Friday, April 8, 2011

ಸಕ್ಕರೆ ಖಾಯಿಲೆ ಜತೆ ಇನ್ನೂರೈವತ್ತು ವಿಕೆಟ್!


ಸಕ್ಕರೆ ಖಾಯಿಲೆ ಜತೆ ಇನ್ನೂರೈವತ್ತು ವಿಕೆಟ್!


ಆ ತಾಯಿ ತನ್ನ ಮಗುವಿಗೆ ಚಂದಮಾಮನ ಹಾಡು ಹೇಳುತ್ತಾ ಅನ್ನದ ಅಗುಳನ್ನು ಬಾಯಿಗಿಡಲಿಲ್ಲ. ಹುಟ್ಟು ಹಬ್ಬದ ದಿನ ಮಕ್ಕಳನ್ನು ಕರೆದು ಕೇಕ್ ಕತ್ತರಿಸಿ ಬಾಯಿ ಸಿಹಿ ಮಾಡಲಿಲ್ಲ. ಆಕೆ ಮಾಡಿದ್ದೇ ಬೇರೆ. ಗೋಡೆಯ ಛಾಯಾಚಿತ್ರದಲ್ಲಿದ್ದ ಆ ನಗುಮುಖ ತೋರಿಸಿ ಮಗುವಿನ ದೇಹಕ್ಕೆ ಸೂಜಿ ಚುಚ್ಚುತ್ತಿದ್ದಳು. ಮೌನ ಚಿತ್ರದಲ್ಲಿರುವ ಆ ವ್ಯಕ್ತಿಯ ಮುಖ ನೋಡಿದಾಗ ಆ ಮಗುವಿನ ಮನದಲ್ಲಿ ಚೈತನ್ಯ ತುಂಬಿಕೊಳ್ಳುತ್ತಿತ್ತು. ನೋವು ನುಂಗಿ ಮುಖದಲ್ಲಿ ನಗು ಚೆಲ್ಲುತ್ತಿತ್ತು! ಆ ಮನುಷ್ಯನಿಂದ ಇಂಥ ಎಷ್ಟೋ ಮಕ್ಕಳ ಮನಸ್ಸು ಗಟ್ಟಿಯಾಗಿವೆ. ಬದುಕುವ ಕನಸು ಕಂಡಿವೆ. ಸಾಧಿಸುವ ಛಲವನ್ನು ಇಮ್ಮಡಿಗೊಳಿಸಿಕೊಂಡಿವೆ. ನಡುರಾತ್ರಿಯಲ್ಲೂ ಅವನ ನೆನಪು ಮಾಡಿಕೊಂಡಿವೆ. ದೇವರಂತೆ ಆರಾಧಿಸಿವೆ.......ಅವನಿಟ್ಟ ಒಂದೊಂದು ಹೆಜ್ಜೆಯೂ ಎಚ್ಚರದ ಹೆಜ್ಜೆ. ತಾಳ ತಪ್ಪದ ನಡಿಗೆ. ಅಪ್ಪಿತಪ್ಪಿ ಎಚ್ಚರ ತಪ್ಪಿದರೆ ಅಲ್ಲೋಲ ಕಲ್ಲೋಲ......ಇಂಥಾ ಸಮಸ್ಯೆಯ ಸುಳಿಯಲ್ಲಿ ಆತ ಜಗತ್ತಿನ ಮಾದರಿ. ಆತ ವಿಶ್ವ ಅತೀ ಶ್ರೇಷ್ಠ ಕ್ರಿಕೆಟಿಗ ವಾಸಿಮ್ ಅಕ್ರಮ್. ಪಾಕಿಸ್ಥಾನ ತಂಡದ ಮಾಜಿ ನಾಯಕ. 400 ವಿಕೆಟ್ ಪಡೆದುಕೊಂಡ ವಿಶ್ವದ ಮೊತ್ತ ಮೊದಲ ಕ್ರಿಕೆಟಿಗ. ಈಗ ಹೇಳಲು ಹೊರಟಿರುವುದು ಅಕ್ರಮ್ ಬಗ್ಗೆ ಅಲ್ಲ, ಅವನ ಪ್ರಾಣ ಸ್ನೇಹಿತನ ಬಗ್ಗೆ. ಆ ಸ್ನೇಹಿತ ಬೇರಾರೂ ಅಲ್ಲ, ಅದೊಂದು ರೋಗ. ಮಧುಮೇಹ! ವಾಸಿಮ್ ಕ್ರಿಕೆಟ್ ಲೋಕದ ಧ್ರುವತಾರೆಯಾಗಿದ್ದಾಲೇ ಮಧುಮೇಹ ಪತ್ತೆಯಾಯಿತು. ಆಗ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಆಡುತ್ತಿದ್ದರು. ಇನ್ನೂ ಮ್ಯಾಚ್ ಮುಗಿದಿರಲಿಲ್ಲ. ಮ್ಯಾಚ್ ಮಧ್ಯದಲ್ಲಿ ಮಹಾಮಾರಿ ಪತ್ತೆಯಾದಾಗ ಅಕ್ರಮ್ ತೀರಾ ನೊಂದುಕೊಂಡರು. ಮ್ಯಾಟರ್ ಮುಚ್ಚಿಟ್ಟು ಮ್ಯಾಚ್ ಮುಂದುವರಿಸಿದರು. ಆಟ ಮುಗಿದಾಗ ಮನ ಕೊರೆಯುತ್ತಿದ್ದ ಉಳು ಹೊರಬಿತ್ತು. ಧುತ್ತನೆ ಬಂದ ಈ ಸುದ್ದಿಗೆ ಇಡೀ ಜಗತ್ತಿಗೆ ನೊಂದುಕೊಂಡಿತು. ತಾನು ಅನುಭವಿಸುತ್ತಿರವ ಯಾತನೆಯನ್ನು ಅಕ್ರಮ್ ಹೇಳಿಕೊಂಡಾಗ ಪಾಕ್ ಮಂದಿ ಬಿಕ್ಕಿ ಬಿಕ್ಕಿ ಅತ್ತರು. ಅಕ್ರಮ್ ಕ್ರಿಕೆಟ್ ಕೆರಿಯರ್ ಮುಗಿಯಿತು ಎಂದು ದಿಗ್ಗಜರು ತೀರ್ಮಾನಿಸಿಯೇಬಿಟ್ಟರು. ಆದರೆ ಆಗಿದ್ದೇ ಬೇರೆ. ನಿಜವಾದ ಅಕ್ರಮ್ ಆಟ ಆರಂಭವಾಗಿದ್ದೇ ಅಲ್ಲಿ. ಕ್ರಿಕೆಟ್ ಬಹಳ ಒರಟು ಆಟ. ಮಧುಮೇಹ ಸೂಕ್ಷ್ಮ ರೋಗ. ಸಣ್ಣ ಪುಟ್ಟ ಗಾಯಗಳಾದರೂ ಮಧುಮೇಹಿಗಳಿಗೆ ಅಪಾಯ. ವಾಸಿಮ್ ಜಗ್ಗಲಿಲ್ಲ. ಮಧುಮೇಹವನ್ನು ದ್ವೇಷಿಸದೆ ಪ್ರೀತಿಸಿದರು. ರೋಗವನ್ನೇ ಪ್ರಾಣ ಸ್ನೇಹಿತನನ್ನಾಗಿ ಮಾಡಿಕೊಂಡರು. ಮತ್ತೆ ಆಟ ಮುಂದುವರಿಸಿದರು. ಸಕ್ಕರೆ ಖಾಯಿಲೆಯನ್ನು ಜೊತೆಯಲ್ಲಿ ಇಟ್ಟುಕೊಂಡೇ 250 ವಿಕೆಟ್ ಕೆಡವಿದರು! 