Friday, July 29, 2011

ಶಹಬ್ಭಾಸ್ ಶರ್ವಾನಿ!













ಸಿಂಫಲ್ ನೀತಾ, ಸೈಲೆಂಟ್ ಮುಖೇಶ್!










ಅದು ಮುಂಬೈ ಮಹಾನಗರದ ಪೆಡ್ಡರ್ ರೋಡು. ಮುಂಜಾನೆ ಎಂಟು ಗಂಟೆ. ಪೀಕ್ ಅವರ್. ಗಿಜಿಗಿಜಿ ಬಿಜಿ. ಮುಂದೆ ನಿಧಾನವಾಗಿ ಸಾಗುತ್ತಿದ್ದ ಅಂಬಾಸಿಡರ್ ಕಾರು. ಹಿಂದಿನ ಸೀಟಿನಲ್ಲಿ ಸುಂದರ ಹುಡುಗಿ. ಅಂಬಾಸಿಡರ್ ಕಾರಿನ ಹಿಂದೆ ಆ ಹುಡುಗಿಯಷ್ಟೇ ಸುಂದರವಾಗಿದ್ದ ಫಿಯಟ್ ಕಾರು. ಪೆಡ್ಡರ್ ರಸ್ತೆಯ ಮೇನ್ ಸಿಗ್ನಲ್. ಸ್ಟಾಪ್ ಕೊಟ್ಟ ಅಂಬಾಸಿಡರ್. ಅದರಿಂದೆ ಫಿಯಟ್ ಕೂಡ ಫುಲ್ಸ್ಟಾಪ್...ತಕ್ಷಣ ಫಿಯಟ್ನಿಂದ ಕೆಳಗಿಳಿದು ಬಂದ ಗುಂಡು ದೇಹದ, ಮುದ್ದು ಮೊಗದ ಕಟ್ಟುಮಸ್ತು ಹುಡುಗ ಅಂಬಾಸಿಡರ್ ಹಿಂದಿನ ಸೀಟಿನ ಹುಡುಗಿಗೆ ಗ್ಲಾಸ್ ಓಪನ್ ಮಾಡುವಂತೆ ಸನ್ನೆ ಮಾಡಿದ. ಆಕೆ ತೆಗೆದಳು. ಹಿಂದೆ ಮುಂದೆ ನೋಡದೆ ‘ಐ ಲವ್ ಯೂ’ ಅಂದ. ಹುಡುಗಿ ತಡಬಡಾಯಿಸಿದಳು. ಮತ್ತೆ ಜೋರಾಗಿ ‘ಐ ಲವ್ ಯೂ’ ಅಂದ. ಅಕ್ಕ ಪಕ್ಕದವರಿಗೆಲ್ಲಾ ಕುತೂಹಲ. ಸಿಗ್ನಲ್ ಹಸಿರು ತೋರಿತು. ಈ ಗುಂಡ ಅಲ್ಲಾಡಲಿಲ್ಲ. ಹಿಂದೆ ಹಾರ್ನ್ ಮೊರೆತ ಕಿವಿಗಡುಚಿದವು. ‘ಐ ಲವ್ ಅನ್ನದಿದ್ದರೆ ಗಾಡಿ ತೆಗೆಯೊಲ್ಲ’ ಅಂತ ತಾಕೀತೂ ಬೇರೆ. ಅವಳಿಗೆ ಏನೂ ತೋಚಲಿಲ್ಲ. ಅಷ್ಟರಲ್ಲಿ ಬಂದ ಪೊಲೀಸು ಅವನಿಗೆ ಎರಡು ತದುಕಿದ. ಎಳೆದು ಕಾರಿನಲ್ಲಿ ಕೂರಿಸಿ ಗಾಡಿ ತೆಗೆಸಿ ರೋಡ್ ಕ್ಲಿಯರ್ ಮಾಡಿದ!
ಆ ಗುಂಡು ಹುಡುಗ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವನು. ಆದರೆ ಅವಳು ಮುಂಬೈನ ಸಾಮಾನ್ಯ ಕುಟುಂಬದ ಹೆಣ್ಣುಮಗಳು. ಕೋಟಿನೊಳಗೇ ಅವನ ಕನಸು, ವಿಮಾನದಲ್ಲೇ ಅವನ ವಿಶ್ರಾಂತಿ. ಆದರೆ ಬಾಂದ್ರಾದ ನೃತ್ಯ ಶಾಲೆಯಲ್ಲಿ ಅವಳ ಬಣ್ಣದ ಕನಸು, ನಟರಾಜನ ಮುಂದೆ ಹಠಯೋಗವೇ ಅವಳ ವಿಶ್ರಾಂತಿ. ಸ್ಟಾರ್ ಹೊಟೇಲ್ಗಳಲ್ಲಿ ಅವನ ಖಾನಾ ಸೋನಾ, ಆದರೆ ನೃತ್ಯವೇ ಅವಳ ಊಟ ನಿದ್ದೆ.....ಅವನು ಮುಖೇಶ್ ಧೀರೂಬಾಯ್ ಅಂಬಾನಿ, ಅವಳು ನೀತಾ ಮುಖೇಶ್ ಅಂಬಾನಿ!
ಜಗತ್ತಿನ ಸೂಪರ್ ಶ್ರೀಮಂತ ಮನುಷ್ಯನ ಹಿಂದೆ ಇಂಥದ್ದೊಂದು ಫ್ಯಾಸಿನೇಟಿಂಗ್ ಸ್ಟೋರಿಯಿದೆ. ಅಂಬಾನಿ ಕುಟುಂಬದ ಹುಡುಗನೊಬ್ಬ ಮಿಡ್ಲ್ ಕ್ಲಾಸ್ ಹುಡುಗಿಯನ್ನು ಮೆಚ್ಚಿದ್ದ. ಬಿಸಿನೆಸ್ ವರ್ಲ್ಡ್ ಬೆಚ್ಚಿ ಬಿದ್ದಿತ್ತು. ಸಿಲ್ಲಿ ಥಿಂಕಿಂಗ್ ಅಂದವರು ಅದೆಷ್ಟು ಮಂದಿಯೋ. ಆದರೆ ಮುಖೇಶ್ ಅಂಬಾನಿ ಎಲ್ಲಾ ಶ್ರೀಮಂತರಂತಿರಲಿಲ್ಲ. ಸಹೋದರ ಅನಿಲ್ ಅಂಬಾನಿ ಹಾಗೆ ಹೈ ಫೈ ಹುಂಬನೂ ಆಗಿರಲಿಲ್ಲ. ಅವನೊಳಗಿದ್ದ ಮೌನ ದೇವತೆ ಅವನನ್ನು ಸರಳತೆಯ ಸಾಕಾರ ಮೂರ್ತಿಯನ್ನಾಗಿ ಮಾಡಿತ್ತು. ಅಂತದೇ ಸರಳ ಸೌಂದರ್ಯ ಹುಡುಗಿಯನ್ನು ಮನಸಾರೆ ಮೆಚ್ಚಿಕೊಂಡಿದ್ದ.
ಮುಖೇಶ್ ನೀತಾಳನ್ನು ಹುಚ್ಚನಂತೆ ಹಚ್ಚಿಕೊಂಡಿದ್ದ. ಅವಳ ನೃತ್ಯ ರೂಪಕಗಳನ್ನು ಒಂದೂ ಬಿಡದೆ ನೋಡುತ್ತಿದ್ದ. ಅವಳೆಲ್ಲೇ ಹೋದರೂ ಅವಳ ಹಿಂದೆ ತೆರಳುತ್ತಿದ್ದ. ಒಂದು ದಿನ ನೀತಾಳ ಮನೆಗೆ ಒಂದು ಪೋನ್ ಕಾಲ್ ಬಂತು. ಆ ಕಡೆಯಿಂದ ‘ನಾನಮ್ಮ, ಧೀರೂಬಾಯ್ ಅಂಬಾನಿ ಮಾತನಾಡುತ್ತಿದ್ದೇನೆ’ ಎಂದು ಕೇಳಿ ಬಂದಾಗ ನೀತಾ ‘ರಾಂಗ್ನಂಬರ್’ ಅಂತ ಪೋನ್ ಕುಕ್ಕಿದ್ದಳು. ಅಂಬಾನಿಗಳಂಥಾ ಶ್ರಿಮಂತರಿಗೆ ನಮ್ಮ ಜೊತೆ ಏನು ಕೆಲಸ ಇರುತ್ತೆ ಅಂತ ಅವಳಿಗನ್ನಿಸಿತ್ತು. ಪಾಪ, ನೀತಾಳಿಗೆ ಮುಖೇಶ್, ಅಂಬಾನಿ ಕುಟುಂಬದವ ಅಂತಲೂ ಗೊತ್ತಿರಲಿಲ್ಲ!
ಇನ್ನೊಂದು ದಿನ ನೀತಾಳ ಮನೆಗೆ ಸ್ವತಃ ಧೀರೂಬಾಯ್ ಅಂಬಾನಿಯೇ ಬಂದರು. ಮಗಳನ್ನು ಕೊಡುವಂತೆ ನೀತಾ ಪೋಷಕರ ಮುಂದೆ ಧೀರೂಬಾಯ್ ಸಾಮಾನ್ಯರಂತೆ ಕೇಳಿಕೊಂಡರು. ಬಿಸಿನೆಸ್ಮಂದಿ ಬದುಕಲ್ಲೂ ಬಿಸಿನೆಸ್ ಮಾಡುತ್ತಾರೆ ಎಂಬ ಭಯ ನೀತಾಳ ಮನೆ ಮಂದಿಯನ್ನು ಕಾಡದೆ ಬಿಡಲಿಲ್ಲ. ಆದರೆ ಧೀರೂಬಾಯ್ ನೀತಾಳ ಮನೆಯವರನ್ನು, ಮಗ ಮೆಚ್ಚಿದವಳನ್ನು ಒಪ್ಪಿಸಿ ಮದುವೆ ಶಾಸ್ತ್ರ ಮುಗಿಸಿಯೇ ಬಿಟ್ಟರು. ಈಗ ಅವರ ಸಂಸಾರಕ್ಕೆ ತುಂಬು 25 ವರ್ಷ. ಮೂರು ಮಕ್ಕಳು.
ಮುಖೇಶ್ಗೆ ನೀತಾ ಎಂದರೆ ಸದಾ ಅಚ್ಚುಮೆಚ್ಚು. ನೀತಾ ಅಬಿಪ್ರಾಯ ಕೇಳದೆ ಮುಖೇಶ್ ಯಾವ ಪ್ರಮುಖ ನಿರ್ಧಾರವನ್ನೂ ತೆಗೆದುಕೊಳ್ಳಲ್ವಂತೆ. ಮುಖೇಶ್ನ ಎಲ್ಲಾ ಯಶಸ್ಸಿನ ಹಿಂದೆ ನೀತಾಳ ಛಾಯೆ ಇದ್ದೇ ಇದೆ. ಅವಳೂ ಅಷ್ಟೆ, ಮುಖೇಶ್ ಇಲ್ಲದೆ ಅವಳಿಲ್ಲ. 25ವರ್ಷಗಳ ಹಿಂದಿದ್ದ ಸರಳತೆ ನೀತಾಳಲ್ಲಿ ಇನ್ನೂ ಹಾಗೇ ಇದೆ. ನಟನಾ ಹವ್ಯಾಸ ಇನ್ನೂ ಮುಂದುವರೆಯುತ್ತಲೇ ಇದೆ. ಧೀರೂಬಾಯಿ ಅಂಬಾನಿ ಪೌಂಡೇಷನ್ ಅಡಿಯಲ್ಲಿ ನೀತಾ ಕಟ್ಟಿರುವ ಶಾಲೆಯಲ್ಲಿ ನೀತಾಳೇ ನೃತ್ಯ ಶಿಕ್ಷಕಿ. ‘ದೃಷ್ಟಿ ಪ್ರಾಜೆಕ್ಟ್’ ಕೆಳಗೆ ಲಕ್ಷಾಂತರ ದೃಷ್ಟಿಹೀನರಿಗೆ ನೀತಾ ಕಣ್ಣಾಗಿದ್ದಾರೆ.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ‘ ಅಂತ ಮುಖೇಶ್ ಅಂದರೆ, ‘ ಐ ವಾಸ್ ಕುಕ್ಡ್ ಬೈ ಮುಖೇಶ್, ಹೂಕ್ಡ್ ಬೈ ಮುಖೇಶ್, ಬುಕ್ಡ್ ಬೈ ಮುಖೇಶ್....ಅವರ ಹೆಂಡಿತಿಯಾಗಿದ್ದಕ್ಕೆ ನಾ ಧನ್ಯೋಸ್ಮಿ’ ಅಂತಾಳೆ ನೀತಾ!

