲ್ಸ್ಟಾಪ್...ತಕ್ಷಣ ಫಿಯಟ್ನಿಂದ ಕೆಳಗಿಳಿದು ಬಂದ ಗುಂಡು ದೇಹದ, ಮುದ್ದು ಮೊಗದ ಕಟ್ಟುಮಸ್ತು ಹುಡುಗ ಅಂಬಾಸಿಡರ್ ಹಿಂದಿನ ಸೀಟಿನ ಹುಡುಗಿಗೆ ಗ್ಲಾಸ್ ಓಪನ್ ಮಾಡುವಂತೆ ಸನ್ನೆ ಮಾಡಿದ. ಆಕೆ ತೆಗೆದಳು. ಹಿಂದೆ ಮುಂದೆ ನೋಡದೆ ‘ಐ ಲವ್ ಯೂ’ ಅಂದ. ಹುಡುಗಿ ತಡಬಡಾಯಿಸಿದಳು. ಮತ್ತೆ ಜೋರಾಗಿ ‘ಐ ಲವ್ ಯೂ’ ಅಂದ. ಅಕ್ಕ ಪಕ್ಕದವರಿಗೆಲ್ಲಾ ಕುತೂಹಲ. ಸಿಗ್ನಲ್ ಹಸಿರು ತೋರಿತು. ಈ ಗುಂಡ ಅಲ್ಲಾಡಲಿಲ್ಲ. ಹಿಂದೆ ಹಾರ್ನ್ ಮೊರೆತ ಕಿವಿಗಡುಚಿದವು. ‘ಐ ಲವ್ ಅನ್ನದಿದ್ದರೆ ಗಾಡಿ ತೆಗೆಯೊಲ್ಲ’ ಅಂತ ತಾಕೀತೂ ಬೇರೆ. ಅವಳಿಗೆ ಏನೂ ತೋಚಲಿಲ್ಲ. ಅಷ್ಟರಲ್ಲಿ ಬಂದ ಪೊಲೀಸು ಅವನಿಗೆ ಎರಡು ತದುಕಿದ. ಎಳೆದು ಕಾರಿನಲ್ಲಿ ಕೂರಿಸಿ ಗಾಡಿ ತೆಗೆಸಿ ರೋಡ್ ಕ್ಲಿಯರ್ ಮಾಡಿದ!
ಆ ಗುಂಡು ಹುಡುಗ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವನು. ಆದರೆ ಅವಳು ಮುಂಬೈನ ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಕೋಟಿನೊಳಗೇ ಅವನ ಕನಸು, ವಿಮಾನದಲ್ಲೇ ಅವನ ವಿಶ್ರಾಂತಿ. ಆದರೆ ಬಾಂದ್ರಾದ ನೃತ್ಯ ಶಾಲೆಯಲ್ಲಿ ಅವಳ ಬಣ್ಣದ ಕನಸು, ನಟರಾಜನ ಮುಂದೆ ಹಠಯೋಗವೇ ಅವಳ ವಿಶ್ರಾಂತಿ. ಸ್ಟಾರ್ ಹೊಟೇಲ್ಗಳಲ್ಲಿ ಅವನ ಖಾನಾ ಸೋನಾ, ಆದರೆ ನೃತ್ಯವೇ ಅವಳ ಊಟ ನಿದ್ದೆ.....ಅವನು ಮುಖೇಶ್ ಧೀರೂಬಾಯ್ ಅಂಬಾನಿ, ಅವಳು ನೀತಾ ಮುಖೇಶ್ ಅಂಬಾನಿ!
ಜಗತ್ತಿನ ಸೂಪರ್ ಶ್ರೀಮಂತ ಮನುಷ್ಯನ ಹಿಂದೆ ಇಂಥದ್ದೊಂದು ಫ್ಯಾಸಿನೇಟಿಂಗ್ ಸ್ಟೋರಿಯಿದೆ. ಅಂಬಾನಿ ಕುಟುಂಬದ ಹುಡುಗನೊಬ್ಬ ಮಿಡ್ಲ್ ಕ್ಲಾಸ್ ಹುಡುಗಿಯನ್ನು ಮೆಚ್ಚಿದ್ದ. ಬಿಸಿನೆಸ್ ವರ್ಲ್ಡ್ ಬೆಚ್ಚಿ ಬಿದ್ದಿತ್ತು. ಸಿಲ್ಲಿ ಥಿಂಕಿಂಗ್ ಅಂದವರು ಅದೆಷ್ಟು ಮಂದಿಯೋ. ಆದರೆ ಮುಖೇಶ್ ಅಂಬಾನಿ ಎಲ್ಲಾ ಶ್ರೀಮಂತರಂತಿರಲಿಲ್ಲ. ಸಹೋದರ ಅನಿಲ್ ಅಂಬಾನಿ ಹಾಗೆ ಹೈ ಫೈ ಹುಂಬನೂ ಆಗಿರಲಿಲ್ಲ. ಅವನೊಳಗಿದ್ದ ಮೌನ ದೇವತೆ ಅವನನ್ನು ಸರಳತೆಯ ಸಾಕಾರ ಮೂರ್ತಿಯನ್ನಾಗಿ ಮಾಡಿತ್ತು. ಅಂತದೇ ಸರಳ ಸೌಂದರ್ಯ ಹುಡುಗಿಯನ್ನು ಮನಸಾರೆ ಮೆಚ್ಚಿಕೊಂಡಿದ್ದ.
