

'ಕೃಪಾಕರ ಸೇನಾನಿ' ಎಂಬ ಒಂದು ಜೀವ ಎರಡು ದೇಹ
ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಬಿಜಿನೆಸ್ ಓದಿಕೊಂಡ ಆತ ಎಂದೂ ಬಿಜಿನೆಸ್ ಮಾಡಲಿಲ್ಲ. ಅದೇ ಮೈಸೂರಿನ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದಲ್ಲಿ ಸಿವಿಲ್ ಕಲಿತುಕೊಂಡ ಈತ ಒಂದು ಮನೆಯನ್ನೂ ಕಟ್ಟಲಿಲ್ಲ. ಅವರಿಬ್ಬರು ಕಾಲೇಜು ಒಳಗಿನ ಲಾಬೋರೋಟರಿಯ ಫಾರ್ಮುಲಾಗಳ ಜೊತೆ ಕಲಿತದ್ದು ಕಮ್ಮಿ. ಅವರ ಲ್ಯಾಬ್ ಏನಿದ್ದರೂ ಕಾಡು, ಮೇಡು. ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು, ಜಾತಕ ಪಕ್ಷಿಯಂತೆ ಹಕ್ಕಿಯ ಹಿಂದಿಕ್ಕಿ ಅದರ ಜೊತೆ ಹಾರುವುದೇ ಅವರ ಹವ್ಯಾಸ, ಸಾಹಸ, ಸಂತೋಷ. ಹಾರಲು ಅವರಿಗೇನೂ ಹಕ್ಕಿಯಂತೆ ರೆಕ್ಕೆಯಿಲ್ಲ. ಹಾರುವುದು ಅವರ ಕಣ್ಣು. ಅವರ ಕಣ್ಣೂ ಅಲ್ಲ. ಅದಕ್ಕಿಂತಲೂ ಹೆಚ್ಚು. ಅವರ ಕ್ಯಾಮರಾ ಕಣ್ಣು!
ಅವರೇ ಕೃಪಾಕರ ಮತ್ತು ಸೇನಾನಿ. ವಿಶ್ವಕಂಡ ಈ ಶ್ರೇಷ್ಠ ಇಬ್ಬರು ವನ್ಯಜೀವಿ ಛಾಯಾಗ್ರಾಹಕರನ್ನು ಎಷ್ಟೋ ಮಂದಿ ಇವರು ಒಬ್ಬನೇ ವ್ಯಕ್ತಿ ಅಂದುಕೊಂಡವರೂ ಇದ್ದಾರೆ. ನಿಜ, ಅದು ಒಂದು ದೇಹ ಎರಡು ಜೀವ. ಹಗಲಿರುಳೆನ್ನದೆ ಕಾಡು ಮೇಡು ಅಲೆದು ಅರಣ್ಯ ಜೀವಿಗಳ ಜೀವನದ ಅತೀ ಅಪರೂಪದ ಛಾಯಾಚಿತ್ರಗಳನ್ನು ಸೆರೆಹಿಡಿದು ಕೊಟ್ಟ ಅವರ ಕಾರ್ಯ ವಿಶ್ವವನ್ನು ಬರಸೆಳೆದುಕೊಂಡಿದೆ. ಅವರಿಬ್ಬರ ಕಾರ್ಯದಲ್ಲಿ ಅಖಂಡತ್ವವಿದೆ. ಯಾವ ಶೋಗಳಲ್ಲೂ ಅವರು ಬೇರೆ ಬೇರೆಯಾಗಿ ಛಾಯಚಿತ್ರ ಪ್ರದರ್ಶಿಸಿಲ್ಲ. ಒಬ್ಬಂಟಿಯಾಗಿ ಎಲ್ಲೂ ಪ್ರತಿನಿಧಿಸಿಲ್ಲ. ಅವರಿಬ್ಬರೂ ಒಟ್ಟಾಗಿ ಏಕತೆಯ ಸೌಧ ಕಟ್ಟಿದ್ದಾರೆ!