ಸೈಕಲ್ ಸವಾರನಿಗೆ ಸೆಲ್ಯೂಟ್!






ಹೊಡೆಯುವವರಿಗೆಲ್ಲಾ ಪ್ರಾನ್ಸಿನ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಅಂದರೆ ಒಂದು ಇನ್ಸ್ಫಿರೇಷನ್. ಅವನು ಸೈಕಲ್ ತುಳಿಯುವಾಗ ಅವನ ಕಣ್ಣುಗಳ ದೃಷ್ಟಿ ನೇರ ಮತ್ತು ದಿಟ್ಟ. ಸೈಕ್ಲಿಂಗ್ನಲ್ಲಿ ಬರೋಬ್ಬರಿ ಏಳು ಬಾರಿ ವಿಶ್ವಪ್ರಸಿದ್ಧ ‘ಟೂರ್ ಡಿ’ ಪ್ರಶಸ್ತಿ ಗೆದ್ದಿರುವ ಲ್ಯಾನ್ಸ್ ಜಗತ್ಪ್ರಸಿದ್ಧ ಸೈಕಲ್ ಸರದಾರ!
ಆಗ ಲ್ಯಾನ್ಸ್ ಉತ್ತುಂಗದಲ್ಲಿದ್ದ. ಅವನು 10 ‘ಟೂರ್ ಡಿ’ಗಳನ್ನು ಮುಡಿಗೇರಿಸಿಕೊಳ್ಳುತ್ತಾನೆ ಎಂಬುದು ಅಭಿಮಾನಿಗಳ ಲೆಕ್ಕಾಚಾರವಾಗಿತ್ತು. ಅವನು ಇದ್ದಕ್ಕಿದ್ದಂತೆ ಒಂದು ದಿನ ಸೈಕಲ್ಗೆ ಸೆಲ್ಯೂಟ್ ಹೊಡೆದು ನಿವೃತ್ತಿ ಘೋಷಣೆ ಮಾಡಿಬಿಟ್ಟ. ಲ್ಯಾನ್ಸ್ ಅದಕ್ಕೆ ಕೊಟ್ಟ ಕಾರಣಕ್ಕೆ ಇಡೀ ಜಗತ್ತು ಬೆರಗಾಯಿತು. 30 ವರ್ಷಗಳ ಕಾಲ ಮನಸ್ಸನ್ನು ಕೊರೆಯುತ್ತಿದ್ದ ಹುಳವನ್ನು ಲ್ಯಾನ್ಸ್ ಒಮ್ಮೆಲೇ ಹೊರಬಿಟ್ಟು ಶಾಕ್ ಕೊಟ್ಟ.
ಲ್ಯಾನ್ಸ್ ಈಗಲೂ ವೃಷಣ ಕ್ಯಾನ್ಸರ್ನಿಂದ ನರಳುತ್ತಿದ್ದಾನೆ. ರೋಗ ಪತ್ತೆಯಾದಾಗ ಅವನು ಒಂದೂ ‘ಟೂರ್ ಡಿ’ ಗಳಿಸಿರಲಿಲ್ಲ. ಅವನು ಒಂದು ಸುತ್ತು ಸೈಕಲ್ ತುಳಿಯುವಷ್ಟರಲ್ಲಿ ಅವರ ಎರಡೂ ವೃಷಣಗಳು ಊದಿಕೊಳ್ಳುತ್ತಿದ್ದವು. ಆ ಯಾತನೆ ವರ್ಣನಾತೀತ. ಬಹಳ ಸೂಕ್ಷ್ಮ ಅಂಗ ಅದು. ಸೈಕಲ್ ಸೀಟಿನ ಏಟು ವೃಷಣಕ್ಕೆ ಬಿದ್ದರೆ ಆತ ಸತ್ತೂ ಹೋಗಬಹುದು. ಗುಪ್ತಾಂಗ ಬೇರೆ, ಯಾರ ಬಳಿಯೂ ಹೇಳಿಕೊಳ್ಳುವ ಹಾಗೂ ಇಲ್ಲ. ಇಂತಹ ವಿಷಮ ಸ್ಥಿತಿಯಲ್ಲೂ ಲ್ಯಾನ್ಸ್ ಅಭ್ಯಾಸ ಮಾಡುತ್ತಿದ್ದ. ಅದ್ಹೇಗೆ ಮಾಡುತ್ತಿದ್ದ ಅಂತ ಆ ದೇವರೇ ಬಲ್ಲ! ಪ್ರತಿ ಸಲ ‘ಟೂರ್ ಡಿ’ ಗೆದ್ದಾಗಲೂ ಲ್ಯಾನ್ಸ್ ಒಂದೊಂದು ಆಪರೇಷನ್ ಮಾಡಿಸಿಕೊಳ್ಳುತ್ತಿದ್ದ. ಮಾಹಾಮಾರಿ ಕ್ಯಾನ್ಸರ್ ಗೆಲ್ಲಲು ಅವನು ಮಾಡಿರದ ಮದ್ದೇ ಇಲ್ಲ. ಚಿಕೆತ್ಸೆಗಾಗಿ ಜಗತ್ತು ಸುತ್ತಿದ್ದಾನೆ.
ಲ್ಯಾನ್ಸ್ ಕ್ಯಾನ್ಸರ್ ಜೊತೆ ಹೋರಾಡುತ್ತಲೇ ಏಳು ‘ಟೂರ್ ಡಿ’ ಗೆದ್ದಿದ್ದಾನೆ. ಅವನನ್ನು ಕ್ಯಾನ್ಸರ್ ಇನ್ನೂ ಕಾಡುತ್ತಲೇ ಇದೆ. ಕಡೆಗೂ ಅವನು ಹೈರಾಣಾಗಿ ನನಗೆ ಟೆಸ್ಟಿಕಲ್ ಕ್ಯಾನ್ಸರ್ ಇದೆ ಅಂತ ಹೇಳಿಕೊಂಡಿದ್ದಾನೆ. ಈಗ ಅವನು ಸೈಕಲ್ ತುಳಿಯಲಾರ. ಕ್ಯಾನ್ಸರ್ ಮೆದುಳಿನವರೆಗೆ ವ್ಯಾಪಿಸಿದೆ. ಸೈಕಲ್ ಓಟ ನಿಲ್ಲಿಸಿದ್ದರೂ, ಅವನು ಕ್ಯಾನ್ಸರ್ ವಿರುದ್ಧದ ಹೋರಾಟ ನಿಲ್ಲಿಸಿಲ್ಲ. ‘ಲಿವ್ ಸ್ಟ್ರಾಂಗ್ ಪೌಂಡೇಷನ್’ ಕಟ್ಟಿಕೊಂಡು ಕ್ಯಾನ್ಸರ್ ರೋಗಿಗಳಲ್ಲಿ ಚೈತನ್ಯ ತುಂಬುತ್ತಿದ್ದಾನೆ.

ಶಹಬ್ಭಾಸ್ ಶರ್ವಾನಿ!