ಮುಖೇಶ್ ನೀತಾಳನ್ನು ಹುಚ್ಚನಂತೆ ಹಚ್ಚಿಕೊಂಡಿದ್ದ. ಅವಳ ನೃತ್ಯ ರೂಪಕಗಳನ್ನು ಒಂದೂ ಬಿಡದೆ ನೋಡುತ್ತಿದ್ದ. ಅವಳೆಲ್ಲೇ ಹೋದರೂ ಅವಳ ಹಿಂದೆ ತೆರಳುತ್ತಿದ್ದ. ಒಂದು ದಿನ ನೀತಾಳ ಮನೆಗೆ ಒಂದು ಪೋನ್ ಕಾಲ್ ಬಂತು. ಆ ಕಡೆಯಿಂದ ‘ನಾನಮ್ಮ, ಧೀರೂಬಾಯ್ ಅಂಬಾನಿ ಮಾತನಾಡುತ್ತಿದ್ದೇನೆ’ ಎಂದು ಕೇಳಿ ಬಂದಾಗ ನೀತಾ ‘ರಾಂಗ್ನಂಬರ್’ ಅಂತ ಪೋನ್ ಕುಕ್ಕಿದ್ದಳು. ಅಂಬಾನಿಗಳಂಥಾ ಶ್ರಿಮಂತರಿಗೆ ನಮ್ಮ ಜೊತೆ ಏನು ಕೆಲಸ ಇರುತ್ತೆ ಅಂತ ಅವಳಿಗನ್ನಿಸಿತ್ತು. ಪಾಪ, ನೀತಾಳಿಗೆ ಮುಖೇಶ್, ಅಂಬಾನಿ ಕುಟುಂಬದವ ಅಂತಲೂ ಗೊತ್ತಿರಲಿಲ್ಲ!
ಇನ್ನೊಂದು ದಿನ ನೀತಾಳ ಮನೆಗೆ ಸ್ವತಃ ಧೀರೂಬಾಯ್ ಅಂಬಾನಿಯೇ ಬಂದರು. ಮಗಳನ್ನು ಕೊಡುವಂತೆ ನೀತಾ ಪೋಷಕರ ಮುಂದೆ ಧೀರೂಬಾಯ್ ಸಾಮಾನ್ಯರಂತೆ ಕೇಳಿಕೊಂಡರು. ಬಿಸಿನೆಸ್ಮಂದಿ ಬದುಕಲ್ಲೂ ಬಿಸಿನೆಸ್ ಮಾಡುತ್ತಾರೆ ಎಂಬ ಭಯ ನೀತಾಳ ಮನೆ ಮಂದಿಯನ್ನು ಕಾಡದೆ ಬಿಡಲಿಲ್ಲ. ಆದರೆ ಧೀರೂಬಾಯ್ ನೀತಾಳ ಮನೆಯವರನ್ನು, ಮಗ ಮೆಚ್ಚಿದವಳನ್ನು ಒಪ್ಪಿಸಿ ಮದುವೆ ಶಾಸ್ತ್ರ ಮುಗಿಸಿಯೇ ಬಿಟ್ಟರು. ಈಗ ಅವರ ಸಂಸಾರಕ್ಕೆ ತುಂಬು 25 ವರ್ಷ. ಮೂರು ಮಕ್ಕಳು.
