
ಮನೋಧರ್ಮ ವರ್ಣಶಿಲ್ಪಿ ಶ್ರೀಕಂಠನ್!
ಅವರು ತೊಂಭತ್ತರ ಎತ್ತರಕ್ಕೆ ಏರಿದ್ದಾರೆ. ಶತಮಾನ ಸಾಮಿಪ್ಯದ ವಯೋಮಾನ ಅವರಿಗೆ ಬಾಳ ಸಂಜೆಯಲ್ಲ. ಸುಸ್ವರಗಳಿಂದ ಸೃಷ್ಟಿಯಾದ ಮುಂಜಾವು. ಪ್ರತಿನಿತ್ಯ ಸಂಗೀತ, ಸಾಧನೆ, ಆರಾಧನೆ. ಸಂಗೀತಕ್ಕೆ ಅವರ ಆತ್ಮಾರ್ಪಣೆ! ಆ ದಿವ್ಯ ಶರೀರದ ಭ್ಯವ್ಯ ಶಾರೀರ ರಸಿಕರನ್ನು ತನ್ಮಯಗೊಳಿಸಿದೆ. ಆ ದನಿ ಇಬ್ಬನಿಯಷ್ಟೆ ಶುದ್ಧ. ಸ್ಪಟಿಕದಷ್ಟೇ ನಿಖರ! ಭಾವ ಮತ್ತು ಭಕ್ತಿ ಅವರ ಆಸ್ತಿ. ಹಾಡುತ್ತಾ ಹಾಡುತ್ತಾ ತಲೆಮಾರು ತಲುಪಿದ್ದಾರೆ. ತೊಂಭತ್ತರಲ್ಲಿ ಎಂಭತ್ತನ್ನು ಸಂಗೀತಕ್ಕೇ ಕೊಟ್ಟಿರುವ ಅವರೊಬ್ಬ ಯುಗಪುರುಷ!
ಅವರು ಸಂಗೀತ ಕಲಾನಿಧಿ, ಗಾಯಕ ಚೂಡಾಮಣಿ, ಗಾನ ಭಾಸ್ಕರ, ಶೃತಿ ಸಾಗರ, ನಾದನಿಧಿ, ಕಲಾ ಸಾಗರ, ಗಾನರತ್ನ, ಲಯಕಲಾ ನಿಪುಣ........ಎಂಬಿತ್ಯಾದಿ ಬಿರುದಾಂಕಿತ ವಿದ್ವಾನ್. ಆರ್.ಕೆ. ಶ್ರೀಕಂಠನ್(ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್). ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ಅತ್ಯಂತ ಹಿರಿಯ ಹೆಮ್ಮರ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಾಭಿವ್ಯಕ್ತ ಮತ್ತು ಮಾಧುರ್ಯಕ್ಕೆ ಇನ್ನೊಂದು ಹೆಸರು ಆರ್.ಕೆ. ಶ್ರೀಕಂಠನ್. ಲೆಕ್ಕಾಚಾರಗಳನ್ನೆಲ್ಲಾ ಧಾಟಿ ತನ್ನದೇ ಮನೋಧರ್ಮದ ಬಣ್ಣ ತುಂಬುವ ವರ್ಣಶಿಲ್ಪಿ! ಹಾಸನದ ಹಳ್ಳಿಯಿಂದ ಜಗತ್ತಿನಾದ್ಯಂತ ಮಿಡಿದ ದನಿ. ಕನ್ನಡ ನಾಡಿನ ಸಂಗೀತಗಾರರಲ್ಲಿ ಮೊದಲಿಗ. ಸಂಗೀತ ಭಾಷೆಯನ್ನು ಮಾತೃಭಾಷೆ ಮಾಡಿಕೊಂಡು ಇಂದಿಗೂ ಮಾತನಾಡುತ್ತಲೇ ಇದ್ದಾರೆ!