ಕೃಪಾಕರ ಸೇನಾನಿಯವರ ‘ವೈಲ್ಡ್ ಡಾಗ್ ಡೈರೀಸ್’ ಸಿನೇಮಾ ಯಾರಿಗೆ ತಾನೆ ಗೊತ್ತಿಲ್ಲ? ನ್ಯಾಷನಲ್ ಜಿಯಾಗ್ರಫಿಕ್, ಡಿಸ್ಕವರಿ ಚಾನೆಲ್ ನೋಡುಗರಿಗೆ ಈ ಚಿತ್ರ ಚಿರಪರಿಚತ. ಇದನ್ನು ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ನಲ್ಲಿ ನೂರಾರು ಬಾರಿ ಹಾಕಿದ್ದಾರೆ. ಅಷ್ಟೇ ಅಲ್ಲ ಇದು ಜರ್ಮನಿ ಮತ್ತು ಫ್ರಾನ್ಸ್ನ ಪ್ರತಿಷ್ಠಿತ ಎಆರ್ಟಿಇ ಚಾನೆಲ್ನಲ್ಲೂ ಪ್ರದರ್ಶನಗೊಂಡಿದೆ. ಇದಕ್ಕೆ ನೂರಾರು ಪ್ರಶಸ್ತಿಗಳು ಕೂಡ ಸಂದಿವೆ. ಫ್ರಾನ್ಸ್ನ ಬೆಸ್ಟ್ ಡಾಕ್ಯುಮೆಂಟರಿ ಅವಾರ್ಡ್, ಜಪಾನ್ನ ಬೆಸ್ಟ್ ಆಫ್ ಫೆಸ್ಟಿವಲ್ ಗ್ರಾಂಡ್ ಅವಾರ್ಡ್, ಇಂಗ್ಲೆಂಡಿನ ಪ್ಯಾಂಡಾ ಪ್ರಶಸ್ತಿ(ನಾಮಕರಣ), ಸಿಂಗಪೂರ್ನ ಏಶಿಯನ್ ಟೆಲಿವಿಷನ್ ಅವಾರ್ಡ್ ಪ್ರಮುಖವಾದವು. ‘ವೈಲ್ಡ್ ಡಾಗ್ ಡೈರೀಸ್’ ಕೃಪಾಕರ ಸೇನಾನಿ ಅವರ ಮಾಸ್ಟರ್ ಫೀಸ್. ಅವರ ಛಾಯಾಚಿತ್ರಗಳು ಮ್ಯಾಗಜಿನ್ಗಳಾದ ಜಿಯೋ, ಲಂಡನ್ ಟೈಮ್ಸ್, ಬಿಬಿಸಿ ವೈಲ್ಸ್ ಲೈಪ್, ನೇಚರ್ ಮುಂತಾದವುಗಳಲ್ಲಿ ಪ್ರಕಟಗೊಂಡಿದ್ದು ವಿಶ್ವ ಪ್ರಸಿದ್ಧಿ ಪಡೆದಿವೆ. ಕೃಪಾಕರ ಸೇನಾನಿ ಸಾಹಿತಿಗಳೂ ಕೂಡ ಹೌದು. ಅವರ ‘ಜೀವ ಜಾಲ’ ಕನ್ನಡ ಪುಸ್ತಕ ಪ್ರಾಣಿಗಳ ಜೀವನವನ್ನು ಬಿಡಿಸಿಟ್ಟಿದೆ. ಇದಕ್ಕೆ 1999ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 2006ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಮುಡಿಗೇರಿದೆ.
ಕೃಪಾಕರ ಸೇನಾನಿ ಅವರು ತಮ ತಮ್ಮ ಡಿಗ್ರಿಗಳನ್ನು ತೆಗೆದು ಪಕ್ಕಕ್ಕಿಟ್ಟು ತಮ್ಮ ಕ್ಯಾಮರಾಗಳನ್ನು ಪ್ರೀತಿಯಿಂದ ಹಚ್ಚಿಕೊಂಡವರು. ಏನಿಲ್ಲದಿದ್ದರೂ ಬ್ಯಾಗಿನಲ್ಲಿ ಕ್ಯಾಮರಾ ಇದ್ದೇ ಇರಬೇಕು. ಅಪರೂಪದ ಪ್ರಾಣಿ ಪಕ್ಷಿಗಳನ್ನು ಕಂಡೊಡನೆ ಕ್ಲಿಕ್ಕಿಸುವುದು ಇವರ ಹವ್ಯಾಸವಾಗಿತ್ತು. ಬರಬರುತ್ತಾ ಹವ್ಯಾಸ ಕಾಡಿನಷ್ಟೇ ದಟ್ಟವಾಗತೊಡಗಿತು. ನಂತರ ಹವ್ಯಾಸವೇ ವೃತ್ತಿ, ಪ್ರವೃತ್ತಿ ಎಲ್ಲವೂ ಆಯಿತು. ಆರಂಭದಲ್ಲಿ ಅವರು ಬೆಳೆಕಿಗೆ ಬಂದದ್ದು ಪತ್ರಿಕೆಗಳ ಮೂಲಕ. ಹಲವು ಪತ್ರಿಕೆಗಳಲ್ಲಿ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಅರಣ್ಯ ಜೀವಿಗಳನ್ನು ಕುರಿತಂತೆ ನೂರಾರು ಚಿತ್ರ- ಲೇಖನ ಬರೆದಿದ್ದಾರೆ. ಆ ನಂತರ ತಮಿಳುನಾಡಿನ ಮದುಬಲೈ ಪ್ರಾಣಿ ಸಂಗ್ರಹಾಲಯದಲ್ಲಿ ಮಾಡಿದ ಅಪರೂಪದ ಕೆಲಸದಿಂದ ಜಗತ್ತಿಗೆ ಪರಿಚಯವಾದರು.
ಕೃಪಾಕರ ಸೇನಾನಿ ಅವರು ಕಾರ್ಯ ಒಂದು ಚಳವಳಿಯಾಗಿಯೂ ಮಾರ್ಪಟ್ಟಿದೆ. ಅವರ ‘ನಮ್ಮ ಸಂಘ’ ಸಂಘಟನೆಯ ಮೂಲಕ ವನ್ಯಜೀವಿಗಳ ರಕ್ಷಣೆಯ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಣಿಗಳ ಹಕ್ಕುಗಳ ಬಗ್ಗೆ ಕೃಪಾಕರ ಸೇನಾನಿ ಅವರಿಗಿರುವ ಕಾಳಜಿ ಅವರ ಪ್ರಾಣಿ ಪ್ರೀತಿಯನ್ನು ಎತ್ತಿ ಹಿಡಿದಿದೆ.
ಗೋ, ಕಿಸ್ ದ ವರ್ಲ್ಡ್!
ಅವನು ಹತ್ತನೇ ಇಯತ್ತಿಗೆ ಹತ್ತಿದಾಗಲೇ ಅಪ್ಪನೊಂದಿಗೆ ಒಂದು ಕರಾರು ಕುದುರಿಸಿಕೊಂಡಿದ್ದ. ಆ ಹದಿನಾಲ್ಕರ ಪೋರನಿಗೆ ಸೈಕಲ್ ಮೇಲೆ ಎಲ್ಲಿಲ್ಲದ ಪ್ರೇಮ. ವರಿಸ್ಸಾದ ಕಾಡಿನ ನಡುವೆ ಇದ್ದ ಆ ಬುಡಕಟ್ಟು ಶಾಲೆಗೆ ಸೈಕಲ್ ತುಳಿದುಕೊಂಡು ಹೋಗುವುದೆಂದರೆ ಅದೇ ಅವನ ಮಹಾ ಸಾಹಸ. ಅವನು ಹತ್ತರ ಗಣಿತದಲ್ಲಿ ತೊಂಬತ್ತು ತೆಗೆದುಕೊಳ್ಳುವುದಾಗಿ ತಂದೆಗೆ ಮಾತು ಕೊಟ್ಟಿದ್ದ. ಅದಕ್ಕೆ ಪ್ರತಿಯಾಗಿ ಸೈಕಲ್ ಕೊಡಿಸುವುದಾಗಿ ಮಗನ ಕರಾರಿಗೆ ಅಪ್ಪ ಒಪ್ಪಿದ್ದರು.....ಅಂದುಕೊಂಡಂತೆ ಆತ ತೊಂಬತ್ತು ತೆಗೆದುಕೊಂಡ. ಅಪ್ಪ ಸೈಕಲ್ ಕೊಟ್ಟರು.......ಇದೇ ಅವನ ಮೊದಲ ವ್ಯವಹಾರ!