31ನೇ ವರ್ಷ ವಯಸ್ಸಿನಲ್ಲಿ ಮಧುಮೇಹ ಪತ್ತೆಯಾದ ಮೇಲೆ ಅಕ್ರಮ್ ತಮ್ಮ ಜೀವನ ಶೈಲಿ ಬದಲಾಯಿತು. ಕಾರು ತ್ಯಜಿಸಿ ಕಾಲ್ನಡಿಗೆ. ಅಭ್ಯಾಸ, ಹಾಬಿಗಳೆಲ್ಲಾ ಅದಲು ಬದಲು. ದಿನಕ್ಕೆ ಮೂರು ಬಾರಿ ಇನ್ಸುಲಿನ್ ಹನಿ. ದೇಹದ ತುಂಬೆಲ್ಲಾ ಸೂಜಿಯ ಕರೆ. ತಿಂದ ತಕ್ಷಣವೇ ಸಕ್ಕರೆ ಅಂಶದ ಅಳತೆ....... ಅಕ್ಷರಶಃ ಅಕ್ರಮ್ ಅವರದು ತಕ್ಕಡಿಯ ಮೆಲಿನ ಜೀವನ, ಇಂದಿಗೂ. ಅವರು 2003ರಲ್ಲಿ ಕ್ರಿಕೆಟ್ಗೆ ಭೈ ಹೇಳಿದ ಮೇಲೆ ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ಮಧುಮೇಹಿಗಳ ಜೀವನ ಶೈಲಿಯ ಅರಿವಿನ ಕ್ರಾಂತಿಯನ್ನೇ ಆರಂಭಿಸಿದರು. ಈ ಕ್ರಾಂತಿ ಪಾಕಿಸ್ಥಾನಕ್ಕಿಂತ ಭಾರತೀಯರ ಮೇಲೆ ಹೆಚ್ಚು ಪ್ರಭಾವ ಬೀರಿತು. ಯಾಕೆಂದರೆ ಭಾರತ ಮಧುಮೇಹಿಗಳ ತವರು. ಇತ್ತೀಚೆಗೆ ಮಕ್ಕಳನ್ನು ಮಧುಮೇಹ ಕಾಡುತ್ತಿದೆ. ಅಕ್ರಮ್ ಕೈಗೊಂಡ ಆರಿವಿನ ಕ್ರಾಂತಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರಿದೆ. ‘ಮಧುಮೇಹ ರೋಗವಲ್ಲ, ಅದು ಶಿಸ್ತುಬದ್ಧ ಜೀವನ ಮಾರ್ಗ’ ಎಂಬ ವಿಷಯವನ್ನು ಅವರು ವಿಶ್ವದಾದ್ಯಂತ ಸಾರುತ್ತಿದ್ದಾರೆ. ಅಕ್ರಮ್ ಸಾಧನೆ ಮಧುಮೇಹಿಗಳಿಗೆ ದೊಡ್ಡ ಪಾಠ. ಮಕ್ಕಳ ತಂದೆ ತಾಯಂದಿರು ತಮ್ಮ ಮಧುಮೇಹಿ ಮಕ್ಕಳಿಗೆ, ವೈದ್ಯರು ರೋಗಿಗಳಿಗೆ ಅಕ್ರಮ್ ಕತೆ ಹೇಳಿ ಧೈರ್ಯ ತುಂಬುತ್ತಾರೆ. ಅಕ್ರಮ್ ಮನಸ್ಸು ಕ್ರಿಕೆಟ್ಗಾಗಿ ಸದಾ ತುಡಿಯುತ್ತದೆ. ಅವರೀಗ ಕ್ರಿಕೆಟ್ ಕಾಮಿಂಟ್ರೇಟರ್. ವರ್ಲ್ಡ್ ಕಪ್ ನಡೆಯುತ್ತಿದೆ. ಟಿವಿ ಸ್ವಿಚ್ ಆನ್ ಮಾಡಿದರೆ ಅವರ ಶಕ್ತಿಯುತ ಧ್ವನಿ ಹೃದಯ ತಟ್ಟುತ್ತದೆ.