ಅವಳು ಹಗ್ಗದ ಜೊತೆ ಆಟಕ್ಕಿಳಿಯುತ್ತಾಳೆ. ತನ್ನ 5 ಅಡಿ ದೇಹವನ್ನು ಸುರುಳಿ ಸುತ್ತಿಕೊಂಡು ಹಗ್ಗವಾಗಿ ಜಗ್ಗುತ್ತಾಳೆ...ಕಂಬವನ್ನು ಕೈಲಿ ಹಿಡಿದು ಗರಗರ ಗಿರಕಿ ಹೊಡೆಯುತ್ತಾಳೆ. ಕಂಬದೆತ್ತರಕ್ಕೇರುತ್ತಾಳೆ.....ಕತ್ತಿಯನ್ನು ಕೈಯ್ಯಲ್ಲಿ ಹಿಡಿದು ಮುಗಿಲೆತ್ತರಕ್ಕೆ ಹಾರಿ ‘ಕಳರಿ ಪಯಟ್ಟು‘ವನ್ನು ಧರೆಗಿಳಿಸುತ್ತಾಳೆ.....ಮುಖವಾಡ ಧರಿಸಿ ಧಗಧಗನೆ ಉರಿದು ‘ದೇವರ ಕೋಲಾ’ವನ್ನೇ ಮುರಿಯುತ್ತಾಳೆ....ಅವಳಿಡುವ ಹೆಜ್ಜೆಗಳಿಂದ ಭರತನಾಟ್ಯ, ಕಥಕ್ಕಳಿಗಳಿಗೆ ಬಣ್ಣ ತುಂಬುತ್ತಾಳೆ. ಅವಳು ಹಾಕುವ ಅದ್ಭುತ ಆಸನಗಳಿಂದ ‘ಯೋಗ’ರಾಣಿಯಾಗಿ ಮಿಂಚುತ್ತಾಳೆ.....!
ಅವಳು ಖ್ಯಾತ ನರ್ತಕಿ ಇಶಾ ಶರ್ವಾನಿ. ಒಬ್ಬರು ಒಂದು ಕಲೆಯನ್ನು ದಕ್ಕಿಸಿಕೊಂಡು ಜೀರ್ಣಿಸಿಕೊಳ್ಳಲು ಒಂದು ಜನ್ಮವೇ ಸಾಕಾಗುವುದಿಲ್ಲ. ಆದರೆ ಈ ಹುಡುಗಿಗೆ ಐದಾರು ನೃತ್ಯ ಪ್ರಕಾರಗಳು ಅರಸಿ ಬಂದಿವೆ. ಕಳರಿ ಪಯಟ್ಟು, ಬಂಗಾಳದ ಚೌ, ಭರತ ನಾಟ್ಯ, ಕಥಕ್, ಹಗ್ಗದ ನೃತ್ಯ, ಕಂಬ ಕುಣಿತ, ದೇವರ ಕೋಲಾ, ಪೂಜಾ ಕುಣಿತ.......ಅಬ್ಬಬ್ಬಾ ಒಂದು ಹುಡುಗಿ ಇಷ್ಟೆಲ್ಲಾ ಮಾಡಲು ಸಾಧ್ಯವೇ! ಇಶಾ ಬಾಲಿವುಡ್ನಲ್ಲಿ ಬೇಡಿಕೆಯ ನರ್ತಕಿ. ‘ಕಿಸ್ನಾ’ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಬಂದ ಇಶಾ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದಾಳೆ. ಆದರೆ ಬಾಲಿವುಡ್ ಅವಳ ಕರ್ಮಭೂಮಿಯಲ್ಲ. ಅವಳ ನೃತ್ಯ ಸರಕಿನಲ್ಲಿ ಬರೀ ಹತ್ತು ಪರ್ಸೆಂಟ್ ಕೊಟ್ಟರೂ ಬಾಲಿವುಡ್ನಲ್ಲಿ ಬೆರಗು ಮೂಡುತ್ತದೆ. ಅವಳ ಕರ್ಮಭೂಮಿಯೇನಿದ್ದರೂ ರಂಜಸಜ್ಜಿಕೆಯೇ . ಅಲ್ಲಿ ಅವಳು ಅರಳುತ್ತಾಳೆ, ಮಿನುಗುತ್ತಾಳೆ! ಸದ್ಯಕ್ಕೆ ‘ದಕ್ಷಸೇಥ್ ನೃತ್ಯ ಕಂಪನಿ’ಗಾಗಿ ನೃತ್ಯ ಪ್ರದರ್ಶನ ನೀಡುತ್ತಿರುವ ಇಶಾ ಶರ್ವಾನಿ ತನ್ನದೇ ಸ್ವಂತ ನೃತ್ಯ ಪ್ರಕಾರವನ್ನು ಸಂಶೋಧನೆ ಮಾಡುತ್ತಿದ್ದಾಳೆ.

ಹುತಾತ್ಮ ಯಶವಂತ ಸೋನಾವಣೆ












ಅಕ್ಷಯ ಪಾತ್ರೆ ಶಶಾಂಕನ ಕೊಳಲು!






ಬೆಂಗಳೂರಿನ ಚಾಮರಾಜಪೇಟೆ ಕೋಟೆ ಪ್ರೌಢಶಾಲೆ ಆವರಣದಲ್ಲಿ ರಾಮೋತ್ಸವ ಸಂಗೀತ ಕಚೇರಿ ನಡೆಯುವಾಗ ಆ ಹುಡುಗ ಗೋಲಿ ಆಡುತ್ತಿದ್ದ. ಕೂತಲ್ಲಿ ಕೂರುತ್ತಿರಲಿಲ್ಲ. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಬಸ್ಸು ಬಿಟ್ಟುಕೊಂಡು ಸಭಾಂಗಣದಲ್ಲೆಲ್ಲಾ ಓಡಾಡುತ್ತಿದ್ದ. ಅಲ್ಲೇ ಮಕ್ಕಳ ತಂಡ ಕಟ್ಟಿಕೊಂಡು ಕುಣಿದಾಡುತ್ತಿದ್ದ. ಆ ಮುದ್ದುಗಲ್ಲದ ಪೋರನಿಗೆ ಮುತ್ತು ಕೊಟ್ಟವರಿಗೆ, ಕೆನ್ನೆ ಚಿವುಟಿದವರಿಗೆ, ಕಿವಿ ಹಿಂಡಿದವರಿಗೆ ಲೆಕ್ಕವೇ ಇಲ್ಲ. ಶಾಂತವಾಗಿ ಸಂಗೀತ ಆನಂದಿಸುವವರು ಅವನ ತುಂಟತನಕ್ಕೆ ಗದರಿದ್ದೂ ಉಂಟು. ಆದರೆ ಅವನು ಅಂದುಕೊಂಡಷ್ಟು ತುಂಟ ಹುಡುಗನಾಗಿರಲಿಲ್ಲ. ಅವನು ಸಂಗೀತ ಕೇಳುತ್ತಿಲ್ಲ ಅಂದಕೊಂಡರೆ ಅದು ಶುದ್ಧ ಸುಳ್ಳು. ಯಾರಾದರೂ ‘ಪುಟ್ಟಾ ಇದು ಯಾವ ರಾಗ’ ಎಂದು ಕೇಳಿದರೆ, ‘ನಿಮಗೆ ಅಷ್ಟು ಗೊತ್ತಿಲ್ಲವೆ, ಇದು ಆನಂದ ಭೈರವಿ’ ಎನ್ನುತ್ತಾ ಓಡಿಬಿಡುತ್ತಿದ್ದ! ವೇದಿಕೆಯ ಮುಂದೆ ಆಟವಾಡಿಕೊಂಡಿದ್ದ ಆ ಹುಡುಗ ತನ್ನ ಏಳನೇ ವಯಸ್ಸಿನಲ್ಲಿ ಅದೇ ವೇದಿಕೆಯ ಮೇಲೆ ಬಂದ. ಅಲ್ಲೂ ಅವನ ತುಂಟಾಟ ನಿಲ್ಲಲೇ ಇಲ್ಲ. ಆದರೆ ಅದು ಎಳೆ ವಯಸ್ಸಿನ ತುಂಟಾಟವಲ್ಲ. ಅದು ವಿದ್ವತ್ತಿನ ತುಂಟಾಟ!
ವಿಶ್ವಕಂಡ ಕೊಳಲು ಮಾಂತ್ರಿಕ ಶಶಾಂಕ್ ಸುಬ್ರಮಣ್ಯ ಅಂದು ತುಂಟಾದದ ಹುಡುಗನಾಗಿದ್ದ. ಬೆಂಗಳೂರು ಮಂದಿಯ ಕಣ್ಣುಮುಂದೆಯೇ ಇದ್ದ. ಎಲ್ಲರ ಪ್ರೀತಿಯ ಶಶಾಂಕ್ ಆಗಿದ್ದ. ಆದರೆ ಅವನು ಎತ್ತರಕ್ಕೆ ಏರಿದ ರೀತಿ ಆಶ್ಚರ್ಯ ಹಾಗೂ ಅದ್ಭುತಗಳ ಯಾತ್ರೆ. ಅಂದು ಆರಂಭವಾದ ಅವನ ಬಿದಿರು ಕೋಲಿನ ಗಾಲಿ ಎಂದೂ ನಿಲ್ಲಲಿಲ್ಲ. 11ನೇ ವಯಸ್ಸಿನ ವೇಳೆಗಾಗಲೇ ಅವನು ಜಗದ್ವಿಖ್ಯಾತಿಯಾಗಿ ಹೋಗಿದ್ದ. ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರನ್ನೆಲ್ಲಾ ಶಶಾಂಕ್ ಚಿಕ್ಕವನಿರುವಾಗಲೇ ಜೊತೆಯಾಗಿ ‘ಚೈಲ್ಡ್ ಪ್ರಾಡಜಿ’ ಅನ್ನಿಸಿಕೊಂಡ. ವಿಶ್ವದ ಎಲ್ಲಾ ಶೈಲಿಯ ಕೊಳಲುವಾದಕರ ನಡುವೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜೊತೆಯಾಗಿಸಿದ ಕೀರ್ತಿಯನ್ನು ತನ್ನದಾಗಿಸಿಕೊಂಡ. 1991ರಲ್ಲಿ ಅವನು ಬರೆದ ಇತಿಹಾಸ ಇನ್ನೂ ಹಚ್ಚ ಹಸಿರಾಗಿಯೇ ಉಳಿದಿದೆ. ಚೆನ್ನೈನ ಪ್ರತಿಷ್ಠಿತ ಮ್ಯುಸಿಕ್ ಅಕಾಡೆಮಿಯಲ್ಲಿ ಹಿರಿಯ ಹಾಗೂ ಪ್ರಬುದ್ಧ ಕಲಾವಿದರ ಪ್ರೈಮ್ ಸ್ಲಾಟ್ನಲ್ಲಿ ಕೊಳಲು ನುಡಿಸಿ ಶಶಾಂಕ್ ಮೈಲಿಗಲ್ಲು ನಿರ್ಮಿಸಿದ. ಆ ಕಲ್ಲನ್ನು ಕ್ರಮಿಸುವ ದಾರಿಹೋಕ ಇನ್ನೂ ಹುಟ್ಟಿಲ್ಲ!
ಶಶಾಂಕ್ಗೆ ಈಗ 34 ವರ್ಷ ವಯಸ್ಸು. ಪ್ರಖ್ಯಾತ ಭರತನಾಟ್ಯ ಕಲಾವಿದೆಯ ಪತಿ ಹಾಗೂ ಮಗುವೊಂದರ ತಂದೆ. ಕಿರಿಯ ಕಲಾವಿದನಾಗಿ ಮಿಂಚಿದ ಶಶಾಂಕ್ ಕೊಳಲಿನ ಶಕ್ತಿ ಕುಗ್ಗಿಲ್ಲ. ಶಶಾಂಕ್ ಸಂಗೀತದ ಸೌಂದರ್ಯ ದಿನದಿನಕ್ಕೂ ಮಿನುಗುತ್ತಲೇ ಇದೆ. ಅವರ ಸಂಗೀತ ಕಚೇರಿ ಬಹಳ ವಿಶೇಷವಾಗಿರುತ್ತದೆ. ರಸಿಕರ ಮೂಡ್ ಮೇಲೆ ಅವರ ಕಛೇರಿ ಕಳೆಕಟ್ಟುತ್ತದೆ. ಅವರು ತಮಗೆ ಇಷ್ಟ ಬಂದ ಅಥವಾ ಅಭ್ಯಾಸ ಮಾಡಿದ ಕೃತಿ, ರಾಗ ನುಡಿಸುವುದಿಲ್ಲ. ರಸಿಕರು ಕೇಳಿದ್ದನ್ನು ಉಣಬಡಿಸುತ್ತಾರೆ. ಅವರ ಕೊಳಲು ಅಕ್ಷಯಪಾತ್ರೆ ಇದ್ದಂತೆ!
ಶಶಾಂಕ್ ಸುಬ್ರಮಣ್ಯ ಹಾಸನ ಮೂಲದವರು. ಪ್ರಾಥಮಿಕವಾಗಿ ತಂದೆ ಸುಬ್ರವಣ್ಯ ಅವರಿಂದಲೇ ಸಂಗೀತ ಪಾಠ ಆರಂಭಿಸಿದ ಅವರು ಆರ್. ಕೆ.ಶ್ರೀಕಂಠನ್, ಪಾಲ್ಗಾಟ್ ಕೆ.ವಿ. ನಾರಾಯಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ಬೆಳೆದು ತಮ್ಮದೇ ಆದ ಸ್ವಂತ ಶೈಲಿ ರೂಢಿಸಿಕೊಂಡರು. ಶಶಾಂಕ್ ಅವರ ಸೌಂದರ್ಯ ತುಂಬುವ ಆಲಾಪ, ಶುದ್ಧ ಕಲ್ಪನಾ ಸ್ವರಗಳು, ವರ್ಣಮಯ ರಾಗ ತಾನ ಪಲ್ಲವಿ ಕೇಳುಗರನ್ನು ಆನಂದದ ಕಡಲಲ್ಲಿ ತೇಲಿಸುತ್ತವೆ.
2009ರಲ್ಲಿ ಅವರು ವಿಶ್ವಶ್ರೇಷ್ಠ ಗ್ರಾಮ್ಮಿ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಬಿಬಿಸಿ ಚಾನೆಲ್ ಶಶಾಂಕ್ ಮೇಲೆ ‘ಡೆಸ್ಟಿನೇಷನ್ ಮ್ಯುಸಿಕ್’ ಡಾಕ್ಯುಮೆಂಟರಿ ನಿರ್ಮಿಸಿರುವುದು ಅವರ ವಿದ್ವತ್ತಿನ ಪ್ರತೀಕ!



