Tuesday, December 28, 2010

ದೊಡ್ಡವರೆಲ್ಲ ಜಾಣರಲ್ಲ!



(ಉದಯವಾಣಿ ‘ಚಿನ್ನಾರಿ’ ಪುರವಣಿಯಲ್ಲಿ ದಿ. 20-11-2010ರಂದು ಪ್ರಕಟಿತ)


ಭಾರಧ್ವಜಮಹರ್ಷಿ ಮಹಾಜ್ಞಾನಿ. ಮೂರು ಲೋಕಗಳಲ್ಲಿರುವ ಸಕಲ ವಿದ್ಯೆಗಳನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಅವರು ವಿದ್ಯಾ ಶಿಖಾಮಣಿಗಳು. ಸಕಲ ಕಲಾಪಾರಂಗತರು. ವೇದವಿದ್ಯಾದಿ ಪಂಡಿತರು.
ಒಂದು ದಿನ ಧ್ಯಾನ ನಿರತರಾಗಿರುವ ಸಮಯದಲ್ಲಿ ಅವರ ಮನಸ್ಸಿನಲ್ಲಿ ಒಂದು ಚಿಂತೆ ಹತ್ತಿತು. ‘ನನಗೆ ಎಲ್ಲವೂ ಗೊತ್ತಿಗೆ, ನನಗೆ ಕಲಿಯಬೇಕಾದುದು ಈ ಸೃಷ್ಟಿಯೊಳಗೆ ಯಾವುದೂ ಇಲ್ಲ. ನಾನು ಸೃಷ್ಟಿಕರ್ತನಿಂದ ಬ್ರಹ್ಮಜ್ಞಾನ ಪಡೆಯಲು ಇದು ಸಕಾಲ’ ಎಂಬ ಚಿಂತೆ ಅವರ ತಲೆಯೊಳಗೆ ಬಂತು.
ಬ್ರಹ್ಮಜ್ಞಾನ ಅಂತಿಮವಾದದು. ಬ್ರಹ್ಮಜ್ಞಾನ ಪಡೆದ ಅತಿರಥರು ಲೋಕದಲ್ಲಿ ಯಾರೂ ಇಲ್ಲ. ಅದು ಬ್ರಹ್ಮನಿಗೆ ಮಾತ್ರ ಸೀಮಿತವಾದ ಜಾನ. ಹಾಗಾಗಿ ಅದ್ಯಾವ ಕೆಟ್ಟ ಘಳಿಗೆಯಲ್ಲಿ ಭಾರಧ್ವಜ ಮಹರ್ಷಿಗಳಿಗೆ ಬ್ರಹ್ಮಜಾನದ ಅತಿಯಾಸೆ ತಲೆಹೊಕ್ಕಿತೋ ಗೊತ್ತಿಲ್ಲ, ಬ್ರಹ್ಮಜ್ಞಾನವನ್ನು ಕರುಣಿಸು ಎಂದು ಕೇಳಲು ಭಾರಧ್ವಜರು ಬ್ರಹ್ಮನ ಬಳಿಗೆ ನಡೆದರು.
ಸೃಷ್ಟಿಕರ್ತ ಬ್ರಹ್ಮ ವಿಶ್ರಾಂತಿಯಲ್ಲಿ ತೊಡಗಿಡದ್ದರು. ಭಾರಧ್ವಜರು ಬಂದು ಬ್ರಹ್ಮನಿಗೆ ನಮಸ್ಕರಿಸಿದರು. ಬ್ರಹ್ಮ ಭಾರಧ್ವಜರ ಮುಖ ನೋಡಿ ನಕ್ಕು ಏನು ಸಮಾಚಾರ ಎಂದು ಕೇಳಿದರು. ಅದಕ್ಕೆ ಭಾರಧ್ವಜರು ’ನನಗೆ ಮೂರು ಲೋಕಗಳ ಮಾಹಿತಿಯೂ ಇದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ. ಹಾಗಾಗಿ ನನಗೆ ಬ್ರಹ್ಮಜ್ಞಾನವನ್ನು ಕರುಣಿಸು ಎಂದು ಭಾರಧ್ವಜರು ಕೇಳಿದರು.
ಭಾರಧ್ವಜರ ಈ ಮಾತು ಕೇಳಿದ ಬ್ರಹ್ಮ ಯಾವ ಮಾತನ್ನೂ ಆಡದೆ, ನಿಶ್ಯಬ್ಧವಾಗಿ ಕುಳಿತರು. ಇದರಿಂದ ಕೆರಳಿದ ಭಾರಧ್ವಜರು ‘ನನಗೆ ನೀನು ಅವಮಾನ ಮಾಡುತ್ತಿದ್ದೀಯಾ, ನನಗೆ ಗೊತ್ತಿಲ್ಲದ್ದು ಇದೆ ಎಂದು ನಿನ್ನ ಚಿಂತೆಯೇ? ಎಂದು ಕೇಳಿದರು.
ಅದಕ್ಕೆ ಬ್ರಹ್ಮ ನೋಡು ಮಹರ್ಷಿ ನೀನು ಜ್ಞಾನಿ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೆ......ಎಂದು ಹೇಳುವಾಗ ಮತ್ತಷ್ಟು ಕೆರಳಿದ ಭಾರಧ್ವಜರು ಬ್ರಹ್ಮಜ್ಞಾನ ನಿನಗೆ ಮಾತ್ರ ಸೀಮಿತವೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆ ಸುರಿಸಿದರು.
ಬ್ರಹ್ಮ ತನ್ನ ಎದುರಿನಲ್ಲಿದ್ದ ಪರದೆಯ ಬಳಿ ನೋಡಿದರು. ಪರದೆಯ ಮೇಲೆ ಕೆಲವೊಂದು ಅಕ್ಷರಗಳು ಮೂಡಿದವು. ಭಾರಧ್ವಜರನ್ನು ನೋಡುತ್ತಾ ಬ್ರಹ್ಮ ‘ಮಹರ್ಷಿ ನಿನಗಿವು ಗೊತ್ತಾ ಅಂದರು. ತಡವರಿಸುತ್ತಾ ಭಾರಧ್ವಜರು ಏನದು......ಅದನ್ನು ನಾನು ಕೇಳಿಯೇ ಇಲ್ಲ ಅಂದರು.
ಆಗ ಬ್ರಹ್ಮ, ಅದು ನನಗೂ ಗೊತ್ತಿಲ್ಲ ಮುನಿವರ್ಯ. ನಾನೂ ಕಲಿಯುತ್ತಿದ್ದೇನೆ. ಪ್ರತಿದಿನ ಮುಂಜಾನೆ ಇವುಗಳನ್ನು ಶಾರದೆ ನನಗೆ ಬೋಧಿಸುತ್ತಿದ್ದಾಳೆ ಎಂದು ಹೇಳಿದರು. ಬ್ರಹ್ಮನ ಈ ಮಾತುಗಳನ್ನು ಕೇಳಿದ ಭಾರಧ್ವಜರು ಧರಗಿಳಿದು ಹೋದರು. ತಮ್ಮ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯಿತು. ‘ನನ್ನನ್ನು ಕ್ಷಮಿಸು, ನನ್ನ ಅಹಂಕಾರ ನನಗೆ ಸರಿಯಾದ ಪಾಠ ಕಲಿಸಿತು. ಪರಶಿವನೇ ಇನ್ನೂ ಕಲಿಯಿತ್ತಿದ್ದೇನೆ ಎಂದು ಹೇಳುವಾಗ ನಾನು ಯಾವ ಜ್ಞಾನಿ? ನಾನು ಅಜ್ಞಾನಿ ಅಜ್ಞಾನಿ ಎಂದು ಹೇಳುತ್ತಾ ಭಾರಧ್ವಜರು ಕಾಡಿಗೆ ತೆರಳಿದರು.
ಈ ಕತೆಯಲ್ಲಿ ಎಂತಹ ಮಹತ್ವದ ತತ್ವ ಅಡಗಿದೆ ಅಲ್ಲವೆ? ಇಲ್ಲಿ ಯಾರೂ ದೊಡ್ಡವರಲ್ಲ. ಮರಕ್ಕಿಂತ ಮರದೊಡ್ಡದು. ನನಗೆ ಎಲ್ಲವೂ ಗೊತ್ತು ಎಂದು ಹೇಳುವವರೂ ಯಾರೂ ಇಲ್ಲ. ಭಗವಂತನೂ ಕೂಡ. ಸೃಷ್ಟಿಕರ್ತನೇ ಇನ್ನೂ ಕಲಿಯುತ್ತಿದ್ದೇನೆ ಎಂದು ಹೇಳುವ ಮೂಲಕ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದಾರೆ.

Saturday, November 20, 2010



`ಭೂಮಿ' ಹುಡು­ಗರ ಸಾಹ­ಸ­ಗಾಥೆ


ದಿನಂ­ಪ್ರತಿ ಕೆಲಸ ಮಾಡ್ತೀವಿ. ಅದೇ ರೋಡು, ಅದೇ ಟ್ರ್ಯಾಫಿಕ್ಕು. ಅದೇ ಆಫೀಸು, ಅದೇ ಕಂಪ್ಯೂ­ಟರು. ಅದೇ ಬಾಸು, ಅದೇ ಕೊಲೀಗು. ಅದೇ ಊರು....ವಾ­ರ­ದೊ­ಳ­ಗೊಂದು ವೀಕ್ಲಿ ಆಫು. ಅದೇ ಫೋರಂ. ಅದೇ ಟಾಕೀಸು. ಅಂಥದ್ದೇ ಫಿಲ್ಮು. ನೋ ನೋ ನೋ ವೀಕ್ಲಿ ಆಫ್‌ ಬೇಡ್ವೇ ಬೇಡಾ ಓಟಿ ಮಾಡೋಣ!
ಇಷ್ಟೆಲ್ಲಾ ಮಾಡಿ, ಜೀವ­ನ­ದೊ­ಳಗೆ ಒಂದಷ್ಟು ಥ್ರಿಲ್‌ ಬೇಡ್ವಾ? ಜೋಶ್‌ ಬೇಡ್ವಾ? ಕುತೂ­ಹಲ ಬೇಡ್ವಾ? ಬೇಕಾ­ಗಿ­ರೋದು, ಬ್ಯಾಡ­ದಿ­ರೋದು ಎಲ್ಲಾನು ತುಂಬ್ಕೊಳ್ಳೋ ನೂರ್ಮಡಿ ಮೆಮೋರಿ ಹೊಂದಿರೊ ಈ ಬ್ರೈನಿಗೆ ಒಂಚೂರು ರೆಸ್ಟ್‌ ಬೇಡ್ವಾ? ಅಷ್ಟಕ್ಕೂ ಆ ಬಡ­ಪಾಯಿ ಬ್ರೈನು ಹಣ ಕೇಳತ್ತಾ ಒಡವೆ ಕೇಳುತ್ತಾ ವಸ್ತ್ರ ಕೇಳುತ್ತಾ?
ಹೌದು. ಎಲ್ಲಾ ಬೇಕು ನಿಜ. ಆದ್ರೆ....ಈ ಥ್ರಿಲ್ಲು, ಜೋಶು ಇವು­ಗಳ ಅರ್ಥನೇ ತಿಳೀ­ತಿಲ್ಲ! ಪೋರಂ­ನಲ್ಲಿ ಫಿಲ್ಮ್‌ ನೋಡೋ­ದ­ಕ್ಕಿಂತ ಥ್ರಿಲ್‌ ಬೇಕಾ? ಕಾಫಿ ಡೇನಲ್ಲಿ ಹವರ್ಸ್‌ ಹವರ್ಸ್‌ ಕೂರೋ­ದ­ಕ್ಕಿಂತ ಕುತೂ­ಹಲ ಬೇಕಾ? ರಾತ್ರಿ ಹನ್ನೆ­ರಡು ಹತ್ತು­ತ್ತಲೇ ಎಂ.ಜಿ. ರೋಡಲ್ಲಿ ಹಂಡ್ರೆಡ್‌ ಸ್ಪಿಡ್‌­ನಲ್ಲಿ ರೋಡ್‌ ರೇಸ್‌ ಮಾಡೋ­ದ­ಕ್ಕಿಂತ ಜೋಶ್‌ ಬೇಕಾ? .....ತಲೆ ಚಿಟ್ಟು ಹಿಡಿದು ಹೋಯ್ತು. ವಾಟ್‌ ಈಸ್‌ ಮೀನ್‌ ಬೈ ಜೋಶ್‌!?
ಬೆಟ್ಟ ಹತ್ತೊಣ: ಆ ಹುಡು­ಗ­ರಿಗೆ ಬೆಟ್ಟ ಹತ್ತೊ­ದ್ರಲ್ಲಿ ಅದೆಂ­ಥದೋ ಜೋಶ್‌. ಮೆಟ್ಟ­ಲಿವೆ ಹತ್ಕೊಂ­ಡೋ­ಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಬಸ್‌ ಹೋಗ್ತವೆ ಹೋಗ್ರಯ್ಯ ಅಂದ್ರೆ ನೋ ನೋ ಅಂತಾರೆ. ಒಂದ­ಥಸ್ತು ಮಹಡಿ ಹತ್ತೋಕೆ ಮುಖ ನೋಡುವ ಇವ್ರು ಸಮುದ್ರ ಮಟ್ಟ­ದಿಂದ ಹತ್ತು ಸಾವಿರ ಅಡಿ ಎತ್ತ­ರದ ಬೆಟ್ಟ ಹತ್ತುಲು ಮೂಖ ಮೂತಿ ನೋಡಲ್ಲ! ಎಂಥ ಹುಚ್ಚು­ತನ! ಇಲ್ಲ ಇಲ್ಲ... ಇದೇ ಜೋಶ್‌! ದಿಸ್‌ ಈಸ್‌ ವಾಟ್‌ ಮೀನ್‌ ಬೈ ಥ್ರಿಲ್‌.
ಅದು ಟ್ರೆಕ್ಕಿಂಗ್‌. ಅವರ ತಂಡದ ಹೆಸರು: `ಭೂಮಿ...ಸು­ತ್ತು­ವೆವು ನಾವು' ಅದೆಂಥಾ ದುರ್ಗಮ ಬೆಟ್ಟ­ವಾದ್ರೂ ಸೈ. ಪಟ್ಟಿ­ಯೊ­ಳ­ಗಿ­ರುವ ಬೆಟ್ಟ­ಗಳು: ಕೊಡ­ಚಾದ್ರಿ ಪರ್ವತ, ಕುಮಾರ ಪರ್ವತ, ರಾಮ­ನ­ಗರ ಬೆಟ್ಟ, ಮಧು­ಗಿರಿ ಪರ್ವತ ಹಾಗೂ ಮೊನ್ನೆ ತಾನೆ ಹೋಗಿ ಬಂದ ಕರ್ನಾ­ಟ­ಕದ ಅತಿ ಎತ್ತ­ರದ ಮುಳ್ಳ­ಯ್ಯನ ಗಿರಿ ಶಿಖರ.
ಟ್ರೆಕ್ಕಿಂಗ್‌ ಮಾಡೋ­ದ್ರಲ್ಲಿ ಇವರು ಅದೆಷ್ಟು ಥ್ರಿಲ್‌ ಆಗ್ತಾರೆ ಅಂದ್ರೆ. ಅದನ್ನು ಹೇಳೋಕೆ ಸಾಧ್ಯನೇ ಇಲ್ವಂತೆ. ಅದೊಂದು ಘಟ­ನೆ­ಯಾ­ಗಿದ್ರೆ ಪಟ್ಟಂತ ಹೇಳ­ಬ­ಹು­ದಿತ್ತು. ಆದ್ರೆ ಅದೊಂದು ಅನು­ಭವ. ಅನು­ಭ­ವಿ­ಸ­ಬೇ­ಕಷ್ಟೆ ಅಂತಾರೆ.
ಅವರು ಹೇಳಿದ್ದು: ಅದು ಮುಳ್ಳ­ಯ್ಯನ ಗಿರಿ. ನಾವು ಸಹಸ್ರ ಅಡಿ ಎತ್ತ­ರ­ದ­ಲ್ಲಿದ್ವಿ. ಮೋಡ­ದೊ­ಳಗೆ ಮುಚ್ಚಿ ಹೋಗಿದ್ವಿ. ಎತ್ತ ನೋಡಿ­ದ­ರತ್ತ ಮಂಜಿನ ರಾಶಿ. ಒಬ್ಬ­ರಿ­ಗೊ­ಬ್ಬರು ಕಾಣಲ್ಲ. ಹೇ.. ಇದ್ದೀಯ...ಹೀಗೆ ಮಾತಾ­ಡ್ಬೇಕು. ಅವನ ಮೀಸೆ ಮೇಲೊಂದು ಸಣ್ಣ ಮಂಜಿನ ಹನಿ. ಮುಟ್ಟಿ­ದರೆ ಕೆಟ್ಟೋ­ಗುತ್ತೆ. ಬಿಡ­ಕ್ಕಾ­ಗುತ್ತಾ? ಕೆಮರಾ ಕಣ್ಣು ಫುಲ್‌ ಬಿಜಿ. ಉಶ್ಯಪ್ಪಾ! ಸುಸ್ತಾಯ್ತು. ಚಾಕ­ಲೇಟ್‌ ತಿನ್ನೊಣ. ಕವರ್‌ ಎಸ­ದೀರಿ ಜೋಕೆ. ಜೇಬ್ನಲ್‌ ಇಟ್ಕೊಳಿ. ದಿಸ್‌ ಈಸ್‌ ಎನ್ವಿ­ರಾ­ನ್‌­ಮೆಂಟ್‌ ಫ್ರೆಂಡ್ಲಿ ಟ್ರೆಕ್ಕಿಂಗ್‌!
ಅಬ್ಬಾ. ಅಲ್ಲೊಂದು ಎತ್ತ­ರದ ವ್ಯೂ ಪಾಯಿಂಟ್‌. ಕೆಳಗೆ ನೋಡಿದ್ರೆ, ಸ್ವರ್ಗ­ಕ್ಕಿನ್ನು ಮೂರೇ ಗೇಣು. ಛೆ, ಮೊಬೈಲ್‌ ನಟ್‌­ವ­ರ್ಕಿಲ್ಲ. ಈ ಸುಖದ ಅನು­ಭವ ಹಂಚ್ಕೊ­ಳ್ಳೋಣ ಅಂದ್ರೆ. ಸಿಕ್ಕೇ ಬಿಡ್ತು ತುತ್ತ ತುದಿ. ಅಲ್ಲೊಂದು ಪುಟ್ಟ­ಗುಡಿ. ದೇವ­ರಿ­ಗೊಂದು ನಮ­ಸ್ಕಾರ. ತಮಾಷೆ ಏನು ಗೊತ್ತಾ? ನಾವು ಕಷ್ಟ­ಪಟ್ಟು ಟ್ರೆಕ್‌ ಮಾಡ್ಕೊಂಡ್‌ ಬಂದ್ರೆ, ಬಸ್ಸಲ್ಲಿ ಬಂದು ನಾಲ್ಕು ಮೆಟ್ಟಿಲು ಏರಿ ಏದು­ಸಿರು ಬಿಡುವ ಟೂರಿ­ಸ್ಟ್‌­ಗಳ ಸಾಧ­ನೆಯ ಮಾತು­ಗಳು.
ಬೆಟ್ಟದ ತುದಿ­ಯಲ್ಲಿ ಕುವೆಂಪು ನೆನ­ಪಾ­ದರು...
ಹೋಗು­ವೆನು ನಾ ಹೋಗು­ವೆನು ನಾ
ನನ್ನ ಒಲು­ಮೆಯ ಗೂಡಿಗೆ
ಸಿರಿ ಬನಂ­ಗಳ ಗಿರಿ­ಬ­ನಂ­ಗಳ
ಸಗ್ಗ­ಸು­ಖದ ಬೀಡಿಗೆ
ಹೋಗು­ವೆನು ನಾ...