ಮುಖೇಶ್ಗೆ ನೀತಾ ಎಂದರೆ ಸದಾ ಅಚ್ಚುಮೆಚ್ಚು. ನೀತಾ ಅಬಿಪ್ರಾಯ ಕೇಳದೆ ಮುಖೇಶ್ ಯಾವ ಪ್ರಮುಖ ನಿರ್ಧಾರವನ್ನೂ ತೆಗೆದುಕೊಳ್ಳಲ್ವಂತೆ. ಮುಖೇಶ್ನ ಎಲ್ಲಾ ಯಶಸ್ಸಿನ ಹಿಂದೆ ನೀತಾಳ ಛಾಯೆ ಇದ್ದೇ ಇದೆ. ಅವಳೂ ಅಷ್ಟೆ, ಮುಖೇಶ್ ಇಲ್ಲದೆ ಅವಳಿಲ್ಲ. 25ವರ್ಷಗಳ ಹಿಂದಿದ್ದ ಸರಳತೆ ನೀತಾಳಲ್ಲಿ ಇನ್ನೂ ಹಾಗೇ ಇದೆ. ನಟನಾ ಹವ್ಯಾಸ ಇನ್ನೂ ಮುಂದುವರೆಯುತ್ತಲೇ ಇದೆ. ಧೀರೂಬಾಯಿ ಅಂಬಾನಿ ಪೌಂಡೇಷನ್ ಅಡಿಯಲ್ಲಿ ನೀತಾ ಕಟ್ಟಿರುವ ಶಾಲೆಯಲ್ಲಿ ನೀತಾಳೇ ನೃತ್ಯ ಶಿಕ್ಷಕಿ. ‘ದೃಷ್ಟಿ ಪ್ರಾಜೆಕ್ಟ್’ ಕೆಳಗೆ ಲಕ್ಷಾಂತರ ದೃಷ್ಟಿಹೀನರಿಗೆ ನೀತಾ ಕಣ್ಣಾಗಿದ್ದಾರೆ.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ‘ ಅಂತ ಮುಖೇಶ್ ಅಂದರೆ, ‘ ಐ ವಾಸ್ ಕುಕ್ಡ್ ಬೈ ಮುಖೇಶ್, ಹೂಕ್ಡ್ ಬೈ ಮುಖೇಶ್, ಬುಕ್ಡ್ ಬೈ ಮುಖೇಶ್....ಅವರ ಹೆಂಡಿತಿಯಾಗಿದ್ದಕ್ಕೆ ನಾ ಧನ್ಯೋಸ್ಮಿ’ ಅಂತಾಳೆ ನೀತಾ!

ಸೈಕಲ್ ಸವಾರನಿಗೆ ಸೆಲ್ಯೂಟ್!






ಹೊಡೆಯುವವರಿಗೆಲ್ಲಾ ಪ್ರಾನ್ಸಿನ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಅಂದರೆ ಒಂದು ಇನ್ಸ್ಫಿರೇಷನ್. ಅವನು ಸೈಕಲ್ ತುಳಿಯುವಾಗ ಅವನ ಕಣ್ಣುಗಳ ದೃಷ್ಟಿ ನೇರ ಮತ್ತು ದಿಟ್ಟ. ಸೈಕ್ಲಿಂಗ್ನಲ್ಲಿ ಬರೋಬ್ಬರಿ ಏಳು ಬಾರಿ ವಿಶ್ವಪ್ರಸಿದ್ಧ ‘ಟೂರ್ ಡಿ’ ಪ್ರಶಸ್ತಿ ಗೆದ್ದಿರುವ ಲ್ಯಾನ್ಸ್ ಜಗತ್ಪ್ರಸಿದ್ಧ ಸೈಕಲ್ ಸರದಾರ!
ಆಗ ಲ್ಯಾನ್ಸ್ ಉತ್ತುಂಗದಲ್ಲಿದ್ದ. ಅವನು 10 ‘ಟೂರ್ ಡಿ’ಗಳನ್ನು ಮುಡಿಗೇರಿಸಿಕೊಳ್ಳುತ್ತಾನೆ ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿತ್ತು. ಅವನು ಇದ್ದಕ್ಕಿದ್ದಂತೆ ಒಂದು ದಿನ ಸೈಕಲ್ಗೆ ಸೆಲ್ಯೂಟ್ ಹೊಡೆದು ನಿವೃತ್ತಿ ಘೋಷಣೆ ಮಾಡಿಬಿಟ್ಟ. ಲ್ಯಾನ್ಸ್ ಅದಕ್ಕೆ ಕೊಟ್ಟ ಕಾರಣಕ್ಕೆ ಇಡೀ ಜಗತ್ತು ಬೆರಗಾಯಿತು. 30 ವರ್ಷಗಳ ಕಾಲ ಮನಸ್ಸನ್ನು ಕೊರೆಯುತ್ತಿದ್ದ ಹುಳವನ್ನು ಲ್ಯಾನ್ಸ್ ಒಮ್ಮೆಲೇ ಹೊರಬಿಟ್ಟು ಶಾಕ್ ಕೊಟ್ಟ.