ಹುತಾತ್ಮ ಯಶವಂತ ಸೋನಾವಣೆ

ಅವ್ಯವಸ್ಥೆಯ ವಿರುದ್ಧ ತೊಡೆ ತಟ್ಟಿ ನಿಂತು ಜೀವತೆತ್ತ ಮಹಾರಾಷ್ಟ್ರದ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ ಸೋನಾವಣೆ ಅವರಿಗೆ ಸರ್ಕಾರಿಕೆಲಸ ವರಪ್ರಸಾದವಾಗಿತ್ತು. ಕರ್ತವ್ಯಕ್ಕಾಗಿ ಅವರ ಹೃದಯ ಸದಾ ತುಡಿಯುತ್ತಿತ್ತು. ಮನೊಳಗಿದ್ದ ಧೈರ್ಯ ಯಾವುದಕ್ಕೂ ಹಿಂಜರಿಯುತ್ತಿರಲಿಲ್ಲ. ಅನ್ನಿಸಿದ್ದನ್ನು ಹಿಂದೆ ಮುಂದೆ ನೋಡದೆ ಹೇಳುತ್ತಿದ್ದರು. ಇಟ್ಟ ಹೆಜ್ಜೆಯನ್ನು ಹಿಂದಿಕ್ಕುತ್ತಿರಲಿಲ್ಲ. ಸಾಮಾನ್ಯರ ನೋವಿಗೆ ಸ್ಪಂದಿಸುತ್ತಿದ್ದರು. ಸಾಮಾನ್ಯರ ಸೇವಕರಂತಿದ್ದರು. ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಮಾತನ್ನು ಅಕ್ಷರಶಃ ನಂಬಿದ್ದರು. ಬಹುಶಃ ಇದೇ ಅವರಿಗೆ ಮುಳುವಾಯಿತು!
ಗಣರಾಜ್ಯೋತ್ಸವದ ಹಿಂದಿನ ದಿನ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಯಶವಂತ ಸೋನಾವಣೆ ಬಲಿಯಾದಾಗ ನಾಸಿಕ್ ಹಾಗೂ ಮಾಲೆಗಾವ್ ನಗರಗಳ ದುಖಃದ ಕಟ್ಟೆ ಒಡೆಯಿತು. ಮನೆ ಮಗನನ್ನು ಕಳೆದುಕೊಂಡಂತೆ ಜನರು ರಸ್ತೆಯಲ್ಲೆಲ್ಲಾ ಕಣ್ಣೀರು ಸುರಿಸುತ್ತಿದ್ದರು. ಬೀದಿಬೀದಿಗಳಲ್ಲಿ ಅವರ ಶ್ರದ್ಧಾಂಜಲಿ ಭಾವಚಿತ್ರಗಳು ರಾರಾಜಿಸುತ್ತಿದ್ದವು. ನಾಸಿಕ್ ಅವರು ಕಾರ್ಯನಿರ್ವಹಿಸುತ್ತಿದ್ದ ಸ್ಥಳವಾದರೆ, ಮಾಲೆಗಾವ್ ಅವರ ಹುಟ್ಟೂರು. ಮಾಲೆಗಾವ್ ನಗರವನ್ನು ಅವರು ದತ್ತು ತೆಗೆದುಕೊಂಡು ಹುಟ್ಟೂರಿನ ಋಣ ತೀರಿಸಿದ್ದರು. ಅವರಿಂದ ಮಾಲೆಗಾವ್ ಒಂದು ಮಾದರಿ ನಗರವಾಗಿ ರೂಪಗೊಂಡಿತ್ತು.
ಮಹಾರಾಷ್ಟ್ರ ರಾಜ್ಯವನ್ನು ಆಳುತ್ತಿರುವ ಪೆಟ್ರೋಲ್ ಮಾಪಿಯಾವನ್ನು ಅಳಿಸಲು ಯಶವಂತ್ ಟೊಂಕಕಟ್ಟಿ ನಿಂತಿದ್ದರು. ಈ ಉದ್ದೇಶಕ್ಕಾಗಿಯೇ ಅವರನ್ನು ರಾಜ್ಯ ಸರ್ಕಾರಿ ನೌಕರಿಯಿಂದ ಐಎಎಸ್ ದರ್ಜೆ ನೌಕರಿಗೆ ಏರಿಸಲಾಗಿತ್ತು. ಅವರು ಈ ಎತ್ತರಕ್ಕೆ ಏರುವಷ್ಟರಲ್ಲಿ ‘ಕ್ಲೀನ್ಹ್ಯಾಂಡ್ ಅಧಿಕಾರಿ’ ಎಂದು ಹೆಸರುವಾಸಿಯಾಗಿದ್ದರು. ಅವರ ಹಿಂದಿನ 14 ವರ್ಷ ಕೆಲಸಗಳ ಸೇವೆ ಸಾಹಸಮಯ ಅಧ್ಯಾಯ. ಸೂಕ್ಷ್ಮವಾದ ಕೋಮುಗಲಭೆಗಳನ್ನು ಅವರು ಬಹಳ ಸೂಕ್ಷ್ಮವಾಗಿಯೇ ನಿರ್ವಹಿಸಿದ್ದರು. ಕೋಮುಗಳ ನಡುವೆ ಬಾಂಧವ್ಯದ ಬೆಸುಗೆ ಬೆಸೆದಿದ್ದರು. ಮನೆಮನೆಗೂ ಭೇಟಿ ನೀಡಿ ಸಮಸ್ಯೆ ಆಲಿಸುವಂಥ ಗುಣ ಅವರಲ್ಲಿತ್ತು.
48ವರ್ಷ ವಯಸ್ಸಿನ ಯಶವಂತ್ ಉತ್ಕಟ ಪ್ರಾಮಾಣಿಕ ವ್ಯಕ್ತಿ. ಅವರಿಗೆ ಖಾಸಗೀ ಬದುಕು ಇರಲೇ ಇಲ್ಲ. ಸರ್ಕಾರಿ ಕೆಲಸವನ್ನು ಜನಸೇವೆಯ ಕೆಲಸ ಎಂದೇ ನಂಬಿದ್ದರು. ಪತಿಯನ್ನು ಕಳೆದುಕೊಂಡ ಅವರ ಪತ್ನಿಯ ಬರಿದಾಗಿದೆ. ಶಾಲೆಗೆ ಹೋಗುವ ಅವರ ಇಬ್ಬರ ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ.
ಇಂದು ಹುತಾತ್ಮರ ದಿನಾಚರಣೆ. ಯಶವಂತ ಸೊನಾವಣೆ ಅವರ ಪ್ರಾಮಾಣಿಕತೆ ಅವರು ಜೀವ ತೆತ್ತಾಗಲೇ ವಿಶ್ವಕ್ಕೆ ಗೊತ್ತಾಗಿದ್ದು. ವ್ಯವಸ್ಥೆಯ ಕೊಳೆಯನ್ನು ಕೀಳುತ್ತಾ ಜೀವ ತೆತ್ತವರಿಗೆ ಅಮರತ್ವದ ಮರುಜೀವ ಕೊಡುವುದೇ ಜನವರಿ ಮೂವತ್ತರ ವಿಶೇಷ. ಇಗ ಯಶವಂತ ಸೊನಾವಣೆ ಅಮರರು!

