Saturday, November 23, 2013

ತಮಿಳು ವನದಲ್ಲರಳಿದ ಕನ್ನಡ ಪದ್ಮಾ


ತಮಿಳು ವನದಲ್ಲರಳಿದ

ಕನ್ನಡ ಪದ್ಮಾ


 





 
 
 
 
 
 
 
 
 
 
 
ತುಂಡು ಕಾಡಿನಲ್ಲಿದ್ದ ಆನೆ ಹಿಂಡನ್ನು ಮೂಲ ಸ್ಥಾನ ಸೇರಿಸುವ ಹೊಣೆ ಆಕೆಯ ಮೇಲಿತ್ತು. ಮರಿಗಳೂ ಸೇರಿದಂತೆ 75 ಆನೆಗಳಿದ್ದ ಆ ಹಿಂಡನ್ನು ಕರೆದೊಯ್ಯುವ ದಾರಿಯಲ್ಲಿ ದೊಡ್ಡ ಸಂಖ್ಯೆಯ ವಾಹನಗಳು ಚಲಿಸುವ ರಸ್ತೆಯೊಂದನ್ನು ದಾಟಿಸುವ ಹೊತ್ತು. ಆನೆಗಾಗಿ ರಸ್ತೆಯಲ್ಲಿ ವಾಹನ ಚಾಲನೆ ತಡೆದಿದ್ದಕ್ಕೆ ಎಲ್ಲಾ ವಾಹನ ಚಾಲಕರು ಕ್ರುದ್ಧರಾಗಿದ್ದರು.
ಆ ರಾತ್ರಿ ಆನೆಗಳು ನುಗ್ಗಿದ ರಭಸಕ್ಕೆ ಈ ಹೊತ್ತಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯೆಲ್ಲಾ ದೂರ ಓಡಿ ಹೋಗಿದ್ದರೂ ಈ ಹೆಣ್ಣು ಮಗಳು ಮಾತ್ರ ಆನೆಗಳು ದಾಟುವ ತನಕ ಅಲ್ಲಿಯೇ ಇದ್ದರು. ತಮಿಳುನಾಡಿನ ಅರಣ್ಯ ಇಲಾಖೆಯಲ್ಲಿರುವ ಕನ್ನಡದ ಕುವರಿ ಸಿ.ಎಚ್, ಪದ್ಮಾ ಅವರು ಮಾತನಾಡುತ್ತಾ ಹೋದಂತೆ ಆನೆ ಕಥೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ತಮಿಳುನಾಡಿನ ಅರಣ್ಯಗಳಲ್ಲಿ ಇವರು ಪದ್ಮಾ ಮೇಡಂ.
ಅವರಿಗೆ ಅರಣ್ಯ, ವನ್ಯ ಜೀವಿಗಳೆಂದರೆ ಪ್ರಾಣಕ್ಕೂ ಮಿಗಿಲಾದ ಪ್ರೇಮ. ಅವರು ತಿರುನೆಲ್ವೇಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಎಫ್‌ಒ). ತಿರುನೆಲ್ವೇಲಿ ತಮಿಳುನಾಡಿನ ಎರಡನೇ ಅತಿ ದೊಡ್ಡ ಜಿಲ್ಲೆ. ಪಶ್ಚಿಮ ಘಟ್ಟಗಳಿಂದ ರಚನೆಯಾಗಿರುವ ಈ ದಟ್ಟಾರಣ್ಯ ಐತಿಹಾಸಿಕವಾದುದು. ಅದು ಬ್ರಿಟಿಷರು ರಚಿಸಿದ ಅರಣ್ಯ ವಿಭಾಗ.
ಇಲ್ಲಿಯ ವನ ಮತ್ತು ಪ್ರಾಣಿ ಸಂಕುಲವನ್ನು ಕಾಯುವ ಕಾಯಕ ಪದ್ಮಾ ಅವರದು. ಅರಣ್ಯ ಸೇವೆಯಲ್ಲಿ ಅವರು ಮಾಡಿರುವ ಕಾರ್ಯಗಳು ತಮಿಳು ಜನರನ್ನು ಚಕಿತಗೊಳಿಸಿವೆ. ಅರಣ್ಯ ಇಲಾಖೆಯ ಸೇವೆಯೆಂದರೆ ಕೇವಲ ಅರಣ್ಯ ರೋಧನವಲ್ಲ, ಕಾಡಿನಲ್ಲಿ ಮಾಡಲು ಬೇಕಾದಷ್ಟು ಕೆಲಸಗಳಿವೆ ಎಂಬುದನ್ನು ಕಾಡಿನಿಂದ ಹೊರಕ್ಕೆ ತಂದು ತೋರಿಸಿದ್ದಾರೆ.
ಪದ್ಮಾ ಸಾಧನೆಗೆ ಕೇವಲ ತಮಿಳುನಾಡಷ್ಟೇ ಅಲ್ಲ, ಕನ್ನಡಿಗರೂ ಹೆಮ್ಮೆ ಪಡಬೇಕು. ಏಕೆಂದರೆ ಪದ್ಮಾ ಕರ್ನಾಟಕದ ಹಳ್ಳಿ ಹುಡುಗಿ. ಕನಕಪುರ ತಾಲ್ಲೂಕಿನ ಬಿಜ್ಜಳ್ಳಿ ಅವರ ಊರು. ಅವರು ಡೆಹ್ರಾಡೂನ್‌ನಲ್ಲಿ ಐಎಫ್‌ಎಸ್ ತರಬೇತಿ ಮುಗಿಸಿ ಬಂದವರೇ ಸತ್ಯಮಂಗಲ ಅರಣ್ಯ ಪ್ರವೇಶ ಮಾಡಿದರು. ಎಲ್ಲರೂ, ಅದು ವೀರಪ್ಪನ್ ಕಾಡು ಎಂದು ಮೂಗು ಮುರಿದರು. ಆದರೆ ಪದ್ಮಾ ಸತ್ಯಮಂಗಲದಲ್ಲಿ ಅರಣ್ಯವನ್ನು ಆರಾಧಿಸತೊಡಗಿದರು.
ಅರಣ್ಯ ಸೇವೆ ಅವರ ಗುರಿಯಾಯಿತು. ಸತ್ಯಮಂಗಲ ಮತ್ತು ವೇಲೂರು ಅರಣ್ಯ ವಿಭಾಗದಲ್ಲಿ ಅವರು ತರಬೇತಿ ಅರಣ್ಯಾಧಿಕಾರಿಯಾಗಿ ಕೆಲಸ ಮಾಡಿದರು. ನಂತರ ಹೊಸೂರು ಅರಣ್ಯ ವಿಭಾಗ (ಕೃಷ್ಣಗಿರಿ ಜಿಲ್ಲೆ)ದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್)ಯಾಗಿ ನೇಮಕಗೊಂಡರು.