ಲ್ಯಾನ್ಸ್ ಈಗಲೂ ವೃಷಣ ಕ್ಯಾನ್ಸರ್ನಿಂದ ನರಳುತ್ತಿದ್ದಾನೆ. ರೋಗ ಪತ್ತೆಯಾದಾಗ ಅವನು ಒಂದೂ ‘ಟೂರ್ ಡಿ’ ಗಳಿಸಿರಲಿಲ್ಲ. ಅವನು ಒಂದು ಸುತ್ತು ಸೈಕಲ್ ತುಳಿಯುವಷ್ಟರಲ್ಲಿ ಅವರ ಎರಡೂ ವೃಷಣಗಳು ಊದಿಕೊಳ್ಳುತ್ತಿದ್ದವು. ಆ ಯಾತನೆ ವರ್ಣನಾತೀತ. ಬಹಳ ಸೂಕ್ಷ್ಮ ಅಂಗ ಅದು. ಸೈಕಲ್ ಸೀಟಿನ ಏಟು ವೃಷಣಕ್ಕೆ ಬಿದ್ದರೆ ಆತ ಸತ್ತೂ ಹೋಗಬಹುದು. ಗುಪ್ತಾಂಗ ಬೇರೆ, ಯಾರ ಬಳಿಯೂ ಹೇಳಿಕೊಳ್ಳುವ ಹಾಗೂ ಇಲ್ಲ. ಇಂತಹ ವಿಷಮ ಸ್ಥಿತಿಯಲ್ಲೂ ಲ್ಯಾನ್ಸ್ ಅಭ್ಯಾಸ ಮಾಡುತ್ತಿದ್ದ. ಅದ್ಹೇಗೆ ಮಾಡುತ್ತಿದ್ದ ಅಂತ ಆ ದೇವರೇ ಬಲ್ಲ! ಪ್ರತಿ ಸಲ ‘ಟೂರ್ ಡಿ’ ಗೆದ್ದಾಗಲೂ ಲ್ಯಾನ್ಸ್ ಒಂದೊಂದು ಆಪರೇಷನ್ ಮಾಡಿಸಿಕೊಳ್ಳುತ್ತಿದ್ದ. ಮಾಹಾಮಾರಿ ಕ್ಯಾನ್ಸರ್ ಗೆಲ್ಲಲು ಅವನು ಮಾಡಿರದ ಮದ್ದೇ ಇಲ್ಲ. ಚಿಕೆತ್ಸೆಗಾಗಿ ಜಗತ್ತು ಸುತ್ತಿದ್ದಾನೆ.
ಲ್ಯಾನ್ಸ್ ಕ್ಯಾನ್ಸರ್ ಜೊತೆ ಹೋರಾಡುತ್ತಲೇ ಏಳು ‘ಟೂರ್ ಡಿ’ ಗೆದ್ದಿದ್ದಾನೆ. ಅವನನ್ನು ಕ್ಯಾನ್ಸರ್ ಇನ್ನೂ ಕಾಡುತ್ತಲೇ ಇದೆ. ಕಡೆಗೂ ಅವನು ಹೈರಾಣಾಗಿ ನನಗೆ ಟೆಸ್ಟಿಕಲ್ ಕ್ಯಾನ್ಸರ್ ಇದೆ ಅಂತ ಹೇಳಿಕೊಂಡಿದ್ದಾನೆ. ಈಗ ಅವನು ಸೈಕಲ್ ತುಳಿಯಲಾರ. ಕ್ಯಾನ್ಸರ್ ಮೆದುಳಿನವರೆಗೆ ವ್ಯಾಪಿಸಿದೆ. ಸೈಕಲ್ ಓಟ ನಿಲ್ಲಿಸಿದ್ದರೂ, ಅವನು ಕ್ಯಾನ್ಸರ್ ವಿರುದ್ಧದ ಹೋರಾಟ ನಿಲ್ಲಿಸಿಲ್ಲ. ‘ಲಿವ್ ಸ್ಟ್ರಾಂಗ್ ಪೌಂಡೇಷನ್’ ಕಟ್ಟಿಕೊಂಡು ಕ್ಯಾನ್ಸರ್ ರೋಗಿಗಳಲ್ಲಿ ಚೈತನ್ಯ ತುಂಬುತ್ತಿದ್ದಾನೆ.

ಶಹಬ್ಭಾಸ್ ಶರ್ವಾನಿ!