ದಿಟ್ಟಮಹಿಳೆ ಗಾಯತ್ರಿ

ಜನವರಿ 26, 20011. ಅದು ನಮ್ಮ ಸಂವಿಧಾನದ 62ನೇ ಹುಟ್ಟುಹಬ್ಬ. ಈ ನೆಲದ ಕಾನೂನು ಸಂವಿಧಾನದ ಆಶಯಗಳನ್ನು ಕಾರ್ಯಕೂಪಕ್ಕೆ ತರುವಲ್ಲಿ , ಈ ಬಾರಿ ಬೆಂಗಳೂರಿನಲ್ಲಿ ನಡೆದ ಗಣರಾಜ್ಯೋತ್ಸವ ಸಾಕ್ಷಿಯಾಗಿದ್ದು ವಿಶೇಷ. ಅದಕ್ಕೆ ಕಾರಣ ಕೇರಳದ ಮಹಿಳಾ ವಾಯುಪಡೆ ಅಧಿಕಾರಿ ಎನ್. ಗಾಯತ್ರಿ ಕಾರಣ. ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯಪಾಲರಿಗೆ ಸಲ್ಲಿಸುವ ಧ್ವಜವಂದನೆ ಕಾರ್ಯಕ್ಕೆ ನೇತೃತ್ವ ವಹಿಸಿದ ದೇಶದ ಮೊದಲ ಮಹಿಳಾ ಅಧಿಕಾರಿಯಾಗಿ ಗಾಯತ್ರಿ ಇತಿಹಾಸ ನಿರ್ಮಿಸಿದರು.
ಅಂದು ನಡೆದ ಕಾರ್ಯಕ್ರಮದಲ್ಲಿ ಇಡೀ ದೇಶದ ಚಿತ್ರ ಗಾಯತ್ರಿ ಅವರತ್ತ ನೆಟ್ಟಿತ್ತು. ಗಣರಾಜ್ಯೋತ್ಸವ ಧ್ವಜವಂದನೆಯಂಣಹ ಕಾರ್ಯವನ್ನುವನ್ನು ಗಾಯತ್ರಿ ಯಾವುದೇ ಅಳುಕಿಲ್ಲದೆ ನಿರ್ವಹಿಸಿದರು. ತಮ್ಮ ಕಾರ್ಯವನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ ಗಾಯತ್ರಿ ದೇಶದ ಮೊದಲಿಗರಾದರು.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯುನೆಲೆಯಲ್ಲಿ ವಿಂಗ್ ಕಮಾಂಡರ್ಆಗಿ ಕಾರ್ಯನಿರ್ವಹಿಸುತ್ತಿರುವ ಎನ್. ಗಾಯತ್ರಿ ಎರಡು ಮಕ್ಕಳ ತಾಯಿ. ಅವರ ಪತಿ ಗೋಕುಲ್ ಪೈಲೆಟ್ ಆಗಿದ್ದವರು. 2003ರಲ್ಲಿ ನಡೆದ ವಿಮಾನದುರಂತದಲ್ಲಿ ಗೋಕುಲ್ ಅಸುನೀಗಿದರು. ಅರ್ಧದಲ್ಲೇ ನಿಂತ ಪತಿಯ ವಿಮಾನ ಯಾನವನ್ನು ಗಾಯತ್ರಿ ಮುಂದುವರಿಸದರು. 1996ರಲ್ಲಿ ಭಾರತಿತಯ ವಾಯು ಪಡೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ರಾಜಸ್ಥಾನ, ಪಂಜಾಬ್ ಹಾಗೂ ಕಾರ್ಗಿಲ್ ವಾಯುನೆಲೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಗಾಯತ್ರಿ ನಮ್ಮ ನಾಡಿನ ದಿಟ್ಟ ಮಹಿಳೆ ಎನ್ನಲು ಕಾರ್ಗಿಲ್ ಪ್ರಾಂತ್ಯದಲ್ಲಿ ಅವರು ನಿರ್ವಹಿಸಿದ ಕಾರ್ಯವೇ ಸಾಕ್ಷಿ.


Tuesday, July 26, 2011

ನೃತ್ಯದ ಮೇಲೆ ಹೇಮಲತಾ ಭಕ್ತಿ













ಹೃದಯದ ಮಾತು ಅವರಿಗೆ ಗೊತ್ತು!

ಪ್ರೀತಿಗೂ ಮತ್ತು ಹೃದಯಕ್ಕೂ ಏನೋ ಒಂಥರಾ ನಂಟುಸ್ತನ. ‘ಪ್ರೀತಿ ಇಲ್ಲದ ಹೃದಯ ಹೃದಯವೇ ಅಲ್ಲ, ಅದು ಕಲ್ಲು’ ಅನ್ನುತ್ತೆ ಕವಿಹೃದಯ. ಪ್ರೀತಿಗೆ ಹೃದಯ ಅರಳುತ್ತೆ. ಭಾವನೆಯ ಬೀಜಕ್ಕೆ ಅಭಿವ್ಯಕ್ತಗೊಳ್ಳುತ್ತೆ. ಪುಟ್ಟ ಹೃದಯ ರಕ್ತದ ಮಡುವಿನಲ್ಲಿ ಢವ ಢವನೆ ಬಡಿದುಕೊಳ್ಳುತ್ತಾ ಹೂವಿನಂತೆ ಪರಿಮಳ ಬೀರುತ್ತೆ.....ಆದರೆ, ಹೂವಿನಷ್ಟೇ ಸೂಕ್ಷ್ಮವಾದ ಹೃದಯ ಗಾಯಗೊಂಡರೆ....? ಹೃದಯ ಕುಗ್ಗಿ ಹೋಗುತ್ತೆ. ನೋವಿಗೆ ನೊಂದುಕೊಳ್ಳುತ್ತೆ.....!
ನೊಂದ ಹೃದಯಗಳನ್ನು ಪ್ರೀತಿಯಿಂದ ಸಂತೈಸುವ ಜಗದ್ವಿಖ್ಯಾತ ವೈದ್ಯ ಬೆಂಗಳೂರಿನಲ್ಲಿದ್ದಾರೆ. ಅವರು ನೊಂದ ಹೃದಯಗಳನ್ನು ಪ್ರೀತಿಸುವ ಹೃದಯವಂತ. ಲಕ್ಷಾಂತರ ಹೃದಯಗಳನ್ನು ಕದ್ದು ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಹೃದಯಚೋರ!
ಅವರೇ ಡಾ. ದೇವಿ ಪ್ರಸಾದ್ ಶೆಟ್ಟಿ. ಜಗತ್ತಿನಲ್ಲೇ ಅತೀ ಹೆಚ್ಚು ತೆರೆದ ಹೃದಯ ಶಸ್ತ್ರಚಿಕೆತ್ಸೆ ಮಾಡಿರುವ ಹೃದ್ರೋಗ ತಜ್ಞ. ಅವರು ಕೇವಲ ಹೃದಯ ಖಾಯಿಲೆಗಳಿಗೆ ಚಿಕಿತ್ಸೆ ಕೊಡುವ ವೈದ್ಯರಲ್ಲ. ಕಲಾವಿದ ಕಲಾಕೃತಿಯನ್ನು ಕಸೂತಿ ಮಾಡಿ ಬಣ್ಣಗಟ್ಟಿಸುವಂತೆ ದೇವಿಶೆಟ್ಟಿ ಹೃದಯವನ್ನು ಕಸಿ ಮಾಡುತ್ತಾರೆ. ಅವರೊಬ್ಬ ಹೃದಯ ಕಸೂತಿಗಾರ! ಜಗತ್ತಿನಲ್ಲಿ ಅಸಂಖ್ಯಾತ ಹೃದ್ರೋಗ ತಜ್ಞರಿದ್ದಾರೆ. ಅವರೆಲ್ಲರ ಪ್ರಕಾರ ಹೃದಯವೆಂದರೆ ದೇಹದ ಒಂದು ದುಬಾರಿ ಅಂಗ. ಆದರೆ ದೇವಿಶೆಟ್ಟಿ ಅವರ ಪ್ರಕಾರ ಹೃದಯ ದುಬಾರಿ ಅಂಗವಲ್ಲ. ಅದು ದೇಹದ ದೇವರು.
ದೇವಿಶೆಟ್ಟಿ ಬೆಂಗಳೂರಿನಲ್ಲಿ ಸ್ಥಾಪಿಸಿರುವ ನಾರಾಯಣ ಹೃದಾಯಾಲಯ ಕೇವಲ ಆಸ್ಪತ್ರೆಯಲ್ಲ. ಅದೊಂದು ಹೃದಯದ ಆಲಯ. ಆಕಾಶದಲ್ಲಿದ್ದ ಹೃದಯ ಚಿಕಿತ್ಸೆ ಬಡವ ಬಲ್ಲಿದರಿಗೆ ಇಂದು ವಿಶ್ವದಾದ್ಯಂತ ಸಿಗುತ್ತಿದೆ ಅಂದರೆ ಅದಕ್ಕೆ ದೇವಿಶೆಟ್ಟಿ ಕಾರಣ. ಅದೊಂದು ಕ್ರಾಂತಿಯೇ ಸರಿ. ಕರ್ನಾಟಕ ಸರ್ಕಾರದ ಜೊತೆ ದೇವಿಶೆಟ್ಟಿ ರಚಿಸಿರುವ ‘ಯಶಸ್ವಿನಿ’ ಆರೋಗ್ಯ ವಿಮಾ ಯೋಜನೆ ಜಗತ್ತಿನ ಅಗ್ಗದ ಆರೋಗ್ಯ ಯೋಜನೆ. ವಿಶ್ವದ ಅಸಂಖ್ಯಾತ ರೋಗಿಗಳು ಇದರ ಫಲಾನುಭವಿಗಳಾಗಿದ್ದಾರೆ.
ಸದಾ ಗಲಭೆಗಳಿಂದಲೇ ಕೂಡಿರುವ ಇರಾಕ್, ಇರಾನ್ ದೇಶಗಳ ಅದೆಷ್ಟೋ ಮಕ್ಕಳ ಹೃದಯಗಳು ನಗು ಬೀರಲು ನಾರಾಯಣ ಹೃದಯಾಲಯ ಕಾರಣ. ಶೋಷಣೆಯಿಂದ ಕಂಗೆಟ್ಟುಹೋಗಿರುವ ಅಪಘಾನಿಸ್ಥಾನದ ಹೃದಯ ರೋಗಿಗಳು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನೂ ದಕ್ಷಿಣ ಆಫ್ರಿಕ. ಅದು ಐತಿಹಾಸಿಕ. ಹೃದಯ ರೋಗಗಳಿಂದ ಬಳಲುತ್ತಿರುವ ಆಫ್ರಿಕಾದ ಬುಡಕಟ್ಟು ಜನರಿಗೆ ದೇವಿಶೆಟ್ಟಿ ಅಕ್ಷರಶಃ ಸಂಜೀವಿನಿ. ಹಲವು ವರ್ಷಗಳ ಕಾಲ ಆಫ್ರಿಕಾದಲ್ಲೇ ಸಂಶೋಧನೆ ನಡೆಸುತ್ತಾ ಚಿಕಿತ್ಸೆ ಕೊಡುತ್ತಾ ಬಂದಿದ್ದಾರೆ. ಪಾಕಿಸ್ಥಾನ ಮತ್ತು ಭಾರತದ ನಡುವೆ ದೇವಿಶೆಟ್ಟಿ ವೈದ್ಯಕೀಯ ರಾಯಭಾರಿಯಂತೆ ಕೆಲಸ ಮಾಡಿದ್ದಾರೆ.
ವಿಶ್ವದ ದೊಡ್ಡಣ್ಣಂದಿರಾದ ಅಮೆರಿಕಾ ಇಂಗ್ಲೆಂಡ್, ಜರ್ಮನಿ, ರಷ್ಯಾಗಳಲ್ಲೂ ದೇವಿಶೆಟ್ಟಿ ಅವರಿಗೆ ಬಲು ಬೇಡಿಕೆಯಿದೆ. ಇಸ್ರೋ ಒದಗಿಸಿರುವ ‘ಟೆಲಿಮೆಡಿಸಿನ್ ’ ಟೆಕ್ನಾಲಜಿ ಮೂಲಕ ನಾರಾಯಣ ಹೃದಯಾಲಯದಲ್ಲಿ ಕೂತು ದೇವಿಶೆಟ್ಟಿ ವಿಶ್ವದ ಹೃದಯಗಳ ಜೊತೆ ಮಾತನಾಡುತ್ತಾರೆ. ಅವರ ಇನ್ನೊಂದು ವಿಶೇಷವೆಂದರೆ ದೇವಿಶೆಟ್ಟಿ ಆಪರೇಷನ್ ಥಿಯೇಟರ್ನಲ್ಲಿದ್ದಾರೆ ಅಂದರೆ ಸಂಗೀತ ಕಡ್ಡಾಯ. ಸಂಗೀತ ಮತ್ತು ಯೋಗದ ಮೇಲೆ ಅವರಿಗೆ ಅಪಾರ ನಂಬಿಕೆ.

