
ಅಚ್ಚ ಕನ್ನಡಿಗ ಅಜಯ್ ಕುಮಾರ್ ಸಿಂಗ್!
ಖದ್ರಿ ಗೋಪಾಲನಾಥರ ಸ್ಯಾಕ್ಸೋಪೋನ್ ಹಾಗೂ ಕಲ್ಯಾಣ ಕುಮಾರಿ ಅವರ ವೈಲಿನ್ ನಡುವಿನ ಸಮರ ಬಲು ಜೋರಾಗೇ ನಡೆದಿತ್ತು. ಖದ್ರಿ ಒಂದು ಅಂದರೆ, ಕುಮಾರಿ ಎರಡು ಅನ್ನುತ್ತಿದ್ದರು. ಖದ್ರಿ ನಾಲ್ಕು ಸ್ವರ ನುಡಿಸಿದರೆ, ಕುಮಾರಿ ಎಂಟು ಸ್ವರ ನುಡಿಸುತ್ತಿದ್ದರು. ಅವರಿಬ್ಬರ ಮಧ್ಯದ ಮಾಧುರ್ಯದ ಕಾಳಗಕ್ಕೆ ಕೇಳುಗ ಆನಂದದ ನೆತ್ತರು ಹರಿಸಿ ಚಿತ್ತಾಗಿ ಹೋಗಿದ್ದ.........ಮೊದಲ ಸಾಲಿನಲ್ಲಿ ರಸಿಕನೊಬ್ಬ ಕೂತಿದ್ದ. ಆತನ ಆನಂದಕ್ಕೆ ಎಣೆ ಎಂಬುದಿರಲಿಲ್ಲ. ಆ ಮಾಧುರ್ಯದ ಕಾಳಗದಲ್ಲಿ ಈ ವ್ಯಕ್ತಿಯ ಕೈಗಳು ತೊಡೆ ತಟ್ಟಿ ತಾಳ ಹಾಕುತ್ತಿದ್ದವು. ಕಣ್ಣುಗಳು ತೇಲಾಡುತ್ತಾ ಆಗಸದತ್ತ ದಿಟ್ಟಿಸುತ್ತಿದ್ದವು. ಕತ್ತು ಅತ್ತಿತ್ತ ಓಲಾಡುತ್ತಿತ್ತು. ಮೋಹನ ರಾಗ ಆರಂಭವಾದಾಗ ಬಂಗಾರ ಸಿಕ್ಕಿದ ಭಾವ. ಕಲ್ಯಾಣಿ ಆರಂಭವಾದದ್ದೇ ತಡ ಕಣ್ಣುಗಳ ತೀಕ್ಷ್ಣ ಇಮ್ಮಡಿ. ರಾಗ ರಾಗಕ್ಕೂ ಆ ವ್ಯಕ್ತಿಯ ಮುಖಭಾವ ಬದಲಾಗುತ್ತಿತ್ತು. ನಡು ನಡುವೆ ಭಲೇ... ಎಂಬ ಅಬ್ಬರ ಬಾಯಿಂದ ಹೊರಬರುತ್ತಿತ್ತು. ಆ ಜಗತ್ಪ್ರಸಿದ್ಧರ ಜುಗಲ್ಬಂದಿಗೆ ಈ ವ್ಯಕ್ತಿ ಆನಂದದಿಂದ ತೇಲಾಡುತ್ತಿದ್ದರು. ಆರಂಭದ ವರ್ಣದಿಂದ ಹಿಡಿದು ಕಡೆಯ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ’ವರೆಗೂ ಬರೋಬ್ಬರಿ 3 ಗಂಟೆ ಆ ವ್ಯಕ್ತಿ ಅತ್ತಿತ್ತ ಅಲ್ಲಾಡಲಿಲ್ಲ! ಆ ರಸಿಕನ ಹೆಸರು ಡಾ. ಅಜಯ್ ಕುಮಾರ್ ಸಿಂಗ್. ಕರ್ನಾಟಕ ರಾಜ್ಯ ಕಂಡ ಹೆಮ್ಮೆಯ ಪೊಲೀಸ್ ಅಧಿಕಾರಿ. ತಮ್ಮ 37 ವರ್ಷಗಳ ಸೇವಾವಧಿಯಲ್ಲಿ 35 ವರ್ಷಗಳನ್ನು ಕರ್ನಾಟಕಕ್ಕೇ ಕೊಟ್ಟವರು. ಅವರು ಕರ್ನಾಟಕದಲ್ಲಿ ಇದ್ದದ್ದು ಕೇವಲ ಉನ್ನತ ಪೊಲೀಸ್ ಅಧಿಕಾರಿಯಾಗಿ ಮಾತ್ರವಲ್ಲ, ಒಬ್ಬ ಅಪ್ಪಟ ಕನ್ನಡಿಗನಾಗಿ. ಕನ್ನಡ ಸಾಹಿತಿಯಾಗಿ. ಕನ್ನಡ ಕಲಾಭಿಮಾನಿಯಾಗಿ.ಸಿಂಗ್ ಅವರಿಗೆ ಕನ್ನಡ ನಾಡು, ನುಡಿ ಅಂದರೆ ಎಲ್ಲಿಲ್ಲದ ಪ್ರೀತಿ. ಕನ್ನಡ ಅವರ ನಾಲಗೆಯ ಮೇಲೆ ನಲಿದಾಡುತ್ತಿತ್ತು. ಅವರ ಊರು ಉತ್ತರ ಪ್ರದೇಶದ ಸಿರಸಗಂಜ್. 1974ರ ಐಪಿಎಸ್ ಬ್ಯಾಚ್ನಿಂದ ಹೊರಬಂದ ಅಜಯ್ ಕುಮಾರ್ ಸಿಂಗ್ಗೆ 1976ರ ನಂತರ ಕರ್ನಾಟಕ ಕರ್ಮಭೂಮಿಯಾಗಿತ್ತು. ವಿವಿಧ ಹುದ್ದೆಗಳನ್ನು ನಿರ್ವಹಿಸಿ 2007ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೇರಿದರು. ಅಷ್ಟೊತ್ತಿಗಾಗಲೇ ಸಿಂಗ್ ಕನ್ನಡ ಮಣ್ಣಿನ ಅಪ್ಪಟ ಪ್ರೇಮಿಯಾಗಿದ್ದರು.ಕರ್ನಾಟಕ ಶಾಸ್ತ್ರೀಯ ಸಂಗೀತ ಅಂದರೆ ಅವರಿಗೆ ಪ್ರಾಣ. ಕನ್ನಡ ಸಾಹಿತ್ಯ ಪಂಚಪ್ರಾಣ. ಬೇಂದ್ರೆಯವರ ಸಾಹಿತ್ಯವನ್ನು ಹುಚ್ಚರಂತೆ ಹಚ್ಚಿಕೊಂಡಿದ್ದರು. ಬೇಂದ್ರೆ ಅವರ ಕವನಗಳನ್ನು ಹಿಂದಿಗೆ ತೆಗೆದುಕೊಂಡು ಹೋದರು. ವಚನಗಳ ಮಹತ್ವವನ್ನು ಅವರು ಸದಾ ಉಚ್ಛರಿಸುತ್ತಿದ್ದರು. ವಚನಗಳೂ ಕೂಡ ಅವರ ಕೈಯಿಂದ ಹಿಂದೆಗೆ ಹೋದವು. ಯಾವುದೇ ಕಾರ್ಯಕ್ರಮಗಳಿಗೆ ಹೋದರು ವಚನಗಳನ್ನು ಹೇಳಿ ಚಕಿತಗೊಳಿಸುತ್ತಿದ್ದರು.ಒಬ್ಬ ಉನ್ನತ ಪೊಲೀಸ್ ಅಧಿಕಾರಿಯಾಗಿ ಅವರು ಮಾಡಿದ ಕಾರ್ಯ ಅನನ್ಯ. ಹೊಸ ಹೊಸ ಅಪರಾಧ ತನಿಖಾ ವಿಧಾನಗಳನ್ನು ಇಡೀ ದೇಶಕ್ಕೇ ಕೊಟ್ಟರು. ಕರ್ನಾಟಕ ಪೊಲೀಸರು ಮುಡಿಗೇರಿಸಿಕೊಂಡಿರುವ ಖ್ಯಾತಿಗೆ ಸಿಂಗ್ ಕೂಡ ಕಾರಣರು. ಬೆಂಗಳೂರಿನ ಐಐಎಸ್ಸಿ, ಹುಬ್ಬಳ್ಳಿಗಳಲ್ಲಿ ನಡೆದ ಉಗ್ರರ ದಾಳಿ ಪ್ರಕರಣವನ್ನು ಬಹಳ ಬೇಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಕೈಗೆ ಕೊಟ್ಟು ಖ್ಯಾತರಾದರು.