
(ಉದಯವಾಣಿ ‘ಚಿನ್ನಾರಿ’ ಪುರವಣಿಯಲ್ಲಿ ದಿ. 20-11-2010ರಂದು ಪ್ರಕಟಿತ)
ಭಾರಧ್ವಜಮಹರ್ಷಿ ಮಹಾಜ್ಞಾನಿ. ಮೂರು ಲೋಕಗಳಲ್ಲಿರುವ ಸಕಲ ವಿದ್ಯೆಗಳನ್ನು ತಮ್ಮ ತೆಕ್ಕೆಯಲ್ಲಿ ಇಟ್ಟುಕೊಂಡಿದ್ದ ಅವರು ವಿದ್ಯಾ ಶಿಖಾಮಣಿಗಳು. ಸಕಲ ಕಲಾಪಾರಂಗತರು. ವೇದವಿದ್ಯಾದಿ ಪಂಡಿತರು.
ಒಂದು ದಿನ ಧ್ಯಾನ ನಿರತರಾಗಿರುವ ಸಮಯದಲ್ಲಿ ಅವರ ಮನಸ್ಸಿನಲ್ಲಿ ಒಂದು ಚಿಂತೆ ಹತ್ತಿತು. ‘ನನಗೆ ಎಲ್ಲವೂ ಗೊತ್ತಿಗೆ, ನನಗೆ ಕಲಿಯಬೇಕಾದುದು ಈ ಸೃಷ್ಟಿಯೊಳಗೆ ಯಾವುದೂ ಇಲ್ಲ. ನಾನು ಸೃಷ್ಟಿಕರ್ತನಿಂದ ಬ್ರಹ್ಮಜ್ಞಾನ ಪಡೆಯಲು ಇದು ಸಕಾಲ’ ಎಂಬ ಚಿಂತೆ ಅವರ ತಲೆಯೊಳಗೆ ಬಂತು.
ಬ್ರಹ್ಮಜ್ಞಾನ ಅಂತಿಮವಾದದು. ಬ್ರಹ್ಮಜ್ಞಾನ ಪಡೆದ ಅತಿರಥರು ಲೋಕದಲ್ಲಿ ಯಾರೂ ಇಲ್ಲ. ಅದು ಬ್ರಹ್ಮನಿಗೆ ಮಾತ್ರ ಸೀಮಿತವಾದ ಜಾನ. ಹಾಗಾಗಿ ಅದ್ಯಾವ ಕೆಟ್ಟ ಘಳಿಗೆಯಲ್ಲಿ ಭಾರಧ್ವಜ ಮಹರ್ಷಿಗಳಿಗೆ ಬ್ರಹ್ಮಜಾನದ ಅತಿಯಾಸೆ ತಲೆಹೊಕ್ಕಿತೋ ಗೊತ್ತಿಲ್ಲ, ಬ್ರಹ್ಮಜ್ಞಾನವನ್ನು ಕರುಣಿಸು ಎಂದು ಕೇಳಲು ಭಾರಧ್ವಜರು ಬ್ರಹ್ಮನ ಬಳಿಗೆ ನಡೆದರು.
ಸೃಷ್ಟಿಕರ್ತ ಬ್ರಹ್ಮ ವಿಶ್ರಾಂತಿಯಲ್ಲಿ ತೊಡಗಿಡದ್ದರು. ಭಾರಧ್ವಜರು ಬಂದು ಬ್ರಹ್ಮನಿಗೆ ನಮಸ್ಕರಿಸಿದರು. ಬ್ರಹ್ಮ ಭಾರಧ್ವಜರ ಮುಖ ನೋಡಿ ನಕ್ಕು ಏನು ಸಮಾಚಾರ ಎಂದು ಕೇಳಿದರು. ಅದಕ್ಕೆ ಭಾರಧ್ವಜರು ’ನನಗೆ ಮೂರು ಲೋಕಗಳ ಮಾಹಿತಿಯೂ ಇದೆ. ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ. ಹಾಗಾಗಿ ನನಗೆ ಬ್ರಹ್ಮಜ್ಞಾನವನ್ನು ಕರುಣಿಸು ಎಂದು ಭಾರಧ್ವಜರು ಕೇಳಿದರು.