ವಿಶ್ವಕಂಡ ಅತ್ಯಂತ ಪ್ರಭಾವಶಾಲಿ ಉದ್ಯಮಿ ‘ಸಬ್ರತೋ ಬಗಚಿ’ ಅವರ ಔದ್ಯಮಿಕ ಇತಿಹಾಸದಲ್ಲಿ ಇಂಥದೊದ್ದಂದು ಕತೆಯಿದೆ. ಅಪ್ಪನೊಂದಿಗೆ ಆರಂಭವಾದ ಅವರ ವ್ಯವಹಾರ ಯಾತ್ರೆ ಎಲ್ಲೂ ನಿಲ್ಲಲಿಲ್ಲ. ವ್ಯವಹಾರವೇ ಅವರ ಅನ್ನ ಮತ್ತು ಉಸಿರು. ಇನ್ಫೊಸಿಸ್ ನಂತರ ಭಾರತದಲ್ಲಿ ತಾಂತ್ರಿಕರು ಕನಸು ಕಟ್ಟಿಕೊಳ್ಳುವ ಐಟಿ ಕಂಪನಿಯೊಂದಿದ್ದರೆ ಅದು ‘ಮೈಂಡ್ ಟ್ರೀ’. ಸಬ್ರತೋ ಬಗಚಿ ಈ ಕಂಪನಿಯ ಶಿಲ್ಪಿ. ‘ಮೈಂಡ್ ಟ್ರೀ ಗಾರ್ಡ್ನರ್’ ಎಂತಲೇ ಅವರನ್ನು ಕರೆಯಲಾಗುತ್ತದೆ. ಬಿಲಿಯನ್ ಡಾಲರ್ಗಟ್ಟಲೆ ವ್ಯವಹಾರ ಹೊಂದಿರುವ ಈ ಕಂಪನಿ ಬರೀ ಐಟಿ ಕಂಪನಿಯಲ್ಲ. ಅದೊಂದು ಔದ್ಯಮಿಕ ಲೋಕದ ಆಲಯ!
ಬಹುಶಃ, ಬಗಚಿ ಕೇವಲ ಉದ್ಯಮಿಯಾಗಿದ್ದರೆ ಇಷ್ಟೊಂದು ಖ್ಯಾತಿ ಬರುತ್ತಿರಲಿಲ್ಲವೇನೋ. ಬದಲಾಗಿ ಬಗಚಿ ವ್ಯವಹಾರದ ಆರಾಧಕ. ವ್ಯವಹಾರವೆಂದರೆ ಬರೀ ಹಣದ ವಿನಿಮಯವಲ್ಲ, ಫೈಲುಗಳ ವಿನಿಮಯವಲ್ಲ. ಕೋಟುಗಳ ಕೋಡಲ್ಲ, ಇಂಗ್ಲಿಷ್ ನಾಲಗೆಯಲ್ಲ......ಅದೊಂದು ಯೋಗ ಮತ್ತು ಪ್ರಯೋಗ ಎಂದು ವಿಶ್ವಕ್ಕೆ ಸಾರಿ ಹೇಳದರು. ‘ದೇರ್ ಈಸ್ ನೋ ಸಬ್ಸ್ಸ್ಟಿಟ್ಯೂಟ್ ಇನ್ ಹಾರ್ಡ್ ವರ್ಕ್’ ಎನ್ನುತ್ತಲೇ ಮಾತು ಆರಂಭಿಸುವ ಬಗಚಿ ಪ್ರಸಿದ್ಧ ಲೇಕಕರೂ ಕೂಡ. ಟೈಮ್ಸ್ ಆಪ್ ಇಂಡಿಯಾ ಪತ್ರಿಕೆಯ ‘ಟೈಮ್ಸ್ ಆಪ್ ಮೈಂಡ್’ ಅಂಕಣ ಭಾರತೀಯ ಉದ್ಯಮಿಗಳ ಫೇವರಿಟ್. ಪೋರ್ಬ್ಸ್ ಮಾಗಜಿನ್ನ ‘ಝೆನ್ ಗಾರ್ಡನ್’ ವಿಶ್ವ ಉದ್ಯಮಿಗಳ ಹಾಟ್ಕೇಕ್.
