
ವಸುಂದರಾ ಹೆಜ್ಜೆ ಗುರುತು
ಅವರ ಹೆಜ್ಜೆಗಳಲ್ಲಿ ಅದ್ಯಾವ ಶಕ್ತಿ ಅಡಗಿದೆಯೋ ಏನೋ!
ಆ ಹೆಜ್ಜೆಗಳು ನಟುವಾಂಗದ ಏಟಿಗೆ ಎದಿರೇಟು ನೀಡುತ್ತವೆ. ಸಂಗೀತಕ್ಕೆ ಸ್ವರೂಪ ಕೊಡುತ್ತವೆ. ದೇಹಕ್ಕಾದ ಕಾಲವನ್ನು ಮರೆಮಾಚುತ್ತವೆ. ಆ ಘಲ್ ಘಲ್ ಗೆಜ್ಜೆನಾದ ನೋಡುಗನ ಹೃದಯದಲ್ಲಿ ಆನಂದ ಹುಟ್ಟಿಸುತ್ತದೆ. ನಾಟ್ಯಶಾಸ್ತ್ರದ ನವರಸಾದಿಗಳು ದೇಹವಿಡೀ ಹೊಮ್ಮಿ ಬರುತ್ತವೆ. ಗೆಜ್ಜೆ ಕಟ್ಟಿದ ಆ ಕಾಲುಗಳು ಭೂಮಿಕೆಯ ಮೇಲೆ ರಂಗೋಲಿಯ ಚಿತ್ತಾರ ಬಿಡಿಸುತ್ತವೆ.
ಅವರು ವಸುಂದರಾ ದೊರೆಸ್ವಾಮಿ. ಮೈಸೂರಿಗೆ ಹೆಮ್ಮೆ ಹಿರಿಮೆ ಗರಿಮೆ ಬರುವಲ್ಲಿ ಅವರ ನೃತ್ಯ ಸೇವೆಯೂ ಪಾಲು ಪಡೆದಿದೆ. ನೃತ್ಯಲೋಕದಲ್ಲಿ ದಂತಕತೆಯಾಗಿರುವ ವಸುಂದರಾ ನಮ್ಮ ದೇಶದ ಅಪರೂಪದ ಭರತನಾಟ್ಯ ಕಲಾವಿದೆ. ಭಾರತೀಯ ಶಾಸ್ತ್ರೀಯ ನೃತ್ಯದಲ್ಲಿ ಅವರ ಸ್ಥಾನ ಉತ್ತುಂಗದಲ್ಲಿದೆ. ಭರತನಾಟ್ಯವನ್ನು ಹೃದಯ ತಂಬೆಲ್ಲಾ ತುಂಬಿಕೊಂಡು ಅದರ ವೈಶಾಲ್ಯತೆಯನ್ನು ಜಗತ್ತಿನೆಲ್ಲೆಡೆ ತೋರಿಸಿ ಸೈ ಎನಿಸಿಕೊಂಡಿದ್ದಾರೆ. ಮೂರು ದಶಕಗಳ ಅವರ ನೃತ್ಯ ತಪಸ್ಸು ಅಪಾರ ಮನ್ನಣೆ ಗಳಿಸಿದೆ.
ವಸುಂದರಾ ದೊರೆಸ್ವಾಮಿ ಅವರ ಪ್ರತಿಯೊಂದು ನೃತ್ಯ ರೂಪಕಗಳು ಅದ್ಬುತ ಕಲಾಕೃತಿಗಳು. ಅವರ ಸಂಯೋಜನೆಗಳಲ್ಲಿರುವ ಭಕ್ತಿ ಸಂದೇಶ ವರ್ಣನಾತೀತ. ಮಹಿಷೂರು ಪುರ ಜನರ ದುಸ್ವಪ್ನವಾಗಿದ್ದ ಮಹಿಷಾಸುರನನ್ನು ಸಂಹರಿಸುವ `ಆದಿಶಕ್ತಿ ದುರ್ಗಾ' ರೂಪಕ ನೋಡುಗನ ನಾಡಿಯಲ್ಲಿ ಉಂಟುಮಾಡಿದ್ದ ವಿದ್ಯುತ್ ಸಂಚಲನವನ್ನು ಮರೆಲಾಗುವುದಿಲ್ಲ. ಇಂತಹ ಅಸಂಖ್ಯಾತ ರೂಪಕಗಳನ್ನು ಅವರು ಸಂಯೋಜಿಸಿದ್ದಾರೆ. ನೃತ್ಯ ಸಂಯೋಜನೆಯ ಜೊತೆಗೆ ಸಾಹಿತ್ಯವನ್ನು ರಚನೆ ಮಾಡುವಲ್ಲಿಯೂ ಅವರು ಕೃಷಿ ಮಾಡಿದ್ದಾರೆ. ಕೆಲವು ವೇಳೆ ಸಂಗೀತ ಸಂಯೋಜನೆಯನ್ನೂ ಮಾಡುತ್ತಾರೆ. ಅವರನ್ನು ಅಪರೂಪ ಎನ್ನಲು ಇಂತಹ ಹತ್ತಾರು ಕಾರ್ಯಸಾಧನೆಗಳು ಸಾಕ್ಷೀಕರಿಸುತ್ತವೆ.