ಶಿವಖೇರ ಕಲಾಕಾರ!


ಮನಸೆಳೆಯುವ ಮಾತುಗಳ ಮೋಡಿಗಾರ, ಸ್ಫೂರ್ತಿ ತುಂಬುವ ಸೂಕ್ತಿಗಳ ಬರಹಗಾರ, ವ್ಯಕ್ತಿತ್ವ ವಿಕಸನಗೊಳಿಸಿ ಶಕ್ತಿ ತುಂಬುವ ಕನಸುಗಾರ. ಅಕ್ಷರಗಳ ನಡುವೆ ಹಾಸ್ಯ ಬೆಸೆಯುವ ಸೊಗಸುಗಾರ. ಕನಸುಗಳಿಗೆ ವರ್ಣ ತುಂಬುವ ಕಲಾಕಾರ...........‘ಶಿವ ಖೇರ’ ಮೂವತ್ತು ವರ್ಷಗಳ ಹಿಂದೆ ಅಮೆರಿಕಾದಲ್ಲಿ ಕಾರು ತೊಳೆಯುತ್ತಿದ್ದರು ಎಂದರೆ ನಂಬಲು ಸ್ವಲ್ಪ ಕಷ್ಟವೇ! ‘ಯು ಕ್ಯಾನ್ ವಿನ್’ ಪುಸ್ತಕವನ್ನು ಕೇಳದವರಿಲ್ಲ. ಇದು ಬರೀ ಪುಸ್ತಕವಲ್ಲ, ಒಂದು ಮಾತಾಗಿಯೂ ಕೂಡ ಕೋಟ್ಯಾಂತರ ಮನಸ್ಸುಗಳ ಮನಸೂರೆಗೊಂಡಿದೆ. ಮನಸ್ಸಿನ ಮೇಲೆ ಪರಿಣಾಮ ಬೀರುವ ಇಂತಹ ಸಾವಿರಾರು ಸೂಕ್ತಿಗಳನ್ನು ಶಿವ ಖೇರ ಬರೆದಿದ್ದಾರೆ. ಫ್ರೀಡಮ್ ಈಸ್ ನಾಟ್ ಫ್ರೀ, ಲಿವಿಂಗ್ ವಿಥ್ ಹಾನರ್ ಇವು ಖೇರ ಅವರ ಪ್ರಖ್ಯಾತ ಪುಸ್ತಕಗಳು. ಇವು ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ದೆಹಲಿ ಮೂಲದ ಶಿವ ಖೇರ ಅಮೆರಿಕಾದಲ್ಲಿ ಕಾರು ತೊಳೆಯುವ ಕೆಲಸಕ್ಕಿದ್ದರು. ಕಾರು ತೊಳೆಯುವ ಹುಡುಗನ ಅಂದ ಚಂದದ ಮಾತು ಕೇಳಿ ಕಾರು ಮಾಲೀಕನೊಬ್ಬ ಇನ್ಸುರೆನ್ಸ್ ಕಂಪನಿಯಲ್ಲಿ ಏಜೆಂಟ್ ಕೆಲಸ ಕೊಡಸಿಬಿಟ್ಟ. ಅಲ್ಲಿಂದ ಆರಂಭವಾಯಿತು ಮಾತಿನಲ್ಲಿ ಮನೆ ಕಟ್ಟುವ ಕಾರ್ಯ. ಕೇವಲ ಒಂದು ವರ್ಷದಲ್ಲಿ ಕೈ ತುಂಬ ಕಮಾಯಿಸಿಕೊಂಡ ಶಿವಖೇರ ಉಪನ್ಯಾಸ ಕೊಡಲು ಆರಂಭಿಸಿದರು. ಮಾತು ಕೇಳಿದವರೆಲ್ಲಾ ಅಭಿಮಾನಿಗಳಾದರು. ನಂತರ ಆರಂಭವಾಯಿತು ಬರವಣಿಗೆ. 