ಅಜಯ್ ಕುಮಾರ್ ಸಿಂಗ್ ಈಗ ಕರ್ನಾಟದಿಂದ ತಮ್ಮ ಹುಟ್ಟೂರಿಗೆ ಹೊರಟಿದ್ದಾರೆ. ಅವರು ಇಲಾಖೆಯಿಂದ ಜ. 31ರಂದು ನಿವೃತ್ತರಾಗಿದ್ದಾರೆ. ಮೊನ್ನೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಭಾವುಕರಾಗಿದ್ದರು. ನಿವೃತ್ತರಾದ ಮೇಲೂ ಕನ್ನಡ ಪ್ರೀತಿ ಇದ್ದೇ ಇರುತ್ತದೆ ಎಂಬ ಮಾತು ಹಾಗಿರಲಿ, 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆಯಾದ ಈ ಹೊತ್ತಿನಲ್ಲಿ ಅಂಥಾ ಒಬ್ಬ ಆಪ್ಪಟ ಕನ್ನಡಾಭಿಮಾನಿಯ ನೆನಪು ನಿತ್ಯವೂ ನಿತ್ಯೋತ್ಸವ!
ಭಾರತವನ್ನೇ ಮನೆಗೆ ತರಲು ಹೋಗಿದ್ದ!
ಅವತ್ತು ಕಾರ್ಗಿಲ್ನ ಕುಪ್ಪಾರ ಗೊಂಡಾರಣ್ಯ ಪ್ರದೇಶದಲ್ಲಿ ಮೈ ಕೊರೆಯುವ ಚಳಿ. ಪೊದೆಯ ಮರೆಯಲ್ಲಿ ಕುಳಿತು ಭಾರತಾಂಬೆಯ ಸೇವೆಗಯ್ಯುತ್ತಿದ್ದ 23ರ ಹರೆಯದ ಕನಸು ಕಂಗಳ ಪೋರ ಯೋಗೇಂದ್ರ ಸಿಂಗ್, ತನ್ನ ಪ್ರಾಣ ಸ್ನೇಹಿತ ಜೋಗೀಂದರ್ ಜೊತೆ ಭವಿಷ್ಯದ ಬಗ್ಗೆ ಬಗೆ ಬಗೆಯಾಗಿ ಮಾತನಾಡಿದ್ದ. ‘ ನಾಳೆ ಮುಂಜಾನೆ ನನ್ನ ಮನೆಗೆ ಹೋಗುತ್ತಿದ್ದೇನೆ’ ಎಂಬುದನ್ನೇ ನೂರು ಸಲ ಹೇಳಿದ್ದ. ‘ನಿಮ್ಮ ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಿದ್ದರೆ ಹೇಳು ’ ಎಂದು ಜೋಗಿಂದರ್ನನ್ನು ಕೇಳಿದ್ದ....ಹೌದು, ಅವನು ಅಂದುಕೊಂಡಂತೆ ಯೋಗೇಂದ್ರ ಮುಂಜಾನೆ ಮನೆಗೆ ಹೊರಟ. ಆದರೆ ಅವನು ಹೊರಟದ್ದು ಹೆಣವಾಗಿ!