ಮೈಸೂರು ಮಹಾರಾಜ ಕಾಲೇಜಿನಿಂದ ಕಲಾ ಪದವಿ ಪಡೆದಿರುವ ಶ್ರೀಕಂಠನ್ ನಡೆದ ಹಾದಿಯಲ್ಲಿ ಹಲವು ಗುರುತುಗಳಿವೆ. ಆಕಾಶವಾಣಿಯಲ್ಲಿ 32 ವರ್ಷಗಳ ಸೇವೆ ಕನ್ನಡಿಗರ ಎದೆಗೂಡಿನಲ್ಲಿ ಮನೆ ಮಾಡಿದೆ. `ಗಾನವಿಹಾರ' ಕಾರ್ಯಕ್ರಮದಲ್ಲಿ ಸಂಗೀತ ಗುರುವಾಗಿ ಲಕ್ಷಾಂತರ ಕೇಳುಗರಿಗೆ ಸಂಗೀತ ಪಾಠ ಮಾಡಿದ್ದಾರೆ. ಪುರಂದರ ದಾಸರ ಕೃತಿಗಳಿಗೆ ಅವರು ಕೊಟ್ಟ ಸ್ವರೂಪ ಶ್ರೀಕಂಠನ್ ನಿರ್ಮಿಸಿದ ಮಹತ್ವದ ಮೈಲುಗಲ್ಲು. ಕೆಸೆಟ್ ಮೂಲಕ ಮನೆ ಮನೆ ತಲುಪಿದ್ದಾರೆ. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಸದಸ್ಯರಾಗಿ ಕಾರ್ಯ ಮಾಡಿದ್ದಾರೆ. ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ..........ಮದ್ರಾಸ್ ಸಂಗೀತಗಾರರ ಆರ್ಭಟದ ನಡುವೆ, ಹಿಂದೂಸ್ತಾನಿ ಸಂಗೀತದ ಅಲೆಯಲ್ಲಿ ಈಜಿ ಒಬ್ಬ ಪರಿಪೂರ್ಣ ಸಂಗೀತ ವಿದ್ವನ್ಮಣಿಯಾಗಿ ಹೊರಹೊಮ್ಮಿದ್ದಾರೆ.
ಆರ್.ಕೆ. ಶ್ರೀಕಂಠನ್ ಹುಟ್ಟಿದ್ದು ಮಕರ ಸಂಕ್ರಾಂತಿಯ ದಿನ. 1920 ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಅವರ ಹುಟ್ಟು. ಇದೇ ಜನವರಿ 20ಕ್ಕೆ ಅವರಿಗೆ ತೊಂಭತ್ತು ತುಂಬಿದವು. ಇದು ಕನ್ನಡಿಗರ ಹೆಮ್ಮೆ. ತೊಂಭತ್ತರ ಹರೆಯದಲ್ಲೂ ಬರೋಬ್ಬರಿ ಮೂರು ಗಂಟೆ ಕಚೇರಿ ಹಾಡಿ ತಣಿಸಬಲ್ಲ ಒಬ್ಬ ಸಂಗೀತಾರಾಧಕ ನಮ್ಮ ನಡುವೆ ಇರುವುದು ಹೆಮ್ಮೆಯೇ ಸರಿ. ಈ ಸಂದರ್ಭದಲ್ಲಿ ಬೆಂಗಳೂರಿನ ಆರ್.ಕೆ. ಶ್ರೀಕಂಠನ್ ಟ್ರಸ್ಟ್ ವಿಶೇಷ ಕಾರ್ಯಕ್ರಮ ಆಚರಿಸಿತು. ವಾರಗಳ ಕಾಲ ಶ್ರೀಕಂಠನ್- 90 ಹೆಸರಿನಲ್ಲಿ ಉತ್ಸವ ನಡೆಸಿತು. ಇಡೀ ಜಗತ್ತಿನೆಲ್ಲೆಡೆ ಇರುವ ಕರ್ನಾಟಕ ಶಾಸ್ತ್ರೀಯ ಸಂಗೀತ ರಸಿಕರು ಶ್ರೀಕಂಠನ್- 90ಕ್ಕೆ ಸಾಕ್ಷಿಯಾದರು. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.