2008ರಲ್ಲಿ ಹೊರಬಂದ ‘ಯು ಕ್ಯಾನ್ ವಿನ್’ ಇತಿಹಾಸವನ್ನೇ ಸೃಷ್ಟಿಸಿತು. ‘ಅಸ್ಪಸ್ಥ ಮನಸ್ಸುಗಳನ್ನು ತಿದ್ದುವ ಆಯುಧ’ ಎಂದೇ ಈ ಪುಸ್ತಕ ಪ್ರಸಿದ್ಧಿ ಪಡೆಯಿತು. ನಂತರ ಶಿವಖೇರ ಜಗತ್ತಿನಾದ್ಯಂತ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ನಡೆಸಿದರು. ಒತ್ತಡದಲ್ಲಿ ಜೀವಿಸುವವರಿಗೆ ಶಿವಖೇರ ವರ್ಕ್ಶಾಪ್ಗಳು ಸಂಜೀವಿನಿಯಾದವು. ಇತರರ ಮೇಲೆ ‘ಫಾಷನೇಟ್’ ಆಯುಧಗಳನ್ನು ಪ್ರಯೋಗಮಾಡುವ ಶಿವಖೇರ, ಸ್ವತಃ ಅವರೇ ಪ್ಯಾಷನೇಟ್ ಮನುಷ್ಯ. ಮಾತಿನ ನಿಖರತೆ, ಗಾಢ ವಿಶ್ವಾಸ, ಅಪಾರ ನಂಬಿಕೆ, ಹಾಸ್ಯ ಪ್ರಜ್ಞೆ ಇವೆಲ್ಲವು ಅವರನ್ನು ಪ್ರಬುದ್ಧಗೊಳಿದವು. ಸಮಾಜವನ್ನು ಚಿಂತನೆಗೆ ಹಚ್ಚು ವ ಹಲವು ಕೆಲಸಗಳನ್ನು ಶಿವಖೇರ ಮಾಡಿದ್ದಾರೆ. ‘ಜಾತಿ ಚೋಡೋ, ಭಾರತ್ ಜೋಡೋ’ ಎನ್ನುವ ಡಾಕ್ಯುಮೆಂಟರಿಯೊಂದನ್ನು ಅವರು ನಿರ್ಮಿಸಿದ್ದಾರೆ. ರಾಜಕೀಯಕ್ಕೂ ಹೋಗಿ ವಾಪಸ್ ಬಂದಿರುವ ಶಿವಖೇರ 2004 ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದಾರೆ! ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಮಹಾಮಾತೆ ಮದರ್ ತೆರೆಸಾ ಅವರ ಜೊತೆ ‘ಲೂಯಿಸ್ ಮಾರ್ಚೆಸ್ಸಿ ಫೆಲೋ’ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಶಿವಖೇರ ಬೆಂಗಳೂರಿಗೆ ಬಂದಿದ್ದರು. ಆಟೋಗ್ರಾಫ್ಅನ್ನು ಅವರ ಕೈಗಿಟ್ಟಾಗ ‘ವಿನ್ನರ್ಸ್ ಡೋಂಟ್ ಡು ಡಿಫರೆಂಟ್ ಥಿಂಗ್ಸ್, ದೆ ಡು ಥಿಂಗ್ಸ್ ಡಿಫರೆಂಟ್ಲಿ’ ಎಂದು ಬರೆದು ಸೈನ್ ಮಾಡಿದರು. ಇದು ಅವರ ಸಿಗ್ನೇಚರ್ ಟ್ರೇಡ್ಮಾರ್ಕ್!

No comments:

Post a Comment