ಕಾಫಿನ್ ಒಳಗೆ ಮಲಗಿದ್ದ ಗೆಳೆಯನನ್ನು ಹೊತ್ತೊಯ್ಯುತ್ತಿದ್ದ ಜೋಗಿಂದರ್ ಮನಸ್ಸೂ ಕೂಡ ಹೆಣಭಾರ. ಭಾರವಾದ ಮನಸ್ಸಿನಲ್ಲೇ ಕೈ ಎತ್ತಿ ಸೆಲ್ಯೂಟ್ ಮಾಡಿದ್ದ. ‘ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಿದ್ದರೆ ಹೇಳು’ ಎಂದಿದ್ದ ಗೆಳೆಯನಿಗೆ ‘ನಿನ್ನನ್ನೇ ನಾನು ತೆಗೆದುಕೊಂಡು ಹೋಗುತ್ತ್ತಿದ್ದೇನೆ’ ಎಂದು ಮನಸ್ಸಿನಲ್ಲೇ ಮಾತನಾಡಿಕೊಂಡ ಜೋಗಿಂದರ್ ಮನಸ್ಸು ಮತ್ತೂ ಭಾರವಾಯಿತು. ಹೆಣವಾಗಿ ಬಂದ ಮಗನ ಮುಖ ನೋಡಿದ ತಾಯಿ ಕೇಳಿದ್ದು ಒಂದೇ ಪ್ರಶ್ನೆ. ಭಾರತ ಎಲ್ಲಿ ಮಗನೇ? ಹೆತ್ತ ಕರುಳಿನ ಕೊರಗು ಕೇಳಿದ ಜನ ಗೊಳೋ ಅಂದರು.ಯೋಗೇಂದ್ರ ಸಿಂಗ್ ಉತ್ತರ ಪ್ರದೇಶ ರಾಜ್ಯದ ಆಲಿಗರ್ ಸಮೀಪದ ಜೊಹರಾಗರ್ ಹಳ್ಳಿಯ ಹುಡುಗ. ಸೈನಿಕನಾಗುವುದು ಅವನ ಕನಸಿನ ಕಟ್ಟೆಯಾಗಿತ್ತು. 20ನೇ ವಯಸ್ಸಿನಲ್ಲಿ ಆ ಕಟ್ಟೆಯೊಡೆದು ರಜಪೂತನ್ ರೈಫಲ್ ದಳ ಸೇರಿದ. ಆರಂಭದಲ್ಲೇ ಕಾರ್ಗಿಲ್ ಪ್ರಾಂತ್ಯಕ್ಕೆ ಸೇವೆಗೆ ತೆರಳಿದ. ಅಮ್ಮನಿಗೆ ಬರೆದ ಮೊದಲ ಪತ್ರದಲ್ಲಿ ‘ನಾನು ಕ್ಷತ್ರಿಯ, ಯುದ್ಧವೇ ನನ್ನ ಧರ್ಮ’ ಎಂದು ಅರ್ಜುನನ ಡೈಲಾಗ್ ಹೊಡೆದಿದ್ದ!ಕಳೆದು ಹೋದ ಆ ಎಳೇ ಜೀವಕ್ಕೆ ಬೆಲೆ ಎಂಬುದಿರಲಿಲ್ಲ. ಒಬ್ಬ ಹೆಮ್ಮಯ ಯೋಧನನ್ನು ಭಾರತ ಕಳದುಕೊಂಡರೆ, ಇದ್ದ ಒಂದೇ ಒಂದು ನಂದಾದೀಪವನ್ನು ಆ ಕುಟುಂಬ ಕಳೆದುಕೊಂಡಿತ್ತು. ದೇಶಕ್ಕೆ ಯೋಗೇಂದ್ರ ಸಿಂಗ್ ಕಾರ್ಗಿಲ್ ಹೀರೋ. ಅವನು ಹುಟ್ಟಿದ ಹಳ್ಳಿಯಲ್ಲಿ ಅವನು ದೇವರು. ರಸ್ತೆ ರಸ್ತೆಯಲ್ಲಿ ಅವನನ್ನು ಜನ ಇಂದಿಗೂ ಪೂಜಿಸುತ್ತಿದ್ದಾರೆ. ‘ನಾನು ಕ್ಷತ್ರಿಯ, ಯುದ್ಧವೇ ನನ್ನ ಧರ್ಮ’ ಎಂಬ ಮಾತು ಅವನ ಪುತ್ಥಳಿ ಮುಂದೆ ರಾರಾಜಿಸುತ್ತಿದೆ. ಅವನು ಇಲ್ಲದಿದ್ದರೂ ಅವನ ಚೇತನ ಇನ್ನೂ ಜೀವಂತವಾಗಿದೆ!
ವೈದ್ಯನಿಗೆ ವಿಜಯ, ರೋಗಿಗೆ ಜೀವ!
