Tuesday, February 8, 2011

ಶ್ರೀಕಂಠನ್ ಶಿಖರ










ಶ್ರೀಕಂಠನ್ ಶಿಖರ

ಜೀವನೋತ್ಸಾಹಕ್ಕೆ ಇನ್ನೊಂದು ಹೆಸರು ಗಾಯಕ ಆರ್.ಕೆ. ಶ್ರೀಕಂಠನ್. ಹಾಡುತ್ತಾ ಕೋಟಿ ಹೃದಯಗಳ ಮನಸ್ಸಲ್ಲಿ ಮನೆಮಾಡಿರುವ ಅವರು ಗಾನ ಗಾರುಡಿಗ. ಬರೋಬ್ಬರಿ ತೊಂಬತ್ತು ತುಂಬಿ ಶತಮಾನದ ಸಾಮಿಪ್ಯದಲ್ಲಿರುವ ಅವರ ವಯೋಮಾನ ಬಾಳ ಸಂಜೆಯಲ್ಲ. ಮುಂಜಾವಿನ ಮಂಜಿನಷ್ಟೇ ಮೃದು. ಆ ದಿವ್ಯ ಶರೀರದ ಭವ್ಯ ಶಾರೀರ ಇಬ್ಬನಿಯಷ್ಟು ಶುದ್ಧ. ಸ್ಫಟಿಕದಷ್ಟು ನಿಖರ. 14ನೇ ವಯಸ್ಸಿನಲ್ಲಿ ಆರಂಭವಾದ ಶ್ರೀಕಂಠನ್ ಸಂಗೀತ ಯಾತ್ರೆ 91ನೆ ವಯಸ್ಸಿನಲ್ಲೂ ಪ್ರಖರ!ಆಕಾಶವಾಣಿಯ ‘ಗಾನವಿಹಾರ’ ಯಾರಿಗೆ ತಾನೆ ಗೊತ್ತಿಲ್ಲ? ಗಾನವಿಹಾರದ ಮೂಲಕ ಸಂಗೀತ ಕಲಿತವರಿಗೆ ಲೆಕ್ಕವಿಲ್ಲ. 32 ವರ್ಷಗಳ ರೇಡಿಯೋ ಸಂಗೀತ ಪಾಠ ಶ್ರೀಕಂಠನ್ ಆವರ ಅಪಾರ ವಿದ್ವತ್ತಿನ ಪ್ರತೀಕ. ತೊಂಬತ್ತು ತುಂಬಿದ್ದರೂ ಅವರ ಹಾಡು ಎಲ್ಲೂ ಅಲುಗಾಡುವುದಿಲ್ಲ. ಹಾಡಲು ಕೂತರೆ ಮೂರುಗಂಟೆ ಮೇಲೇಳುವುದಿಲ್ಲ. ಭಾವ ಮತ್ತು ಭಕ್ತಿ ಅವರ ಹಾಡಿನ ಶಕ್ತಿ. ಶೃತಿ ರಾಗ ಲಯ ತಾಳಗಳ ಸಾಗರ ಅವರ ಸಂಗೀತ. ಮನೋಧರ್ಮದ ವರ್ಣಮಯ ಚಿತ್ತಾರಕ್ಕೆ ಎಣೆಇಲ್ಲ. ಲೆಕ್ಕಚಾರಗಳನ್ನು ಧಾಟಿ ತಮ್ಮದೇ ಮನೋಧರ್ಮದಲ್ಲಿ ಬಣ್ಣ ತುಂಬುವ ವರ್ಣಶಿಲ್ಪಿ!ತಮ್ಮ ತೊಂಬತ್ತು ವರ್ಷ ವಯಸ್ಸಿನಲ್ಲಿ ಎಂಭತ್ತು ವರ್ಷಗಳನ್ನು ಸಂಗೀತಕ್ಕೇ ಕೊಟ್ಟಿರುವ ಆರ್.