ಮಹಾನುಭಾವ ಪರಂಪರೆ: ಆರ್.ಕೆ. ಶ್ರೀಕಂಠನ್ ಅವರ ಕುಟುಂಬದಲ್ಲಿ ವೇದ, ಸಂಸ್ಕೃತ, ಸಂಗೀತ, ಸಾಹಿತ್ಯ, ಲಾಲಿತ್ಯಗಳೇ ತುಂಬಿವೆ. ತಂದೆ ಆರ್. ಕೃಷ್ಣಶಾಸ್ತ್ರಿಗಳು ಬಹುಶೃತ ವಿದ್ವಾಂಸರು. ಗಮಕಿ, ಹರಿಕತಾ ವಿದ್ವಾಂಸರು ಹಾಗೂ ಕವಿಗಳೂ ಕೂಡ. ಆರ್.ಕೆ. ಶ್ರೀಕಂಠನ್ ಅವರಿಗೆ ತಂದೆಯೇ ಮೊದಲ ಗುರು. ನಂತರ ಅಣ್ಣ ಆರ್.ಕೆ. ವೆಂಕಟರಮಣ ಶಾಸ್ತ್ರೀ ಗುರುವಾದರು. ಅಣ್ಣನ ಆಶ್ರಯದಲ್ಲಿ ಶ್ರೀಕಂಠನ್ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡರು.
ಆರ್.ಕೆ. ಶ್ರೀಕಂಠನ್ ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬರುವ ವಿದ್ವಾಂಸರು. ವಾಲಾಜಪೇಟೆ ವೆಂಕಟರಮಣ ಭಾಗವತರು ತ್ಯಾಗರಾಜರ ನೇರ ಶಿಷ್ಯರು. ಮೈಸೂರು ಸದಾಶಿವರಾಯರು ಭಾಗವತರ ಶಿಷ್ಯರು. ರಾಯರ ಶಿಷ್ಯರು ವೀಣೆ ಶೇಷಣ್ಣ ಹಾಗೂ ಸುಬ್ಬಣ್ಣ. ಶೇಷಣ್ಣರಿಗೆ ಶ್ರೀಕಂಠನ್ ಅವರ ಅಣ್ಣ ವೆಂಕಟರಮಣ ಶಾಸ್ತ್ರೀ ಶಿಷ್ಯರು. ಅಣ್ಣನ ಶಿಷ್ಯರು ಆರ್.ಕೆ. ಶ್ರೀಕಂಠನ್. ಅವರ ಮೂಲ ಮೂಲಪುರುಷನಲ್ಲಿಗೇ ಹೋಗಿ ನಿಲ್ಲುತ್ತದೆ.
ನ್ಯೂಟನ್ ಮತ್ತು ಶ್ರೀಕಂಠನ್: `ನೀವು ಬಹಳ ಸಾಧಿಸಿದ್ದೀರಿ' ಎಂದು ಯಾರಾದರೂ ಶ್ರೀಕಂಠನ್ ಅವರಿಗೆ ಹೇಳಿದರೆ, ವಿಜ್ಞಾನಿ ಐಸಾಕ್ ನ್ಯೂಟನ್ ಹೇಳಿದ ಮಾತು ಹೇಳಿ ಚಕಿತಗೊಳಿಸುತ್ತಾರೆ. `ನಾನೊಬ್ಬ ಪುಟ್ಟ ಮಗು. ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ' ನ್ಯೂಟನ್ನನ ಈ ಮಾತು ನನಗೂ ಅನ್ವಯಿಸುತ್ತದೆ. ಸಂಗೀತದಿಂದ ದೊಡ್ಡವರು ಮಳೆ ತರಿಸಿದ್ದಾರೆ. ಸುರಿಯುವ ಮಳೆಯನ್ನು ತಡೆದು ನಿಲ್ಲಿಸಿದ್ದಾರೆ. ಕಗ್ಗಲ್ಲನ್ನು ಕರಗಿಸಿದ್ದಾರೆ. ನಾನೊಬ್ಬ ಪಾಮರ! ಇಂಥಾ ಮಹಾಕಾರ್ಯವನ್ನು ಮಾಡಬಲ್ಲೆನೆ ಎಂದು ಪ್ರಶ್ನಿಸುತ್ತಾ ಶ್ರೀಕಂಠನ್ ಧರೆಗಿಳಿದುಬಿಡುತ್ತಾರೆ.
