Monday, February 21, 2011

ಅಚ್ಚ ಕನ್ನಡಿಗ ಅಜಯ್ ಕುಮಾರ್ ಸಿಂಗ್!



ಅಚ್ಚ ಕನ್ನಡಿಗ ಅಜಯ್ ಕುಮಾರ್ ಸಿಂಗ್!


ಖದ್ರಿ ಗೋಪಾಲನಾಥರ ಸ್ಯಾಕ್ಸೋಪೋನ್ ಹಾಗೂ ಕಲ್ಯಾಣ ಕುಮಾರಿ ಅವರ ವೈಲಿನ್ ನಡುವಿನ ಸಮರ ಬಲು ಜೋರಾಗೇ ನಡೆದಿತ್ತು. ಖದ್ರಿ ಒಂದು ಅಂದರೆ, ಕುಮಾರಿ ಎರಡು ಅನ್ನುತ್ತಿದ್ದರು. ಖದ್ರಿ ನಾಲ್ಕು ಸ್ವರ ನುಡಿಸಿದರೆ, ಕುಮಾರಿ ಎಂಟು ಸ್ವರ ನುಡಿಸುತ್ತಿದ್ದರು. ಅವರಿಬ್ಬರ ಮಧ್ಯದ ಮಾಧುರ್ಯದ ಕಾಳಗಕ್ಕೆ ಕೇಳುಗ ಆನಂದದ ನೆತ್ತರು ಹರಿಸಿ ಚಿತ್ತಾಗಿ ಹೋಗಿದ್ದ.........ಮೊದಲ ಸಾಲಿನಲ್ಲಿ ರಸಿಕನೊಬ್ಬ ಕೂತಿದ್ದ. ಆತನ ಆನಂದಕ್ಕೆ ಎಣೆ ಎಂಬುದಿರಲಿಲ್ಲ. ಆ ಮಾಧುರ್ಯದ ಕಾಳಗದಲ್ಲಿ ಈ ವ್ಯಕ್ತಿಯ ಕೈಗಳು ತೊಡೆ ತಟ್ಟಿ ತಾಳ ಹಾಕುತ್ತಿದ್ದವು. ಕಣ್ಣುಗಳು ತೇಲಾಡುತ್ತಾ ಆಗಸದತ್ತ ದಿಟ್ಟಿಸುತ್ತಿದ್ದವು. ಕತ್ತು ಅತ್ತಿತ್ತ ಓಲಾಡುತ್ತಿತ್ತು. ಮೋಹನ ರಾಗ ಆರಂಭವಾದಾಗ ಬಂಗಾರ ಸಿಕ್ಕಿದ ಭಾವ. ಕಲ್ಯಾಣಿ ಆರಂಭವಾದದ್ದೇ ತಡ ಕಣ್ಣುಗಳ ತೀಕ್ಷ್ಣ ಇಮ್ಮಡಿ. ರಾಗ ರಾಗಕ್ಕೂ ಆ ವ್ಯಕ್ತಿಯ ಮುಖಭಾವ ಬದಲಾಗುತ್ತಿತ್ತು. ನಡು ನಡುವೆ ಭಲೇ... ಎಂಬ ಅಬ್ಬರ ಬಾಯಿಂದ ಹೊರಬರುತ್ತಿತ್ತು. ಆ ಜಗತ್ಪ್ರಸಿದ್ಧರ ಜುಗಲ್ಬಂದಿಗೆ ಈ ವ್ಯಕ್ತಿ ಆನಂದದಿಂದ ತೇಲಾಡುತ್ತಿದ್ದರು. ಆರಂಭದ ವರ್ಣದಿಂದ ಹಿಡಿದು ಕಡೆಯ ‘ಭಾಗ್ಯದಾ ಲಕ್ಷ್ಮಿ ಬಾರಮ್ಮ’ವರೆಗೂ ಬರೋಬ್ಬರಿ 3 ಗಂಟೆ ಆ ವ್ಯಕ್ತಿ ಅತ್ತಿತ್ತ ಅಲ್ಲಾಡಲಿಲ್ಲ! ಆ ರಸಿಕನ ಹೆಸರು ಡಾ. ಅಜಯ್ ಕುಮಾರ್ ಸಿಂಗ್. ಕರ್ನಾಟಕ ರಾಜ್ಯ ಕಂಡ ಹೆಮ್ಮೆಯ ಪೊಲೀಸ್ ಅಧಿಕಾರಿ. ತಮ್ಮ 37 ವರ್ಷಗಳ ಸೇವಾವಧಿಯಲ್ಲಿ 35 ವರ್ಷಗಳನ್ನು ಕರ್ನಾಟಕಕ್ಕೇ ಕೊಟ್ಟವರು. ಅವರು ಕರ್ನಾಟಕದಲ್ಲಿ ಇದ್ದದ್ದು ಕೇವಲ ಉನ್ನತ ಪೊಲೀಸ್ ಅಧಿಕಾರಿಯಾಗಿ ಮಾತ್ರವಲ್ಲ, ಒಬ್ಬ ಅಪ್ಪಟ ಕನ್ನಡಿಗನಾಗಿ. ಕನ್ನಡ ಸಾಹಿತಿಯಾಗಿ. ಕನ್ನಡ ಕಲಾಭಿಮಾನಿಯಾಗಿ.ಸಿಂಗ್ ಅವರಿಗೆ ಕನ್ನಡ ನಾಡು, ನುಡಿ ಅಂದರೆ ಎಲ್ಲಿಲ್ಲದ ಪ್ರೀತಿ. ಕನ್ನಡ ಅವರ ನಾಲಗೆಯ ಮೇಲೆ ನಲಿದಾಡುತ್ತಿತ್ತು. ಅವರ ಊರು ಉತ್ತರ ಪ್ರದೇಶದ ಸಿರಸಗಂಜ್. 1974ರ ಐಪಿಎಸ್ ಬ್ಯಾಚ್ನಿಂದ ಹೊರಬಂದ ಅಜಯ್ ಕುಮಾರ್ ಸಿಂಗ್ಗೆ 1976ರ ನಂತರ ಕರ್ನಾಟಕ ಕರ್ಮಭೂಮಿಯಾಗಿತ್ತು. ವಿವಿಧ ಹುದ್ದೆಗಳನ್ನು ನಿರ್ವಹಿಸಿ 2007ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಹುದ್ದೆಗೇರಿದರು. ಅಷ್ಟೊತ್ತಿಗಾಗಲೇ ಸಿಂಗ್ ಕನ್ನಡ ಮಣ್ಣಿನ ಅಪ್ಪಟ ಪ್ರೇಮಿಯಾಗಿದ್ದರು.ಕರ್ನಾಟಕ ಶಾಸ್ತ್ರೀಯ ಸಂಗೀತ ಅಂದರೆ ಅವರಿಗೆ ಪ್ರಾಣ. ಕನ್ನಡ ಸಾಹಿತ್ಯ ಪಂಚಪ್ರಾಣ. ಬೇಂದ್ರೆಯವರ ಸಾಹಿತ್ಯವನ್ನು ಹುಚ್ಚರಂತೆ ಹಚ್ಚಿಕೊಂಡಿದ್ದರು. ಬೇಂದ್ರೆ ಅವರ ಕವನಗಳನ್ನು ಹಿಂದಿಗೆ ತೆಗೆದುಕೊಂಡು ಹೋದರು. ವಚನಗಳ ಮಹತ್ವವನ್ನು ಅವರು ಸದಾ ಉಚ್ಛರಿಸುತ್ತಿದ್ದರು. ವಚನಗಳೂ ಕೂಡ ಅವರ ಕೈಯಿಂದ ಹಿಂದೆಗೆ ಹೋದವು. ಯಾವುದೇ ಕಾರ್ಯಕ್ರಮಗಳಿಗೆ ಹೋದರು ವಚನಗಳನ್ನು ಹೇಳಿ ಚಕಿತಗೊಳಿಸುತ್ತಿದ್ದರು.ಒಬ್ಬ ಉನ್ನತ ಪೊಲೀಸ್ ಅಧಿಕಾರಿಯಾಗಿ ಅವರು ಮಾಡಿದ ಕಾರ್ಯ ಅನನ್ಯ. ಹೊಸ ಹೊಸ ಅಪರಾಧ ತನಿಖಾ ವಿಧಾನಗಳನ್ನು ಇಡೀ ದೇಶಕ್ಕೇ ಕೊಟ್ಟರು. ಕರ್ನಾಟಕ ಪೊಲೀಸರು ಮುಡಿಗೇರಿಸಿಕೊಂಡಿರುವ ಖ್ಯಾತಿಗೆ ಸಿಂಗ್ ಕೂಡ ಕಾರಣರು. ಬೆಂಗಳೂರಿನ ಐಐಎಸ್ಸಿ, ಹುಬ್ಬಳ್ಳಿಗಳಲ್ಲಿ ನಡೆದ ಉಗ್ರರ ದಾಳಿ ಪ್ರಕರಣವನ್ನು ಬಹಳ ಬೇಗ ತನಿಖೆ ನಡೆಸಿ ತಪ್ಪಿತಸ್ಥರನ್ನು ಕಾನೂನಿನ ಕೈಗೆ ಕೊಟ್ಟು ಖ್ಯಾತರಾದರು.ಅಜಯ್ ಕುಮಾರ್ ಸಿಂಗ್ ಈಗ ಕರ್ನಾಟದಿಂದ ತಮ್ಮ ಹುಟ್ಟೂರಿಗೆ ಹೊರಟಿದ್ದಾರೆ. ಅವರು ಇಲಾಖೆಯಿಂದ ಜ. 31ರಂದು ನಿವೃತ್ತರಾಗಿದ್ದಾರೆ. ಮೊನ್ನೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಭಾವುಕರಾಗಿದ್ದರು. ನಿವೃತ್ತರಾದ ಮೇಲೂ ಕನ್ನಡ ಪ್ರೀತಿ ಇದ್ದೇ ಇರುತ್ತದೆ ಎಂಬ ಮಾತು ಹಾಗಿರಲಿ, 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆಯಾದ ಈ ಹೊತ್ತಿನಲ್ಲಿ ಅಂಥಾ ಒಬ್ಬ ಆಪ್ಪಟ ಕನ್ನಡಾಭಿಮಾನಿಯ ನೆನಪು ನಿತ್ಯವೂ ನಿತ್ಯೋತ್ಸವ!