ವಸುಂದರಾ ಅವರು ಖ್ಯಾತ ನೃತ್ಯ ಹಾಗೂ ಅಷ್ಟಾಂಗ ವಿನ್ಯಾಸ ಯೋಗತಜ್ಞ ಪಟ್ಟಾಭಿ ಜೋಯಿಸ್ ಅವರ ಶಿಷ್ಯರು. ಸಣ್ಣ ವಯಸ್ಸಿನಲ್ಲೇ ಭೂಮಿಕೆ ಹತ್ತಿದ ಅವರ ಸಾಧನೆಯ ಹಾದಿ ಹಲವು ಘಟ್ಟಗಳನ್ನು ಮುಟ್ಟಿ ಸಾಗಿ ಬಂದಿವೆ. ಅವರ ನೃತ್ಯದಲ್ಲಿ ಯೋಗಕ್ಕೆ ಪ್ರಧಾನ ಸ್ಥಾನವಿದೆ. ಅವರು ಯೋಗ ಸಂಶೋಧಕಿ ಕೂಡ ಆಗಿದ್ದಾರೆ. ಯೋಗ ಮತ್ತು ಭರತನಾಟ್ಯ ನಡುವಿನ ಸಂಬಂಧ ಕುರಿತಂತೆ ಅವರ ಸಂಶೋಧನೆಗೆ ಪಿಎಚ್ಡಿ ಪದವಿ ಲಭಿಸಿದೆ. ಜಾನಪದದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಜಾನಪದ, ಯಕ್ಷಗಾನ ಪ್ರಾಕಾರಗಳನ್ನು ಭರತನಾಟ್ಯಕ್ಕೆ ಅಳವಡಿಸಿಕೊಂಡು ಪ್ರಯೋಗ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ವಸುಂದರಾ ಅವರು ಅತ್ಯಂತ ಚಿಕ್ಕವಯಸ್ಸಿನಲ್ಲಿಯೇ `ಕರ್ನಾಟಕ ಕಲಾ ತಿಲಕ' ಪ್ರಶಸ್ತಿ ಪಡೆದ ಸಾಧಕಿ. ಮಾರ್ಷಲ್ ಆರ್ಟ್ಸ್, ಕಳರಿ ಪೊಯಿಟ್ಟು ನೃತ್ಯಗಳೂ ಅವರಿಗೆ ಗೊತ್ತಿವೆ. ದೂರದರ್ಶನ ಕಲಾವಿದರೂ ಆಗಿರುವ ಅವರಿಗೆ ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ತಮ್ಮ ನೃತ್ಯದೊಂದಿಗೆ ವಿಶ್ವವನ್ನು ಸುತ್ತಿದ್ದಾರೆ. ಭರತನಾಟ್ಯ ಕುರಿತು ಕಾರ್ಯಗಾರಗಳನ್ನು ನಡೆಸಿದ್ದಾರೆ. ವಿದೇಶಗಳನ್ನು ತಮ್ಮ ನೃತ್ಯ ಹಾಗೂ ಯೋಗ ಸಂಸ್ಥೆಗಳನ್ನೂ ತೆರೆದಿದ್ದಾರೆ.
ವಸುಂದರಾ ದೊರೆಸ್ವಾಮಿ ಅವರು ನೃತ್ಯಗರುವಾಗಿ ಸೃಷ್ಟಿಸಿರುವ ಪ್ರತಿಭೆಗಳು ಇಂದು ಎಲ್ಲೆಡೆ ತಮ್ಮ ಪರಿಮಳ ಬೀರಿವೆ. ಅವರ ಮಾರ್ಗದರ್ಶನದಲ್ಲಿ ನೂರಾರು ಪ್ರತಿಭೆಗಳು ಭೂಮಿಕೆಯೇರಿವೆ. ವಿದೇಶಗಳೂ ಸೇರಿದಂತೆ ದೇಶದೆಲ್ಲೆಡೆ ಅವರ ವಿದ್ಯಾರ್ಥಿ ಬಳಗವೇ ಇದೆ. ಯುವ ಪ್ರತಿಭೆಗಳಿಗೆ ವಿದ್ಯಾದಾನದ ಜೊತೆಗೆ ಅವರಿಗೆ ಸೂಕ್ತ ವೇದಿಕೆಯನ್ನೂ ಅವರು ಒದಗಿಸಿಕೊಟ್ಟಿದ್ದಾರೆ. ಈ ಉದ್ದೇಶಕ್ಕಾಗಿ `ವಸುಂದರಾ ಪ್ರದರ್ಶನಾ ಕಲೆ ಹಾಗೂ ಯೋಗ ಕೇಂದ್ರ'ವನ್ನು ಮೈಸೂರಿನಲ್ಲಿ ತೆರೆದಿದ್ದಾರೆ.