ಪುರಂದರ ದಾಸರ ಕೃತಿಗಳಿಗೆ ಶ್ರೀಕಂಠನ್ ಸ್ವರೂಪ: ಕರ್ನಾಟಕ ಶಾಸ್ತ್ರೀಯ ಸಂಗೀತ ಪಿತಾಮಹ ಪುರಂದರ ದಾಸರ ಸಂಗೀತ ಬರೀ ಸಂಗೀತವಲ್ಲ. ಗುಣಾಕಾರ, ಭಾಗಾಕಾರಗಳ ಸ್ವರ ಸಂಯೋಜನೆಯಲ್ಲ. ಅದೊಂದು ಮೌಲ್ಯ. ಆ ಮೌಲ್ಯವನ್ನು ಅರ್ಥ ಮಾಡಿಕೊಂಡವರು ಆರ್.ಕೆ. ಶ್ರೀಕಂಠನ್.
ಮಹಮದೀಯರ ದಾಳಿಯಿಂದ ಇಕ್ಕಟ್ಟಿಗೆ ಸಿಲುಕಿದ್ದ ಭಾರತೀಯ ಸನಾತನ ಧರ್ಮದ ಉಳಿವಿಗೆ ಪುರಂದರ ದಾಸರು ಸಾಮಾಜಿಕ ಬದಲಾವಣೆಯ ಅಸ್ತ್ರವಾಗಿ ಸರಳ ಸಂಗೀತವನ್ನು ಬಳಸಿದ್ದರು. ಇದು ಸಾಹಿತ್ಯ ಮನೋಧರ್ಮ ಸಂಗೀತವಾಗಿತ್ತು. ಇದನ್ನು ಅರ್ಥಮಾಡಿಕೊಂಡ ಶ್ರೀಕಂಠನ್ ಪುರಂದರ ದಾಸರ ನೂರಾರು ಕೀರ್ತನೆ, ದೇವರ ನಾಮಗಳಿಗೆ ಮಟ್ಟು ಹಾಕಿದ್ದಾರೆ. ಸ್ಕ್ರಿಪ್ಟ್ ಇಲ್ಲದ, ಕೇವಲ ಕರ್ಣ ಪರಂಪರೆಯಿಂದ ಬಂದ ಕೃತಿಗಳಿಗೆ ಅಂತಿಮ ರೂಪ ಕೊಟ್ಟಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಪುರಂದರ ದಾಸರ ಕೃತಿಗಳನ್ನೇ ಇಟ್ಟುಕೊಂಡು ಹಲವು ಕಚೇರಿ ಮಾಡಿದ್ದಾರೆ. `ನಾರಾಯಣ ನಿನ್ನ ನಾಮದ ಸ್ಮರಣೆಯ' ಈ ದೇವರ ನಾಮವನ್ನು ಶ್ರೀಕಂಠನ್ ದನಿಯಲ್ಲೇ ಕೇಳಿದರೆ ಚೆನ್ನ!
ಪ್ರದರ್ಶಕ ಮತ್ತು ಗುರು: ಶ್ರೀಕಂಠನ್ ಕೇವಲ ಕಚೇರಿ ಕೊಡುವ ಕಲಾವಿದ ಮಾತ್ರವಲ್ಲ. ಅವರೊಬ್ಬ ಶ್ರೇಷ್ಠ ಸಂಗೀತ ಗುರು. ನಿತ್ಯ ಕಚೇರಿಗಳಿಂದ ಮಿಂಚುವ ಕಾಲದಲ್ಲೂ, ಬೇಡಿಕೆಯ ಕಾಲದಲ್ಲೂ, ವಿದೇಶಗಳಿಗೆ ಹೋದಾಗಲೂ ಅವರು ವಿದ್ಯಾದಾನ ಮರೆತಿಲ್ಲ. ಪಾಠ ಮಾಡಿ ತಾವು ಗಟ್ಟಿಯಾಗಿದ್ದಾರೆ. ನೂರಾರು ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಈ ಸಾಧನೆ ಅವರ ಅಳಿಸಲಾಗದ ಗುರುತು. ಇದಕ್ಕೆ ಎಂ.ಎಸ್. ಶೀಲಾ, ಟಿ.ಎಸ್. ಸತ್ಯವತಿ ಹಾಗೂ ತಮ್ಮ ಮಗ ಆರ್.ಎಸ್. ರಮಾಕಾಂತ್ ಅವರೇ ಸಾಕ್ಷಿ.