ಭಾರತವನ್ನೇ ಮನೆಗೆ ತರಲು ಹೋಗಿದ್ದ!


ಅವತ್ತು ಕಾರ್ಗಿಲ್ನ ಕುಪ್ಪಾರ ಗೊಂಡಾರಣ್ಯ ಪ್ರದೇಶದಲ್ಲಿ ಮೈ ಕೊರೆಯುವ ಚಳಿ. ಪೊದೆಯ ಮರೆಯಲ್ಲಿ ಕುಳಿತು ಭಾರತಾಂಬೆಯ ಸೇವೆಗಯ್ಯುತ್ತಿದ್ದ 23ರ ಹರೆಯದ ಕನಸು ಕಂಗಳ ಪೋರ ಯೋಗೇಂದ್ರ ಸಿಂಗ್, ತನ್ನ ಪ್ರಾಣ ಸ್ನೇಹಿತ ಜೋಗೀಂದರ್ ಜೊತೆ ಭವಿಷ್ಯದ ಬಗ್ಗೆ ಬಗೆ ಬಗೆಯಾಗಿ ಮಾತನಾಡಿದ್ದ. ‘ ನಾಳೆ ಮುಂಜಾನೆ ನನ್ನ ಮನೆಗೆ ಹೋಗುತ್ತಿದ್ದೇನೆ’ ಎಂಬುದನ್ನೇ ನೂರು ಸಲ ಹೇಳಿದ್ದ. ‘ನಿಮ್ಮ ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಿದ್ದರೆ ಹೇಳು ’ ಎಂದು ಜೋಗಿಂದರ್ನನ್ನು ಕೇಳಿದ್ದ....ಹೌದು, ಅವನು ಅಂದುಕೊಂಡಂತೆ ಯೋಗೇಂದ್ರ ಮುಂಜಾನೆ ಮನೆಗೆ ಹೊರಟ. ಆದರೆ ಅವನು ಹೊರಟದ್ದು ಹೆಣವಾಗಿ!ಕಾಫಿನ್ ಒಳಗೆ ಮಲಗಿದ್ದ ಗೆಳೆಯನನ್ನು ಹೊತ್ತೊಯ್ಯುತ್ತಿದ್ದ ಜೋಗಿಂದರ್ ಮನಸ್ಸೂ ಕೂಡ ಹೆಣಭಾರ. ಭಾರವಾದ ಮನಸ್ಸಿನಲ್ಲೇ ಕೈ ಎತ್ತಿ ಸೆಲ್ಯೂಟ್ ಮಾಡಿದ್ದ. ‘ಮನೆಗೆ ಏನಾದರೂ ತೆಗೆದುಕೊಂಡು ಹೋಗಬೇಕಿದ್ದರೆ ಹೇಳು’ ಎಂದಿದ್ದ ಗೆಳೆಯನಿಗೆ ‘ನಿನ್ನನ್ನೇ ನಾನು ತೆಗೆದುಕೊಂಡು ಹೋಗುತ್ತ್ತಿದ್ದೇನೆ’ ಎಂದು ಮನಸ್ಸಿನಲ್ಲೇ ಮಾತನಾಡಿಕೊಂಡ ಜೋಗಿಂದರ್ ಮನಸ್ಸು ಮತ್ತೂ ಭಾರವಾಯಿತು. ಹೆಣವಾಗಿ ಬಂದ ಮಗನ ಮುಖ ನೋಡಿದ ತಾಯಿ ಕೇಳಿದ್ದು ಒಂದೇ ಪ್ರಶ್ನೆ. ಭಾರತ ಎಲ್ಲಿ ಮಗನೇ? ಹೆತ್ತ ಕರುಳಿನ ಕೊರಗು ಕೇಳಿದ ಜನ ಗೊಳೋ ಅಂದರು.ಯೋಗೇಂದ್ರ ಸಿಂಗ್ ಉತ್ತರ ಪ್ರದೇಶ ರಾಜ್ಯದ ಆಲಿಗರ್ ಸಮೀಪದ ಜೊಹರಾಗರ್ ಹಳ್ಳಿಯ ಹುಡುಗ. ಸೈನಿಕನಾಗುವುದು ಅವನ ಕನಸಿನ ಕಟ್ಟೆಯಾಗಿತ್ತು. 20ನೇ ವಯಸ್ಸಿನಲ್ಲಿ ಆ ಕಟ್ಟೆಯೊಡೆದು ರಜಪೂತನ್ ರೈಫಲ್ ದಳ ಸೇರಿದ. ಆರಂಭದಲ್ಲೇ ಕಾರ್ಗಿಲ್ ಪ್ರಾಂತ್ಯಕ್ಕೆ ಸೇವೆಗೆ ತೆರಳಿದ. ಅಮ್ಮನಿಗೆ ಬರೆದ ಮೊದಲ ಪತ್ರದಲ್ಲಿ ‘ನಾನು ಕ್ಷತ್ರಿಯ, ಯುದ್ಧವೇ ನನ್ನ ಧರ್ಮ’ ಎಂದು ಅರ್ಜುನನ ಡೈಲಾಗ್ ಹೊಡೆದಿದ್ದ!ಕಳೆದು ಹೋದ ಆ ಎಳೇ ಜೀವಕ್ಕೆ ಬೆಲೆ ಎಂಬುದಿರಲಿಲ್ಲ. ಒಬ್ಬ ಹೆಮ್ಮಯ ಯೋಧನನ್ನು ಭಾರತ ಕಳದುಕೊಂಡರೆ, ಇದ್ದ ಒಂದೇ ಒಂದು ನಂದಾದೀಪವನ್ನು ಆ ಕುಟುಂಬ ಕಳೆದುಕೊಂಡಿತ್ತು. ದೇಶಕ್ಕೆ ಯೋಗೇಂದ್ರ ಸಿಂಗ್ ಕಾರ್ಗಿಲ್ ಹೀರೋ. ಅವನು ಹುಟ್ಟಿದ ಹಳ್ಳಿಯಲ್ಲಿ ಅವನು ದೇವರು. ರಸ್ತೆ ರಸ್ತೆಯಲ್ಲಿ ಅವನನ್ನು ಜನ ಇಂದಿಗೂ ಪೂಜಿಸುತ್ತಿದ್ದಾರೆ. ‘ನಾನು ಕ್ಷತ್ರಿಯ, ಯುದ್ಧವೇ ನನ್ನ ಧರ್ಮ’ ಎಂಬ ಮಾತು ಅವನ ಪುತ್ಥಳಿ ಮುಂದೆ ರಾರಾಜಿಸುತ್ತಿದೆ. ಅವನು ಇಲ್ಲದಿದ್ದರೂ ಅವನ ಚೇತನ ಇನ್ನೂ ಜೀವಂತವಾಗಿದೆ!