ಕಬಡ್ಡಿ ಗೆ ಮಾರುಹೋದ ಅಮೆರಿಕಾ!

ಕೆಲವೊಮ್ಮೆ ಭಾರತದಿಂದ ವಿದೇಶಕ್ಕೆ ಹೋದವರು ಅಲ್ಲಿಯ ವ್ಯಾಮೋಹಕ್ಕೆ ಬಲಿಯಾಗಿ ದೇಸೀಯ ಸಂಸ್ಕೃತಿಯನ್ನು ಮರೆತುಬಿಡುತ್ತಾರೆ. ಮತ್ತೆ ಕೆಲವರು ವಿದೇಶಕ್ಕೆ ಹೋದರೂ ತಮ್ಮ ಜೊತೆ ತಮ್ಮ ದೇಸೀಯ ಸಂಸ್ಕೃತಿಯನ್ನು ಕಟ್ಟಿಕೊಂಡೇ ಹೋಗುತ್ತಾರೆ. ವಿದೇಶಕ್ಕೆ ಹೋಗಿ ತಮ್ಮ ತಾಯ್ನೆಡು ಹೆಮ್ಮೆಪಡುವಂಥ ಕೆಲ ಕೆಲಸ ಮಾಡಿ ಬರುತ್ತಾರೆ. ಅಂತಹ ಒಂದು ಕೆಲಸವನ್ನು ಭಾರತೀಯರಾದ ಅಜಯ್ಕುಮಾರ್ ಮಾಡಿ ಬಂದಿದ್ದಾರೆ. ಅಮೆರಿಕಾಗೆ ಭೇಟಿ ಕೊಟ್ಟಾಗ, ನಾಯರ್ ಆ ಸಂಸ್ಕೃತಿಗೆ ಮಾರು ಹೋಗಲಿಲ್ಲ. ಅಲ್ಲಿಯ ಮಕ್ಕಳಿಗೆ ಹಾಗೂ ಯುವಕರಿಗೆ ನಮ್ಮ ಐತಿಹಾಸಿಕ ಆಟ ಕಬಡ್ಡಿ ಕಲಿಸಿ ಬಂದಿದ್ದಾರೆ!
ಅಜಯ್ ಕುಮಾರ್ ಅಮೆರಿಕಾದ ಜಾನ್ಸ್ಬರ್ಗ್ ನಗರದ ಕೇಂದ್ರೀಯ ಶಾಲೆಯಲ್ಲಿ ಇಂಗ್ಲಿಷ್ ಶಾಲೆಗೆ ಶಿಕ್ಷಕರಾಗಿ ನೇಮಕಗೊಂಡರು. ಆರು ತಿಂಗಳ ಕಾಲ ಅಲ್ಲಿ ನೆಲಸಿದ್ದ ನಾಯರ್ ಭಾರತ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಭಾರತದ ಜಾನಪದ ಆಟಕ್ಕೆ ಅಲ್ಲಿಯ ಯುವಕರು ಮನಸೂರೆಗೊಂಡಿದ್ದಾರೆ. ಅಂಗಿ ಬಿಚ್ಚಿ, ಒಂದೇ ಉಸಿರಿನಲ್ಲಿ ಕಬಡ್ಡಿ ಕಬಡ್ಡಿ ಎಂದು ಕೂಗುವಾಗ ಮೈಯಿಂದ ಜುಳುಜುಳು ಎಂದು ಸುರಿವ ನೀರಿಗೆ ಆ ಕೆಂಪು ಜನ ತೊಯ್ದು ಹೋಗಿದ್ದಾರೆ.
ನಾಯರ್ ಕೇವಲ ಕಬಡ್ಡಿ ಆಟವನ್ನು ಮಾತ್ರ ಹೇಳಿಕೊಡಲಿಲ್ಲ. ಬದಲಾಗಿ ಕಬಡ್ಡಿಯ ಹಿಂದಿರುವ ಜಾನಪದ ಮಹತ್ವವನ್ನೂ ಕಲಿಸಿದ್ದಾರೆ. ಕಬಡ್ಡಿ ಮಣ್ಣಿನ ಮಧ್ಯೆ ಆಡುವ ಆಟ. ಮಣ್ಣಿನಲ್ಲಿ ಕಬಡ್ಡಿ ಆಡುವಾಗ ಕಾಲಿಗೆ ಯಾವುದೇ ಶೂ ಧರಿಸುವಂತಿಲ್ಲ. ಅದರಲ್ಲಿ ವೈದ್ಯಕೀಯ ಶಕ್ತಿಯಿದೆ. ಮಣ್ಣಿನಲ್ಲಿರುವ ವೈದ್ಯಕೀಯ ಶಕ್ತಿಯ ಅರಿವು ಪಡೆದ ಅಮೆರಿಕಾ ಯುವಕರು ಒಂದು ಹೊಸ ಕಬಡ್ಡಿ ಟೀಂ ಕಟ್ಟಿದ್ದಾರೆ!


ನೃತ್ಯದ ಮೇಲೆ ಹೇಮಲತಾ ಭಕ್ತಿ

ದಾಖಲೆಗಾಗಿಯೇ ಸಾಧನೆ ಮಾಡುವವರಿಗೆ ಕಮ್ಮಿ ಇಲ್ಲ. ಆದರೆ ಸಾಧನೆಯ ಹಾದಿಯಲ್ಲಿ ಬಂದು ಹೋಗುವ ಅಸಂಖ್ಯ ಮೈಲಿಗಲ್ಲುಗಳಲ್ಲಿ ದಾಖಲೆಯೂ ಒಂದು ಕಲ್ಲು ಎಂದುಕೊಳ್ಳುವವರು ಬಹಳ ಕಮ್ಮಿ. ಇಂಥ ಬರಳೆಣಿಕೆಯಷ್ಟು ಸಾಧಕರಲ್ಲಿ ಕೇರಳದ ಖ್ಯಾತ ಮೋಹಿನಿಯಟ್ಟಂ ನೃತ್ಯ ಕಲಾವಿದೆ ಕಲಾಮಂಡಲ ಹೇಮಲತಾ ಕೂಡ ಒಬ್ಬರು.
ಹೇಮಲತಾ ಸತತ 123 ಗಂಟೆ 15 ನಿಮಿಷಗಳ ಕಾಲ ನರ್ತಿಸಿ ನೃತ್ಯಲೋಕದಲ್ಲೊಂದು ಹೊಸ ಇತಿಹಾಸ ಬರೆದಿದ್ದಾರೆ. ಕೇರಳದ ಅದ್ಭುತ ಕಲೆ ಮೋಹಿಯಟ್ಟಂ ನೃತ್ಯ ಪ್ರಕಾರವನ್ನು ಅವರು ಸಾಗರದಾಚೆಗೆ ಹಾರಿಸಿದ್ದಾರೆ. 2010 ಸೆಪ್ಟೆಂಬರ್ 20ರಂದು ರಾತ್ತಿ 11 ಗಂಟೆಗೆ ಕಾಲಿಗೆ ಗೆಜ್ಜೆ ಕಟ್ಟಿದ ಹೇಮಾ ಸೆಪ್ಟೆಂಬರ್ 26 ಮಧ್ಯಾಹ್ನ 2. 45ಗಂಟೆಯ ವರೆಗೆ ಸುಧೀರ್ಘವಾಗಿ ನರ್ತಿಸಿ 123 ಗಂಟೆ 15 ನಿಮಿಷಗಳನ್ನು ಪೂರ್ಣಗೊಳಿಸಿ ವಿಶ್ವ ವಿಖ್ಯಾತಿಯಾದರು. ಮಧ್ಯೆ ಗಂಟೆಗೊಮ್ಮೆ ಐದು ನಿಮಿಷಗಳ ಬ್ರೇಕ್ ಹಾಗೂ ಮುಂಜಾನೆ 2 ಗಂಟೆಯಿಂದ 4 ಗಂಟೆಯವರೆಗೆ ನಿದ್ದೆ ಹೊರೆತು ಪಡಿಸಿದರೆ ಸತತ ವಾರಗಳ ನೃತ್ಯವದು. ಆರು ದಿನಗಳ ಕಾಲ ಹಠಯೋಗ ಮಾದರಿಯಲ್ಲಿ ಅಂದುಕೊಂಡುದ್ದಕ್ಕೆ ಎಲ್ಲೂ ಧಕ್ಕೆಯಾಗದಂತೆ ಸಾಧಿಸಿ ಮುಗಿಸಿದರು. ಈ ಹೊಸ ಇತಿಹಾಸದ ಮೂಲಕ ಹೈದರಾಬಾದ್ನ ವೆಟ್ಟಿಕೊಟ್ಟ ಯಡಗಿರಿ ಅವರ 108 ಗಂಟೆಗಳ ನೃತ್ಯದಾಖಲೆಯನ್ನು ಮುರಿದರು.
ಹೇಮಲತಾ ಕೇರಳದ ತ್ರಿಸ್ಸೂರಿನವರು. 35 ವರ್ಷ ವಯಸ್ಸಿನ ಹೇಮಾ ಎರಡು ಮಕ್ಕಳ ತಾಯಿ. ಮದುವೆಯಾದ ಮೇಲೂ ಅವರ ಹೆಜ್ಜೆಗಳ ಶಕ್ತಿ ಎಂದೂ ಕುಗ್ಗಲಿಲ್ಲ. ಪತಿಯ ಪ್ರೋತ್ಸಾಹದ ಜೊತೆ ಹೊಸ ಶಕ್ತಿಯನ್ನು ಜಗತ್ತಿಗೆ ತೋರಿಸಿದರು. ಇದು ಕೇವಲ 123 ಗಂಟೆಗಳ ಕಾಲ ನರ್ತಿಸಿ ನಿಲ್ಲಿಸಿದ ಕತೆಯಲ್ಲ. ಇದು ಹತ್ತಾರು ವರ್ಷಗಳ ಕಾಲದ ತಸರತ್ತು. ಚಿಕ್ಕಂದಿನಿಂದ ನೃತ್ಯದ ಮೇಲೆ ಬೆಳೆಸಿಕೊಂಡು ಬಂದ ಭಕ್ತಿ ಹಾಗೂ ಶ್ರದ್ಧೆ ಪ್ರತಿಫಲ. ಹೇಮಲತಾ ಕೇರಳದ ಪ್ರಸಿದ್ಧ ಪ್ರದರ್ಶನ ಕಲೆಗಳ ತಾಣ ಕಲಾಮಂಡಲಂ ಪ್ರತಿಭೆ. ನೃತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಹೇಮಾ ಅವರಿಗೆ ನೃತ್ಯವೇ ಉಸಿರು.