ನಾವು ಹತ್ತಿದ್ದು ಮುಳ್ಳ­ಯ್ಯ­ನ­ಗಿರಿ, ಇಳಿ­ದಿದ್ದು ಬಾಬಾ ಬುಡನ್‌ ಗಿರಿ. ಇದು ಸುಲ­ಭದ ಚಾರ­ಣ­ವಲ್ಲ. ನಿಜಕ್ಕೂ ಧೈರ್ಯ ಬೇಕು. ಅದು ನಡೆ­ದಾ­ಡುವ ದಾರಿ­ಯಲ್ಲ, ದಾರಿ­ಯಿ­ಲ್ಲದ ಬೆಟ್ಟ. ನಾವೇ ದಾರಿ ಹುಡು­ಕ­ಬೇಕು. ದಾರಿ ತಪ್ಪಿದ ಮಕ್ಕ­ಳಾ­ದರೆ ದೇವ್ರೇ ಗತಿ! ದಿಕ್ಸೂಚಿ ಇಲ್ಲ­ದಿ­ದ್ದರೆ ಚಾರಣ ಕಷ್ಟ. ಗಾಯ ಗ್ಯಾರಂಟಿ. ಫಸ್ಟ್‌ ಏಡ್‌ ಬೇಕೇ ಬೇಕು. ಟ್ರೆಕ್ಕಿಂಗ್‌ ಅಂದ್ರೆ ಬೆನ್ನಿ­ಗೊಂದು ಬ್ಯಾಗು ಇದ್ದೇ ಇರುತ್ತೆ. ಕೆಲ­ವೊಂದು ಹತಾ­ರ­ಗಳೂ ಜತೆ­ಯಲ್ಲಿ ಇಟ್ಕೊಂ­ಡಿ­ರ­ಬೇಕು. ಟ್ರೆಕ್ಕಿಂಗ್‌ ಸಾಮಾ­ಗ್ರಿ­ಗಳು ಅಂಗ­ಡೀಲಿ ಸಿಗ್ತವೆ. ಗುಂಡಾ­ಗಿ­ರುವ ಭೂಮಿನಾ ಒಂದು ಸುತ್ತು ಹಾಕಿ­ದೆ­ವೆಂಬ ಭಾವ ನಮ್ಮದು. ಈ ಅನು­ಭಾವ ಮತ್ತೆ­ಲ್ಲಿಂದ ಸಿಗತ್ತೆ ಹೇಳಿ?
`ಭೂಮಿ' ಹುಡು­ಗರು ಬೆಟ್ಟ ಹತ್ತಿದ ಕತೆ ಇದು. ಇನ್ನೆಲ್ಲೂ ಈ ಥ್ರಿಲ್‌ ಸಿಕ್ಕೋದೆ ಇಲ್ಲಾ ಅಂತಾರೆ ಇವ್ರು. ದೇಶ ಸುತ್ತ ಬೇಕು ಇಲ್ಲಾ ಓದ­ಬೇಕು ನಿಜ, ಮುಂದಕ್ಕೆ ಸೇರ್ಸೊ­ದಾದ್ರೆ ಬೆಟ್ಟ ಹತ್ಬೇಕು. ಪ್ರಕೃ­ತಿಯ ಅಂಗ­ಳ­ದೊ­ಳಗೆ ಅವಳ ಸೌಂದರ್ಯ ಕಾಣುವ ಸೌಭಾಗ್ಯ ಚಾರಣ. ಕೆಲ­ವರು ಚಾರ­ಣ­ವನ್ನು ಮೋಜು ಅಂದ್ಕೊಂ­ಡಿ­ದಾರೆ. ಚಾರ­ಣ­ಕ್ಕೋ­ದ­ವರು ಪರಿ­ಸ­ರ­ವನ್ನು ಹಾಳು ಮಾಡಿ ಬರ್ತಾರೆ. ಚಾರಣ ಹೊಸ­ದೊಂ­ದನ್ನು ಜಗ­ತ್ತೊಂ­ದನ್ನು ತೋರಿ­ಸು­ತ್ತದೆ. ಇದು ಮೋಜು ಅಲ್ಲವೇ ಅಲ್ಲ. ಇದು ಸಾಹ­ಸ­ಗಾಥೆ.ಙ

Thursday, June 3, 2010



ಮನೋಧರ್ಮ ವರ್ಣಶಿಲ್ಪಿ ಶ್ರೀಕಂಠನ್‌!