ವೈದ್ಯನಿಗೆ ವಿಜಯ, ರೋಗಿಗೆ ಜೀವ!


ಇಂದೋರ್ನ ನರರೋಗ ವೈದ್ಯ ಡಾ. ರಾಜೇಂದ್ರ ಪಂಜಾಬಿ ಭಾರತದ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾರೆ. ವೈದ್ಯಕೀಯ ಲೋಕದಲ್ಲಿ ಹೊಸ ಇತಿಹಾಸ ಬರೆದು ವಿಶ್ವದ ಮೊದಲಿಗರಾಗಿದ್ದಾರೆ. ರೋಗಿಯೊಬ್ಬರ ಜೀವಕ್ಕೆ ಕುತ್ತು ತಂದಿದ್ದ ಅತೀದೊಡ್ಡ ಗ್ರಂಥಿಯೊಂದನ್ನು ಹೊರತೆಗೆದು ರೋಗಿಗೆ ಮರುಜೀವ ಕೊಟ್ಟಿದ್ದಾರೆ.ಜನನಾಂಗ ಹಾಗೂ ವೃಷಣಗಳು ದೇಹದ ಅತೀ ಸೂಕ್ಷ ಅಂಗಗಳು. ಇವು ಗುಪ್ತಾಂಗಗಳಾದ ಕಾರಣ ಇವುಗಳ ಬಗ್ಗೆ ರೋಗಿ ಮನಬಿಚ್ಚಿ ಮಾತನಾಡಲಾರ. 55 ವರ್ಷ ವಯಸ್ಸಿನ ಉಸ್ಮಾನ್ಗೆ ಇಂತಹ ರೋಗವೊಂದು ಕಾಣಿಸಿಕೊಂಡಿತು. ಆತನ ವೃಷಣಗಳ ಚೀಲ ಇದ್ದಕ್ಕಿದ್ದಂತೆ ದೊಡ್ಡದಾಯಿತು. ಜನನಾಂಗದ ಗಾತ್ರವೂ ಕೂಡ ಮಿತಿ ಮೀರಿ ಬೆಳೆಯಿತು. ಮೂತ್ರ ವಿಸರ್ಜನೆ ಸಾಧ್ಯವಾಗಲಿಲ್ಲ. ಲೈಂಗಿಕ ಕ್ರಿಯೆ ನಡೆಸಲೂ ಆಗಲಿಲ್ಲ. ಈ ತೊಂದರೆಯನ್ನು ಆಸ್ಪತ್ರೆಗೆ ತೋರಿಸಿದಾಗ ಅದು ವಿಶ್ವ ವೈದ್ಯಕೀಯ ಜಗತ್ತಿಗೆ ಸವಾಲಾಗಿತ್ತು. ಗುಪ್ತಾಂಗದ ನಡುವಿನ ಗ್ರಂಥಿ ಸಾಮಾನ್ಯವಾದುದು. ಅದು ಹೆಚ್ಚೆಂದರೆ 20ರಿಂದ 50 ಗ್ರಾಂನಷ್ಟು ದೊಡ್ಡದಾಗಬಹುದು. ಆದರೆ ಉಸ್ಮಾನ್ಗೆ ಬೆಳದಿದ್ದ ಗ್ರಂಥಿಯ ತೂಕ ಬರೋಬ್ಬರಿ 650 ಗ್ರಾಂ!ಡಾ. ರಾಜೇಂದ್ರ ಅವರು ವಿಶ್ವಶ್ರೇಷ್ಠ ಎನಿಸಿಕೊಂಡ ವೈದ್ಯರೆಲ್ಲರನ್ನು ಸಂಪರ್ಕಿಸಿ ಸಲಹೆ ಪಡೆದರು. ಇಷ್ಟು ದೊಡ್ಡ ಗ್ರಂಥಿಯ ಆಪರೇಷನ್ ಸಾಧ್ಯವೇ ಇಲ್ಲ ಅಂದರು. ಆದರೆ ರಾಜೇಂದ್ರ ಧೈರ್ಯಮಾಡಿ ಆಪರೇಷನ್ ಆರಂಭಿಸಿಯೇ ಬಿಟ್ಟರು. ಈ ಅತೀಸೂಕ್ಷ್ಮ ಶಸ್ತ್ರ ಚಿಕಿತ್ಸೆಯನ್ನು ಜಗತ್ತು ಗಮನಿಸುತ್ತಿತ್ತು. ಸತತ ಐದು ಗಂಟೆಗಳ ಕಾಲ ನಡೆದ ಆಪರೇಷನ್ ಸಕ್ಸಸ್! ಡಾ. ರಾಜೇಂದ್ರ ಗೆಲುವಿನ ನಿಟ್ಟುಸಿರು ಬಿಟ್ಟರು. ರೋಗಿ ಉಸ್ಮಾನ್ ಮರುಜೀವದ ನಗೆ ಬೀರಿದರು.ಡಾ. ರಾಜೇಂದ್ರ ಪಂಜಾಬಿ ಈ ಆಪರೇಷನ್ ಮೂಲಕ ಅತೀದೊಡ್ಡ ವೃಷಣ ಗ್ರಂಥಿ ತೆಗೆದ ವಿಶ್ವದ ಮೊದಲ ವೈದ್ಯ ಎಂಬ ಮನ್ನಣೆ ಗಳಿಸಿದರು.