ಭಾರಧ್ವಜರ ಈ ಮಾತು ಕೇಳಿದ ಬ್ರಹ್ಮ ಯಾವ ಮಾತನ್ನೂ ಆಡದೆ, ನಿಶ್ಯಬ್ಧವಾಗಿ ಕುಳಿತರು. ಇದರಿಂದ ಕೆರಳಿದ ಭಾರಧ್ವಜರು ‘ನನಗೆ ನೀನು ಅವಮಾನ ಮಾಡುತ್ತಿದ್ದೀಯಾ, ನನಗೆ ಗೊತ್ತಿಲ್ಲದ್ದು ಇದೆ ಎಂದು ನಿನ್ನ ಚಿಂತೆಯೇ? ಎಂದು ಕೇಳಿದರು.
ಅದಕ್ಕೆ ಬ್ರಹ್ಮ ನೋಡು ಮಹರ್ಷಿ ನೀನು ಜ್ಞಾನಿ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಆದರೆ......ಎಂದು ಹೇಳುವಾಗ ಮತ್ತಷ್ಟು ಕೆರಳಿದ ಭಾರಧ್ವಜರು ಬ್ರಹ್ಮಜ್ಞಾನ ನಿನಗೆ ಮಾತ್ರ ಸೀಮಿತವೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಮಳೆ ಸುರಿಸಿದರು.
ಬ್ರಹ್ಮ ತನ್ನ ಎದುರಿನಲ್ಲಿದ್ದ ಪರದೆಯ ಬಳಿ ನೋಡಿದರು. ಪರದೆಯ ಮೇಲೆ ಕೆಲವೊಂದು ಅಕ್ಷರಗಳು ಮೂಡಿದವು. ಭಾರಧ್ವಜರನ್ನು ನೋಡುತ್ತಾ ಬ್ರಹ್ಮ ‘ಮಹರ್ಷಿ ನಿನಗಿವು ಗೊತ್ತಾ ಅಂದರು. ತಡವರಿಸುತ್ತಾ ಭಾರಧ್ವಜರು ಏನದು......ಅದನ್ನು ನಾನು ಕೇಳಿಯೇ ಇಲ್ಲ ಅಂದರು.
ಆಗ ಬ್ರಹ್ಮ, ಅದು ನನಗೂ ಗೊತ್ತಿಲ್ಲ ಮುನಿವರ್ಯ. ನಾನೂ ಕಲಿಯುತ್ತಿದ್ದೇನೆ. ಪ್ರತಿದಿನ ಮುಂಜಾನೆ ಇವುಗಳನ್ನು ಶಾರದೆ ನನಗೆ ಬೋಧಿಸುತ್ತಿದ್ದಾಳೆ ಎಂದು ಹೇಳಿದರು. ಬ್ರಹ್ಮನ ಈ ಮಾತುಗಳನ್ನು ಕೇಳಿದ ಭಾರಧ್ವಜರು ಧರಗಿಳಿದು ಹೋದರು. ತಮ್ಮ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯಿತು. ‘ನನ್ನನ್ನು ಕ್ಷಮಿಸು, ನನ್ನ ಅಹಂಕಾರ ನನಗೆ ಸರಿಯಾದ ಪಾಠ ಕಲಿಸಿತು. ಪರಶಿವನೇ ಇನ್ನೂ ಕಲಿಯಿತ್ತಿದ್ದೇನೆ ಎಂದು ಹೇಳುವಾಗ ನಾನು ಯಾವ ಜ್ಞಾನಿ? ನಾನು ಅಜ್ಞಾನಿ ಅಜ್ಞಾನಿ ಎಂದು ಹೇಳುತ್ತಾ ಭಾರಧ್ವಜರು ಕಾಡಿಗೆ ತೆರಳಿದರು.
ಈ ಕತೆಯಲ್ಲಿ ಎಂತಹ ಮಹತ್ವದ ತತ್ವ ಅಡಗಿದೆ ಅಲ್ಲವೆ? ಇಲ್ಲಿ ಯಾರೂ ದೊಡ್ಡವರಲ್ಲ. ಮರಕ್ಕಿಂತ ಮರದೊಡ್ಡದು. ನನಗೆ ಎಲ್ಲವೂ ಗೊತ್ತು ಎಂದು ಹೇಳುವವರೂ ಯಾರೂ ಇಲ್ಲ. ಭಗವಂತನೂ ಕೂಡ. ಸೃಷ್ಟಿಕರ್ತನೇ ಇನ್ನೂ ಕಲಿಯುತ್ತಿದ್ದೇನೆ ಎಂದು ಹೇಳುವ ಮೂಲಕ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದಾರೆ.