
ಡಾನ್ಸ್ ಇಂಡಿಯಾ ಡಾನ್ಸ್
ಅವನು ವೇದಿಕೆಯ ಮೇಲೆ ಹೆಜ್ಜೆ ಇಟ್ಟರೆ ನೋಡುಗನ ಹೃದಯ ಹಿಡಿಯಾಗುತ್ತದೆ. ಅವನು ಅಲ್ಲಿ ಅಲುಗಿದರೆ ಸಾಕು, ಇಲ್ಲಿ ಉಸಿರು ಕಟ್ಟಿಕೊಂಡು ಕಣ್ಣುಗಳು ಕೆಂಪೇರುಸತ್ತವೆ. ಅವನು ತನ್ನ ಪುಟ್ಟ ದೇಹವನ್ನು ರಂಗದ ಮೇಲೆ ತೆರದುಕೊಂಡಾಗ ಸಭಾಂಗಣವಿಡೀ ಶಾಂತಿ ಮಂತ್ರ. ಮೇಲಿಂದ ಸಣ್ಣಗೆ ಸುಳಿಯುವ ಬಣ್ಣದ ಬೆಳಕಿಗೆ ಅವನು ಜೋಡಿಯಾದಾಗ ಅಲ್ಲಿ ಓಕುಳಿಯಾಟ. ಅವನು ಸುತ್ತಲೂ ಸುತ್ತಿಕೊಳ್ಳುತ್ತಿರುವ ಹಾಡಿನ ಅಬ್ಬರವನ್ನು ಮೀಟಿ ಮೇಲೇಳುತ್ತಾನೆ.ನಿ ಧಾನವಾಗಿ ಆರಂಭವಾಗುವ ಅವನ ಆಟ ಹೋಗುತ್ತಾ ಹೋಗುತ್ತಾ ದೊಡ್ಡಾಟವಾಗುತ್ತದೆ........!
ಒಮ್ಮೆ ಸಮರ ಕಲೆ. ಇನ್ನೊಮ್ಮೆ ಥಾ ದಿಮಿ ಥಾ. ಒಮ್ಮೆಮ್ಮೆ ಕುಚುಪುಡಿ ಕಿಚಡಿ, ಅಲ್ಲಲ್ಲಿ ಬ್ಯಾಲೆಯ ಬೊಂಬಾಟ್. ಒಂದಷ್ಟು ಬ್ರೇಕ್ ಬ್ಯಾಕಪ್, ಅಷ್ಟಿಷ್ಟು ರಾಕ್.......ಈ ಕುಣಿತಗಳ ನಡುವೆ ಕಳೆದು ಹೋಗುತ್ತಾನೆ. ಕಣಿಯುತ್ತಾ ಕುಣಿಯುತ್ತಾ ಕಣ್ಣಲ್ಲಿ ಅದ್ಭುತ ಶಕ್ತಿ ತೋರುತ್ತಾರೆ. ಅವನಿಗೆ ಸುಸ್ತಾಗುವುದಿಲ್ಲ, ನೋಡುವವರನ್ನು ಸುಸ್ತು ಹೊಡೆಸುತ್ತಾನೆ. ಅವನೊಬ್ಬ ಮಾತ್ರ ಕುಣಿಯುವುದಿಲ್ಲ, ನೋಡುವವರನ್ನೂ ಕುಣಿಸುತ್ತಾನೆ. ಕಡೆಗೆ ‘ಡಾನ್ಸ್ ಇಂಡಿಯಾ ಡಾನ್ಸ್’ ಅನ್ನುತ್ತಾನೆ!
ಅವನ ಹೆಸರು ಕಮಲೇಶ್ ಪಟೇಲ್. ಅವನಿಗೆ ಎರಡು ಕಾಲಿಲ್ಲ. ಅವನ ಕುಣಿತಕ್ಕೆ ಕಾಲು ಬೇಕಾಗೇ ಇಲ್ಲ. ಅವನು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವುದಿಲ್ಲ, ಮನಸ್ಸಿನ ಲಜ್ಜೆ ಬಿಟ್ಟು ಕುಣಿಯುತ್ತಾನೆ.