Tuesday, February 8, 2011


ಪುಟ್ಟಬಾಲೆಯ ದೊಡ್ಡ ಗಂಟಲು


ಆ ಪುಟ್ಟ ಬಾಲೆ ಮಾಲ್ಡೋವಾ ದೇಶದ ಸಣ್ಣ ಹಳ್ಳಿಯಿಂದ ಬಂದವಳು. ವಯಸ್ಸು ಕೇವಲ ಎಂಟು ವರ್ಷ. ಆದರೆ ಅವಳು ಬಾಯಿಬಿಟ್ಟರೆ ಸಾಕು ಇಡೀ ಜಗತ್ತು ಮಂಕಾಗುತ್ತದೆ. ಮೈಕಿನ ಮುಂದೆ ಹಾಡಲು ಆರಂಭಿಸಿದರೆ ಸತತ ಮೂರುಗಂಟೆಗಳ ಕಾಲ ಲಕ್ಷಾಂತರ ಮಂದಿಯನ್ನು ಸಂಗೀತದ ಅಲೆಯಲ್ಲಿ ತೇಲಿಸುತ್ತಾಳೆ. ಗಂಟಲಿನಲ್ಲಿ ಮಷೀನು ಇಟ್ಟುಕೊಂಡಿದ್ದಾಳೇನೋ ಎಂಬಂತೆ ಅವಳ ಪುಟ್ಟ ಬಾಲಕಿಯ ಬಾಯಿಂದ ಇಂಪಾದ ಧ್ವನಿ ಹೊರಹೊಮ್ಮುತ್ತದೆ.
ಅವಳ ಹೆಸರು ಕ್ಲಿಯೋಪಾತ್ರ ಸ್ಟ್ರಾಟನ್. ಎಲ್ಲರೂ ಅವಳನ್ನು ಪ್ರೀತಿಯಿಂದ ಕ್ಲಿಯೋ ಎಂತಲೇ ಕರೆಯುತ್ತಾರೆ. ಪಾಶ್ಚಾತ್ಯ ಸಂಗೀತ ಇಷ್ಟಪಡುವ ಪ್ರತಿಯೊಬ್ಬರ ಬಳಿಯೂ ಕ್ಲಿಯೋ ಹಾಡಿದ ಅಮೂಲ್ಯ ಆಲ್ಬಮ್ಅನ್ನು ಇರುತ್ತದೆ. ಕೇವಲ ಆರನೇ ವಯಸ್ಸಿಗೆ ನಾಲ್ಕು ಆಲ್ಬಮ್ ಬಿಡುಗಡೆ ಮಾಡಿದ ಕೀರ್ತಿ ಅವಳ ಮೇಲಿದೆ. ಈಗ ಅವಳ ಆಲ್ಬಮ್ಗಳು ಸಂಖ್ಯೆ 20ಕ್ಕೆ ಏರಿವೆ. ಜಗತ್ತಿನ ಎಲ್ಲಾ ಹಾಡುಗಾರರನ್ನು ಅವಳು ಅನುಕರಣೆ ಮಾಡಬಲ್ಲಳು. ಚಿಕ್ಕವಳಾದರೂ ದೊಡ್ಡವರಂತೆ ಹಾಡಬಲ್ಲಳು. ಅವಳ ತಂದೆ ಒಂದು ಸೌಂಡ್ ರೆಕಾರ್ಡಿಂಗ್ ಸ್ಟುಡಿಯೋವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಮೈಕ್ರೋಪೋನ್ ಕಿವಿಗಿಟ್ಟುಕೊಂಡು ಆಟಕ್ಕಾಗಿ ಹಾಡುತ್ತಿದ್ದಳು. ಅವಳ ಪ್ರತಿಭೆಯನ್ನು ಗುರುತಿಸಿ ನೀರೆರೆದಾಗ ಅದು ಈಗ ಬಹುದೊಡ್ಡ ಮರವಾಗಿ ಬೆಳೆದು ನಿಂತಿದೆ.



ಸಖತ್ ಹಾಟ್ ಮಗಾ

ಮೂಗು ಮಚ್ಚಿಕೊಂಡು ಗುಂಡು ಹಾಕುವವರನ್ನು ನೋಡಿದ್ದೀರಿ. ಆದರೆ ಕಣ್ಣು , ಕಿವಿ, ಮೂಗು ಮುಚ್ಚಿಕೊಂಡು ಮೆಣಸಿನ ಕಾಯಿ ತಿನ್ನುವವರನ್ನು ನೀವು ಕಂಡಿದ್ದೀರಾ? ಗುಂಡು ಹಾಕಿದರೆ ಕಿಕ್ ಹೊಡೆಯುತ್ತೆ ಬಿಡಿ, ಆದರೆ ಮೆಣಸಿನ ಕಾಯಿ ತಿಂದರೆ ಕಣ್ಣು, ಕಿವಿ, ಮೂಗು ಎಲ್ಲಾ ಒಂದಾಗಿ ಕೆನ್ನೆ ಕೆಂಪೇರುತ್ತದೆ!
ಅಷ್ಟಕ್ಕೂ ಅದು ನಿಮ್ಮ ಮನೆಯ ಹಿತ್ತಲಲ್ಲಿ ಸಿಗುವ ನಾಟಿ ಮೆಣಸಿನ ಕಾಯಿಯಲ್ಲ. ಅದು ವಿಶ್ವದ ಅತೀ ಹೆಚ್ಚು ಹಾಟ್ ಮೆಣಸಿನ ಕಾಯಿ. ಆ ಮೆಣಸಿನಕಾಯಿ ಹೆಸರು ‘ಭೂತ್ ಚಿಲ್ಲಿ’. ಬ್ಯಾಡಗಿ ಮೆಣಸಿನ ಕಾಯಿ ಬಗ್ಗೆ ಗೊತ್ತು, ಜವಾರಿ ಮೆಣಸಿನ ಕಾಯಿ ಗೊತ್ತು. ಇದ್ಯಾವ ಸೀಮೆ ಭೂತ್ ಚಿಲ್ಲಿ ? ಇದರ ಪೂರಾ ಹೆಸರು ‘ಭೂತ್ ಜುಲಾಕಿಯಾ’. ಇದು ದಕ್ಷಿಣ ಆಫ್ರಿಕಾದಲ್ಲಿ ಸಿಗುವ ವೈದ್ಯಕೀಯ ಗುಣವಿರುವ ಮೆಣಸಿನಕಾಯಿ. ಈ ಮೆಣಸಿನಕಾಯಿ ಬಗ್ಗೆ ತಿಳಿದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಅದನ್ನು ತಿಂದು ತೋರಿಸಿ ಅಂದರೆ? ಹೌದು, ಈ ಭೂತ್ ಚಿಲ್ಲಿಯನ್ನು ತಿನ್ನುವ ಒಬ್ಬ ಮಹಿಳೆ ಅಸ್ಸಾಮಿನಲ್ಲಿದ್ದಾಳೆ. ಅವಳು ತಿಂದದ್ದು ಒಂದಲ್ಲ, ಎರಡಲ್ಲ. ಬರೋಬ್ಬರಿ 51 . ಕೇವಲ ಎರಡು ನಿಮಿಷದಲ್ಲಿ 51 ಮೆಣಸಿನ ಕಾಯಿ ತಿಂದು ವಿಶ್ವ ದಾಖಲೆ ನಿರ್ಮಿಸಿದ್ದಾಳೆ.
ಅವಳ ಹೆಸರು ಅನಾದಿತಾ ದತ್ತಾ. 30 ವರ್ಷ ವಯಸ್ಸು. 2002ರಲ್ಲಿ ಸೌತ್ ಆಫ್ರಿಕಾದ ಒಬ್ಬ ಹುಡುಗ ಎಂಟು ಮೆಣಸಿನ ಕಾಯಿ ತಿಂದು ದಾಖಲೆ ನಿರ್ಮಿಸಿದ್ದ. ಈ ದಾಖಲೆಯನ್ನು ಅನಾದಿತ ಎರಡು ನಿಮಿಷದಲ್ಲಿ 51 ಮೆಣಸಿನ ಕಾಯಿಗಳನ್ನು ತಿಂದು ಮುರಿದಿದ್ದಾರೆ. ಈ ಸ್ಪರ್ಧೆ ನಡೆದದ್ದು ಇಂಗ್ಲೆಂಡಿನಲ್ಲಿ. ಅನಾದಿತಾ ಮೆಣಸಿನ ಕಾಯಿಗಳನ್ನು ತಿನ್ನುವುದನ್ನು ‘ಚಾನೆಲ್4’ನಲ್ಲಿ ನೇರ ಪ್ರಸಾರ ನೋಡಿದ ಇಂಗ್ಲಿಷ್ ಜನ ದಂಗುಬಡಿದು ಹೋದರು.
ಅನಾದಿತಾಳ ನಾಲಗೆ ಗಡಸು ನಾಲಗೆ. ಅವಳು ಚಿಕ್ಕವಳಿದ್ದಾಗ ಆರು ವರ್ಷ ವಯಸ್ಸಿನ ತನಕ ಮಾತನಾಡಲೇ ಇಲ್ಲ. ಇದರಿಂದ ಬೆದರಿಂದ ಆಕೆಯ ಅಮ್ಮ ಅನಾದಿತಾಳ ನಾಲಗೆಗೆ ಮೆಣಸಿನ ಪುಡಿಯನ್ನು ಹಾಕಿ ತಿಕ್ಕುತ್ತಿದ್ದಂತೆ. ಹಾಗಾಗಿ ಅವಳ ನಾಲಗೆಗೆ ಖಾರ ಕಾಯಂ ಆಗಿ ಹೋಯಿತು. ಅವಳ ವೈಫಲ್ಯವೇ ದಾಖಲೆಯಾಗಿ ಮೂಡಿಬಂತು. ‘ನಮ್ಮಲ್ಲಿ ರುವ ಪೈಫಲ್ಯತೆನ್ನೇ ನಾವು ಆಯುಧ ಮಾಡಿಕೊಂಡು ಮುನ್ನಡೆಯಬೇಕು’ ಎಂದು ದೊಡ್ಡವರು ಹೇಳುವುದು ಇದನ್ನೇ ಅಲ್ಲವೆ?