ಕೆ. ಶ್ರೀಕಂಠನ್ ನಮ್ಮ ನಾಡಿನ ಹೆಮ್ಮೆ. ಪುರಂದರ ದಾಸರ ಕೃತಿಗಳಿಗೆ ಸ್ವರೂಪ ಕೊಟ್ಟಿರುವ ಅವರ ಕಾರ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನನ್ಯ. ಹಾಸನ ಜಿಲ್ಲೆಯ ರುದ್ರಪಟ್ಟಣವೆಂಬ ಪುಟ್ಟ ಹಳ್ಳಿಯಿಂದ ಬಂದವರು ಶ್ರೀಕಂಠನ್. ಪ್ರತಿಷ್ಠಿತ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸದಸ್ಯರಾಗಿ, ಕೇರಳದ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಕೆಸೆಟ್ ಕ್ರಾಂತಿ ಮೂಲಕ ಮನೆ ಮನ ತಲುಪಿದ ಅವರ ಹಾಡು ಎಂದಿಗೂ ಹೊಚ್ಚ ಹೊಸತಾಗಿದೆ.ಅವರ ಮಾತು ಕೂಡ ಅಷ್ಟೆ, ನಿಚ್ಚಳ ನಿಷ್ಕಪಟ. ಸಂಗೀತದಷ್ಟೇ ಇಂಪು. ಮತ್ತೆ ಮತ್ತೆ ಮಾತನಾಡಬೇಕು ಎನ್ನುವಷ್ಟು ಮೊನಚು. ಯಾರಾದರೂ ‘ನೀವು ಬಹಳ ಸಾಧಿಸಿದ್ದೀರಿ’ ಅಂದರೆ ‘ನಾನೊಬ್ಬ ಪುಟ್ಟ ಮಗು ವಿಜ್ಞಾನ ಸಾಗರದ ದಂಡೆಯಲ್ಲಿ ಕಲ್ಲುಗಳನ್ನು ಆಯ್ದುಕೊಂಡು ಆಟವಾಡುತ್ತಿದ್ದೇನೆ’ ಎಂದು ಐಸಾಕ್ ನ್ಯೂಟನನ್ನನ ಮಾತು ಹೇಳುತ್ತಾ ತಮ್ಮ ಮನಸ್ಸಿನಲ್ಲಿರುವ ಮುಗ್ಧತೆ ತೋರುತ್ತಾರೆ. ಸಂಗೀತವನ್ನು ಮಾತೃಭಾಷೆಯನ್ನಾಗಿ ಮಾಡಿಕೊಂಡು ನಿತ್ಯವೂ ಮಾತನಾಡುತ್ತಿರುವ ಅವರಿಗೆ ಪ್ರಶಸ್ತಿ ಮನ್ನಣೆಗಳಿಗೆ ಲೆಕ್ಕವಿಲ್ಲ. ನೂರಾರು ಬಿರುದುಗಳು ಅವರ ಮುಡಿಗೇರಿವೆ. ಜ. 14 ಅವರ ಹುಟ್ಟು ಹಬ್ಬ. ಅಲ್ಲಿಗೆ ಅವರಿಗೆ 91 ವರ್ಷ ತುಂಬುತ್ತಿದೆ. ಅವರು ಶತಮಾನದತ್ತ ನಡೆಯುತ್ತಿದ್ದಾರೆ. ಅವರ ತುಂಬು ಜೀವನ ಎಲ್ಲರ ಬಾಳಿಗೂ ಸ್ಫೂರ್ತಿಯ ಚಿಲುಮೆ.