ಗೋ, ಕಿಸ್ ದ ವರ್ಲ್ಡ್!


















'ಕೃಪಾಕರ ಸೇನಾನಿ' ಎಂಬ ಒಂದು ಜೀವ ಎರಡು ದೇಹ









ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಜಿನೆಸ್ ಓದಿಕೊಂಡ ಆತ ಎಂದೂ ಬಿಜಿನೆಸ್ ಮಾಡಲಿಲ್ಲ. ಅದೇ ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಕಲಿತುಕೊಂಡ ಈತ ಒಂದು ಮನೆಯನ್ನೂ ಕಟ್ಟಲಿಲ್ಲ. ಅವರಿಬ್ಬರು ಕಾಲೇಜು ಒಳಗಿನ ಲಾಬೋರೋಟರಿಯ ಫಾರ್ಮುಲಾಗಳ ಜೊತೆ ಕಲಿತದ್ದು ಕಮ್ಮಿ. ಅವರ ಲ್ಯಾಬ್ ಏನಿದ್ದರೂ ಕಾಡು, ಮೇಡು. ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು, ಜಾತಕ ಪಕ್ಷಿಯಂತೆ ಹಕ್ಕಿಯ ಹಿಂದಿಕ್ಕಿ ಅದರ ಜೊತೆ ಹಾರುವುದೇ ಅವರ ಹವ್ಯಾಸ, ಸಾಹಸ, ಸಂತೋಷ. ಹಾರಲು ಅವರಿಗೇನೂ ಹಕ್ಕಿಯಂತೆ ರೆಕ್ಕೆಯಿಲ್ಲ. ಹಾರುವುದು ಅವರ ಕಣ್ಣು. ಅವರ ಕಣ್ಣೂ ಅಲ್ಲ. ಅದಕ್ಕಿಂತಲೂ ಹೆಚ್ಚು. ಅವರ ಕ್ಯಾಮರಾ ಕಣ್ಣು!
ಅವರೇ ಕೃಪಾಕರ ಮತ್ತು ಸೇನಾನಿ. ವಿಶ್ವಕಂಡ ಈ ಶ್ರೇಷ್ಠ ಇಬ್ಬರು ವನ್ಯಜೀವಿ ಛಾಯಾಗ್ರಾಹಕರನ್ನು ಎಷ್ಟೋ ಮಂದಿ ಇವರು ಒಬ್ಬನೇ ವ್ಯಕ್ತಿ ಅಂದುಕೊಂಡವರೂ ಇದ್ದಾರೆ. ನಿಜ, ಅದು ಒಂದು ದೇಹ ಎರಡು ಜೀವ. ಹಗಲಿರುಳೆನ್ನದೆ ಕಾಡು ಮೇಡು ಅಲೆದು ಅರಣ್ಯ ಜೀವಿಗಳ ಜೀವನದ ಅತೀ ಅಪರೂಪದ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಟ್ಟ ಅವರ ಕಾರ್ಯ ವಿಶ್ವವನ್ನು ಬರಸೆಳೆದುಕೊಂಡಿದೆ. ಅವರಿಬ್ಬರ ಕಾರ್ಯದಲ್ಲಿ ಅಖಂಡತ್ವವಿದೆ. ಯಾವ ಶೋಗಳಲ್ಲೂ ಅವರು ಬೇರೆ ಬೇರೆಯಾಗಿ ಛಾಯಚಿತ್ರ ಪ್ರದರ್ಶಿಸಿಲ್ಲ. ಒಬ್ಬಂಟಿಯಾಗಿ ಎಲ್ಲೂ ಪ್ರತಿನಿಧಿಸಿಲ್ಲ. ಅವರಿಬ್ಬರೂ ಒಟ್ಟಾಗಿ ಏಕತೆಯ ಸೌಧ ಕಟ್ಟಿದ್ದಾರೆ!
ಕೃಪಾಕರ ಸೇನಾನಿಯವರ ‘ವೈಲ್ಡ್ ಡಾಗ್ ಡೈರೀಸ್’ ಸಿನೇಮಾ ಯಾರಿಗೆ ತಾನೆ ಗೊತ್ತಿಲ್ಲ? ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ ಚಾನೆಲ್ ನೋಡುಗರಿಗೆ ಈ ಚಿತ್ರ ಚಿರಪರಿಚತ. ಇದನ್ನು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ನಲ್ಲಿ ನೂರಾರು ಬಾರಿ ಹಾಕಿದ್ದಾರೆ. ಅಷ್ಟೇ ಅಲ್ಲ ಇದು ಜರ್ಮನಿ ಮತ್ತು ಫ್ರಾನ್ಸ್ನ ಪ್ರತಿಷ್ಠಿತ ಎಆರ್ಟಿಇ ಚಾನೆಲ್ನಲ್ಲೂ ಪ್ರದರ್ಶನಗೊಂಡಿದೆ. ಇದಕ್ಕೆ ನೂರಾರು ಪ್ರಶಸ್ತಿಗಳು ಕೂಡ ಸಂದಿವೆ. ಫ್ರಾನ್ಸ್ನ ಬೆಸ್ಟ್ ಡಾಕ್ಯುಮೆಂಟರಿ ಅವಾರ್ಡ್, ಜಪಾನ್ನ ಬೆಸ್ಟ್ ಆಫ್ ಫೆಸ್ಟಿವಲ್ ಗ್ರಾಂಡ್ ಅವಾರ್ಡ್, ಇಂಗ್ಲೆಂಡಿನ ಪ್ಯಾಂಡಾ ಪ್ರಶಸ್ತಿ(ನಾಮಕರಣ), ಸಿಂಗಪೂರ್ನ ಏಶಿಯನ್ ಟೆಲಿವಿಷನ್ ಅವಾರ್ಡ್ ಪ್ರಮುಖವಾದವು. ‘ವೈಲ್ಡ್ ಡಾಗ್ ಡೈರೀಸ್’ ಕೃಪಾಕರ ಸೇನಾನಿ ಅವರ ಮಾಸ್ಟರ್ ಫೀಸ್. ಅವರ ಛಾಯಾಚಿತ್ರಗಳು ಮ್ಯಾಗಜಿನ್ಗಳಾದ ಜಿಯೋ, ಲಂಡನ್ ಟೈಮ್ಸ್, ಬಿಬಿಸಿ ವೈಲ್ಸ್ ಲೈಪ್, ನೇಚರ್ ಮುಂತಾದವುಗಳಲ್ಲಿ ಪ್ರಕಟಗೊಂಡಿದ್ದು ವಿಶ್ವ ಪ್ರಸಿದ್ಧಿ ಪಡೆದಿವೆ. ಕೃಪಾಕರ ಸೇನಾನಿ ಸಾಹಿತಿಗಳೂ ಕೂಡ ಹೌದು. ಅವರ ‘ಜೀವ ಜಾಲ’ ಕನ್ನಡ ಪುಸ್ತಕ ಪ್ರಾಣಿಗಳ ಜೀವನವನ್ನು ಬಿಡಿಸಿಟ್ಟಿದೆ. ಇದಕ್ಕೆ 1999ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2006ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಮುಡಿಗೇರಿದೆ.
ಕೃಪಾಕರ ಸೇನಾನಿ ಅವರು ತಮ ತಮ್ಮ ಡಿಗ್ರಿಗಳನ್ನು ತೆಗೆದು ಪಕ್ಕಕ್ಕಿಟ್ಟು ತಮ್ಮ ಕ್ಯಾಮರಾಗಳನ್ನು ಪ್ರೀತಿಯಿಂದ ಹಚ್ಚಿಕೊಂಡವರು. ಏನಿಲ್ಲದಿದ್ದರೂ ಬ್ಯಾಗಿನಲ್ಲಿ ಕ್ಯಾಮರಾ ಇದ್ದೇ ಇರಬೇಕು. ಅಪರೂಪದ ಪ್ರಾಣಿ ಪಕ್ಷಿಗಳನ್ನು ಕಂಡೊಡನೆ ಕ್ಲಿಕ್ಕಿಸುವುದು ಇವರ ಹವ್ಯಾಸವಾಗಿತ್ತು. ಬರಬರುತ್ತಾ ಹವ್ಯಾಸ ಕಾಡಿನಷ್ಟೇ ದಟ್ಟವಾಗತೊಡಗಿತು. ನಂತರ ಹವ್ಯಾಸವೇ ವೃತ್ತಿ, ಪ್ರವೃತ್ತಿ ಎಲ್ಲವೂ ಆಯಿತು. ಆರಂಭದಲ್ಲಿ ಅವರು ಬೆಳೆಕಿಗೆ ಬಂದದ್ದು ಪತ್ರಿಕೆಗಳ ಮೂಲಕ. ಹಲವು ಪತ್ರಿಕೆಗಳಲ್ಲಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅರಣ್ಯ ಜೀವಿಗಳನ್ನು ಕುರಿತಂತೆ ನೂರಾರು ಚಿತ್ರ- ಲೇಖನ ಬರೆದಿದ್ದಾರೆ. ಆ ನಂತರ ತಮಿಳುನಾಡಿನ ಮದುಬಲೈ ಪ್ರಾಣಿ ಸಂಗ್ರಹಾಲಯದಲ್ಲಿ ಮಾಡಿದ ಅಪರೂಪದ ಕೆಲಸದಿಂದ ಜಗತ್ತಿಗೆ ಪರಿಚಯವಾದರು.
ಕೃಪಾಕರ ಸೇನಾನಿ ಅವರು ಕಾರ್ಯ ಒಂದು ಚಳವಳಿಯಾಗಿಯೂ ಮಾರ್ಪಟ್ಟಿದೆ. ಅವರ ‘ನಮ್ಮ ಸಂಘ’ ಸಂಘಟನೆಯ ಮೂಲಕ ವನ್ಯಜೀವಿಗಳ ರಕ್ಷಣೆಯ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಣಿಗಳ ಹಕ್ಕುಗಳ ಬಗ್ಗೆ ಕೃಪಾಕರ ಸೇನಾನಿ ಅವರಿಗಿರುವ ಕಾಳಜಿ ಅವರ ಪ್ರಾಣಿ ಪ್ರೀತಿಯನ್ನು ಎತ್ತಿ ಹಿಡಿದಿದೆ.