ಡಾನ್ಸ್ ಇಂಡಿಯಾ ಡಾನ್ಸ್



ಡಾನ್ಸ್ ಇಂಡಿಯಾ ಡಾನ್ಸ್


ಅವನು ವೇದಿಕೆಯ ಮೇಲೆ ಹೆಜ್ಜೆ ಇಟ್ಟರೆ ನೋಡುಗನ ಹೃದಯ ಹಿಡಿಯಾಗುತ್ತದೆ. ಅವನು ಅಲ್ಲಿ ಅಲುಗಿದರೆ ಸಾಕು, ಇಲ್ಲಿ ಉಸಿರು ಕಟ್ಟಿಕೊಂಡು ಕಣ್ಣುಗಳು ಕೆಂಪೇರುಸತ್ತವೆ. ಅವನು ತನ್ನ ಪುಟ್ಟ ದೇಹವನ್ನು ರಂಗದ ಮೇಲೆ ತೆರದುಕೊಂಡಾಗ ಸಭಾಂಗಣವಿಡೀ ಶಾಂತಿ ಮಂತ್ರ. ಮೇಲಿಂದ ಸಣ್ಣಗೆ ಸುಳಿಯುವ ಬಣ್ಣದ ಬೆಳಕಿಗೆ ಅವನು ಜೋಡಿಯಾದಾಗ ಅಲ್ಲಿ ಓಕುಳಿಯಾಟ. ಅವನು ಸುತ್ತಲೂ ಸುತ್ತಿಕೊಳ್ಳುತ್ತಿರುವ ಹಾಡಿನ ಅಬ್ಬರವನ್ನು ಮೀಟಿ ಮೇಲೇಳುತ್ತಾನೆ.ನಿ ಧಾನವಾಗಿ ಆರಂಭವಾಗುವ ಅವನ ಆಟ ಹೋಗುತ್ತಾ ಹೋಗುತ್ತಾ ದೊಡ್ಡಾಟವಾಗುತ್ತದೆ........!
ಒಮ್ಮೆ ಸಮರ ಕಲೆ. ಇನ್ನೊಮ್ಮೆ ಥಾ ದಿಮಿ ಥಾ. ಒಮ್ಮೆಮ್ಮೆ ಕುಚುಪುಡಿ ಕಿಚಡಿ, ಅಲ್ಲಲ್ಲಿ ಬ್ಯಾಲೆಯ ಬೊಂಬಾಟ್. ಒಂದಷ್ಟು ಬ್ರೇಕ್ ಬ್ಯಾಕಪ್, ಅಷ್ಟಿಷ್ಟು ರಾಕ್.......ಈ ಕುಣಿತಗಳ ನಡುವೆ ಕಳೆದು ಹೋಗುತ್ತಾನೆ. ಕಣಿಯುತ್ತಾ ಕುಣಿಯುತ್ತಾ ಕಣ್ಣಲ್ಲಿ ಅದ್ಭುತ ಶಕ್ತಿ ತೋರುತ್ತಾರೆ. ಅವನಿಗೆ ಸುಸ್ತಾಗುವುದಿಲ್ಲ, ನೋಡುವವರನ್ನು ಸುಸ್ತು ಹೊಡೆಸುತ್ತಾನೆ. ಅವನೊಬ್ಬ ಮಾತ್ರ ಕುಣಿಯುವುದಿಲ್ಲ, ನೋಡುವವರನ್ನೂ ಕುಣಿಸುತ್ತಾನೆ. ಕಡೆಗೆ ‘ಡಾನ್ಸ್ ಇಂಡಿಯಾ ಡಾನ್ಸ್’ ಅನ್ನುತ್ತಾನೆ!
ಅವನ ಹೆಸರು ಕಮಲೇಶ್ ಪಟೇಲ್. ಅವನಿಗೆ ಎರಡು ಕಾಲಿಲ್ಲ. ಅವನ ಕುಣಿತಕ್ಕೆ ಕಾಲು ಬೇಕಾಗೇ ಇಲ್ಲ. ಅವನು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವುದಿಲ್ಲ, ಮನಸ್ಸಿನ ಲಜ್ಜೆ ಬಿಟ್ಟು ಕುಣಿಯುತ್ತಾನೆ.
ಕಮಲೇಶ್ ಬರೋಡಾದ ಹೆಮ್ಮೆ. ಅವನು ಹುಟ್ಟು ಅಂಗವಿಕಲನಲ್ಲ. ಯಾವನೋ ವೈದ್ಯ ಮಾಡಿದ ತಪ್ಪಿಗೆ ಅವನ ಎರಡೂ ಕಾಲು ಕಳೆದುಕೊಂಡ. ಅಲ್ಲಿಗೆ ಕಮಲೇಶ್ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಮನಸ್ಸನ್ನೇ ಕಾಲು ಮಾಡಿಕೊಂಡ. ಐದನೇ ವಯಸ್ಸಿನಿಂದ ಕುಣಿಯಲು ಆರಂಭಿಸಿದ ಕಮಲೇಶನ ಹೃದಯ ಕುಣಿಯುತ್ತಲೇ ಇದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಅವನು ಹಲವು ದಾಖಲೆ ನಿರ್ಮಾಣ ಮಾಡಿದ್ದಾನೆ.
ಅವನ ಸೂಪರ್ ಡಾನ್ಸ್ ಸಾಗರದಾಚೆಗೂ ಸಾಗಿದೆ. ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋ ‘ಡಾನ್ಸ್ ಇಂಡಿಯಾ ಡಾನ್ಸ್’ ನಲ್ಲಿ ಇಡೀ ದೇಶವನ್ನು ಬೆರಗು ಮಾಡಿಡಿ ‘ಸ್ಟಾರ್’ ಪಟ್ಟ ಕಟ್ಟಿಕೊಂಡಿದ್ದಾನೆ. ಕಮಲೇಶ್ ಚಿಕ್ಕವನಿರುವಾಗ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್ ಅವನ ಬದುಕನ್ನೇ ಬದಲಾಯಿಸಿತು. ಚುಚ್ಚುಮದ್ದು ಕೊಟ್ಟ ದಿನದಿಂದ ಬಿದ್ದು ಹೋದ ಅವನ ಕಾಲುಗಳು ಮತ್ತೆಂದೂ ಮೇಲೇಳಲೇ ಇಲ್ಲ. ಅವನು ತಂದೆ ತಾಯಿ ಮಗನ ಕಾಲಿಗಾಗಿ ಇಡೀ ದೇಶದ ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ ಕಾಲು ಬರಲಿಲ್ಲ. ಕಾಮರ್ಸ್ನಲ್ಲಿ ಡಿಗ್ರಿ ಕಂಪ್ಲೀಟ್ ಮಾಡಿರುವ ಕಮಲೇಶ್, ಕಾಲಿನ ಮೇಲಿನ ಆಸೆ ಬಿಟ್ಟು ಬಹುದೊಡ್ಡ ಡಾನ್ಸರ್ ಆಗುವ ಕನಸಿನ ಜೊತೆ ಕಾಲ ಕಳೆಯುತ್ತಿದ್ದಾನೆ.

ಅಂಧರ ಬಾಳಿನ ಬೆಳಕು



ಮುಂಬೈ ಮಹಾನಗರದ ಬಾಂದ್ರಾ ರೈಲು ನಿಲ್ದಾಣ ಪ್ರತಿ ಬೋಗಿಗಳಿಗೂ ರಾಜೀಂದರ್ ಸಿಂಗ್ ಗೊತ್ತು. ಮುಂಜಾನೆ ಒಂಬತ್ತು ಗಂಟೆಯಲ್ಲಿ ಅಲ್ಲೊಂದು ಮಿಂಚಿನ ಸಂಚಾರ. ಕಣ್ಣಿಗೆ ಕಪ್ಪನೆಯ ಕನ್ನಡಕ. ಕೈಯ್ಯಲ್ಲೊಂದು ವಾಕಿಂಗ್ ಸ್ಟಿಕ್. ಸದಾ ನಗುಮುಖದ ರಾಜೀಂದರ್ಗೆ ಒಂದೇ ಒಂದು ಸ್ಪರ್ಷ ಸಾಕು, ಅವರು ಯಾರೆಂದು ಹೇಳಲಿಕ್ಕೆ.
ಅವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ಎರಡು ಕಿವಿಗಳು ಕೇಳಿಸುವುದಿಲ್ಲ. ಅವರನ್ನು ಕಂಡವರು ಅವರನ್ನು ಸ್ಪರ್ಷಿಸಿದರೆ ಸಾಕು.....ಅರೇ ಭೈ ಕೈಸೇ ಹೋ......ಎಂದು ನಗುತ್ತಾ ಮಾತನಾಡಿಸುತ್ತಾರೆ. ನಮ್ಮಾಳಗಿರುವ ಕೋಟಿ ಕೋಟಿ ಅಂಧರ ನಡುವೆ ಅವರೂ ಒಬ್ಬ. ಆದರೆ ಅವರು ಕೋಟಿಗೊಬ್ಬ. ಜಗತ್ತಿನಾದ್ಯಂತ ಇರುವ ಅಂಧರ ಬಾಳಿನ ಬೆಳಕು ಅವರು. ಅಂಧರಿಗೆ ಬೆಳಕಾಗಿರುವ ಬ್ರೈಲ್ ಲಿಪಿಗೆ ಹೊಸ ಭಾಷ್ಯ ಬರೆದವರೇ ರಾಜೀಂದರ್ ಸಿಂಗ್.
58 ವರ್ಷ ವಯಸ್ಸು. ಮುಂಬೈನ ‘ಅಸೋಸಿಯೇಷನ್ ಆಪ್ ಬ್ಲೈಂಡ್’ (ಎನ್ಎಬಿ) ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಇವರು ಈಗ ಅದೇ ಸಂಸ್ಥೆಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಬ್ರೈಲ್ ಲಿಪಿಯ ಬಗ್ಗೆ ಅವರ ಸಂಶೋಧನೆ ಪ್ರತಿನಿತ್ಯ ಸಾಗುತ್ತಿದೆ. ಬ್ರೈಲ್ ಲಿಪಿ ವಿದೇಶಿ ಸಂಶೋಧನೆಯಾದರೂ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವರು ರಾಜೀಂದರ್ ಸಿಂಗ್. ಬ್ರೈಲ್ ಲಿಪಿಯ ಬಗ್ಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಅಲ್ಲಿ ರಾಜೀಂದರ್ ಸಿಂಗ್ ಇರುತ್ತಾರೆ. ಬ್ರೈಲ್ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಟುವರ್ಡ್ಸ್ ಲೈಟ್‘ ಬ್ರೈಲ್ ಮ್ಯಾಗಜಿನ್ಗೆ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ‘ಮಟಿಲ್ಡಾ’ ಎನ್ನುವ ಅಂತಾರಾಷ್ಟ್ರೀಯ ಮ್ಯಾಗಜಿನ್ಗೂ ರಾಜಿಂದರ್ ಸಂಪಾದಕರು. ರಾಜೀಂದರ್ ಸಾಧನೆಗೆ ಹಲವು ಗೌರವ ಮನ್ನಣೆಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎರಡು ಡಾಕ್ಟರೇಟ್ಗಳು. ಅವರ ಮುಡಿಯಲ್ಲಿವೆ. ‘ಅಂದರ ಡಾಕ್ಟರ್’ ಸೇರಿದಂತೆ ನೂರಾರು ಬಿರುದುಗಳು ಅವರ ಹೆಸರಿನಲ್ಲಿವೆ. ರಾಜೀಂದರ್ ಅವರ ಪ್ರಮುಖ ಸಾಧನೆಯೆಂದರೆ ಪ್ರತೀವರ್ಷ ಮುಂಬೈನಲ್ಲಿ ಏರ್ಪಡಿಸುವ ‘ಹಾರ್ಮೊನಿ’ ಅಂಧರ ಮ್ಯಾರಥಾನ್. ಈ ಭಾವೈಕ್ಯ ಓಟದಲ್ಲಿ ಹಲವು ದೇಶಗಳ ಅಂಧ ಮ್ಯಾರಥಾನ್ ಪಟುಗಳು ಪಾಲ್ಗೊಳ್ಳುತ್ತಾರೆ.
ರಾಜಿಂದರ್ ಹುಟ್ಟಿದ್ದು ಪಾಕಿಸ್ಥಾನದ ಪೆಷಾವರ್. ಭಾರತ- ಪಾಕಿಸ್ಥಾನ ನಡುವೆ ಇಬ್ಬಾಗವಾದಾಗ ರಾಜೀಂದರ್ ಕುಟುಂಬ ಭಾರತ ಸೇರಿಕೊಂಡಿತು. ಪಾಕಿಸ್ಥಾನ ಬಿಟ್ಟ ಮೇಲೆ ಅವರು ಪಾಕ್ನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಅಲ್ಲಿಯೂ ರಾಜಿಂದರ್ ಅವರ ಅಂಧರ ಶಾಲೆಯಿದೆ.


ಡಬಲ್ ಧಮಾಕಾ


ಕಾನ್ಪುರದ ಬೀಚ್ಗೆ ತೆರಳುವುವಾಗ ದಶರಥ್ ಮೀನಿನ ಅಂಗಡಿಯನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಅಲ್ಲೊಂದು ಕೂತೂಹಲ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ದಪ್ಪ ಮೀಸೆಯ ದಶರಥ್ ಈ ಮೀನು ಅಂಗಡಿಯ ಮಾಲೀಕ. ಅವನು ಅಂಗಡಿಯ ಮುಂದೆ ಒಂದು ಶೋ ಮಾಡುತ್ತಾನೆ. ಅದು ‘ಮೀನು ಮತ್ತು ಗಾಜು’ ಪ್ರದರ್ಶನ. ಮೀನು ಕತ್ತರಿಸುತ್ತಾನೆ, ಗಾಜು ಗಾಜು ತಿನ್ನುತ್ತಾನೆ!
ಹೌದು, ಅವನಿಗೆ ತಿಂಡಿ ಊಟಕ್ಕೆಲ್ಲಾ ಗಾಜು ಬೇಕೇ ಬೇಕು. ಬೀಚ್ಗೆ ಬಂದ ಪ್ರವಾಸಿಗರು ಬಾಟಲಿ ಕೊಟ್ಟು ತಮಾಷೆ ನೋಡುತ್ತಾರೆ. ಇವನ ಗಾಜು ತಿನ್ನುವ ಸಾಧನೆ ಕಂಡು ಕೆಲವರು ಹಣವನ್ನೂ ಕೊಡುತ್ತಾರೆ.
ತಮಾಷೆಯೆಂದರೆ, ಅವನಿಗೆ ಮೊದಲು ಗಾಜು ತಿನ್ನುವ ಅಭ್ಯಾಸ ಇರಲಿಲ್ಲ. ಅವನು ಇಪ್ಪತ್ತು ವರ್ಷದ ಹುಡುಗನಾಗಿದ್ದಾಗ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ. ಸಾಯಬೇಕು ಎಂದು ಎರಡು ಬಾಟಲಿಯ ಗಾಜನ್ನು ಪುಡಿ ಮಾಡಿಕೊಂಡು ತಿಂದ. ಆದರೆ ಅವನು ಸಾಯಲಿಲ್ಲ, ಅದೇನು ರುಚಿ ಹತ್ತಿತೋ ಏನೋ ಅಂದಿನಿಂದ ಅವನ ಊಟ ಗಾಜು ಆಗಿಹೋಯಿತು. ಅವನು ಅಲ್ಲಿ ‘ಗ್ಲಾಸ್ಮ್ಯಾನ್’ ಎಂದೇ ಪ್ರಸಿದ್ಧಿ. ಕಾನ್ಪುರ್ ಬೀಚ್ಗೆ ಹೋದರೆ ಗ್ಲಾಸ್ಮ್ಯಾನ್ ಖಂಡಿತಾ ಸಿಗುತ್ತಾನೆ. ಇದೊಂಥರಾ ಡಬಲ್ ಧಮಾಕಾ.

ಶ್ರೀಕಂಠನ್ ಶಿಖರ










ಶ್ರೀಕಂಠನ್ ಶಿಖರ

ಜೀವನೋತ್ಸಾಹಕ್ಕೆ ಇನ್ನೊಂದು ಹೆಸರು ಗಾಯಕ ಆರ್.ಕೆ. ಶ್ರೀಕಂಠನ್. ಹಾಡುತ್ತಾ ಕೋಟಿ ಹೃದಯಗಳ ಮನಸ್ಸಲ್ಲಿ ಮನೆಮಾಡಿರುವ ಅವರು ಗಾನ ಗಾರುಡಿಗ. ಬರೋಬ್ಬರಿ ತೊಂಬತ್ತು ತುಂಬಿ ಶತಮಾನದ ಸಾಮಿಪ್ಯದಲ್ಲಿರುವ ಅವರ ವಯೋಮಾನ ಬಾಳ ಸಂಜೆಯಲ್ಲ. ಮುಂಜಾವಿನ ಮಂಜಿನಷ್ಟೇ ಮೃದು. ಆ ದಿವ್ಯ ಶರೀರದ ಭವ್ಯ ಶಾರೀರ ಇಬ್ಬನಿಯಷ್ಟು ಶುದ್ಧ. ಸ್ಫಟಿಕದಷ್ಟು ನಿಖರ. 14ನೇ ವಯಸ್ಸಿನಲ್ಲಿ ಆರಂಭವಾದ ಶ್ರೀಕಂಠನ್ ಸಂಗೀತ ಯಾತ್ರೆ 91ನೆ ವಯಸ್ಸಿನಲ್ಲೂ ಪ್ರಖರ!ಆಕಾಶವಾಣಿಯ ‘ಗಾನವಿಹಾರ’ ಯಾರಿಗೆ ತಾನೆ ಗೊತ್ತಿಲ್ಲ? ಗಾನವಿಹಾರದ ಮೂಲಕ ಸಂಗೀತ ಕಲಿತವರಿಗೆ ಲೆಕ್ಕವಿಲ್ಲ. 32 ವರ್ಷಗಳ ರೇಡಿಯೋ ಸಂಗೀತ ಪಾಠ ಶ್ರೀಕಂಠನ್ ಆವರ ಅಪಾರ ವಿದ್ವತ್ತಿನ ಪ್ರತೀಕ. ತೊಂಬತ್ತು ತುಂಬಿದ್ದರೂ ಅವರ ಹಾಡು ಎಲ್ಲೂ ಅಲುಗಾಡುವುದಿಲ್ಲ. ಹಾಡಲು ಕೂತರೆ ಮೂರುಗಂಟೆ ಮೇಲೇಳುವುದಿಲ್ಲ. ಭಾವ ಮತ್ತು ಭಕ್ತಿ ಅವರ ಹಾಡಿನ ಶಕ್ತಿ. ಶೃತಿ ರಾಗ ಲಯ ತಾಳಗಳ ಸಾಗರ ಅವರ ಸಂಗೀತ. ಮನೋಧರ್ಮದ ವರ್ಣಮಯ ಚಿತ್ತಾರಕ್ಕೆ ಎಣೆಇಲ್ಲ. ಲೆಕ್ಕಚಾರಗಳನ್ನು ಧಾಟಿ ತಮ್ಮದೇ ಮನೋಧರ್ಮದಲ್ಲಿ ಬಣ್ಣ ತುಂಬುವ ವರ್ಣಶಿಲ್ಪಿ!ತಮ್ಮ ತೊಂಬತ್ತು ವರ್ಷ ವಯಸ್ಸಿನಲ್ಲಿ ಎಂಭತ್ತು ವರ್ಷಗಳನ್ನು ಸಂಗೀತಕ್ಕೇ ಕೊಟ್ಟಿರುವ ಆರ್.ಕೆ. ಶ್ರೀಕಂಠನ್ ನಮ್ಮ ನಾಡಿನ ಹೆಮ್ಮೆ. ಪುರಂದರ ದಾಸರ ಕೃತಿಗಳಿಗೆ ಸ್ವರೂಪ ಕೊಟ್ಟಿರುವ ಅವರ ಕಾರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನನ್ಯ. ಹಾಸನ ಜಿಲ್ಲೆಯ ರುದ್ರಪಟ್ಟಣವೆಂಬ ಪುಟ್ಟ ಹಳ್ಳಿಯಿಂದ ಬಂದವರು ಶ್ರೀಕಂಠನ್. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸದಸ್ಯರಾಗಿ, ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಕೆಸೆಟ್ ಕ್ರಾಂತಿ ಮೂಲಕ ಮನೆ ಮನ ತಲುಪಿದ ಅವರ ಹಾಡು ಎಂದಿಗೂ ಹೊಚ್ಚ ಹೊಸತಾಗಿದೆ.ಅವರ ಮಾತು ಕೂಡ ಅಷ್ಟೆ, ನಿಚ್ಚಳ ನಿಷ್ಕಪಟ. ಸಂಗೀತದಷ್ಟೇ ಇಂಪು. ಮತ್ತೆ ಮತ್ತೆ ಮಾತನಾಡಬೇಕು ಎನ್ನುವಷ್ಟು ಮೊನಚು. ಯಾರಾದರೂ ‘ನೀವು ಬಹಳ ಸಾಧಿಸಿದ್ದೀರಿ’ ಅಂದರೆ ‘ನಾನೊಬ್ಬ ಪುಟ್ಟ ಮಗು ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ’ ಎಂದು ಐಸಾಕ್ ನ್ಯೂಟನನ್ನನ ಮಾತು ಹೇಳುತ್ತಾ ತಮ್ಮ ಮನಸ್ಸಿನಲ್ಲಿರುವ ಮುಗ್ಧತೆ ತೋರುತ್ತಾರೆ. ಸಂಗೀತವನ್ನು ಮಾತೃಭಾಷೆಯನ್ನಾಗಿ ಮಾಡಿಕೊಂಡು ನಿತ್ಯವೂ ಮಾತನಾಡುತ್ತಿರುವ ಅವರಿಗೆ ಪ್ರಶಸ್ತಿ ಮನ್ನಣೆಗಳಿಗೆ ಲೆಕ್ಕವಿಲ್ಲ. ನೂರಾರು ಬಿರುದುಗಳು ಅವರ ಮುಡಿಗೇರಿವೆ. ಜ. 14 ಅವರ ಹುಟ್ಟು ಹಬ್ಬ. ಅಲ್ಲಿಗೆ ಅವರಿಗೆ 91 ವರ್ಷ ತುಂಬುತ್ತಿದೆ. ಅವರು ಶತಮಾನದತ್ತ ನಡೆಯುತ್ತಿದ್ದಾರೆ. ಅವರ ತುಂಬು ಜೀವನ ಎಲ್ಲರ ಬಾಳಿಗೂ ಸ್ಫೂರ್ತಿಯ ಚಿಲುಮೆ.

ಸೇವೆಯೆಂಬ ಸವಿಜೇನು



ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೂರ್ಬಂದ್ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಸದಾ ಜನಜಾತ್ರೆ. ಹಾಗಂತ ಅಲ್ಲಿ ಯಾವ ಪವಾಡವೂ ಇಲ್ಲ, ಆದರೆ ಪವಾಡ ಪುರಷನಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ಹಕೀಮ್ ಅಬ್ದುಲ್ ರೆಹಮಾನ್ ಪಾಷ. ಇವರು ಪ್ರಸಿದ್ಧ ನಾಟಿ ವೈದ್ಯರು. ಯಾವುದೇ ಕಾಯಿಲೆಯಾದರೂ ಸರಿ, ಕೈ ಎತ್ತಿ ಎನೇ ಕೊಟ್ಟರೂ ಖಾಯಿಲೆ ಮಾಯವಾಗುತ್ತದೆ. ಇದೇ ಹಕೀಮರ ಪವಾಡ!ಅವರ ಮನೆ ಮುಂದೆ ನಿತ್ಯ ಜನಸಾಗರವೇ ಸೇರುತ್ತದೆ. ಇನ್ನೊಂದು ಕುತೂಹಲ ಸಂಗತಿಯೆಂದರೆ ಹಕೀಮರು ಎಲ್ಲಿ ಇರುತ್ತಾರೋ ಅಲ್ಲಿ ಆಸ್ಪತ್ರೆಯಾಗಿಬಿಡುತ್ತದೆ. ಅವರು ಮನೆಯಲ್ಲಿರಲಿ, ಹೊಲದಲ್ಲಿರಲಿ, ಪೇಟೆಗೆ ಬರಲಿ, ನಗರಕ್ಕೆ ಬರಲಿ ಅವರ ಮುಂದೆ ದೊಡ್ಡದೊಂದು ಕ್ಯೂ ನಿಂತುಬಿಡುತ್ತದೆ. ಹಕೀಮ್ ಬಹಳ ಒಳ್ಳೆಯ ರೈತರು. ಬೇಸಾಯದ ಜೊತೆಗೆ ನಾಟಿ ವೈದ್ಯಕೀಯ ವೃತ್ತಿಯನ್ನು ಕಳೆದ ಎರಡು ದಶಕಗಳಿಂದ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಜನರ ಮೇಲೆ ಅವರಿಗೆ ಅಪಾರ ಪ್ರೀತಿ. ಅವರು ಎಲ್ಲಿದ್ದರೂ ಜನರ ನೋವುಗಳಿಗೆ ಸ್ಪಂದಿಸುತ್ತಾರೆ.ಅವರ ಮನೆಯಂತೂ ಹಕೀಮರ ಕರ್ಮಭೂಮಿ. ಮನೆಯಲ್ಲಿ ಗಿಡ ಮೂಲಿಕೆಗಳು, ನಾರು ಬೇರುಗಳು ಯಾವಾಗಲೂ ತುಂಬಿರುತ್ತವೆ. ನಮ್ಮ ಇಂಗ್ಲಿಷ್ ಡಾಕ್ಟರ್ಗಳ ಹಾಗೆ ಅವರ ಮನೆಮುಂದೆ ಕೆಲಸದ ಅವಧಿಯ ಟೈಂ ಟೇಬಲ್ ಇಲ್ಲ. ಅವರ ಮನೆ ಸೇವೆಗೆ ಸದಾ ತೆರೆದಿರುತ್ತದೆ. ಅವರ ಮನೆಯ ಮುಂದೆ ಬಂದರೆ ಗಿಡಮೂಲಿಕೆಗಳ ಸುವಾಸನೆ ಮೂಗಿಗೆ ರಾಚುತ್ತದೆ. ಹಲ್ಲು ನೋವು, ಮೂಳೆ ತೊಂದರೆ, ತಲೆ ನೋವು ಮುಂತಾದ ಕಾಯಿಲೆಗಳಿಗೆ ಹಕೀಮರ ಮದ್ದು ರಾಮಬಾಣ.ಹೊರ ರಾಜ್ಯಗಳಿಂದಲೂ ಜನರು ಹಕೀಮರ ಬಳಿಗೆ ಬರುತ್ತಾರೆ. ಹಕೀಮರು ಯಾರಬಳಿಯೂ ಇಷ್ಟು ಹಣ ಕೊಡಬೇಕು ಎಂದು ಬೇಡಿಕೆ ಒಡ್ಡುವುದಿಲ್ಲ. ಅವರು ಕೊಟ್ಟಷ್ಟು ಇವರು ತೆಗೆದುಕೊಂಡಷ್ಟು. ಹಲವು ವೆಳೆ ಗಾಂಧಿ ಲೆಕ್ಕ! ಬರೀ ರೋಗಿಗಳು ಮಾತ್ರ ಹಕೀಮರ ಬಳಿ ಬರುವುದಿಲ್ಲ. ಜೊತೆಗೆ ಮನೆಯಲ್ಲಿ ತೊಂದರೆಯಿದ್ದರೂ ಪರಿಹಾರಕ್ಕಾಗಿ ಹಕೀಮರ ಬಳಿ ಬರುತ್ತಾರೆ. ಅವರ ಬಾಯಿಂದ ಏನೇ ಹೇಳಿದರೂ ಅದು ನಿಜವಾಗುತ್ತದೆ ಎಂದು ಜನರು ನಂಬುತ್ತಾರೆ.59 ವರ್ಷ ವಯಸ್ಸಿನ ಹಕೀಮರು ಯಾರಿಂದಲೂ ಏನನ್ನೂ ಆಪೇಕ್ಷಿಸುವುದಿಲ್ಲ. ಎಲೆಮರೆ ಕಾಯಿಯಂತೆಯೇ ತಮ್ಮ ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇವರ ಸೇವೆಯನ್ನು ಮೈಸೂರಿನ ರಂಗಾಯಣ ಗುರುತಿಸಿದ್ದು, ಈ ಬಾರಿಯ ದಸರಾದಲ್ಲಿ ಸನ್ಮಾನ ಮಾಡಿದೆ.