ಇಂದೋರ್ನ ನರರೋಗ ವೈದ್ಯ ಡಾ. ರಾಜೇಂದ್ರ ಪಂಜಾಬಿ ಭಾರತದ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ಬರೆದು ವಿಶ್ವದ ಮೊದಲಿಗರಾಗಿದ್ದಾರೆ. ರೋಗಿಯೊಬ್ಬರ ಜೀವಕ್ಕೆ ಕುತ್ತು ತಂದಿದ್ದ ಅತೀದೊಡ್ಡ ಗ್ರಂಥಿಯೊಂದನ್ನು ಹೊರತೆಗೆದು ರೋಗಿಗೆ ಮರುಜೀವ ಕೊಟ್ಟಿದ್ದಾರೆ.ಜನನಾಂಗ ಹಾಗೂ ವೃಷಣಗಳು ದೇಹದ ಅತೀ ಸೂಕ್ಷ ಅಂಗಗಳು. ಇವು ಗುಪ್ತಾಂಗಗಳಾದ ಕಾರಣ ಇವುಗಳ ಬಗ್ಗೆ ರೋಗಿ ಮನಬಿಚ್ಚಿ ಮಾತನಾಡಲಾರ. 55 ವರ್ಷ ವಯಸ್ಸಿನ ಉಸ್ಮಾನ್ಗೆ ಇಂತಹ ರೋಗವೊಂದು ಕಾಣಿಸಿಕೊಂಡಿತು. ಆತನ ವೃಷಣಗಳ ಚೀಲ ಇದ್ದಕ್ಕಿದ್ದಂತೆ ದೊಡ್ಡದಾಯಿತು. ಜನನಾಂಗದ ಗಾತ್ರವೂ ಕೂಡ ಮಿತಿ ಮೀರಿ ಬೆಳೆಯಿತು. ಮೂತ್ರ ವಿಸರ್ಜನೆ ಸಾಧ್ಯವಾಗಲಿಲ್ಲ. ಲೈಂಗಿಕ ಕ್ರಿಯೆ ನಡೆಸಲೂ ಆಗಲಿಲ್ಲ. ಈ ತೊಂದರೆಯನ್ನು ಆಸ್ಪತ್ರೆಗೆ ತೋರಿಸಿದಾಗ ಅದು ವಿಶ್ವ ವೈದ್ಯಕೀಯ ಜಗತ್ತಿಗೆ ಸವಾಲಾಗಿತ್ತು. ಗುಪ್ತಾಂಗದ ನಡುವಿನ ಗ್ರಂಥಿ ಸಾಮಾನ್ಯವಾದುದು. ಅದು ಹೆಚ್ಚೆಂದರೆ 20ರಿಂದ 50 ಗ್ರಾಂನಷ್ಟು ದೊಡ್ಡದಾಗಬಹುದು. ಆದರೆ ಉಸ್ಮಾನ್ಗೆ ಬೆಳದಿದ್ದ ಗ್ರಂಥಿಯ ತೂಕ ಬರೋಬ್ಬರಿ 650 ಗ್ರಾಂ!ಡಾ. ರಾಜೇಂದ್ರ ಅವರು ವಿಶ್ವಶ್ರೇಷ್ಠ ಎನಿಸಿಕೊಂಡ ವೈದ್ಯರೆಲ್ಲರನ್ನು ಸಂಪರ್ಕಿಸಿ ಸಲಹೆ ಪಡೆದರು. ಇಷ್ಟು ದೊಡ್ಡ ಗ್ರಂಥಿಯ ಆಪರೇಷನ್ ಸಾಧ್ಯವೇ ಇಲ್ಲ ಅಂದರು. ಆದರೆ ರಾಜೇಂದ್ರ ಧೈರ್ಯಮಾಡಿ ಆಪರೇಷನ್ ಆರಂಭಿಸಿಯೇ ಬಿಟ್ಟರು. ಈ ಅತೀಸೂಕ್ಷ್ಮ ಶಸ್ತ್ರ ಚಿಕಿತ್ಸೆಯನ್ನು ಜಗತ್ತು ಗಮನಿಸುತ್ತಿತ್ತು. ಸತತ ಐದು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್! ಡಾ. ರಾಜೇಂದ್ರ ಗೆಲುವಿನ ನಿಟ್ಟುಸಿರು ಬಿಟ್ಟರು. ರೋಗಿ ಉಸ್ಮಾನ್ ಮರುಜೀವದ ನಗೆ ಬೀರಿದರು.ಡಾ. ರಾಜೇಂದ್ರ ಪಂಜಾಬಿ ಈ ಆಪರೇಷನ್ ಮೂಲಕ ಅತೀದೊಡ್ಡ ವೃಷಣ ಗ್ರಂಥಿ ತೆಗೆದ ವಿಶ್ವದ ಮೊದಲ ವೈದ್ಯ ಎಂಬ ಮನ್ನಣೆ ಗಳಿಸಿದರು.