ಸಂಕಿರಣಗಳಲ್ಲಿ ಶ್ರೀಕಂಠನ್: ಸಂಗೀತ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರಗಳಲ್ಲಿ ಆರ್.ಕೆ. ಶ್ರೀಕಂಠನ್ ಇದ್ದಾರೆ ಎಂದರೆ ಜನ ತುಂಬಿ ಬರುತ್ತಾರೆ. ಅಷ್ಟರ ಮಟ್ಟಿನ ಮೌಲ್ಯ ಅವರ ಮಾತಿನಲ್ಲಿರುತ್ತದೆ. ಎಲ್ಲವನ್ನೂ ಶಾಸ್ತ್ರಬದ್ಧವಾಗಿ, ಸಾಕ್ಷ್ಯ ಸಮೇತವಾಗಿ, ಉದಾಹರಣೆಗಳ ಜತೆಯಾಗಿ ಉಣಬಡಿಸುತ್ತಾರೆ. ವಿಚಾರ ಮಂಡನೆ ಕಬ್ಬಿನ ಜಲ್ಲೆಯನ್ನು ಅರೆದು, ಬಸಿದು ಸಿಹಿಹಾಲು ಕೊಡುವ ರೀತಿಯಲ್ಲಿ ಇರುತ್ತದೆ.
ಸಂಗೀತ ಚಿಕಿತ್ಸಕ: ಸಂಗೀತಕ್ಕೆ ಅತೀಂದ್ರಿಯ ಶಕ್ತಿ ಇದೆ ಎಂಬುದನ್ನು ಶ್ರೀಕಂಠನ್ ಬಲವಾಗಿ ನಂಬುತ್ತಾರೆ. ಸುಸ್ವರ ಆಲಿಸಿದ ಖಗ ಮೃಗ ಪಕ್ಷಿಗಳು ತಲೆದೂಗುತ್ತವೆ ಎಂದರೆ ರೋಗ ವಾಸಿ ಮಾಡುವ ಗುಣ ಸಂಗೀತಕ್ಕಿದೆ. ಬಹಳ ಸರಳವಾಗಿ ಲಯವಿನ್ಯಾಸದ ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿ ಇದೆ ಎಂದು ಶ್ರೀಕಂಠನ್ ಸದಾ ಹೇಳುತ್ತಾರೆ.
ತಮ್ಮ 14ನೇ ವಯಸ್ಸಿನಲ್ಲಿ ವೇದಿಕೆ ಹತ್ತಿದ ಶ್ರೀಕಂಠನ್ ಇವತ್ತಿಗೂ ದಣಿದಿಲ್ಲ. ಹಲವು ಘಟ್ಟಗಳನ್ನು ಮುಟ್ಟಿ ಬಂದಿದ್ದಾರೆ. ಹೊಗಳಿಕೆಗೆ ಹಿಗ್ಗಿಲ್ಲ. ತೆಗಳಿಕೆಗೆ ಕುಗ್ಗಿಲ್ಲ. ಶಾಂತಮೂರ್ತಿಯಾಗಿ ತಮ್ಮ ಸ್ವರಸಾಗರದಿಂದ ವಿಶ್ವವನ್ನು ಗೆದ್ದಿದ್ದಾರೆ. ಸೌಂಧರ್ಯದ ಅನುಭೂತಿ ಮಾಡಿಕೊಂಡಿದ್ದಾರೆ. ಪ್ರಶಸ್ತಿ, ಮನ್ನಣೆಗಳನ್ನೂ ಮೀರಿ ಎತ್ತರಕ್ಕೆ ತಲುಪಿದ್ದಾರೆ. ತೋಂಭತ್ತು ಪೂರೈಸಿ ನೂರರ ಎಡೆಗೆ ಹೆಜ್ಜೆ ಇಟ್ಟಿದ್ದಾರೆ. ಇಂತಹ ಮಡಿಮಂತ ಕಲಾವಿದನಿಗೆ `ಪದ್ಮ' ಪ್ರಶಸ್ತಿ ಒಂದು ಲೆಕ್ಕವಾಗಿತ್ತೆ?