ನೃತ್ಯಪ್ರೇಮಿಗಳನ್ನು ಮೆಕೆಲ್ ಜಾಕ್ಸನ್ ನೃತ್ಯ ಹೇಗೆ ಕುಣಿಸುತ್ತೋ ಹಾಗೆ ಬಗಚಿಯವರ ಬರವಣಿಗೆ ಉದ್ಯಮಿಗಳನ್ನು ತಣಿಸುತ್ತೆ. ಅವರ ಬರವಣಿಗೆಯಲ್ಲಿರುವ ಚೈತನ್ಯ ಲಕ್ಷಾಂತರ ಉದ್ಯಮಿಗಳಿಗೆ ಶಕ್ತಿ ತುಂಬಿದೆ. ಉದ್ಯಮಿಗಳಿಗೆ ಮಾತ್ರವಲ್ಲ, ಕ್ರಿಯಾತ್ಮಕವಾಗಿ ಚಿಂತಿಸುವವರಿಗೆ, ಹಾರ್ಡ್ವರ್ಕ್ ಮೇಲೆ ನಂಬಿಕೆಯಿರುವವರಿಗೆ, ಪ್ರಯೋಗಾತ್ಮಕ ಕೆಲಸಗಾರರಿಗೆ ಬಗಚಿಯವರ ಪುಸ್ತಕಗಳು ಚೈತನ್ಯದ ಚಿಲುಮೆಯಾಗಿವೆ. ಅವರ ‘ಗೋ ಕಿಸ್ ದ ವರ್ಲ್ಡ್’ ವಿಶ್ವದ ಬೆಸ್ಟ್ಸೆಲ್ಲರ್. ಈ ಪುಸ್ತಕದಲ್ಲಿರುವ ವೈಚಾರಿಕ ಬರವಣಿಗೆ ಬಗಚಿಯವನ್ನು ಪರಿಪೂರ್ಣ ಸಾಹಿಯನ್ನಾಗಿ ಮಾಡಿದೆ. ಹೈ ಪರ್ಪಾರ್ಮೆನ್ಸ್ ಎಂಟ್ರಪ್ಯೂನರ್, ದ ಪ್ರೊಫೆಷನಲ್ ಮುಂತಾದವು ಬಗಚಿಯವರ ಪ್ರಸಿದ್ಧ ಪುಸ್ತಕಗಳು.
ಮೈಂಡ್ಟ್ರೀ ಲೋಗೋ ಹಿಂದೆ ಒಂದು ಕುತೂಹಕ ಕತೆ ಇದೆ. ಬಗಚಿಯವರೆಷ್ಟು ಸ್ಮಾರ್ಟ್ ಎನ್ನಲು ಇದು ಸಾಕ್ಷಿ. ಲೋಗೋ ರಚನೆಗೆ ಅವರೇನು ತಲೆ ಕೆಡಿಸಿಕೊಳ್ಳಲಿಲ್ಲ. ಕುರುಡನೊಬ್ಬನಿಗೆ ಬಣ್ಣ ಮತ್ತು ಬ್ರಷ್ ಕೊಟ್ಟರು. ಆತ ಒಂದು ಗೆರೆ ಎಳೆದು ಎರಡು ಚುಕ್ಕೆ ಇಟ್ಟ. ಅದೇ ಮೈಂಡ್ಟ್ರೀಯ ಜಗತ್ಪ್ರಸಿದ್ಧ ಲೋಗೋ!
No comments:
Post a Comment