ಹೊಸೂರಿನಲ್ಲಿ ಅವರು ಮಾಡಿದ ಕಾರ್ಯಗಳು ಇಡೀ ರಾಜ್ಯದ ಗಮನ ಸೆಳೆದವು. ಅವರು ಇಟ್ಟ ಹೆಜ್ಜೆಗಳು ಇಲಾಖೆಯ ಪ್ರಶಂಸೆಗೊಳಗಾದವು. ಇಂತಹ ಚೈತನ್ಯಶೀಲ ಯುವ ಅಧಿಕಾರಿಯ ಅವಶ್ಯಕತೆ ಅರಿತ ತಮಿಳುನಾಡು ಸರ್ಕಾರದ ಅರಣ್ಯ ಸಚಿವರು, ಇಲಾಖೆಯ ಮುಖ್ಯ ಕಾರ್ಯದರ್ಶಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್)ಗಳು ಪದ್ಮಾರನ್ನು ಪ್ರತಿಷ್ಠಿತ ತಿರುನೆಲ್ವೇಲಿ ಅರಣ್ಯ ವಿಭಾಗಕ್ಕೆ ಡಿಎಫ್‌ಒ ಆಗಿ ನೇಮಿಸಿದರು. ಜುಲೈ 20, 2012ರಂದು ಪದ್ಮಾ ಅಧಿಕಾರ ವಹಿಸಿಕೊಂಡರು. ಆ ಮೂಲಕ ಜಿಲ್ಲೆಯ ಪ್ರಥಮ ಉನ್ನತ ಅರಣ್ಯಾಧಿಕಾರಿಯಾಗಿ ದಾಖಲೆ ನಿರ್ಮಿಸಿದರು.
ಪ್ರಾಣದ ಹಂಗು ತೊರೆದು...
ತುಂಡು ಕಾಡುಗಳಿಗೆ ವಲಸೆ ಬರುವ ಆನೆಗಳನ್ನು ಮತ್ತೆ ಮೂಲ ಸ್ಥಾನಕ್ಕೆ ಕೊಂಡೊಯ್ಯುವುದು ಬಹಳ ತಲೆ ನೋವಿನ ಕೆಲಸ. 75 ಆನೆಗಳ ಹಿಂಡು ವಲಸೆ ಬಂದಿದ್ದ ಆ ಹಿಂಡಿನಲ್ಲಿ 14 ಮರಿಯಾನೆಗಳು, 7 ದಿನಗಳ ಹಸುಳೆ ಮತ್ತು ತಾಯಿ ಆನೆ ಇದ್ದವು. ಈ ಹಿಂಡನ್ನು ಮೂಲ ಅರಣ್ಯಕ್ಕೆ ಸೇರಿಸುವ ಜವಾಬ್ದಾರಿ ಪದ್ಮಾ ಅವರ ಮೇಲಿತ್ತು.
ಆದರೆ ಆ ಮರಿ ಮತ್ತು ತಾಯಿಯಾನೆ ಹೆಜ್ಜೆ ಇಡಲಿಲ್ಲ. ಆನೆಗಳ ಸೈಕಾಲಜಿ (ಜನ್ಮ ಕೊಟ್ಟ ಜಾಗದಲ್ಲಿ ಆನೆಗಳು ಸ್ವಲ್ಪದಿನ ಇರಲು ಬಯಸುತ್ತವೆ) ಅರಿತಿದ್ದ ಪದ್ಮಾಗೆ ಆ ತಾಯಿ, ಮರಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದು ಕಷ್ಟವಾಗಲಿಲ್ಲ. ಅವುಗಳಿಗೆ ಕಿರಿಕಿರಿ ಮಾಡದೆ ಸೂಕ್ತ ಸಮಯ ಕೊಟ್ಟು, ಅಮ್ಮ, ಮಗುವನ್ನು ಬೇರ್ಪಡಿಸದೇ ಪ್ರತ್ಯೇಕವಾಗಿ ನಡೆಸಿದರು.
ಆ ಆನೆ ಮಾರ್ಗದಲ್ಲಿ ಹೆದ್ದಾರಿಯೊಂದು ಅಡ್ಡ ಬಂತು. ಎರಡೂ ಕಡೆ 50 ಮೀಟರ್ ರಸ್ತೆ ತಡೆಯಲಾಯಿತು. ಆನೆ ಹಿಂಡನ್ನು ನೋಡಲು ಸಾವಿರಾರು ಜನ ಸೇರಿದರು. ಆಗ ರಾತ್ರಿ 10.30. ಕಗ್ಗತ್ತಲನ್ನು ಸೀಳಿ ಆನೆಗಳು ರಸ್ತೆ ದಾಟಿದವು. ಆ ವೇಳೆಗಾಗಲೇ ವಾಹನ ಸವಾರರು ಪದ್ಮಾ ಜೊತೆ ಜಗಳಕ್ಕಿಳಿದಿದ್ದರು. ರಸ್ತೆ ಬಿಡುವಂತೆ ಕಿರುಚುತ್ತಿದ್ದರು. ಇನ್ನೇನು ರಸ್ತೆ ಬಿಡಬೇಕು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡಿದ್ದ ಇನ್ನೊಂದು ಆನೆ ಹಿಂಡು ರಸ್ತೆ ಪ್ರವೇಶಿಸಿದವು.
ಪದ್ಮಾ ಕಿರುಚಿದರು. ಜನ ಓಡಿದರು. ಕೋಪಗೊಂಡ ಆನೆಗಳು ದಾರಿಯಲ್ಲಿ ದಾಟದೇ ವಾಹನಗಳ ಮೇಲೆ ನುಗ್ಗಿದವು. ಪದ್ಮಾ ಆನೆಗಳಿಂದ ಕೇವಲ ಮೂರು ಮೀಟರ್ ಅಂತರದಲ್ಲಿದ್ದರು. ಆನೆಗಳು ವಾಹನಗಳನ್ನು ಜಖಂಗೊಳಿಸಿ ಮುಂದೆ ಓಡಿದವು. ಹೃದಯವನ್ನು ಕೈಯಲ್ಲಿಡಿದುಕೊಂಡಿದ್ದ ಗಾರ್ಡ್‌ಗಳು, ಹಿರಿಯ ಅಧಿಕಾರಿಗಳು ಓಡದೇ ನಿಂತಿದ್ದ ಪದ್ಮಾರನ್ನು ಕಂಡು ನಿಟ್ಟುಸಿರು ಬಿಟ್ಟರು. ಬೈದರು. ಅಂದು ಪದ್ಮಾ ಪ್ರಾಣಾಪಾಯದಿಂದ ಪಾರಾಗಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.
ಕೂಲಿ ಕಾರ್ಮಿಕನ ಮಗಳು...
ಪದ್ಮಾ ಕನಕಪುರ ತಾಲ್ಲೂಕಿನ ಬಿಜ್ಜಳ್ಳಿ ಗ್ರಾಮದ ಚಿಕ್ಕರಾಮಯ್ಯ ಮತ್ತು ಪುಟ್ಟಲಿಂಗಮ್ಮ ದಂಪತಿಗಳ ಪುತ್ರಿ. ತಂದೆ ಚಿಕ್ಕರಾಮಯ್ಯ ದಿನಗೂಲಿ ಕಟ್ಟಡ ಕಾರ್ಮಿಕರಾಗಿದ್ದವರು. ಸಿಮೆಂಟ್, ಇಟ್ಟಿಗೆಗಳ ಜೊತೆ ಕೆಲಸ ಮಾಡುತ್ತಿದ್ದ ಚಿಕ್ಕರಾಮಯ್ಯ ಬೆಂಗಳೂರಿಗೆ ಬಂದರು. ಪುಟ್ಟಲಿಂಗಮ್ಮ ಅವರ ಕೈ ಹಿಡಿದ ಮೇಲೆ ಅವರು ಸಣ್ಣ ಗುತ್ತಿಗೆದಾರರಾಗಿ ಬಡ್ತಿ ಪಡೆದರು. ಮೂರು ಮಕ್ಕಳು, ಪದ್ಮಾ ಜೇಷ್ಠ ಪುತ್ರಿ.
ಇಬ್ಬರು ತಮ್ಮಂದಿರು. ಚಾಮರಾಜಪೇಟೆಯಲ್ಲಿ ಬಾಡಿಗೆ ಮನೆಯಲ್ಲಿದ್ದ ಈ ದಂಪತಿ ಮಕ್ಕಳ ವಿದ್ಯೆಗೆ ಆಧಾರವಾಗಿ ನಿಂತರು. ಜೊತೆಗೆ ಮಾವ ಶಿಕ್ಷಕ ವಿ. ಶ್ರೀನಿವಾಸ್ ಅವರ ಮಾರ್ಗದರ್ಶನ ಪದ್ಮಾರಿಗಿತ್ತು.ಪದ್ಮಾ ಚಿಕ್ಕಂದಿನಿಂದಲೂ ಎಲ್ಲದರಲ್ಲೂ ಮುಂದು. ಬಾಲ್ಯದಲ್ಲಿ ಲಗೋರಿ, ಸೈಕಲ್ ಹೊಡೆಯುವುದೆಂದರೆ ಅಚ್ಚುಮೆಚ್ಚು. ಆಗಲೇ ಲಾಲ್‌ಬಾಗ್, ಕಬ್ಬನ್‌ಪಾರ್ಕ್‌ಗಳ ಬಗ್ಗೆ ಇಂಚಿಂಚೂ ಗೊತ್ತಿತ್ತು. ಜಿಂಕೆ ಪಾರ್ಕ್ ಎಂದರೆ ಇನ್ನೂ ಇಷ್ಟ. ಜೊತೆಗೆ ವಿದ್ಯೆಯಲ್ಲಿ ಎಲ್ಲರಿಗಿಂತಲೂ ಮುಂದು. ಎಲ್‌ಕೆಜಿಯಿಂದ ಐಎಫ್‌ಎಸ್‌ವರೆಗೂ ಉನ್ನತ ದರ್ಜೆಯನ್ನು ಯಾರಿಗೂ ಬಿಟ್ಟು ಕೊಟ್ಟವರಲ್ಲ!
ಮೆಡಿಕಲ್ ಸೀಟ್ ತಿರಸ್ಕಾರ
ಪದ್ಮಾ ಪಿಯುಸಿ ಕಲಿಯುತ್ತಿದ್ದಾಗಲೇ ಭವಿಷ್ಯದ ಗುರಿ ಸ್ಪಷ್ಟವಾಗಿತ್ತು. ದಾವಣಗೆರೆಯಲ್ಲಿ ಸಿಕ್ಕಿದ್ದ ಮೆಡಿಕಲ್ ಸೀಟನ್ನು ತಿರಸ್ಕರಿಸಿ ಬೆಂಗಳೂರಿನಲ್ಲಿ ಬಿಎಸ್‌ಸಿ ಸೇರಿದರು. ಮೆಡಿಕಲ್ ಸೇರಿದರೆ ಪದವಿ ಮುಗಿಸಲು ಐದು ವರ್ಷ ಬೇಕು. ಬದುಕಿನಲ್ಲಿ ನೆಲೆಗೊಳ್ಳಲು ಅವರಿಗೊಂದು ಪದವಿ ಮಾತ್ರ ಬೇಕಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅವರ ಗುರಿ.
ಜೊತೆಗೆ ಅಪ್ಪ ಅನುಭವಿಸಿದ ಕಷ್ಟಗಳೆಲ್ಲವನ್ನು ಬಡಿದೋಡಿಸಲು ಅವರಿಗೆ ಬೇಕಾಗಿದ್ದುದು ಒಂದು ಪದವಿ ಮಾತ್ರ. ಪದವಿ ಮುಗಿದ ಕೂಡಲೇ ಸ್ನೇಹಿತರೆಲ್ಲಾ ಬೆಂಗಳೂರು ವಿವಿಯಲ್ಲಿ ಎಂಎಸ್‌ಸಿ ಪ್ರವೇಶ ಪರೀಕ್ಷೆ ಬರೆದರೆ, ಪದ್ಮಾ ಹೊರಟದ್ದು ಮಲ್ಲೇಶ್ವರದ ರಾವ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಕ್ಕೆ. ನಿವೃತ್ತ ಐಎಎಸ್ ಅಧಿಕಾರಿ ರಾವ್ ಹಾಗೂ ತರಬೇತಿ ಕೇಂದ್ರದಲ್ಲಿ ಶಿಕ್ಷಕರಾಗಿದ್ದ ಹಿರಿಯ ಪೊಲೀಸ್ ಅಧಿಕಾರಿ ದೇವರಾಜ್ ಅವರ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಆರಂಭಿಸಿದರು.
ಮೊದಲ ಬಾರಿಗೆ 2003ರಲ್ಲಿ ಐಎಎಸ್ ಪರೀಕ್ಷೆ ಬರೆದು ಕೇವಲ 17 ಅಂಕಗಳಿಂದ ಅವಕಾಶ ವಂಚಿತರಾದರು. ಅದೇ ವೇಳೆಗೆ ‘ವಲಯ ಅರಣ್ಯಾಧಿಕಾರಿ ನೇಮಕಾತಿ ಪರೀಕ್ಷೆ’ಗೆ ಅರ್ಜಿ ಕರೆಯಲಾಗಿತ್ತು. ಆ ಪರೀಕ್ಷೆಯಲ್ಲಿ ಪದ್ಮಾ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದರು. ಕೊಯಮತ್ತೂರಿನ ಫಾರೆಸ್ಟ್ ಟ್ರೈನಿಂಗ್ ಕಾಲೇಜಿನಲ್ಲಿ ಎರಡು ವರ್ಷ ಕಠಿಣ ತರಬೇತಿ ಪಡೆದು ರಾಜ್ಯ ಅರಣ್ಯ ಇಲಾಖೆಗೆ ಮರಳಿದರು. ಅವರು ಮೈಸೂರು ಅರಣ್ಯ ವಿಭಾಗದ ‘ಎಚ್.ಡಿ. ಕೋಟೆ ಸಾಮಾಜಿಕ ಅರಣ್ಯ ವಲಯ’ಕ್ಕೆ ವಲಯ ಅರಣ್ಯಾಧಿಕಾರಿಯಾಗಿ (ಆರ್‌ಎಫ್‌ಒ) ನೇಮಕಗೊಂಡರು.