*****
ತೊಂಭತ್ತು ತುಂಬಿದ ಹೊತ್ತಿನಲ್ಲಿ ಆರ್.ಕೆ. ಶ್ರೀಕಂಠನ್ ಅವರ ಜೊತೆ ಮಾತುಕತೆ.
* ತಾವು ತೊಂಭತ್ತರ ಎತ್ತರದಲ್ಲಿದ್ದೀರಿ. ಎಂಭತ್ತನ್ನು ಸಂಗೀತಕ್ಕೇ ಧಾರೆ ಎರೆದ್ದೀರಿ. ಈ ಸನ್ನಿವೇಶದಲ್ಲಿ ನಿಮ್ಮ ಮಾತು?
ನನ್ನ ಮನಸ್ಸು ತುಂಬಿ ಬಂದಿದೆ. ಇಷ್ಟು ಕಾಲ ಸೇವೆ ಮಾಡಲು ಅನುವು ಮಾಡಿಕೊಟ್ಟ ಭಗವಂತನಿಗೆ ನನ್ನ ಕೋಟಿ ಪ್ರಣಾಮಗಳು. ಸಂಗೀತ ಸಿದ್ಧಿಯಾಗಿದೆ ಎನ್ನುವ ಧೈರ್ಯ ನನಗಿಲ್ಲ. ಹಾಡುತ್ತಿದ್ದರೆ ಕೇಳುಗ ಅಲ್ಲೇ ತನ್ಮಯನಾಗಿಬಿಡಬೇಕು. ಹಾಗಿರಬೇಕು ಹಾಡುಗಾರಿಕೆ. ಇನ್ನೂ ಹಾಡುವ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.
* ಒಂದು ಯುಗಮಾನಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಇದ್ದೀರಿ. ಅಪಾರ ಏರಿಳಿತಗಳನ್ನು ಕಂಡಿದ್ದೀರಿ. ನೀವು ಗುರುತಿಸುವ ಬದಲಾವಣೆಗಳಾವವು?
ಬನ್ನಿ ನೂರು ವರ್ಷ ಹಿಂದೆ ಹೋಗೋಣ. ಅವತ್ತಿನ ಸಾಮಾಜಿಕ ಸ್ಥಿತಿಯೇ ಬೇರೆಯಾಗಿತ್ತು. ಸಂಗೀತ ತಪಸ್ಸಾಗಿತ್ತು. ಗುರುಕುಲ ಪದ್ಧತಿ ಇತ್ತು. ಗುರುಸೇವೆ ಸಂಕಲ್ಪವಾಗಿತ್ತು. ಅಭ್ಯಾಸ ಹಠಯೋಗವಾಗಿತ್ತು. ಕಚೇರಿಗಳು ಬಹಳ ಕಮ್ಮಿ ಇರುತ್ತಿದ್ದವು. ಕಚೇರಿ ಇದೆ ಅಂದರೆ ನೂರಾರು ಮೈಲಿ ಹೋಗಿ ಕೇಳುತ್ತಿದ್ದರು. ಇವತ್ತೆಲ್ಲಿದೆ ಸ್ವಾಮಿ ಆ ಪರಮಭಕ್ತಿ? ಕಚೇರಿ ಆರುವರೆ ಗಂಟೆಗೆ ಆರಂಭವಾದರೆ ಒಂಭತ್ತು ಗಂಟೆಗೆ ಮುಗಿಸಿಬಿಡಬೇಕು. ಯಾಕಂದರೆ ಬೆಳಿಗ್ಗೆ ಎದ್ದು ಆಫೀಸ್ಗೆ ಹೋಗಬೇಕಲ್ಲ. ಅಂದು ನಾಲ್ಕುಗಂಟೆ ಕಾಲ ಹಾಡುತ್ತಿದ್ದರು. ಇಂದು ಹಲವು ಸ್ಥರದಲ್ಲಿ ಬದಲಾವಣೆಗಳಾಗಿವೆ. ಬದಲಾಗಬೇಕು ನಿಜ. ಆದರೆ ಅದು ಶಾಸ್ತ್ರವನ್ನು ಮೀರಬಾರದು.