ಕಮಲೇಶ್ ಬರೋಡಾದ ಹೆಮ್ಮೆ. ಅವನು ಹುಟ್ಟು ಅಂಗವಿಕಲನಲ್ಲ. ಯಾವನೋ ವೈದ್ಯ ಮಾಡಿದ ತಪ್ಪಿಗೆ ಅವನ ಎರಡೂ ಕಾಲು ಕಳೆದುಕೊಂಡ. ಅಲ್ಲಿಗೆ ಕಮಲೇಶ್ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ. ಮನಸ್ಸನ್ನೇ ಕಾಲು ಮಾಡಿಕೊಂಡ. ಐದನೇ ವಯಸ್ಸಿನಿಂದ ಕುಣಿಯಲು ಆರಂಭಿಸಿದ ಕಮಲೇಶನ ಹೃದಯ ಕುಣಿಯುತ್ತಲೇ ಇದೆ. ಒಂದೂವರೆ ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಅವನು ಹಲವು ದಾಖಲೆ ನಿರ್ಮಾಣ ಮಾಡಿದ್ದಾನೆ.
ಅವನ ಸೂಪರ್ ಡಾನ್ಸ್ ಸಾಗರದಾಚೆಗೂ ಸಾಗಿದೆ. ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋ ‘ಡಾನ್ಸ್ ಇಂಡಿಯಾ ಡಾನ್ಸ್’ ನಲ್ಲಿ ಇಡೀ ದೇಶವನ್ನು ಬೆರಗು ಮಾಡಿಡಿ ‘ಸ್ಟಾರ್’ ಪಟ್ಟ ಕಟ್ಟಿಕೊಂಡಿದ್ದಾನೆ. ಕಮಲೇಶ್ ಚಿಕ್ಕವನಿರುವಾಗ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್ ಅವನ ಬದುಕನ್ನೇ ಬದಲಾಯಿಸಿತು. ಚುಚ್ಚುಮದ್ದು ಕೊಟ್ಟ ದಿನದಿಂದ ಬಿದ್ದು ಹೋದ ಅವನ ಕಾಲುಗಳು ಮತ್ತೆಂದೂ ಮೇಲೇಳಲೇ ಇಲ್ಲ. ಅವನು ತಂದೆ ತಾಯಿ ಮಗನ ಕಾಲಿಗಾಗಿ ಇಡೀ ದೇಶದ ಆಸ್ಪತ್ರೆಗಳನ್ನು ಸುತ್ತಿದ್ದಾರೆ. ಆದರೆ ಕಾಲು ಬರಲಿಲ್ಲ. ಕಾಮರ್ಸ್ನಲ್ಲಿ ಡಿಗ್ರಿ ಕಂಪ್ಲೀಟ್ ಮಾಡಿರುವ ಕಮಲೇಶ್, ಕಾಲಿನ ಮೇಲಿನ ಆಸೆ ಬಿಟ್ಟು ಬಹುದೊಡ್ಡ ಡಾನ್ಸರ್ ಆಗುವ ಕನಸಿನ ಜೊತೆ ಕಾಲ ಕಳೆಯುತ್ತಿದ್ದಾನೆ.
ಅಂಧರ ಬಾಳಿನ ಬೆಳಕು
ಮುಂಬೈ ಮಹಾನಗರದ ಬಾಂದ್ರಾ ರೈಲು ನಿಲ್ದಾಣ ಪ್ರತಿ ಬೋಗಿಗಳಿಗೂ ರಾಜೀಂದರ್ ಸಿಂಗ್ ಗೊತ್ತು. ಮುಂಜಾನೆ ಒಂಬತ್ತು ಗಂಟೆಯಲ್ಲಿ ಅಲ್ಲೊಂದು ಮಿಂಚಿನ ಸಂಚಾರ. ಕಣ್ಣಿಗೆ ಕಪ್ಪನೆಯ ಕನ್ನಡಕ. ಕೈಯ್ಯಲ್ಲೊಂದು ವಾಕಿಂಗ್ ಸ್ಟಿಕ್. ಸದಾ ನಗುಮುಖದ ರಾಜೀಂದರ್ಗೆ ಒಂದೇ ಒಂದು ಸ್ಪರ್ಷ ಸಾಕು, ಅವರು ಯಾರೆಂದು ಹೇಳಲಿಕ್ಕೆ.
ಅವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ಎರಡು ಕಿವಿಗಳು ಕೇಳಿಸುವುದಿಲ್ಲ. ಅವರನ್ನು ಕಂಡವರು ಅವರನ್ನು ಸ್ಪರ್ಷಿಸಿದರೆ ಸಾಕು.....ಅರೇ ಭೈ ಕೈಸೇ ಹೋ......ಎಂದು ನಗುತ್ತಾ ಮಾತನಾಡಿಸುತ್ತಾರೆ. ನಮ್ಮಾಳಗಿರುವ ಕೋಟಿ ಕೋಟಿ ಅಂಧರ ನಡುವೆ ಅವರೂ ಒಬ್ಬ. ಆದರೆ ಅವರು ಕೋಟಿಗೊಬ್ಬ. ಜಗತ್ತಿನಾದ್ಯಂತ ಇರುವ ಅಂಧರ ಬಾಳಿನ ಬೆಳಕು ಅವರು. ಅಂಧರಿಗೆ ಬೆಳಕಾಗಿರುವ ಬ್ರೈಲ್ ಲಿಪಿಗೆ ಹೊಸ ಭಾಷ್ಯ ಬರೆದವರೇ ರಾಜೀಂದರ್ ಸಿಂಗ್.
58 ವರ್ಷ ವಯಸ್ಸು. ಮುಂಬೈನ ‘ಅಸೋಸಿಯೇಷನ್ ಆಪ್ ಬ್ಲೈಂಡ್’ (ಎನ್ಎಬಿ) ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿದ್ದ ಇವರು ಈಗ ಅದೇ ಸಂಸ್ಥೆಗೆ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲ ಬ್ರೈಲ್ ಲಿಪಿಯ ಬಗ್ಗೆ ಅವರ ಸಂಶೋಧನೆ ಪ್ರತಿನಿತ್ಯ ಸಾಗುತ್ತಿದೆ. ಬ್ರೈಲ್ ಲಿಪಿ ವಿದೇಶಿ ಸಂಶೋಧನೆಯಾದರೂ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವರು ರಾಜೀಂದರ್ ಸಿಂಗ್. ಬ್ರೈಲ್ ಲಿಪಿಯ ಬಗ್ಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಅಲ್ಲಿ ರಾಜೀಂದರ್ ಸಿಂಗ್ ಇರುತ್ತಾರೆ. ಬ್ರೈಲ್ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಟುವರ್ಡ್ಸ್ ಲೈಟ್‘ ಬ್ರೈಲ್ ಮ್ಯಾಗಜಿನ್ಗೆ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ‘ಮಟಿಲ್ಡಾ’ ಎನ್ನುವ ಅಂತಾರಾಷ್ಟ್ರೀಯ ಮ್ಯಾಗಜಿನ್ಗೂ ರಾಜಿಂದರ್ ಸಂಪಾದಕರು. ರಾಜೀಂದರ್ ಸಾಧನೆಗೆ ಹಲವು ಗೌರವ ಮನ್ನಣೆಗಳು ಅವರನ್ನು ಹುಡುಕಿಕೊಂಡು ಬಂದಿವೆ. ಎರಡು ಡಾಕ್ಟರೇಟ್ಗಳು. ಅವರ ಮುಡಿಯಲ್ಲಿವೆ. ‘ಅಂದರ ಡಾಕ್ಟರ್’ ಸೇರಿದಂತೆ ನೂರಾರು ಬಿರುದುಗಳು ಅವರ ಹೆಸರಿನಲ್ಲಿವೆ. ರಾಜೀಂದರ್ ಅವರ ಪ್ರಮುಖ ಸಾಧನೆಯೆಂದರೆ ಪ್ರತೀವರ್ಷ ಮುಂಬೈನಲ್ಲಿ ಏರ್ಪಡಿಸುವ ‘ಹಾರ್ಮೊನಿ’ ಅಂಧರ ಮ್ಯಾರಥಾನ್. ಈ ಭಾವೈಕ್ಯ ಓಟದಲ್ಲಿ ಹಲವು ದೇಶಗಳ ಅಂಧ ಮ್ಯಾರಥಾನ್ ಪಟುಗಳು ಪಾಲ್ಗೊಳ್ಳುತ್ತಾರೆ.