ಸಾಲು ಸಸಿಗಳ ಪದ್ಮಕ್ಕ!
ಪದ್ಮಾ ಎಚ್.ಡಿ. ಕೋಟೆಗೆ ಬರುವವರೆಗೂ ಸಾಮಾಜಿಕ ಅರಣ್ಯದಲ್ಲಿ ಏನೇನೂ ಕೆಲಸಗಳಾಗಿರಲಿಲ್ಲ. ಯುವ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸಂಘಟಿಸಿ ತಾಲ್ಲೂಕಿನಲ್ಲಿ ಅರಣ್ಯೀಕರಣ ಕಾರ್ಯ ಕೈಗೊಂಡರು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿ ಶಾಲೆ, ರಸ್ತೆಯಲ್ಲಿ ಸಸಿ ನೆಡಿಸಿದರು. ಮೊದಲ ವರ್ಷವೇ ರೈತರಿಗೆ 5 ಲಕ್ಷ ಸಸಿ ವಿತರಿಸಿದರು. ಗ್ರಾ.ಪಂ. ಸದಸ್ಯರ ಮುಂದೆ ರೈತರು ಸಸಿಗಾಗಿ ಸಾಲಿನಲ್ಲಿ ನಿಲ್ಲುತ್ತಿದ್ದರು. ಆಗ ಎಚ್.ಡಿ. ಕೋಟೆಯಲ್ಲಿ ಸಸ್ಯ ಕ್ರಾಂತಿಯೇ ನಡೆಯಿತು. ಇಂದಿಗೂ ಪದ್ಮಾ ಎಚ್.ಡಿ. ಕೋಟೆಯಲ್ಲಿ ‘ಸಾಲು ಸಸಿಗಳ ಪದ್ಮಕ್ಕ’ನೆಂದೇ ಪ್ರಸಿದ್ಧಿ. ಅವರ ಕಾರ್ಯಗಳು ಇಂದಿಗೂ ಸಸಿಗಳಂತೆಯೇ ಹಸಿರಾಗಿವೆ.
ಪದ್ಮಾ ಎಚ್.ಡಿ. ಕೋಟೆಯಲ್ಲಿ ಮುಳುಗಿ ಹೋಗಲಿಲ್ಲ. ಮತ್ತೆ ಅಧ್ಯಯನ ಮುಂದುವರಿಸಿದರು. 2007ರಲ್ಲಿ ಐಎಫ್‌ಎಸ್ ಪರೀಕ್ಷೆ ಬರೆದು ಯಶಸ್ವಿಯಾದರು. ಡೆಹ್ರಾಡೂನ್‌ನ ಇಂದಿರಾಗಾಂಧಿ ರಾಷ್ಟ್ರೀಯ ಅರಣ್ಯ ಅಕಾಡೆಮಿಯಲ್ಲಿ ಎರಡು ವರ್ಷ ತರಬೇತಿ ಮುಗಿಸಿ, ಇಡೀ ದೇಶದ ಅರಣ್ಯ ಚಿತ್ರವನ್ನು ಕಣ್ಣಿಗೆ ಕಟ್ಟಿಕೊಂಡು ಈಗ ತಮಿಳುನಾಡಿನಲ್ಲಿ ಡಿಎಫ್‌ಒ ಆಗಿ ನೆಲೆ ನಿಂತಿದ್ದಾರೆ.
ಹೊಸ ಪರಂಪರೆಗೆ ನಾಂದಿ
ಪದ್ಮಾ ಕಾಡಿನಲ್ಲಿ ಕುಟುಂಬವನ್ನು ಕಂಡಿದ್ದಾರೆ. ಸದಾ ಅಪಾಯವನ್ನು ಕಟ್ಟಿಕೊಂಡು ಬದುಕುವ ಇಲಾಖೆಯ ಕೆಳಹಂತದ ನೌಕರರನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ಅವರು ಹೊಸೂರು ಅರಣ್ಯ ವಿಭಾಗದಲ್ಲಿ ಆನೆ ಮತ್ತು ಮಾನವ ಸಮರವನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದಕ್ಕೆ ಅಂತರರಾಷ್ಟ್ರೀಯ ಅರಣ್ಯ ದಿನಾಚರಣೆಯಂದು 50,000 ನಗದು ಬಹುಮಾನ ಬಂತು.
ಈ ಹಣವನ್ನು ಪದ್ಮಾ ಇಲಾಖೆಯ ಕೆಳ ಹಂತದ ನೌಕರರಿಗೆ ಚೈತನ್ಯ ತುಂಬಲು ಬಳಸಿದರು. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಸಾಂಸ್ಕೃತಿಕ ಸಂಜೆ ಆಯೋಜಿಸಿದರು. ನೌಕರರ ಕುಟುಂಬ ಸದಸ್ಯರನ್ನು ಕರೆಸಿ ರಂಗೋಲಿ, ಚರ್ಚಾಸ್ಪರ್ಧೆ, ಕ್ವಿಜ್, ಆಟೋಟ, ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಿ ‘ಡಿಎಫ್‌ಒ ಬಹುಮಾನ’ ಕೊಟ್ಟರು. ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಜೊತೆಗೆ ಆನೆ ಸಾಗಣೆಯಲ್ಲಿ ಸಹಾಯ ಮಾಡಿದ ಸಾರ್ವಜನಿಕರು, ಎನ್‌ಜಿಒ ಸದಸ್ಯರು, ಬೆಳೆ ನಾಶವಾದಾಗ ರೈತರಿಗೆ ಬೇಗ ಅನುಮೋದನೆ ಕೊಟ್ಟ ಗ್ರಾಮ ಲೆಕ್ಕಗರನ್ನು ಗುರುತಿಸಿ ಬಹುಮಾನ ಕೊಟ್ಟರು. ಆ ಮೂಲಕ ಪದ್ಮಾ ತಮಿಳುನಾಡಿನಲ್ಲಿ ಹೊಸ ಪರಂಪರೆ ಸೃಷ್ಟಿಸಿದರು. ಆ ಮೂಲಕ ಸಾಮಾಜಿಕವಾಗಿ ದೂರವಿದ್ದ ಅರಣ್ಯ ಇಲಾಖೆಯನ್ನು ಮುಖ್ಯವಾಹಿನಿಗೆ ತರಲು ಯತ್ನಿಸಿದರು. ಪದ್ಮಾರ ಈ ಯತ್ನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಬಂತು.