ಸೇವೆಯೆಂಬ ಸವಿಜೇನು



ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೂರ್ಬಂದ್ ಎಂಬ ಹಳ್ಳಿ ಇದೆ. ಈ ಹಳ್ಳಿಯಲ್ಲಿ ಸದಾ ಜನಜಾತ್ರೆ. ಹಾಗಂತ ಅಲ್ಲಿ ಯಾವ ಪವಾಡವೂ ಇಲ್ಲ, ಆದರೆ ಪವಾಡ ಪುರಷನಂಥ ಒಬ್ಬ ವ್ಯಕ್ತಿ ಇದ್ದಾರೆ. ಅವರ ಹೆಸರು ಹಕೀಮ್ ಅಬ್ದುಲ್ ರೆಹಮಾನ್ ಪಾಷ. ಇವರು ಪ್ರಸಿದ್ಧ ನಾಟಿ ವೈದ್ಯರು. ಯಾವುದೇ ಕಾಯಿಲೆಯಾದರೂ ಸರಿ, ಕೈ ಎತ್ತಿ ಎನೇ ಕೊಟ್ಟರೂ ಖಾಯಿಲೆ ಮಾಯವಾಗುತ್ತದೆ. ಇದೇ ಹಕೀಮರ ಪವಾಡ!ಅವರ ಮನೆ ಮುಂದೆ ನಿತ್ಯ ಜನಸಾಗರವೇ ಸೇರುತ್ತದೆ. ಇನ್ನೊಂದು ಕುತೂಹಲ ಸಂಗತಿಯೆಂದರೆ ಹಕೀಮರು ಎಲ್ಲಿ ಇರುತ್ತಾರೋ ಅಲ್ಲಿ ಆಸ್ಪತ್ರೆಯಾಗಿಬಿಡುತ್ತದೆ. ಅವರು ಮನೆಯಲ್ಲಿರಲಿ, ಹೊಲದಲ್ಲಿರಲಿ, ಪೇಟೆಗೆ ಬರಲಿ, ನಗರಕ್ಕೆ ಬರಲಿ ಅವರ ಮುಂದೆ ದೊಡ್ಡದೊಂದು ಕ್ಯೂ ನಿಂತುಬಿಡುತ್ತದೆ. ಹಕೀಮ್ ಬಹಳ ಒಳ್ಳೆಯ ರೈತರು. ಬೇಸಾಯದ ಜೊತೆಗೆ ನಾಟಿ ವೈದ್ಯಕೀಯ ವೃತ್ತಿಯನ್ನು ಕಳೆದ ಎರಡು ದಶಕಗಳಿಂದ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ. ಜನರ ಮೇಲೆ ಅವರಿಗೆ ಅಪಾರ ಪ್ರೀತಿ. ಅವರು ಎಲ್ಲಿದ್ದರೂ ಜನರ ನೋವುಗಳಿಗೆ ಸ್ಪಂದಿಸುತ್ತಾರೆ.ಅವರ ಮನೆಯಂತೂ ಹಕೀಮರ ಕರ್ಮಭೂಮಿ. ಮನೆಯಲ್ಲಿ ಗಿಡ ಮೂಲಿಕೆಗಳು, ನಾರು ಬೇರುಗಳು ಯಾವಾಗಲೂ ತುಂಬಿರುತ್ತವೆ. ನಮ್ಮ ಇಂಗ್ಲಿಷ್ ಡಾಕ್ಟರ್ಗಳ ಹಾಗೆ ಅವರ ಮನೆಮುಂದೆ ಕೆಲಸದ ಅವಧಿಯ ಟೈಂ ಟೇಬಲ್ ಇಲ್ಲ. ಅವರ ಮನೆ ಸೇವೆಗೆ ಸದಾ ತೆರೆದಿರುತ್ತದೆ. ಅವರ ಮನೆಯ ಮುಂದೆ ಬಂದರೆ ಗಿಡಮೂಲಿಕೆಗಳ ಸುವಾಸನೆ ಮೂಗಿಗೆ ರಾಚುತ್ತದೆ. ಹಲ್ಲು ನೋವು, ಮೂಳೆ ತೊಂದರೆ, ತಲೆ ನೋವು ಮುಂತಾದ ಕಾಯಿಲೆಗಳಿಗೆ ಹಕೀಮರ ಮದ್ದು ರಾಮಬಾಣ.ಹೊರ ರಾಜ್ಯಗಳಿಂದಲೂ ಜನರು ಹಕೀಮರ ಬಳಿಗೆ ಬರುತ್ತಾರೆ. ಹಕೀಮರು ಯಾರಬಳಿಯೂ ಇಷ್ಟು ಹಣ ಕೊಡಬೇಕು ಎಂದು ಬೇಡಿಕೆ ಒಡ್ಡುವುದಿಲ್ಲ. ಅವರು ಕೊಟ್ಟಷ್ಟು ಇವರು ತೆಗೆದುಕೊಂಡಷ್ಟು. ಹಲವು ವೆಳೆ ಗಾಂಧಿ ಲೆಕ್ಕ! ಬರೀ ರೋಗಿಗಳು ಮಾತ್ರ ಹಕೀಮರ ಬಳಿ ಬರುವುದಿಲ್ಲ. ಜೊತೆಗೆ ಮನೆಯಲ್ಲಿ ತೊಂದರೆಯಿದ್ದರೂ ಪರಿಹಾರಕ್ಕಾಗಿ ಹಕೀಮರ ಬಳಿ ಬರುತ್ತಾರೆ. ಅವರ ಬಾಯಿಂದ ಏನೇ ಹೇಳಿದರೂ ಅದು ನಿಜವಾಗುತ್ತದೆ ಎಂದು ಜನರು ನಂಬುತ್ತಾರೆ.59 ವರ್ಷ ವಯಸ್ಸಿನ ಹಕೀಮರು ಯಾರಿಂದಲೂ ಏನನ್ನೂ ಆಪೇಕ್ಷಿಸುವುದಿಲ್ಲ. ಎಲೆಮರೆ ಕಾಯಿಯಂತೆಯೇ ತಮ್ಮ ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಇವರ ಸೇವೆಯನ್ನು ಮೈಸೂರಿನ ರಂಗಾಯಣ ಗುರುತಿಸಿದ್ದು, ಈ ಬಾರಿಯ ದಸರಾದಲ್ಲಿ ಸನ್ಮಾನ ಮಾಡಿದೆ.

No comments:

Post a Comment