1987ರಲ್ಲಿ ಆರಂಭವಾದ ಈ ಸಂಸ್ಥೆ ಇಂದು ದೇಶದೆಲ್ಲೆಡೆ ಹಬ್ಬಿದೆ. ವಿದೇಶಗಳಲ್ಲೂ ಶಾಖೆಗಳಿವೆ. ಪ್ರತಿವರ್ಷ ಸಂಸ್ಥೆಯಿಂದ ಅಸಂಖ್ಯಾತ ಕಾರ್ಯಕ್ರಮಗಳು ನಡೆಯುತ್ತವೆ. ಮುಖ್ಯವಾಗಿ ವರ್ಷದಲ್ಲಿ ನಾಲ್ಕು ಕಾರ್ಯಕ್ರಮಗಳು ಪ್ರತಿವರ್ಷ ಕಡ್ಡಾಯವಾಗಿ ನಡೆಯುತ್ತವೆ. ಪಲ್ಲವೋತ್ಸವ, ಪಾರಂಗೋತ್ಸವ, ಚಿಗುರು ಸಂಜೆ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿವೆ.
ನಟರಾಜೋತ್ಸವದಲ್ಲಿ ಪುರುಷ ನೃತ್ಯಪಟುಗಳು ತಮ್ಮ ಪ್ರತಿಭೆ ತೋರಿದರೆ, ಪಲ್ಲವೋತ್ಸವದಲ್ಲಿ ಮಹಿಳಾ ನರ್ತಕಿಯರು ತಮ್ಮ ಪ್ರತಿಭೆ ಮರೆಯುತ್ತೆರೆ. ಪಾರಂಗೋತ್ಸವದಲ್ಲಿ ಖ್ಯಾತನಾಮ ಕಲಾವಿದರು ತಮ್ಮ ನೃತ್ಯದರ್ಶನ ಮಾಡಿಸುತ್ತಾರೆ. ಚಿಗುರು ಸಂಜೆ ಕಾರ್ಯಕ್ರಮದಲ್ಲಿ 12 ವರ್ಷ ವಯಸ್ಸಿನೊಳಗಿನ ಬಾಲ ಪ್ರತಿಭೆಗಳು ತಮ್ಮ ಹೆಜ್ಜೆ ಗುರುತು ಮಾಡುತ್ತಾರೆ. ಈ ನಾಲ್ಕು ವಾರ್ಷಿಕ ಕಾರ್ಯಕ್ರಮಗಳ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತ್ತದೆ. ವರ್ಷಪೂರ್ತಿ ರಂಗಪ್ರವೇಶ ಕಾರ್ಯಕ್ರಮಗಳು ನಡೆಯುತ್ತವೆ. ಉಪನ್ಯಾಸ, ಯೋಗ ಕಾರ್ಯಗಾರಗಳೂ ನಡೆಯುತ್ತವೆ.
ವಸುಂದರಾ ಅವರು ತಮ್ಮ ನೃತ್ಯದ ಮೂಲಕ ಶ್ರೀಮಂತ ಸಂಸ್ಕೃತಿಯೊಂದರ ಪ್ರತಿನಿಧಿಯಾಗಿದ್ದಾರೆ. ನೃತ್ಯ ಸಾಗರದಲ್ಲಿ ಮುಂದಿದ್ದಾರೆ. ಶಾರದಾ ಪುತ್ರಿಯಾಗಿದ್ದಾರೆ. ತಪಸ್ಸು ಭಕ್ತಿ ಯೋಗ ಮಾರ್ಗಗಳಿಂದ ದಕ್ಕಿಸಿಕೊಂಡ ವಿದ್ಯೆಯಿಂದ ಇಂದು ನಾಟ್ಯರಾಣಿಯಾಗಿ ಹೆಜ್ಜೆ ಇಡುತ್ತಿದ್ದಾರೆ.