ಅವಳು ಹಗ್ಗದ ಜೊತೆ ಆಟಕ್ಕಿಳಿಯುತ್ತಾಳೆ. ತನ್ನ 5 ಅಡಿ ದೇಹವನ್ನು ಸುರುಳಿ ಸುತ್ತಿಕೊಂಡು ಹಗ್ಗವಾಗಿ ಜಗ್ಗುತ್ತಾಳೆ...ಕಂಬವನ್ನು ಕೈಲಿ ಹಿಡಿದು ಗರಗರ ಗಿರಕಿ ಹೊಡೆಯುತ್ತಾಳೆ. ಕಂಬದೆತ್ತರಕ್ಕೇರುತ್ತಾಳೆ.....ಕತ್ತಿಯನ್ನು ಕೈಯ್ಯಲ್ಲಿ ಹಿಡಿದು ಮುಗಿಲೆತ್ತರಕ್ಕೆ ಹಾರಿ ‘ಕಳರಿ ಪಯಟ್ಟು‘ವನ್ನು ಧರೆಗಿಳಿಸುತ್ತಾಳೆ.....ಮುಖವಾಡ ಧರಿಸಿ ಧಗಧಗನೆ ಉರಿದು ‘ದೇವರ ಕೋಲಾ’ವನ್ನೇ ಮುರಿಯುತ್ತಾಳೆ....ಅವಳಿಡುವ ಹೆಜ್ಜೆಗಳಿಂದ ಭರತನಾಟ್ಯ, ಕಥಕ್ಕಳಿಗಳಿಗೆ ಬಣ್ಣ ತುಂಬುತ್ತಾಳೆ. ಅವಳು ಹಾಕುವ ಅದ್ಭುತ ಆಸನಗಳಿಂದ ‘ಯೋಗ’ರಾಣಿಯಾಗಿ ಮಿಂಚುತ್ತಾಳೆ.....!
ಅವಳು ಖ್ಯಾತ ನರ್ತಕಿ ಇಶಾ ಶರ್ವಾನಿ. ಒಬ್ಬರು ಒಂದು ಕಲೆಯನ್ನು ದಕ್ಕಿಸಿಕೊಂಡು ಜೀರ್ಣಿಸಿಕೊಳ್ಳಲು ಒಂದು ಜನ್ಮವೇ ಸಾಕಾಗುವುದಿಲ್ಲ. ಆದರೆ ಈ ಹುಡುಗಿಗೆ ಐದಾರು ನೃತ್ಯ ಪ್ರಕಾರಗಳು ಅರಸಿ ಬಂದಿವೆ. ಕಳರಿ ಪಯಟ್ಟು, ಬಂಗಾಳದ ಚೌ, ಭರತ ನಾಟ್ಯ, ಕಥಕ್, ಹಗ್ಗದ ನೃತ್ಯ, ಕಂಬ ಕುಣಿತ, ದೇವರ ಕೋಲಾ, ಪೂಜಾ ಕುಣಿತ.......ಅಬ್ಬಬ್ಬಾ ಒಂದು ಹುಡುಗಿ ಇಷ್ಟೆಲ್ಲಾ ಮಾಡಲು ಸಾಧ್ಯವೇ! ಇಶಾ ಬಾಲಿವುಡ್ನಲ್ಲಿ ಬೇಡಿಕೆಯ ನರ್ತಕಿ. ‘ಕಿಸ್ನಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಬಂದ ಇಶಾ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಆದರೆ ಬಾಲಿವುಡ್ ಅವಳ ಕರ್ಮಭೂಮಿಯಲ್ಲ. ಅವಳ ನೃತ್ಯ ಸರಕಿನಲ್ಲಿ ಬರೀ ಹತ್ತು ಪರ್ಸೆಂಟ್ ಕೊಟ್ಟರೂ ಬಾಲಿವುಡ್ನಲ್ಲಿ ಬೆರಗು ಮೂಡುತ್ತದೆ. ಅವಳ ಕರ್ಮಭೂಮಿಯೇನಿದ್ದರೂ ರಂಜಸಜ್ಜಿಕೆಯೇ . ಅಲ್ಲಿ ಅವಳು ಅರಳುತ್ತಾಳೆ, ಮಿನುಗುತ್ತಾಳೆ! ಸದ್ಯಕ್ಕೆ ‘ದಕ್ಷಸೇಥ್ ನೃತ್ಯ ಕಂಪನಿ’ಗಾಗಿ ನೃತ್ಯ ಪ್ರದರ್ಶನ ನೀಡುತ್ತಿರುವ ಇಶಾ ಶರ್ವಾನಿ ತನ್ನದೇ ಸ್ವಂತ ನೃತ್ಯ ಪ್ರಕಾರವನ್ನು ಸಂಶೋಧನೆ ಮಾಡುತ್ತಿದ್ದಾಳೆ.