ಅವರು ತೊಂಭತ್ತರ ಎತ್ತರಕ್ಕೆ ಏರಿದ್ದಾರೆ. ಶತಮಾನ ಸಾಮಿಪ್ಯದ ವಯೋಮಾನ ಅವರಿಗೆ ಬಾಳ ಸಂಜೆಯಲ್ಲ. ಸುಸ್ವರಗಳಿಂದ ಸೃಷ್ಟಿಯಾದ ಮುಂಜಾವು. ಪ್ರತಿನಿತ್ಯ ಸಂಗೀತ, ಸಾಧನೆ, ಆರಾಧನೆ. ಸಂಗೀತಕ್ಕೆ ಅವರ ಆತ್ಮಾರ್ಪಣೆ! ಆ ದಿವ್ಯ ಶರೀರದ ಭ್ಯವ್ಯ ಶಾರೀರ ರಸಿಕರನ್ನು ತನ್ಮಯಗೊಳಿಸಿದೆ. ಆ ದನಿ ಇಬ್ಬನಿಯಷ್ಟೆ ಶುದ್ಧ. ಸ್ಪಟಿಕದಷ್ಟೇ ನಿಖರ! ಭಾವ ಮತ್ತು ಭಕ್ತಿ ಅವರ ಆಸ್ತಿ. ಹಾಡುತ್ತಾ ಹಾಡುತ್ತಾ ತಲೆಮಾರು ತಲುಪಿದ್ದಾರೆ. ತೊಂಭತ್ತರಲ್ಲಿ ಎಂಭತ್ತನ್ನು ಸಂಗೀತಕ್ಕೇ ಕೊಟ್ಟಿರುವ ಅವರೊಬ್ಬ ಯುಗಪುರುಷ!
ಅವರು ಸಂಗೀತ ಕಲಾನಿಧಿ, ಗಾಯಕ ಚೂಡಾಮಣಿ, ಗಾನ ಭಾಸ್ಕರ, ಶೃತಿ ಸಾಗರ, ನಾದನಿಧಿ, ಕಲಾ ಸಾಗರ, ಗಾನರತ್ನ, ಲಯಕಲಾ ನಿಪುಣ........ಎಂಬಿತ್ಯಾದಿ ಬಿರುದಾಂಕಿತ ವಿದ್ವಾನ್‌. ಆರ್‌.ಕೆ. ಶ್ರೀಕಂಠನ್‌(ರುದ್ರಪಟ್ನಂ ಕೃಷ್ಣಶಾಸ್ತ್ರೀ ಶ್ರೀಕಂಠನ್‌). ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದ ಅತ್ಯಂತ ಹಿರಿಯ ಹೆಮ್ಮರ. ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯಾಭಿವ್ಯಕ್ತ ಮತ್ತು ಮಾಧುರ್ಯಕ್ಕೆ ಇನ್ನೊಂದು ಹೆಸರು ಆರ್‌.ಕೆ. ಶ್ರೀಕಂಠನ್‌. ಲೆಕ್ಕಾಚಾರಗಳನ್ನೆಲ್ಲಾ ಧಾಟಿ ತನ್ನದೇ ಮನೋಧರ್ಮದ ಬಣ್ಣ ತುಂಬುವ ವರ್ಣಶಿಲ್ಪಿ! ಹಾಸನದ ಹಳ್ಳಿಯಿಂದ ಜಗತ್ತಿನಾದ್ಯಂತ ಮಿಡಿದ ದನಿ. ಕನ್ನಡ ನಾಡಿನ ಸಂಗೀತಗಾರರಲ್ಲಿ ಮೊದಲಿಗ. ಸಂಗೀತ ಭಾಷೆಯನ್ನು ಮಾತೃಭಾಷೆ ಮಾಡಿಕೊಂಡು ಇಂದಿಗೂ ಮಾತನಾಡುತ್ತಲೇ ಇದ್ದಾರೆ!
ಮೈಸೂರು ಮಹಾರಾಜ ಕಾಲೇಜಿನಿಂದ ಕಲಾ ಪದವಿ ಪಡೆದಿರುವ ಶ್ರೀಕಂಠನ್‌ ನಡೆದ ಹಾದಿಯಲ್ಲಿ ಹಲವು ಗುರುತುಗಳಿವೆ. ಆಕಾಶವಾಣಿಯಲ್ಲಿ 32 ವರ್ಷಗಳ ಸೇವೆ ಕನ್ನಡಿಗರ ಎದೆಗೂಡಿನಲ್ಲಿ ಮನೆ ಮಾಡಿದೆ. `ಗಾನವಿಹಾರ' ಕಾರ್ಯಕ್ರಮದಲ್ಲಿ ಸಂಗೀತ ಗುರುವಾಗಿ ಲಕ್ಷಾಂತರ ಕೇಳುಗರಿಗೆ ಸಂಗೀತ ಪಾಠ ಮಾಡಿದ್ದಾರೆ. ಪುರಂದರ ದಾಸರ ಕೃತಿಗಳಿಗೆ ಅವರು ಕೊಟ್ಟ ಸ್ವರೂಪ ಶ್ರೀಕಂಠನ್‌ ನಿರ್ಮಿಸಿದ ಮಹತ್ವದ ಮೈಲುಗಲ್ಲು. ಕೆಸೆಟ್‌ ಮೂಲಕ ಮನೆ ಮನೆ ತಲುಪಿದ್ದಾರೆ. ಪ್ರತಿಷ್ಠಿತ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಸದಸ್ಯರಾಗಿ ಕಾರ್ಯ ಮಾಡಿದ್ದಾರೆ. ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ..........ಮದ್ರಾಸ್‌ ಸಂಗೀತಗಾರರ ಆರ್ಭಟದ ನಡುವೆ, ಹಿಂದೂಸ್ತಾನಿ ಸಂಗೀತದ ಅಲೆಯಲ್ಲಿ ಈಜಿ ಒಬ್ಬ ಪರಿಪೂರ್ಣ ಸಂಗೀತ ವಿದ್ವನ್ಮಣಿಯಾಗಿ ಹೊರಹೊಮ್ಮಿದ್ದಾರೆ.
ಆರ್‌.ಕೆ. ಶ್ರೀಕಂಠನ್‌ ಹುಟ್ಟಿದ್ದು ಮಕರ ಸಂಕ್ರಾಂತಿಯ ದಿನ. 1920 ಜನವರಿ 14ರಂದು ಹಾಸನ ಜಿಲ್ಲೆಯ ಕಾವೇರಿ ತಟದ ರುದ್ರಪಟ್ಟಣದಲ್ಲಿ ಅವರ ಹುಟ್ಟು. ಇದೇ ಜನವರಿ 20ಕ್ಕೆ ಅವರಿಗೆ ತೊಂಭತ್ತು ತುಂಬಿದವು. ಇದು ಕನ್ನಡಿಗರ ಹೆಮ್ಮೆ. ತೊಂಭತ್ತರ ಹರೆಯದಲ್ಲೂ ಬರೋಬ್ಬರಿ ಮೂರು ಗಂಟೆ ಕಚೇರಿ ಹಾಡಿ ತಣಿಸಬಲ್ಲ ಒಬ್ಬ ಸಂಗೀತಾರಾಧಕ ನಮ್ಮ ನಡುವೆ ಇರುವುದು ಹೆಮ್ಮೆಯೇ ಸರಿ. ಈ ಸಂದರ್ಭದಲ್ಲಿ ಬೆಂಗಳೂರಿನ ಆರ್‌.ಕೆ. ಶ್ರೀಕಂಠನ್‌ ಟ್ರಸ್ಟ್‌ ವಿಶೇಷ ಕಾರ್ಯಕ್ರಮ ಆಚರಿಸಿತು. ವಾರಗಳ ಕಾಲ ಶ್ರೀಕಂಠನ್‌- 90 ಹೆಸರಿನಲ್ಲಿ ಉತ್ಸವ ನಡೆಸಿತು. ಇಡೀ ಜಗತ್ತಿನೆಲ್ಲೆಡೆ ಇರುವ ಕರ್ನಾಟಕ ಶಾಸ್ತ್ರೀಯ ಸಂಗೀತ ರಸಿಕರು ಶ್ರೀಕಂಠನ್‌- 90ಕ್ಕೆ ಸಾಕ್ಷಿಯಾದರು. ಅಭಿನಂದನೆಗಳ ಮಹಾಪೂರವನ್ನೇ ಹರಿಸಿದರು.
ಮಹಾನುಭಾವ ಪರಂಪರೆ: ಆರ್‌.ಕೆ. ಶ್ರೀಕಂಠನ್‌ ಅವರ ಕುಟುಂಬದಲ್ಲಿ ವೇದ, ಸಂಸ್ಕೃತ, ಸಂಗೀತ, ಸಾಹಿತ್ಯ, ಲಾಲಿತ್ಯಗಳೇ ತುಂಬಿವೆ. ತಂದೆ ಆರ್‌. ಕೃಷ್ಣಶಾಸ್ತ್ರಿಗಳು ಬಹುಶೃತ ವಿದ್ವಾಂಸರು. ಗಮಕಿ, ಹರಿಕತಾ ವಿದ್ವಾಂಸರು ಹಾಗೂ ಕವಿಗಳೂ ಕೂಡ. ಆರ್‌.ಕೆ. ಶ್ರೀಕಂಠನ್‌ ಅವರಿಗೆ ತಂದೆಯೇ ಮೊದಲ ಗುರು. ನಂತರ ಅಣ್ಣ ಆರ್‌.ಕೆ. ವೆಂಕಟರಮಣ ಶಾಸ್ತ್ರೀ ಗುರುವಾದರು. ಅಣ್ಣನ ಆಶ್ರಯದಲ್ಲಿ ಶ್ರೀಕಂಠನ್‌ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡರು.
ಆರ್‌.ಕೆ. ಶ್ರೀಕಂಠನ್‌ ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬರುವ ವಿದ್ವಾಂಸರು. ವಾಲಾಜಪೇಟೆ ವೆಂಕಟರಮಣ ಭಾಗವತರು ತ್ಯಾಗರಾಜರ ನೇರ ಶಿಷ್ಯರು. ಮೈಸೂರು ಸದಾಶಿವರಾಯರು ಭಾಗವತರ ಶಿಷ್ಯರು. ರಾಯರ ಶಿಷ್ಯರು ವೀಣೆ ಶೇಷಣ್ಣ ಹಾಗೂ ಸುಬ್ಬಣ್ಣ. ಶೇಷಣ್ಣರಿಗೆ ಶ್ರೀಕಂಠನ್‌ ಅವರ ಅಣ್ಣ ವೆಂಕಟರಮಣ ಶಾಸ್ತ್ರೀ ಶಿಷ್ಯರು. ಅಣ್ಣನ ಶಿಷ್ಯರು ಆರ್‌.ಕೆ. ಶ್ರೀಕಂಠನ್‌. ಅವರ ಮೂಲ ಮೂಲಪುರುಷನಲ್ಲಿಗೇ ಹೋಗಿ ನಿಲ್ಲುತ್ತದೆ.
ನ್ಯೂಟನ್‌ ಮತ್ತು ಶ್ರೀಕಂಠನ್‌: `ನೀವು ಬಹಳ ಸಾಧಿಸಿದ್ದೀರಿ' ಎಂದು ಯಾರಾದರೂ ಶ್ರೀಕಂಠನ್‌ ಅವರಿಗೆ ಹೇಳಿದರೆ, ವಿಜ್ಞಾನಿ ಐಸಾಕ್‌ ನ್ಯೂಟನ್‌ ಹೇಳಿದ ಮಾತು ಹೇಳಿ ಚಕಿತಗೊಳಿಸುತ್ತಾರೆ. `ನಾನೊಬ್ಬ ಪುಟ್ಟ ಮಗು. ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ' ನ್ಯೂಟನ್ನನ ಈ ಮಾತು ನನಗೂ ಅನ್ವಯಿಸುತ್ತದೆ. ಸಂಗೀತದಿಂದ ದೊಡ್ಡವರು ಮಳೆ ತರಿಸಿದ್ದಾರೆ. ಸುರಿಯುವ ಮಳೆಯನ್ನು ತಡೆದು ನಿಲ್ಲಿಸಿದ್ದಾರೆ. ಕಗ್ಗಲ್ಲನ್ನು ಕರಗಿಸಿದ್ದಾರೆ. ನಾನೊಬ್ಬ ಪಾಮರ! ಇಂಥಾ ಮಹಾಕಾರ್ಯವನ್ನು ಮಾಡಬಲ್ಲೆನೆ ಎಂದು ಪ್ರಶ್ನಿಸುತ್ತಾ ಶ್ರೀಕಂಠನ್‌ ಧರೆಗಿಳಿದುಬಿಡುತ್ತಾರೆ.
ಪುರಂದರ ದಾಸರ ಕೃತಿಗಳಿಗೆ ಶ್ರೀಕಂಠನ್‌ ಸ್ವರೂಪ: ಕರ್ನಾಟಕ ಶಾಸ್ತ್ರೀಯ ಸಂಗೀತ ಪಿತಾಮಹ ಪುರಂದರ ದಾಸರ ಸಂಗೀತ ಬರೀ ಸಂಗೀತವಲ್ಲ. ಗುಣಾಕಾರ, ಭಾಗಾಕಾರಗಳ ಸ್ವರ ಸಂಯೋಜನೆಯಲ್ಲ. ಅದೊಂದು ಮೌಲ್ಯ. ಆ ಮೌಲ್ಯವನ್ನು ಅರ್ಥ ಮಾಡಿಕೊಂಡವರು ಆರ್‌.ಕೆ. ಶ್ರೀಕಂಠನ್‌.
ಮಹಮದೀಯರ ದಾಳಿಯಿಂದ ಇಕ್ಕಟ್ಟಿಗೆ ಸಿಲುಕಿದ್ದ ಭಾರತೀಯ ಸನಾತನ ಧರ್ಮದ ಉಳಿವಿಗೆ ಪುರಂದರ ದಾಸರು ಸಾಮಾಜಿಕ ಬದಲಾವಣೆಯ ಅಸ್ತ್ರವಾಗಿ ಸರಳ ಸಂಗೀತವನ್ನು ಬಳಸಿದ್ದರು. ಇದು ಸಾಹಿತ್ಯ ಮನೋಧರ್ಮ ಸಂಗೀತವಾಗಿತ್ತು. ಇದನ್ನು ಅರ್ಥಮಾಡಿಕೊಂಡ ಶ್ರೀಕಂಠನ್‌ ಪುರಂದರ ದಾಸರ ನೂರಾರು ಕೀರ್ತನೆ, ದೇವರ ನಾಮಗಳಿಗೆ ಮಟ್ಟು ಹಾಕಿದ್ದಾರೆ. ಸ್ಕ್ರಿಪ್ಟ್‌ ಇಲ್ಲದ, ಕೇವಲ ಕರ್ಣ ಪರಂಪರೆಯಿಂದ ಬಂದ ಕೃತಿಗಳಿಗೆ ಅಂತಿಮ ರೂಪ ಕೊಟ್ಟಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಪುರಂದರ ದಾಸರ ಕೃತಿಗಳನ್ನೇ ಇಟ್ಟುಕೊಂಡು ಹಲವು ಕಚೇರಿ ಮಾಡಿದ್ದಾರೆ. `ನಾರಾಯಣ ನಿನ್ನ ನಾಮದ ಸ್ಮರಣೆಯ' ಈ ದೇವರ ನಾಮವನ್ನು ಶ್ರೀಕಂಠನ್‌ ದನಿಯಲ್ಲೇ ಕೇಳಿದರೆ ಚೆನ್ನ!
ಪ್ರದರ್ಶಕ ಮತ್ತು ಗುರು: ಶ್ರೀಕಂಠನ್‌ ಕೇವಲ ಕಚೇರಿ ಕೊಡುವ ಕಲಾವಿದ ಮಾತ್ರವಲ್ಲ. ಅವರೊಬ್ಬ ಶ್ರೇಷ್ಠ ಸಂಗೀತ ಗುರು. ನಿತ್ಯ ಕಚೇರಿಗಳಿಂದ ಮಿಂಚುವ ಕಾಲದಲ್ಲೂ, ಬೇಡಿಕೆಯ ಕಾಲದಲ್ಲೂ, ವಿದೇಶಗಳಿಗೆ ಹೋದಾಗಲೂ ಅವರು ವಿದ್ಯಾದಾನ ಮರೆತಿಲ್ಲ. ಪಾಠ ಮಾಡಿ ತಾವು ಗಟ್ಟಿಯಾಗಿದ್ದಾರೆ. ನೂರಾರು ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಈ ಸಾಧನೆ ಅವರ ಅಳಿಸಲಾಗದ ಗುರುತು. ಇದಕ್ಕೆ ಎಂ.ಎಸ್‌. ಶೀಲಾ, ಟಿ.ಎಸ್‌. ಸತ್ಯವತಿ ಹಾಗೂ ತಮ್ಮ ಮಗ ಆರ್‌.ಎಸ್‌. ರಮಾಕಾಂತ್‌ ಅವರೇ ಸಾಕ್ಷಿ.
ಸಂಕಿರಣಗಳಲ್ಲಿ ಶ್ರೀಕಂಠನ್‌: ಸಂಗೀತ ವಿಚಾರ ಸಂಕಿರಣಗಳಲ್ಲಿ, ಕಾರ್ಯಾಗಾರಗಳಲ್ಲಿ ಆರ್‌.ಕೆ. ಶ್ರೀಕಂಠನ್‌ ಇದ್ದಾರೆ ಎಂದರೆ ಜನ ತುಂಬಿ ಬರುತ್ತಾರೆ. ಅಷ್ಟರ ಮಟ್ಟಿನ ಮೌಲ್ಯ ಅವರ ಮಾತಿನಲ್ಲಿರುತ್ತದೆ. ಎಲ್ಲವನ್ನೂ ಶಾಸ್ತ್ರಬದ್ಧವಾಗಿ, ಸಾಕ್ಷ್ಯ ಸಮೇತವಾಗಿ, ಉದಾಹರಣೆಗಳ ಜತೆಯಾಗಿ ಉಣಬಡಿಸುತ್ತಾರೆ. ವಿಚಾರ ಮಂಡನೆ ಕಬ್ಬಿನ ಜಲ್ಲೆಯನ್ನು ಅರೆದು, ಬಸಿದು ಸಿಹಿಹಾಲು ಕೊಡುವ ರೀತಿಯಲ್ಲಿ ಇರುತ್ತದೆ.
ಸಂಗೀತ ಚಿಕಿತ್ಸಕ: ಸಂಗೀತಕ್ಕೆ ಅತೀಂದ್ರಿಯ ಶಕ್ತಿ ಇದೆ ಎಂಬುದನ್ನು ಶ್ರೀಕಂಠನ್‌ ಬಲವಾಗಿ ನಂಬುತ್ತಾರೆ. ಸುಸ್ವರ ಆಲಿಸಿದ ಖಗ ಮೃಗ ಪಕ್ಷಿಗಳು ತಲೆದೂಗುತ್ತವೆ ಎಂದರೆ ರೋಗ ವಾಸಿ ಮಾಡುವ ಗುಣ ಸಂಗೀತಕ್ಕಿದೆ. ಬಹಳ ಸರಳವಾಗಿ ಲಯವಿನ್ಯಾಸದ ಸಂಗೀತಕ್ಕೆ ರೋಗ ಗುಣಪಡಿಸುವ ಶಕ್ತಿ ಇದೆ ಎಂದು ಶ್ರೀಕಂಠನ್‌ ಸದಾ ಹೇಳುತ್ತಾರೆ.
ತಮ್ಮ 14ನೇ ವಯಸ್ಸಿನಲ್ಲಿ ವೇದಿಕೆ ಹತ್ತಿದ ಶ್ರೀಕಂಠನ್‌ ಇವತ್ತಿಗೂ ದಣಿದಿಲ್ಲ. ಹಲವು ಘಟ್ಟಗಳನ್ನು ಮುಟ್ಟಿ ಬಂದಿದ್ದಾರೆ. ಹೊಗಳಿಕೆಗೆ ಹಿಗ್ಗಿಲ್ಲ. ತೆಗಳಿಕೆಗೆ ಕುಗ್ಗಿಲ್ಲ. ಶಾಂತಮೂರ್ತಿಯಾಗಿ ತಮ್ಮ ಸ್ವರಸಾಗರದಿಂದ ವಿಶ್ವವನ್ನು ಗೆದ್ದಿದ್ದಾರೆ. ಸೌಂಧರ್ಯದ ಅನುಭೂತಿ ಮಾಡಿಕೊಂಡಿದ್ದಾರೆ. ಪ್ರಶಸ್ತಿ, ಮನ್ನಣೆಗಳನ್ನೂ ಮೀರಿ ಎತ್ತರಕ್ಕೆ ತಲುಪಿದ್ದಾರೆ. ತೋಂಭತ್ತು ಪೂರೈಸಿ ನೂರರ ಎಡೆಗೆ ಹೆಜ್ಜೆ ಇಟ್ಟಿದ್ದಾರೆ. ಇಂತಹ ಮಡಿಮಂತ ಕಲಾವಿದನಿಗೆ `ಪದ್ಮ' ಪ್ರಶಸ್ತಿ ಒಂದು ಲೆಕ್ಕವಾಗಿತ್ತೆ?
*****
ತೊಂಭತ್ತು ತುಂಬಿದ ಹೊತ್ತಿನಲ್ಲಿ ಆರ್‌.ಕೆ. ಶ್ರೀಕಂಠನ್‌ ಅವರ ಜೊತೆ ಮಾತುಕತೆ.