ನೆಲ್ಮಾರ್ ಅರಣ್ಯ ಅತಿಕ್ರಮಣ ಪ್ರಕರಣದಲ್ಲಿ ಅತಿಕ್ರಮಣಕಾರರ ಜೊತೆ ಮಾತನಾಡಿ ನೂರಾರು ಎಕರೆ ಅರಣ್ಯ ಭೂಮಿ ರಕ್ಷಿಸಿದ ಕೀರ್ತಿ ಪದ್ಮಾರ ಮೇಲಿದೆ. ಆನೆ ಸಾಗಣೆ ಕಾಲದಲ್ಲಿ ಶಾಲಾ ಮಕ್ಕಳ ಸಂರಕ್ಷಣೆ, ಕಾಡಿನಲ್ಲಿ ಕುಡಿಯುವ ನೀರಿಗೆ ತೊರೆಗಳ ರಕ್ಷಣೆ, ಅಪರೂಪದ ವನ್ಯಗಳ ರಕ್ಷಣೆ ಮುಂತಾದ ಕಾರ್ಯಗಳಲ್ಲಿ ಪದ್ಮಾ ಹೆಸರುವಾಸಿಯಾಗಿದ್ದಾರೆ.
ದೊರೈವೀಡು’ ವಾಸ
ಪದ್ಮಾ ತಿರುನೆಲ್ವೇಲಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ವಾಸಿಸುತ್ತಿದ್ದ ‘ದೊರೈವೀಡು’ ಸರ್ಕಾರಿ ಬಂಗಲೆಯಲ್ಲಿ ವಾಸವಿದ್ದಾರೆ. ಅದು 50 ಬಾಗಿಲುಗಳ ಭವ್ಯ ಬಂಗಲೆ. ಒಂದೊಂದು ಕಂಬವೂ ಒಂದೊಂದು ಕತೆ ಹೇಳುತ್ತವೆ. ಹಿಂದಿನ ಅಧಿಕಾರಿಗಳು ಬಂಗಲೆಯ ಒಂದು ಭಾಗದಲ್ಲಿ ಮಾತ್ರ ವಾಸಿಸುತ್ತಿದ್ದು, ಮಿಕ್ಕ ಭಾಗವನ್ನು ಕತ್ತಲೆಯಲ್ಲಿ ಮುಳುಗಿಸಿದ್ದರು. ಆದರೆ ಪದ್ಮಾ ಸ್ಮಾರಕ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿ ಹೊಸ ರೂಪಕೊಟ್ಟಿದ್ದಾರೆ. ಅದು ನವಿಲು, ಬಾತುಕೋಳಿ, ಜಿಂಕೆ ಮುಂತಾದ ಪ್ರಾಣಿ, ಪಕ್ಷಿಗಳ ಸ್ವರ್ಗ. ಅಲ್ಲಿ ಸದಾ ತಮ್ಮಿಷ್ಟದ ಸಂಗೀತ ಮೊಳಗುತ್ತಿರುತ್ತದೆ. ಈಗ ಆ ಬಂಗಲೆ ಆಕರ್ಷಣೆಯ ಕೇಂದ್ರಬಿಂದುವಾಗಿದೆ.
ಪದ್ಮಾ ಹೊಸ ತಲೆಮಾರಿನ ಉನ್ನತ ಅರಣ್ಯಾಧಿಕಾರಿ. ಅವರು ಕಾಡಿನಲ್ಲಿ ಮುಳುಗಿ ಹೋಗಿಲ್ಲ. ಸಾಮಾಜದ ಜೊತೆ ಸಂಪರ್ಕದಲ್ಲಿದ್ದಾರೆ. ಏನೇ ಹೊಸತು ಎನಿಸಿದರೂ ಅದನ್ನು ಕಲಿಯುವ ಮನಸ್ಥಿತಿ ಅವರದು. ಅವರ ಫೇಸ್‌ಬುಕ್ ಅಕೌಂಟ್ ಹಿಂದೆ ಸಾವಿರಾರು ಯುವಜನ ಇದ್ದಾರೆ. ಅಲ್ಲಿ ಅವರು ಅರಣ್ಯ ಸೇವೆಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ವಿವಿಧ ಭಾಷೆಗಳ ಚಲನಚಿತ್ರ ವೀಕ್ಷಣೆ, ಟ್ರೆಕ್ಕಿಂಗ್, ಪ್ರಯಾಣ, ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಅವರ ಹವ್ಯಾಸಗಳು.
ಉನ್ನತ ಅಧಿಕಾರಿಯಾದರೂ ಪದ್ಮಾ ಅಧ್ಯಯನ ನಿಲ್ಲಿಸಿಲ್ಲ. ಹಲವು ಅರಣ್ಯ, ವನ್ಯ ನಿಯತಕಾಲಿಕಗಳಿಗೆ ಸಂಶೋಧನಾ ಲೇಖನ ಬರೆಯುತ್ತಿದ್ದಾರೆ. ಐದು ಭಾಷೆ ಮಾತನಾಡುವ ಅವರಿಗೆ ಭಾಷೆ ಎಂದಿಗೂ ಬೇಲಿಯಾಗಿಲ್ಲ. ನಾಡಿನಲ್ಲಿ ಇಲ್ಲದ ಶಾಂತಿ, ಸುವ್ಯವಸ್ಥೆಯನ್ನು ಅವರು ಕಾಡಿನಲ್ಲಿ ಕಂಡಿದ್ದಾರೆ. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ತಮ್ಮದೇ ಆದ ಕನಸು ಕಟ್ಟಿಕೊಂಡಿದ್ದಾರೆ.
ತಮ್ಮ ಕನಸು ನನಸಿಗೆ ತಮಿಳುನಾಡು ಸೂಕ್ತ ಜಾಗ ಎಂದು ಅವರಿಗನ್ನಿಸಿದೆ. ಕನ್ನಡ ನಾಡಿನಿಂದ ಹೋಗಿ ತಮಿಳುನಾಡಿನಲ್ಲಿ ಖ್ಯಾತಿ ಪಡೆದ ರಾಜಕಾರಣಿಗಳಿದ್ದಾರೆ, ಚಿತ್ರನಟರಿದ್ದಾರೆ. ಈಗ ಉನ್ನತಾಧಿಕಾರಿಯಾಗಿ ತಮಿಳುನಾಡಿನಲ್ಲಿ ಪದ್ಮಾ ಅರಳುತ್ತಿದ್ದಾರೆ. ಹಾಗಾಗಿ ಪದ್ಮಾ ತಮಿಳುನಾಡಿನ ಪ್ರೀತಿಯ ‘ಕಾವೇರಿ’ಯಾಗಿದ್ದಾರೆ! ಪದ್ಮಾ ಜೊತೆ ಮಾತನಾಡಲು
ಇ- ಮೇಲ್: chpadmaifs@gmail.com
– ಯೋಗೇಶ್ ಮಾರೇನಹಳ್ಳಿ.