ರಾಜಿಂದರ್ ಹುಟ್ಟಿದ್ದು ಪಾಕಿಸ್ಥಾನದ ಪೆಷಾವರ್. ಭಾರತ- ಪಾಕಿಸ್ಥಾನ ನಡುವೆ ಇಬ್ಬಾಗವಾದಾಗ ರಾಜೀಂದರ್ ಕುಟುಂಬ ಭಾರತ ಸೇರಿಕೊಂಡಿತು. ಪಾಕಿಸ್ಥಾನ ಬಿಟ್ಟ ಮೇಲೆ ಅವರು ಪಾಕ್ನ ಸಂಬಂಧವನ್ನು ಕಡಿದುಕೊಳ್ಳಲಿಲ್ಲ. ಅಲ್ಲಿಯೂ ರಾಜಿಂದರ್ ಅವರ ಅಂಧರ ಶಾಲೆಯಿದೆ.
ಡಬಲ್ ಧಮಾಕಾ
ಕಾನ್ಪುರದ ಬೀಚ್ಗೆ ತೆರಳುವುವಾಗ ದಶರಥ್ ಮೀನಿನ ಅಂಗಡಿಯನ್ನು ಯಾರೂ ಮಿಸ್ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಅಲ್ಲೊಂದು ಕೂತೂಹಲ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ದಪ್ಪ ಮೀಸೆಯ ದಶರಥ್ ಈ ಮೀನು ಅಂಗಡಿಯ ಮಾಲೀಕ. ಅವನು ಅಂಗಡಿಯ ಮುಂದೆ ಒಂದು ಶೋ ಮಾಡುತ್ತಾನೆ. ಅದು ‘ಮೀನು ಮತ್ತು ಗಾಜು’ ಪ್ರದರ್ಶನ. ಮೀನು ಕತ್ತರಿಸುತ್ತಾನೆ, ಗಾಜು ಗಾಜು ತಿನ್ನುತ್ತಾನೆ!
ಹೌದು, ಅವನಿಗೆ ತಿಂಡಿ ಊಟಕ್ಕೆಲ್ಲಾ ಗಾಜು ಬೇಕೇ ಬೇಕು. ಬೀಚ್ಗೆ ಬಂದ ಪ್ರವಾಸಿಗರು ಬಾಟಲಿ ಕೊಟ್ಟು ತಮಾಷೆ ನೋಡುತ್ತಾರೆ. ಇವನ ಗಾಜು ತಿನ್ನುವ ಸಾಧನೆ ಕಂಡು ಕೆಲವರು ಹಣವನ್ನೂ ಕೊಡುತ್ತಾರೆ.
ತಮಾಷೆಯೆಂದರೆ, ಅವನಿಗೆ ಮೊದಲು ಗಾಜು ತಿನ್ನುವ ಅಭ್ಯಾಸ ಇರಲಿಲ್ಲ. ಅವನು ಇಪ್ಪತ್ತು ವರ್ಷದ ಹುಡುಗನಾಗಿದ್ದಾಗ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ. ಸಾಯಬೇಕು ಎಂದು ಎರಡು ಬಾಟಲಿಯ ಗಾಜನ್ನು ಪುಡಿ ಮಾಡಿಕೊಂಡು ತಿಂದ. ಆದರೆ ಅವನು ಸಾಯಲಿಲ್ಲ, ಅದೇನು ರುಚಿ ಹತ್ತಿತೋ ಏನೋ ಅಂದಿನಿಂದ ಅವನ ಊಟ ಗಾಜು ಆಗಿಹೋಯಿತು. ಅವನು ಅಲ್ಲಿ ‘ಗ್ಲಾಸ್ಮ್ಯಾನ್’ ಎಂದೇ ಪ್ರಸಿದ್ಧಿ. ಕಾನ್ಪುರ್ ಬೀಚ್ಗೆ ಹೋದರೆ ಗ್ಲಾಸ್ಮ್ಯಾನ್ ಖಂಡಿತಾ ಸಿಗುತ್ತಾನೆ. ಇದೊಂಥರಾ ಡಬಲ್ ಧಮಾಕಾ.
No comments:
Post a Comment