* ತಾವು ತೊಂಭತ್ತರ ಎತ್ತರದಲ್ಲಿದ್ದೀರಿ. ಎಂಭತ್ತನ್ನು ಸಂಗೀತಕ್ಕೇ ಧಾರೆ ಎರೆದ್ದೀರಿ. ಈ ಸನ್ನಿವೇಶದಲ್ಲಿ ನಿಮ್ಮ ಮಾತು?



ನನ್ನ ಮನಸ್ಸು ತುಂಬಿ ಬಂದಿದೆ. ಇಷ್ಟು ಕಾಲ ಸೇವೆ ಮಾಡಲು ಅನುವು ಮಾಡಿಕೊಟ್ಟ ಭಗವಂತನಿಗೆ ನನ್ನ ಕೋಟಿ ಪ್ರಣಾಮಗಳು. ಸಂಗೀತ ಸಿದ್ಧಿಯಾಗಿದೆ ಎನ್ನುವ ಧೈರ್ಯ ನನಗಿಲ್ಲ. ಹಾಡುತ್ತಿದ್ದರೆ ಕೇಳುಗ ಅಲ್ಲೇ ತನ್ಮಯನಾಗಿಬಿಡಬೇಕು. ಹಾಗಿರಬೇಕು ಹಾಡುಗಾರಿಕೆ. ಇನ್ನೂ ಹಾಡುವ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.


* ಒಂದು ಯುಗಮಾನಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಇದ್ದೀರಿ. ಅಪಾರ ಏರಿಳಿತಗಳನ್ನು ಕಂಡಿದ್ದೀರಿ. ನೀವು ಗುರುತಿಸುವ ಬದಲಾವಣೆಗಳಾವವು?



ಬನ್ನಿ ನೂರು ವರ್ಷ ಹಿಂದೆ ಹೋಗೋಣ. ಅವತ್ತಿನ ಸಾಮಾಜಿಕ ಸ್ಥಿತಿಯೇ ಬೇರೆಯಾಗಿತ್ತು. ಸಂಗೀತ ತಪಸ್ಸಾಗಿತ್ತು. ಗುರುಕುಲ ಪದ್ಧತಿ ಇತ್ತು. ಗುರುಸೇವೆ ಸಂಕಲ್ಪವಾಗಿತ್ತು. ಅಭ್ಯಾಸ ಹಠಯೋಗವಾಗಿತ್ತು. ಕಚೇರಿಗಳು ಬಹಳ ಕಮ್ಮಿ ಇರುತ್ತಿದ್ದವು. ಕಚೇರಿ ಇದೆ ಅಂದರೆ ನೂರಾರು ಮೈಲಿ ಹೋಗಿ ಕೇಳುತ್ತಿದ್ದರು. ಇವತ್ತೆಲ್ಲಿದೆ ಸ್ವಾಮಿ ಆ ಪರಮಭಕ್ತಿ? ಕಚೇರಿ ಆರುವರೆ ಗಂಟೆಗೆ ಆರಂಭವಾದರೆ ಒಂಭತ್ತು ಗಂಟೆಗೆ ಮುಗಿಸಿಬಿಡಬೇಕು. ಯಾಕಂದರೆ ಬೆಳಿಗ್ಗೆ ಎದ್ದು ಆಫೀಸ್‌ಗೆ ಹೋಗಬೇಕಲ್ಲ. ಅಂದು ನಾಲ್ಕುಗಂಟೆ ಕಾಲ ಹಾಡುತ್ತಿದ್ದರು. ಇಂದು ಹಲವು ಸ್ಥರದಲ್ಲಿ ಬದಲಾವಣೆಗಳಾಗಿವೆ. ಬದಲಾಗಬೇಕು ನಿಜ. ಆದರೆ ಅದು ಶಾಸ್ತ್ರವನ್ನು ಮೀರಬಾರದು.


* ನಿಮ್ಮ ಸಂಗೀತ ಜ್ಞಾನ ನಿಮ್ಮನ್ನು ಇಡೀ ದೇಶ ಸುತ್ತಿಸಿದೆ. ಸಾಗರವನ್ನೂ ಧಾಟಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಅಲೆ ಯಾವ ರೀತಿ ಇದೆ?


ಹಿಂದುಸ್ತಾನಿ ಸಂಗೀತದ ಅಲೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನಲುಗಿದೆ. ಹಿಂದುಸ್ತಾನಿಯವರಿಗೆ ಸಿಕ್ಕುವ ಮಾನ್ಯತೆ ನಮ್ಮ ಕಲಾವಿದರಿಗೆ ಸಿಗುತ್ತಿಲ್ಲ. ನಮ್ಮ ಸರ್ಕಾರಗಳು ಭಕ್ತಿ ಸಂಗೀತವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇಲ್ಲೇ ನೋಡಿ, ಕರ್ನಾಟಕದಲ್ಲಿ ಸ್ಥಾಪನೆ ಆಗುತ್ತಿರುವ ಸಂಗೀತ ವಿಶ್ವವಿದ್ಯಾಲಯಕ್ಕೆ ಹಿಂದೂಸ್ತಾನಿ ಗಾಯಕಗೊಬ್ಬರ ಹೆಸರನ್ನು ಇಡುವ ಅಗತ್ಯವೇನಿದೆ? ಕರ್ನಾಟಕ ಸಂಗೀತಗಾರರ ಹೆಸರನ್ನೇ ಇಡಬಹುದಲ್ಲಾ? ಇದನ್ನೆಲ್ಲಾ ಯೋಚಿಸಿದರೆ ಬಹಳ ನೋವಾಗುತ್ತೆ.


* ನಿತ್ಯ ಕಚೇರಿಗಳನ್ನು ಮಾಡುತ್ತಲೇ ನೀವೊಬ್ಬ ಶ್ರೇಷ್ಠ ಗುರುವಾಗಿ ವಿಶೇಷ ಎನಿಸಿಕೊಂಡಿದ್ದೀರಿ. ಇದು ಹೇಗೆ ಸಾಧ್ಯವಾಯಿತು?



ಅದಕ್ಕೆ ನನ್ನ ಜ್ಞಾನದಾಹವೇ ಕಾರಣ. ಹೇಳಿಕೊಟ್ಟು ಕಲಿತಿದ್ದೇನೆ. ಪುರಂದರದಾಸರೇ ಹೇಳಿದ್ದಾರಲ್ಲವೇ? ಕೆರೆಯ ನೀರನು ಕೆರೆಗೆ ಚೆಲ್ಲು ಎಂದು. ಕಲಿತಿದ್ದನ್ನು ಹಂಚಿಕೊಂಡಿದ್ದೇನಷ್ಟೆ.
* ಇವತ್ತಿಗೂ ಮೂರುಗಂಟೆ ಕಚೇರಿಯನ್ನು ದಣಿಯದೆ ಹಾಡಿ ತಣಿಸುತ್ತೀರಿ. ನಿಮ್ಮ ದೇಹ ಮತ್ತು ದನಿಯ ಸಂಬಂಧವೇನು?



ರೆಸ್ಪೆಕ್ಟ್‌ ಯುವರ್‌ ಬಾಡಿ. ವರ್‌ಷಿಪ್‌ ಯುವರ್‌ ಬಾಡಿ. ಇದೇ ನನ್ನ ಪಾಲಿಸಿ. ದೇಹ ಮನಸ್ಸು ಶಾಂತವಾಗಿ ಇಟ್ಟುಕೊಂಡಿದ್ದೇನೆ. ಯಾವುದೇ ಉದ್ವೇಗ ಇಲ್ಲ. ಹೊಟ್ಟೇಕಿಚ್ಚು ಇಲ್ಲ. ದುಷ್ಟ ಪ್ರವೃತ್ತಿಗಳು ದೂರಾ ದೂರಾ. ಸಕಾರಾತ್ಮಕ ಯೋಚನೆಗಳ ಜೊತೆ ಜೀವಿಸಿದರೆ ಎಲ್ಲಾ ಚೆನ್ನಾಗಿರುತ್ತೆ.
* ಇವತ್ತಿನ ಕೆಲ ಸಂಗೀತಗಾರರು ಕೃತಿ ರಚನೆಯಲ್ಲಿ ತೊಡಗಿದ್ದಾರೆ. ತಮಗೂ ಕೃತಿ ರಚಿಸುವ ಯೋಚನೆ ಇದಿಯೇ?



ಅವರು ಮೂರ್ಖರು. ಕೃತಿಕಾರ ಅಂದರೆ ಏನು ಅಂದುಕೊಂಡಿದ್ದಾರೆ? ರಿಷಿ ಸದೃಶನಾಗಿರಬೇಕು. ವೈರಾಗ್ಯ ಶಿಖಾಮಣಿ ಆಗಿರಬೇಕು. ಮೌಲ್ಯಗಳನ್ನು ಬದುಕಿನ ಜೊತೆ ಅಳವಡಿಸಿಕೊಂಡಿರಬೇಕು. ಇವರಿಗೆ ಇದೆಲ್ಲಾ ಎಲ್ಲಿಂದ ಬರಬೇಕು. ದೊಡ್ಡವರು ಮಾಡಿರುವುದನ್ನು ಮೊದಲು ಕಲಿತುಕೊಳ್ಳಲಿ ಇವರು. ಮಹಾನುಭಾವರು ಮಾಡಿರುವುದನ್ನು ನಾನಿನ್ನು ಕಲಿಯುತ್ತಲೇ ಇದ್ದೇನೆ. ಇನ್ನು ಕೃತಿ ಮಾಡುವ ಮಾತೆಲ್ಲಿ?


* ಈಗಿನವರಲ್ಲಿ ಸಂಗೀತ ಕಲಿಕೆಯನ್ನು ಯಾವ ರೀತಿಯಲ್ಲಿ ಅರ್ಥೈಸುತ್ತೀರಿ?



ಪ್ರತಿಭಾವಂತ ಮಕ್ಕಳಿದ್ದಾರೆ. ದನಿ ಶುಶ್ರಾವ್ಯವಾಗಿದೆ. ಆದರೆ ವೃತ್ತಿಪರವಾದ ಕಲಿಕೆಯ ಕ್ರಮ ಇಲ್ಲ. ಸಂಗೀತ ಒಂದು ಹವ್ಯಾಸವಾಗಿಬಿಟ್ಟಿದೆ. ವ್ಯವಹಾರಕ್ಕಾಗಿ ಸಂಗೀತವನ್ನು ಬಳಸುತಿದ್ದಾರೆ. ಇದು ಬದಲಾಗಬೇಕು. ಒಳ್ಳೆಯ ಗುರುವಿನ ಮಾರ್ಗದರ್ಶನ, ಹೆಚ್ಚು ಕೇಳ್ಮೆ, ಸಂಗೀತ ಚಿಂತನೆ, ಭಕ್ತಿ ಇದ್ದರೆ ಖಂಡಿತಾ ಮಹತ್ವವನ್ನು ಸಾಧಿಸಬಹುದು.

ಓ ನನ್ನ ಚೇತನ!



ಓ ನನ್ನ ಚೇತನ!