Friday, November 15, 2013

ರಾಮಾಪುರದಿಂದ ಜಿನೀವಾ ತನಕ

 

ಐದನೇ ತರಗತಿಯಲ್ಲಿರುವಾಗಲೇ ಮಕ್ಕಳ ನಡುವೆ ಈಕೆಗೆ ನಾಯಕಿಯ ಸ್ಥಾನವಿತ್ತು. ಆಗಲೂ ಅಷ್ಟೇ ವಯಸ್ಸು, ಸಣ್ಣದಾಗಿದ್ದರೂ ಆಡುವ ಮಾತುಗಳು ದೊಡ್ಡವಾಗಿದ್ದವು. ಈಗ ಪದವಿ ಪೂರ್ವ ವಿದ್ಯಾರ್ಥಿನಿ. ಮಾತು ಮತ್ತು ಕ್ರಿಯೆಗಳಲ್ಲಿ ಮಾತ್ರ ನುರಿತ ಹೋರಾಟಗಾರ್ತಿಯ ಪರಿಣತಿ ಕಾಣಿಸುತ್ತದೆ.
ಆಕೆ ಹೊರಾಟಕ್ಕಾಗಿ ಆರಿಸಿಕೊಂಡಿರುವ ವಿಚಾರಗಳೂ ಅಷ್ಟೇ. ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶೌಚಾಲಯ ಕಟ್ಟಿಸಿ ಎಂಬ ತನ್ನ ಮಾತನ್ನು ಸರ್ಕಾರ ಕೇಳಿಸಿಕೊಳ್ಳುವಂತೆ ಹೇಳುವ ಈಕೆ ಸೈಕಲ್‌ನಲ್ಲಿ ಊರೂರು ಸುತ್ತಿ ಪರಿಸರ ಉಳಿಸಿ ಎಂದು ಜನ ಜಾಗೃತಿ ಮೂಡಿಸುವುದಕ್ಕೂ ಸಿದ್ಧ. ಸಾಮೂಹಿಕ ವಿವಾಹಗಳು ನಡೆಯುತ್ತಿರುವ ಸ್ಥಳಗಳಿಗೆ ತೆರಳಿ ಬಾಲ್ಯ ವಿವಾಹ ನಡೆಯುತ್ತಿದ್ದರೆ ಅದನ್ನು ಪತ್ತೆ ಹಚ್ಚುವ ತನಿಖಾ ಪಟುತ್ವವೂ ಈ ಪದವಿ ಪೂರ್ವ ತರಗತಿಯ ವಿದ್ಯಾರ್ಥಿನಿಗಿದೆ.
ಈಕೆ ಯಾರು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ವಿಶ್ವಸಂಸ್ಥೆಯ ತನಕ ಹೋಗಿಬಂದ ಧಾರವಾಡದ ರಾಮಾಪುರ ಗ್ರಾಮದ ಮಂಜುಳಾ ಮಹಾಂತೇಶ ಮುನವಳ್ಳಿ. 10ನೇ ವಯಸ್ಸಿನಲ್ಲಿ ಮಕ್ಕಳ ಪರ ಮಾತನಾಡುವುದನ್ನು ಆರಂಭಿಸಿದ ಈಕೆ ಈಗ ಧಾರವಾಡದ ಎಲ್‌ಆರ್‌ಎಸ್‌ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ವಯಸ್ಸು ಹದಿನೇಳು.
ಹಿಂದೆ ಮಕ್ಕಳ ಪ್ರತಿನಿಧಿಯಾಗಿ ಮಾತಿಗಿಳಿಯುತ್ತಿದ್ದ ಮಂಜುಳಾ ಈಗ ಮಕ್ಕಳ ಹಕ್ಕುಗಳ ಹೋರಾಟಗಾರ್ತಿಯಾಗಿ ಅಖಾಡಕ್ಕಿಳಿಯುತ್ತಾರೆ. ಮಂಜುಳಾ ಕೇವಲ ಹುಬ್ಬಳ್ಳಿ–ಧಾರವಾಡಕ್ಕೆ ಸೀಮಿತವಾಗಿಲ್ಲ, ಅವರ ಪ್ರತಿಭೆ ಸಮುದ್ರದಾಚೆಗೂ ಸಾಗಿದೆ. ಅಕ್ಟೋಬರ್‌ 10ರಂದು ಜಿನೀವಾದಲ್ಲಿ ನಡೆದ 66ನೇ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ವಿಚಾರ ಮಂಡಿಸಿದ್ದಾರೆ.
ಆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಮಂಜುಳಾ ಕನ್ನಡ ನುಡಿಯನ್ನು ಬಳಸಿದ್ದಾರೆ. ಎಂಟು ನಿಮಿಷದ ವಿಷಯ ಮಂಡನೆಯಲ್ಲಿ ಕರ್ನಾಟಕದ ವಿವಿಧ ಶೈಕ್ಷಣಿಕ ಯೋಜನೆಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಬಗ್ಗೆ ಹೇಳಿದಂತೆಯೇ ಕ್ಷೀರಭಾಗ್ಯ,  ಪೌಷ್ಟಿಕಾಂಶದ ಮಾತ್ರೆಗಳ ವಿತರಣೆ, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಇರುವ ಹಲವು ಯೋಜನೆಗಳ ಕುರಿತು ಚರ್ಚಿಸಿದ್ದಾರೆ. ಬಿಹಾರದಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸುನೀಗಿದ ಮಕ್ಕಳ ಕುರಿತೂ ಹೇಳಿದ್ದಾರೆ. ಇವೆಲ್ಲವುಗಳ ಜೊತೆಗೆ ಕಡ್ಡಾಯ ಶಿಕ್ಷಣ ಕಾಯ್ದೆಯಲ್ಲಿ ಉಚಿತ ಶಿಕ್ಷಣ ಪಡೆಯುವ ಮಕ್ಕಳ ವಯಸ್ಸನ್ನು 6ರಿಂದ 18ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಾಲ ಕಾರ್ಮಿಕರ ಕಾನೂನಿನಲ್ಲಿರುವ ‘ಬಾಲಕಾರ್ಮಿಕರು’ ಪದದ ಆರ್ಥವನ್ನು ‘ಅಪಾಯಕಾರಿ ಸ್ಥಳದಲ್ಲಿ ಕೆಲಸ ಮಾಡುವವರು ಮಾತ್ರ’ ಎಂಬ ವಾಖ್ಯೆಯನ್ನು  ‘ದುಡಿಯುವ ಮಕ್ಕಳು’ ಎಂದು ಬದಲಾಯಿಸಬೇಕು ಎಂಬ ಸಲಹೆ ಮಂಜುಳಾ ಅವರದ್ದು. ಹಾಗೆಯೇ ಬಾಲಾಪರಾಧಿ ಕಾನೂನಿನಲ್ಲಿ ‘ಬಾಲಾಪರಾಧಿ’ಗಳ ವಯಸ್ಸನ್ನು 18ಕ್ಕೆ ಏರಿಸುವ ಪ್ರಸ್ತಾಪಕ್ಕೂ ಅವರ ಬಲವಾದ ವಿರೋಧವಿದೆ.
ಹಸಿರು ಕಾನನದ ರಾಮಾಪುರ
ಧಾರವಾಡದಿಂದ 22 ಕಿ.ಮೀ ದೂರದಲ್ಲಿರುವ ರಾಮಾಪುರ ಕಾಡಿನ ನಡುವಣ ಹಳ್ಳಿ. ಇಲ್ಲಿಂದ ಧಾರವಾಡಕ್ಕೆ ಬರುವುದಕ್ಕೆ ಬೆಳಿಗ್ಗೆ 7.15ಕ್ಕೆ ಒಂದು ಬಸ್ ಇದೆ. ಇದನ್ನು ಬಿಟ್ಟರೆ 9.30ರವರೆಗೆ ಕಾಯಬೇಕು. ಮಂಜುಳಾ ಬೇಗನೆ ಎದ್ದು 7.15ರ ಬಸ್‌ ಹತ್ತಿ ಧಾರವಾಡಕ್ಕೆ ಬಂದು ಕಾಲೇಜು ಮತ್ತು ಮಕ್ಕಳ ಸಂಘದ ಚಟುವಟಿಕೆ ಮುಗಿಸಿಕೊಂಡು ಮನೆಗೆ ತೆರಳುವುದು ಸಂಜೆಗೆ. ರೈತ ಕುಟುಂಬದ ಮಂಜುಳಾಗೆ ಮನೆ ಕೆಲಸ, ಹೊಲಗೆಲಸವೂ ಗೊತ್ತು.
ಕಾಲೇಜಿನಿಂದ ಮನೆಗೆ ಬಂದ ನಂತರ ಎಮ್ಮೆ, ದನ ಕಟ್ಟುವುದು, ತಿಂಡಿ ಕೊಡುವುದು, ಮೇವು ಹಾಕುವ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ರಜೆಯ ದಿನಗಳಲ್ಲಿ ಜೋಳ ಬಿಡಿಸುವುದು, ಕಳೆ ಕೀಳುವ, ಗೊಬ್ಬರ ಹಾಕುವ ಕೆಲಸಗಳನ್ನೂ ಮಾಡುತ್ತಾರೆ. ತಂದೆ ಮಹಾಂತೇಶ ಬಸಪ್ಪ ಮುನವಳ್ಳಿ, ತಾಯಿ ಮಹಾದೇವಿ. ನೇತ್ರಾವತಿ, ಪ್ರತೀಕ್ಷಾ ಎಂಬ ಇಬ್ಬರು ತಂಗಿಯರು, ಬಸವರಾಜನೆಂಬ ತಮ್ಮ ಇರುವ ತುಂಬು ಕುಟುಂಬದಲ್ಲಿ ಮಂಜುಳಾರದ್ದೇ ಮೇಲುಗೈ. ಆಕೆ ಹೇಳುವ ಮಾತುಗಳಿಗೆ ಮನೆಯಲ್ಲೂ ಊರಿನಲ್ಲೂ ಒಂದು ಮಹತ್ವವಿದೆ.
ಮಂಜುಳಾ ಸಾರ್ವಜನಿಕವಾಗಿ ಮೊದಲು ಮಾತನಾಡಿದ್ದು ರಾಮಾಪುರ ಗ್ರಾಮ ಪಂಚಾಯಿತಿಯ ‘ಮಕ್ಕಳ ಗ್ರಾಮ ಸಭೆ’ಯಲ್ಲಿ. 2005ರಿಂದ ಅವರು ಮಕ್ಕಳ ಗ್ರಾಮಸಭೆಯ ಪ್ರತಿನಿಧಿ. ಪಂಚಾಯಿತಿ ವ್ಯಾಪ್ತಿಯ ಮಕ್ಕಳನ್ನು ಒಂದೆಡೆ ಸೇರಿಸಿ ಗ್ರಾಮದ ಹಾಗೂ ಶಾಲೆಗಳ ಸಮಸ್ಯೆಗಳ ಸದಸ್ಯರು ಹಾಗೂ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣವಾಗಬೇಕು ಎಂಬುದನ್ನು ಮುಖ್ಯವಾಗಿ ಚರ್ಚಿಸುತ್ತಿದ್ದರು. ಇತರೆ ಶಾಲಾ ಮಕ್ಕಳು ಅಧಿಕಾರಿಗಳನ್ನು ಪ್ರಶ್ನೆ ಕೇಳುವಂತೆ ಪ್ರೇರೇಪಿಸುವ ಕೆಲಸ ಮಾಡುತ್ತಿದ್ದರು. ಇದು ಅವರ ಸಂಘಟನಾ ಚಾತುರ್ಯದ ಬೆಳವಣಿಗೆಗೆ ಕಾರಣವಾಯಿತು.
ಈ ಎಲ್ಲಾ ಚಟುವಟಿಕೆಗಳು ಅವರ ಪಠ್ಯ ಸಂಬಂಧಿ ಸಾಧನೆಗಳನ್ನೇನೂ ಮುಕ್ಕಾಗಿಸಲಿಲ್ಲ. ಅಲ್ಲಿಯೂ ಅವರು ಯಶಸ್ಸಿನ ಹಾದಿಯಲ್ಲೇ ಇದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಆಶುಭಾಷಣ ಸ್ಪರ್ಧೆ, ಗಾದೆ ಹೇಳುವ ಸ್ಪರ್ಧೆ, ವಚನ ಸ್ಪರ್ಧೆಯಲ್ಲಿ ಹಲವು ಬಹುಮಾನ ಗಳಿಸಿದ್ದಾರೆ. ಯಾವುದೇ ವಿಷಯ ಕೊಟ್ಟರೂ ಅರಳು ಹುರಿದಂತೆ ಮಾತನಾಡುತ್ತಿದ್ದ ಮಂಜುಳಾ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ರಾಮಾಪುರದಲ್ಲೇ ಮುಗಿಸಿದ ಮಂಜುಳಾ ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಸಮೀಪದ ವೀರಾಪುರದಲ್ಲಿ ಪೂರೈಸಿದರು.