* ನಿಮ್ಮ ಸಂಗೀತ ಜ್ಞಾನ ನಿಮ್ಮನ್ನು ಇಡೀ ದೇಶ ಸುತ್ತಿಸಿದೆ. ಸಾಗರವನ್ನೂ ಧಾಟಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಲೆ ಯಾವ ರೀತಿ ಇದೆ?
ಹಿಂದುಸ್ತಾನಿ ಸಂಗೀತದ ಅಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನಲುಗಿದೆ. ಹಿಂದುಸ್ತಾನಿಯವರಿಗೆ ಸಿಕ್ಕುವ ಮಾನ್ಯತೆ ನಮ್ಮ ಕಲಾವಿದರಿಗೆ ಸಿಗುತ್ತಿಲ್ಲ. ನಮ್ಮ ಸರ್ಕಾರಗಳು ಭಕ್ತಿ ಸಂಗೀತವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲೇ ನೋಡಿ, ಕರ್ನಾಟಕದಲ್ಲಿ ಸ್ಥಾಪನೆ ಆಗುತ್ತಿರುವ ಸಂಗೀತ ವಿಶ್ವವಿದ್ಯಾಲಯಕ್ಕೆ ಹಿಂದೂಸ್ತಾನಿ ಗಾಯಕಗೊಬ್ಬರ ಹೆಸರನ್ನು ಇಡುವ ಅಗತ್ಯವೇನಿದೆ? ಕರ್ನಾಟಕ ಸಂಗೀತಗಾರರ ಹೆಸರನ್ನೇ ಇಡಬಹುದಲ್ಲಾ? ಇದನ್ನೆಲ್ಲಾ ಯೋಚಿಸಿದರೆ ಬಹಳ ನೋವಾಗುತ್ತೆ.
* ನಿತ್ಯ ಕಚೇರಿಗಳನ್ನು ಮಾಡುತ್ತಲೇ ನೀವೊಬ್ಬ ಶ್ರೇಷ್ಠ ಗುರುವಾಗಿ ವಿಶೇಷ ಎನಿಸಿಕೊಂಡಿದ್ದೀರಿ. ಇದು ಹೇಗೆ ಸಾಧ್ಯವಾಯಿತು?
ಅದಕ್ಕೆ ನನ್ನ ಜ್ಞಾನದಾಹವೇ ಕಾರಣ. ಹೇಳಿಕೊಟ್ಟು ಕಲಿತಿದ್ದೇನೆ. ಪುರಂದರದಾಸರೇ ಹೇಳಿದ್ದಾರಲ್ಲವೇ? ಕೆರೆಯ ನೀರನು ಕೆರೆಗೆ ಚೆಲ್ಲು ಎಂದು. ಕಲಿತಿದ್ದನ್ನು ಹಂಚಿಕೊಂಡಿದ್ದೇನಷ್ಟೆ.
* ಇವತ್ತಿಗೂ ಮೂರುಗಂಟೆ ಕಚೇರಿಯನ್ನು ದಣಿಯದೆ ಹಾಡಿ ತಣಿಸುತ್ತೀರಿ. ನಿಮ್ಮ ದೇಹ ಮತ್ತು ದನಿಯ ಸಂಬಂಧವೇನು?