ಅವರು ಕಾಲಿಗೆ ಗಾಲಿ ಕಟ್ಟಿ­ಕೊಂ­ಡ­ವರು. ಗಾಲಿಯ ಗತಿ­ಯೊ­ಡನೆ ಗರ­ಗ­ರನೆ ಗಿರಕಿ ಹೊಡೆ­ಯು­ವ­ವರು. ಗಾಳಿಯ ವೇಗಕ್ಕೆ ಗಾಲಿ­ಯನ್ನು ಗಿರಿ­ಗ­ಟ್ಟಲೆ ಮಾಡ­ಬ­ಲ್ಲರು. ಬುಗು­ರಿ­ಯಂತೆ ತಿರು ತಿರುಗಿ ತಿರು­ಗಿ­ಸ­ಬ­ಲ್ಲರು. ಲಯದ ಹಾದಿ­ಯಲ್ಲಿ ಗಾಲಿ­ಯನ್ನು ನಡೆ­ಸ­ಬ­ಲ್ಲರು. ತಾಳಕ್ಕೆ ತಕ್ಕಂತೆ ಕುಣಿದು ತಣಿ­ಸ­ಬ­ಲ್ಲರು. ಹಾರ­ಬ­ಲ್ಲರು. ಏರ­ಬ­ಲ್ಲರು.....!
ಅವರು ಅಂಗ­ವಿ­ಕಲ ಕಲಾ­ವಿ­ದರು. ಆದರೆ ಅವರ ಮನ­ಸ್ಸಿ­ನಲ್ಲಿ ವೈಕ­ಲ್ಯತೆ ಇಲ್ಲ. ಅವರ ಮನ­ಸ್ಸಿ­ನಲ್ಲಿ ಆಕಾ­ಶ­ವಿದೆ. ಎತ್ತ­ರಕ್ಕೆ ಹಾರುವ ತಪಸ್ಸು ನಿತ್ಯವೂ ನಡೆ­ದಿದೆ. ಭರತ ನಾಟ್ಯ, ಕಥ­ಕ್ಕಳಿ, ಕುಚು­ಪುಡಿ, ಸಮ­ರ­ಕಲೆ ಮುಂತಾದ ಅದ್ಭುತ ಕಲಾ ಪ್ರಕಾ­ರ­ಗ­ಳನ್ನು ತಮ್ಮದೇ ವಿನ್ಯಾ­ಸದ `ಗಾ­ಲಿ­ಕುರ್ಚಿ ನೃತ್ಯ'ದ ಮೂಲಕ ಅನಾ­ವ­ರ­ಣ­ಗೊ­ಳಿಸಿ ಇಡೀ ಜಗ­ತ್ತನ್ನು ಬೆರ­ಗು­ಗೊ­ಳಿ­ಸಿ­ದ್ದಾರೆ. ಅವರ ಅಂತ­ರಂಗ ಬಹಳ ಸೂಕ್ಷ್ಮ­ಗ್ರಾಹಿ. ಸುಂದ­ರ­ತೆ­ಯನ್ನು ಗ್ರಹಿಸಿ ತನ್ನ ದೇಹಕ್ಕೆ ತಂದು­ಕೊ­ಳ್ಳು­ವಲ್ಲಿ ಅವರು ನಿಷ್ಣಾ­ತರು.
ಅವರ ಶಕ್ತಿ ಇಡೀ ಜಗ­ತ್ತಿ­ನಾ­ದ್ಯಂತ ಅನಾ­ವ­ರ­ಣ­ಗೊಂ­ಡಿದೆ. ಬರೋ­ಬ್ಬರಿ 10 ಸಾವಿರ ದಾಖಲೆ ಪ್ರದ­ರ್ಶನ ನೀಡಿ ಲಿಮ್ಕಾ ವಿಶ್ವ­ದಾ­ಖಲೆ ಪುಸ್ತ­ಕ­ದಲ್ಲಿ ಸ್ಥಾನ ಪಡೆ­ದಿ­ದ್ದಾರೆ. ತಮ್ಮ ಅಂಗ­ವಿ­ಕ­ಲ­ತೆ­ಯನ್ನು ಒಂದು ಶಾಪ ಎಂದು ಪರಿ­ಗ­ಣಿ­ಸದ ಈ ಕಲಾ­ಕು­ಡಿ­ಗಳು ವಿಶ್ವ­ಚೇ­ತ­ನ­ಗ­ಳಾಗಿ ಹೊರ ಹೊಮ್ಮಿ­ದ್ದಾರೆ.
ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌: ಈ ಕಲಾ­ವಿ­ದರ ಕನ­ಸು­ಗ­ಳಿಗೆ ಎಲ್ಲೆ ಎಂಬು­ದಿಲ್ಲ. ಅವರ ಸಂಸ್ಥೆಯ ಹೆಸ­ರಿ­ನಲ್ಲೇ ಒಂದು ಸುಂದರ ಸೆಳೆ­ತ­ವಿದೆ. ಅದು `ಎ­ಬಿ­ಲಿಟಿ ಅನ್‌­ಲಿ­ಮಿ­ಟೆಡ್‌'(ಅ­ನಿ­ಯ­ಮಿತ ಸಾಮರ್ಥ್ಯ). ಆ ಚೇತ­ನ­ಗಳ ಮನಸ್ಸು ಬಹಳ ವಿಶಾಲ. ಮನ­ಸ್ಸಿ­ನಲ್ಲಿ ಸಲ್ಲದ ಯಾವ ವಿಚಾ­ರ­ಗ­ಳಿಲ್ಲ. ಅವು ಮುಗ್ಧ ಮನ­ಸ್ಸು­ಗಳು. ಕಲ್ಪ­ನೆ­ಯನ್ನು ಕೃತಿ­ಗಿ­ಳಿ­ಸಿವ ಸಾಮರ್ಥ್ಯ ಅವ­ರದು.
ಈ ವಿಕಲ ಚೇತ­ನರು ಗಾಲಿಯ ಕುರ್ಚಿ ಬಳಸಿ ರಂಗದ ಮೇಲೆ ತಮ್ಮ ಸಮರ ಕಲೆ ಸಾಹಸ ಪ್ರದ­ರ್ಶಿ­ಸು­ತ್ತಾರೆ. ಬೆಳ­ಕಿಗೆ ತಮ್ಮನ್ನು ತಾವು ತೆರೆ­ದು­ಕೊಂಡು ನೋಡು­ಗ­ರನ್ನು ಉಸಿರು ಕಟ್ಟಿ­ಸು­ತ್ತಾರೆ. ಸಂಗೀ­ತಕ್ಕೆ ಸಮ್ಮೋ­ಹ­ಗೊಂಡು ಮಾಧುರ್ಯ ತುಂಬು­ತ್ತಾರೆ. ಸಮ­ರ­ಕ­ಲೆಯ ಅದ್ಭುತ ಸಾಹ­ಸ­ಗ­ಳಿಗೆ ರಂಗದ ಮೇಲೆ ರೂಪ ಕೊಡು­ತ್ತಾರೆ.
ಕನ­ಸಿಗೆ ರೂಪ­ಕೊಟ್ಟ ಶಿಲ್ಪಿ: ಗಾಲಿ­ಕುರ್ಚಿ ನೃತ್ಯ ಎನ್ನುವ ವಿಕಲ ಚೇತ­ನರ ವಿಶೇಷ ಕಲಾ ಪ್ರಕಾ­ರಕ್ಕೆ ರೂಪ­ಕೊ­ಟ್ಟ­ವರು ಭರ­ತ­ನಾಟ್ಯ ಕಲಾ­ವಿದ ಸಯ್ಯದ್‌ ಸಲ್ಲಾ­ವು­ದ್ದೀನ್‌ ಪಾಶಾ. ಇವರೇ ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌ ಸಂಸ್ಥಾ­ಪ­ಕರು. ಚೇತ­ನರ ಬಾಯಲ್ಲಿ ಇವರು ಗುರೂಜಿ. ಸಯ್ಸದ್‌ ಮುಸ್ಲಿಂ ಸಮು­ದಾ­ಯಕ್ಕೆ ಸೇರಿ­ದ­ವ­ರಾ­ದರೂ ಇವರ ಹೃದಯ ಬಾಲ್ಯ­ದಿಂ­ದಲೂ ಭರ­ತ­ನಾ­ಟ್ಯ­ದತ್ತ ಮಿಡಿ­ಯು­ತ್ತಿತ್ತು. ಮನೆ­ಯ­ವರ ವಿರೋ­ಧದ ನಡು­ವೆಯೂ ನಾಟ್ಯ­ರಾ­ಣಿ­ಯನ್ನು ಕಣ್ಣಿಗೆ ಕಟ್ಟಿ­ಕೊಂ­ಡರು. ವರ್ಷಾ­ನು­ಗ­ಟ್ಟಲೆ ಮಾಡದ ತಪ­ಸ್ಸಿನ ಫಲ­ವಾಗಿ ನಾಟ್ಯ­ರಾಣಿ ಒಲಿದು ಬಂದಳು. ದೆಹ­ಲಿ­ಯನ್ನು ಕಾರ್ಯ­ಸ್ಥಾನ ಮಾಡಿ­ಕೊಂಡ ಸಯ್ಯದ್‌ ತಮ್ಮ ವಿಲ­ಕ­ಚೇ­ತನ ಗಾಲಿ­ಕುರ್ಚಿ ಕಲ್ಪ­ನೆಗೆ ರೂಪ ಕೊಡುತ್ತಾ ಸಾಗಿ­ದರು.
ದೆಹಲಿ ಸುತ್ತ­ಮು­ತ್ತ­ಲಿನ ಸರ್ಕಾರಿ ಶಾಲೆ­ಗ­ಳ­ಲ್ಲಿದ್ದ ಬಡ ಅಂಗ­ವಿ­ಕಲ ಮಕ್ಕ­ಳನ್ನು ಆಯ್ದು­ಕೊಂಡು ಅವ­ರಿ­ಗೊಂದು ಹೊಸ ಬದು­ಕಿನ ಕನಸು ತುಂಬಿ­ದರು. ಅವ­ರಿಗೆ ವಸತಿ, ಊಟ ಸಹಿತ ನೃತ್ಯ ತರ­ಬೇತಿ ನೀಡಿ­ದರು. ಹತ್ತಾರು ವರ್ಷ­ಗಳ ಕಾಲ ತರ­ಬೇತಿ ಪಡೆದ ಈ ಮಕ್ಕಳು ಚೇತ­ನ­ಗ­ಳಾಗಿ ಹೊರ­ಹೊ­ಮ್ಮಿ­ದರು. ಈಗ 150 ಚೇತ­ನರು ಈ ತಂಡ­ದ­ಲ್ಲಿ­ದ್ದಾರೆ. ಕೆಲ ಕಲಾ­ವಿ­ದರು ಸ್ವಂತ­ವಾಗಿ ಬೆಳೆದು ನಿಂತಿ­ದ್ದಾರೆ. ಬಾಲಿ­ವು­ಡ್‌­ನಲ್ಲೂ ತಮ್ಮ ಪ್ರತಿಭೆ ಮೆರೆ­ದಿ­ದ್ದಾರೆ. ಕಲಾ­ನಿ­ರ್ದೇ­ಶ­ಕರು, ಸಹಾ­ಯಕ ನಿರ್ದೇ­ಶ­ಕ­ರಾಗಿ ಕೆಲಸ ಮಾಡು­ತ್ತಿ­ದ್ದಾರೆ.
ಸಯ್ಯದ್‌ ಸಲ್ಲಾ­ವು­ದ್ದೀನ್‌ ಪಾಶಾ ಕರ್ನಾ­ಟ­ಕ­ದ­ವರೇ. ಬೆಂಗ­ಳೂರು ಗ್ರಾಮಂ­ತರ ಜಿಲ್ಲೆಯ ಆನೆ­ಕಲ್‌ ಅವರ ಹುಟ್ಟೂರು. ತಮ್ಮ ನೃತ್ಯ ಬದುಕು ಆರಂಭ ಆದ ಮೇಲೆ ದೆಹ­ಲಿ­ಯಲ್ಲಿ ನೆಲ­ಸಿ­ದ್ದಾರೆ.
ವಿಶೇಷ ಗಾಲಿ­ಗಳು: ಗಾಲಿ­ಕುರ್ಚಿ ನೃತ್ಯ ಮಾಡುವ ವಿಕ­ಲಾಂಗ ಮಕ್ಕ­ಳಿ­ಗಾಗಿ ವಿಶೇಷ ಕುರ್ಚಿ­ಗ­ಳನ್ನು ವಿನ್ಯಾಸ ಮಾಡ­ಲಾ­ಗಿದೆ. ಭಾರ­ವಿ­ಲ್ಲದ, ಗಾಳಿ ತುಂಬಿದ ಚಕ್ರ­ವುಳ್ಳ ಕುರ್ಚಿ­ಗ­ಳನ್ನು ಅವ­ರಿ­ಗಾಗಿ ತಯಾರು ಮಾಡ­ಲಾ­ಗಿದೆ.
ಬೆಂಗ­ಳೂ­ರಿ­ನಲ್ಲಿ ಗಾಲಿ­ಕುರ್ಚಿ ನೃತ್ಯ: ಈಗ ಬೆಂಗ­ಳೂ­ರಿ­ಗ­ರಿಗೆ ಸುಯೋಗ. ಜಗ­ತ್ಪ್ರ­ಸಿದ್ಧ ಗಾಲಿ­ಕುರ್ಚಿ ನೃತ್ಯ­ವನ್ನು ಸವಿ­ಯುವ ಒಂದು ಅಪೂರ್ವ ಅವ­ಕಾಶ. ೨೮-೦೬-2010ರಂದು ಸಂಜೆ 6. 30ಕ್ಕೆ ಚೌಡಯ್ಯ ಸ್ಮಾರಕ ಭವ­ನ­ದಲ್ಲಿ ನೃತ್ಯ ಕಾರ್ಯ­ಕ್ರಮ ಆಯೋ­ಜ­ನೆ­ಗೊಂ­ಡಿದೆ. ನಗ­ರದ ನ್ಯಾಷ­ನಲ್‌ ಇನ್ಸ್‌­ಟಿ­ಟ್ಯೂಟ್‌ ಆಪ್‌ ಪರ್ಸ­ನಲ್‌ ಮ್ಯಾನೇ­ಜ್‌­ಮೆಂಟ್‌ ಸುವರ್ಣ ಮಹೋ­ತ್ಸ­ವದ ಅಂಗ­ವಾಗಿ ಕಾರ್ಯ­ಕ್ರ­ಮ­ಕೊ­ಡಲು ಎಬಿ­ಲಿಟಿ ಅನ್‌­ಲಿ­ಮಿ­ಟೆಡ್‌ ತಂಡ ಆಗ­ಮಿ­ಸು­ತ್ತಿದೆ. ಮೈ ನವಿ­ರೇ­ಳಿ­ಸುವ ಮಣಿ­ಪುರ ಸಮರ ಕಲೆ ಬೆಂಗ­ಳೂ­ರಿನ ಗಾಲಿ­ನೃ­ತ್ಯ­ದಲ್ಲಿ ಮುಖ್ಯ ಪಾತ್ರ ವಹಿ­ಸ­ಲಿದೆ. ಅದೇ ರೀತಿ ರಾಮಾ­ಯಣ, ಮಹಾ­ಭಾ­ರತ ಕತೆ­ಗಳು ಗಾಲಿ­ಕುರ್ಚಿ ನೃತ್ಯ­ದಲ್ಲಿ ತೆರೆ­ದು­ಕೊ­ಳ್ಳ­ಲಿವೆ. ಈ ಕಾರ್ಯ­ಕ್ರ­ಮ­ದಲ್ಲಿ 17 ಜನ ವೃತ್ತಿ ವಿಕಲ ಚೇತ­ನರು ಭಾಗ­ವ­ಹಿ­ಸು­ತ್ತಿ­ದ್ದಾರೆ. ಈ ಸುಂದರ ಸಾಹಸ ಮಯ ನೃತ್ಯ ಕಾರ್ಯ­ಕ್ರ­ಮ­ವನ್ನು ಶುಕ್ರ­ವಾರ ಬೆಂಗ­ಳೂರು ಮಂದಿ ಸಾಕ್ಷೀ­ಕ­ರಿ­ಸ­ಬ­ಹುದು. ಹೆಚ್ಚಿನ ವಿವ­ರ­ಗ­ಳಿ­ಗಾಗಿ ಮೊಬೈಲ್‌: 9686715886 ಸಂಪ­ರ್ಕಿ­ಸ­ಬ­ಹುದು.

Sunday, March 7, 2010

ಚಿತ್ರ


ಗಣ­ಪ­ತಿಗೆ ರಾಷ್ಟ್ರೀಯ ಮನ್ನಣೆ!