ಗುಬ್ಬಚ್ಚಿ ಮಕ್ಕಳ ಸಂಘ
ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿ ಸೇವಾ ಸಂಸ್ಥೆ, ಗುಲಾಬಿ ಮಕ್ಕಳ ಸಂಘದ ಪ್ರತಿನಿಧಿ ಹುದ್ದೆ ಸೇರಿದಂತೆ ರಾಜ್ಯದ ಹಲವು ಮಕ್ಕಳ ಸಂಘಗಳ ಪ್ರತಿನಿಧಿಯಾಗಿ ಮಂಜುಳಾ ಕಾರ್ಯ ನಿರ್ವಹಿಸುತ್ತಿದ್ದಾರೆ. 2008ರಲ್ಲಿ ಗುಬ್ಬಚ್ಚಿ ಮಕ್ಕಳ ಮಹಾಸಂಘದ ಉಪಾಧ್ಯಕ್ಷೆಯಾಗಿ ನೇಮಕಗೊಂಡ ಮೇಲೆ ಉತ್ತರ ಕರ್ನಾಟಕದಲ್ಲಿ ಮಂಜುಳಾ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ. ಧಾರವಾಡ ಜಿಲ್ಲೆಯ 10 ಗ್ರಾಮಗಳಲ್ಲಿ ಸೈಕಲ್‌ ಸಂಚಾರ ಮಾಡಿ, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ ಪರಿಸರ ಸಂರಕ್ಷಣೆಯ ಕರಪತ್ರ ಹಂಚುವುದು, ಭಿತ್ತಿ ಪತ್ರಗಳ ಪ್ರದರ್ಶನ, ಮಕ್ಕಳನ್ನು ಶಾಲೆಗೆ ಕರೆತರುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಭಾಗವಹಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಅಭ್ಯರ್ಥಿಗಳನ್ನು ಸಂವಾದಕ್ಕೆ ಆಹ್ವಾನಿಸಿ ಮಕ್ಕಳ ಹಕ್ಕುಗಳ ಕುರಿತು ಅವರೊಂದಿಗೆ ಚರ್ಚಿಸಿ ಗಮನಸೆಳೆದಿದ್ದಾರೆ. ಸಾಮೂಹಿಕ ವಿವಾಹ ನಡೆಯುವ ಸ್ಥಳಗಳಿಗೆ ತೆರಳಿ ಬಾಲ್ಯ ವಿವಾಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ತಮ್ಮ ಗುಬ್ಬಚ್ಚಿ ಸಂಘದ ಮೂಲಕ ಮಾಡುತ್ತಿದ್ದಾರೆ.
ಮಕ್ಕಳ ಹಕ್ಕುಗಳ ವರದಿ
ಜಿನೀವಾ ಮಕ್ಕಳ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಮಂಜುಳಾಗೆ ದೊರೆಯಲು ಕೇವಲ ಚರ್ಚಾಸ್ಪರ್ಧೆ, ಮಕ್ಕಳ ಪರ ಚಟುವಟಿಕೆಗಳು ಮಾತ್ರ ಕಾರಣವಲ್ಲ. ಕರ್ನಾಟಕದ ಮಕ್ಕಳ ಸ್ಥಿತಿಗತಿಯ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸುವ ರಾಜ್ಯಮಟ್ಟದ ಸ್ಪರ್ಧೆಯೊಂದು ನಡೆಯಿತು. ಇದರಲ್ಲಿ 300 ಮಕ್ಕಳು ಭಾಗವಹಿಸಿದ್ದರು. ಇವರಲ್ಲಿ ಮಂಜಳಾ ಹಾಗೂ ಮೈಸೂರು ಮತ್ತು ದಕ್ಷಿಣ ಕನ್ನಡದಿಂದ ಮೂವರನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆರಿಸಲಾಯಿತು. ನಂತರ ನಡೆದ ‘ಆಲ್ಟರ್ನೇಟಿವ್‌ ಚೈಲ್ಡ್  ರಿಪೋರ್ಟ್‌’ ತಯಾರಿಸುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಮಂಜುಳಾ ಸೇರಿ 9 ಮಕ್ಕಳು ಆಯ್ಕೆಯಾದರು. ನಂತರ ಇನ್ನೊಂದು ಪರಿಷ್ಕೃತ ರಾಷ್ಟ್ರಮಟ್ಟದ ಸ್ಪರ್ಧೆ ನಡೆಸಲಾಯಿತು. ಅದರಲ್ಲಿ ಕರ್ನಾಟಕದ ಮಂಜುಳಾ ಮತ್ತು ಗುಜರಾತ್‌ನ ಅಪ್ಸಾನ ಆಯ್ಕೆಯಾಗಿ ಜಿನೀವಾ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದರು.
ಕಾನೂನು ಕಲಿಯುವ ಗುರಿ
ಮಂಜುಳಾರ ಮಾತುಗಳನ್ನು ಕೇಳಿಸಿಕೊಂಡವರೆಲ್ಲರೂ ಆಕೆಗೆ ನಾಗರಿಕ ಸೇವೆಗಳಿಗೆ ಸೇರುವ ಸಲಹೆ ಮಾಡುತ್ತಾರೆ. ಆದರೆ ಆಕೆಯ ಮನಸ್ಸಿನಲ್ಲಿರುವುದೇ ಬೇರೆ. ‘ಐಎಎಸ್‌ ಮಾಡಿ ಅಧಿಕಾರಿಯಾದರೆ ಹೋರಾಟಗಾರ್ತಿಯಾಗಿ ಅಖಾಡಕ್ಕಿಳಿಯಲು ಸಾಧ್ಯವಿಲ್ಲ. ಮಕ್ಕಳ ಹಕ್ಕುಗಳಿಗಾಗಿ ಹೋರಾಡುವುದೇ ನನ್ನ ಗುರಿ. ಅದಕ್ಕಾಗಿ ಕಾನೂನು ಅಧ್ಯಯನ ಮಾಡುತ್ತೇನೆ. ಪಿಯುಸಿ ಮುಗಿಯುತ್ತಲೇ ಕಾನೂನು ಶಿಕ್ಷಣಕ್ಕೆ ಸೇರುತ್ತೇನೆ’ ಎನ್ನುತ್ತಾರೆ ಮಂಜುಳಾ.
ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಮಂಜುಳಾ ಮನೋಭಾವವೂ ಬದಲಾಗಿದೆ. ಇಷ್ಟು ದಿನ ಮಕ್ಕಳ ಜೊತೆ ಮಗುವಾಗಿರುತ್ತಿದ್ದ ಮಂಜುಳಾ, ಮಕ್ಕಳ ಜೊತೆ ಹೋರಾಟಗಾರ್ತಿಯಾಗಿರುವ ನಿರ್ಧಾರ ಮಾಡಿದ್ದಾರೆ. ಮಂಜುಳಾ ದೊಡ್ಡ ದೊಡ್ಡ ಮಾತುಗಳನ್ನಾಡಿದರೂ, ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದರೂ ಅವರ ವಯೋ ಸಹಜ ಮುಗ್ಧತೆ ಅಳಿಸಿಲ್ಲ. ಕಾನೂನುಗಳ ಬಗ್ಗೆ ಮಾತನಾಡಿದರೂ ಐಸ್‌ಕ್ರೀಂ ಮೇಲಿನ ಪ್ರೀತಿ ಹೋಗಿಲ್ಲ.
ಪ್ರಜ್ವಲ್‌ ದೇವರಾಜ್‌ ಅಭಿನಯದ ಚಿತ್ರಗಳೆಂದರೆ ಅವರಿಗಿಷ್ಟ. ನಟಿ ಐಂದ್ರಿತಾ ರೇ ಅಂದರೆ ಮಂಜುಳಾ ಕಣ್ಣು ಕೆಂಪಾಗುತ್ತವೆ. ‘ಅಮ್ಮಾ ನಿನ್ನ ಎದೆಯಾಳದಿಂದ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು’ ಅವರ ಇಷ್ಟವಾದ ಹಾಡು.