ರೆಸ್ಪೆಕ್ಟ್ ಯುವರ್ ಬಾಡಿ. ವರ್ಷಿಪ್ ಯುವರ್ ಬಾಡಿ. ಇದೇ ನನ್ನ ಪಾಲಿಸಿ. ದೇಹ ಮನಸ್ಸು ಶಾಂತವಾಗಿ ಇಟ್ಟುಕೊಂಡಿದ್ದೇನೆ. ಯಾವುದೇ ಉದ್ವೇಗ ಇಲ್ಲ. ಹೊಟ್ಟೇಕಿಚ್ಚು ಇಲ್ಲ. ದುಷ್ಟ ಪ್ರವೃತ್ತಿಗಳು ದೂರಾ ದೂರಾ. ಸಕಾರಾತ್ಮಕ ಯೋಚನೆಗಳ ಜೊತೆ ಜೀವಿಸಿದರೆ ಎಲ್ಲಾ ಚೆನ್ನಾಗಿರುತ್ತೆ.
* ಇವತ್ತಿನ ಕೆಲ ಸಂಗೀತಗಾರರು ಕೃತಿ ರಚನೆಯಲ್ಲಿ ತೊಡಗಿದ್ದಾರೆ. ತಮಗೂ ಕೃತಿ ರಚಿಸುವ ಯೋಚನೆ ಇದಿಯೇ?
ಅವರು ಮೂರ್ಖರು. ಕೃತಿಕಾರ ಅಂದರೆ ಏನು ಅಂದುಕೊಂಡಿದ್ದಾರೆ? ರಿಷಿ ಸದೃಶನಾಗಿರಬೇಕು. ವೈರಾಗ್ಯ ಶಿಖಾಮಣಿ ಆಗಿರಬೇಕು. ಮೌಲ್ಯಗಳನ್ನು ಬದುಕಿನ ಜೊತೆ ಅಳವಡಿಸಿಕೊಂಡಿರಬೇಕು. ಇವರಿಗೆ ಇದೆಲ್ಲಾ ಎಲ್ಲಿಂದ ಬರಬೇಕು. ದೊಡ್ಡವರು ಮಾಡಿರುವುದನ್ನು ಮೊದಲು ಕಲಿತುಕೊಳ್ಳಲಿ ಇವರು. ಮಹಾನುಭಾವರು ಮಾಡಿರುವುದನ್ನು ನಾನಿನ್ನು ಕಲಿಯುತ್ತಲೇ ಇದ್ದೇನೆ. ಇನ್ನು ಕೃತಿ ಮಾಡುವ ಮಾತೆಲ್ಲಿ?
* ಈಗಿನವರಲ್ಲಿ ಸಂಗೀತ ಕಲಿಕೆಯನ್ನು ಯಾವ ರೀತಿಯಲ್ಲಿ ಅರ್ಥೈಸುತ್ತೀರಿ?
ಪ್ರತಿಭಾವಂತ ಮಕ್ಕಳಿದ್ದಾರೆ. ದನಿ ಶುಶ್ರಾವ್ಯವಾಗಿದೆ. ಆದರೆ ವೃತ್ತಿಪರವಾದ ಕಲಿಕೆಯ ಕ್ರಮ ಇಲ್ಲ. ಸಂಗೀತ ಒಂದು ಹವ್ಯಾಸವಾಗಿಬಿಟ್ಟಿದೆ. ವ್ಯವಹಾರಕ್ಕಾಗಿ ಸಂಗೀತವನ್ನು ಬಳಸುತಿದ್ದಾರೆ. ಇದು ಬದಲಾಗಬೇಕು. ಒಳ್ಳೆಯ ಗುರುವಿನ ಮಾರ್ಗದರ್ಶನ, ಹೆಚ್ಚು ಕೇಳ್ಮೆ, ಸಂಗೀತ ಚಿಂತನೆ, ಭಕ್ತಿ ಇದ್ದರೆ ಖಂಡಿತಾ ಮಹತ್ವವನ್ನು ಸಾಧಿಸಬಹುದು.