ಬಹುಶಃ ಅವ­ರಿಗೆ ಪ್ರಕೃತಿ ಸೌಂದ­ರ್ಯದ ಅನು­ಭೂತಿ ಆಗಿ­ರ­ಬ­ಹುದು! ಕುಂಚ ಹಿಡಿದು ಕೂತರೆ ಕಲ್ಪ­ನೆಯ ಮೋಡ ಕರ­ಗಿಸಿ ಬಣ್ಣದ ಮಳೆ ತರಿ­ಸು­ತ್ತಾರೆ. ಪ್ರಕೃ­ತಿಯ ಕೌತು­ಕ­ವನ್ನು ಸರ­ಳ­ವಾಗಿ ಕೃತಿ­ಗಿ­ಳಿ­ಸು­ತ್ತಾರೆ. ಅಪ­ರೂ­ಪದ ವನ್ಯ­ಜೀ­ವಿ­ಯನ್ನು `ವ­ರ್ಣ­ಜೀವಿ'ಯಾಗಿ ಚಿತ್ರಿ­ಸು­ತ್ತಾರೆ. ಅರಣ್ಯ ಚಿತ್ರ­ಣ­ವನ್ನು ರಮ­ಣೀ­ಯ­ವಾಗಿ ವರ್ಣಿ­ಸು­ತ್ತಾರೆ. ಪ್ರಕೃ­ತಿಗೆ ಅವರ ಹೃದಯ ಮಿಡಿದು ಗೆರೆ­ಗ­ಳಲ್ಲಿ ಮೂಡು­ತ್ತದೆ. ಅವರು ಪ್ರಕೃ­ತಿ­ಯನ್ನು ಅಧ್ಯ­ಯನ ಮಾಡಿ­ದ್ದಾರೆ. ಆರಾ­ಧಿ­ಸಿ­ದ್ದಾರೆ. ಪ್ರಕೃ­ತಿಯೇ ದೇವರು ಎಂದು ನಂಬಿ­ದ್ದಾರೆ.
ಅವರು ಗಣ­ಪತಿ ಪಿ ಹೆಗಡೆ. ತಮ್ಮ ಅಪ­ರೂ­ಪದ ಚಿತ್ರ­ಕಲೆ ಮೂಲಕ ದೇಶ­ದಾ­ದ್ಯಂತ ಹೆಸರು ಮಾಡಿ­ರುವ ಕನ್ನ­ಡದ ಹುಡುಗ. ವಿಶೇಷ ಯೋಚ­ನೆ­ಗಳ ಕಲಾ­ವಿದ. ಸುತ್ತ­ಲಿನ ವಾತಾ­ವ­ರ­ಣ­ವನ್ನು ಅವರು ನೋಡುವ ದೃಷ್ಟಿಯೇ ಬೇರೆ. ಅವು­ಗ­ಳಿಗೆ ಕೊಡುವ ಅರ್ಥ­ವಿ­ವ­ರ­ಣೆಯೇ ಬೇರೆ. ಅವರ ಪ್ರತಿ ಕೃತಿ­ಯಲ್ಲೂ ಎಲ್ಲ­ರಿಗೂ ತಿಳಿ­ಯುವ ಸರಳ ಅರ್ಥ­ವಿದೆ.
ಗಣ­ಪತಿ ಹೆಗಡೆ ಅವರ ಗಣೇಶ ಕೃತಿ­ಗಳು ಜಗ­ತ್ಪ್ರ­ಸಿದ್ಧ. ಸೀರೀಸ್‌ ಆಫ್‌ ಗಣೇಶ್‌ ಸೋಲೋ ಪ್ರದ­ರ್ಶ­ನಕ್ಕೆ ಎಲ್ಲಾ ವರ್ಗದ ಮನ್ನಣೆ ಸಿಕ್ಕಿದೆ. ವಿವಿಧ ಮೀಡಿ­ಯಾ­ಗ­ಳನ್ನು ಬಳಸಿ ಮಾಡಿದ ಗಣೇಶ ಕೃತಿ­ಗಳು ಒಂದೂ ಉಳಿ­ಯ­ದಂತೆ ಖರ್ಚಾ­ಗಿವೆ!
ಬೆಂಗ­ಳೂ­ರಿನ ಕೆನ್‌ ಸ್ಕೂಲ್‌ ಆಫ್‌ ಆರ್ಟ್ಸ್‌­ನಲ್ಲಿ ಹೆಗಡೆ ಕಲಾ ಶಿಕ್ಷಣ ಪಡೆ­ದಿ­ದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಪರಿ­ಸ­ರ­ದಲ್ಲಿ ಹುಟ್ಟಿ ಬೆಳೆ­ದ­ವರು. ಅವ­ರಿಗೆ ತಾತನೇ ಪ್ರೇರಣೆ. ಊರಿನ ಪರಿ­ಸರ, ಅರಣ್ಯ ದಟ್ಟ­ಣೆ­ಯಿಂದ ಪ್ರೇರಿ­ತ­ರಾ­ಗಿದ್ದ ಅವರು ಚಿತ್ರ­ಕ­ಲೆ­ಯಲ್ಲಿ ಅದ­ನ್ನೆಲ್ಲಾ ಎರಕ ಹೊಯ್ದಿ­ದ್ದಾರೆ. ಎಂಟನೇ ತರ­ಗತಿ ಕಲಿ­ಯು­ತ್ತಿ­ದ್ದಾ­ಗಲೇ ಜಪಾ­ನಿನ ಅಂತಾ­ರಾ­ಷ್ಟ್ರೀಯ ಪೈಂಟಿಂಗ್‌ ಸ್ಪರ್ಧೆ­ಯಲ್ಲಿ ಬೆಳ್ಳಿ­ಪ­ದಕ ಗೆದ್ದು ದಾಖಲೆ ನಿರ್ಮಿ­ಸಿ­ದ್ದಾರೆ.
ಈಗ ಗಣ­ಪತಿ ಹೆಗಡೆ ಇನ್ನೊಂದು ದಾಖಲೆ ಬರೆ­ದಿ­ದ್ದಾರೆ. ಪ್ರಕೃ­ತಿಯ ವಿಚಿತ್ರ ವನ್ಯ­ಜೀವಿ `ಹಲ್ಲಿ'ಗೆ ಅವರು ಕೊಟ್ಟ `ಮ­ನು­ಷ್ಯ­ತ್ವದ ಟಚ್‌' ಕೃತಿಗೆ 2009- 10ನೇ ಸಾಲಿನ ರಾಷ್ಟ್ರೀಯ ಲಲಿ­ತ­ಕಲಾ ಅಕಾ­ಡೆಮಿ ಪ್ರಶಸ್ತಿ ಸಿಕ್ಕಿದೆ. ಈ ಪ್ರತಿ­ಷ್ಠಿತ ಪ್ರಶಸ್ತಿ ಪಡೆದ ಹತ್ತು ಪ್ರಬುದ್ಧ ಕಲಾ­ವಿ­ದ­ರಲ್ಲಿ ಕರ್ನಾ­ಟ­ಕದ ಗಣ­ಪತಿ ಹೆಗಡೆ ಕೂಡ ಒಬ್ಬರು.
ಉದ­ಯ­ವಾಣಿ ಸೇರಿ­ದಂತೆ ಹಲವು ಪತ್ರಿ­ಕೆ­ಗ­ಳಲ್ಲಿ , ಕತೆ­ಗ­ಳಿಗೆ ಬಣ್ಣದ ದೃಷ್ಟಾಂತ ಕೊಡುತ್ತಾ ಯಾವ ಗಾಡ್‌­ಫಾ­ದ­ರ್‌­ಗಳೂ ಇಲ್ಲದೆ ಸ್ವಂತ ಶಕ್ತಿ­ಯಿಂದ ಬೆಳೆದ 35ರ ಹರೆ­ಯದ ಗಣ­ಪತಿ ಹೆಗಡೆ ಈಗ ಇನ್ಪೋ­ಸಿ­ಸ್‌­ನಲ್ಲಿ ಕ್ರಿಯೆ­ಟಿವ್‌ ಡಿಸೈ­ನರ್‌!

ಗಣ­ಪನ ಜೊತೆ ಉದ­ಯ­ವಾಣಿ ಮಾತು­ಕತೆ.

* ಎಂಟನೇ ತರ­ಗ­ತಿ­ಯಲ್ಲಿ ಮುಡಿ­ಗೇ­ರಿದ ಅಂತಾ­ರಾ­ಷ್ಟ್ರೀಯ ಪ್ರಶಸ್ತಿ ಹಾಗೂ ಈಗ ಗಳಿ­ಸಿದ ರಾಷ್ಟ್ರೀಯ ಪ್ರಶ­ಸ್ತಿ­ಯಲ್ಲಿ ಏನು ವ್ಯತ್ಯಾಸ ಕಂಡಿರಿ?

ಆಗಿನ ಅಂತಾ­ರಾ­ಷ್ಟ್ರೀಯ ಪ್ರಶಸ್ತಿ ಚಿತ್ರ­ಕ­ಲೆ­ಯನ್ನು ಬಹಳ ಗಂಭೀ­ರ­ವಾಗಿ ತೆಗೆ­ದು­ಕೊ­ಳ್ಳಲು ಪ್ರೇರಣೆ ಆಯಿತು. ಈಗಿನ ರಾಷ್ಟ್ರೀಯ ಪ್ರಶಸ್ತಿ ವಿಶಾಲ ಕಲಾ ಜಗ­ತ್ತಿ­ನೊ­ಳಗೆ ಇನ್ನಷ್ಟು ಆಳ­ವಾಗಿ ಇಳಿ­ಯುವ ವಿಶ್ವಾಸ ತುಂಬಿತು.

* ನಿಮ್ಮ ಕೃತಿ­ಗಳು ಪಕೃ­ತಿಯ ಪ್ರತಿ­ಬಿಂ­ಬ­ಗಳು. ವನ್ಯ­ಜೀವಿ ವೈಶಿ­ಷ್ಟ್ಯ­ಗಳು. ಏನು ಇದರ ವಿಶೇಷ?

ಇದಕ್ಕೆ ನಮ್ಮೂ­ರಿನ ಸುಂದರ ಪರಿ­ಸರ ಹಾಗೂ ನನ್ನ ತಾತ ಕಾರಣ. ಅರ್ಚ­ಕ­ರಾ­ಗಿದ್ದ ತಾತ ಪೂಜಿ­ಸುವ ದೇವಾ­ಲಯ ಬೆಟ್ಟದ ಮೇಲಿತ್ತು. ಅಲ್ಲಿಗೆ ಹುಲಿ ಕೂಗುವ ಧನಿ ಕೇಳು­ತ್ತಿತ್ತು. ವನ್ಯ ಜೀವಿ­ಗ­ಳನ್ನು ನಾನು ಬೆರ­ಗು­ಗ­ಣ್ಣಿ­ನಿಂದ ನೋಡು­ತ್ತಿದ್ದೆ. ಅದು ಈಗ ಸಹಾ­ಯಕ್ಕೆ ಬರು­ತ್ತಿದೆ. ನನ್ನ ಕೃತಿ­ಗ­ಳಲ್ಲಿ ಪ್ರಕೃ­ತಿಯ ಉತ್ತಮ ಹಾಗೂ ಕೆಟ್ಟ ಎರಡೂ ಮುಖ­ಗ­ಳಿವೆ. ಪತಂಗ, ಮಿಡತೆ, ಪಡಚು ಉಳು, ಎಲೆ ತಿನ್ನುವ ಉಳು ಮುಂತಾದ ಕ್ರಿಮಿ ಕೀಟ­ಗ­ಳನ್ನು ಚಿತ್ರಿ­ಸುವ ಮೂಲಕ ನಿಸ­ರ್ಗದ ಸುಪ್ತ­ತೆ­ಯನ್ನು ಹೊರ­ಗಿ­ಡಲು ಪ್ರಯತ್ನ ಮಾಡಿ­ದ್ದೇನೆ.

* ತಮ್ಮನ್ನು ಮನೆ­ಮಾತು ಮಾಡಿದ `ಸೀ­ರೀಸ್‌ ಆಫ್‌ ಗಣೇಶ' ಕೃತಿ­ಗಳ ಬಗ್ಗೆ ಹೇಳಿ?

ಗಣೇಶ್‌ ಎಲ್ಲರ ಪ್ರೀತಿಯ ದೈವ. ಎಲ್ಲರ ಕೈಗೂ ಸಿಗು­ವ­ವನು. ನನ್ನ ಸೀರಿಸ್‌ ಆಫ್‌ ಗಣೇಶ ಕೃತಿ­ಗ­ಳನ್ನು ದೈವಿಕ ತತ್ವದ ಮೇಲೆ ರಚಿ­ಸಿದೆ. ಅದ­ಕ್ಕಾಗಿ `ಗ­ಣೇಶ ಉಪ­ನಿ­ಷತ್ತು' ಅಧ್ಯ­ಯನ ಮಾಡಿದೆ. ಎಲೆ­ಗಳ ಮೇಲೆ ಮಾಡಿದ ಗಣಪ ಎಲ್ಲ­ರಿಗೂ ಇಷ್ಟ­ವಾ­ದವು. ಇದಕ್ಕೆ ಉತ್ತಮ ಪ್ರತಿ­ಕ್ರಿಯೆ ಸಿಕ್ಕಿತು. ವಿದೇ­ಶ­ಗ­ಳಲ್ಲೂ ಪ್ರದ­ರ್ಶ­ನ­ಗೊಂ­ಡವು. ಈಗಲೂ ಗಣ­ಪ­ನನ್ನು ಮಾಡಿ­ದರೆ ಒಂದೂ ಉಳಿ­ಯದೆ ಖರ್ಚಾ­ಗು­ತ್ತವೆ.

* ನಿಮಗೆ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟ `ಹಲ್ಲಿ' ಚಿತ್ರ­ಕೃ­ತಿಯ ಬಗ್ಗೆ ಏನು ಹೇಳು­ತ್ತೀರಿ?

ನಾನು ಎಲ್ಲಾ ಜೀವಿ­ಗ­ಳಲ್ಲೂ ಸೌಂದ­ರ್ಯ­ವನ್ನು ಗುರು­ತಿ­ಸು­ತ್ತೇನೆ. ಹಲ್ಲಿ ಅಥವಾ ಊಸ­ರ­ವ­ಳ್ಳಿ­ಯಂ­ತಹ ಜೀವಿ­ಗಳು ಎಲ್ಲ­ರಿಗೂ ಭಯ ಹುಟ್ಟಿ­ಸು­ತ್ತವೆ. ಆದರೆ ನನ್ನ ದೃಷ್ಟಿ­ಯಲ್ಲಿ ಅವು ನಿಸ­ರ್ಗದ ಅಪ­ರೂಪ. ಹಲ್ಲಿಗೆ ಮನು­ಷ್ಯ­ತ್ವದ ರೂಪ ಕೊಟ್ಟೆ. ಜ್ಯೂರಿಗೆ ವಿಶೇ­ಷ­ವಾಗಿ ಕಂಡು­ಬಂತು. ಪ್ರಶ­ಸ್ತಿಗೆ ಆಯ್ಕೆ­ಯಾ­ಯಿತು.

* ಹಲವು ಪತ್ರಿ­ಕೆ­ಗ­ಳಲ್ಲಿ ಕತೆ­ಗ­ಳಿಗೆ ಚಿತ್ರ ಬರೆ­ದಿ­ದ್ದೀರಿ. ಅಲ್ಲಿಯ ಅನು­ಭವ ಹೇಗಿತ್ತು?

ಅಲ್ಲಿ ನನ­ಗೊಂದು ಮನ್ನಣೆ ದೊರೆ­ಯಿತು. `ಅಂ­ಧ­ಪರ್ವ' ಧಾರ­ವಾ­ಹಿಗೆ ಬರೆದ ಚಿತ್ರ ಬಹಳ ಹೆಸರು ತಂದು ಕೊಟ್ಟಿತು.

Sunday, February 21, 2010


ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್‌!

ಉದ್ಯಮಿ ಅಂದಾಗ ಮನಸ್ಸಿನಲ್ಲೊಂದು ಚಿತ್ರಣ ಮೂಡುತ್ತದೆ. ಸೂಟು ಬೂಟು, ಚಟಪಟ ಇಂಗ್ಲಿಷ್‌. ಸ್ಟಾರ್‌ ಹೋಟಲ್‌. ಮೀಟಿಂಗ್‌, ಇನ್ವೆಸ್ಟಿಂಗ್‌, ಪಾರ್ಟಿ, ಷೇರು, ಕಾರು, ಬಾರು.....! ಆದರೆ ಇವರು ಆ ಥರದ ಉದ್ಯಮಿಯಲ್ಲ. ಅವರ ಉದ್ದನೆಯ ಬಿಳಿ ಗಡ್ಡದಲ್ಲಿ ಕಲೆ, ಸಾಹಿತ್ಯ, ರಂಗಭೂಮಿ, ನೃತ್ಯ, ಸಂಗೀತಗಳಿವೆ. ಕನ್ನಡ ಭಾಷೆಗೆ ಅವರ ಹೃದಯ ಮಿಡಿಯುತ್ತದೆ. ಒಂದೊಳ್ಳೆ ಪುಸ್ತಕ ಸಿಕ್ಕರೆ ಓದಿ ಮುಗಿಸೋ ತವಕ. ಯಕ್ಷಗಾನಕ್ಕೆ ಇಡೀ ರಾತ್ರಿ ನಿದ್ದೆಗೆಡಲು ರೆಡಿ. ಇಷ್ಟವಾದ ಚಿತ್ರಕೃತಿಗೆ ಕೋಟಿ ಕೊಟ್ಟರೂ ಸರಿ. ನಾಟಕದ ಮೇಲೆ ಒಂಥರಾ ಒಲವು. ಒಟ್ಟಿನಲ್ಲಿ ಅವರಿಗೆ ಲಲಿತಕಲೆಗಳ ಮೇಲೆ ಅತೀವ ಪ್ರೀತಿ!
ಅವರೇ ಡಿ.ಕೆ. ಚೌಟ. ಸಾಹಿತ್ಯದಲ್ಲಿ ಆನಂದ ಕೃಷ್ಣ ಎಂದೇ ಪ್ರಸಿದ್ಧಿ. ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಯಾಗಿ ಆರಂಭಿಸಿದ `ಚಿತ್ರಸಂತೆ' ಇಂದಿಗೂ ಮನೆಮಾತು. ಗ್ಯಾಲರಿಯೊಳಗೆ ಬಂಧಿಯಾಗಿದ್ದ ಕೃತಿಗಳು ಸಂತೆಯ ಮೂಲಕ ಸಾಮಾನ್ಯರಿಗೆ ಸಿಕ್ಕಿದವು. ರಂಗಭೂಮಿಗೆ ಅವರೊಬ್ಬ ಪೋಷಕ. ಬೆಂಗಳೂರಿನ `ರಂಗನಿರಂತ' ಸಂಘಟನೆಯ ಅಧ್ಯಕ್ಷರು. ಕ್ರೀಯಾಶೀಲ ರಂಗಭೂಮಿ ಎಲ್ಲಿರುತ್ತದೋ ಅಲ್ಲಿ ಚೌಟ!
ಭಾರತ ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳುಭಾಷೆ ಸ್ಥಾನ ಪಡೆಯಲು ಚೌಟರ ಸಾಹಿತ್ಯದ ಪ್ರಮುಖ ಪಾತ್ರವಿದೆ. ಅವರ `ಪಿಲಿಪತ್ತಿ ಗಡಸ್‌' ತುಳುನಾಟಕ 130ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. `ಕರಯವಜ್ಜೆರಿನ ಕತೆಕುಲು' ಕಥಾ ಸಂಕಲನ, `ಮಿತ್ತಿಬೈಲೆ ಯಮುನಕ್ಕ' ಕಾದಂಬರಿ ಪ್ರಸಿದ್ಧವಾಗಿವೆ.
ಮಂಜೇಶ್ವರ ಸಮೀಪದ ಮೀಯಾಪದೌ ಅವರ ಹುಟ್ಟು. ಜನ್ಮತಃ ಕೃಷಿಕರು. ಮುಂಬೈನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ. ವಿಮಾ ಕಂಪನಿಯೊಂದರಲ್ಲಿ ದೊಡ್ಡ ಕೆಲಸ. ಅದು ಸಾಗರದಾಚೆ. ಹಲವು ದೇಶಗಳ ಜೊತೆ ಸಂಬಂಧ. ನಂತರ ತಮ್ಮದೇ ಶೂ ತಯಾರಿಕಾ ಉದ್ಯಮ ಸ್ಥಾಪನೆ. 25 ವರ್ಷ ಹೊರದೇಶ. ಆನಂತರ ತಾಯ್ನಾಡಿಗೆ ಬಂದ ಚೌಟ ತಮ್ಮಿಷ್ಟದ ಕಲೆಯ ಆರಾದಕ. 72ರ ಹರೆಯದಲ್ಲೂ ಅವರದು ಹೊಸ ಆಲೋಚನೆಯ ಮೇಲ್ಪಂಕ್ತಿ.
ಚೌಟರ ಇಬ್ಬರು ಮಕ್ಕಳು ಜಗತ್ಪ್ರಸಿದ್ಧರು. ಮಗ ಸಂದೀಪ್‌ ಚೌಟ ಬಾಲಿವುಡ್‌ ಸಂಗೀತ ನಿರ್ದೇಶಕ. ಮಗಳು ಪ್ರಜ್ಞಾ ಚೌಟ ಪ್ಯಾರಿಸ್‌ ನಿವಾಸಿ. ವನ್ಯಜೀವಿ ಡ್ಯಾಕ್ಯುಮೆಂಟರಿ ನಿರ್ದೇಶಕಿ. ಮಡಿಕೇರಿಯ ದುಬಾರೆ ಅರಣ್ಯದಲ್ಲಿ ಆನೆ ಸಾಗಣಿಕೆ. ಅವರ ಡಾಕ್ಯುಮೆಂಟರಿಗಳಿಗೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಯ ಮುಕುಟ.
ಡಿ.ಕೆ. ಚೌಟರ ಚೌಟರ ಜೊತೆ `ಉದಯವಾಣಿ' ಮಾತುಕತೆ

* ಉದ್ಯಮಿ ಡಿ.ಕೆ. ಚೌಟ ಅವರು ರಂಗಕರ್ಮಿ, ಸಾಹಿತಿ ಹಾಗೂ ಕಲಾಪೋಷಕ ಆಗಿದ್ದು ಯಾವಾಗ?
ನನ್ನ ಓದುವ ಚಟವೇ ಅದಕ್ಕೆ ಕಾರಣ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಹಲವು ಕಾದಂಬರಿ ಓದಿ ಮುಗಿಸಿದ್ದೆ. ಮುಂಬೈನ ಆ ಹಣದ ಆಟ ನನ್ನನ್ನು ಆಕರ್ಷಿಸಿತು. ಬಹುಶಃ ನಾನಾಗ ಹಣದ ಹಿಂದೆ ನಡೆದೆ. ಇಕನಾಮಿಕ್ಸ್‌ ಎಂಎ ಮುಗಿಸಿದವನೇ ವಿದೇಶಕ್ಕೆ ಹಾರಿದೆ. ಆದರೆ ಎಂದಿಗೂ ನನ್ನ ಸಾಂಸ್ಕೃತಿಕ ತುಡಿತ ಕಮ್ಮಿ ಆಗಲಿಲ್ಲ. ನನ್ನ ವಿದೇಶ ಜೀವನದಲ್ಲಿ ಬಹಳ ಮಿಸ್‌ ಮಾಡ್ಕೊತಾ ಇದ್ದೀನಿ ಅನ್ನಿಸ್ತಿತ್ತು. ರಜೆಯಲ್ಲಿ ತಾಯ್ನಾಡಿಗೆ ಬಂದಾಗ ಕನ್ನಡ ಪುಸ್ತಕಗಳನ್ನು ಬಾಚಿಕೊಳ್ಳುತ್ತಿದ್ದೆ. ಮಾತೃ ಭಾಷೆಯ ಒಡನಾಟಕ್ಕೆ ಹಾತೊರೆಯುತಿದ್ದೆ. ಅದೇ ಇವತ್ತು ಮರಳಿ ಇಲ್ಲಿಗೆ ಕರೆತಂದಿದೆ.

* ತಾವೀಗ ಸಿಜಿಕೆ ಅವರ `ರಂಗ ನಿರಂತರ' ಸಂಘಟನೆಯ ಅಧ್ಯಕ್ಷರು. ಅದರ ಕಾರ್ಯ ಚಟುವಟಿಕೆ ಹೇಗೆ ಸಾಗುತ್ತಿದೆ?
ಈ ಬಾರಿಯ ರಂಗ ನಿರಂತರದ ಸಿಜಿಕೆ ಸ್ಮರಣೆಯಲ್ಲಿ ಹತ್ತು ಹೊಸ ನಾಟಕಗಳು ಕನ್ನಡ ರಂಗಭೂಮಿಗೆ ಕೊಟ್ಟಿದೆ. ಇದು ಹೆಮ್ಮೆಯ ವಿಷಯ. ಕನ್ನಡ ರಂಗಭೂಮಿ ಹೊಸ ನಾಟಕಗಳ ಕೊರತೆ ಎದುರಿಸುವಾಗ ರಂಗನಿರಂತರ ಈ ಸಾಹಸ ಮಾಡಿದೆ. ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಇಲ್ಲದಿದ್ದರೆ 60 ದಿನಗಳ ನಾಟಕೋತ್ಸವ ಹಾಗೂ 20 ಹೊಸ ನಾಟಕ ಕೊಡುವ ಯೋಜನೆ ಇತ್ತು. ಆದರೆ ಕಳೆದ ನಾಟಕೋತ್ಸವ ಕಾಲದಲ್ಲಿ ನಮ್ಮ ಉತ್ತರ ಕನ್ನಡಿಗರು ಸಂತ್ರಸ್ತರಾಗಿದ್ದರು. ಹೊಸ ನಾಟಕ, ಹೊಸ ಹುಡುಗರು, ಹೊಸ ಯೋಚನೆಯನ್ನು ರಂಗಭೂಮಿಗೆ ತರಬೇಕು ಎಂಬುದೇ ನಮ್ಮ ಉದ್ದೇಶ.
* ತಾವು ಚಿತ್ರಕಲಾ ಪರಿಷತ್ತಿನ ಕಾರ್ಯದರ್ಶಿಗಳಾಗಿ ಹಲವು ಕಾರ್ಯ ಮಾಡಿದಿರಿ. ಅದರಲ್ಲಿ ಚಿತ್ರಸಂತೆ ಬಗ್ಗೆ ಹೇಳಿ?
ಚಿತ್ರಕಲೆ ನನಗೆ ಬಹಳ ಇಷ್ಟವಾದ ಮಾಧ್ಯಮ. ಜಗತ್ತಿನ ಯಾವುದೇ ನಗರಕ್ಕೆ ಹೋದರೂ ಅಲ್ಲಿಯ ಗ್ಯಾಲರಿಗಳನ್ನು ಹುಡುಕುತ್ತಿದ್ದೆ. ಕೃತಿ ಸಂಗ್ರಹಿಸುತ್ತಿದ್ದೆ. ಕಲಾಕೃತಿಗಳು ಗ್ಯಾಲರಿಯಿಂದ ಹೊರ ಬರಬೇಕು ಎನ್ನುವ ಕಲ್ಪನೆ ನನ್ನನ್ನು ಸದಾ ಕಾಡುತ್ತಿತ್ತು. ಚಿತ್ರಕಲಾ ಪರಿಷತ್ತಿಗೆ ಬಂದಾಗ ನನ್ನ ಕಲ್ಪನೆಗೊಂದು ರೂಪ ಕೊಟ್ಟೆ. `ಸಂತೆ' ಎನ್ನುವ ನಮ್ಮ ದೇಸಿ ಪದವನ್ನು ಬಳಸಿಕೊಂಡೆ. ಚಿತ್ರಸಂತೆ ಮಾಡಿದೆ. ಮನ್ನಣೆ ಸಿಕ್ಕಿತು. ಇದರಿಂದ ಚಿತ್ರಕಲೆಯನ್ನು ಸಾಮಾನ್ಯರಿಗೆ ತಲುಪಿಸಿದ ಸಂತೊಷ ಇದೆ.

* ಚೌಟ ಪ್ರತಿಷ್ಠಾನ ರಚನೆಯ ಉದ್ದೇಶಗಳೇನು?
ಪ್ರತಿಷ್ಠಾನದಡಿ ನನ್ನ ಊರಿನಲ್ಲಿ ಸಮುದಾಯ ಭವನವೊಂದನ್ನು ನಿರ್ಮಿಸುತ್ತಿದ್ದೇನೆ. ಇದು ಮದುವೆ ಮಂಟಪವಲ್ಲ. ಅಪ್ಪಟ ಕೃಷಿ ಭವನ. ರೈತರಿಗೆ ತರಬೇತಿ, ಹಳ್ಳಿಗರಿಗೆ ಒಳ್ಳೆ ಚಿತ್ರ ತೋರಿಸುವ ಉದ್ದೇಶವಿದೆ.

* ತಾವು ಕಲೆಗೆ ಪೋಷಕರಂತಿದ್ದೀರಿ. ಸಂಘಟನೆಗಳಿಗೆ ಅಪಾರ ಸಹಾಯ ಮಾಡಿದ್ದೀರಿ. ಈ ಬಗ್ಗೆ ಏನು ಹೇಳುತ್ತೀರಿ?
ನನ್ನ ಇಡೀ ಸಂಪಾದನೆ ಒಂದು ಟ್ರಸ್ಟ್‌. ನನ್ನದು ಕೊಡುವ ಕೈ. ಅದು ಸಹಾಯವಲ್ಲ. ಸಾಂಸ್ಕೃತಿಕ ಲೋಕಕ್ಕೆ ನನ್ನ ಪುಟ್ಟ ಕಾಣಿಕೆ.

Saturday, February 13, 2010

ಆರ್‌.ಕೆ. ಪದ್ಮ­ನಾಭ


ಪದ್ಮ­ನಾ­ಭ­ದಾ­ಸ­ನಿಗೆ ಅರ­ವತ್ತು!


ಗಾನ­ಕ­ಲಾ­ಭೂ­ಷಣ ವಿದ್ವಾನ್‌ ಆರ್‌.ಕೆ. ಪದ್ಮ­ನಾಭ!
ಈ ಹೆಸ­ರ­ಲ್ಲೇನೋ ಸವಿ ಸವಿ ಸುಂದರ ಸೆಳೆ­ತ­ವಿದೆ. ಅವರ ಹಾಡು ಕೇಳಿ­ದರೆ ಆತ್ಮಾ­ನಂ­ದ­ವಾ­ಗು­ತ್ತದೆ. ಸ್ವರ ರಾಗ ಲಯ ತಾಳ ಭಾವ­ಗಳ ಮೇಳ ಕಳೆ­ಕಟ್ಟಿ ಕಂಗೊ­ಳಿ­ಸು­ತ್ತವೆ. ಒಂದೇ ರಾಗಕ್ಕೆ ಬಣ್ಣ ಬಣ್ಣದ ಸುಸ್ವರ ಪೋಣಿ­ಸುತ್ತಾ ಗಂಟೆ­ಗ­ಟ್ಟಲೆ ತಣಿ­ಸುವ ವಿದ್ವತ್ತು ಅವ­ರದು. ಮಾತಿ­ನಲ್ಲಿ ಸಂಗೀತ. ಉಸಿ­ರಿ­ನಲ್ಲಿ ಸಂಗೀತ. ಸಾಟಿ ಇಲ್ಲದ ಸಿದ್ಧಿ ಅವ­ರದು!
ಆರ್‌.ಕೆ. ಪದ್ಮ­ನಾಭ ಅವ­ರಿಗೆ ಈಗ ಅರ­ವತ್ತು ತುಂಬಿವೆ. ಹಾಸನ ಜಿಲ್ಲೆಯ ರುದ್ರ­ಪ­ಟ್ಟಣ ಪರಿ­ಸ­ರ­ದಲ್ಲಿ ಹುಟ್ಟಿ ಬೆಳೆದ ಇವರು ಮೂರೂ­ವರೆ ದಶ­ಕ­ಗ­ಳಿಂದ ಹಾಡುತ್ತಾ ಬಂದಿ­ದ್ದಾರೆ. ಸಂಗೀತ ಕ್ಷಿತಿ­ಜ­ದಲ್ಲಿ ಅವ­ರಿಗೆ ಬಹಳ ವಿಶೇಷ ಸ್ಥಳ. ಪುರಂ­ದರ ದಾಸರ ಸಮ­ಕಾ­ಲೀ­ನರೇ ಆದ ಸದ್ಗುರು ವಾದಿ­ರಾ­ಜರ ದೈವಿಕ ಸಾಹಿ­ತ್ಯ­ವನ್ನು ಸಿದ್ಧಿ­ಸಿ­ಕೊಂ­ಡಿ­ರುವ ಒಬ್ಬನೇ ಒಬ್ಬ ಕಲಾ­ವಿದ ಆರ್‌­ಕೆಪಿ. ವಾದಿ­ರಾ­ಜರ ಕೃತಿ­ಗ­ಳಿಗೆ ಹೊಸ ರೂಪ ಕೊಟ್ಟು ಹರಿ­ದಾಸ ಪರಂ­ಪ­ರೆ­ಯಲ್ಲಿ ಅವರ ಕೊಡು­ಗೆ­ಯನ್ನು ಜಗ­ತ್ತಿಗೆ ಸಾರಿ­ದ್ದಾರೆ.
ವಾಗ್ಗೇ­ಯ­ಕಾ­ರ­ರಾಗಿ ಪದ್ಮ­ನಾ­ಭರ ಕಾರ್ಯ ಅನನ್ಯ. `ಪ­ದ್ಮ­ನಾಭ ದಾಸ' ಎಂಬ ಅಂಕಿ­ತ­ದೊಂ­ದಿಗೆ ಕೃತಿ­ರ­ಚನೆ ಮಾಡಿ­ರುವ ಅವರು ಹರಿ­ದಾಸ ಪರಂ­ಪ­ರೆಗೆ ಹೊಸ ಸೇರ್ಪ­ಡೆ­ಯಾ­ಗಿ­ದ್ದಾರೆ. `ಸ­ರ್ವ­ರಿಗೂ ಸಂಗೀತ' ಎಂಬ ತತ್ವದ `ಗೋ­ಷ್ಠಿ­ಗಾ­ಯನ' ಪ್ರಾಯೋ­ಗಾ­ತ್ಮಕ ಪರಿ­ಕ­ಲ್ಪನೆ ಮೂಲಕ ಸಾವಿರ ಮಹಿ­ಳೆ­ಯ­ರಿಗೆ ಏಕ­ಕಾ­ಲ­ದಲ್ಲಿ ಸಂಗೀತ ಪಾಠ ಮಾಡುವ ಮೂಲಕ ಹೊಸ ಅಲೆ­ಯನ್ನೇ ಸೃಷ್ಟಿ­ಸಿ­ದ್ದಾರೆ.
ಆರ್‌.ಕೆ. ಪದ್ಮ­ನಾಭ ವ್ಯಕ್ತಿ­ಯೊ­ಬ್ಬರು, ಕಾರ್ಯ ಹಲವು! ರಂಗ­ಕರ್ಮಿ: ಹಲವು ನಾಟ­ಕ­ಗ­ಳಲ್ಲಿ ಅಭಿ­ನಯ, ರಚನೆ, ಸಂಗೀತ, ನಿರ್ದೇ­ಶನ. ಬರ­ಹ­ಗಾರ: ನೆನ­ಪಿ­ನಂ­ಗ­ಳ­ದಲ್ಲಿ(ಆ­ತ್ಮ­ಚ­ರಿತ್ರೆ), ಸಮ­ರ್ಪಣಾ, ಪುರಂ­ದರ ನವ­ರತ್ನ ಮುಂತಾದ ಕೃತಿ­ಗಳು ಲೋಕಾ­ರ್ಪಣೆ. ಸಂಘ­ಟಕ: ವಾದಿ­ರಾಜ ಭವನ ನಿರ್ಮಾಣ, ರುದ್ರ­ಪ­ಟ್ಟ­ಣದ ಸಂಗೀ­ತೋ­ತ್ಸವ, ಗಾನ­ಕಲಾ ಪರಿ­ಷತ್ತು ಸಂಘ­ಟ­ನೆ­ಗಳ ಅಧ್ಯ­ಕ್ಷತೆ. ಇವು­ಗಳ ಜೊತೆಗೆ ಸಂಗೀತ ಗುರು, ಕ್ರೀಡಾ­ಪಟು, ಪ್ರಕಾ­ಶಕ, ಬಡಾ­ವಣೆ ಅಭಿ­ವೃ­ದ್ಧಿ­ಕಾರ....

ಅರ­ವತ್ತು ತುಂಬಿದ ಹೊತ್ತಿ­ನಲ್ಲಿ `ಉ­ದ­ಯ­ವಾಣಿ' ಜೊತೆ ಆರ್‌­ಕೆಪಿ ಮಾತು­ಕತೆ


* ತಮಗೆ ಅರ­ವತ್ತು ತುಂಬಿವೆ. ಈ ಸಮ­ಯ­ದಲ್ಲಿ ತಮ್ಮ ಸಂಗೀತ ಸೇವೆಗೆ ಅಭಿ­ನಂ­ದ­ನೆ­ಗಳ ಮಹಾ­ಪೂ­ರವೇ ಹರಿದು ಬಂದಿದೆ. ಏನು ಹೇಳು­ತ್ತೀರಿ?

ಸಂಗೀತ ಸಾಮಾ­ನ್ಯ­ರಿಗೆ ತಲು­ಪ­ಬೇಕು ಎಂಬ ನನ್ನ ಕನ­ಸಿಗೆ ಒಳ್ಳೆಯ ಪ್ರತಿ­ಫಲ ಸಿಕ್ಕಿದೆ. ನನ್ನ ಕಾರ್ಯ ತೃಪ್ತಿ ಕೊಟ್ಟಿದೆ. ವರ್ಚಸ್ಸು ಕೊಟ್ಟಿದೆ. ಹುಮ್ಮಸ್ಸು ಕೊಟ್ಟಿದೆ. ಆದ­ರಣೆ ಕೊಟ್ಟಿದೆ. ಇದೇ ನನಗೆ ದೊಡ್ಡ ಆಸ್ತಿ. ಇದ­ಕ್ಕಿಂತ ಇನ್ನೇನು ಬೇಕು ಹೇಳಿ?

* ತಮ್ಮ ಸಂಗೀತ ಕಾರ್ಯ­ದಲ್ಲಿ ಹಲವು ಮಹ­ತ್ವ­ಗ­ಳನ್ನು ಸಾಧಿ­ಸಿ­ದ್ದೀರಿ. ಅದ­ರಲ್ಲಿ `ಗೋ­ಷ್ಠಿ­ಗಾ­ಯನ' ಒಂದು ಮೈಲು­ಗಲ್ಲು. ಅದರ ಬಗ್ಗೆ ಹೇಳಿ?

ಗೋಷ್ಠಿ ಎನ್ನುವ ಪದ­ದಲ್ಲೇ ಒಂದು ವಿಶೇಷ ಗುಣ­ವಿದೆ. ಒಗ್ಗಟ್ಟು. ಇಲ್ಲಿ ತಾರ­ತಮ್ಯ ಇಲ್ಲ. ಎಲ್ಲರೂ ಒಂದೆ. ಈ ಕಲ್ಪ­ನೆಯ ಮೇಲೆ ಗೋಷ್ಠಿ­ಗಾ­ಯನ ಪ್ರಯೋಗ ಮಾಡಿದೆ. ಸದಾ ಕೌಟುಂ­ಬಿಕ ಜಂಜಾ­ಟ­ಗ­ಳ­ಲ್ಲಿ­ರುವ ಗೃಹಿ­ಣಿ­ಯ­ರಿಗೆ ಇದು ಚಿಕಿ­ತ್ಸೆಯ ರೀತಿ­ಯಲ್ಲಿ ಕೆಲಸ ಮಾಡಿದೆ. ಇಲ್ಲಿ ಸಾವಿರ ಮಹಿ­ಳೆ­ಯರು ಏಕ ಕಂಠ­ದಲ್ಲಿ ಹಾಡು­ತ್ತಾರೆ. ಅವ­ರೇನು ವಿದು­ಷಿ­ಯ­ರಾ­ಗ­ಬೇ­ಕಿಲ್ಲ. ಒಂದು ಸಂಗತಿ ಬಿಟ್ಟು ಹಾಡಿ­ದರೂ ನಷ್ಟ­ವಿಲ್ಲ. ಆದರೆ ಸಮೂಹ ಗಾಯ­ನ­ದಿಂದ ಅವರ ಮನ­ಸ್ಸಿಗೆ ನೆಮ್ಮದಿ ಸಿಕ್ಕಿದೆ.

* ಪ್ರಚಾ­ರಕ್ಕೆ ಬಾರದ ವಾದಿ­ರಾ­ಜರ ಕೃತಿ­ಗ­ಳಿಗೆ ಮಟ್ಟು­ಹಾಕಿ ಹೊಸ ರೂಪ ಕೊಟ್ಟಿ­ದ್ದೀರಿ. ಅವರ ಕೃತಿ­ಗ­ಳಲ್ಲಿ ನೀವು ಕಂಡಿ­ದ್ದೇನು?

ಸದ್ಗುರು ವಾದಿ­ರಾ­ಜರು ನನ್ನ ಆರಾಧ್ಯ ದೈವ. ಅವರ ಕೃತಿ­ಗ­ಳ­ಲ್ಲಿ­ರುವ ಸೊಗಸು, ಸರ­ಳತೆ, ಆಧ್ಯಾತ್ಮ ಚಿಂತನೆ, ಮಾನ­ವೀಯ ಮೌಲ್ಯ­ಗ­ಳನ್ನು ಪರಿ­ಚ­ಯಿ­ಸ­ಬೇಕು ಎಂಬುದು ನನ್ನ ಸಂಕಲ್ಪ. ಆ ನಿಟ್ಟಿ­ನಲ್ಲಿ ನೂರಕ್ಕೂ ಹೆಚ್ಚು ಕೃತಿ­ಗ­ಳಿಗೆ ಸಂಯೋ­ಜನೆ ಮಾಡಿ­ದ್ದೀನಿ. ವಾದಿ­ರಾ­ಜರ ಕೃತಿ­ಯಾ­ಧಾ­ರಿತ ಕಚೇರಿ ಮಾಡಿ­ದ್ದೇನೆ.

* ವಾಗ್ಗೇ­ಯ­ಕಾ­ರ­ರಾಗಿ ನೂರಾರು ಕೃತಿ ರಚಸಿ `ಪ­ದ್ಮ­ನಾ­ಭ­ದಾಸ'ನಾ­ಗಿ­ದ್ದೀರಿ. ಈ ಪ್ರಯ­ತ್ನದ ಫಲ­ವೇನು?


ಸಂಗೀತ ತ್ರಿಮೂ­ರ್ತಿ­ಗ­ಳಾದ ತ್ಯಾಗ­ರಾಜ, ದೀಕ್ಷಿ­ತರು, ಶಾಮ­ಶಾ­ಸ್ತ್ರಿ­ಗಳು ಪೂಜ್ಯರು. ಅವರು ಶ್ರೇಷ್ಠ ವಾಗ್ಗೇ­ಯ­ಕಾ­ರರು. ನಾನು ಸದಾ ಹೊಸ­ತಿ­ಗಾಗಿ ತುಡಿ­ಯು­ವ­ವನು. ಸಂಶೋ­ಧನೆ ನನ್ನ ಸ್ವಭಾವ. ಈ ನಿಟ್ಟಿ­ನಲ್ಲಿ ನೂರೈ­ವತ್ತು ಹೆಚ್ಚು ಕೃತಿ ರಚಿಸಿ ಹಾಡಿ­ದ್ದೇನೆ. ನನ್ನ ಕೃತಿ­ಗ­ಳನ್ನು ಹಾಡಿ ಎಂದು ಯಾರನ್ನೂ ಕೇಳಿ­ಕೊಂ­ಡಿಲ್ಲ. ಕೃತಿ ರಚ­ನೆ­ಯಿಂದ ನನಗೆ ತೃಪ್ತಿ ಸಿಕ್ಕಿದೆ ಅಷ್ಟು ಸಾಕು.


* ರಂಗ­ಕಾ­ಯ­ಕ­ದಲ್ಲೂ ತಮಗೆ ದೊಡ್ಡ ಹೆಸ­ರಿದೆ. ತ್ಯಾಗ­ರಾ­ಜ­ರಾಗಿ ತಮ್ಮ ಅಮೋಘ ಅಭಿ­ನಯ ಇನ್ನೂ ಹಸಿ­ರಾ­ಗಿದೆ. ಅದರ ಬಗ್ಗೆ ಹೇಳಿ?


ಭಾರ­ತೀಯ ಕಲೆ­ಗಳು ಬಹಳ ಶ್ರೇಷ್ಠ­ವಾ­ಗಿವೆ. ಚಿಕ್ಕಂ­ದಿ­ನಿಂ­ದಲೂ ನನಗೆ ರಂಗ­ಭೂ­ಮಿಯ ಸೆಳೆ­ತ­ವಿತ್ತು. ಹಲವು ಸಂಗೀತ ನಾಟ­ಕ­ಗ­ಳಲ್ಲಿ ಅಭಿ­ನ­ಯಿ­ಸಿ­ದ್ದೀನಿ. ರಚಿಸಿ ನಿರ್ದೇ­ಶಿ­ಸಿ­ದ್ದೀನಿ. ಸಂಗೀತ ಶಿಬಿ­ರ­ಗ­ಳಲ್ಲಿ ವಿದ್ಯಾ­ರ್ಥಿ­ಗ­ಳಿಗೆ ಸ್ಕಿಟ್‌ ಕಡ್ಡಾ­ಯ­ವಾಗಿ ಮಾಡಿ­ಸು­ತ್ತೇನೆ. ಎಲ್ಲರೂ ವೇದಿ­ಕೆಯ ಮೇಲೆ ಮಾತ­ನಾ­ಡ­ಬೇಕು. ಇದ­ರಿಂದ ಅವರ ಉಚ್ಛಾ­ರಣೆ ಸ್ಪಷ್ಟ­ವಾ­ಗು­ತ್ತದೆ.