ಗೋ, ಕಿಸ್ ದ ವರ್ಲ್ಡ್!

ಅವನು ಹತ್ತನೇ ಇಯತ್ತಿಗೆ ಹತ್ತಿದಾಗಲೇ ಅಪ್ಪನೊಂದಿಗೆ ಒಂದು ಕರಾರು ಕುದುರಿಸಿಕೊಂಡಿದ್ದ. ಆ ಹದಿನಾಲ್ಕರ ಪೋರನಿಗೆ ಸೈಕಲ್ ಮೇಲೆ ಎಲ್ಲಿಲ್ಲದ ಪ್ರೇಮ. ವರಿಸ್ಸಾದ ಕಾಡಿನ ನಡುವೆ ಇದ್ದ ಆ ಬುಡಕಟ್ಟು ಶಾಲೆಗೆ ಸೈಕಲ್ ತುಳಿದುಕೊಂಡು ಹೋಗುವುದೆಂದರೆ ಅದೇ ಅವನ ಮಹಾ ಸಾಹಸ. ಅವನು ಹತ್ತರ ಗಣಿತದಲ್ಲಿ ತೊಂಬತ್ತು ತೆಗೆದುಕೊಳ್ಳುವುದಾಗಿ ತಂದೆಗೆ ಮಾತು ಕೊಟ್ಟಿದ್ದ. ಅದಕ್ಕೆ ಪ್ರತಿಯಾಗಿ ಸೈಕಲ್ ಕೊಡಿಸುವುದಾಗಿ ಮಗನ ಕರಾರಿಗೆ ಅಪ್ಪ ಒಪ್ಪಿದ್ದರು.....ಅಂದುಕೊಂಡಂತೆ ಆತ ತೊಂಬತ್ತು ತೆಗೆದುಕೊಂಡ. ಅಪ್ಪ ಸೈಕಲ್ ಕೊಟ್ಟರು.......ಇದೇ ಅವನ ಮೊದಲ ವ್ಯವಹಾರ!
ವಿಶ್ವಕಂಡ ಅತ್ಯಂತ ಪ್ರಭಾವಶಾಲಿ ಉದ್ಯಮಿ ‘ಸಬ್ರತೋ ಬಗಚಿ’ ಅವರ ಔದ್ಯಮಿಕ ಇತಿಹಾಸದಲ್ಲಿ ಇಂಥದೊದ್ದಂದು ಕತೆಯಿದೆ. ಅಪ್ಪನೊಂದಿಗೆ ಆರಂಭವಾದ ಅವರ ವ್ಯವಹಾರ ಯಾತ್ರೆ ಎಲ್ಲೂ ನಿಲ್ಲಲಿಲ್ಲ. ವ್ಯವಹಾರವೇ ಅವರ ಅನ್ನ ಮತ್ತು ಉಸಿರು. ಇನ್ಫೊಸಿಸ್ ನಂತರ ಭಾರತದಲ್ಲಿ ತಾಂತ್ರಿಕರು ಕನಸು ಕಟ್ಟಿಕೊಳ್ಳುವ ಐಟಿ ಕಂಪನಿಯೊಂದಿದ್ದರೆ ಅದು ‘ಮೈಂಡ್ ಟ್ರೀ’. ಸಬ್ರತೋ ಬಗಚಿ ಈ ಕಂಪನಿಯ ಶಿಲ್ಪಿ. ‘ಮೈಂಡ್ ಟ್ರೀ ಗಾರ್ಡ್ನರ್’ ಎಂತಲೇ ಅವರನ್ನು ಕರೆಯಲಾಗುತ್ತದೆ. ಬಿಲಿಯನ್ ಡಾಲರ್ಗಟ್ಟಲೆ ವ್ಯವಹಾರ ಹೊಂದಿರುವ ಈ ಕಂಪನಿ ಬರೀ ಐಟಿ ಕಂಪನಿಯಲ್ಲ. ಅದೊಂದು ಔದ್ಯಮಿಕ ಲೋಕದ ಆಲಯ!
ಬಹುಶಃ, ಬಗಚಿ ಕೇವಲ ಉದ್ಯಮಿಯಾಗಿದ್ದರೆ ಇಷ್ಟೊಂದು ಖ್ಯಾತಿ ಬರುತ್ತಿರಲಿಲ್ಲವೇನೋ. ಬದಲಾಗಿ ಬಗಚಿ ವ್ಯವಹಾರದ ಆರಾಧಕ. ವ್ಯವಹಾರವೆಂದರೆ ಬರೀ ಹಣದ ವಿನಿಮಯವಲ್ಲ, ಫೈಲುಗಳ ವಿನಿಮಯವಲ್ಲ. ಕೋಟುಗಳ ಕೋಡಲ್ಲ, ಇಂಗ್ಲಿಷ್ ನಾಲಗೆಯಲ್ಲ......ಅದೊಂದು ಯೋಗ ಮತ್ತು ಪ್ರಯೋಗ ಎಂದು ವಿಶ್ವಕ್ಕೆ ಸಾರಿ ಹೇಳದರು. ‘ದೇರ್ ಈಸ್ ನೋ ಸಬ್ಸ್ಸ್ಟಿಟ್ಯೂಟ್ ಇನ್ ಹಾರ್ಡ್ ವರ್ಕ್’ ಎನ್ನುತ್ತಲೇ ಮಾತು ಆರಂಭಿಸುವ ಬಗಚಿ ಪ್ರಸಿದ್ಧ ಲೇಕಕರೂ ಕೂಡ. ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯ ‘ಟೈಮ್ಸ್ ಆಪ್ ಮೈಂಡ್’ ಅಂಕಣ ಭಾರತೀಯ ಉದ್ಯಮಿಗಳ ಫೇವರಿಟ್. ಪೋರ್ಬ್ಸ್ ಮಾಗಜಿನ್ನ ‘ಝೆನ್ ಗಾರ್ಡನ್’ ವಿಶ್ವ ಉದ್ಯಮಿಗಳ ಹಾಟ್ಕೇಕ್.
ನೃತ್ಯಪ್ರೇಮಿಗಳನ್ನು ಮೆಕೆಲ್ ಜಾಕ್ಸನ್ ನೃತ್ಯ ಹೇಗೆ ಕುಣಿಸುತ್ತೋ ಹಾಗೆ ಬಗಚಿಯವರ ಬರವಣಿಗೆ ಉದ್ಯಮಿಗಳನ್ನು ತಣಿಸುತ್ತೆ. ಅವರ ಬರವಣಿಗೆಯಲ್ಲಿರುವ ಚೈತನ್ಯ ಲಕ್ಷಾಂತರ ಉದ್ಯಮಿಗಳಿಗೆ ಶಕ್ತಿ ತುಂಬಿದೆ. ಉದ್ಯಮಿಗಳಿಗೆ ಮಾತ್ರವಲ್ಲ, ಕ್ರಿಯಾತ್ಮಕವಾಗಿ ಚಿಂತಿಸುವವರಿಗೆ, ಹಾರ್ಡ್ವರ್ಕ್ ಮೇಲೆ ನಂಬಿಕೆಯಿರುವವರಿಗೆ, ಪ್ರಯೋಗಾತ್ಮಕ ಕೆಲಸಗಾರರಿಗೆ ಬಗಚಿಯವರ ಪುಸ್ತಕಗಳು ಚೈತನ್ಯದ ಚಿಲುಮೆಯಾಗಿವೆ. ಅವರ ‘ಗೋ ಕಿಸ್ ದ ವರ್ಲ್ಡ್’ ವಿಶ್ವದ ಬೆಸ್ಟ್ಸೆಲ್ಲರ್. ಈ ಪುಸ್ತಕದಲ್ಲಿರುವ ವೈಚಾರಿಕ ಬರವಣಿಗೆ ಬಗಚಿಯವನ್ನು ಪರಿಪೂರ್ಣ ಸಾಹಿಯನ್ನಾಗಿ ಮಾಡಿದೆ. ಹೈ ಪರ್ಪಾರ್ಮೆನ್ಸ್ ಎಂಟ್ರಪ್ಯೂನರ್, ದ ಪ್ರೊಫೆಷನಲ್ ಮುಂತಾದವು ಬಗಚಿಯವರ ಪ್ರಸಿದ್ಧ ಪುಸ್ತಕಗಳು.
ಮೈಂಡ್ಟ್ರೀ ಲೋಗೋ ಹಿಂದೆ ಒಂದು ಕುತೂಹಕ ಕತೆ ಇದೆ. ಬಗಚಿಯವರೆಷ್ಟು ಸ್ಮಾರ್ಟ್ ಎನ್ನಲು ಇದು ಸಾಕ್ಷಿ. ಲೋಗೋ ರಚನೆಗೆ ಅವರೇನು ತಲೆ ಕೆಡಿಸಿಕೊಳ್ಳಲಿಲ್ಲ. ಕುರುಡನೊಬ್ಬನಿಗೆ ಬಣ್ಣ ಮತ್ತು ಬ್ರಷ್ ಕೊಟ್ಟರು. ಆತ ಒಂದು ಗೆರೆ ಎಳೆದು ಎರಡು ಚುಕ್ಕೆ ಇಟ್ಟ. ಅದೇ ಮೈಂಡ್ಟ್ರೀಯ ಜಗತ್ಪ್ರಸಿದ್ಧ ಲೋಗೋ!